ಮಾನವನ ಸರ್ವತೋಮುಖ ಅಭಿವೃದ್ಧಿ ಶೈಕ್ಷ ಣಿಕ ಪ್ರಗತಿಯಿಂದ ಮಾತ್ರ ಸಾಧ್ಯ. ಶಿಕ್ಷಣದ ಗುರಿ ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಮಾಡುವುದಾಗಿದೆ. ಕಲಿಯುವ ವ್ಯಕ್ತಿಗೆ ಕಲಿಕಾ ವಿಧಾನ ಮತ್ತು ಕಲಿಯಲು ಬೇಕಾಗುವ ಸನ್ನಿವೇಶ ನಿರ್ಮಿಸುವುದು ಹಿರಿಯರ ಕರ್ತವ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಶಿವಣ್ಣರೆಡ್ಡಿ ತಿಳಿಸಿದರು.
ನಗರದ ಡಾಲ್ಫಿನ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಸಂಜೆ ನಡೆದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯ ಹುಟ್ಟಿನಿಂದ ಪ್ರಾರಂಭವಾಗುವ ಕಲಿಕೆಯು ಕಡೆಯ ಕಾಲದವರೆಗೂ ಇರಬೇಕು. ಕಲಿಯಬೇಕೆಂಬ ಅದಮ್ಯ ಆಸೆಯನ್ನು ಹಾಗೂ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಬಹು ಮುಖ್ಯ. ಇಂದಿನ ಶಿಕ್ಷಣ ಕ್ರಮ ಹಾಗೂ ಪದ್ಧತಿಗಳನ್ನು ಅವಲೋಕಿಸಿದರೆ ಶಿಕ್ಷಣ ಕಲಿಕೆಗೆ ಸಾಕಷ್ಟು ಅವಕಾಶವಿದ್ದರೂ ಕೂಡ ಪಠ್ಯೇತರ ಚಟುವಟಿಕೆಗೆ ಅವಕಾಶಗಳು ತೀರಾ ಕಡಿಮೆಯಾಗಿದೆ. ಆಟ, ನೃತ್ಯ, ಹಾಡು ಮುಂತಾದವುಗಳು ಮಕ್ಕಳಲ್ಲಿ ಇನ್ನಷ್ಟು ಚೈತನ್ಯವನ್ನು ತರಬಲ್ಲವು. ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ಇದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿ, ಆತ್ಮ ವಿಶ್ವಾಸ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಮೈಗೂಡಿಸಿಕೊಂಡಲ್ಲಿ ನಿಶ್ಚಿತ ಗುರಿತಲುಪಲು ಸಾಧ್ಯ. ಇವೆಲ್ಲದಕ್ಕೆ ಶಿಕ್ಷಣವೇ ಏಕೈಕ ಸಾಧನ. ಶಾಲೆಯು ತನ್ನ ವಿದ್ಯಾರ್ಥಿಗಳಲ್ಲಿ ಬೆಳೆಸುವ ಬೌದ್ಧಿಕ, ನೈತಿಕ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಸಾರ್ವತ್ರಿಕ ಮೌಲ್ಯಗಳು, ಅನುಭವಗಳು ಹಾಗೂ ಸಾಮರ್ಥ್ಯಗಳು ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುತ್ತವೆ ಎಂದು ನುಡಿದರು.
ವಿದ್ಯಾರ್ಥಿಗಳು ಬುದ್ಧ, ಪರಿಸರ, ಮೊಬೈಲ್ನ ಸೆಲ್ಫೀ ಪರಿಣಾಮ, ಸಂಚಾರ ದಟ್ಟಣೆ ಮುಂತಾದ ವಿವಿಧ ವಿಷಯಾಧಾರಿತ ನೃತ್ಯ ರೂಪಕಗಳು, ಜಾನಪದ ನೃತ್ಯ, ಭರತನಾಟ್ಯ, ದೇಶಭಕ್ತಿಗೀತೆಗಳಿಗೆ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆ ಹಾಗೂ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಡಾಲ್ಫಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ಕಾರ್ಯದರ್ಶಿ ವಿ.ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಆಡಳಿತಾಧಿಕಾರಿ ಚಂದನಾ ಅಶೋಕ್, ಪ್ರಾಂಶುಪಾಲರಾದ ಥಾಮಸ್ ಫಿಲಿಪ್, ಪಿ.ಲೋಕೇಶ್ನಾಥ್, ಶ್ರೀನಿವಾಸರೆಡ್ಡಿ, ಎನ್.ಮುನಿಶಾಮಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -