ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಬುಧವಾರ ರಾತ್ರಿ ಗಂಧದ ಅಭಿಷೇಕ, ಉರುಸ್ ಹಾಗೂ ಖವ್ವಾಲಿಯನ್ನು ಆಯೋಜಿಸಲಾಗಿತ್ತು.
ಹಜರತ್ ಗೈಬ್ ಷಾ ವಲೀ ದರ್ಗಾವನ್ನು ದಿದ್ಯುತ್ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿದ್ದು, ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲಾ ಜನಾಂಗದವರೂ ಪೂಜೆ ಸಲ್ಲಿಸಿದರು.
ಬೆಳ್ಳೂಟಿ ಗೇಟ್ ಬಳಿ ಗುಟ್ಟಾಂಜನೇಯಸ್ವಾಮಿ ದೇವಾಲಯ, ಹಜರತ್ ಗೈಬ್ ಷಾ ವಲೀ ದರ್ಗಾ ಮತ್ತು ಚರ್ಚ್ ಅಕ್ಕಪಕ್ಕದಲ್ಲೇ ಇದೆ. ಈ ಸ್ಥಳವು ಎಲ್ಲಾ ಧರ್ಮದ ಭಾವೈಕ್ಯತೆಯ ಪ್ರತೀಕವಾಗಿದೆ.
‘ಸುಮಾರು ಮುನ್ನೂರು ವರ್ಷದ ಇತಿಹಾಸವಿರುವ ಹಜರತ್ ಗೈಬ್ ಷಾ ವಲೀ ದರ್ಗಾಗೆ ಎಲ್ಲಾ ಧರ್ಮೀಯರೂ ಬಂದು ಪೂಜೆ ಸಲ್ಲಿಸುತ್ತಾರೆ. ರಾಜ್ಯದ ಹಲವಾರು ಊರು ಹಾಗೂ ನಗರಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತೀ ವರ್ಷ ಇಲ್ಲಿ ಆಚರಿಸುವ ಉರುಸ್ ಖ್ಯಾತಿಯಾಗಿದೆ. ಹಬ್ಬದ ವಾತಾವರಣ ಇಲ್ಲಿ ಸೃಷ್ಠಿಯಾಗುತ್ತದೆ. ಈ ಸಂದರ್ಭದಲ್ಲಿ ಹಲವಾರು ಅಂಗಡಿಮುಂಗಟ್ಟುಗಳು ತೆರೆಯಲಾಗುತ್ತದೆ. ಮಕ್ಕಳ ಆಟಿಕೆಗಳು, ಸುಗಂಧ, ಸಮೋಸಾ ಮುಂತಾದ ತಿನಿಸುಗಳು ಇಲ್ಲಿ ತಂದು ಮಾರುತ್ತಾರೆ. ಮನೆಗಳಿಂದ ಊಟ ತಂದು ಇಲ್ಲಿ ಪೂಜೆ ಸಲ್ಲಿಸಿ ತಿಂದು, ರಾತ್ರಿಯೆಲ್ಲಾ ಇಲ್ಲಿ ನಡೆಯುವ ಉರುಸ್ ಮತ್ತು ಖವ್ವಾಲಿಯನ್ನು ವೀಕ್ಷಿಸಿ ಬೆಳಗಿನ ಜಾವ ತೆರಳುವ ವಾಡಿಕೆಯಿದೆ’ ಎಂದು ಪುರಸಭಾ ಸದಸ್ಯ ಷಫೀ ತಿಳಿಸಿದರು.
ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಗಂಧದ ಅಭಿಷೇಕ
ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ
ಪಟ್ಟಣದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಗುರುವಾರ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಹಾಗೂ ಇನ್ನಿತರ ಉಪಯುಕ್ತ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪುರಠಾಣೆಯ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಶಯಗಳನ್ನು ಪರಿಹರಿಸುತ್ತಾ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಪೂರ್ವಕವಾಗಿ ಬಹುಮಾನರೂಪದಲ್ಲಿ ಕಲಿಕಾಸಾಮಗ್ರಿಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯಶಿಕ್ಷಕಿ ವಿ. ಸೀತಾಲಕ್ಷ್ಮಿ, ಶಿಕ್ಷಕರಾದ ದಾಶರಥಿ, ನಾರಾಯಣಸ್ವಾಮಿ, ವೆಂಕಟೇಶಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಾನಲ್ಲಿನ ಇನ್ನೊಂದು ಚಂದ್ರ
ಈಗಿರುವ ನಮ್ಮ ಚಂದ್ರನ ಹೊರತಾಗಿ ಇನ್ನೊಂದು ಚಂದ್ರನೂ ಭೂಮಿಯನ್ನು ಸುತ್ತುತ್ತಿರುವನೆಂದರೆ ನಿಮಗೆ ಆಶ್ಚರ್ಯವಾದೀತು! ಆದರಿದು ನಿಜ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕೃತಕ ಚಂದ್ರನನ್ನು ಆಕಾಶಕ್ಕೆ ಹಾರಿಬಿಟ್ಟಿದೆ. 2009 ಜುಲೈ ತಿಂಗಳಲ್ಲಿ ಈ ಚಂದ್ರ ಒಂದು ದಶಕದ ಸಾರ್ಥಕ ಸೇವೆಯನ್ನು ಪೂರೈಸಿತೆಂದು ಸಂತೋಷದ ಆಚರಣೆಯೂ ನಾಸಾದಲ್ಲಿ ನಡೆಯಿತು. (ದಾಖಲೆಗಳ ಪ್ರಕಾರ ಗೆಲಿಲಿಯೋ ಎಂಬ ವಿಜ್ಞಾನಿ 1609ರಲ್ಲಿ ಮೊಟ್ಟಮೊದಲಬಾರಿ ದೂರದರ್ಶಕದ ಮೂಲಕ ಬಾಹ್ಯ ಆಕಾಶವನ್ನು ವೀಕ್ಷಿಸಿದ್ದ. ಆದ್ದರಿಂದ 2009 `ಅಂತಾರಾಷ್ಟ್ರೀಯ ಬಾಹ್ಯಾಕಾಶ ಆಚರಣಾ ವರ್ಷ’ ಎಂದು ಆಚರಿಸಲಾಯಿತು. ಭೂಮಿಯ ಮೇಲ್ಮೈನಿಂದ ನೂರು ಕಿ.ಮೀ. ಆಚೆಯ ಆಕಾಶವನ್ನು ಬಾಹ್ಯ ಆಕಾಶ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ ಬಾಹ್ಯ ಆಕಾಶದ ವೈಚಿತ್ರ್ಯಗಳ ಬಗ್ಗೆ ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಿಸುವುದೇ ಈ ಆಚರಣೆಯ ಗುರಿ.)
ಅಂದ ಹಾಗೆ ಇದು ನಮ್ಮ ಅಚ್ಚಕನ್ನಡದ ಚಂದಮಾಮನ ‘ಚಂದ್ರ’ ಹೆಸರಲ್ಲ. ಭಾರತೀಯ ಮೂಲದ ಖ್ಯಾತ ಭೌತ ಶಾಸ್ತ್ರಜ್ಞರಾಗಿದ್ದ ‘ಸುಬ್ರಹ್ಮಣಿಯನ್ ಚಂದ್ರಶೇಖರ’ ಅವರ ನೆನಪಿಗೆ ಈ ಹೆಸರು. 23 ಜುಲೈ 1999 ರಂದು ದೂರದರ್ಶಕವೊಂದನ್ನು ಮಡಿಲಲ್ಲಿಟ್ಟುಕೊಂಡು ಕೊಲಂಬಿಯಾ ಅಂತರಿಕ್ಷ ನೌಕೆಯಲ್ಲಿ ಕುಳಿತು ಬಾನಿಗೆ ಹಾರಿದ ಈ ಚಂದ್ರನನ್ನು ಕೃತಕ ಉಪಗ್ರಹ ಎನ್ನುವುದಕ್ಕಿಂತಲೂ ವೇದÀಶಾಲೆ ಅಥವಾ ಅಂತರಿಕ್ಷ ವೀಕ್ಷಣಾಲಯ ಎಂದು ಕರೆಯುವುದು ಸೂಕ್ತ. ಇದು ಪ್ರತಿ ಅರವತ್ನಾಲ್ಕು ಘಂಟೆಗಳಿಗೊಮ್ಮೆ ಭೂಮಿಯ ಪ್ರದಕ್ಷಿಣೆ ಮಾಡುತ್ತಿದೆ.
ಆಕಾಶಕ್ಕೆ ಹಾರುವ ಉಪಕರಣಗಳೆಂದರೆ ಅತ್ಯುನ್ನತ ತಂತ್ರಜ್ಞಾನ ಬೇಡುವ ಅಥವಾ ಅಪಾರ ಹಣ ನುಂಗುವ ಯೋಜನೆಗಳು. ಬಾಹ್ಯಾಕಾಶ ಸಂಸ್ಥೆಗಳು ಉಪಕರಣಗಳ ವೆಚ್ಚ ಕಡಿತಗೊಳಿಸಲು ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಂದ್ರ ವೇದಶಾಲೆಯ ನಿರ್ಮಾಣದ ವೇಳೆಯಲ್ಲಿ ಮೂಲ ನಕ್ಷೆಯಲ್ಲಿದ್ದ ಹನ್ನೆರಡು ಫಲಕಗಳಲ್ಲಿ ನಾಲ್ಕನ್ನು ಹಾಗೂ ಆರು ವೈಜ್ಞಾನಿಕ ಉಪಕರಣಗಳಲ್ಲಿ ಎರಡನ್ನು ಕಡಿಮೆಗೊಳಿಸಲಾಯಿತು. ವೃತ್ತಾಕಾರದ ಬದಲು ಅಂಡಾಕಾರದ ಕಕ್ಷೆಯಲ್ಲಿ ಅದು ಹಾರುವಂತೆ ರಚಿಸಲಾಯಿತು. ಏಕೆಂದರೆ ಈ ಕಕ್ಷೆಯಲ್ಲಿ ಅದು ಭೂಮಿಯ ಹೊರವಲಯದಿಂದ ಸಿಡಿಯುವ ವಿಕಿರಣಗಳಿಂದ ಸುರಕ್ಷಿತವಾಗಿರುತ್ತದೆ. ವೃತ್ತಾಕಾರದ ಕಕ್ಷೆಯಲ್ಲಿ ಹಾರುವಂತಿದ್ದರೆ ಈ ವೇದಶಾಲೆಯ ರಿಪೇರಿಗೆಂದು ಭೂಮಿಯಿಂದ ಅಂತರಿಕ್ಷ ನೌಕೆಗಳು ಹಾರಿ ಹೋಗಬಹುದಿತ್ತು. (ಆದರೆ ವಿಕಿರಣಗಳಿಂದ ರಕ್ಷಣೆ ಪಡೆಯಲು ವಿಶೇಷ ತಗಡುಗಳನ್ನು ಅಳವಡಿಸಬೇಕಾಗಿ ಬರುತ್ತಿತ್ತು). ಅಂಡಾಕಾರದ ಕಕ್ಷೆಯಲ್ಲಿ ಚಂದ್ರ ವೇದಶಾಲೆಯ ರಿಪೇರಿಯೂ ಸಾಧ್ಯವಿಲ್ಲ, ಅದು ಮರಳಿ ಭೂಮಿಗೆ ಬರುವಂತೆ ಮಾಡುವುದೂ ಸಾಧ್ಯವಿಲ್ಲ. ಇಷ್ಟಾದರೂ 22,723 ಕೆಜಿ ತೂಕದ ಮಾನವ ನಿರ್ಮಿತ ಈ ಚಂದ್ರನನ್ನು ಗಗನಯಾನಿಯನ್ನಾಗಿಸಲು ವಿಶೇಷವಾದ ರಾಕೆಟ್ ವ್ಯವಸ್ಥೆ ಬೇಕಾಯಿತು. ಹಾರಿದ ಒಂದು ತಿಂಗಳ ನಂತರ ಚಂದ್ರ ವೇದಶಾಲೆಯಿಂದ ಮಾಹಿತಿ ಬಿತ್ತರವಾಗಲು ಆರಂಭವಾಯಿತು. ಅಂದಿನಿಂದಲೂ ಕೇಂಬ್ರಿಜ್ ನ ‘ಚಂದ್ರ’ ಎಕ್ಸ್ ರೇ ಕೇಂದ್ರ ಅದರ ಮೇಲ್ವಿಚಾರಣೆ ನಡೆಸುತ್ತಿದೆ.
ಮಾನವನ ದೃಷ್ಟಿಗೆ ನಿಲುಕದ ದೂರದ ವಿದ್ಯಮಾನಗಳನ್ನು ಅರಿಯಲು ವಿಜ್ಞಾನಿಗಳು ಬಳಸಿದ ಉಪಕರಣ ದೂರದರ್ಶಕ. ಅಂದರೆ ಬಾಹ್ಯಾಕಾಶ ವಿಜ್ಞಾನಕ್ಕೂ, ದೂರದರ್ಶಕಗಳಿಗೂ ಬಿಡಲಾರದ ನಂಟು. 1608 ರಲ್ಲಿ ಭೂಮಿಯ ಪ್ರಥಮ ದೂರದರ್ಶಕ ನೆದಲ್ರ್ಯಾಂಡಿನ ಕನ್ನಡಕ ತಯಾರಿಸುವ ಮೂವರು ವರ್ತಕರ ಕೈಯ್ಯಲ್ಲಿ ಜನ್ಮ ತಾಳಿತು ಎಂದು ಇತಿಹಾಸ ಹೇಳುತ್ತದೆ. ಬೆಳಕಿನ ವಕ್ರೀಭವನ ಗುಣವನ್ನಾಧರಿಸಿದ ಆ ದರ್ಶಕದ ಸುಧಾರಿತ ಮಾದರಿಯನ್ನು ಗೆಲಿಲಿಯೋ 1609ರಲ್ಲಿ ತನ್ನ ಪ್ರಯೋಗಗಳಲ್ಲಿ ಬಳಸಿದನಂತೆ. ಆದ್ದರಿಂದ 2009ನ್ನು ದೂರದರ್ಶಕಗಳ ಸಾಧನೆಯ ನಾಲ್ಕುನೂರನೆಯ ವರ್ಷ ಎಂದೂ ಆಚರಿಸಬಹುದು.
ಈ ನಾನೂರು ವರ್ಷಗಳಲ್ಲಿ ದೂರದರ್ಶಕ ವಿಜ್ಞಾನ ಬಹಳೇ ಬೆಳೆದಿದೆ. ಮೊದಮೊದಲು ಭೂಮಿಯಲ್ಲಿದ್ದೇ ಆಕಾಶದ ದೂರನೋಟವನ್ನು ಪಡೆಯಲಾಗುತ್ತಿತ್ತು. ಖಗೋಲ ವಿಜ್ಞಾನ ಪ್ರಗತಿ ಹೊಂದಿದ ಹಾಗೆ ಆಕಾಶದಲ್ಲಿ ಹಾರಾಡುತ್ತಲೇ ಮಾಹಿತಿ ಕಲೆಹಾಕುವ ದೂರದರ್ಶಕಗಳು ನಿರ್ಮಾಣಗೊಳ್ಳತೊಡಗಿದವು. ಕಳೆದ ಶತಮಾನದಲ್ಲಿ ಅದರಲ್ಲೂ ಎರಡನೆಯ ಮಹಾಯುದ್ಧ ಮುಗಿದ ನಂತರದ ದಿನಗಳಲ್ಲಿ ಮುಂದುವರೆದ ಅಮೆರಿಕಾ ಮತ್ತು ಬ್ರಿಟನ್ ದೇಶಗಳು ಹಾರಾಡುವ ದೂರದರ್ಶಕಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸತೊಡಗಿದವು. ಯಶಸ್ಸು ಸುಲಭವಾಗಿ ಎಟಕುವಂತಿರಲಿಲ್ಲ. ಹತ್ತಾರು ವೈಫಲ್ಯಗಳ ನಂತರ ಬಾಹ್ಯಾಕಾಶ ಹಾರಾಟ ತಂತ್ರಜ್ಞಾನ ಉತ್ತಮಗೊಳ್ಳತೊಡಗಿತು. ದೀರ್ಘಾವಧಿ ಬಾಳಿಕೆಯ ದೂರದರ್ಶಕಗಳು, ಅವನ್ನು ಹೊತ್ತೊಯ್ಯುವ ಸುಧಾರಿತ ಅಂತರಿಕ್ಷ ನೌಕೆಗಳು ಬಾಹ್ಯಾಕಾಶದಲ್ಲಿ ಹಾರಲಾರಂಭಿಸಿದವು.
ಇಪ್ಪತ್ತನೆಯ ಶತಮಾನದಲ್ಲಿ ಅತಿ ಹೆಚ್ಚು ಬಗೆಯ ಹಾಗೂ ಅತ್ಯುಚ್ಛ ಮಟ್ಟದ ದೂರದರ್ಶಕಗಳು ತಯಾರಾದವು. ನಾವು ಕರೆಯುವ ‘ಬೆಳಕು’ ವಿದ್ಯುತ್ ಕಾಂತೀಯ ಅಲೆಪಟ್ಟಿಯ ಒಂದಲ್ಪ ಭಾಗ ಎಂಬ ವಿಷಯ ಬಹಿರಂಗವಾದ ಮೇಲಂತೂ ವಿವಿಧ ರೀತಿಯ ಕಿರಣಗಳನ್ನು ಪತ್ತೆ ಹಚ್ಚುವಂಥಹ ದರ್ಶಕಗಳ ಬಗ್ಗೆ ತಜ್ಞರಲ್ಲಿ ಹೆಚ್ಚು ಆಸ್ಥೆ ಬೆಳೆಯತೊಡಗಿತು. ಈಗಂತೂ ರೇಡಿಯೋ ತರಂಗದಿಂದ ಗ್ಯಾಮಾ ತರಂಗದ ವ್ಯಾಪ್ತಿಯವರೆಗೂ ಮಾಹಿತಿಗಳನ್ನು ದಾಖಲಿಸುವ ದರ್ಶಕಗಳನ್ನು ರೂಪಿಸಲಾಗಿದೆ. ಅವು ಭುವಿಯ ಸುತ್ತಲ ಬ್ರಹ್ಮಾಂಡದಲ್ಲಿ ಸಂಭವಿಸುತ್ತಿರುವ ವಿಸ್ಮಯಕಾರಿ, ರಂಗುರಂಗಿನ ಘಟನೆಗಳನ್ನು ವಿಜ್ಞಾನಿಗಳಿಗೆ ಚಿತ್ರಗಳ ಮೂಲಕ ರವಾನಿಸುವ ಕಾಯಕದಲ್ಲಿ ಸದಾ ನಿರತವಾಗಿವೆ.
ಬಾಹ್ಯಾಕಾಶದ ವೇದಶಾಲೆಗಳಲ್ಲಿ ಬಳಸಲಾಗುವ ದೂರದರ್ಶಕಗಳಲ್ಲಿ ನಾನಾ ವಿಧಗಳಿವೆ. ಕಾರಣವೆಂದರೆ ಪ್ರತಿಯೊಂದೂ ಪ್ರತ್ಯೇಕವಾದ ಲಕ್ಷಣಗಳುಳ್ಳ ವಿದ್ಯುತ್ ಕಾಂತೀಯ ಕಿರಣಗಳ ಅಧ್ಯಯನಕ್ಕೆಂದು ರಚಿತವಾಗಿವೆ. ಈ ವಿದ್ಯುತ್ ಕಾಂತೀಯ ಕಿರಣಗಳು ಅಥವಾ ಅಲೆಗಳು ಎಂದರೇನು? ಇವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ವಿಶ್ವದಲ್ಲಿ ಎಲ್ಲೆಡೆ ಪಸರಿಸಿರುವ, ಪಸರಿಸುತ್ತಿರುವ ಶಕ್ತಿ ಅಲೆಗಳು. ಇವು ಅಲೆಗಳ ರೂಪದಲ್ಲಿ ಹಾಗೂ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ವಿದ್ಯುತ್ ಮತ್ತು ಆಯಸ್ಕಾಂತ ಕ್ಷೇತ್ರಗಳ ಮಿಳಿತದಲ್ಲಿ ಉದ್ಭವಿಸುವ ಈ ಅಲೆಗಳು ಬಿಸಿಯಾದ, ಶಕ್ತಿ ತುಂಬಿದ ವಸ್ತುಗಳಿಂದ ಹೊರ ಚಿಮ್ಮುತ್ತಿರುತ್ತವೆ. ಇದಕ್ಕೆ ಉದಾಹರಣೆಯೆಂದರೆ, ನಕ್ಷತ್ರಗಳು. ವಸ್ತುಗಳ ಮೂಲರೂಪವೆನಿಸಿರುವ ಪರಮಾಣುಗಳ ಆಂತರಿಕ ಕ್ರಿಯೆಯಿಂದಾಗಿ ಈ ವಿದ್ಯುತ್ ಕಾಂತೀಯ ಶಕ್ತಿ ಉತ್ಪತ್ತಿಯಾಗುತ್ತದೆ. ಈ ಶಕ್ತಿಯ ವಿವಿಧ ಹಂತಗಳೇ ಭಿನ್ನ ಹೆಸರಿನ ಅಲೆಗಳು. ರೇಡಿಯೋ, ಮೈಕ್ರೋವೇವ್, ಅವರೋಹಿತ, ದೃಗ್ಗೋಚರ(ಅಂದರೆ ನಮ್ಮ ಕಣ್ಣಿಗೆ ಕಾಣಿಸುವ ಕೆಂಪಿನಿಂದ ನೇರಳೆ ಬಣ್ಣದವರೆಗಿನ ವರ್ಣಪಂಕ್ತಿ), ಅತಿನೇರಳೆ, ಎಕ್ಸ್ ರೇ ಹಾಗೂ ಗಾಮಾ ಕಿರಣಗಳನ್ನು ಕ್ರಮವಾಗಿ ಒಳಗೊಂಡಿರುವ ವಿದ್ಯುತ್ ಕಾಂತೀಯ ರೋಹಿತಪಟ್ಟಿ. ಈ ರೋಹಿತಪಟ್ಟಿಯಲ್ಲಿ ಬಲದಿಂದ ಎಡಕ್ಕೆ ಅಲೆಗಳ ಶಕ್ತಿ ಏರಿಕೆಯ ಕ್ರಮದಲ್ಲಿದ್ದರೆ, ಎಡದಿಂದ ಬಲಕ್ಕೆ ತರಂಗದೂರ ಏರಿಕೆಯ ಕ್ರಮದಲ್ಲಿರುತ್ತದೆ. ನಾವು ಬೆಳಕು ಎಂದು ಕರೆಯುವ ವರ್ಣಪಂಕ್ತಿ ಈ ವಿದ್ಯುತ್ ಕಾಂತೀಯ ಅಲೆಗಳ ಒಂದು ಅಲ್ಪ ಭಾಗವಷ್ಟೆ. ನಿಸರ್ಗದ ವೈಚಿತ್ರ್ಯ ಹೇಗಿದೆಯೆಂದರೆ ಈ ಅಲೆಗಳು ಬಾಹ್ಯ ಆಕಾಶದಲ್ಲಿ ಸರ್ವವ್ಯಾಪಿಯಾಗಿದ್ದರೂ ಜೀವಿಗಳಿಗೆ ಮಾರಕವಾಗದ ಅಲೆಗಳು ಮಾತ್ರ ಭೂ ವಾತಾವರಣವನ್ನು ನುಗ್ಗಬಲ್ಲವು. ಆದ್ದರಿಂದಲೇ ಶಕ್ತಿಯುತವಾದ ಕ್ಷಕಿರಣಗಳಿಗೆ, ಮೈಕ್ರೋವೇವ್ ಕಿರಣಗಳಿಗೆ ಅಷ್ಟೇಕೆ ಇನ್ಫ್ರಾರೆಡ್ ಅಥವಾ ಅವರೋಹಿತ ಕಿರಣಗಳಿಗೂ ಕೂಡ ಭೂಮಿಯ ವಾತಾವರಣವೆಂಬ ರಕ್ಷಾಕವಚದೊಳಕ್ಕೆ ಪ್ರವೇಶವಿಲ್ಲ.
ಮತ್ತೀಗ ವೇದಶಾಲೆಗಳಲ್ಲಿ ಬಳಸುವ ದೂರದರ್ಶಕಗಳಿಗೆ ಬರೋಣ. ಇವುಗಳಲ್ಲಿ ನಮ್ಮ ದೃಷ್ಟಿಗೋಚರ ಬೆಳಕನ್ನು ಗುರುತಿಸುವ ಆಪ್ಟಿಕಲ್ ಟೆಲಿಸ್ಕೋಪುಗಳು, ರೇಡಿಯೋ ಅಲೆಗಳನ್ನು ಗುರುತಿಸುವ ರೇಡಿಯೋ ಟೆಲಿಸ್ಕೋಪುಗಳು, ಅವರೋಹಿತ ಮತ್ತು ದೃಗ್ಗೋಚರ ಬೆಳಕಿನ ಚಿತ್ರಗಳನ್ನು ಗುರುತಿಸುವ ಹಬ್ಬಲ್, ಗಾಮಾ ರೇ ಹೀರುವ ಕಾಂಪ್ಟನ್, ಅತಿನೇರಳೆ ಕಿರಣಗಳನ್ನು ಗುರುತಿಸುವ ಜೇಮ್ಸ್ ವೆಬ್ ಇತ್ಯಾದಿ ಹಲ ಬಗೆಗಳಿವೆ. ಚಂದ್ರ ವೇದಶಾಲೆ ಮೇಲೆ ವಿವರಿಸಿದ ವಿದ್ಯುತ್ ಕಾಂತೀಯ ಅಲೆಗಳ ಎಕ್ಸ್ ರೇ ಗಳ ಚಿತ್ರಗಳನ್ನು ಮಾತ್ರ ತೆಗೆಯುತ್ತದೆ. ಇವು ಅತ್ಯಂತ ಶಕ್ತಿಕಾರಿಯಾದ ಕಿರಣಗಳು. ಭೂ ವಾತಾವರಣದಲ್ಲಿ ಕಾಣಬರುವುದಿಲ್ಲ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಇದರ ಸದುಪಯೋಗವನ್ನು ಪಡೆಯಲು ಕೃತಕವಾಗಿ ಉತ್ಪಾದಿಸಲಾಗುತ್ತದೆ. ಎಕ್ಸ್ ರೇಗಳು ಗಾಳಿಯಲ್ಲಿ ಹೆಚ್ಚು ದೂರ ಕ್ರಮಿಸಲಾರವು.
ಮೊಟ್ಟಮೊದಲ ಬಾರಿ ಇದರ ಇರುವಿಕೆಯ ಪತ್ತೆಯಾದಾಗ ಜರ್ಮನ್ ವಿಜ್ಞಾನಿ ಕೊನ್ರಾಡ್ ರಾಯೆಂಟ್ಜೆನ್ ಇದ್ಯಾವುದೋ ಗೊತ್ತಿಲ್ಲದ ಕಿರಣಗಳೆಂದು ಎಕ್ಸ್ ರೇ ಎಂದು ಕರೆದಿದ್ದು ಮುಂದೆ ಅದೇ ಹೆಸರು ಖಾಯಂ ಆಗಿ ಉಳಿಯಿತು. ಅಂತರಿಕ್ಷದಲ್ಲಿ ಲಕ್ಷಲಕ್ಷ ಡಿಗ್ರಿಯಷ್ಟು ಬಿಸಿಯಾದ ವಸ್ತುಗಳಿಂದ ಎಕ್ಸ್ ರೇಗಳು ಹೊರಹೊಮ್ಮುತ್ತವೆ. ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಯಾವುದೇ ಅದೇತಡೆ ಇಲ್ಲದೆ ಎಲ್ಲಾ ಕಡೆ ಪಸರಿಸುವ ಆ ಕಿರಣಗಳನ್ನು ಹೀರಿಕೊಂಡು ಚಂದ್ರವೇದಶಾಲೆ ಚಿತ್ರ ತೆಗೆಯುತ್ತದೆ. ತೀಕ್ಷ್ಣವಾದ ಎಕ್ಸ್ ರೇ ಕಿರಣಗಳನ್ನು ಸೆರೆ ಹಿಡಿಯುವ ಚಂದ್ರ ದೂರದರ್ಶಕದ ಫಲಕಗಳನ್ನು ಅತಿ ನುಣುಪಾಗಿಯೂ ಮತ್ತು ಅತ್ಯಂತ ಬಲಿಷ್ಟವಾಗಿಯೂ ರಚಿಸಲಾಗಿದೆ. ಕೃತಕ ಚಂದ್ರನಿಂದ ಬಂದ ಚಿತ್ರಗಳನ್ನು ವಿಶ್ಲೇಷಿಸಿ ಎಕ್ಸ್ ರೇಗಳ ಮೂಲವನ್ನೂ ಮತ್ತು ಆ ಮೂಲದ ಸ್ವರೂಪವನ್ನೂ, ಅದರ ರಚನೆಯನ್ನೂ ಹಾಗೂ ಅದರಿಂದ ಸುತ್ತಲ ಆಕಾಶಕಾಯಗಳ ಮೇಲಾಗುವ ಗಾಢ ಪ್ರಭಾವವನ್ನೂ ವಿಜ್ಞಾನಿಗಳು ಪತ್ತೆ ಹಚ್ಚುತ್ತಾರೆ. ಈ ಚಂದ್ರನಿಂದ ಬಿತ್ತರವಾಗುವ ಚಿತ್ರಗಳ ಅಧ್ಯಯನಕ್ಕೆಂದೇ ನೂರಾರು ಯುವ ವಿಜ್ಞಾನಿಗಳು ಕಾದು ಕುಳಿತಿರುತ್ತಾರೆ.
ಈ ವರ್ಷವೊಂದರಲ್ಲೇ ಚಂದ್ರ ವೇದಶಾಲೆ ಕಳಿಸಿದ ಚಿತ್ರಗಳ ಆಧಾರದ ಮೇಲೆ ವಿಜ್ಞಾನಿಗಳು ಕಲೆಹಾಕಿದ ಮಾಹಿತಿಗಳು ಬಹಳಷ್ಟು. ಅದರ ಬಗ್ಗೆ ತಿಳಿಯುವುದಕ್ಕಿಂತ ಮೊದಲು ಖಗೋಲಶಾಸ್ತ್ರದಲ್ಲಿ ಬಳಸುವ ಕೆಲವು ಶಬ್ದಗಳನ್ನು ನಾವು ಅರಿತುಕೊಳ್ಳೋಣ.
ಸೂರ್ಯ ಒಂದು ನಕ್ಷತ್ರ ತಾನೆ? ನಕ್ಷತ್ರಗಳ ಗುಂಪನ್ನು ಗೆಲಾಕ್ಸಿ ಎಂದು ಕರೆಯುತ್ತಾರೆ. ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಗೆಲಾಕ್ಸಿಗಳಿವೆ. ‘ಮಿಲ್ಕೀವೇ’ ಅಥವಾ ‘ಕ್ಷೀರಪಥ’ ಅಂದರೆ ನಮ್ಮ ಸೂರ್ಯನೂ ಅಂದರೆ ನಾವೂ ಒಂದು ಭಾಗವಾಗಿರುವ ಗೆಲಾಕ್ಸಿ. ಕ್ಷೀರಪಥವೊಂದರಲ್ಲೇ ಇನ್ನೂರರಿಂದ ನಾನೂರು ಶತಕೋಟಿ ನಕ್ಷತ್ರಗಳಿವೆಯೆಂದರೆ ವಿಶ್ವದ ಅಗಾಧತೆಯನ್ನು ನಾವು ಕಲ್ಪಿಸಿಕೊಳ್ಳಬಹುದು. ಗೆಲಾಕ್ಸಿಗಳ ಸದಸ್ಯ ನಕ್ಷತ್ರಗಳ ನಡುವಿನ ಅನಿಲ, ಧೂಳುಗಳಿಂದ ತುಂಬಿ ಮೋಡ ಮುಸುಕಿದಂತೆ ಕಾಣುವ ರಚನೆಯನ್ನು ನೆಬ್ಯುಲಾ ಎನ್ನುತ್ತಾರೆ. ನಕ್ಷತ್ರಗಳು ತಮ್ಮ ಜೀವಿತಾವಧಿಯಲ್ಲಿ ಹಂತಹಂತವಾಗಿ ರೂಪಾಂತರಗೊಳ್ಳುತ್ತವೆ. ‘ಸೂಪರನೋವಾ’ ಎಂಬುದು ತಾರೆಯೊಂದು ಸಿಡಿದು ಹೋಳಾಗುವ ಹಂತ. ಈ ಹಂತದಲ್ಲಿ ಅದು ಬಹು ದೊಡ್ಡ ಆಕಾರ ಪಡೆದು, ಪ್ರಕಾಶಮಾನವಾಗಿ ಉರಿದು, ಆ ನಂತರ ಸಿಡಿದು ಸುತ್ತಲ ಪ್ರದೇಶದಲ್ಲಿ ತಲ್ಲಣವೆಬ್ಬಿಸಿ ಅತಿ ವೇಗವಾಗಿ ತನ್ನ ಶಕ್ತಿಯನ್ನು ಹೊರಹಾಕುತ್ತದೆ. ಕಪ್ಪುಕುಳಿ ಅಥವಾ ಕಪ್ಪುರಂಧ್ರಗಳೆಂದರೆ ಬಳಿ ಬರುವ ವಸ್ತುಗಳೆಲ್ಲವನ್ನೂ (ಬೆಳಕನ್ನೂ ಸಹ)ತನ್ನ ಒಡಲೊಳಗೆ ಸೆಳೆದುಕೊಂಡು ನುಂಗಿ ಹಾಕುವ ಅಂದರೆ ಗರಿಷ್ಟ ಗುರುತ್ವ ಆಕರ್ಷಣೆಯನ್ನು ಹೊಂದಿದ ಪ್ರದೇಶಗಳು. ವೈಟ್ ಡ್ವಾರ್ಫ್ ಅಥವಾ ಬಿಳಿಕುಬ್ಜಗಳೆಂದರೆ ಜೀವಿತಾವಧಿಯ ಅಂತಿಮ ಹಂತವನ್ನು ತಲುಪಿ, ಪ್ರಖರವಾದ ಬೆಳ್ಳಿ ಬೆಳಕನ್ನು ಮಿಂಚಿಸುವ ಪುಟ್ಟ ನಕ್ಷತ್ರಗಳು. ನ್ಯೂಟ್ರಾನ್ ನಕ್ಷತ್ರಗಳೆಂದರೆ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತಾ ಕೊನೆಗೊಮ್ಮೆ ಬರೀ ನ್ಯೂಟ್ರಾನ್ ಕಣಗಳನ್ನು ಮಾತ್ರ ಒಡಲೊಳಗೆ ತುಂಬಿಕೊಂಡ ಪುಟ್ಟ ನಕ್ಷತ್ರಗಳು. ಕಪ್ಪುದ್ರವ್ಯವೆಂದರೆ ಮಾನವ ಬರೀ ತಾರ್ಕಿಕ ಬುದ್ಧಿಯಿಂದ ಮಾತ್ರ ಪತ್ತೆ ಹಚ್ಚಿದ ಆದರೆ ಭೌತಿಕವಾಗಿ ಇನ್ನೂ ನಮಗೆಟುಕದ ದ್ರವ್ಯ.
ಇಲ್ಲಿವೆ ಚಂದ್ರ ವೇದಶಾಲೆಯ ಕೆಲವೊಂದು ಅನ್ವೇಷಣೆಗಳು:
• 17 ಸಾವಿರ ಬೆಳಕಿನ ವರ್ಷಗಳಷ್ಟು ಹಳೆಯದಾದ ‘ಪಿ.ಎಸ್.ಆರ್: 1509-58 ‘ ಹೆಸರಿನ ನ್ಯೂಟ್ರಾನ್ ನಕ್ಷತ್ರದ ಚಿತ್ರ ತೆಗೆದ ಮೊದಲ ದೂರದರ್ಶಕ ಚಂದ್ರ. ಇದು ವೇಗವಾಗಿ ಗಿರಕಿ ಹೊಡೆಯುತ್ತ ಶಕ್ತಿಯನ್ನು ಎಕ್ಸ್ ರೇಗಳಾಗಿ ಫೂತ್ಕರಿಸುತ್ತಿದೆ. ಆ ಅಬ್ಬರದಲ್ಲಿ ಕೈ ಆಕಾರದಂತೆ ಕಾಣಿಸುವ ಈ ನಕ್ಷತ್ರವನ್ನು ‘ದೇವರ ಕೈ(ಅಥವಾ ಗಾಡ್ಸ್ ಓನ್ ಹ್ಯಾಂಡ್) ಎನ್ನಲಾಗುತ್ತಿದೆ.
• ನ್ಯೂಟ್ರಾನ್ ನಕ್ಷತ್ರಗಳ ಅತಿ ವೇಗ ಹಾಗೂ ಅದರಿಂದಾಗಿ ಸುತ್ತಲ ಕೋಟಿಗಟ್ಟಲೆ ಮೈಲುಗಳ ಆಕಾಶದಲ್ಲಿ ಅವುಗಳ ಪ್ರಭಾವಲಯ ಇರುವುದೆಂದು ಏಡಿಯ ಆಕಾರದಲ್ಲಿರುವ ಕ್ರಾಬ್ ನೆಬ್ಯುಲಾ ಚಿತ್ರ ತೋರಿಸಿದೆ.
• ಎ1689 ಈವರೆಗೆ ಕಂಡುಹಿಡಿಯಲಾದ ಗೆಲಾಕ್ಸಿಗಳಲ್ಲಿ ಅತಿ ದೊಡ್ಡದು. ಚಂದ್ರ ವೇದಶಾಲೆ ಕಳುಹಿಸಿದ ಚಿತ್ರಗಳಿಂದಾಗಿ ಇಂಥ ದೊಡ್ಡ ಗೆಲಾಕ್ಸಿಗಳು ಚಿಕ್ಕ ಗೆಲಾಕ್ಸಿಗಳಿಂದ ಮಾಡಲ್ಪಟ್ಟಿವೆ ಎಂಬ ವಿಜ್ಞಾನಿಗಳ ಊಹೆಗೆ ಇಂಬು ಕೊಟ್ಟಂತಾಗಿದೆ.
• ಕಪ್ಪುರಂಧ್ರವೊಂದರ ಹೊರವಲಯದ ಬಿರುಸಾದ ವಾತಾವರಣದಲ್ಲಿ ಉದ್ಭವಿಸುತ್ತಿರುವ ಶಬ್ದದ ಅಲೆಗಳನ್ನು ಚಂದ್ರ ಗುರುತಿಸಿದೆ.
• ಕೆಲವು ಗೆಲಾಕ್ಸಿಗಳಲ್ಲಿ ಸದಸ್ಯ ನಕ್ಷತ್ರಗಳ ನಡುವಿನ ಸ್ಥಳ ಬಿಸಿ ಅನಿಲಗಳಿಂದ ತುಂಬಿದ್ದು ಅವು ಎಕ್ಸ್ ರೇಗಳನ್ನು ಉಗುಳುತ್ತಿವೆ ಎಂದು ಚಂದ್ರನ ಚಿತ್ರಗಳು ತೋರಿಸಿವೆ.
ನಮ್ಮ ಇಂದ್ರಿಯಗಳಿಗೆ ನಿಲುಕುವ ಈ ಬ್ರಹ್ಮಾಂಡ ಸುಂದರವಾಗಿದೆ. ಆದರೆ ಎಕ್ಸ್ ರೇಗಳ ಬ್ರಹ್ಮಾಂಡ ಬಲು ತೀಕ್ಷ್ಣ ಹಾಗೂ ಅತಿ ಕ್ರೂರವಾದದ್ದು. ಅಲ್ಲಿ ಸದಾ ತಾರಾ ಸಮರಗಳು, ಬೆಳಕು, ಅನಿಲಗಳ ಫೂತ್ಕಾರಗಳು, ಕಪ್ಪು ಕುಳಿಗಳಿಂದ ಆಕ್ರಮಣಕ್ಕೊಳಗಾಗುವ ತಾರೆಗಳು, ಗೆಲಾಕ್ಸಿಗಳ ನಡುವಿನ ತಿಕ್ಕಾಟ, ನ್ಯೂಟ್ರಾನ್ ನಕ್ಷತ್ರಗಳ ಉದಯ ಹೀಗೆ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿರುತ್ತವೆ. ಚಂದ್ರ ವೇದಶಾಲೆಯಿಂದಾಗಿ ಅಲ್ಲಿ ನಡೆಯುವ ಶಕ್ತಿ ವಿನಿಮಯದ ಕುರಿತಾದ ಮಾನವನ ಅರಿವಿನ ಹರವು ಹಿಗ್ಗಿ ವಿಸ್ತಾರಗೊಳ್ಳುತ್ತಿದೆ.
ಚಂದ್ರ ವೇದಶಾಲೆ ಬರಿಯ ಐದು ವರ್ಷಗಳು ಮಾತ್ರ ಸಮರ್ಥವಾಗಿ ಕಾರ್ಯವೆಸಗಬಹುದೆಂದು ನಂಬಲಾಗಿತ್ತು. ಈಗ ಐದು ವರ್ಷಗಳ ಹಿಂದೆ ನಾಸಾದ ವಿಜ್ಞಾನಿಗಳು ಅದರ ಆಯುಸ್ಸನ್ನು ಮತ್ತೆ ಹತ್ತು ವರ್ಷಗಳ ಕಾಲ ಮುಂದೂಡಿದ್ದಾರೆ ಮುಂದೊಂದು ದಿನ ಬಾಹ್ಯಾಕಾಶ ಕಸವೆನ್ನಿಸಿಕೊಳ್ಳಲಿರುವ ಈ ಕೃತಕ ಚಂದ್ರ ಈಗಂತೂ ಖಗೋಲ ವಿಜ್ಞಾನಿಗಳ ಬಾಹ್ಯಾಕಾಶ ಎಕ್ಸ್ ರೇ ಕಣ್ಣಾಗಿದ್ದಾನೆ. 2020ರಲ್ಲಿ ಈ ಕೃತಕ ಚಂದ್ರನ ಹೊಣೆಯನ್ನು ವಹಿಸಿಕೊಳ್ಳಲೆಂದು ‘ಅಂತಾರಾಷ್ಟ್ರೀಯ ಎಕ್ಸ್ ರೇ ವೇದಶಾಲೆ’ ಉಡಾವಣೆಗೊಳ್ಳಲಿದೆ.
ಸರೋಜ ಪ್ರಕಾಶ್
ಸರ್ಕಾರಿ ಶಾಲೆಗೆ ಕಂಪೆನಿಯ ಉದ್ಯೋಗಿಗಳ ನೆರವು
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಶಿಕ್ಷಣ ಮತ್ತು ಶೈಕ್ಷಣಿಕ ಪರಿಸರವನ್ನು ಒದಗಿಸಿದಲ್ಲಿ ಅವರು ಉತ್ತಮ ಪ್ರಜೆಗಳಾಗುವಲ್ಲಿ ಸಂಶಯವಿಲ್ಲ ಎಂದು ಬೆಂಗಳೂರಿನ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ ಕಂಪೆನಿಯ ಮಾಲೀಕ ಖಲೀಂ ಉರ್ ರೆಹಮಾನ್ ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ- ತಾಲ್ಲೂಕಿನ ವೈ.ಹುಣಸೇನಹಳಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಮ್ಮ ಕಂಪೆನಿಯಿಂದ ದತ್ತು ತೆಗೆದುಕೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಶಾಲಾಭಿವೃದ್ಧಿ ಸಮಿತಿಯವರು ಮತ್ತು ಶಿಕ್ಷಕರು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಅದರೊಂದಿಗೆ ಶಾಲೆಗೆ ಅಗತ್ಯವಿರುವ ಉಳಿದೆಲ್ಲ ಅಂಶಗಳನ್ನೂ ನಮ್ಮ ಕಂಪೆನಿಯಿಂದ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕಂಪೆನಿಯ ಉದ್ಯೋಗಿ ಜಿ.ಎನ್.ನಂದಕುಮಾರ್ ಮಾತನಾಡಿ, ಶಾಲೆಗೆ ಬರುವ ಮಕ್ಕಳ ಬಗ್ಗೆ ಪೋಷಕರಲ್ಲದೆ ಗ್ರಾಮಸ್ಥರೂ ಗಮನಹರಿಸಬೇಕು. ಶಾಲಾ ಸಮಯದಲ್ಲಿ ಸಮವಸ್ತ್ರ ಧರಿಸಿರುವ ಮಕ್ಕಳು ಹೊರಗೆ ಕಂಡಲ್ಲಿ ವಿಚಾರಿಸಿ ಶಾಲೆಗೆ ಕರೆತರಬೇಕು. ಮುಂದಿನ ದಿನಗಳಲ್ಲಿ ಶಾಲೆಗೆ ಅಬತ್ಯವಿರುವ ಡೆಸ್ಕ್ಗಳು, ಕಂಪ್ಯೂಟರ್ಗಾಗಿ ಬ್ಯಾಟರಿ, ಶಾಲೆಯು ಸೋರದಂತೆ ರಿಪೇರಿ ಮುಂತಾದವುಗಳನ್ನು ಮಾಡಿಕೊಡುವುದಾಗಿ ಹೇಳಿದರು.
ವಾಟರ್ ಫಿಲ್ಟರ್, ಕ್ರಿಕೆಟ್, ವಾಲೀಬಾಲ್, ಹಾಕಿ ಮುಂತಾದ ಆಟದ ಸಾಮಗ್ರಿಗಳು, ಪಾಠೋಪಕರಣಗಳನ್ನು ಸೇರಿದಂತೆ ಕಲಿಕೆ ಹಾಗೂ ಕ್ರೀಡೆಗೆ ಸಹಕಾರಿಯಾಗುವ ಸುಮಾರು ೧ ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.
ಕಂಪೆನಿಯ ಅಬ್ದುಲ್ ರಜಾಕ್, ದೇವರಾಜ್, ಅರುಣ್, ಸುಹಾಲ್, ಸತೀಶ್ಕುಮಾರ್, ಶಿವಶಂಕರ್, ಮಣಿ, ವಿಜಿ, ಶಿಕ್ಷಣ ಸಂಯೋಜಕ ಶ್ರೀನಾಥ್, ಮುಖ್ಯ ಶಿಕ್ಷಕಿ ಹಂಸವೇಣಿ, ಸಹಶಿಕ್ಷಕರಾದ ಕುಮುದ, ಮಂಜುಳ, ವಿದ್ಯಾ, ಶ್ರೀನಾಥ್, ಅಕ್ಕಾಯಮ್ಮ, ಎಸ್ಡಿಎಂಸಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯತಿ ಸದಸ್ಯ ಮುನಿಯಪ್ಪ, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಕಾನೂನನ್ನು ಯಾರು ಗೌರವಿಸಿ, ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಾರೋ ಅವರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಈಚೆಗೆ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನುಗಳನ್ನು ಇನ್ನೊಬ್ಬರ ಒತ್ತಾಯಕ್ಕಾಗಿ ಆಗಲಿ, ಪೊಲೀಸರಿಗೆ ಭಯ ಪಟ್ಟು ಆಗಲಿ ಪಾಲಿಸುವುದಲ್ಲ. ಅದು ನಿಮ್ಮ ನಮ್ಮ ಒಳ್ಳೆಯದಕ್ಕಾಗಿಯೆ ಕಾನೂನುಗಳಿದ್ದು, ಎಲ್ಲರ ಸುರಕ್ಷತೆಗಾಗಿ ಕಾನೂನನ್ನು ಪಾಲಿಸುವುದು ಸೂಕ್ತ ಎಂದರು.
ವಿಜ್ಞಾನ-ತಂತ್ರಜ್ಞಾನ ಬೆಳೆದಿದ್ದು ಶಾಲಾ ಕಾಲೇಜು ಹಂತದ ಮಕ್ಕಳ ಬೆರಳ ತುದಿಯಲ್ಲೇ ಎಲ್ಲ ಮಾಹಿತಿಗಳೂ ಸಿಗುತ್ತಿದ್ದು, ಇದು ತಮ್ಮ ಜ್ಞಾನದ ಬೆಳವಣಿಗೆಗೆ ಎಷ್ಟು ಸಹಕಾರಿಯೋ ಹಾದಿ ತಪ್ಪಲು ಕೂಡ ಅಷ್ಟೇ ಪರಿಣಾಮಕಾರಿಂಯಾಗಿ ಕಾರಣವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನವನ್ನು ವಿದ್ಯಾರ್ಜನೆಗೆ ಬಳಸಿಕೊಂಡವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೆ ಅದನ್ನು ದುರ್ಬಳಕೆ ಮಾಡಿಕೊಂಡವರು ತಪ್ಪು ಮಾಡಿ ಕಾನೂನಿನ ಕುಣಿಕೆಗೆ ಸಿಲುಕಿ ನಲಗುತ್ತಿದ್ದಾರೆ ಎಂದು ಹೇಳಿದರು.
ಎಲ್ಲಿಯೆ ಆಗಲಿ ಲೈಂಗಿಕ ದೌರ್ಜನ್ಯಗಳು ನಡೆದ ತಕ್ಷಣ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವ ಕೆಲಸ ಮೊದಲು ಮಾಡಿ. ಇದರಿಂದ ಸಂತ್ರಸ್ಥರಿಗೆ ನ್ಯಾಯ ಸಿಗುವುದರ ಜತೆಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ಮಾತನಾಡಿ, ೧೮ ವರ್ಷದೊಳಗಿನ ಯಾರೇ ಆಗಲಿ ಅಂಗಡಿಗಳಲ್ಲಿ ಬೀಡಿ ಸಿಗರೇಟ್ ಗುಟ್ಕಾದಂತ ವಸ್ತುಗಳನ್ನು ಮಾರಾಟ ಮಾಡುವುದಾಗಲಿ, ಖರೀಸುವುದಾಗಲಿ ಕಾನೂನು ಪ್ರಕಾರ ತಪ್ಪು. ಯಾರೇ ಅಪರಿಚಿತರು ಕರೆದಾಗ ಹೋಗುವುದು, ಅವರೊಂದಿಗೆ ವ್ಯವಹರಿಸುವುದು ತಪ್ಪು. ಎಟಿಎಂ ಬಳಕೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಗೋಪಿನಾಥ್, ಸಹಶಿಕ್ಷಕರಾದ ಟಿ.ವಿ.ಚಂದ್ರಶೇಖರ್, ಜಯರಾಂ. ತುಳಸಿಮಾತಾ, ಪುಷ್ಪಾವತಿ, ರಾಧ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮದುವೆಯ ನಂತರ ಸ್ತ್ರೀ ಒಮ್ಮೆ ಮಗುವಾಗಲಾರಳಾ?
ಕೆಲವೊಮ್ಮೆ ಜೀವನದಲ್ಲಿ ನಾವು ನಮ್ಮ ಮನಸ್ಸಿನಂತೆ ನೆಡೆದುಕೊಳ್ಳಲಾಗುವುದಿಲ್ಲ. ಕೆಲವೊಮ್ಮೆ ಏನು ಬಹಳ ಸಾರಿ. ಅದಕ್ಕಾಗಿಯೆ ಒಂದು ಮಾತು ಇದೆ “ಎಲ್ಲರೂ ನಿನ್ನಂತಾಗಲಿಲ್ಲವೆಂದು ಕೋಪಗೊಳ್ಳಬೇಡ ಏಕೆಂದರೆ ನೀನೇ ನೀನು ಯೋಚಿಸಿದಂತೆ ಆಗಲಾರೆ” ಎಂದು. ಅದನ್ನೂ ಮೀರಿ ನೆಡೆದವು ಎಂದರೆ ಮನೆಯಲ್ಲಿ ಯಾರು ಏನು ಹೇಳುತ್ತಾರೋ, ಬೇರೆಯವರು ಏನು ತಿಳಿಯುತ್ತರೋ ಹೀಗೆ ಯೋಚನೆಗಳು ಸಾಗುತ್ತವೆ. ಅದರಲ್ಲೂ ಇಂಥ ಯೋಚನೆಯಲ್ಲಿ ಹೆಣ್ಣು ಮುಂದಿರುತ್ತಾಳೆ.
ನನ್ನ ಮಗಳ ಶಾಲೆಯಲ್ಲಿ ತಂದೆತಾಯಿಯರಿಗಾಗಿ ವರ್ಷಕ್ಕೊಮ್ಮೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ನಾನು ಭಾಗವಹಿಸಿದರೂ ಯಾವುದರಲ್ಲಿಯೂ ಬರಲಿಲ್ಲ ಆ ಮಾತು ಬೇರೆ! ನಾನು ಹೇಳಹೋಗುತ್ತಿರುವುದು ಇದರಲ್ಲಿ ಯಾರು ಬಹುಮಾನ ಪಡೆಯುತ್ತಾರೆ ಯಾರು ಪಡೆಯುವುದಿಲ್ಲ ಎನ್ನುವುದರ ಬಗ್ಗೆಯಲ್ಲ. ಭಾಗವಹಿಸಬೇಕು ಎನ್ನುವಂತಹ ಮನಸ್ಥಿತಿ ಇದ್ದರೂ ಭಾಗವಹಿಸಲಾಗದಂಥ ಸ್ಥಿತಿಯ ಬಗ್ಗೆ.
ಮಾತೆಯರಿಗಾಗಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಮಗೆಲ್ಲರಿಗೂ ಖುಷಿಯೋ ಖುಷಿ, ನಮ್ಮ ನಮ್ಮ ಬಾಲ್ಯದ ದಿನಗಳನ್ನು ನೆನೆಯುತ್ತಾ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿದೆವು. ಆ ಮಾತೆಯರಲ್ಲಿ ಹೀಗೆ ತನ್ನ ಬಾಲ್ಯದ ದಿನ ನೆನೆಯುತ್ತಾ ಓಡಿದ ಒಬ್ಬ ತಾಯಿ ಬಿದ್ದು ಕಾಲನ್ನು ತರಚಿಕೊಂಡಳು. ಆಗ ಆಕೆಯ ಮನಸ್ಥಿತಿಯನ್ನು ನೆನೆದು ನನಗೆ ಈಗಲೂ ಸಂಕಟವಾಗುತ್ತದೆ. ಆಕೆಯ ಮನೆಯಲ್ಲಿ ಆಕೆಯ ಪತಿ “ನೀನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಬೇಡ” ಎಂದು ಹೇಳಿದ್ದರಂತೆ. ಅದನ್ನು ಮೀರಿ ಮಕ್ಕಳಂತೆ ಓಡಿದ್ದಳು, ಮಾತ್ರವಲ್ಲ ಓಡಿ ಬಿದ್ದಿದ್ದಳು ಕೂಡ. ಆಕೆಗೆ ಆಗ ಓಡಿದ ಖುಷಿ ಪೂರ್ತಿಯಾಗಿ ಹೋಗಿ ಅದರ ಜಾಗದಲ್ಲಿ ಹೆದರಿಕೆ ಮನೆಮಾಡಿತ್ತು. ತನ್ನ ಪತಿ ಬೇಡ ಎಂದು ಹೇಳಿದರೂ ತಾನು ಆಟಕ್ಕೆ ಸೇರಿದೆ, ಅಲ್ಲದೇ ಬಿದ್ದು ಪೆಟ್ಟು ಮಾಡಿಕೊಂಡೆ, ಇನ್ನು ತನ್ನ ಪತಿ ಏನು ಹೇಳುತ್ತಾರೋ, ಬೈಯ್ಯುತ್ತಾರೋ ಎಂದು ತುಂಬಾ ಚಿಂತಿತಳಾಗಿದ್ದಳು. ನಂತರ ಸ್ಪರ್ಧೆಯೆಲ್ಲವೂ ಮುಗಿಯಿತು ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು ಆ ಮಾತು ಬೇರೆ.
ಆದರೆ ನನಗೆ ಬಿದ್ದ ಆ ತಾಯಿ ಬಗ್ಗೆ ಯೋಚನೆ ಮಾಡುವಂತಾಯಿತು, ಎಂಥ ವಿಪರ್ಯಾಸ ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಕೂಡ ಕೆಲವೊಮ್ಮೆ ಹೆಣ್ಣು ಅನುಭವಿಸಲಾರಳೇನೋ ಅನ್ನಿಸುತ್ತದೆ. ಹೆಣ್ಣಿಗೆ ಮದುವೆಯೊಂದು ಆದರೆ ಜೀವನ ಸಂಪೂರ್ಣ ಸಮಾಪ್ತಿಯಾ? ಒಮ್ಮೆ ಮಕ್ಕಳಂತೆ ನಗುತ್ತೇನೆ, ಓಡುತ್ತೇನೆ, ಅಳುತ್ತೇನೆ ಯಾವುದೂ ಸಾಧ್ಯವಿಲ್ಲವಾ? ಯೋಚಿಸಬೇಕಾದಂತಹ ವಿಷಯ.
ಈಗಿನ ದಿನಗಳಲ್ಲಿ ಜೀವನದ ದೃಷ್ಟಿಕೋನ, ಜೀವನ ಶೈಲಿ ಎಲ್ಲವೂ ಬದಲಾಗಿದೆ ನಿಜ. ಆದರೆ ಎಲ್ಲಿ ಎನ್ನುವಂತಹ ಪ್ರಶ್ನೆ ಉದ್ಭವಿಸುತ್ತದೆ. ಅದು ಕೇವಲ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಬದಲಾಗಿದೆ. ಆದರೆ ಭಾರತ ಹಳ್ಳಿಗಳ ದೇಶ ಇನ್ನೂ ಅನೇಕ ಹಳ್ಳಿಗಳಲ್ಲಿ, ಹಿಂದುಳಿದ ಜನಾಂಗಗಳಲ್ಲಿ ಇಂಥ ಸ್ಥಿತಿಯೇ ಇರುವುದು ವಿಷಾದನೀಯ ಸಂಗತಿ.
– ರಚನ
ಶಿಡ್ಲಘಟ್ಟದ ಕೆರೆಗೆ ಬಂದ ಚಳಿಗಾಲದ ಅತಿಥಿ
ಶಿಡ್ಲಘಟ್ಟಕ್ಕೆ ಸೈಬೀರಿಯಾ, ಹಿಮಾಲಯಾ ಮತ್ತು ಯೂರೋಪ್ ದೇಶಗಳಿಂದ ಅತಿಥಿಗಳ ಆಗಮನವಾಗಿದೆ. ಅತಿಥಿಗಳು ಬಂದಿರುವುದು ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನ ಕೆರೆಗೆ. ಅತಿಥಿಗಳಾಗಿ ಬಂದಿರುವುದು ಪುಟ್ಟ ಆಕಾರದ ಹಕ್ಕಿಗಳು.
‘ಲಿಟಲ್ ರಿಂಗ್ಡ್ ಪ್ಲೋವರ್’ ಎಂಬ ಪುಟ್ಟ ಹಕ್ಕಿಯು ಚಳಿಗಾಲದ ಅತಿಥಿಗಳಾಗಿ ಅಮ್ಮನಕೆರೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ಜೋಡಿಗಳಲ್ಲಿ ಕಂಡು ಬಂದರೆ, ಮಿಕ್ಕವು ಒಂಟಿಯಾಗಿ ಆಹಾರಕ್ಕೆ ಜಾಲಾಡುತ್ತಿರುತ್ತಿವೆ.
ಕಳೆದ ಬಾರಿ ಮಳೆಯಿಲ್ಲದೆ ಕೆರೆ ಪೂರಾ ಒಣಗಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿ ಅಮ್ಮನಕೆರೆಯಲ್ಲಿ ನೀರು ತುಂಬ ಕಡಿಮೆಯಾಗಿದೆ. ಅಲ್ಲಲ್ಲಿ ನೀರಿನ ಹೊಂಡದಂತೆ ಕಂಡು ಬರುವ ಜಲಸೆಲೆಗಳಲ್ಲಿಯೇ ಈ ವಲಸೆ ಹಕ್ಕಿಗಳು ಆಹಾರಕ್ಕಾಗಿ ಹುಡುಕಾಟ ನಡೆಸಿವೆ.

‘ಲಿಟಲ್ ರಿಂಗ್ಡ್ ಪ್ಲೋವರ್’ ಹಕ್ಕಿಯನ್ನು ಕನ್ನಡದಲ್ಲಿ ಸಣ್ಣ ಕರಿಪಟ್ಟಿ ಗೊರವ ಎನ್ನುತ್ತಾರೆ. ಪುಟ್ಟ ಕೌಜು ಹಕ್ಕಿಯ ಗಾತ್ರವಿದ್ದು, ಬಾಲ, ರೆಕ್ಕೆ, ಬೆನ್ನು, ತಲೆಯ ಭಾಗವೆಲ್ಲಾ ಕಂದುಬಣ್ಣ, ಹಳದಿ ಕಾಲುಗಳು, ಪುಟ್ಟ ಕಪ್ಪು ಕೊಕ್ಕನ್ನು ಈ ಹಕ್ಕಿ ಹೊಂದಿದೆ. ಕುತ್ತಿಗೆಗೆ ಕಪ್ಪು ಬಣ್ಣದ ಪಟ್ಟಿಯನ್ನು ಕಟ್ಟಿಕೊಂಡಂತೆ ಕಾಣುವ ಗುರುತಿದೆ. ಗಡ್ಡಭಾಗ ಹಾಗೂ ಹೊಟ್ಟೆ ಅಚ್ಚ ಬಿಳುಪಿನಿಂದ ಕೂಡಿದೆ.
ಈ ಹಕ್ಕಿಗಳೊಂದಿಗೆ ಓಪನ್ ಬಿಲ್ಡ್ ಸ್ಟಾರ್ಕ್, ಬೆಳ್ಳಕ್ಕಿಗಳು, ಗ್ರೇಟರ್ ಸ್ಯಾಂಡ್ ಪ್ಲೋವರ್, ಲ್ಯಾಪ್ವಿಂಗ್ ಹಕ್ಕಿಗಳು ಕೂಡ ಕೆರೆಯ ಜೌಗಿನಲ್ಲಿ ಕಂಡು ಬಂದಿದ್ದು, ಆಹಾರದ ಅನ್ವೇಷಣೆಯಲ್ಲಿ ತೊಡಗಿವೆ.
‘ಈ ಲಿಟಲ್ ರಿಂಗ್ಡ್ ಪ್ಲೋವರ್ ಹಕ್ಕಿಗಳು ಸಂತಾನಾಭಿವೃದ್ಧಿಯನ್ನು ಮಾರ್ಚ್ನಿಂದ ಮೇ ತಿಂಗಳಿನಲ್ಲಿ ಮಾಡುತ್ತವೆ. ಅವುಗಳು ವಾಸಿಸುವ ಹಿಮಾಲಯ ಮತ್ತು ಯೂರೋಪ್ ದೇಶಗಳಲ್ಲಿ ಚಳಿ ಹೆಚ್ಚಾದಾಗ ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಿಗೆ ಬರುತ್ತವೆ. ವಾರದ ರಜಾದಿನಗಳಲ್ಲಿ ನಮ್ಮ ಹಂಡಿಗನಾಳ ಗ್ರಾಮಕ್ಕೆ ಬಂದಾಗ ಹತ್ತಿರದ ಅಮ್ಮನಕೆರೆಗೆ ಈ ಚಳಿಗಾಲದಲ್ಲಿ ಹೋಗಿ ಹಕ್ಕಿಗಳನ್ನು ವೀಕ್ಷಿಸುವುದು ರೂಢಿ. ನಮ್ಮಲ್ಲಿನ ಕೆರೆಗಳಿಗೂ ಅಷ್ಟು ದೂರದ ಹಕ್ಕಿಗಳು ಆಗಮಿಸುತ್ತವೆ ಎಂಬುದು ಸಂತಸದ ಸಂಗತಿ. ಕೆರೆಗಳಿಗೆ ಕಸ ಮುಂತಾದ ತ್ಯಾಜ್ಯ ಹಾಕದೇ, ಕಳೆ ಗಿಡಗಳನ್ನು ಬೆಳೆಯಲು ಬಿಡದೆ ಸ್ವಚ್ಛವಾಗಿಟ್ಟುಕೊಂಡಲ್ಲಿ ಇನ್ನಷ್ಟು ಹಕ್ಕಿಗಳನ್ನು ನಾವು ನೋಡಬಹುದು’ ಎಂದು ಡಾ.ಶಶಿಧರ್ ತಿಳಿಸಿದರು.
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೃಷಿ ಪಾಠ
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸುಮಾರು 50 ಮಂದಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಮಂಗಳವಾರ ತಾಲ್ಲೂಕಿನ ಹಿತ್ತಲಹಳ್ಳಿಗೆ ಭೇಟಿ ನೀಡಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಕೃಷಿ ಪದ್ಧತಿ ಮತ್ತು ಅದರ ಆರ್ಥಿಕತೆ ಒಂದು ವಿಷಯವಾಗಿದೆ. ಕಾಲೇಜಿನಲ್ಲಿ ಕಲಿಯುವ ಪಾಠದ ಜೊತೆ ರೈತರ ಅನುಭವ, ಪರಿಶ್ರಮ, ಆರ್ಥಿಕ ಪ್ರಗತಿ, ಸಮಸ್ಯೆಗಳು, ಅದರೊಂದಿಗಿನ ವಾಣಿಜ್ಯ ಸಂಬಂಧಗಳನ್ನು ಅರಿಯಲು ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಅವರ ತೋಟಕ್ಕೆ ಭೇಟಿ ನೀಡಿ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಗೂಡನ್ನು ಉತ್ಪಾದನೆ, ಹನಿನೀರಾವರಿ ಬಳಸಿ ಕಡಿಮೆ ನೀರಿನಲ್ಲಿ ನಡೆಸುವ ಕೃಷಿ ಪದ್ಧತಿ, ಮಳೆಯಾಶ್ರಿತ ಸಮಗ್ರ ಬೇಸಾಯ ಪದ್ಧತಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಸಾವಯವ ಪದ್ಧತಿ ಮತ್ತು ರಾಸಾಯನಿಕ ಪದ್ಧತಿ ಕೃಷಿಗೆ ಸಂಬಂಧಿಸಿದಂತೆ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿನಿಯರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಜೇನು ಸಾಕಾಣಿಕೆ, ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ ಕೃಷಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಬಳಸುವ ಕ್ರಮಗಳು, ನೀರಿನ ಸದುಪಯೋಗ, ಮನೆಯಲ್ಲಿ ಬಳಸಿರುವ ನೀರನ್ನು ತೋಟಕ್ಕೆ ಹರಿಸುವುದು, ಮಳೆಯಾಶ್ರಿತವಾಗಿ ವಿವಿಧ ಬೆಳೆ ಬೆಳೆಯಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರೈತ ಎಚ್.ಜಿ.ಗೋಪಾಲಗೌಡ ವಿವರಿಸಿದರು.
ರೇಷ್ಮೆ ವರ್ಷದಲ್ಲಿ ಎಷ್ಟು ಬೇಳೆ ಬೆಳೆಯುತ್ತೀರಿ, ಮಾರಾಟದ ಅನುಭವ, ರೈತಕೂಟಗಳ ಉಪಯೋಗ, ಅಧಿಕಾರಿಗಳಿಂದ ಸಿಗುವ ಸಹಾಯಧನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದರು.

‘ನಮ್ಮ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸೆಮಿನಾರ್ ನಡೆಸಿದ್ದೆವು. ಅದರಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ನಾರಾಯಣಗೌಡ ಹಾಗೂ ವಿವಿಧ ವಿಜ್ಞಾನಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸಂವಾದಿಸಿದ್ದರು. ವಿದ್ಯಾರ್ಥಿಗಳಿಗೆ ಈ ವಿವಿಧ ಕ್ಷೇತ್ರ ಪರಿಣಿತರ ಜ್ಞಾನದೊಂದಿಗೆ ಪ್ರಗತಿಪರ ರೈತರ ಜ್ಞಾನದ ಅಗತ್ಯವೂ ಇದೆ ಅನಿಸಿತ್ತು. ಅದಕ್ಕಾಗಿ ವಿದ್ಯಾರ್ಥಿಗಳನ್ನು ಹಿತ್ತಲಹಳ್ಳಿಗೆ ಕರೆತಂದೆವು. ರೈತ ಹುಟ್ಟುವಾಗಲೇ ಸಾಲದಿಂದ ಹುಟ್ಟಿ ಸಾಯುವಾಗಲೂ ಸಾಲವನ್ನು ಹೊತ್ತೇ ಸಾಯುತ್ತಾನೆ ಎಂದು ಹೇಳುತ್ತಾರೆ. ಅದನ್ನು ಸುಳ್ಳು ಮಾಡಿರುವ ರೈತರ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು. ದೇಶದ ಆರ್ಥಿಕತೆ ರೈತರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರ ಕಷ್ಟ, ಅದಕ್ಕೆ ಪರಿಹಾರ ಎಲ್ಲವೂ ವಿದ್ಯಾರ್ಥಿಗಳು ತಿಳಿಯಬೇಕು. ದೇಶದ ಬೆನ್ನೆಲುಬಾದ ರೈತರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅವಗಾಹನೆ ಬೆಳೆಸುವುದು ನಮ್ಮ ಉದ್ದೇಶ’ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಾಲಿನಿ ಪೂಜಾರಿ ತಿಳಿಸಿದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಸುನಂದಾ, ಗೋವಿಂದೇಗೌಡ, ಕೃಷಿ ಅಧಿಕಾರಿ ರಾಮ್ಕುಮಾರ್, ತೋಟಗಾರಿಕಾ ಅಧಿಕಾರಿ ರವಿಕುಮಾರ್, ಸತೀಶ್ಕುಮಾರ್, ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಹಾರ ಸೇವನಾ ಕ್ರಮ ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳು
ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನದಲ್ಲಿ ಬಹು ಪ್ರಮುಖವಾದ ಅಂಶಗಳು.
“ಆಹಾರ ಸಂಭವಂ ವಸ್ತು ರೋಗಶ್ಚಾಹಾರ ಸಂಭವ:” ಮನುಷ್ಯನ ಶರೀರವು ಆಹಾರದಿಂದ ನಿರ್ಮಿತವಾಗಿದೆ. ಹಾಗೆಯೇ ರೋಗಗಳೂ ಕೂಡ ಆಹಾರದಿಂದಲೇ ಉತ್ಪನ್ನವಾಗುತ್ತವೆ ಎನ್ನುವುದು ಆಯುರ್ವೇದ ಶಾಸ್ತ್ರ ಗ್ರಂಥಗಳ ಅಭಿಪ್ರಾಯ.
ಆಹಾರ ಸ್ವೀಕರಣೆ ಎಂಬುದು ಕೇವಲ ಶರೀರ ಪೋಷಣೆಯ ಅಂಶ ಮಾತ್ರವಾಗಿರುವುದಿಲ್ಲ. “ಆಹಾರ ಶುದ್ಧೌ ಸತ್ವ ಶುದ್ಧಿ:” ಎಂಬ ಉಪನಿಷತ್ ವಾಕ್ಯದಂತೆ ಆಹಾರದಿಂದ ಶುದ್ಧ ಆಲೋಚನೆ ಶುದ್ಧ ಯೋಚನೆಯಿಂದ ಶುದ್ಧ ಕ್ರಿಯೆ, ಶುದ್ಧ ಕ್ರಿಯೆಯಿಂದ ಶುದ್ಧ ಗತಿ ಮತ್ತು ಶುದ್ಧ ಫಲಗಳು ಸಿಗುತ್ತವೆ. “ಅನ್ನಮಿತಿ ಬ್ರಹ್ಮ” ಅಂದರೆ ವೇದಗಳಲ್ಲಿ ಅನ್ನವನ್ನು ಬ್ರಹ್ಮನಿಗೆ ಹೋಲಿಕೆ ಮಾಡಲಾಗಿದೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎನ್ನುವುದು ಶಂಕರಾಚಾರ್ಯರ ಅಂಬೋಣ, ಅಂದರೆ ವ್ಯಕ್ತಿ ಆಹಾರ ಸಂಗ್ರಹಣೆಗಾಗಿ ಏನೆಲ್ಲ ವೇಷಗಳನ್ನು ಧರಿಸುತ್ತಾನೆ.
“ಹಿತಭುಕ್, ಮಿತಭುಕ್, ಋತಭುಕ್” ಅಂದರೆ ಹಿತವಾಗಿ, ಮಿತವಾಗಿ ಹಾಗೂ ಋತುವಿಗನುಸಾರವಾಗಿ ಆಹಾರ ಸೇವನೆ ಮಾಡಬೇಕು ಎನ್ನುವುದು ಆಯುರ್ವೇದಾಚಾರ್ಯರ ಮತ.
ನಾವು ಸೇವಿಸುವ ಆಹಾರ ಉದರದಲ್ಲಿ ಸ್ರಾವವಾಗುವ ಕಿಣ್ವಗಳ ಸಹಾಯದಿಂದ ಪಚನಗೊಂಡು (Digestion) ದೇಹದ ಧಾತುಗಳಾಗಿ ಮಾರ್ಪಾಟುಗೊಳ್ಳಲು ಆಹಾರದ ಸೇವನೆ ಹೇಗೆ ಮಾಡಬೇಕು? ಎನ್ನುವುದರ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಯಾವ ರೀತಿ ಆಹಾರ ಸೇವನೆ ಮಾಡಬೇಕು?
1. ಶುಚಿಯಾದ ಸ್ಥಳದಲ್ಲಿ ಕುಳಿತು ಆಹಾರ ಸೇವನೆ ಮಾಡಬೇಕು.
2. ಸಮತಟ್ಟಾದ ಪ್ರದೇಶದಲ್ಲಿ ಕುಟುಂಬ ವರ್ಗದವರೊಂದಿಗೆ ಕುಳಿತು ಆಹಾರ ಸೇವನೆ ಉತ್ತಮ.
3. ಬೇರೆ ಬೇರೆ ರೀತಿಯ ಸಂಸ್ಕಾರಗಳನ್ನೊಳಗೊಂಡ (ಉದಾ: ಬೇಯಿಸುವುದು, ಎಣ್ಣೆಯಲ್ಲಿ ಹುರಿಯುವುದು, ಕರಿಯುವುದು ಇತ್ಯಾದಿ) ದೇಹಕ್ಕೆ ಹೊಂದುವಂಥಹ ಆಹಾರ ಸೇವನೆ ಮಾಡಬೇಕು.
4. ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ತಂಪೂ ಅಲ್ಲದ ಆಗ ತಾನೇ ತಯಾರಿಸಿದ ಆಹಾರ ಸೇವನೆ ಉತ್ತಮ.
5. ಹೆಚ್ಚು ವೇಗವಾಗಿಯೂ ಅಲ್ಲದೆ, ಹೆಚ್ಚು ಸಾವಕಾಶವಾಗಿಯೂ ಅಲ್ಲದೆ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
6. ಮಾಡಿದ ಆಹಾರ ಸೇವನೆ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತಿರಬೇಕು.
7. ನಾವು ಸೇವಿಸುವ ಆಹಾರ ಆರೂ ರಸಗಳನ್ನು (ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು) ಒಳಗೊಂಡಿರಬೇಕು.
8. ಮೊದಲು ಸಿಹಿ ರಸ ಪ್ರಧಾನವಾಗಿರುವ ಆಹಾರದ ಸೇವನೆ ಮಾಡಿ ನಂತರ ಉಳಿದ ರಸಗಳ ಸೇವನೆ ಉತ್ತಮ.
9. ಆಹಾರ ಶುಚಿ, ರುಚಿಯಾಗಿರಬೇಕು.
10. ಆಹಾರ ಸೇವನೆಯ ಮೊದಲು ಹಣ್ಣುಗಳ ಸೇವನೆ ಉತ್ತಮ.
11. ಮೊದಲು ದ್ರವ ಪ್ರಧಾನ ಆಹಾರದ ಸೇವನೆ ನಂತರ ಘನ ಪದಾರ್ಥಗಳ ಸೇವನೆ ಮಾಡುವುದು ಉತ್ತಮ.
12. ಗೆಡ್ಡೆ, ಗೆಣಸುಗಳು ಇತ್ಯಾದಿ ಕಂದ ಮೂಲಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಪ್ರಾರಂಭದಲ್ಲಿಯೇ ಸೇವಿಸುವುದು ಉತ್ತಮ.
13. “ಕಾಲ ಭೋಜನಂ ಆರೋಗ್ಯಕರಾಣಾಂ” ಅಂದರೆ ಸರಿಯಾದ ಕಾಲದಲ್ಲಿ, ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನ: ಆಹಾರ ಸೇವನೆ ಒಳಿತು.
14. ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವಂತಿರಬೇಕು, ಜೀರ್ಣಕ್ಕೆ ಭಾರವಾದಂಥಹ ಆಹಾರದ ಸೇವನೆ ಮಾಡುವಾಗ ಅರ್ಧ ಹೊಟ್ಟೆತುಂಬುವಷ್ಟು ಮಾತ್ರ ಆಹಾರ ಸೇವನೆ ಮಾಡಬೇಕು. ಒಟ್ಟಿನಲ್ಲಿ ಜೀರ್ಣಶಕ್ತಿಗೆ ಅನುಕೂಲಕರವಾದ ಪ್ರಮಾಣದಲ್ಲಿ ಆಹಾರ ಸೇವನೆ ಹಿತಕರ.
15. ನಿತ್ಯವೂ ಸ್ವಲ್ಪ ಜಿಡ್ಡಿನಾಂಶದಿಂದ ಕೂಡಿದ (ತುಪ್ಪ, ಬೆಣ್ಣೆ, ಎಣ್ಣೆಯಿಂದ) ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಉತ್ತಮ. ದಿನಕ್ಕೆ ಒಂದು ಚಮಚದಷ್ಟು ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಯಾದ ಆಹಾರದೊಂದಿಗೆ ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಇದು ಕೊಲೆಸ್ಟರಾಲನ್ನು ಹೆಚ್ಚಿಸುವುದಿಲ್ಲ.
16. ನೀರಿನಂಶ ಪ್ರಧಾನವಾಗಿರುವ ಆಹಾರ ಪದಾರ್ಥಗಳ ಸೇವನೆ ಅಗತ್ಯ.
17. ಸ್ಥೂಲ ಶರೀರದವರು ಊಟದ ಮೊದಲು ನೀರನ್ನು ಕುಡಿಯಬೇಕು. ಕೃಶ ಶರೀರದವರು ಊಟದ ನಂತರ ನೀರನ್ನು ಕುಡಿಯಬೇಕು. ಹಾಗೂ ಸಮ ಶರೀರದವರು ಊಟದ ಮಧ್ಯ ನೀರಿನ ಸೇವನೆ ಮಾಡುವುದು ಅನುಕೂಲಕರ.
18. ಊಟದ ಜೋತೆಗೆ ಬಿಸಿ ನೀರಿನ ಸೇವನೆ ಹಿತಕರ. ಇದು ಆಹಾರವು ಸರಿಯಾದ ರೀತಿಯಲ್ಲಿ ಪಚನವಾಗಲು ಸಹಾಯ ಮಾಡುತ್ತದೆ.
19. ಸ್ನಾನ ಮಾಡಿ ಅಥವಾ ಕೈ ಕಾಲುಗಳನ್ನು ತೊಳೆದ ನಂತರವೇ ಆಹಾರದ ಸೇವನೆ ಉತ್ತಮ.
ಯಾವ ರೀತಿ ಆಹಾರ ಸೇವನೆ ಮಾಡಬಾರದು?
1. ಅತಿ ಬಿಸಿಯಾದ ಹಾಗೂ ಅತಿ ತಂಪಾದ ಆಹಾರ ಸೇವನೆ ಅರೋಗ್ಯಕ್ಕೆ ಹಾನಿಕರ.
2. ಅತಿ ವೇಗವಾಗಿ ಹಾಗೂ ಅತಿ ನಿಧಾನವಾಗಿಯೂ ಆಹಾರ ಸೇವನೆ ನಿಷಿದ್ಧ.
3. ಹಳಸಿದ, ದೂಷಿತಗೊಂಡ, ಕಲ್ಲು ಮಣ್ಣು, ಕೂದಲುಗಳಿಂದ ಮಿಶ್ರಣಗೊಂಡ ಆಹಾರ ಸೇವನೆ ನಿಷಿದ್ಧ.
4. ಅತಿಯಾಗಿ ಬೆಂದ, ಅತಿಯಾಗಿ ಸೀದು ಹೋದ ಹಾಗು ಅತಿಯಾಗಿ ಬೇಯದ ಆಹಾರ ಸೇವನೆ ಅಹಿತಕರ.
5. ಸೇವಿಸಿದ ಆಹಾರ ಹೊಟ್ಟೆ ಉಬ್ಬರಿಸುವಂತಿದ್ದು, ಅತಿಯಾಗಿ ಹುಳಿ ಅಂಶವನ್ನು ಹೆಚ್ಚಿಸುವಂತಿದ್ದರೂ ಕೂಡ ಅಂತಹ ಆಹಾರ ಪದಾರ್ಥಗಳನ್ನು ವರ್ಜಿಸುವುದು ಉತ್ತಮ.
6. ದು:ಖ, ಭಯ, ಸಿಟ್ಟು ಇರುವಾಗ ಮಾಡಿದ ಆಹಾರ ಸೇವನೆಯೂ ಕೂಡ ಸರಿಯಾಗಿ ಜೀರ್ಣವಾಗಲಾರದು.
7. ಆಹಾರ ಸೇವನೆಯ ನಂತರ ಸ್ವಲ್ಪ ಸಮಯ ಸುಖವಾದ ಆಸನದಲ್ಲಿ ಕುಳಿತುಕೊಳ್ಳಬೇಕು. ನಂತರ ನೂರು ಹೆಜ್ಜೆಗಳಷ್ಟು ನಡೆದಾಡಿ ಎಡ ಮಗ್ಗುಲಿನಲ್ಲಿ ಮಲಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದು ಅಗತ್ಯ.
ಡಿ.ವಿ.ಜಿ. ಯವರು ತಮ್ಮ “ಮಂಕುತಿಮ್ಮನ ಕಗ್ಗ”ದಲ್ಲಿ ಹೀಗೆ ವಿವರಿಸಿದ್ದಾರೆ.
ಆರೋಗ್ಯ ಭಾಗ್ಯವನು ಮನಕೆ ತನುಗೆಂತಂತೆ
ಹಾರಯಿಸುವೊಡೆ ಹಲವು ಸರಳ ನೀತಿಗಳ
ಧಾರಯಿಸು ನೆನಸಿನಲಿ ನಡೆಯಲ್ಲಿ ನುಡಿಯಲ್ಲಿ
ಪಾರಾಗು ಸುಳಿಯಿಂದ ಮಂಕುತಿಮ್ಮ||
ಮನಸ್ಸಿನ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಸರಳ ನೀತಿ ಸೂತ್ರಗಳನ್ನು ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಅವುಗಳನ್ನು ನಮ್ಮ ನಡೆ ನುಡಿಗಳಲ್ಲಿ ಹಾಗೂ ಜೀವನ ಕ್ರಮಗಳಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗವೆಂಬ ಸುಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ನಿತ್ಯ ಬಳಕೆಯಲ್ಲಿ ಉಪಯೋಗಿಸಬಹುದಾದ ಆಹಾರ ಪದಾರ್ಥಗಳು
ಕೆಂಪು ಅಕ್ಕಿ, ಷಷ್ಟಿಕ ಶಾಲಿ (60 ದಿನಗಳಲ್ಲಿ ಬೆಳೆದ ಅಕ್ಕಿ), ಗೋಧಿ, ಬಾರ್ಲಿ, ಹರಿವೆಸೊಪ್ಪು, ಎಳೆ ಮೂಲಂಗಿ, ಅಣಲೆಕಾಯಿ, ನೆಲ್ಲಿಕಾಯಿ, ದ್ರಾಕ್ಷಿ, ಪಡುವಲಕಾಯಿ, ಹೆಸರು ಬೇಳೆ, ಸಕ್ಕರೆ, ತುಪ್ಪ, ಹಾಲು, ಆಕಾಶ ಜಲ, ಜೇನುತುಪ್ಪ, ಸೈಂಧವ ಉಪ್ಪು, ದಾಳಿಂಬೆ ಹಣ್ಣು.
ನಿತ್ಯ ಉಪಯೋಗಿ ಅಲ್ಲದ ಆಹಾರ ವಸ್ತುಗಳು
ಉದ್ದು, ಮೊಸರು, ಬೇಕರಿ ತಿನಿಸುಗಳು, ಮೊಳಕೆ ಬರಿಸಿದ ಕಾಳುಗಳು, ಒಣಗಿದ ತರಕಾರಿಗಳು, ತೆಳುಬೆಲ್ಲ, ಒಡೆದ ಹಾಲು ಇತ್ಯಾದಿ.
ಡಾ. ನಾಗಶ್ರೀ ಕೆ.ಎಸ್.
ಸ್ವಚ್ಛ ಭಾರತವೆಂಬ ಸರ್ಕಾರೀ ಪ್ರಹಸನ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 2ರಂದು ಸ್ವಚ್ಛ ಭಾರತವೆಂಬ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ನಮ್ಮ ಪರಿಸರವನ್ನು ತುರ್ತಾಗಿ ಸ್ವಚ್ಛಗೊಳಿಸುವ ಅಗತ್ಯವಿರುವುದೇನೋ ನಿಜ. ಜೊತೆಗೆ ಈ ಅಭಿಯಾನಕ್ಕೆ ಸಾರ್ವಜನಕರಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ನೋಡಿದರೆ ನಮ್ಮ ಜನರಲ್ಲಿ ಸ್ವಚ್ಛತೆಯ ಬಗೆಗೆ ಸಾಕಷ್ಟು ಪ್ರಜ್ಞೆಯೂ ಮೂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂತಹ ಸಂದರ್ಭದಲ್ಲಿ ಈ ಅಭಿಯಾನದ ಬಗೆಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ಸಿನಿಕತನವಾದೀತು. ಹಾಗಿದ್ದರೂ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಎಲ್ಲರೂ ಇದರ ಬಗೆಗೆ ಮಾತನಾಡುವ ರೀತಿಯನ್ನು ನೋಡಿದರೆ ಇದೂ ಒಂದು ತಾತ್ಕಾಲಿಕ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಇರಬಹುದೇ ಎನ್ನುವು ಅನುಮಾನಗಳು ಮೂಡುತ್ತದೆ.
ಮೊದಲನೆಯದಾಗಿ ಸ್ವಚ್ಛತೆ ಎಂದರೆ ಏನು ಎನ್ನುವುದರ ಬಗೆಗೆ ಸರ್ಕಾರಕ್ಕಾಗಲೀ ಮತ್ತು ಸಾರ್ವಜನಿಕರಿಗಾಗಲೀ ಸ್ಪಷ್ಟತೆ ಇದೆಯೇ ಎನ್ನುವ ಅಂಶದಿಂದಲೇ ನನ್ನ ಅನುಮಾನಗಳು ಶುರುವಾಗುತ್ತವೆ. ನಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಕಸಮುಕ್ತವನ್ನಾಗಿ ಮಾಡುವುದಷ್ಟೇ ಸ್ವಚ್ಛತೆ ಎಂದು ನಾವೆಲ್ಲಾ ಅಂದುಕೊಂಡಂತೆ ಕಾಣುತ್ತದೆ. ಹಾಗಿದ್ದರೆ ಹೀಗೆ ಒಟ್ಟುಮಾಡಿದ ಕಸವನ್ನು ಎಲ್ಲಿ ವಿಲೇವಾರಿ ಮಾಡುವುದು? ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಮಹಾನಗರಗಳಲ್ಲಷ್ಟೇ ಅಲ್ಲ, ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಸ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿದೆ. ನಗರಗಳ ತುಂಬೆಲ್ಲಾ ಇನ್ನೂ ಕಸ ತುಂಬಿರುವಾಗಲೇ ಸಂಗ್ರಹಿಸಿರುವುದರ ವಿಲೇವಾರಿ ಇಷ್ಟು ದೊಡ್ಡ ಸಮಸ್ಯೆಯಾಗಿರುವಾಗ ಇನ್ನು ಇಲ್ಲಿನ ಪೂರ್ಣ ಕಸವನ್ನು ಒಟ್ಟು ಮಾಡಿದರೆ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ನೆನಪಿಸಿಕೊಂಡರೇ ಭಯವಾಗುತ್ತದೆ. ನಗರವಾಸಿಗಳೆಲ್ಲಾ ತಮ್ಮ ಉಚ್ಚಿಷ್ಟವನ್ನು ಸುತ್ತಮುತ್ತಲಿನ ಹಳ್ಳಿಯ ಜನರ ಜಮೀನಿನಲ್ಲಿ ಸುರಿಯುತ್ತಾ ಹೋದರೆ ಅವರೇನು ಹಂದಿಗಳಂತೆ ಬದುಕುವುದು ಸಾಧ್ಯವೇ? ಹೀಗೆ ಹಳ್ಳಿಗಳ ಪರಿಸರವನ್ನು ಕಲುಷಿತಗೊಳಿಸುವುದನ್ನಾದರೂ ಎಲ್ಲಿಯವರೆಗೆ ಮಾಡಲು ಸಾಧ್ಯ? ಈಗಾಗಲೇ ಈ ವಿಷಯದಲ್ಲಿ ಎಲ್ಲಾ ಕಡೆ ಹಳ್ಳಿಗರಿಂದ ತೀವ್ರ ಪ್ರತಿರೋಧಗಳು ಬರುತ್ತಿರುವುದನ್ನು ನೋಡಿದ ಮೇಲೆ ನಾವು ಕಲಿತಿರುವುದಾದರೂ ಏನು? ದಬ್ಬಾಳಿಕೆ, ಆಮಿಷಗಳ ಮೂಲಕ ಹಳ್ಳಿಗರ ಮನವೊಲಿಸಿ, ಆಗಾಗ ಜಾಗಗಳನ್ನು ಬದಲಾಯಿಸುತ್ತಾ ನಗರಗಳ ಕಸವನ್ನು ಅಲ್ಲಿ ಗುಡ್ಡೆಹಾಕುವುದನ್ನು ಬಿಟ್ಟರೆ ಇನ್ನೇನು ಮಾಡಲಾಗಿದೆ?
ನಮ್ಮ ಮೂಲಭೂತ ತೊಂದರೆ ಇರುವುದು ಸ್ವಾತಂತ್ರಾ ನಂತರ ನಾವು ಪಾಶ್ಚಿಮಾತ್ಯ ದೇಶಗಳ ಮಾದರಿಯನ್ನು ಕಣ್ಣುಮುಚ್ಚಿ ಅನುಸರಿಸುತ್ತಿರುವುದರಲ್ಲಿ. ಆ ದೇಶಗಳ ಬಳಿ ಇರುವ ಸ್ಥಳಾವಕಾಶ, ಸಂಪನ್ಮೂಲಗÀಳು, ಅವರ ಜೀವನ ಶೈಲಿ ಮತ್ತು ಜನಸಂಖ್ಯೆಗೆ ಅವರ ಮಾದರಿ ಸೂಕ್ತವಿರಬಹುದು. ನಮ್ಮ ಪರಿಸ್ಥಿತಿಗೆ ಹೊಂದಿಕೆಯಾಗಬಹುದಾದ್ದನ್ನು ನಾವೇಕೆ ಹುಡುಕಿಕೊಂಡಿಲ್ಲ? ಅಂತಹ ದೇಶಗಳೂ ಕೂಡ ವಿಷಯುಕ್ತ ಕಸವನ್ನು ಸಮುದ್ರಗಳಲ್ಲಿ ಸುರಿದು ವಿಶ್ವಪರಿಸರಕ್ಕೆ ಭಾರೀ ಅಪಾಯವನ್ನೊಡ್ಡುವುದಕ್ಕೆ ಮುನ್ನುಡಿ ಹಾಡುತ್ತಿವೆ. ಅಮೇರಿಕಾ ಮತ್ತು ಜಪಾನ್ಗಳ ಪ್ಲಾಸ್ಟಿಕ್ ಕಸದಿಂದ ಶಾಂತಸಾಗರದಲ್ಲಿ “ಗ್ರೇಟ್ ಪ್ಯಾಸಿಪಿಕ್ ಗಾರ್ಬೇಜ್ ಪ್ಯಾಚ್” ಎಂದು ಕುಪ್ರಸಿದ್ಧವಾಗಿರುವ ಸ್ಥಳವೊಂದು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದಿದ್ದರೆ ಎಲ್ಲಾ ದೇಶಗಳಿಗೂ ಈಗ ಉಳಿದಿರುವುದು ಎರಡೇ ಮಾರ್ಗಗಳು. ಒಂದು, ಪ್ರಕೃತಿಯಲ್ಲಿ ಸಹಜವಾಗಿ ಹಾಗೂ ತ್ವರಿತವಾಗಿ ಲೀನವಾಗದಂತಹ (ಪ್ರಮುಖವಾಗಿ ಪ್ಲಾಸ್ಟಿಕ್) ಮತ್ತು ಪ್ರಕೃತಿಗೆ ಅಪಾಯವನ್ನೊಡ್ಡುವ (ಪ್ರಮುಖವಾಗಿ ರಾಸಯನಿಕ) ಕಸದ ಉತ್ಪಾದನೆಯನ್ನು ತಕ್ಷಣದಿಂದ ಗಣನೀಯವಾಗಿ ಕಡಿಮೆ ಮಾಡುವುದು. ಎರಡು, ಪ್ರಕೃತಿಯಲ್ಲಿ ಲೀನವಾಗುವ ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡದೆ ಅದನ್ನು ಪ್ರಾದೇಶಿಕ ಮಟ್ಟದಲ್ಲಿ ಮರುಬಳಕೆ ಮಾಡುವುದು. ನಮ್ಮ ಸರ್ಕಾರೀ ಕಾರ್ಯಕ್ರಮದಲ್ಲಿ ಇಂತಹ ದೂರಗಾಮೀ ಚಿಂತನೆಗಳು ಎಲ್ಲಿದೆ?
ಎರಡನೆಯದಾಗಿ, ಸರ್ಕಾರೀ ಕಾರ್ಯಕ್ರಮ ಅಂದರೆ ನಮ್ಮ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಲೂಟಿಹೊಡೆಯುವ ಯೋಜನೆ ಎನ್ನುವುದು ಭಾರತದಲ್ಲಿ ಒಪ್ಪಿಕೊಂಡ ಮಾದರಿ. ಎಲ್ಲಿಯವರೆಗೆ ಸ್ವಚ್ಛತೆ ಆಯಾಯ ಪ್ರದೇಶದ ಜನರ ಜವಾಬ್ದಾರಿಯಾಗಿರುವುದಿಲ್ಲವೋ ಅಲ್ಲಿಯವರೆಗೆ “ಸ್ವಚ್ಛ ಭಾರತ” ಎನ್ನುವುದೂ ಕೂಡ “ಗರೀಬೀ ಹಟಾವೋ”ನಂತೆ ಮತ್ತೊಂದು ಗಿಮಿಕ್ ಆಗಿ ಉಳಿಯುವುದರಲ್ಲಿ ಸಂದೇಹವೇ ಇಲ್ಲ. ಸರ್ಕಾರ ಶೌಚಾಲಯಗಳಿಗಾಗಿ ಮೀಸಲಿಟ್ಟರುವ ಎರಡು ಲಕ್ಷ ಕೋಟಿಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ನಮ್ಮ ಅಸ್ವಚ್ಛ ಕೈಗಳ ಸರ್ಕಾರೀ ವ್ಯವಸ್ಥೆ, ತನ್ನದೇ ಆದ ರೀತಿಯಲ್ಲಿ ಸ್ವಚ್ಛ ಮಾಡಿರುತ್ತದೆ! ನಮ್ಮ ಜನರೂ ಕೂಡ ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೆ ಹೀಗೆ ಸರ್ಕಾರದಿಂದ ಬರುವ ಹಣದಲ್ಲಿ ತಮ್ಮ ಪಾಲನ್ನು ಗಿಟ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
ಮೂರನೆಯದು, ಶೌಚಾಲಯ ನಿರ್ಮಾಣವನ್ನು ಸರ್ಕಾರೀ ಕಾರ್ಯಕ್ರಮವನ್ನಾಗಿಸುವುದು ಅಪ್ರಬುದ್ಧವಾಗಿ ಯೋಚಿಸುವ ಭಾರತದ ರಾಜಕಾರಣಿಗಳಿಗೆ ಮಾತ್ರ ಸಾಧ್ಯ. ಶೌಚಾಲಯಗಳಿಲ್ಲದಿದ್ದಾಗ ಸ್ತ್ರೀಯರಿಗೆ ಬಹಳ ಅನಾನುಕೂಲವಾಗುವುದು ನಿಜ. ಹಾಗಂತ ಸರ್ಕಾರ ಏಕೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು? ನಮ್ಮ ಜನತೆಗೆ ಇದರ ಜವಾಬ್ದಾರಿ ಇರಬೇಕಲ್ಲವೇ? ಶೌಚಾಲಯ ಇಲ್ಲದ ಮನೆಗಳನ್ನು ಒಂದು ವರ್ಷದ ನಂತರ ಕೆಡವಲಾಗುತ್ತದೆ ಮತ್ತು ಇನ್ನು ಮುಂದೆ ಅಂತಹ ಮನೆಗಳನ್ನು ಕಟ್ಟುವಂತಿಲ್ಲ ಎಂದು ಕಾನೂನನ್ನು ಏಕೆ ರೂಪಿಸಬಾರದು? ಇದರಿಂದ ಆಗಬಹುದಾದ ಒಂದೇ ತೊಂದರೆ ಎಂದರೆ ನಮ್ಮ ರಾಜಕೀಯ ಪಕ್ಷಗಳ ಓಟ್ಬ್ಯಾಂಕ್ಗೆ ಭಾರೀ ಕನ್ನ ಬೀಳುವುದು ಮಾತ್ರ.
ಇಷ್ಟೇ ಅಲ್ಲ, ಇರುವ ಶೌಚಾಲಯಗಳನ್ನು ಶುದ್ಧೀಕರಿಸಲು ನಾವು ಅನುಸರಿಸುತ್ತಿರುವ ಮಾರ್ಗವಾದರೂ ಎಂತಹದು? ದಲಿತರ ತಲೆಗಳ ಮೇಲೆ ಮಲವನ್ನು ಹೊರಿಸಿ ಊರ ಹೊರಗೆ ಸಾಗಿಸುವುದು, ಒಳಚರಂಡಿಗಳ ಮೂಲಕ ಊರಿನ ಪಕ್ಕದಲ್ಲಿ ಹರಿಯುತ್ತಿರುವ ನದಿಗಳಿಗೆ ಅದನ್ನು ಸೇರಿಸುವುದು ಮುಂತಾದವು ಅಲ್ಲವೇ? ಇದು ಯಾವ ನಾಗರಿಕ ಮಾದರಿ ಅಂದ ಸರ್ಕಾರಿ ಯೋಚಿಸಿದಂತಿಲ್ಲ.
ನಮ್ಮ ದೇಶದ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುವುದೇ ದುರ್ಭರವಾಗಿದೆ. ಇನ್ನು ಶೌಚಾಲಯಗಳ ಉಪಯೋಗಕ್ಕೆ ಸರ್ಕಾರ ನೀರನ್ನು ಎಲ್ಲಿಂದ ಸರಬರಾಜು ಮಾಡುತ್ತದೆ? ಬಯಲು ಪ್ರದೇಶಗಳಲ್ಲಿ ಮಲ ವಿಸರ್ಜಿಸುವ ಹಳ್ಳಿಗರು ಅಲ್ಲೇ ಇರುವ ಎಲೆಗಳಿಂದ ಒರೆಸಿಕೊಂಡು ಬರುವುದು 21 ಶತಮಾನದ ಭಾರತದಲ್ಲಿ ಅಪರೂಪವಲ್ಲ. ಇದು ಟಿಶ್ಯೂ ಪೇಪರ್ನ ಪ್ರಾದೇಶಿಕ ಮಾದರಿ ಅಂದುಕೊಳ್ಳಬಹುದು ಬಿಡಿ! ಇಂತಹ ಪರಿಸ್ಥಿತಿಯಲ್ಲಿ ನನ್ನ ಕುತೂಹಲವೆಂದರೆ ಕಟ್ಟಿಸಿರುವ ಶೌಚಾಲಯಗಳ ಸ್ವಚ್ಛತೆಯ ಜವಾಬ್ದಾರಿಯನ್ನೂ ಸರ್ಕಾರವೇ ಹೊತ್ತುಕೊಳ್ಳುವುದೋ ಹೇಗೆ ಎನ್ನುವುದು. ಶೌಚಾಲಯಗಳು ಗಬ್ಬೆದ್ದು ಹೋದಾಗ ನಿಧಾನವಾಗಿ ಜನ ಮತ್ತೆ “ಬಯಲು ಕಡೆಗೆ” ಅಥವಾ “ಬೆಟ್ಟದ ಕಡೆಗೆ” ಹೋಗುವ ತಮ್ಮ ಅಭ್ಯಾಸವನ್ನು ಮುಂದುವರೆಸುತ್ತಾರೆ. ಸ್ವಚ್ಛವಿರದ ಶೌಚಾಲಯಗಳಿಗಿಂತ ಬಯಲು ಪ್ರದೇಶ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂದು ನಮ್ಮ ಜನ ಶತಶತಮಾನಗಳ ಅನುಭವದಿಂದ ಕಂಡುಕೊಂಡಿದ್ದಾರೆ.
ಕಸವಿಲೇವಾರಿಗಿಂತ ನಮಗೆ ಕೂಡಲೇ ಬೇಕಾಗಿರುವುದು ನಮ್ಮ ನೀರು ಗಾಳಿಗಳ ಶುದ್ಧತೆ. ಯಾರ ಕಣ್ಣಿಗೂ ಬೀಳದಂತೆ ಇವುಗಳಿಗೆ ಅಪಾಯಕಾರೀ ರೀತಿಯಲ್ಲಿ ನಾವು ವಿಷ ತುಂಬುತ್ತಿದ್ದೇವೆ. ಕಸದಂತೆ ಇದು ನಮ್ಮ ಕಣ್ಣೆದುರಿಗೆ ರಾಚುವುದಿಲ್ಲ. ಹಾಗಾಗಿ ಜನಸಾಮಾನ್ಯರಿಗೆ ಇದರ ಅಪಾಯಗಳ ಅರಿವೂ ಕೂಡ ಇಲ್ಲ. ದುರಂತವೆಂದರೆ ಜನರ ಓಟುಗಳು ನೀರು ಗಾಳಿಯ ಸ್ವಚ್ಛತೆಯ ಮೇಲೆ ಆಧಾರಿತವಾಗಿಲ್ಲ ಎಂದ ಮೇಲೆ ರಾಜಕಾರಿಣಿಗಳೇಕೆ ಅದರ ಬಗೆಗೆ ಏಕೆ ಯೋಚಿಸುತ್ತಾರೆ?
ಎಲ್ಲಾ ರೀತಿಯ ಸ್ವಚ್ಛತೆಗಿಂತ ನಮಗೆ ಬಹಳ ತುರ್ತಾಗಿ ಅಗತ್ಯವಿರುವುದು ಬಸವಣ್ಣ ಹೇಳುವ ಅಂತರಂಗ ಶುದ್ಧಿ ಅಥವಾ ಗಾಂಧೀಜಿ ಹೇಳುವ ಆತ್ಮಶುದ್ಧಿ. ಕಾಂಗ್ರೆಸ್ ಅಧಿವೇಶನದಲ್ಲಿ ಕಕ್ಕಸ್ಸುಗಳನ್ನು ಶುಚಿಯಾಗಿಡುವ ಕಾಯಕದ ಮೂಲಕ ತಮ್ಮ ಆತ್ಮಶುದ್ಧಿಯ ಪ್ರಕ್ರಿಯೆಯನ್ನು ಗಾಂಧೀಜಿ ಸಾಂಕೇತಿಕವಾಗಿ ಆರಂಭಿಸಿದ್ದರು. ನಮ್ಮ ರಾಜಕಾರಣಿಗಳಿಂದ ಇಂತಹ ಆತ್ಮಶುದ್ಧಿಯನ್ನು ನಿರೀಕ್ಷಿಸುವ ಮೊದಲು ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಸ್ವಚ್ಛ ಭಾರತದ ಅಭಿಯಾನವನ್ನು ನಮ್ಮ ಅಂತರಂಗಳಿಂದ ಪ್ರಾರಂಭಿಸದಿದ್ದರೆ ಉಳಿಯುವುದೆಲ್ಲವೂ ಸರ್ಕಾರೀ ಪ್ರಹಸನ ಮಾತ್ರ.
ನಡಹಳ್ಳಿ ವಸಂತ್

