ನಗರದ ಸ್ತ್ರೀಶಕ್ತಿ ಭವನದಲ್ಲಿ ಭಾನುವಾರ ಚೌದರಿ ಚರಣ್ ಸಿಂಗ್ ಜನ್ಮದಿನದ ಅಂಗವಾಗಿ ಆತ್ಮಾ ಯೋಜನೆಯಡಿಯಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪ ಮಾತನಾಡಿದರು.
ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಎರೆ ಹುಳು ತೊಟ್ಟಿಗಳನ್ನು ನಿರ್ಮಿಸಲು ಅವಕಾಶವಿದೆ. ರೈತರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇಂದು ರೈತ ದಿನ. ಇಡೀ ದೇಶಕ್ಕೆ ಅನ್ನ ನೀಡುವ ರೈತನನ್ನು ಗೌರವಿಸಲು ಆಚರಿಸುವ ದಿನ. ಭಾರತದ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ ಸಿಂಗ್ ರವರ ಜನ್ಮದಿನವನ್ನು ರೈತ ದಿನಾಚರಣೆ ದಿನವಾಗಿ ಘೋಷಿಸಲಾಗಿದೆ. ಸಮಾಜಕ್ಕೆ ತಮ್ಮ ಕೊಡುಗೆಗಾಗಿ ರೈತರಿಗೆ ಸಹಾಯ ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರೈತರ ಹಿತ ಕಾಯುವ ಬಿಲ್ ಅನ್ನು ಪ್ರಪ್ರಥಮ ಬಾರಿಗೆ ಚರಣ್ ಸಿಂಗ್ ಮಂಡಿಸಿದ್ದರು. ಇಂದು ಅವರ ಬಿಲ್-ಅನ್ನು ದೇಶದ ಎಲ್ಲ ರಾಜ್ಯಗಳು ಪಾಲಿಸುತ್ತಿವೆ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಡಾ.ಲತಾ ಮಾತನಾಡಿ, ಮಣ್ಣು ಪರೀಕ್ಷೆಗೆ ಅನುಗುಣವಾಗಿ ಪೋಷಕಾಂಶಗಳನ್ನು ನೀಡಿ ಅಧಿಕ ಇಳುವರಿಯನ್ನು ಪಡೆಯಿರಿ ಎಂದರು.
ಬೇಸಾಯ ಶಾಸ್ತ್ರಜ್ಞ ಡಾ.ರವಿಕುಮಾರ್ ಮಾತನಾಡಿ, ಸಮಗ್ರ ಕೃಷಿಯ ಮಹತ್ವವನ್ನು ವಿವರಿಸಿ, ಅಳವಡಿಸಿಕೊಳ್ಳುವಂತೆ ರೈತರಿಗೆ ಹೇಳಿದರು.
ಆತ್ಮಾ ಯೋಜನೆಯಡಿಯಲ್ಲಿ ಉತ್ತಮ ಸಾಧನೆಗೈದ ಐದು ಮಂದಿ ರೈತರಿಗೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಹತ್ತು ಸಾವಿರ ರೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬೋದಗೂರು ಬಿ.ಎನ್.ನಾಗೇಶ್ ಕುಮಾರ್ (ರೇಷ್ಮೆ), ಗೊರ್ಲಗುಮ್ಮನಹಳ್ಳಿ ಜಿ.ಎನ್.ನರಸಿಂಹರೆಡ್ಡಿ (ತೋಟಗಾರಿಕೆ), ಲಗಿನಾಯಕನಹಳ್ಳಿ ಎಲ್.ಎನ್.ಶಿವಾರೆಡ್ಡಿ (ಸಮಗ್ರ ಕೃಷಿ), ಕೋಟಗಲ್ ಬಿ.ನಾರಾಯಣಪ್ಪ (ಪಶು ಸಂಗೋಪನೆ) ಮತ್ತು ಹಾರಡಿ ತಿರುಮಳಪ್ಪ (ಸಮಗ್ರ ಕೃಷಿ) ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರು.
ಈ ಸಂದರ್ಭದಲ್ಲಿ ಆತ್ಮಾ ಯೋಜನೆಯಡಿಯಲ್ಲಿ ರಚನೆಯಾದ ಬೆಳೆ ಆಸಕ್ತ ಗುಂಪುಗಳಿಗೆ ಬೀಜಧನ ವಿತರಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಜಿ.ಬಿ.ಮಾಲತೇಶ್, ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ್, ಕೃಷಿ ಅಧಿಕಾರಿಗಳಾದ ಗೋಪಾಲ್ ರಾವ್, ಶ್ರೀನಿವಾಸ್, ರವಿನಾರಾಯಣ ರೆಡ್ಡಿ, ಮಹೇಶ್ ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೃಷಿಕ ಸಮಾಜದ ಪ್ರತಿನಿಧಿ ಕೆಂಪೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿ, ಮುನಿಕೆಂಪಣ್ಣ, ರಾಮಚಂದ್ರ, ಆತ್ಮಾ ಸಿಬ್ಬಂದಿ ಹಾಗೂ ಅನುವುಗಾರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







