Home Blog Page 1066

ಶಿಡ್ಲಘಟ್ಟ ತಾಲ್ಲೂಕು ಬೂದಾಳ ಗ್ರಾಮಕ್ಕೆ ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಭೇಟಿ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಸೊಪ್ಪಿಗೆ ಈಚೆಗೆ ಧಾಳಿಯಿಡುತ್ತಿರುವ ಹೊಸ ಬಕಾಸುರ ಕೀಟಗಳ ಬಗ್ಗೆ ಪರಿಶೀಲಿಸಲು ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಬೂದಾಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು. ತಾಲ್ಲೂಕಿನ ಬೂದಾಳದ ಕೆರೆಯಂಚಿನ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ಕಳೆದ ಮೂರು ರಾತ್ರಿಗಳಿಂದ ಹೊಸ ರೀತಿಯ ಜೀರುಂಡೆಗಳು ಧಾಳಿಯಿಡುತ್ತಿದ್ದು, ಜೇನು ನೊಣಗಳಂತೆ ನೂರಾರು ಜೀರುಂಡೆಗಳು ರಾತ್ರಿಯಾಗುತ್ತಿದ್ದಂತೆಯೇ ಆಗಮಿಸಿ ಹಿಪ್ಪುನೇರಳೆ ಸೊಪ್ಪಿನ ಸುಳಿಗಳಿಗೆ ಜೋತು ಬೀಳುತ್ತಿವೆ. ಅವುಗಳು ಸೊಪ್ಪನ್ನು ತಿನ್ನುವ ವೇಗವಂತೂ ಗಾಬರಿಗೊಳ್ಳುವಂತಿದೆ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳೊಂದಿಗೆ ಆಗಮಿಸಿದ್ದ ಅಧಿಕಾರಿಗಳು ರೈತರು ಹಿಡಿದಿಟ್ಟಿದ್ದ ಜೀರುಂಡೆಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಬೂದಾಳದ ರೈತರಾದ ರಾಮಾಂಜಿನಪ್ಪ, ಸದಾಶಿವರೆಡ್ಡಿ, ಮುನಿಶಾಮಿರೆಡ್ಡಿ, ಶಂಕರ್‌, ವೆಂಕಟಪ್ಪ ತಮ್ಮ ಹಿಪ್ಪುನೇರಳೆ ತೋಟಕ್ಕೆ ಬಂದು ಸೊಪ್ಪು ತಿನ್ನುವ ಕೀಟಗಳ ಕುರಿತಂತೆ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ಈ ಜೀರುಂಡೆಗಳು ನೂರಾರು ಸಂಖ್ಯೆಯಲ್ಲಿ ರಾತ್ರಿ ವೇಳೆ ಹಿಪ್ಪುನೇರಳೆ ತೋಟಗಳಿಗೆ ಬಂದು ಎಲೆಗಳಿಗೆ ಕುಚ್ಚುಕುಚ್ಚಾಗಿ ಜೋತು ಬಿದ್ದು ಒಂದು ಕಡೆಯಿಂದಾ ತಿನ್ನುತ್ತಾ ಬರುತ್ತಿವೆ. ಇವು ರಾತ್ರಿ ವೇಳೆಯಲ್ಲಿ ಮಾತ್ರ ಬರುತ್ತಿವೆ. ಎಲ್ಲಿಂದ ಬರುತ್ತಿವೆಯೋ, ಎಲ್ಲಿಗೆ ಹೋಗುತ್ತವೆಯೋ ತಿಳಿಯದು. ಇವುಗಳ ಸಂಖ್ಯೆಯನ್ನು ನೋಡಿದರೆ ರೈತರ ಪಾಲಿನ ಬಕಾಸುರರಂತೆ ಕಾಣುತ್ತಿವೆ’ ಎಂದು ರೈತರು ತಿಳಿಸಿದರು.
‘ಈ ಕೀಟಗಳನ್ನು ಮೇ ಜೂನ್‌ ಬೀಟಲ್‌ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯಾ ಸೆರ್ರಾಟ ಎಂದಿದೆ. ಇದರ ಜೀವನ ಚಕ್ರ ಒಂದು ವರ್ಷ ಕಾಲವಿದ್ದು ಎಲ್ಲಾ ನೆಲದೊಳಗೇ ನಡೆಯುತ್ತದೆ. ಮೊದಲ ಮಳೆ ಬಿದ್ದೊಡನೆಯೇ ನೆಲದಿಂದ ಹೊರ ಬರುವ ಈ ಕೀಟಗಳು ಸಾಮಾನ್ಯವಾಗಿ ಗುಲಾಬಿ, ಜಾಲಿ, ಬೇವು, ಕಬ್ಬು ಮುಂತಾದವುಗಳ ಎಲೆಗಳನ್ನು ತಿನ್ನುತ್ತವೆ. ಅಚ್ಚರಿಯಾಗುವಂತೆ ಹಿಪ್ಪುನೇರಳೆ ಸೊಪ್ಪಿಗೂ ಆಕರ್ಷಿತವಾಗಿವೆ. ಒಂದು ತಿಂಗಳು ಮಾತ್ರ ಇವುಗಳು ನೆಲದಿಂದ ಹೊರವಿರುತ್ತವೆಯಷ್ಟೆ. ಒಂದು ಬಾರಿ ಸುಮಾರು ಎಂಟು ನೂರು ಮೊಟ್ಟೆಗಳನ್ನಿಡುವ ಇವುಗಳ ಸಂಖ್ಯೆಯೂ ದೊಡ್ಡದೇ. ಕಟಾವಿಗೆ ಬಂದಿರುವ ಸೊಪ್ಪಿಗೆ ಔಷಧಿಯನ್ನು ಸಿಂಪಡಿಸಲಾಗದು. ಆದ್ದರಿಂದ ತೋಟದಲ್ಲಿ ಅಲ್ಲಲ್ಲಿ ಬೇವಿನ ಸೊಪ್ಪನ್ನು ಕಟ್ಟಿ ಹುಳುಗಳನ್ನು ಆಕರ್ಷಿಸಿ ಹಿಡಿದು ಸೀಮೆಎಣ್ಣೆ ಮಿಶ್ರಿತ ನೀರಲ್ಲಿ ಹಾಕಿ ಸಾಯಿಸಬೇಕು. ಅಲ್ಲಲ್ಲಿ ಪ್ರಕರವಾದ ಬೆಳಕು ಹಾಯಿಸಿ ಈ ಹುಳುಗಳನ್ನು ಆಕರ್ಷಿಸಿ ಸಾಯಿಸಬಹುದು ಅಥವಾ ಸುಡಬಹುದು. ಈ ರೀತಿ ಸಾಯಿಸುವುದರಿಂದ ಇವುಗಳ ಸಂತತಿಗೆ ಕಡಿವಾಣ ಬಿದ್ದು ಮುಂದಿನ ಬಾರಿ ಇವು ಬರದಂತಾಗುತ್ತದೆ’ ಎಂದು ವಿಜ್ಞಾನಿ ಡಾ.ಎಚ್‌.ಎಸ್‌.ಫಣಿರಾಜ್‌ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್‌, ಸಹಾಯಕ ನಿರ್ದೇಶಕ ಚಂದ್ರಪ್ಪ, ಅಧಿಕಾರಿಗಳಾದ ಕೃಷ್ಣಪ್ಪ, ತಿಮ್ಮಪ್ಪ, ರೈತರಾದ ಜೆ.ವಿ.ವೆಂಕಟಸ್ವಾಮಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಶಿಡ್ಲಘಟ್ಟ ರೇಷ್ಮೆ ಉದ್ಯಮದ ಹರಿಕಾರ ಆನೂರು ಎ.ಎಂ.ಮುನೇಗೌಡರು

0

ಶಿಡ್ಲಘಟ್ಟ ರೇಷ್ಮೆ ಉದ್ಯಮದ ಬೀಡು, ರೇಷ್ಮೆ ಉದ್ಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಆದರೂ ನೆನಪಾಗುವುದೇ ಶಿಡ್ಲಘಟ್ಟ. ರೇಷ್ಮೆ ಕೃಷಿಕರ ಹಾಡು-ಪಾಡು, ನೂತನ ತಂತ್ರಜ್ಞಾನದ ಪರಿಚಯ, ಬೆಲೆ ಏರಿಕೆ ಮತ್ತು ಕುಸಿತ, ರಫ್ತು ಮತ್ತು ಆಮದು ಮುಂತಾದವುಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅನಿಸಿಕೆ, ಅಭಿಪ್ರಾಯ ನೀಡತೊಡಗುತ್ತಾರೆ.
ಆಸಕ್ತಿಮಯ ಸಂಗತಿಯೆಂದರೆ, ಈ ರೀತಿಯ ಚರ್ಚೆ ಸಂವಾದಗಳು ಇಂದಿನದಲ್ಲ. ಇದಕ್ಕೆ ಸುಮಾರು 50 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದು 60 ರ ದಶಕದ ಸಮಯ, ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಅಖಂಡ ಕೋಲಾರ ಜಿಲ್ಲೆಗೆ ಪರಿಚಯವಾಗಿತ್ತು. ರೈತರು ಹಿಂಜರಿಯುತ್ತಲೇ ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು ಕಂಡುಕೊಳ್ಳುತ್ತಿದ್ದರು. ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲೆಂದೇ ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು.
ರೇಷ್ಮೆಯಿಂದ ಯಾವ ರೀತಿ ಆರ್ಥಿಕ ಸಬಲತೆ ಕಾಣಬಹುದು ಎಂಬುದು ಸೇರಿದಂತೆ ಯಾವುದೆಲ್ಲ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದನ್ನು ಅವರು ಪುಸ್ತಕಗಳ ಮೂಲಕ ತಿಳಿಪಡಿಸುತ್ತಿದ್ದರು. ಹಾಗೆಂದು ಅವರೇನೂ ಸಾಹಿತಿಯಾಗಿರಲಿಲ್ಲ. ಆದರೆ ಸಾಹಿತ್ಯದ ಕುರಿತು ತುಂಬ ಆಸಕ್ತಿ ಇತ್ತು. ರೇಷ್ಮೆ ಕೃಷಿ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಎ.ಎಂ.ಮುನೇಗೌಡ. ಆನೂರಿನ ಪಟೇಲ ಮುನಿಶಾಮೇಗೌಡರ ಪುತ್ರ.ಆಗಿನ ಕಾಲದಲ್ಲೇ ಕೃಷಿಗೆ ಸಂಬಂಧಿಸಿದಂತೆ ಎಲ್.ಎಜಿ ಎಂಬ ಡಿಪ್ಲೊಮ ಗಳಿಸಿದ್ದರು. ಸರ್ಕಾರಿ ಉದ್ಯೋಗ ತಿರಸ್ಕರಿಸಿದ್ದ ಅವರು ತಮ್ಮ ಕುಲ ವೃತ್ತಿಯಾದ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡ ಕುಟುಂಬದ ಹಿರಿಯರಾಗಿದ್ದ ಅವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಆವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಯವರ ಒಡನಾಟವನ್ನು ಹೊಂದಿದ್ದು, ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದರು.
ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಸರ್ಕಾರ ಅರಿವು ಮೂಡಿಸುವ ಮುನ್ನವೇ ಮುನೇಗೌಡ ಅವರು “ರೇಷ್ಮೆ ಕೈಗಾರಿಕೆ” ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು. ಅವರಿಗೆ ಪತ್ರಿಕೋದ್ಯಮ ಮತ್ತು ಮುದ್ರಣದ ಬಗ್ಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಆದರೆ ರೇಷ್ಮೆ ಬೇಸಾಯದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಬೇರೆ ದೇಶಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯಾಸಾಧ್ಯತೆಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದುಕೊಂಡ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಾಳಜಿ, ಕಳಕಳಿಯಿತ್ತು. ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆಯನ್ನು ಪರಿಷ್ಕರಿಸುವುದು ಮುಂತಾದ ಕೆಲಸಗಳನ್ನು ಶಾಸ್ತ್ರಿಗಳು ಮಾಡುತ್ತಿದ್ದರು. 16 ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಅದರ ಬ್ಲಾಕುಗಳ ತಯಾರಿಕೆಗಾಗಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು. ಈ ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ ಎಂಬುದನ್ನು ಪರಿಗಣಿಸದೇ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲ ಕಾಲ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದಾಗಿ ಪತ್ರಿಕೆ ಕೊನೆಯುಸಿರೆಳೆಯಿತು.
ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ’ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. 1944-45 ನೆಯ ವರ್ಷದಲ್ಲಿ ಗ್ರಾಮಾಭ್ಯುದಯ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ರೈತರ ಬಗ್ಗೆ ಇವರು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ’ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕದ ಬಿನ್ನಹದಲ್ಲಿ, “ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾರೆಂದು ತಿಳಿಯಬೇಕು. ಹೀಗಾಗಬೇಕಾದರೆ ರೈತನ ಹಿತಚಿಂತಕರೆಲ್ಲರೂ ರೈತನ ಅವಶ್ಯಕತೆಗಳ ನಿಜ ಸ್ವರೂಪವನ್ನು ತಿಳಿದು ನಡೆಯಬೇಕು. ಓದುಗರು ಸಾಹಿತ್ಯದೋಷಗಳನ್ನು ಮನ್ನಿಸಿ ರೈತನೊಬ್ಬನಿಂದ ಬರೆಯಲ್ಪಟ್ಟಿರುವ ಈ ಪುಸ್ತಕದಲ್ಲಿರುವ ವಿಷಯಗಳನ್ನು ಗಮನಿಸಬೇಕೆಂದು ವಿಜ್ಞಾಪನೆ’ ಎಂದು ಬರೆಯುತ್ತಾರೆ ಮುನೇಗೌಡರು.
ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನಗಳು, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನಗಳನ್ನು ಇವರ ’ರೇಷ್ಮೆ ಕೈಗಾರಿಕೆ’ ರೇಷ್ಮೆ ಕೈಗಾರಿಕೆಯ ಪ್ರಗತಿಗೆ ಮೀಸಲಾದ ಏಕೈಕ ತ್ರಿಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖನ – ಡಿ ಜಿ ಮಲ್ಲಿಕಾರ್ಜುನ

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇಕಡಾ 79.42 ರಷ್ಟು ಮತದಾನ

0

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇಕಡಾ 79.42 ರಷ್ಟು ಮತದಾನ ನಡೆದಿದೆ.
ತಾಲ್ಲೂಕಿನ 92,697 ಪುರುಷರು, 90604 ಮಹಿಳೆಯರು ಸೇರಿದಂತೆ ಒಟ್ಟು 1,83,311 ಮತದಾರರಲ್ಲಿ ಮತಚಲಾಯಿಸಿದವರು 75,953 ಪುರುಷರು ಮತ್ತು 69,624 ಮಹಿಳೆಯರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಮತದಾನ ಮಾಡಿದ್ದವರು ಶೇಕಡಾ 75.78 ರಷ್ಟಿದ್ದರೆ, ಈ ಬಾರಿ ಅದು ಶೇಕಡಾ 79.42ಕ್ಕೆ ಏರಿಕೆ ಕಂಡಿದೆ. ಮತದಾನದ ಮಹತ್ವದ ಬಗ್ಗೆ ಸರ್ಕಾರ ಅರಿವು ಮೂಡಿಸುವ ಅಭಿಯಾನದ ಪರಿಣಾಮ ಶೇಕಡಾ 3.64 ರಷ್ಟು ಮತದಾನ ಹೆಚ್ಚಾಗಿದೆ.
ತಾಲ್ಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ಮತಯಾಚಿಸಲು ತೆರಳಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಬಗ್ಗೆ 75 ಮನೆಗಳು ಹಾಗೂ 25 ಗುಡಿಸಳುಗಲಿರುವ ಈ ಗ್ರಾಮದಲ್ಲಿ ಬರುವ ಮಳೆಗಾಲವನ್ನು ತಡೆಯಲು ಈಗಿನಿಂದಲೇ ಗುಡಿಸಲನ್ನು ಸರಿಪಡಿಸಿಕೊಳ್ಳುತ್ತಿದ್ದ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದರು. ವಿಶೇಷವೆಂದರೆ ಈ ರೀತಿ ಆಕ್ರೋಷ ವ್ಯಕ್ತಪಡಿಸಿದ್ದ ಬ್ರಾಹ್ಮಣರಹಳ್ಳಿಯಲ್ಲಿ ಶೇಕಡಾ 100 ರಷ್ಟು ಮತದಾನವಾಗಿದ್ದು ತಾಲ್ಲೂಕಿನಲ್ಲೇ ಹೆಚ್ಚಿನ ಮತದಾನ ಕಂಡ ಮತಗಟ್ಟೆಯಾಗಿದೆ.
ಶಾಶ್ವತ ನೀರಾವರಿಗಾಗಿ ನಾವು ಮತದಾನವನ್ನು ಬಹಿಷ್ಕರಿಸುತ್ತೇವೆಂದು ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮಸ್ಥರು ತಿಳಿಸಿದ್ದರಿಂದ ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳು ತೆರಳಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದರಾದರೂ ಈ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ 32.138 ರಷ್ಟು ಮತದಾನ ನಡೆದಿದೆ.
ತಾಲ್ಲೂಕಿನ ಕಲ್ಯಾಪುರ, ಗೊರಮಡುಗು, ಗುಡಿಹಳ್ಳಿ, ಮಿತ್ತನಹಳ್ಳಿ, ಅಮರಾವತಿ, ಚೊಕ್ಕಂಡಹಳ್ಳಿ, ಅರಿಕೆರೆ. ಎ.ಹುಣಸೇನಹಳ್ಳಿ, ವೀರಾಪುರ, ಚೀಮನಹಳ್ಳಿ, ಗಡಿಮಿಂಚೇನಹಳ್ಳಿ, ಕೋಟಗಲ್‌, ಹರಳಹಳ್ಳಿ, ಕಂಬದಹಳ್ಳಿ ಮತಗಟ್ಟೆಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಮತದಾನವಾಗಿದೆ.
2009 ರಿಂದ 2014 ರ ವರೆಗೆ ನಡೆದ ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಯ ಮತದಾನದ ಸಂಪೂರ್ಣ ಮಾಹಿತಿ

ಮೇಲೂರು ಗ್ರಾಮದ ಗಂಗಾದೇವಿ ರಥೋತ್ಸವ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಗಂಗಾದೇವಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿಜಯನಾಮ ಸಂವತ್ಸರದ ಚೈತ್ರ ಶುದ್ಧ ಪೂರ್ಣಿಮೆ ಮಂಗಳವಾರ ಮಧ್ಯಾಹ್ನ ಗ್ರಾಮಸ್ಥರೆಲ್ಲರು ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸಿದ್ದ ದೇವಿಯ ರಥವನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ವಿವಿಧ ರೀತಿಯ ತಮಟೆ ನಾದ, ಡೊಳ್ಳು ಕುಣಿತ ಹಾಗೂ ಕಲಾ ತಂಡಗಳೊಂದಿಗೆ ಸಾಗಿದ ರಥವನ್ನು ಎಲ್ಲರೂ ಸೇರಿ ಎಳೆದರು. ದವನ ಸಿಕ್ಕಿಸಿದ ಬಾಳೆಹಣ್ಣನ್ನು ರಥಕ್ಕೆ ಎಸೆದು ಜನರು ಪ್ರಾರ್ಥಿಸಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ಗ್ರಾಮ ದೇವತೆ ಗಂಗಾದೇವಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಂತರ ರಥವನ್ನು ಎಳೆದರು. ಗಂಗಾದೇವಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಲೂನು, ಬತ್ತಾಸು ಮಕ್ಕಳ ಆಕರ್ಷಣೆಯಾಗಿತ್ತು. ಹೆಸರು ಬೇಳೆ, ಪಾನಕ, ಮಜ್ಜಿಗೆ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.
 

ವಿದ್ಯುತ್ ಆಘಾತದಲ್ಲಿ ತಾಯಿಯನ್ನು ಕಳೆದುಕೊಂಡ ಬಾವಲಿ ಮರಿಯ ರಕ್ಷಣೆ

0

ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನಲ್ಲಿ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಮೃತಪಟ್ಟ ದೊಡ್ಡದಾದ ಬಾವಲಿಯೊಂದು ಸಂತೆಪ್ಪನವರ ಮೂರ್ತಿ ಅವರಿಗೆ ಸಿಕ್ಕಿದ್ದು, ತಾಯಿಯನ್ನು ಅಪ್ಪಿಕೊಂಡು ಬದುಕುಳಿದಿದ್ದ ಅದರ ಮರಿಯನ್ನು ಅವರು ರಕ್ಷಿಸಿದ್ದಾರೆ.
ಇನ್ನೂ ಕಣ್ಣು ಬಿಡದ ಪುಟ್ಟ ಕಂದಮ್ಮವದು. ತಾಯಿಯ ಮೊಲೆಯನ್ನು ಹೀರುತ್ತಿದೆ. ಆದರೆ ಅದರ ತಾಯಿ ಮೃತಪಟ್ಟಿರುವುದು ಮಾತ್ರ ಅದರ ಅರಿವಿಗೆ ಬಂದಿಲ್ಲ. ಬಾವಲಿ ತಾಯಿ ಹಾಗೂ ಮರಿಯ ಈ ಕರುಣಾಜನಕ ದೃಶ್ಯಕ್ಕೆ ಸಾಕ್ಷಿಯಾದವರು ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನ ಸಂತೆಪ್ಪನವರ ಮೂರ್ತಿ.
ಬೆಳಿಗ್ಗೆಯೇ ತಮ್ಮ ತೋಟದ ಕೆಲಸವನ್ನು ಮುಗಿಸಿಕೊಂಡು ಬರುವಾಗ ವಿದ್ಯುತ್‌ ತಂತಿಯಿಂದ ಧಡ್‌ ಎಂಬ ಸದ್ದಿನೊಂದಿಗೆ ಬಿದ್ದದ್ದನ್ನು ನೋಡಿದಾಗ ಅವರ ಕಣ್ಣಿಗೆ ಬಿದ್ದ ದೃಶ್ಯ ಮನಕಲುಕುವಂತಿತ್ತು. ದೊಡ್ಡದಾದ ಬಾವಲಿಯು ವಿದ್ಯುತ್‌ ಆಘಾತಕ್ಕೆ ಒಳಗಾಗಿ ಕೆಳಗೆ ಬಿದ್ದು ಮೃತಪಟ್ಟಿತ್ತು. ಅದರ ಪುಟ್ಟ ಮರಿ ಮಾತ್ರ ತನ್ನ ತಾಯಿಯು ಸತ್ತಿದ್ದು ಕೂಡ ತಿಳಿಯದಂತೆ ಅದನ್ನು ಅಪ್ಪಿಕೊಂಡಿತ್ತು.
’ಸಾಮಾನ್ಯವಾಗಿ ಬಾವಲಿಗಳು ವಿದ್ಯುತ್‌ ತಂತಿಗೆ ಸಿಲುಕುವುದಿಲ್ಲ. ಮರಿಯನ್ನು ಹೊತ್ತು ಸಾಗುವಾಗ ಸುಸ್ತಾಗಿ ಬಹುಶಃ ವಿದ್ಯುತ್‌ ತಂತಿಯ ಆಸರೆ ಪಡೆಯಲು ಹೋಗಿ ಅವಘಡಕ್ಕೆ ತುತ್ತಾಗಿರಬೇಕು. ಮರಿಯು ಬದುಕಿರುವುದು ಕೂಡ ಪವಾಡವೇ. ನಿಶಾಚರಿಯಾದ ಇಂಥಹ ಬಾವಲಿಯನ್ನು ಹಾರುವ ನರಿ(ಫ್ಲೈಯಿಂಗ್‌ ಫಾಕ್ಸ್‌) ಎನ್ನುತ್ತಾರೆ’ ಎಂದು ಮರಿಯನ್ನು ರಕ್ಷಿಸಿದ ಸಂತೆಪ್ಪನವರ ಮೂರ್ತಿ ತಿಳಿಸಿದರು.

ಪ್ರಸಿದ್ಧವಾದ ಮೇಲೂರಿನ ಮಿಕ್ಸ್‌ಚರ್

0

ಅರವತ್ನಾಲ್ಕು ವಿದ್ಯೆಗಳಲ್ಲಿ ಅಡುಗೆಗೂ ಮಹತ್ವವಿದೆ. ಕೆಲವರ ಕೈರುಚಿ ದೇಶ, ಭಾಷೆಯ ಗಡಿ ಮೀರಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಸಣ್ಣ ಗ್ರಾಮದಲ್ಲಿದ್ದರೂ ಕಲಿತ ವಿದ್ಯೆಯಿಂದಲೇ, ತಮ್ಮ ತಯಾರಿಕಾ ಸಾಧನಗಳಿಂದಲೇ ಕೆಲವರು ದೇಶದ ರಾಯಭಾರಿಗಳಾಗಿರುತ್ತಾರೆ. ತಾಲ್ಲೂಕಿನ ಮೇಲೂರು ಗ್ರಾಮದ ಕಾಮಧೇನು ಸ್ವೀಟ್ಸ್ ಮಾಲೀಕ ಶ್ರೀಧರ್ ಇಂಥಹವರಲ್ಲೊಬ್ಬರು.
ಮೇಲೂರಿನ ಮಿಕ್ಸ್‌ಚರ್ ಎಂದೇ ಪ್ರಸಿದ್ಧವಾದುದು ಇವರು ತಯಾರಿಸುವ ಚೌಚೌ. ಮೇಲೂರಿನ ಗ್ರಾಮದಿಂದ ಇವರ ತಯಾರಿಕೆಯ ಖಾರದ ತಿನಿಸು ತಾಲ್ಲೂಕು ಜಿಲ್ಲೆಯನ್ನೂ ಮೀರಿ ಅಮೆರಿಕೆಯನ್ನೂ ತಲುಪಿದೆ. ಜಿಲ್ಲೆಯ ಇವರ ಗ್ರಾಹಕರು ಅಮೆರಿಕೆಯಲ್ಲಿನ ತಮ್ಮ ಸಂಬಂಧಿಕರು ಬಂದು ವಾಪಸ್ ಹೋಗುವಾಗ ಮೇಲೂರಿನ ಮಿಕ್ಸ್‌ಚರ್ ಕೊಂಡು ಹೋಗುತ್ತಾರೆ.
ಸುಮಾರು ೧೮ ವರ್ಷಗಳಿಂದ ಖಾರ ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಜಿಲೇಬಿ, ಜಾಂಗೀರು, ಲಾಡು, ಸೋನ್‌ಪಪ್ಪಡಿ ಮುಂತಾದ ತಿಂಡಿಗಳನ್ನೂ ತಯಾರಿಸುತ್ತಾರೆ. ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮುಂತಾದ ಯಾವುದೇ ಸಂಭ್ರಮಾಚರಣೆಗಳಿಗೆ ಇವರ ಸಿಹಿ ಇರಲೇಬೇಕು.
’ಈ ವಿದ್ಯೆಯನ್ನು ಬಂಗಾರಪೇಟೆಯಲ್ಲಿನ ನನ್ನ ಚಿಕ್ಕಪ್ಪನವರ ಬಳಿ ಕಲಿತೆ. ಗುಣಮಟ್ಟವನ್ನು ಕಮ್ಮಿಯಾಗದಂತೆ ಸದಾ ನೋಡಿಕೊಳ್ಳುತ್ತೇನೆ. ಉತ್ತಮವಾದ ಎಣ್ಣೆ ಬಳಸುವೆ. ಒಳ್ಳೆಯ ನಾಟಿ ಕಡಲೆ ಬೇಳೆಯನ್ನು ನೋಡಿ ಕೊಂಡುತಂದು ಆರಿಸಿ ಒಣಗಿಸಿ ಪುಡಿ ಮಾಡಿಸಿ ಬಳಸುತ್ತೇನೆ. ಈ ಕೆಲಸಕ್ಕೆ ನಾನು ಕೆಲಸದವರನ್ನು ಇಟ್ಟುಕೊಂಡಿಲ್ಲ. ತಿಂಡಿ ತಯಾರಿಕೆ ಹಾಗೂ ಮಾರಾಟಕ್ಕೆ ನನ್ನ ಪತ್ನಿ ಹಾಗೂ ತಮ್ಮ ಸಹಕರಿಸುತ್ತಾರೆ. ಕೆಲಸದವರನ್ನು ನೇಮಿಸಿಕೊಂಡರೆ ಗುಣಮಟ್ಟ ಕೆಡಬಹುದೆಂಬ ಭಯವಿದೆ. ಕೆಲ ಗ್ರಾಹಕರು ಅಮೆರಿಕೆಗೆ ನಮ್ಮ ಮಿಕ್ಸ್‌ಚರ್ ತೆಗೆದುಕೊಂಡು ಹೋಗುತ್ತಾರೆ. ಅವರಿಗಾಗಿ ಅವರಿಗೆ ಬೇಕಾದ ರೀತಿಯಲ್ಲಿ ಖಾರ ಮಾಡಿಕೊಡುತ್ತೇನೆ. ವಿಮಾನದಲ್ಲಿ ಹೆಚ್ಚು ತೆಗೆದುಕೊಂಡು ಹೋಗಲಾಗದೆಂದು ಒಮ್ಮೆಗೆ ನಾಲ್ಕರಿಂದ ಐದು ಕೆಜಿ ತೆಗೆದುಕೊಂಡು ಹೋಗುತ್ತಾರೆ. ತಾಲ್ಲೂಕಿನ ಹಲವಾರು ಮಂದಿ ಗ್ರಾಹಕರು ತಮ್ಮ ಸಂಬಂಧಿಕರ ಮನೆಗಳಿಗೆ ಮತ್ತು ಸ್ನೇಹಿತರಿಗೆ ನೀಡಲು ನನ್ನ ಬಳಿ ಸಿಹಿ ಹಾಗೂ ಖಾರ ಖರೀದಿಸುತ್ತಾರೆ. ಜನರು ಮೆಚ್ಚುವುದು ಗುಣಮಟ್ಟವನ್ನು ಎಂಬ ಎಚ್ಚರಿಕೆ ಸದಾ ನನ್ನದು’ ಎನ್ನುತ್ತಾರೆ ಕಾಮಧೇನು ಸ್ವೀಟ್ಸ್‌ನ ಎನ್.ಶ್ರೀಧರ.

ವರದನಾಯಕನಹಳ್ಳಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 18ನೇ ವರ್ಷದ ರಥೋತ್ಸವ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 18ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಿಂದ ಪಾನಕ ಹಾಗೂ ಮಜ್ಜಿಗೆ ಬಂಡಿಯನ್ನು ವ್ಯವಸ್ಥೆ ಮಾಡಿದ್ದು ಭಕ್ತರಿಗೆಲ್ಲಾ ವಿತರಿಸಲಾಯಿತು. ಪಂಡರಾಪುರ ಭಜನೆ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಜನರನ್ನು ರಂಜಿಸಿತು.
ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್‌.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ

0

ಗೋಕಷ್ಟ ನಿವಾರಕ ಎಂದೇ ಪ್ರಸಿದ್ಧಿ ಪಡೆದಿರುವ ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಕಾರ್ಯಕ್ರಮ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮಂಗಳವಾರದಿಂದ ಪ್ರಾರಂಭವಾದ ಆರಾಧನಾ ಮಹೋತ್ಸವವು ಏಳುದಿನಗಳ ಕಾಲ ನಡೆದು ಬರುವ ಮಂಗಳವಾರ ಕೊನೆಗೊಳ್ಳಲಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ದ್ಯಾವಪ್ಪನ ತಾತನ ಸಮಾಧಿಗೆ ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ, ತುಪ್ಪದ ದೀಪ ಬೆಳಗಿ, ಉಪ್ಪು ಹಾಗೂ ಕರಿ ಕಂಬಳ ದಾರವನ್ನು ಮಂತ್ರಿಸಿಕೊಂಡು ಮನೆಗೆ ಕೊಂಡೊಯ್ಯುವುದು ರೂಢಿ . ತಾತನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ಕುಂಕುಮವನ್ನು ಖಾಯಿಲೆ ಬಿದ್ದ ದನಕರುಗಳ ಹಣೆಗೆ ಇಟ್ಟು ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ದನದ ಹೊಟ್ಟೆಗೆ ಸೇರಿಸಿದರೆ ಸಾಕು ಅದೆಂತಹ ಕಾಯಿಲೆಯಾದರೂ ಸರಿಯೆ ವಾಸಿಯಾಗುತ್ತದೆ ಎಂಬ ನಂಬುಗೆ ಜನಪದರದ್ದು.
ದೇವಸ್ಥಾನದ ಆಸುಪಾಸಿನಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್, ತೆಂಗಿನ ಕಾಯಿ, ಕರಿ ಕಂಬಳ ದಾರ, ದೃಷ್ಟಿ ಬೊಟ್ಟು ದಾರದ ಭರ್ಜರಿ ವ್ಯಾಪಾರವಹಿವಾಟು ನಡೆಯುತ್ತಿದೆ. ತಮ್ಮ ದನಕರು, ರಾಸುಗಳಿಗೆ ಏನಾದರೂ ತೊಂದರೆ ಕಾಣಿಸಿಕೊಂಡಾಗ ದ್ಯಾವಪ್ಪ ತಾತನಿಗೆ ಹರಕೆ ಮಾಡಿಕೊಂಡಿದ್ದ ರೈತರು ತಾವು ಬೆಳೆದ ರಾಗಿ, ಅಕ್ಕಿ, ಬೇಳೆ, ತರಕಾರಿಗಳನ್ನು ಇಂದು ದ್ಯಾವಪ್ಪತಾತನ ಸನ್ನಿಧಿಗೆ ಅರ್ಪಿಸಿದರು. ಹೀಗೆ ಭಕ್ತರು ಸಮರ್ಪಿಸಿದ ದವಸ ಧಾನ್ಯಗಳಿಂದಲೆ ರಾಗಿ ಮುದ್ದೆ, ಹುಳಿ ಸಾರು ತಯಾರಿಸಿ ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿಗೆ ಬಡಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಹಾಲು ಉಟ್ಲು ಹಾಗೂ ಕಾಯಿ ಉಟ್ಲು, ಕೋಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕ ಬಂಡಿ ಸೇವೆ ನಡೆಯಿತು. ಎತ್ತುಗಳ ಪರಿಷೆಯೂ ನೆರೆದಿದ್ದು ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ನೂರಾರು ಎತ್ತುಗಳು ಬಂದಿದ್ದು, ದ್ಯಾವಪ್ಪ ತಾತನ ದೇವಾಲಯ ಸಮಿತಿಯಿಂದ ಕುಡಿಯುವ ನೀರು ಇನ್ನಿತರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ರೈತರ ನಿತ್ಯ ಬಳಕೆಯ ವಸ್ತುಗಳಾದ ಕುಡುಗೋಲು, ಕೊಡಲಿ, ಮಚ್ಚು, ವರಾರಿ, ಜರಡಿ ಮುಂತಾದ ಹತ್ತು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಅವನ್ನು ರೈತರು ಕೊಳ್ಳುತ್ತಿದ್ದರು.
ಕಳೆದ ಐದು ದಶಕಗಳಿಂದಲೂ ದ್ಯಾವಪ್ಪತಾತನ ಸಮಾಧಿಗೆ ನಿತ್ಯ ನೂರಾರು ಮಂದಿ ಪೂಜೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯ ಸಮಾಧಿಗೆ ನಿತ್ಯವೂ ಪೂಜೆ ನಡೆಯುತ್ತಿರುವ ಜಿಲ್ಲೆಯ ಏಕೈಕ ಸ್ಥಳವಾಗಿ ದ್ಯಾವಪ್ಪನಗುಡಿಯ ದ್ಯಾವಪ್ಪನ ಸಮಾಧಿ ಎಲ್ಲರ ಗಮನ ಸೆಳೆದಿದೆ.
ತಾಲ್ಲೂಕಿನ ಕೋಟಹಳ್ಳಿಯ ದಿ.ನಂಜಪ್ಪ ಮತ್ತು ದಿ.ಬಯ್ಯಮ್ಮ ಬಡ ರೈತ ದಂಪತಿಗಳ ಎರಡನೆ ಮಗ ದ್ಯಾವಪ್ಪ ಖಾಯಿಲೆ ಬಿದ್ದ ಜಾನುವಾರುಗಳ ಮೈದಡವಿ ನೇವರಿಸಿ ಒಂದು ನಿಮಿಷ ನಿಂತು ಏನನ್ನೋ ದ್ಯಾನಿಸುತ್ತಿದ್ದಿಂತೆಯೇ ಖಾಯಿಲೆ ಬಿದ್ದಿದ್ದ ಜಾನುವಾರು ಚೇತರಿಸಿಕೊಳ್ಳುತ್ತಿತ್ತು ಎಂದು ದ್ಯಾವಪ್ಪ ತಾತನ ಚಮತ್ಕಾರವನ್ನು ಕಣ್ಣಾರೆ ಕಂಡವರು ನೆನಪಿಸಿಕೊಳ್ಳುತ್ತಾರೆ.
ಖಾಯಿಲೆ ವಾಸಿಯಾದ ಸಂತಸಕ್ಕೆ ರೈತರು ಎಷ್ಟೆ ಹಣ ನೀಡಲು ಬಂದರೂ ಅದನ್ನು ನಿರಾಕರಿಸಿ ಕೇವಲ ನಾಲ್ಕಾಣೆ ಮಾತ್ರ ಪಡೆಯುತ್ತಿದ್ದರಂತೆ. ಹೀಗೆ ಸಂಗ್ರಹಿಸಿದ ಹಣವನ್ನು ಗೋಕುಂಟೆ ನಿರ್ಮಾಣಕ್ಕೆ ಬಳಸುತ್ತಿದ್ದರಂತೆ. ಕೋಟಹಳ್ಳಿ ಸಮೀಪದ ಅಜ್ಜಕದಿರೇನಹಳ್ಳಿ-ಗೊರಮ್ಲಿಲಹಳ್ಳಿ ಗಡಿ ಸಮೀಪ ಈಗಲೂ ಗೋಕುಂಟೆಯೊಂದಿದೆ.
ದ್ಯಾವಪ್ಪ ತಾನು ಸತ್ತ ಮೇಲೆ ತನ್ನ ಸಮಾಧಿಗೆ ಪೂಜೆ ಮಾಡಿ ರಾಸುಗಳ ಸಂಕಷ್ಟಗಳು ಪರಿಹಾರವಾಗುತ್ತೆ ಎಂದು ಜನರಿಗೆ ಹೇಳಿದ್ದರಂತೆ. 1949 ರಲ್ಲಿ ಅವರು ವಿಧಿವಶರಾದಾಗ ಅವರ ಇಚ್ಚೆಯಂತೆ ಜಯಂತಿಗ್ರಾಮದಲ್ಲಿ ಸಮಾಧಿಯನ್ನು ನಿರ್ಮಿಸಿದರು. ಆ ಸಮಾಧಿ ಇರುವ ಜಯಂತಿಗ್ರಾಮ ದ್ಯಾವಪ್ಪನಗುಡಿ ಎಂದೆ ಪ್ರಸಿದ್ದಿಪಡೆದಿದೆ.

ಮೇಲೂರಿನ ಗಂಗಾದೇವಿಯ ಜಾತ್ರಾ ಮಹೋತ್ಸವ

0

ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಾಗಿ ಪ್ರಾರಂಭವಾಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು.
ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಕೋರಿಕೆಗಳ ಬಾಯಿಬೀಗವನ್ನು ಭಕ್ತರಿಂದ ನಡೆಸಲಾಯಿತು.
ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವವು ಮಂಗಳವಾರ ವಾಲ್ಮೀಕಿ ಮತಸ್ಥರಿಂದ ಗಂಗಾದೇವಿಗೆ ಬೇವಿನ ಸೊಪ್ಪಿನ ತೇರನ್ನು ರಚಿಸುವುದರ ಮೂಲಕ ಮೊದಲಾಯಿತು. ಬೇವಿನ ಮರದಲ್ಲಿ ಪುಟ್ ರಥವನ್ನು ತಯಾರಿಸಿ ಅದನ್ನು ಬೇವಿನ ಸೊಪ್ಪಿನಿಂದ ಅಲಂಕರಿಸಿ ದೇವಿಗೆ ಮುದ್ದೆ ಮತ್ತು ಸೊಪ್ಪಿನ ಸಾರನ್ನು ಎಡೆಯಾಗಿ ಇರಿಸಿಕೊಂಡು, ರಥವನ್ನೆಲ್ಲಾ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯದ ಬಳಿಗೆ ತರಲಾಯಿತು. ಇದು ಸುಮಾರು ಮುನ್ನೂರು ವರ್ಷಗಳಿಗೂ ಹಿಂದಿನ ಆಚರಣೆಯಾಗಿದ್ದು, ತಪ್ಪದೆ ನಡೆಸಿಕೊಂಡು ಬರುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಸ್ಥರು ಬೇವಿನಸೊಪ್ಪಿನ ತೇರನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿದಾಗ ವಾದ್ಯವೃಂದ, ಗಾರಡಿಬೊಂಬೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು.

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 87ನೇ ವರ್ಷದ ಉಟ್ಲು ಪರಿಷೆ

0

ಶ್ರೀ ರಾಮನವಮಿಯ ಪ್ರಯುಕ್ತ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ 87ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.