ಮಿಟ್ಟೇಮರಿ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ತಾಲ್ಲೂಕಿನ ಸಾದಲಿ ಮತ್ತು ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗಡಿಮಿಂಚೇನಹಳ್ಳಿ, ಸೊಣ್ಣಗಾನಹಳ್ಳಿ, ಎಸ್.ವೆಂಕಟಾಪುರ, ನಲ್ಲಪನಹಳ್ಳಿ, ಮಿಟ್ಟೇಮರಿ, ಎಸ್.ದೇವಗಾನಹಳ್ಳಿ, ಈ ತಿಮ್ಮಸಂದ್ರ, ಕೋರ್ಲಪರ್ತಿ, ಆನೇಮಡುಗು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ಬೈರಗಾನಹಳ್ಳಿ, ತಲಕಾಯಲಬೆಟ್ಟ, ಬೈಯಪ್ಪನಹಳ್ಳಿ, ದಿಬ್ಬೂರಹಳ್ಳಿ, ದ್ಯಾವಪ್ಪನಗುಡಿ, ಸಾದಲಿ, ದ್ಯಾವರಹಳ್ಳಿ, ರಾಯಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಇದೇ ಜನವರಿ 22 ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ನಾಗರಿಕರು ಸಹಕರಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಬೆಸ್ಕಾಂ ಇಲಾಖೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಪೌರ ನೌಕರರ ಸೇವಾ ಸಂಘದ ಸದಸ್ಯರ ಪ್ರತಿಭಟನೆ
ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್ ಕುಮಾರ್ ಮೇಲೆ ಪುರಸಭೆ ಸದಸ್ಯ ಆನಂದ್ ಟೈಗರ್ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿ ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿಯನ್ನು ಗುರುವಾರ ಸಲ್ಲಿಸಿದರು.
ನಗರಸಭೆಯ ನಿಷ್ಠಾವಂತ ಅಧಿಕಾರಿ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕಾನೂನಿನ ರೀತಿ ಶಿಕ್ಷೆ ಆಗಬೇಕು. ಅಲ್ಲದೆ ಆನಂದ್ ಟೈಗರ್ ಕಾನೂನು ಬಾಹಿರ ಬಿಲ್ಲುಗಳಿಗೆ ಸಹಿ ಹಾಕಲು ಒತ್ತಡ ಹಾಕುತ್ತಿದ್ದ. ದೌರ್ಜನ್ಯದಿಂದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ. ಐ.ಪಿ.ಸಿ. ಸೆಕ್ಷನ್ 307, 355, 341, 504, 506 ಮತ್ತು 332 ಪ್ರಕಾರ ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತ್ಯಾಗರಾಜು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಜಿಲ್ಲಾಧ್ಯಕ್ಷ ಮುರಳಿ, ತಾಲ್ಲೂಕು ಶಾಖೆ ಅಧ್ಯಕ್ಷ ಮಂಜು ಕುಮಾರ್, ಗೌರವಾಧ್ಯಕ್ಷ ಸಿ.ಎನ್ ವೆಂಕಟೇಶ್, ಉಪಾಧ್ಯಕ್ಷ ಕುಮಾರ್, ನಗರ ಸಭೆ ಸಿಬ್ಬಂದಿ ಎನ್. ನಾಗರಾಜ್, ಶಿವಶಂಕರ್, ಮಂಜುನಾಥ್, ಮುನಿಕೃಷ್ಣ, ವಿ.ಆರ್ ವೆಂಕಟೇಶ್, ಅಮರ್ ಹಾಜರಿದ್ದರು
ಶಿವಕುಮಾರ ಸ್ವಾಮೀಜಿಯವರ 2 ನೇ ವರ್ಷದ ಪುಣ್ಯಸ್ಮರಣೆ
ನಗರದ ಶ್ರೀ ನಗರೇಶ್ವರ ದೇವಾಲಯದ ಮುಂಭಾಗದಲ್ಲಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಗುರುವಾರ ಶಿವಕುಮಾರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ದಾಸೋಹ ಹಾಗೂ ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಉಪಾಧ್ಯಕ್ಷ ಎಸ್.ನಾಗರಾಜ್ ಮಾತನಾಡಿದರು.
ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆಯಲ್ಲಿದೆ. ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಅದು ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ. ಇದಕ್ಕೆ ಮೂಲರಾದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಮಾಡುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದು ಅವರು ತಿಳಿಸಿದರು.
ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಎಲ್ಲರೂ ತಮ್ಮ ಕೈಲಾದಷ್ಟು ನಿಧಿ ಸಮರ್ಪಿಸಬೇಕೆಂದು ವಿನಂತಿಸಿದರು.
ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಅಧ್ಯಕ್ಷ ಕೆ. ಶಿವಶಂಕರ್, ವಿನಾಯಕ, ಕೆ.ಸಿ.ಸುರೇಶ್ ಬಾಬು, ಮಲ್ಲಿಕಾರ್ಜುನ್, ದೇವರಾಜ್, ಮಂಜುನಾಥ್, ಮುಕೇಶ್, ನವೀನ್, ಮುರಳಿ ಹಾಜರಿದ್ದರು.
Sidlaghatta Cocoon Market-21/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 21/01/2021
CB Lots: 232
Qty: 11799 Kgs
Max: 406
Min: 200
Avg: 357
BV Lots: 06
Qty: 323 Kgs
Max: 435
Min: 390
Avg: 415
ಮೇಲೂರು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ಮೇಲೂರು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಗ್ರಾಮ ಪಂಚಾಯಿತಿ ಪಿಡಿಓ ಶಾರದ ಉದ್ಘಾಟಿಸಿದರು. ಯೋಜನಾಧಿಕಾರಿ ಪ್ರಕಾಶ್ಕುಮಾರ್, ಮೇಲ್ವಿಚಾರಕಿ ಅನಿತ ಹಾಜರಿದ್ದರು.
ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಸುಂಧರೆ ಇಕೋ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಕುಂತಲಮ್ಮ ಮಾತನಾಡಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವನ ಜೀವನ ನಿಸರ್ಗ ಸಹಜವಿರಬೇಕು ಹೊರತು ನಿಸರ್ಗದ ವಿರುದ್ಧ ಇರಬಾರದು ಎಂದು ಅವರು ತಿಳಿಸಿದರು.
ಬದುಕಿನ ಅವಿಭಾಜ್ಯ ಅಂಗವಾಗಿರುವ ಪರಿಸರವನ್ನು ಉಳಿಸುವ ಕಾರ್ಯ ಸಾಮಾಜಿಕ ಜವಾಬ್ದಾರಿಯಾಗಬೇಕಿದೆ. ನೆಲ-ಜಲ, ಅರಣ್ಯ, ವನ್ಯ ಜೀವಿಗಳು ಹಾಗೂ ಜೀವ ವೈವಿಧ್ಯಗಳೊಂದಿಗೆ ಪರಿಸರವನ್ನು ಸಂರಕ್ಷಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ. ಪರಿಸರದ ಮೇಲೆ ಮಾನವ ಎಸಗುತ್ತಿರುವ ಅಪಾಯವನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಪರಿಸರದ ಸಮಸ್ಯೆ ಎದುರಿಸಬೇಕಿದೆ. ಈ ದಿಸೆಯಲ್ಲಿ ನಾವು ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡದೆ ಪರಿಸರ ಸಂರಕ್ಷಿಸಬೇಕು ಎಂದರು.
ಒಣ ಕಸ, ಹಸಿ ಕಸ ಮತ್ತು ವಿಷಕಾರಿ ಕಸ ಎಂಬುದಾಗಿ ಮೂರು ರೀತಿಯಲ್ಲಿ ಕಸ ವಿಂಗಡಣೆ ಮಾಡುವುದನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು. ವಾಯುಮಾಲಿನ್ಯ ತಡೆಗಟ್ಟಲು ಗಿಡಗಳನ್ನು ನೆಡುವುದು, ವ್ಯರ್ಥ ನೀರನ್ನು ಗಿಡಗಳಿಗೆ ಹರಿಸುವುದು, ನೀರನ್ನು ಕಡಿಮೆ ಬಳಸುವುದು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು, ಪ್ಲಾಸ್ಟಿಕ್ ಬಳಸಬಾರದು ಎಂಬುದಾಗಿ ಮಕಳಿಗೆ ವಿವರಿಸಿದ ಶಿಕ್ಷಕರು, ಮಕ್ಕಳೊಂದಿಗೆ ಗಿಡಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಮೂಲಕ ಜಾಗೃತಿ ಮೂಡಿಸಿ, ಬಹುಮಾನಗಳನ್ನು ನೀಡಲಾಯಿತು.
ಶಿಕ್ಷಕಿಯರಾದ ಶೋಭಾ, ಅರುಣಾ, ಇಂದುಮತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮುನಿಕೃಷ್ಣಪ್ಪ ಹಾಜರಿದ್ದರು.
Sidlaghatta Cocoon Market-20/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 20/01/2021
CB Lots: 233
Qty: 12770 Kgs
Max: 400
Min: 200
Avg: 353
BV Lots: 3
Qty: 96 Kgs
Max: 402
Min: 390
Avg: 399
ಸುಗಟೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೌಶಲ್ಯ ತರಬೇತಿ ಕಾರ್ಯಾಗಾರ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್ ಬಹುಗುಣ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯಕೋಶ, ಯಲಹಂಕ ಅನಿಕೇತನ ಯುವಜನಸೇವಾಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವಸಪ್ತಾಹ ಉದ್ಘಾಟನೆ, ಕೌಶಲ್ಯ ತರಬೇತಿ ಕಾರ್ಯಾಗಾರ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾಗಿರುವ ಅರಿವನ್ನು ಜಾಗೃತಗೊಳಿಸಲು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣವು ಉತ್ತಮ ಮಾರ್ಗವಾಗಿದೆ. ಮಕ್ಕಳನ್ನು ಸರ್ವತೋಮುಖ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಸಾಧನೆ ಸುಲಭವಾಗುವುದು ಎಂದು ಅವರು ತಿಳಿಸಿದರು.
ಕೇವಲ ಔಪಚಾರಿಕ ಶಿಕ್ಷಣವಲ್ಲದೇ ಕರಕುಶಲ, ಕಲೆ, ನಾಟಕ, ಕ್ರೀಡೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ಹೆಚ್ಚೆಚ್ಚು ತೊಡಗಿಸುವ ಮೂಲಕ ಮಕ್ಕಳನ್ನು ವಿಶಾಲಮನೋಭಾವನೆಯತ್ತ ಕೊಂಡೊಯ್ಯಬೇಕಾದ ಜವಾಭ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಪರಿಸರಸಂರಕ್ಷಣೆ, ಮಾನವೀಯಸಂಬಂಧಗಳ ಬೆಳವಣಿಗೆ, ಉತ್ತಮ ಬದುಕಿಗೆ ಯುವಪೀಳಿಗೆಯನ್ನು ಸನ್ನದ್ಧಗೊಳಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕು. ಯುವಸಪ್ತಾಹದ ಅಂಗವಾಗಿ ಶ್ರಮದಾನಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಪ್ರಶಂಸಾಪತ್ರ, ಬಹುಮಾನಗಳನ್ನು ವಿತರಿಸಲಾಗುವುದು ಎಂದರು.
ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ರಾಜ್ಯಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಸ್ವಾಮಿವಿವೇಕಾನಂದರ ಆದರ್ಶಗಳು ಯುವಪೀಳಿಗೆಯಲ್ಲಿ ಆತ್ಮವಿಶ್ವಾಸ, ಸ್ಫೂರ್ತಿ, ಧೈರ್ಯ, ಸಾಹಸಪ್ರವೃತ್ತಿಗಳನ್ನು ಬಿತ್ತಬಲ್ಲವು. ಮಕ್ಕಳದಿಸೆಯಿಂದಲೇ ಪ್ರೀತಿ, ಸೇವಾಮನೋಭಾವನೆಗಳನ್ನು ಬೆಳೆಯುವಂತೆ ಮಾಡಿ, ನೈತಿಕ ಮೌಲ್ಯಗಳನ್ನಾಧರಿಸಿದ ಬದುಕು ಕಂಡುಕೊಳ್ಳಲು ಸಹಕಾರಿಯಾಗಲಿವೆ ಎಂದರು.
ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ಶಾಲಾಮಕ್ಕಳಿಗಾಗಿ ಕರಕುಶಲ ವಸ್ತುಗಳ ತಯಾರಿ ಕುರಿತು ತರಬೇತಿ ನೀಡಲಾಯಿತು. ಪ್ರಬಂಧ ರಚನೆ, ಚಿತ್ರರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಗೀತೆಗಳ ಗಾಯನ ನಡೆಯಿತು.

ಸ್ಪರ್ಧಾ ವಿಜೇತರು: ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎಸ್.ಕಾವ್ಯಾ-ದ್ವಿತೀಯ, ಆರ್.ದೀಪಿಕಾ-ತೃತೀಯ, ಚಿತ್ರರಚನೆ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎ.ವಿಕ್ರಂ-ದ್ವಿತೀಯ, ಎಸ್.ಪಿ.ಧನುಶ್ಗೌಡ-ತೃತೀಯ, ಕರಕುಶಲವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ಎಸ್.ಎಂ.ನಂದಿನಿ-ಪ್ರಥಮ, ಆರ್.ದೀಪಿಕಾ-ದ್ವಿತೀಯ, ಎಸ್.ಎನ್.ಅನುಷಾ-ತೃತೀಯ ಬಹುಮಾನ ಪಡೆದುಕೊಂಡರು.
ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ನಾರಾಯಣಸ್ವಾಮಿ, ಸದಸ್ಯೆ ನರಸಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂ.ನಾಗರಾಜು, ಮಾಜಿ ಸದಸ್ಯೆ ಎನ್.ಅಶ್ವತ್ಥಪ್ಪ, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್ಕುಮಾರ್, ಚಿಕ್ಕಮುನಿವೆಂಕಟಶೆಟ್ಟಿ, ಎನ್ಎಸ್ಎಸ್ ಸ್ವಯಂಸೇವಕ ಸಿ.ಪವನ್, ಎಸ್.ಎಂ.ಪವನ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ ಹಾಜರಿದ್ದರು.
ಮಹಾಯೋಗಿ ವೇಮನ ಜಯಂತಿ
ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು ಅಪೂರ್ವ ಸಮಾಜ ಸುಧಾರಕ ಎಂದು ಶಿರಸ್ತೆದಾರ್ ಮಂಜುನಾಥ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇಮನರ ಮಾತುಗಳು ಬರಿಯ ಮಾತುಗಳಲ್ಲ. ಅವುಗಳು ವೇದವೇ ಆಗಿವೆ. ನಮ್ಮ ಜನ ವೇಮನರ ಕುರಿತು, “ವೇದಾತೀತನು ವೇಮನು ಕಾಣಾ, ವೇಮನ ಮಾತದು ವೇದವು ಕಾಣಾ” ಎಂದು ಹಾಡಿದ್ದಾರೆ. ವೇಮನರ ಪದ್ಯಗಳು ಕನ್ನಡ, ತಮಿಳು, ಮಲೆಯಾಳಿ, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿ ವೇಮನರ ಸಾಹಿತ್ಯ ಈ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿರುವುದಲ್ಲದೆ, ವಿಶ್ವ- ಸಾಹಿತ್ಯಕ್ಕೂ ಭೂಷಣಪ್ರಾಯವಾಗಿದೆ. ವೇಮನರ ತತ್ತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು, ಶಾಂತಿ, ಸಮತೆ, ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ವೇಮನರ ಜಯಂತ್ಯುತ್ಸವವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.
ತಾಲ್ಲೂಕು ಕಚೇರಿ ಸಿಬ್ಬಂದಿ ಮಂಜುನಾಥ್, ಪ್ರಸಾದ್, ಲತಾ, ಶಿಕ್ಷಕ ನರಸಿಂಹರಾಜು ಹಾಜರಿದ್ದರು.
ತಾದೂರು ಗೇಟ್ ಬಳಿ ರಸ್ತೆ ಅಪಘಾತ; ಬಾಲಕ ಸಾವು
ಶಾಲೆಗೆ ಹೋಗಲು ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಾದೂರು ಗೇಟ್ ಬಳಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಬಸವಾಪಟ್ಟಣದ ಚೇತನ್ (13) ಮೃತ ದುರ್ದೈವಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿ ಓದುತ್ತಿರುವ ಚೇತನ್ ಎಂದಿನಂತೆ ಶಾಲೆಗೆ ಹೋಗಲು ತಾದೂರು ಗೇಟ್ ಬಳಿ ನಿಂತಿದ್ದಾಗ ಶಿಡ್ಲಘಟ್ಟದಿಂದ ಜಂಗಮಕೋಟೆ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನ (ಕೆಎ 53 – 4513) ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಟಾಟಾ ಏಸ್ ಚಾಲಕನ ಅತಿ ವೇಗವೇ ಕಾರಣವೆನ್ನಲಾಗಿದೆ. ಟಾಟಾ ಏಸ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Sidlaghatta Cocoon Market-19/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 19/01/2021
CB Lots: 293
Qty: 15138 Kgs
Max: 420
Min: 300
Avg: 374
BV Lots: 2
Qty: 117 Kgs
Max: 430
Min: 422
Avg: 424
ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಡ್ಲಘಟ್ಟ ಬಿ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ಮಾತನಾಡಿದರು.
ಸೇವೆಗೆ ಇನ್ನೊಂದು ಹೆಸರೇ ಶ್ರೀ ಕ್ಷೇತ್ರ ಧರ್ಮಸ್ಥಳ. ಅಂತಹ ಸಂಸ್ಥೆಯಲ್ಲಿ ಪದಾಧಿಕಾರಿಗಳಾದ ತಾವು ಇನ್ನಷ್ಟು ಸೇವಾ ಮನೋಭಾವನೆಯಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾಗಿ ಎಂದು ಅವರು ತಿಳಿಸಿದರು.
ಸ್ವಾವಲಂಬನೆಗೆ ಒತ್ತು ನೀಡುವ ವಿವಿಧ ತರಬೇತಿಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಯುವಕರು ಹಾಗೂ ಮಹಿಳೆಯರ ಆರ್ಥಿಕ ಸದೃಢತೆಗೆ ನೆರವಾಗಬೇಕು ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ 29 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 5 ಲಕ್ಷ ಸ್ವಸಹಾಯ ಸಂಘಗಳನ್ನು ರಚನೆ ಮಾಡಿ 45 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಇಷ್ಟು ದೊಡ್ಡ ಸಂಸ್ಥೆಯ ಆಧಾರ ಸ್ತಂಭಗಳು ಒಕ್ಕೂಟದ ಪದಾಧಿಕಾರಿಗಳು. ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ಅರಿತುಕೊಂಡಾಗ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಮೇಲ್ವಿಚಾರಕರಾದ ಜ್ಯೋತಿ, ಅನಿತಾ, ರಮೇಶ್ ಹಾಗೂ ವಲಯದ ಎಲ್ಲಾ ಸೇವಾಪ್ರತಿನಿಧಿಯವರು ಮತ್ತು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಕೋವಿಡ್ ಲಸಿಕೆ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಎಸಿಡಿಪಿಒ ಮಹೇಶ್ ಅವರಿಗೆ ಕೋವಿಡ್ ಲಸಿಕೆಯನ್ನು ಕೊಡಲಾಯಿತು. ಸಿಡಿಪಿಒ ನಾಗಮಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ರಮೇಶ್ ಹಾಜರಿದ್ದರು
ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ವಿಜೇತರಾದ ಶಿಡ್ಲಘಟ್ಟದ ಕ್ರೀಡಾಪಟುಗಳು
ನಗರದ ನೆಹರು ಕ್ರೀಡಾಂಗಣದಲ್ಲಿ ಯುವ ಮತ್ತು ಕ್ರೀಡಾ ಅಭಿವೃದ್ಧಿ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳು ಜನವರಿ 29, 30 ಮತ್ತು 31 ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸುವರು.
ವಿಜೇತ ಕ್ರೀಡಾಪಟುಗಳು : ಮೋಹಿತ್, ನಿಶ್ಚಿತ್, ಆರ್ಯ, ವಿಶ್ವಕ್ ಸೇನ್, ವಿ.ಎಸ್.ಹರಿಕೃಷ್ಣ, ಎನ್.ಎಂ.ಹಂಸಿಕಾ, ಸಾನ್ವಿ ಮತ್ತು ಶಶಾಂಕ್
ಈ ಆಯ್ಕೆ ಪ್ರಕ್ರಿಯೆಯಲ್ಲಿ ಯುವ ಮತ್ತು ಕ್ರೀಡಾ ಅಭಿವೃದ್ಧಿ ಅಸೋಸಿಯೇಷನ್ ಅದ್ಯಕ್ಷ ಎಂ.ಅರ್ಜುನ್ ನಾಯಕ, ಕಾರ್ಯದರ್ಶಿ ಎಂ.ಚಂದ್ರಶೇಖರ್, ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ಹಾಜರಿದ್ದರು.
Sidlaghatta Cocoon Market-18/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 18/01/2021
CB Lots: 335
Qty: 17528 Kgs
Max: 482
Min: 231
Avg: 369
BV Lots: 13
Qty: 758 Kgs
Max: 483
Min: 320
Avg: 362
10 ಲಕ್ಷ ಬೆಲೆ ಬಾಳುವ ನಕಲಿ ಮಧ್ಯ, ಮಧ್ಯಸಾರ ವಶ
ಶಿಡ್ಲಘಟ್ಟ ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮಧ್ಯ ತಯಾರಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ಸುಮಾರು 10 ಲಕ್ಷ ಬೆಲೆ ಬಾಳುವ ನಕಲಿ ಮಧ್ಯ, ಮಧ್ಯಸಾರ ಹಾಗು ಬಾಟಲಿ, ಮುಚ್ಚಳಗಳನ್ನು ವಶಪಡಿಸಿಕೊಂಡಿರುವ ಜೊತೆಗೆ ಆರೋಪಿ ಟಿ.ಎಂ.ಮಂಜುನಾಥ್ ನನ್ನು ಬಂದಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ೧೨೯೦ ಲೀ ಸ್ಪಿರಿಟ್ ಸೇರಿದಂತೆ ೬೨ ಲೀ ಬ್ಲೆಂಡ್, ೩೨ ಕೆಜಿ ಯಷ್ಟು ಕ್ಯಾಪ್, ಲೇಬಲ್ ಹಾಗು ತಯಾರಿಸಿಟ್ಟಿದ್ದ ೩೭.೮೦೦ ಲೀ ನಷ್ಟು ನಕಲಿ ಮಧ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇನ್ಸ್ಪೆಕ್ಟರ್ ವಿಶ್ವನಾಥಬಾಬು, ಫಿರೋಜ್ಖಾನ್, ಲಂಕೇ ಹನುಮಯ್ಯ, ಶಂಕರಪ್ರಸಾದ್, ಮಂಜುಳ, ಸಿಬ್ಬಂದಿಗಳಾದ ನಿತಿನ್, ರಾಘವೇಂದ್ರ, ಕರಿಲಿಂಗ, ಪ್ರಶಾಂತ್, ರಾಘವೇಂದ್ರ ಪಾಟೀಲ್ ಮತ್ತಿತರರು ಹಾಜರಿದ್ದರು.
Sidlaghatta Cocoon Market-17/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 17/01/2021
CB Lots: 346
Qty: 17086 Kgs
Max: 495
Min: 156
Avg: 363
BV Lots: 07
Qty: 377 Kgs
Max: 406
Min: 311
Avg: 377
ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ
ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರದ ಎಫ್-11 ರಾಯಪ್ಪನಹಳ್ಳಿ ಮತ್ತು ಎಫ್-13 ತಲಕಾಯಲಬೆಟ್ಟ ಮಾರ್ಗಗಳ ಎಲ್.ಟಿ ರೀಕಂಡೆಕ್ಟರಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಎಫ್-11 ರಾಯಪ್ಪನಹಳ್ಳಿ ಮತ್ತು ಎಫ್-13 ತಲಕಾಯಲಬೆಟ್ಟ ವಿದ್ಯುತ್ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕುದಪಕುಂಟೆ, ಆನೆಮಡಗು, ದಡಮಘಟ್ಟ, ರಾಯಪ್ಪನಹಳ್ಳಿ, ಎರ್ರಹಳ್ಳಿ, ದಿಬ್ಬೂರಹಳ್ಳಿ, ವೆಂಕಟಾಪುರ, ತಲಕಾಯಲಬೆಟ್ಟ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜನವರಿ 18 ರಿಂದ 20 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ನಾಗರಿಕರು ಸಹಕರಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಬೆಸ್ಕಾಂ ಇಲಾಖೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
Sidlaghatta Cocoon Market-16/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 16/01/2021
CB Lots: 331
Qty: 17047 Kgs
Max: 495
Min: 200
Avg: 364
BV Lots: 04
Qty: 260 Kgs
Max: 450
Min: 360
Avg: 380
ಸಂಕ್ರಾಂತಿ ಕವಿಗೋಷ್ಠಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಕಾರ್ಯಕ್ರಮ
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ ಮಾತನಾಡಿದರು.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಹಿರಿಯರ ಮಾತುಗಳನ್ನು ಆಚರಣೆಗೆ ತರದೇ ಇದೀಗ ಕೇವಲ ತೋರಿಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ರೈತರು ತಾವು ಬೆಳೆದ ಫಸಲನ್ನು ರಾಶಿ ಮಾಡಿ ಗೋವುಗಳಿಗೆ ಕಿಚ್ಚು ಹಾಯಿಸುವ ಸುಗ್ಗಿಯ ಹಬ್ಬವಿದು. ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದ ಸಂಕ್ರಾಂತಿಯ ಹಬ್ಬದ ಸಂಭ್ರಮ ಕೆಲವೆಡೆ ಕಣ್ಮರೆಯಾಗಿವೆ. ರೈತರು ಸಹ ವ್ಯವಸಾಯ ಮಾಡಲು ದನಕರುಗಳ ಬದಲಿಗೆ ಯಂತ್ರೋಪಕರಣಗಳ ಮೊರೆಹೋಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಮದರು.
ಶಿಕ್ಷಕ ವಿ.ಕೃಷ್ಣ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಿಶ್ವ ಯುವ ದಿನಾಚರಣೆ ಯನ್ನಾಗಿ ಆಚರಣೆ ಮಾಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ವೀರ ಸನ್ಯಾಸಿ ನರೇಂದ್ರರ ಆದರ್ಶಗಳು ಇಷ್ಟು ವರ್ಷಗಳ ಬಳಿಕವೂ ಪ್ರಸ್ತುತವಾಗಿದೆ ಎಂದರೆ ಅವರ ತಾಕತ್ತು ಎಂತದ್ದು ಎಂದು ಪ್ರತಿಯೊಬ್ಬರು ಮನಗಾಣಬೇಕಿದೆ. ಸದೃಢವಾದ ದೇಶ ಕಟ್ಟಲು ಬುದ್ಧಿಬಲದ ಜೊತೆಗೆ ಉದಾತ್ತವಾದ ಗುರಿ ಹಾಗೂ ಅದನ್ನು ಈಡೇರಿಸಲು ಬೇಕಾದ ಇಚ್ಛಾಶಕ್ತಿ ಯುವಕರಲ್ಲಿರಬೇಕು ಎಂದರು.
ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಸಂಕ್ರಾಂತಿಯ ಸೂಗಡು ಹಾಗೂ ಸ್ವಾಮಿವಿವೇಕಾನಂದರ ಬಗ್ಗೆ ಮಾತನಾಡಿದರು.
ದಾಸ ಸಾಹಿತ್ಯ ಪರಿಷತ್ತಿನ ಬಿ.ಪಿ.ರಾಘವೇಂದ್ರ, ಕವಿಗಳಾದ ಜಿ.ಎನ್.ಶಾಮಸುಂದರ, ಕೆ.ಮಂಜುನಾಥ್, ಟಿ.ಟಿ.ನರಸಿಂಹಪ್ಪ, ಮಂಜುನಾಥ್, ಸುಂದರಾಚಾರಿ, ನೂರುಲ್ಲ ಕವನ ವಾಚನ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ, ರೈತ ಮುಖಂಡರಾದ ಮುನಿನಂಜಪ್ಪ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ದೇವರಾಜು, ನಾಗರಾಜ್, ಸುಬ್ರಹ್ಮಣ್ಯ, ಶಿಕ್ಷಕರಾದ ಎನ್.ಮಾರುತಿ ಹಾಜರಿದ್ದರು.





















