sidlaghatta.com ಓದುಗರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಪಟ್ಟಣದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಜಯಪುರದ ನಂದಿನಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.
Yellow Belt ಕತಾ ಸ್ಪರ್ಧೆಯಲ್ಲಿ ನರಸಿಂಹ(ದ್ವಿತೀಯ), Green Belt ಕತಾ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), 25 ರಿಂದ 30 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಚೇತನ್(ಪ್ರಥಮ), 30 ರಿಂದ 35 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), ನರಸಿಂಹ(ದ್ವಿತೀಯ), ಗಂಗರಾಜು ಮತ್ತು ಪುನೀತ್ ಸಮಾಧಾನಕರ ಬಹುಮಾನ ಪಡೆದಿರುವುದಾಗಿ ತರಬೇತುದಾರ ಅರುಣ್ಕುಮಾರ್ ತಿಳಿಸಿದ್ದಾರೆ.
ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್ಪಿಜಿ ಇಂಧನ ಉಳಿಸುವ ಅಸ್ತ್ರ ಒಲೆ ನಿರ್ಮಾಣ
LPG ಇಂಧನ ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಎರಡು ಸರ್ಕಾರಿ ಪ್ರೌಢಶಾಲೆಗಳು ಅಸ್ತ್ರ ಒಲೆಗಳನ್ನು ನಿರ್ಮಿಸಿಕೊಂಡಿವೆ.
ನಿತ್ಯಜೀವನಕ್ಕೆ ಉಪಯುಕ್ತವಾದ ವೈಜ್ಞಾನಿಕ ಸಾಧನಗಳನ್ನು ಹಳ್ಳಿಗಳಲ್ಲಿ ಪ್ರಾಯೋಗಿಕವಾಗ ತರಲು ಪ್ರೊ.ಸತೀಶ್ ಧವನ್ ನಿರ್ದೇಶಕರಾಗಿದ್ದ ಅವಧಿಯಲ್ಲಿ ಎ.ಕೆ.ಎನ್.ರೆಡ್ಡಿ, ಮಾಧವ ಗಾಡ್ಗೀಳ್, ರೊದ್ದಂ ನರಸಿಂಹ ಮುಂತಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಅಸ್ತ್ರ(ಸೆಂಟರ್ ಫಾರ್ ಅಪ್ಲಿಕೇಷನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ರೂರಲ್ ಏರಿಯಾಸ್) ಎಂಬ ಕೇಂದ್ರವನ್ನು ಪ್ರಾರಂಭಿಸಿದ್ದರು. ಕಡಿಮೆ ಸೌದೆ ಬಳಸಿ ಹೆಚ್ಚು ಶಾಖವನ್ನು ಉತ್ಪಾದಿಸುವ ಮಾಲಿನ್ಯರಹಿತ ಒಲೆಗಳು ಅವರ ಕೊಡುಗೆಯಾಗಿದ್ದು, ಅವು ಅಸ್ತ್ರ ಒಲೆಗಳೆಂದೇ ಪ್ರಸಿದ್ಧಿಯಾಗಿವೆ.
ದಿ.ಸಂಜಯ್ದಾಸ್ಗುಪ್ತರ ನೆನಪಿನಲ್ಲಿ ನಡೆಸುವ ‘ನಮ್ಮ ಮುತ್ತೂರು’ ಸಂಸ್ಥೆಯ ವತಿಯಿಂದ ಆಗಮಿಸಿದ್ದ ರಮೇಶ್ ಕಿಕ್ಕೇರಿ ತಾಲ್ಲೂಕಿನ ಎರಡೂ ಶಾಲೆಗಳಲ್ಲಿ ಅಸ್ತ್ರ ಒಲೆಗಳನ್ನು ಕಟ್ಟಿದ ನಂತರ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಕೆಯಲ್ಲಿ ಈ ಹೊಸ ಒಲೆಯಿಂದ ಶೇಕಡಾ 50 ರಷ್ಟು ಇಂಧನ ಉಳಿತಾಯ ಮಾಡಬಹುದು, ಶಾಖದ ಸದುಪಯೋಗ ಮಾಡಿಕೊಳ್ಳುತ್ತಾ ಒಂದೆಡೆ ಅಡುಗೆ ಮತ್ತೊಂದೆಡೆ ಬಿಸಿ ನೀರನ್ನು ಪಡೆಯಬಹುದು, ಕಡಿಮೆ ಇಂಧನದಿಂದ ತಯಾರಾಗುವ ಶೀಘ್ರ ಅಡುಗೆಯ ಬಗ್ಗೆ ವಿವರಿಸಿದರು. ಎಲ್ಪಿಜಿ ಗ್ಯಾಸ್ ಉಳಿತಾಯ ಹಾಗೂ ಭೂಮಿಯಿಂದ ಬಗೆದು ಉಪಯೋಗಿಸುತ್ತಿರುವ ಇಂಧನಗಳ ಉಳಿತಾಯದ ಅಗತ್ಯತೆಯ ಬಗ್ಗೆ ತಿಳಿಸಿದರು.
ಹೊಗೆಯಿಂದಾಗಿ ಆರೋಗ್ಯ ಹಾಳಾಗುತ್ತದೆ. ಕ್ಯಾನ್ಸರ್, ಟಿಬಿ, ಅಸ್ತಮಾ ಹೀಗೆ ನೂರಾರು ರೋಗಗಳಿಗೆ ಸೌದೆ ಒಲೆಗಳೇ ತೌರುಮನೆ. ಈ ಅಸ್ತ್ರ ಒಲೆಗಳಲ್ಲಿ ಯಾವುದೇ ಕೃಷಿತ್ಯಾಜ್ಯಗಳನ್ನು ಇಂಧನವಾಗಿ ಬಳಸಬಹುದು. ಇವು ಪ್ರತ್ಯಕ್ಷವಾಗಿ ಕಟ್ಟಿಗೆ ಉಳಿಸುತ್ತವೆ. ಮರಗಿಡಗಳನ್ನು ಕಡಿಯುವುದು ಕಡಿಮೆಯಾಗುತ್ತದೆ. ಹೀಗೆ ಒಂದರ ಹಿಂದೊಂದು ಸರಪಳಿ ಉಪಯೋಗಗಳಿವೆ. ಅಸ್ತ್ರ ಒಲೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಟ್ಟಿಗೆಗಾಗಿ ವ್ಯರ್ಥವಾಗುತ್ತಿದ್ದ ಇಡೀ ದಿನದ ಸಮಯದ ಉಳಿತಾಯದಿಂದ ಆರೋಗ್ಯದವರೆಗೂ ಉಪಯುಕ್ತ. ಇದು ಮಹಿಳೆಯರಿಗೆ ಅತ್ಯಂತ ಸಹಾಯಕ. ಒಲೆಯೊಂದು ಬದುಕನ್ನೇ ಬದಲಿಸುತ್ತದೆ ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರ ಮೆರವಣಿಗೆ
ಶಿಡ್ಲಘಟ್ಟದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡ ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ತಂತ್ರಗಾರಿಕೆಯಿಂದ ಇದುವರೆಗೂ ಜಯಗಳಿಸುತ್ತಿದ್ದ ಕೆ.ಎಚ್.ಮುನಿಯಪ್ಪ ಅವರಿಗೀಗ ಸೋಲುವ ಭೀತಿ ಬಂದಿದೆ ಹಾಗಾಗಿ ಇತರ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೆ.ಎಚ್.ಮುನಿಯಪ್ಪ ಅವರ ಕುತಂತ್ರದಿಂದ ಕೋಲಾರ ಲೋಕಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು ಬಲಿಪಶುಗಳಾಗಿದ್ದಾರೆ. ನಾನೂ ಸೇರಿದಂತೆ ಚಿಂತಾಮಣಿಯ ಸುಧಾಕರ್, ಕೋಲಾರದ ಕೆ.ಶ್ರೀನಿವಾಸಗೌಡ ಕಾಂಗ್ರೆಸ್ ಪಕ್ಷವನ್ನು ತೊರೆಯಲು ಕೆ.ಎಚ್.ಮುನಿಯಪ್ಪ ಅವರ ಕುತಂತ್ರ ರಾಜಕಾರಣ ಕಾರಣವಾಗಿದೆ. ಇದೀಗ ತಾನು ರಾಜಕೀಯವಾಗಿ ಬೆಳೆಯಲು ಬುನಾದಿ ಹಾಕಿಕೊಟ್ಟಂಥಹ ಶಿಡ್ಲಘಟ್ಟದ ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊರಟಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಆರು ಬಾರಿಯಿಂದ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡುತ್ತಾ ಬಂದಿದ್ದರೂ ಈ ಕ್ಷೇತ್ರಕ್ಕೆ ಯಾವ ಶಾಶ್ವತ ಕೊಡುಗೆಯನ್ನೂ ನೀಡಿಲ್ಲ. ಅವರ ಕೊಡುಗೆಯೇನಿದ್ದರೂ ಪಕ್ಷದಲ್ಲಿ ಬೆಳೆಯುವವರನ್ನು ಮೂಲೆಗುಂಪು ಮಾಡುವುದಾಗಿದೆ. ಅವರ ವರ್ಷಾನುಗಟ್ಟಲೆಯ ತಂತ್ರಗಾರಿಕೆಯು ಜನರಿಗೆ ಮನವರಿಕೆಯಾಗಿದೆ. ನರೇಂದ್ರ ಮೋದಿಯವರ ಅಲೆಯಲ್ಲಿ ಈ ಬಾರಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಜನರು ಕೆ.ಎಚ್.ಮುನಿಯಪ್ಪ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೀರಯ್ಯನವರು ಮೊದಲು ಮುನಿಸಿಕೊಂಡಿದ್ದು ನಿಜವೇ ಆದರೂ ನಮಗೆಲ್ಲಾ ಪಕ್ಷ ಹಾಗೂ ಅದರ ಸಿದ್ದಾಂತ ದೊಡ್ಡದೆಂದು ಈಗಾಗಲೇ ಪತ್ರಿಕಾ ಹೇಳಿಕೆಯನ್ನು ಅವರು ನೀಡಿದ್ದು, ನಾವೆಲ್ಲಾ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಾಗಿ ನುಡಿದರು.
ನರೇಂದ್ರಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಪ್ರಗತಿಯತ್ತ ಸಾಗಬೇಕೆಂಬ ಆಶಯದಿಂದ ಜನರು ಆಶೀರ್ವದಿಸುತ್ತಿದ್ದಾರೆಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರು ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮತಯಾಚಿಸಿದರು.
ಬಿ.ಜೆ.ಪಿ ಮುಖಂಡರಾದ ಕೃಷ್ಣಾರೆಡ್ಡಿ, ಸುರೇಂದ್ರಗೌಡ, ಶಿವಕುಮಾರಗೌಡ, ಸದಾಶಿವ, ಲೋಕೇಶ್ಗೌಡ, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ರಮೇಶ್ಬಾಯಿರಿ, ಕೆಂಪರೆಡ್ಡಿ, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಲಾರಿ ಪೊಲೀಸರ ವಶ
ನಿಷೇಧಿತ ಕ್ಯಾಟ್ ಫಿಶ್ ಅಥವಾ ಮಾರ್ವೆ ಮೀನನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಶಿಡ್ಲಘಟ್ಟದ ಚೆಕ್ಪೋಸ್ಟ್ನಲ್ಲಿ ಪೊಲೀಸರು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ಇಡೀ ಲಾರಿಯನ್ನೇ ಪ್ಲಾಸ್ಟಿಕ್ ಶೀಟ್ ಬಳಸಿ ತೊಟ್ಟಿಯಂತೆ ಮಾಡಿ ಅದರ ತುಂಬಾ ನೀರು ತುಂಬಿಸಿ ಅದರಲ್ಲಿ ಕ್ಯಾಟ್ ಫಿಶ್ ತುಂಬಿಸಿ ಸಾಗಾಣಿಕೆ ಮಾಡುತ್ತಿದ್ದುದನ್ನು ಚುನಾವಣಾ ಪ್ರಯುಕ್ತ ಮಾಡಿರುವ ಚೆಕ್ಪೋಸ್ಟ್ನಲ್ಲಿದ್ದ ಪೊಲೀಸರು ಹಿಡಿದಿದ್ದಾರೆ. ಮಧ್ಯಪ್ರದೇಶದ ರಿಜಿಸ್ಟ್ರೇಶನ್ ಇರುವ ಲಾರಿಯಲ್ಲಿ ತಾಲ್ಲೂಕಿನ ಕ್ಯಾಟ್ ಫಿಷ್ ಸಾಕಾಣಿಕೆ ತೊಟ್ಟಿಯಿಂದ ಮೀನುಗಳನ್ನು ಬಾಂಬೆಗೆ ಸಾಗಿಸುತ್ತಿರುವುದಾಗಿ ಲಾರಿ ಚಾಲಕ ಅವತಾರ್ ಸಿಂಗ್ ತಿಳಿಸಿದ್ದು, ಇದನ್ನು ಖರೀದಿಸಿದವರು ಯಲಹಂಕದ ರಜಾಕ್ಪಾಳ್ಯದ ನಿವಾಸಿ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನು ತುಂಬಿರುವ ಲಾರಿಯನ್ನು ಪೊಲೀಸರು ತಹಶೀಲ್ದಾರ್ ಅವರ ವಶಕ್ಕೆ ಒಪ್ಪಿಸಿದ್ದು, ಅವರು ಮೀನುಗಾರಿಕೆ ಇಲಾಖೆಗೆ ನೀಡಿದರು. ಮೀನುಗಾರಿಕೆ ಇಲಾಖೆಯವರು ದೊಡ್ಡ ಗುಂಡಿ ತೋಡಿ ಅದರಲ್ಲಿ ಮೀನುಗಳನ್ನು ಹಾಕಿ ಮುಚ್ಚುವ ಮೂಲಕ ನಾಶಪಡಿಸುವುದಾಗಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಹಲವೆಡೆ ನಿಷೇಧಿತ ಕ್ಯಾಟ್ ಫಿಶ್ ಅಥವಾ ಮಾರ್ವೆ ಮೀನನ್ನು ಸಾಕುತ್ತಿರುವ ಬಗ್ಗೆ ಮಾಹಿತಿಯಿದ್ದರೂ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದ ಕಾರಣ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣೆ ಇಲ್ಲದಿದ್ದಲ್ಲಿ ಇದನ್ನು ಹಿಡಿಯುತ್ತಿರಲಿಲ್ಲ ಮತ್ತು ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಸುಕಿನ ಗುದ್ದಾಟ ಬಹಿರಂಗ
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತ್ತು ಶಿಡ್ಲಘಟ್ಟ ಮಾಜಿ ಶಾಸಕ ವಿ.ಮುನಿಯಪ್ಪ ನಡುವಿನ ಮುಸುಕಿನ ಗುದ್ದಾಟ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಹಿರಂಗಗೊಂಡು ಚರ್ಚೆಗೆ ಗ್ರಾಸವಾಯಿತು.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿ.ಮುನಿಯಪ್ಪ ಅವರಿಗೆ ಕೆ.ಎಚ್.ಮುನಿಯಪ್ಪ, ಅವರ ಕುಟುಂಬದವರಿಂದ ಹಾಗೂ ಬೆಂಬಲಿಗರಿಂದ ಮತದಾರರಲ್ಲಿ ವಿ.ಮುನಿಯಪ್ಪ ಅವರ ವಿರುದ್ಧ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ಬಿತ್ತಿ ಸೋಲಲು ಕಾರಣರಾದರೆಂದು ಕಳೆದೊಂದು ವರ್ಷದಿಂದಲೂ ಕಾರ್ಯಕರ್ತರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಸಂಗತಿ ಹಾಗೂ ಇವರ ನಡುವಿನ ಮನಸ್ತಾಪ ಇಂದಿನ ಸಭೆಯಲ್ಲಿ ಕಾರ್ಯಕರ್ತರ ಮುಂದೆ ಸ್ಪೋಟಗೊಂಡಿತು.
ಪಟ್ಟಣದ ಕಾಂಗ್ರೆಸ್ ಭವನದ ಮುಂದೆ ಬುಧವಾರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಬಂದಿದ್ದ ಸಚಿವ ರೋಷನ್ ಬೇಗ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಹಾಗೂ ನೆರೆದಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದ ಸಭೆಯಲ್ಲಿ ಮಾತನಾಡಿದ ಕೆ.ಎಚ್.ಮುನಿಯಪ್ಪ, ‘ವಿ.ಮುನಿಯಪ್ಪ ಅವರಿಗೆ ನಮ್ಮ ಕಡೆಯಿಂದ ದ್ರೋಹವಾಗಿಲ್ಲ. ಅವರು ಹೇಳಿದ ಎಲ್ಲಾ ಕೆಲಸಗಳನ್ನೂ ಮಾಡಿಕೊಡುತ್ತಾ ಬಂದಿದ್ದೇನೆ. ಇವರಿಗೆ ನಾನು ದ್ರೋಹ ಬಗೆದಿಲ್ಲವೆಂದು ಯಾವ ದೇವಸ್ಥಾನದಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ. ಖುರಾನ್ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಭಾವೋದ್ರೇಕದಿಂದ ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರೊಂದಿಗೆ ಸೇರಿ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ಲೋಕಸಭಾ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಿ.ಮುನಿಯಪ್ಪ ಅವರಿಗೆ ಸೂಕ್ತ ಸ್ಥಾನಮಾನ ಕೊಡಿಸುವುದಾಗಿ ತಿಳಿಸಿದರು.
‘ದೇವರ ಬಗ್ಗೆ ನಂಬಿಕೆಗಿಂತ ಕಳೆದ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಯಾರು ಯಾವ ರೀತಿ ನಡೆದುಕೊಂಡರೆಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆ.ಎಚ್.ಮುನಿಯಪ್ಪ ಅವರು ರಾಜಕೀಯ ಪ್ರವೇಶಿಸಿದಾಗ ಇದ್ದ ಪರಿಸ್ಥಿತಿಯೇ ಬೇರೆ. ಈಗ ಅವರು ನನ್ನಂಥ ನೂರು ಜನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದಾರೆ. ಆದರೂ ರಾಜಕೀಯವಾಗಿ ನನಗೆ ಇದುವರೆಗೂ ಅವರಿಂದ ಸಹಾಯವಾಗಿಲ್ಲ. ನಾನು ಶಾಸಕನಾಗಿದ್ದಾಗ ಕೆ.ಎಚ್.ಮುನಿಯಪ್ಪ ಅವರು ತಮ್ಮ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡವು. ಆದರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರವಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪರವಾಗಿ ಮತಯಾಚಿಸುತ್ತೇನೆ’ ಎಂದು ಮಾಜಿ ಶಾಸಕ ವಿ.ಮುನಿಯಪ್ಪ ಮಾರ್ಮಿಕವಾಗಿ ಕೆ.ಎಚ್.ಮುನಿಯಪ್ಪ ಅವರಿಗೆ ತಿಳಿಸಿದರು.
ಕಾರ್ಯಕರ್ತರ ಸಭೆಯ ಮುನ್ನ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತ್ತು ಮುಖಂಡರು ಪಟ್ಟಣದ ಗಾರ್ಡನ್ ರಸ್ತೆಯಲ್ಲಿರುವ ಸೈಯದ್ ಸರ್ಮಸ್ತ್ ಹುಸೇನಿ ಶಾವಾಲಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವ ರೋಷನ್ ಬೇಗ್, ಶಾಸಕರಾದ ಡಾ.ಸುಧಾಕರ್, ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಹನುಮಂತಯ್ಯ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿ ಕೆ.ಎಚ್.ಮುನಿಯಪ್ಪ ಪರವಾಗಿ ಮತಯಾಚಿಸಿದರು.
ಕಾಂಗ್ರೆಸ್ ಮುಖಂಡರಾದ ಮುನಿಕೃಷ್ಣಪ್ಪ, ಎಂ.ಶಶಿಧರ್, ಎಸ್.ಎಂ.ನಾರಾಯಣಸ್ವಾಮಿ, ಗುಡಿಯಪ್ಪ, ಬಿಸೇಗೌಡ, ಮೌಲಾ, ಸುಬ್ರಮಣಿ, ಎಚ್.ಎಂ.ಮುನಿಯಪ್ಪ, ತಮ್ಮಣ್ಣ, ಮುನೇಗೌಡ, ಸತೀಶ್ ಮತ್ತಿತರರು ಹಾಜರಿದ್ದರು.
ತಲದುಮ್ಮನಹಳ್ಳಿ ಗ್ರಾಮದಲ್ಲಿ ಚುನಾವಣೆ ಭಹಿಷ್ಕಾರ
ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಅಂತರಜಲ ಕುಸಿದಿದ್ದು. ಕುಡಿಯಲು, ಕೃಷಿ ಮಾಡಲು ನೀರಿಲ್ಲದೆ ಹಾಹಾಕಾರ ಎದ್ದಿದೆ. ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ನಾವು ಇರುವ ಊರನ್ನು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ನಾವು ಕೃಷಿ ಮಾಡಿಕೊಂಡು ಸ್ವಾಭಿಮಾನಿಗಳಾಗಿ ಬದುಕಲು ನಮಗೆ ಶಾಶ್ವತ ನೀರು ಬೇಕೇಬೇಕು. ಆದರೆ ನಮ್ಮನ್ನು ಆಳುವ ಸರ್ಕಾರಗಳು ಕಳೆದ ಮೂವತ್ತು ವರ್ಷಗಳಿಂದ ಆಶ್ವಾಸನೆಗಳನ್ನಷ್ಟೇ ನೀಡುತ್ತಾ ಬಂದಿದ್ದಾರೆ. ಇನ್ನು ನಮಗೆ ತಾಳ್ಮೆ ಇಲ್ಲ. ಇಡೀ ಕ್ಷೇತ್ರದ ಮತದಾರ ಬಂಧುಗಳು ಮತದಾನ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡಿದ್ದೇ ಆದಲ್ಲಿ ನಮ್ಮ ಜನಪ್ರತಿನಿಧಿಗಳಿಗೆ ಬುದ್ಧಿ ಬರುತ್ತದೆ. ಶಾಶ್ವತ ನೀರಾವರಿ ಯೋಜನೆ ಜಾರಿಯಾಗುತ್ತದೆ ಎಂದು ತಲದುಮ್ಮನಹಳ್ಳಿಯ ಶಾಶ್ವತ ನೀರಾವರಿ ಹೋರಾಟಗಾರರು ಕರಪತ್ರದ ಮೂಲಕ ಜನರಲ್ಲಿ ಮನವರಿಕೆ ಮಾಡುತ್ತಿದ್ದರು.
‘ಲೋಕಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೇ, ಎಲ್ಲಾ ಪಕ್ಷಗಳ ಮುಖಂಡರೇ, ಬಯಲುಸೀಮೆಯ ಪ್ರದೇಶಕ್ಕೆ ಪರಮಶಿವಯ್ಯನವರ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡದ ಹೊರತು ನಮ್ಮೂರಿನ ಪ್ರಜ್ಞಾವಂತ ಮತದಾರರಲ್ಲಿ ಮತಯಾಚಿಸುವ ಹಕ್ಕು ನಿಮಗಿರುವುದಿಲ್ಲ. ನಾವು ನಿಮಗೆ ಮತಹಾಕುವುದಿಲ್ಲ’ ಎಂದು ತಲದುಮ್ಮನಹಳ್ಳಿ ಗ್ರಾಮಸ್ಥರು ಬ್ಯಾನರನ್ನು ಮತಯಾಚಿಸಲು ಬರುವವರ ಮುಖಕ್ಕೆ ರಾಚುವಂತೆ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಕಟ್ಟಿದ್ದರು.
ತಲದುಮ್ಮನಹಳ್ಳಿ ಗ್ರಾಮಸ್ಥರ ಮತದಾನದ ಬಹಿಷ್ಕಾರದ ವಿಷಯ ತಿಳಿದು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಹಾಯಕ ಚುನಾವಣಾ ಅಧಿಕಾರಿ ಯೋಗೇಶ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಗ್ರಾಮಸ್ಥರ ಉದ್ದೇಶ ಹಾಗೂ ನೀರಿಗಾಗಿನ ಹೋರಾಟದ ಬಗ್ಗೆ ಕೇಳಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳು ಸೂಕ್ತರಲ್ಲವೆಂದು ಅನ್ನಿಸಿದಲ್ಲಿ ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಇಚ್ಛೆಯನ್ನು ಅಭಿವ್ಯಕ್ತಿಸಬಹುದು. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಚುನಾವಣೆಯನ್ನು ಬಹಿಷ್ಕರಿಸುವುದು ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ’ ಎಂದು ಹೇಳಿ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು.
ಈ ಬಾರಿ ಲೋಕಸಭೆಗೆ ನಿಂತ ಎಲ್ಲಾ ಅಭ್ಯರ್ಥಿಗಳನ್ನೂ ತಿರಸ್ಕರಿಸುತ್ತೇವೆ. ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರ ಮೂಲಕ ನಾವು ಶಾಶ್ವತ ನೀರಾವರಿಗಾಗಿ ಒತ್ತಾಯಿಸುತ್ತೇವೆ. ನಮ್ಮ ಗ್ರಾಮದಿಂದಲೇ ಪ್ರಾರಂಭವಾಗಲಿರುವ ಈ ಹೋರಾಟ ಬರಪೀಡಿತ ಜಿಲ್ಲೆಯಾದ್ಯಂತ ಹಬ್ಬಿದಲ್ಲಿ ಶಾಶ್ವತ ನೀರಾವರಿಗಾಗಿ ಹೋರಾಟ ಬಲಗೊಳ್ಳುತ್ತದೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯಾಗುತ್ತದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಭಕ್ತರಹಳ್ಳಿ ಬೈರೇಗೌಡ, ನಂಜಪ್ಪ, ತಲದುಮ್ಮನಹಳ್ಳಿ ಗ್ರಾಮಸ್ಥರಾದ ಟಿ.ಬಚ್ಚೇಗೌಡ, ಚನ್ನೇಗೌಡ, ಮುನೇಗೌಡ, ಕೆಂಪಣ್ಣ, ಸೌಮ್ಯ, ದೇವರಾಜ್, ಶ್ರೀನಿವಾಸ್, ಮಂಜುನಾಥ್, ಲಕ್ಷ್ಮೀನಾರಾಯಣ್, ಕುಮಾರ್, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ಯಾಸ್ ಸಿಲಿಂಡರನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ರಸ್ತೆ ತಡೆ
ಗ್ಯಾಸ್ ಸಿಲಿಂಡರನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಪಟ್ಟಣದಲ್ಲಿ ನೂರಾರು ಮಂದಿ ಖಾಲಿ ಗ್ಯಾಸ್ ಸಿಲಿಂಡರನ್ನು ರಸ್ತೆಯಲ್ಲಿಟ್ಟು ಭಾನುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ವಾರಕ್ಕೆರಡು ದಿನ, ಗುರುವಾರ ಮತ್ತು ಭಾನುವಾರ ಸಿಲಿಂಡರ್ ವಿತರಿಸುತ್ತಾರೆ. ಮೊನ್ನೆ ಗುರುವಾರ ಕೊಡದೆ ವಾಪಸ್ ಕಳುಹಿಸಿದರು. ಗ್ರಾಮಾಂತರ ಪ್ರದೇಶಗಳಿಂದ ಖಾಲಿ ಸಿಲಿಂಡರ್ ಹೊತ್ತು ತರುವ ನಾವು ಬೆಳಿಗ್ಗೆ ಐದು ಗಂಟೆಯಿಂದ ಕಾಯುತ್ತಿದ್ದೇವೆ. ಈಗ ನೋಡಿದರೆ ಸಿಲಿಂಡರ್ ಇಲ್ಲವೆನ್ನುತ್ತಿದ್ದಾರೆ. ಹಣ ಪಾವತಿಸಿಕೊಂಡು ರಸೀತಿ ನೀಡಿ ಗ್ರಾಹಕರನ್ನು ಶೊಷಣೆ ಮಾಡುತ್ತಿದ್ದಾರೆಂದು ಜನರು ಆರೋಪಿಸಿದರು.
ಕಾನೂನಿನನ್ವಯ ಗ್ರಾಹಕರ ಮನೆಗಳಿಗೆ ಸಿಲಿಂಡರ್ ತಲುಪಿಸಬೇಕು. ಆದರೆ ಇವರು ಬಯಲಲ್ಲಿ ಬಿಸಿಲಿನಲ್ಲಿ ಗ್ರಾಹಕರನ್ನು ನಿಲ್ಲಿಸಿ ಕಾಯಿಸುತ್ತಾರೆ. ವಿತರಣಾ ಕೇಂದ್ರವು ಒಂದೇ ಇರುವುದರಿಂದ ಗ್ರಾಹಕರಿಗೆ ಸರಿಯಾದ ಸೇವೆಯನ್ನು ಸಲ್ಲಿಸುತ್ತಿಲ್ಲ. ಗ್ರಾಹಕರು ಹೆಚ್ಚಾಗಿರುವುದರಿಂದ ವಿತರಣಾ ಕೇಂದ್ರಗಳನ್ನು ಹೆಚ್ಚಿಸಬೇಕು. ಖಾಲಿ ಸಿಲಿಂಡರ್ ಹೊತ್ತು ಬೆಳಿಗ್ಗೆಯಿಂದ ಕಾಯುತ್ತಿರುವ ನಮಗೆ ವಿತರಕರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಗ್ರಾಹಕರು ಪ್ರತಿಭಟಿಸಿದರು.
ಖಾಲಿ ಸಿಲಿಂಡರುಗಳನ್ನು ಹೊತ್ತು ತಂದ ಗ್ರಾಹಕರು ಪುರಪೋಲಿಸ್ ಠಾಣೆಯ ಮುಂದೆ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಾಲ್ಲೂಕು ಕಚೇರಿಯ ಬಳಿ ತೆರಳಿ ಅಲ್ಲಿಯೂ ಪ್ರತಿಭಟಿಸಿದರು.
ವಿತರಕರ ಪರವಾಗಿ ಬಂದ ಮುರಳಿ ಎಂಬುವರು ಲಾರಿ ಬರದಿರುವುದರಿಂದ ಗ್ಯಾಸ್ ಸಿಲಿಂಡರ್ ವಿತರಿಸಲಾಗಿಲ್ಲ ಎಂದು ಲಾರಿಗೆ ಸಂಬಂಧಿಸಿದ ಹಾಗೂ ಸಿಲಿಂಡರಿಗೆ ಸಂಬಂಧಿಸಿದ ಹಣ ಪಾವತಿಸಿರುವ ದಾಖಲೆಗಳನ್ನು ತೋರಿಸಿ ಗ್ರಾಹಕರನ್ನು ಸಮಾಧಾನಗೊಳಿಸಿದರು.
ಚಿಕ್ಕದಾಸೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ೪೧ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವನ್ನು ಶನಿವಾರ ಭಕ್ತಿಭಾವದಿಂದ ಆಚರಿಸಲಾಯಿತು. ಚಿಕ್ಕದಾಸೇನಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಕ್ತರು ಮಂಡಲಪೂಜೆಯಲ್ಲಿ ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕದಾಸೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ದಾರ ಮಾಡಿದ ೪೧ನೇ ದಿನವಾದ ಶನಿವಾರ ದೇವಾಲಯದಲ್ಲಿ ಮಂಡಲ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿನಿಂದಲೇ ನಾನಾ ರೀತಿಯ ಹೋಮ, ಹವನಗಳೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಹಾಗೂ ಗ್ರಾಮಸ್ಥರಿಗೆ ಯಾವುದೇ ಅನಿಷ್ಠಗಳು ಕಾಡದಂತೆ ಮಂಡಲ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.
ಚಿಕ್ಕದಾಸೇನಹಳ್ಳಿ, ಮಾರಪ್ಪನಹಳ್ಳಿ, ಬೀರಪ್ಪನಹಳ್ಳಿ, ಬಸವನಪರ್ತಿ ಮುಂತಾದ ಗ್ರಾಮಗಳಿಂದ ನೂರಾರು ಮಹಿಳೆಯರು ತಂಬಿಟ್ಟಿನ ದೀಪಗಳನ್ನು ತಂದು ದೇವರಿಗೆ ಬೆಳಗಿದರಲ್ಲದೆ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಂತರ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಚಿಕ್ಕದಾಸೇನಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಪುರಸಭೆಯ ನೂತನ ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ರಮೇಶ್
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ 17ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಷ್ಠರಿ ತನ್ವೀರ್ ಅಧ್ಯಕ್ಷೆಯಾಗಿ ಮತ್ತು 8ನೇ ವಾರ್ಡ್ನ ಜೆಡಿಎಸ್ ಸದಸ್ಯೆ ಸುಮಿತ್ರಾ ರಮೇಶ್ ಉಪಾಧ್ಯಕ್ಷೆಯಾಗಿ ಆಯೆ್ಕಯಾದರು. ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿತ್ತು.
ಪರಿಶಿಷ್ಠ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್ನ ಸುಮಿತ್ರಾ ರಮೇಶ್ ಬಹುಮತದ ಕೊರತೆಯಿದ್ದರೂ ಉಪಾಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿತ್ತು. 27 ಮಂದಿ ಸದಸ್ಯರಿರುವ ಪುರಸಭೆಯಲ್ಲಿ ಕಾಂಗ್ರೆಸ್–14, ಜೆಡಿಎಸ್–11, ಬಿಜೆಪಿ –1 ಮತ್ತು ಪಕ್ಷೇತರ –1 ಸ್ಥಾನವಿದೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್ನಿಂದ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಮುಷ್ಠರಿ ತನ್ವೀರ್ ಮತ್ತು ಜೆಡಿಎಸ್ನ ಪ್ರಭಾವತಿ ಸುರೇಶ್ ಸ್ಪರ್ಧಿಸಿದರು. ಮುಷ್ಠರಿ ತನ್ವೀರ್ 15 ಮತ ಗಳಿಸಿ ವಿಜೇತರಾದರೆ, ಪ್ರಭಾವತಿ ಸುರೇಶ್ 14 ಮತ ಪಡೆದು ಪರಾಭವಗೊಂಡರು. ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ಮಹೇಶ್ ಅವರನ್ನು ಅಭಿನಂದಿಸಲಾಯಿತು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಶಿರಸ್ತೆದಾರ್ ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.

