ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

- Advertisement -
- Advertisement -

ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಿ ಕಸಾಪ ಸಮ್ಮೇಳನಾಧ್ಯಕ್ಷೆ, ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಮಾತನಾಡಿದರು.
ನಮ್ಮ ದೇವರಮಳ್ಳೂರು ಮಣ್ಣಿನಲ್ಲಿಯೇ ಕಲೆಯ ಸೊಗಡಿದೆ. ಒಂದು ಕಾಲದಲ್ಲಿ ತಲೆಯ ಮೇಲೆ ಯಾವುದೇ ಆಧಾರವಿಲ್ಲದೇ ಸಾಲು ಕಳಸಗಳನ್ನು ಹೊತ್ತು ನಮ್ಮ ಗ್ರಾಮದ ಹೆಣ್ಣುಮಕ್ಕಳು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಮೆರೆಸಿದ್ದರು. ಈಗಿನ ಪೀಳಿಗೆಯವರಿಗೆ ಇದು ಸ್ಫೂರ್ತಿಯಾಗಲಿ ಎಂದು ಅವರು ತಿಳಿಸಿದರು.
ದೇವರಮಳ್ಳೂರು ಗ್ರಾಮದ ಹೆಣ್ಣುಮಕ್ಕಳ ಪಂಡರಿ ಭಜನೆ ತಂಡ ಎಂಭತ್ತರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿತ್ತು. ದೇವರಮಳ್ಳೂರಿನಲ್ಲಿ ಹುಟ್ಟಿ, ಇದೇ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ನಾನು ಸಹ ಕಲೆಯ ಆಸಕ್ತಿಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ನನ್ನ ಬಾಲ್ಯದಲ್ಲಿ ಪಿಂಡಿಪಾಪನಹಳ್ಳಿಯ ಸುಭದ್ರಮ್ಮ ಎಂಬುವವರು ತೆಲುಗು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆ ತಾಯಿ ನನಗೆ ಪ್ರೇರಣೆ ಮತ್ತು ಸ್ಫೂರ್ತಿ. ಸಂಸಾರ, ವೈಯಕ್ತಿಕ ಜೀವನದ ಕಷ್ಟಗಳ ನಡುವೆ ನನಗೆ ನೆಮ್ಮದಿ ಮತ್ತು ಸಂತಸವನ್ನು ನೀಡಿದ್ದು ರಂಗಭೂಮಿ. ಹಣವನ್ನು ಸಂಪಾದಿಸಲು ಆಗದಿದ್ದರೂ ಕಲಾಸೇವೆ ಮಾಡಿದ ಸಮಾಧಾನ ನನಗಿದೆ ಎಂದು ಹೇಳಿದರು.
ನಮ್ಮ ಮಣ್ಣಿನಲ್ಲಿ ಕಲೆಯಿದೆ. ಅದನ್ನು ಪೋಷಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕಿದೆ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ದೇವರುಗಳಿಗೆ ಮಡಿಲು ತುಂಬಿದ ಪವಿತ್ರವಾದ ಗ್ರಾಮವಿದು ಅದಕ್ಕೇ ದೇವರಮಳ್ಳೂರು ಎಂದು ಹೆಸರಾಯಿತು. ಗ್ರಾಮದೇವತೆಯನ್ನು ಮಳ್ಳೂರಾಂಭ ಇರುವ ಪುಣ್ಯದ ನೆಲವಿದು. ಇಲಿನ ಮಕ್ಕಳು ಯಾರಿಗೂ ಕಮ್ಮಿಯಿಲ್ಲ, ದೇಶವೇ ಮೆಚ್ಚುವಂತಹ ಸಾಧನೆಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ರೂಪಿಸಬೇಕು. ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ, ಸಮುದಾಯದ ಸಹಕಾರದೊಂದಿಗೆ ಶಾಲೆ ಹಾಗೂ ವಿದ್ಯಾರ್ಥಿಗಳ ಕಲಿಕೆ ಹೆಚ್ಚಳಕ್ಕೆ ಬೇಕಾಗುವ ಅನುಕೂಲಗಳನ್ನು ಕಲ್ಪಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು. ವಿವಿಧ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಸದಾ ತಾಯಿಯ ಸ್ಥಾನವನ್ನು ನೀಡಬೇಕು. ಸರ್ಕಾರಿ ಶಾಲೆಯಲ್ಲಿಯೇ ಓದಿ ಸಾಧಕರಾದ ಮಹನೀಯರು ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ, ಕಸಾಪ ಸಮ್ಮೇಳನಾಧ್ಯಕ್ಷೆ, ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಹಾಗೂ ಶಾಲೆಯ ಅನುದಾನದ ಸಹಾಯದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕ ಬಿ.ವಿ.ಮಂಜುನಾಥ್, ಶಿಕ್ಷಕರಾದ ಈಶ್ವರಮ್ಮ, ಶಶಿ, ಶಾಂತಕುಮಾರಿ, ಪಿ.ಪಿಳ್ಳಣ್ಣ, ಟಿ.ಆರ್.ಮುರಳಿ, ಗ್ರಾಮದ ಕಲಾವಿದ ವೆಂಕಟೇಶಮೂರ್ತಿ, ತಮಟೆ ರಾಮಣ್ಣ, ಚನ್ನಕೃಷ್ಣ, ರಾಮರೆಡ್ಡಿ, ಸಿಬ್ಬಂದಿ ಶೋಭಮ್ಮ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!