ಶಿಡ್ಲಘಟ್ಟದಲ್ಲಿ ಗುರುವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ತಂಡದ ನೃತ್ಯ ಜನಮನಸೂರೆಗೊಂಡಿತು.
ಮಹಿಳಾ ಸಾಮರ್ಥ್ಯ
ಕನಕದಾಸರ ರಚನೆಗಳು ಸಂಗೀತದ ಮೂಲಕ ಕರ್ಣಾಮೃತ ಒದಗಿಸುತ್ತವೆ
ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಕನಕದಾಸರು ಹದಿನೈದು ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 529ನೇ ಜಯಂತಿ ಮಹೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು ಕನಕದಾಸರು. ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು. ಕನಕರು ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು. ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರು. ಕನಕದಾಸರು ರಚಿಸಿರುವ ನೂರಾರು ಕೀರ್ತನೆಗಳು ಮತ್ತು ಅವರ ಕಾವ್ಯಕೃತಿಗಳಾದ ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯಚರಿತ್ರೆ ಮತ್ತು ‘ಹರಿಭಕ್ತಿಸಾರ’ ಇವುಗಳು ಅಂದಿನಿಂದ ಇಂದಿನವರೆಗೆ ಜನಮಾನಸದಲ್ಲಿ ನಿರಂತರ ಗಂಗೆಯಾಗಿ ಹರಿದು ಬಂದಿದೆ. ಶ್ರೇಷ್ಠ ಭಕ್ತಪಂಥದ ಹಿರಿಮೆಯಲ್ಲಿ ಶಾಶ್ವತವಾಗಿ ನಿಲ್ಲುವಂತಹ ಕೀರ್ತನೆಗಳನ್ನು ನೀಡಿರುವ ಪೂಜ್ಯ ಕನಕದಾಸರು ನಮ್ಮ ಹೃದಯಗಳಲ್ಲೂ ಶಾಶ್ವತ ಸ್ಥಾನ ಪಡೆದವರಾಗಿದ್ದಾರೆ ಎಂದು ವಿವರಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕನಕದಾಸರು ಕನ್ನಡದಲ್ಲಿ ಸಾಹಿತ್ಯವನ್ನು ರಚಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ವರ್ಗರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದವರು ಎಂದು ಹೇಳಿದರು.
ಕುರುಬ ಸಮಾಜದ ಸೊಣ್ಣಪ್ಪ, ರಂಗಪ್ಪ, ಮುನಿಯಪ್ಪ, ಶ್ರೀರಾಮಪ್ಪ ಮುಂತಾದ ಹಿರಿಯರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಕನಕದಾಸರ ಜೀವನದ ಬಗ್ಗೆ ಮಾತನಾಡಿದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಶಿವಾನಿಯನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ ಓ.ಟಿ.ವೃತ್ತದಲ್ಲಿರುವ ಶ್ರೀ ಕನಕದಾಸರ ಭಜನೆ ಮಂದಿರದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಗಾರುಡಿ ಬೊಂಬೆ, ಡೊಳ್ಳುಕುಣಿತ, ವೀರಗಾಸೆ, ತಮಟೆ, ಶಾಲಾ ಮಕ್ಕಳ ವಾದ್ಯವೃಂದ ದೊಂದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕನಕದಾಸರ ಪ್ರತಿಕೃತಿಯಿರುವ ಟ್ರಾಕ್ಟರ್ಗಳನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ತೆಂಗಿನಕಾಯಿ ಪವಾಡವನ್ನೂ ನಡೆಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ವೆಂಕಟಸ್ವಾಮಿ, ಸಿಕಂದರ್, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು, ತಾಲ್ಲೂಕು ಕುರುಬರ ಸಂಘದ ಗೌರವಾಧ್ಯಕ್ಷ ಎಂ.ಗಣೇಶಪ್ಪ, ಅಧ್ಯಕ್ಷ ಕೆ.ಮಂಜುನಾಥ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜರಾವ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ರಾಮಚಂದ್ರಪ್ಪ, ತಾದೂರು ಮಂಜುನಾಥ್, ಮಂಜುಳಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮುಕ್ತಾಯಗೊಂಡ ಅನಿರ್ಧಿಷ್ಟಾವಧಿ ಧರಣಿ
ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಖಾತೆಗಳ ಬದಲಾವಣೆಗಾಗಿ ತಹಶೀಲ್ದಾರರು ಸೇರಿದಂತೆ ಕಚೇರಿಯ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿಗಳು ಲಂಚ ನೀಡದೇ ಖಾತೆಗಳನ್ನು ಬದಲಾವಣೆ ಮಾಡುತ್ತಿಲ್ಲ, ಎ.ಪಿ.ಎಂ.ಸಿ.ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ನವರ ಜೊತೆ ಶಾಮೀಲಾಗಿ ಮತದಾರರ ಸಂಖ್ಯೆಯನ್ನು ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಎಂ.ರಾಜಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಬುಧವಾರ ಮುಕ್ತಾಯವಾಗಿದೆ.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಶಾಸಕ ಎಂ.ರಾಜಣ್ಣ ನೇತೃತ್ವದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಕಂದಾಯ ಇಲಾಖೆಯ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಭ್ರಮಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಅವರು ಮತದಾರರ ಪಟ್ಟಿಯಲ್ಲಿ ಜಮೀನುಗಳು ಇಲ್ಲದಿರುವವರನ್ನು ಸೇರಿಸುವ ಮೂಲಕ ಕಾಂಗ್ರೆಸ್ನವರ ಕೈ ಗೊಂಬೆಗಳಂತೆ ವರ್ತನೆ ಮಾಡಿದ್ದಾರೆ. ಇವರಿಗೆ ತಹಶೀಲ್ದಾರ್ ಕೆ.ಎಂ.ಮನೋರಮಾ ಸಹಕಾರ ನೀಡಿದ್ದಾರೆ. ಪಡಿತರ ಚೀಟಿಗಳನ್ನು ನೀಡಲು ೨೦೦೦ ರೂಪಾಯಿಗಳವರೆಗೂ ಲಂಚ ಪಡೆದುಕೊಂಡು ವಿತರಣೆ ಮಾಡಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು. ಒಂದೊಂದು ಖಾತೆ ಮಾಡಲು ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಮೂರು ಜನರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದರು.
ಜಿಲ್ಲಾಧಿಕಾರಿ ಆದಿತ್ಯ ದೀಪ್ತಿ ಕಾನಡೆ ಅವರು, ರಾಜಸ್ವ ನಿರೀಕ್ಷಕ ಸುಭ್ರಮಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಅವರನ್ನು ಮಂಗಳವಾರ ಅಮಾನತ್ತುಗೊಳಿಸಿದ್ದರು. ಅಧಿಕಾರಿಗಳ ಅಮಾನತ್ತಿಗೆ ಸಮಾಧಾನವಾಗದ ಶಾಸಕರು ತಹಶೀಲ್ದಾರರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಧರಣಿ ಮುಂದುವರೆಸಿದ್ದರಿಂದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿತ್ತು.
ಬುಧವಾರ ಧರಣಿ ಸ್ಥಳಕ್ಕೆ ಬೇಟಿ ನೀಡಿದ್ದ ಉಪವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರರನ್ನು ಮೂರು ದಿನಗಳ ಕಾಲ ರಜೆಯ ಮೇಲೆ ಕಳುಹಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಜಿಲ್ಲಾಧಿಕಾರಿಗಳು ವರದಿಯನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತಾರೆ. ವರದಿಯ ಪರಿಶೀಲನೆಯ ನಂತರ ಆರೋಪ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುತ್ತಾರೆಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆದಿದ್ದಾರೆ.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಮೇಲೂರು ಬಿ.ಎನ್.ರವಿಕುಮಾರ್, ಧನಂಜಯರೆಡ್ಡಿ, ಪಿ.ಶಿವಾರೆಡ್ಡಿ, ಬಿ.ಎನ್.ರಘುನಾಥ್, ಕನಕಪ್ರಸಾದ್, ಕೆ.ಎಸ್.ಮಂಜುನಾಥ್, ಎಸ್.ಎಂ.ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
63ನೇ ಅಖಿಲ ಭಾರತ ಸಹಕಾರ ಸಪ್ತಾಹ
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನವೆಂಬರ್ 17ರ ಗುರುವಾರ 63ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ತಾಲ್ಲೂಕಿನ ಡಿ.ಸಿ.ಸಿ ಬ್ಯಾಂಕ್, ಪಿ.ಎಲ್.ಡಿ ಬ್ಯಾಂಕ್, ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಮಹಿಳಾ ಸಹಕಾರ ಸಂಘಗಳು ಹಾಗೂ ತಾಲ್ಲೂಕಿನ ಎಲ್ಲಾ ವಿಧವಾದ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವು ನಡೆಯುತ್ತಿದೆ.
ಸಪ್ತಾಹದ ಧ್ಯೇಯ, ‘ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಘಗಳ ಪಾತ್ರ’ ಮತ್ತು ವಿಷಯವು ‘ಸಹಕಾರ ಸಂಘಗಳ ಮೂಲಕ ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಅಭಿವೃದ್ಧಿ ಪಡಿಸುವುದು’ ಆಗಿದೆ. 63ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ತಾದೂರು ರಮೇಶ್ ವಹಿಸಲಿದ್ದಾರೆ.
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರ ಬರ್ಭರ ಕೊಲೆ
ಮುಂಜಾನೆ ಸೇವಿಂಗ್ ಶಾಪ್ಗೆ ತೆರಳಿದ್ದ ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಿಲ್ಟ್ರೀವೆಂಕಟರಮಣಪ್ಪ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಸಮೀಪದಲ್ಲಿರುವ ಕೃಷ್ಣ ಹೇರ್ಡ್ರೇಸಸ್ಗೆ ಮುಂಜಾನೆ ೬ ಗಂಟೆಯ ಸಮಯದಲ್ಲಿ ತಮ್ಮ ಸಹಾಯ ಸುರೇಶ್ ಎಂಬುವವರೊಂದಿಗೆ ತೆರಳಿದ ವೆಂಕಟರಮಣಪ್ಪ ಶೇವಿಂಗ್ ಮಾಡಿಸಿಕೊಳ್ಳಲು ಕುಳಿತಿದ್ದಾಗ ಮುಸುಕುಧಾರಿಗಳಾಗಿ ಬಂದಿದ್ದ ಇಬ್ಬರು ಮಚ್ಚು ಮತ್ತು ರಾಡ್ಗಳಿಂದ ಹೊಡೆದಿರುವ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಹಿನ್ನೆಲೆ: ಬಡ ಕುಟುಂಬದ ಹಿನ್ನೆಲೆಯಿದ್ದ ವೆಂಕಟರಮಣಪ್ಪ ತನ್ನ ತಂದೆಗೆ ಒಬ್ಬನೇ ಗಂಡು ಮಗನಾಗಿದ್ದರು. ಚಿಕ್ಕವಯಸ್ಸಿನಲ್ಲಿ ಮಿಲ್ಟ್ರಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರಿಂದ ಅವರಿಗೆ ಮಿಲ್ಟ್ರಿ ವೆಂಕಟರಮಣಪ್ಪ ಎಂಬ ಹೆಸರು ಬಂದಿತ್ತು. ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರ ಮೇಲೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ಆಗಿತ್ತು. ಪುರಸಭಾ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದ ತಾಲ್ಲೂಕು ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿ ನೀರಾವರಿ ಹೋರಾಟ, ರೇಷ್ಮೆ ಬೆಳೆಗಾರರ ಹೋರಾಟಗಳು ಸೇರಿದಂತೆ ಅನೇಕ ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ನಗರದ ಎಸ್.ವಿ.ಗಣೇಶ್ ನಗರದಲ್ಲಿ ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಲು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರಿಂದ ಗುದ್ದಲಿ ಪೂಜೆ ನೆರವೇರಿಸಿದ್ದರು. ಮೃತ ವೆಂಕಟರಮಣಪ್ಪ ಅವರಿಗೆ ಇಬ್ಬರು ಪತ್ನಿಯರು ಆರು ಮಂದಿ ಮಕ್ಕಳು ಇದ್ದಾರೆ.
ಮೂರು ಬಾರಿ ಹತ್ಯಾ ಯತ್ನ: ರೌಡಿಶೀಟರ್ ಸಹ ಆಗಿದ್ದ ಮಿಲ್ಟ್ರಿ ವೆಂಕಟರಮಣಪ್ಪ ಅವರ ಮೇಲೆ ಈ ಹಿಂದೆ ದಿಬ್ಬೂರಹಳ್ಳಿ ರಸ್ತೆ, ಬಸ್ ನಿಲ್ದಾಣದ ಬಳಿ ಮತ್ತು ಪೂಜಮ್ಮ ದೇವಾಲಯದ ಬಳಿ ಮೂರು ಬಾರಿ ಹತ್ಯೆ ಯತ್ನ ನಡೆದಿತ್ತು. ಅದೃಷ್ಟವಶಾತ್ ಪಾರಾಗಿದ್ದರು.
ಮಿಲ್ಟ್ರಿ ವೆಂಕಟರಮಣಪ್ಪ ಅವರ ಕೊಲೆಯು ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೈತ್ರಾ, ಡಿ.ವೈಎಸ್ಪಿ ಕೃಷ್ಣಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲಾರಕ್ಕೆ ರವಾನಿಸಲಾಯಿತು. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗಳು ಇದೇ ಮೊದಲಲ್ಲ: ಶಿಡ್ಲಘಟ್ಟದ ನಿವಾಸಿಗಳಾದ ನರಸಿಂಹ ಮತ್ತು ಮಂಜುನಾಥ್ ಎಂಬ ಸಹೋದರರು ಚಿಕ್ಕಬಳ್ಳಾಪುರಕ್ಕೆ ಕೋರ್ಟ್ಗೆ ಹೋಗುತ್ತಿದ್ದಾಗ ೨೦೧೦ ರ ಆಗಸ್ಟ್೨೧ ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರದ ಬಳಿ ಕೊಲೆ ಮಾಡಲಾಗಿತ್ತು. ಈ ಜೋಡಿ ಕೊಲೆ ಪ್ರಕರಣದ ಸಂಬಂಧ ಬಂಧಿತನಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನ ಮೋಹನ್ ಅಲಿಯಾಸ್ ಬೋದಗೂರು ಮೋಹನ್ ಎಂಬಾತನನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೋಹನ್ನನ್ನು ೨೦೧೨ ರಲ್ಲಿ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಇತ್ತಿಚೆಗೆ ನಗರದಲ್ಲಿ ಶಾಂತಿಯ ವಾತಾವರಣವಿತ್ತು. ಆದರೆ ಈ ಕೊಲೆ ನಡೆದಿರುವುದರಿಂದ ಆತಂಕದ ವಾತಾವರಣವಿದ್ದು ಬಸ್ ನಿಲ್ದಾಣ, ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾಧೀಕಾರಿಗಳಿಗೆ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರ ಮನವಿ
ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ಸೋಮವಾರ ಸಲ್ಲಿಸಿದರು.
ಮುಖ್ಯಮಂತ್ರಿಗಳ ಅನುದಾನದಲ್ಲಿ ನೆಹರೂ ಕ್ರೀಡಾಂಗಣದ ಅಭಿವೃದ್ಧಿಗೆ 60 ಲಕ್ಷ ರೂಗಳು ಮಂಜೂರಾಗಿತ್ತು. ಅದರಲ್ಲಿ 20 ಲಕ್ಷ ರೂಗಳ ಕಳಪೆ ಕಾಮಗಾರಿ ನಡೆದಿದೆ. ಇದರ ಬಗ್ಗೆ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯವರು ಮಾಹಿತಿ ಪಡೆದು ಪ್ರತಿಭಟನೆಯನ್ನೂ ಸಹ ನಡೆಸಿದ್ದೇವೆ. ಗುತ್ತಿಗೆದಾರರಾದ ನಿರ್ಮಿತಿ ಕೇಂದ್ರದವರು ಕ್ರೀಡಾಂಗಣದಲ್ಲಿ ಬಾಕಿ ಇರುವ ಹಾಗೂ ಕಳಪೆ ಕಾಮಗಾರಿಯನ್ನು ಸರಿಪಡಿಸುವುದಾಗಿ ಒಂದು ತಿಂಗಳ ಕಾಲಾವಕಾಶ ಕೋರಿದ್ದರು. ಆದರೆ ಅದರಂತೆ ನಡೆದುಕೊಂಡಿಲ್ಲ. ಈ ಬಗ್ಗೆ ತಾವು ಖುದ್ದು ಆಗಮಿಸಿ ಪರಿಶೀಲಿಸಬೇಕೆಂದು ಕೋರಿದರು.
ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ರಾತ್ರಿ ಕಾವಲುಗಾರರೂ ಇಲ್ಲ. ಸ್ಥಳ ಪರಿಶೀಲಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಅದಿತ್ಯ ದೀಪ್ತಿ ಕಾನಡೆ ಅವರು ಕ್ರೀಡಾಂಗಣವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಟಿ.ಟಿ.ನರಸಿಂಹಪ್ಪ, ನಿರಂಜನ್, ಸುರೇಶ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ರಾಜಶೇಖರ್ ಈ ಸಂದರ್ಭದಲ್ಲಿ ಹಾಜರಿದ್ದರು.
ನಕಲಿ ನೋಟುಗಳ ವಿರುದ್ಧದ ಹೋರಾಟಕ್ಕೆ ಐತಿಹಾಸಿಕ ಹೆಜ್ಜೆ
ಭ್ರಷ್ಟಾಚಾರ, ಕಪ್ಪುಹಣ, ಅಕ್ರಮ ಹಣ ಸಾಗಣೆ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ಹಾಗೂ ನಕಲಿ ನೋಟುಗಳ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುವಂಥ ಐತಿಹಾಸಿಕ ಹೆಜ್ಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಟ್ಟಿರುವುದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ನಡೆದ ಬಿಜೆಪಿ ಶಿಡ್ಲಘಟ್ಟ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ನಕಲಿ ನೋಟುಗಳ ವಿರುದ್ಧದ ಹೋರಾಟದಲ್ಲಿ ಶ್ರೀಸಾಮಾನ್ಯನ ಕೈಗಳು ಬಲಗೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಕಪ್ಪುಹಣ ಚಲಾವಣೆ ನಿಲ್ಲುತ್ತದೆ. ಈ ದೃಷ್ಟಿಯಿಂದ ಪಕ್ಷವನ್ನು ಬಲಗೊಳಿಸಬೇಕಾದ ಕರ್ತವ್ಯ ಕಾರ್ಯಕರ್ತರದ್ದು ಎಂದು ವಿವರಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಹಿತದೃಷ್ಟಿಯಿಂದ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಬಿಜೆಪಿ ಪಕ್ಷಕ್ಕೆ ಆನೆ ಬಲ ತಂದಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ ಪಕ್ಷದ ಸಂಘಟನೆ ಮಾಡಬೇಕಿದೆ. ಜನರ ಬಳಿ ಹೋಗುವ ಮೂಲಕ ಮುಂದಿನ ದಿನಗಳಲ್ಲಿ ಪಕ್ಷವು ಪ್ರಕಾಶಮಾನವಾಗುವಂತೆ ಮಾಡುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀರಾಮರೆಡ್ಡಿ, ಸುರೇಂದ್ರಗೌಡ, ಗೋಪಿನಾಥ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರರೆಡ್ಡಿ, ಮುನಿರಾಜು, ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ರಮೇಶ್ ಬಾಯಿರಿ, ಕೆಂಪರೆಡ್ಡಿ, ಸುಜಾತಮ್ಮ, ಸದಾಶಿವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಸರ್ವೆ ನಂಬರುಗಳಿಗೆ ಹಕ್ಕುದಾರಿಕೆಯನ್ನು ಕೊಟ್ಟವರನ್ನು ಶಿಕ್ಷಿಸಿ
ರಾಜ್ಯ ಸರ್ಕಾರ ಹೇಳುವ ಪಾರದರ್ಶಕ, ಪರಿಣಾಮಕಾರಿ ಮತ್ತು ಜನಪರ ಆಡಳಿತ ಎಂಬುದು ಕೇವಲ ಘೋಷಣೆಗಳಲ್ಲಿ ಮಾತ್ರವೇ ಉಳಿದಿದೆ. ಆದರೆ ಸರ್ಕಾರಿ ಸರ್ವೆ ನಂಬರುಗಳಿಗೆ ಹಕ್ಕುದಾರಿಕೆಯನ್ನು ಕೊಡುವ ಮೂಲಕ ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಪಾರದರ್ಶಕತೆಯನ್ನು ಮೆರೆದಿದೆ ಎಂದು ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವ್ಯಂಗ್ಯವಾಡಿದರು.
ನಗರಸ ತಾಲ್ಲೂಕು ಕಚೇರಿಯ ಮುಂದೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎ.ಪಿ.ಎಂ.ಸಿ) ಚುನಾವಣೆಗೆ ಮತದಾರರ ಸೇರ್ಪಡೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದರಲ್ಲಿ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಂ.ರಾಜಣ್ಣ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಯಾವ ರೀತಿ ಅಕ್ರಮ ನಡೆಯಿತು. ಅದಕ್ಕೆ ಕಾರಣರಾದವರು ಯಾರು. ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಅಕ್ರಮಗಳು ನಡೆಯಲು ಸಾಧ್ಯವೆ. ಸರ್ಕಾರಿ ಸರ್ವೆ ನಂಬರುಗಳಿಗೆ ಯಾರು ಬೇಕಾದರೂ ಹಕ್ಕುದಾರರಾಗಲು ಬಿಟ್ಟ ಅಧಿಕಾರಿಗಳು ಇರಬಾರದು. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಕಾರ್ಯಕರ್ತರು ನಡೆಸಿದ್ದ ಅಹೋರಾತ್ರಿ ಪ್ರತಿಭಟನೆಯ ಸ್ಥಳಕ್ಕೆ ಸೋಮವಾರ ರಾತ್ರಿ ಜಿಲ್ಲಾಧಿಕಾರಿ ಅದಿತ್ಯ ದೀಪ್ತಿ ಕಾನಡೆ ಅವರು ಆಗಮಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮೌಖಿಕವಾಗಿ ತಿಳಿಸಿದರು. ಆದರೆ ಪ್ರತಿಭಟನಾಕಾರರು ತಕ್ಷಣವೇ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಪಟ್ಟು ಹಿಡಿದ ಕಾರಣ ಅವರು ಹಿಂದಿರುಗಿದರು.
ಮಂಗಳವಾರವೂ ಮುಂದುವರಿದ ಪ್ರತಿಭಟನೆಯು ಒಂದು ಹಂತದಲ್ಲಿ ಕೈಮೀರಿ ತಾಲ್ಲೂಕು ಕಚೇರಿಯ ಕಿಟಕಿಯ ಗಾಜುಗಳು ಪುಡಿಯಾದ ಘಟನೆಯೂ ನಡೆಯಿತು.
ಈ ಬಗ್ಗೆ ತಹಶೀಲ್ದಾರ್ ಮನೋರಮಾ ಪ್ರತಿಕ್ರಿಯೆ ನೀಡಿ, ‘ಎ.ಪಿ.ಎಂ.ಸಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರ ಸಂಖ್ಯೆ 36 ಸಾವಿರವಿದೆ. 2011ನೇ ಸಾಲಿನಲ್ಲಿ ಪರಿಷ್ಕರಣೆಯಾದ ಮತದಾರರ ಪಟ್ಟಿಯೇ ಇದುವರೆಗೂ ಮುಂದುವರೆದಿದೆ. ಇದುವರೆಗೂ ಎರಡು ಚುನಾವಣೆಗಳು ನಡೆದಿವೆ. ಯಾವುದೇ ದೂರುಗಳಿಲ್ಲದ ಕಾರಣ ಈ ಬಾರಿಯ ಚುನಾವಣೆಗೂ ಅದೇ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ. ಸೋಮವಾರದಿಂದ ಸುಮಾರು 387 ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದುವರೆಗೂ 2011 ರಿಂದ ಆರು ಮಂದಿ ತಹಶೀಲ್ದಾರರು ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಇದುವರೆಗೂ ಮತದಾರರ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸಿ ಎಂದು ಇದುವರೆಗೂ ಅರ್ಜಿಯನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಿಲ್ಲ’ ಎಂದು ತಿಳಿಸಿದರು.
ಸನ್ಮಾನ
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರಕಲೆ ಮತ್ತು ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಜೆ.ಅಂಜಲಿ. ಸಿ.ಎನ್.ಚಾಂದನಿ, ವಿ.ಅಪೂರ್ವ ಮತ್ತು ಸಹನಪ್ರಿಯ ಮತ್ತು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಕ್ಕಳ ದಿನಾಚರಣೆ
ಶಿಡ್ಲಘಟ್ಟದ ಕ್ರೆಸೆಂಟ್ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಆಕರ್ಷಕ ವೇಷಭೂಷಣಗಳನ್ನು ಧರಿಸಿ ರಂಜಿಸಿದರು.
ಮಕ್ಕಳು ಸನ್ನಡತೆಯನ್ನು ಕಲಿತು ಮಾದರಿಯಾಗಿ
ಇಂದಿನ ಮಕ್ಕಳು ದೇಶದ ಭವಿಷ್ಯ. ಮಕ್ಕಳು ಸನ್ನಡತೆಯನ್ನು ಕಲಿತು ದೇಶ ಪ್ರಗತಿ ಪಥದಲ್ಲಿ ಸಾಗಲು ಕಾರಣಕರ್ತರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್, ಶಾಲೆಯ ಸಹಯೋಗದಲ್ಲಿ ಆಚರಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಪ್ರೀತಿ, ಅಭಿಮಾನದಿಂದ ನೋಡುವ ಮೂಲಕ ಅವರ ವರ್ತನೆಯಲ್ಲಿ ಬದಲಾವಣೆ ತರಬಹುದು. ಅವರ ಅಭಿರುಚಿಗೆ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತೇಜನ ನೀಡಬೇಕು. ವಿಶ್ವದಾದ್ಯಂತ ಮಕ್ಕಳ ದಿನಾಚರಣೆಯನ್ನು ನವೆಂಬರ್ ೨೦ರಂದು ಆಚರಿಸುತ್ತಾರೆ. ಆದರೆ ಭಾರತದಲ್ಲಿ ಜವಾಹರ್ಲಾಲ್ ನೆಹರುರವರ ಹುಟ್ಟುಹಬ್ಬದಂದು ಅಂದರೆ ನವೆಂಬರ್ ೧೪ರಂದು ಆಚರಿಸಲಾಗುತ್ತದೆ. ಅದಕ್ಕೆ ಕಾರಣ ಚಾಚಾ ನೆಹರೂರವರ ಮಕ್ಕಳ ಪ್ರೇಮ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳು, ಶಾಲಾ ಗ್ರಂಥಾಲಯಕ್ಕೆ ನೀಡುತ್ತಿರುವ ಪುಸ್ತಕಗಳು ಮತ್ತು ಅದರ ಪರಿಣಾಮಗಳ ಬಗ್ಗೆ ವಿವರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ನಡೆಯಿತು. ಕೆಲವು ಮಕ್ಕಳು ನೆಹರು ಅವರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಮತ್ತು ಶಾಲೆಯ ಗ್ರಂಥಾಲಯಕ್ಕೆ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಶಾಲಾ ವಿದ್ಯಾರ್ಥಿಗಳು ಅಣಕು ಮಂತ್ರಿಮಂಡಲವನ್ನು ರಚಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಸಿ.ಆರ್.ಪಿ. ನಾಗರಾಜ್, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಶಿಕ್ಷಕರಾದ ಚಾಂದ್ಪಾಷ, ಅಶೋಕ್, ಭಾರತಿ ಮತ್ತಿತರರು ಹಾಜರಿದ್ದರು.
ಮಕ್ಕಳ ದಿನಾಚರಣೆ
ಶಿಡ್ಲಘಟ್ಟದಲ್ಲಿ ಸೋಮವಾರ ಒಂದೆಡೆ ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ತಾಲ್ಲೂಕು ಕಚೇರಿಯ ಮುಂದೆ ಶಾಸಕ ರಾಜಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಕ್ಕಳು ತಮಟೆ ನುಡಿಸುತ್ತಿದ್ದರು.
ಪ್ರತಿಭಟನೆ – ಪೇಪರ್ ಪ್ಲೇಟು ರಾಶಿ
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂದೆ ಶಾಸಕ ರಾಜಣ್ಣ ನೇತೃತ್ವದಲ್ಲಿ ಸೋಮವಾರ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾಗ ತಿಂಡಿ ತಿಂದು ಪೇಪರ್ ಪ್ಲೇಟುಗಳನ್ನು ತಾಲ್ಲೂಕು ಕಚೇರಿಯ ಮುಂದೆ ರಾಶಿಯಾಗಿ ಸುರಿಯಲಾಗಿತ್ತು.
ಮುತ್ತೂಟ್ ಫೈನಾನ್ಸ್ನಲ್ಲಿ ಹಳೆಯ ನೋಟನ್ನು ಪಡೆಯದಕ್ಕೆ ಗ್ರಾಹಕರ ಆಕ್ರೋಶ
ಹಳೆಯ 500 ಮತ್ತು 1,00 ರೂಗಳ ನೋಟುಗಳನ್ನು ಪಡೆಯದ ಕಾರಣ ಗ್ರಾಹಕರು ಗಲಾಟೆ ಮಾಡಿ ಪೀಠೋಪಕರಣಗಳನ್ನು ತಳ್ಳಾಡಿದ ಘಟನೆ ನಗರದ ಮುತ್ತೂಟ್ ಫೈನಾನ್ಸ್ನಲ್ಲಿ ಸೋಮವಾರ ನಡೆದಿದೆ.
ನಗರದ ಮುತ್ತೂಟ್ ಫೈನಾನ್ಸ್ ಮೂಲಕ ಹಲವು ಲಕ್ಷಗಳು ಹಣ ಚಿನ್ನದ ಮೇಲೆ ಸಾಲವನ್ನು ನೀಡಿದೆ. ಸೋಮವಾರ ತಮ್ಮ ಚಿನ್ನವನ್ನು ವಾಪಸ್ ಪಡೆಯಲು ಹೋದ ಗ್ರಾಹಕರು ಹಳೆಯ ನೋಟುಗಳನ್ನು ಪಡೆಯುವುದಿಲ್ಲವೆಂದೊಡನೆ ಕುಪಿತರಾಗಿದ್ದಾರೆ. ‘ನೀವು ಕೊಟ್ಟಿದ್ದ ನೋಟುಗಳನ್ನೇ ನಿಮಗೆ ತಿರುಗಿ ಕೊಡುತ್ತಿದ್ದೇವೆ. ಏಕೆ ಪಡೆಯುವುದಿಲ್ಲ’ ಎಂದು ದಬಾಯಿಸಿದರು. ಜನರ ಕೂಗಾಟ, ತಳ್ಳಾಟದಿಂದ ಮೇಜಿನ ಮೇಲಿದ್ದ ಕಾಗದ ಪತ್ರಗಳು ಮುಂತಾದವು ಚೆಲ್ಲಾಪಿಲ್ಲಿಯಾದವು.
ಸ್ಥಳಕ್ಕೆ ಆಗಮಿಸಿದ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ಗ್ರಾಹಕರನ್ನು ಸಮಾಧಾನಪಡಿಸಿದರು. ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕರಿಗೆ ಅವರ ಹಿರಿಯ ಅಧಿಕಾರಿಗಳೊಡನೆ ಸಮಾಲೋಚಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು.
ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕ ಮನೋಹರ್ ಮಾತನಾಡಿ, ‘ಸರ್ಕಾರದಿಂದ ಹಳೆಯ ನೋಟುಗಳನ್ನು ಹಿಂಪಡೆಯಲು ಆದೇಶಿಸುತ್ತಿದ್ದಂತೆಯೇ ನಮಗೆ ಹಳೆಯ ನೋಟುಗಳನ್ನು ಪಡೆಯದಂತೆ ಆದೇಶಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಗ್ರಾಹಕರು ಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡಿ ನಮಗೆ ಕ್ರಾಸ್ ಚೆಕ್ ನೀಡಬಹುದು, ಆರ್.ಟಿ.ಜಿ.ಎಸ್ ಮಾಡಬಹುದು, ವೆಬ್ ಮೂಲಕವೂ ಹಣ ನೀಡಿ ಅವರ ಒಡವೆಗಳನ್ನು ಬಿಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಅವರಿಗೆ ತಿಳಿ ಹೇಳುತ್ತಿದ್ದೇವೆ’ ಎಂದು ಹೇಳಿದರು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ಅನಧಿಕೃತ ಮತದಾರರ ಸೇರ್ಪಡೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಅನಧಿಕೃತ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಶಾಸಕ ರಾಜಣ್ಣ ಆರೋಪಿಸಿ, ಜೆಡಿಎಸ್ ಕಾರ್ಯಕರ್ತರೊಡನೆ ತಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ನವೆಂಬರ್ ತಿಂಗಳ ೨೮ ರಂದು ನಡೆಯಲಿದ್ದು, ಚುನಾವಣೆಗೆ ಮತದಾರರ ಸೇರ್ಪಡೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದರಲ್ಲಿ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಜಸ್ವ ನಿರೀಕ್ಷಕರು ಈ ಪ್ರಕರಣದಲ್ಲಿ ಶಾಮಿಲಾಗಿರುವುದಾಗಿ ಆರೋಪಿಸಿದ ಅವರು, ತಾಲೂಕು ಕಚೇರಿಯಿಂದ ಅಧಿಕಾರಿಗಳು ಹೊರಹೋಗದಂತೆ ತಡೆದು ಹೊರಗಡೆ ಹೋಗಲು ಬಿಡದೆ ಮುತ್ತಿಗೆ ಹಾಕಿ ಘಟನೆ ನಡೆಸಿದರು.
ಗ್ರಾಮಾಂತರ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ಪ್ರವೇಶಿಸಿ, ಪ್ರತಿಭಟನೆ ಮಾಡಲು ಮೊದಲೇ ಮಾಹಿತಿ ನೀಡಬೇಕಾಗಿದ್ದು, ಏಕಾಏಕಿ ಪ್ರತಿಭಟನೆಯಲ್ಲಿ ತೊಡಗಿದ್ದು ಅಲ್ಲದೆ ಸರ್ಕಾರಿ ಅಧಿಕಾರಿಗಳನ್ನು ಕಚೇರಿ ಒಳಗಡೆ ಕೂಡಿ ಹಾಕುವುದು ಕಾನೂನು ರೀತ್ಯಾ ಅಪರಾಧ ಎಂದು ಹೇಳಿ ಪ್ರತಿಭಟನಾನಿರತರನ್ನು ಸಮಾಧಾನ ಮಾಡಿದರು.
ತಹಸಿಲ್ದಾರ್ ಮನೋರಮಾ ಅವರು ಕಚೇರಿಗೆ ಆಗಮಿಸುತ್ತಿದ್ದಂತೆ, ಶಾಸಕರು ತಹಸಿಲ್ದಾರ್ ಅವರಿಗೆ ದಾಖಲೆಗಳನ್ನು ನೀಡಿ ಚುನಾವಣೆಯಲ್ಲಿ ನಡೆದ ಭಾರಿ ಅವ್ಯವಹಾರದ ಬಗ್ಗೆ ವಿವರಿಸಿದರು. ತನಗೆ ಇದರ ಬಗ್ಗೆ ಯಾವುದೇ ರೀತಿ ಮಾಹಿತಿ ತಿಳಿಯದು, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಅವರು ತನಿಖೆ ಮಾಡುವುದಾಗಿ ತಿಳಿಸಿದರು.
ನಗರದಲ್ಲಿರುವ ಸರ್ಕಾರಕ್ಕೆ ಸೇರಿದ ವಿವಿಧ ಸ್ವತ್ತುಗಳಾದ, ಪೋಲಿಸ್ ವಸತಿ ಗೃಹ ಲಕ್ಷಮ್ಮ ಎಂಬುವವರ ಹೆಸರಿನಲ್ಲಿ, ಮುನಿಸಿಪಲ್ ಹೈಸ್ಕೂಲ್ ಸ್ಥಳ ಮಾಜಿ ನಗರಸಭಾ ಅಧ್ಯಕ್ಷೆಯ ಪತಿ ತನ್ವೀರ್ ಅವರ ಹೆಸರಿನಲ್ಲಿ, ಸಾರ್ವಜನಿಕ ಸ್ಮಶಾನ ಎ,ಹರೀಶ್ ಅವರ ಹೆಸರಿನಲ್ಲಿ ಪಹಣಿಗಳು ಬರುತ್ತಿದೆ. ಇವರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು, ಈ ಭಾರಿ ಅವ್ಯವಹಾರಕ್ಕೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆಯೆಂದು ಜೆ.ಡಿ.ಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿಸಿದರು.
ಮತದಾರರ ಪಟ್ಟಿ ಪರಷ್ಕರಣೆ ಆಗುವವರೆಗೂ ಚುನಾವಣೆ ಮುಂದೂಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧೀಕಾರಿ ಅದಿತ್ಯ ದೀಪ್ತಿ ಕಾನಡೆ ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಾಲ್ಲೂಕು ಕಚೇರಿ ಎದುರು, ಶಾಮಿಯಾನ ಹಾಕಿ ಪ್ರತಿಭಟನೆಯಲ್ಲಿ ನಿರತರಾದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರಸಭಾ ಅಧ್ಯಕ್ಷ ಅಫ್ಸರ್ ಪಾಷಾ, ಜೆ.ಡಿ.ಎಸ್ ಮುಖಂಡರಾದ ರಹಮತ್ತುಲ್ಲಾ, ಡಾ.ಧನಂಜಯರೆಡ್ಡಿ, ಸ್ಥಾಯಿ ಸಮಿತಿ ಅದ್ಯಕ್ಷ ನಂದಕಿಶನ್, ನಗರಸಭಾ ಸದಸ್ಯರಾದ ರಘು, ವೆಂಕಟಸ್ವಾಮಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,
ಬಾಲವಿವೇಕಾನಂದ
ಶಿಡ್ಲಘಟ್ಟದಲ್ಲಿ ಸೋಮವಾರ ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ವಾಮಿವಿವೇಕಾನಂದ ವೇಷಧಾರಿಯಾಗಿ ತನ್ನ ತಂದೆಯೊಡನೆ ಹೊರಟಿದ್ದ ಪುಟ್ಟ ಬಾಲಕ ಕಂಡುಬಂದ.
ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸಬೇಕು
ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳಿವೆ. ಅವುಗಳ ಸದ್ಬಳಕೆಯಾಗಬೇಕು. ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಬೇಕು ಎಂದು ಈ.ತಿಮ್ಮಸಂದ್ರ ಪ್ರೌಢಶಾಲೆಯ ಶಿಕ್ಷಕ ಟಿ.ಬಿ.ಗೋವಿಂದರಾಜುಲು ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಸೋಮವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಗ್ರಂಥಾಲಯ ವಿಜ್ಞಾನದ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಅವರು ಮಾತನಾಡಿದರು, ಗ್ರಂಥಾಲಯದಲ್ಲಿ ಪುಸ್ತಕಗಳು ವಿಪುಲವಾಗಿವೆ. ಆದರೆ ಓದುಗರ ಕೊರತೆಯಿದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸುವ ವಿವಿಧ ಕಾರ್ಯಕ್ರಮಗಳನ್ನು ಗ್ರಂಥಾಲಯವನ್ನು ಕೇಂದ್ರಗೊಳಿಸಿ ನಡೆಸಬೇಕು. ಓದುಗರನ್ನು ಹೆಚ್ಚಿಸುವ ವಿವಿಧ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದರು.
ಗ್ರಂಥಾಲಯ ಸಹಾಯಕ ಎನ್.ಶ್ರೀರಾಮ್, ಹಂಡಿಗನಾಳ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ಎಂ.ಮುನಿರಾಜು, ಮಳಮಾಚನಹಳ್ಳಿ ಮುನಿರಾಜು, ತುಮ್ಮನಹಳ್ಳಿ ದೇವಣ್ಣ, ನಯಾಜ್ಪಾಷಮ ವಿ.ಮುನಿಕೃಷ್ಣಪ್ಪ, ವಿ.ಗಂಗಾಧರ, ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಗುವಿನ ಸರ್ವಾಂಗೀಣ ಬೆಳವಣಿಗೆ ಆಗಬೇಕು
ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗು ಆತ್ಮಸ್ತೈರ್ಯದ ವಿಕಾಸವಾಗಿದೆ. ಅದಕ್ಕೆ ಅಂಗನವಾಡಿ ಕೇಂದ್ರವೇ ಅಡಿಪಾಯವಾಗಬೇಕೆಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಐನಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆಯನ್ನು ಸರ್ಕಾರ ರೂಪಿಸಿರುವುದನ್ನು ಅಂಗನವಾಡಿ ಕಾರ್ಯಕರ್ತೆಯರು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ಇಂದು ಮಕ್ಕಳಿಗೆ ಶಾಲೆಗಳಲ್ಲಿ ಪ್ರಾಥಾಮಿಕ ಹಂತದಿಂದಲೂ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜವಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ. ಅವರು ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರು. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಛದ್ಮ ವೇಷ ಸ್ಪರ್ಧೆ, ನೃತ್ಯ, ಭಾಷಣ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಐನಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳು ಮಹಿಳಾ ಶೋಷಣೆ ಮತ್ತು ಅದರ ವಿರುದ್ಧ ಹೋರಾಟದ ಕುರಿತು ನಾಟಕವನ್ನು ಪ್ರದರ್ಶಿಸಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಐನಾ ಟ್ರಸ್ಟ್ ನಿರ್ದೇಶಕಿ ಮೇರಿ ಚಲ್ಲದೊರೈ, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಎ.ಜಿ.ಸುಧಾಕರ್, ಶಿಶು ಅಭಿವೃದ್ಧಿ ಇಲಾಖೆಯ ಆನಂದ್, ಸಂದೀಪ್, ಅಂಜದ್, ರಾಧಮ್ಮ, ಶಾಂತಮ್ಮ, ಕಿರಿಯ ಮಹಿಳಾ ಸಹಾಯಕಿಯರು, ಪೋಷಕರು ಮತ್ತಿತರರು ಹಾಜರಿದ್ದರು.
ಆಮ್ ಆದ್ಮಿ ಪಕ್ಷದ ನಗರ ಘಟಕದ ಸಂಚಾಲಕನ ಮೇಲೆ ಹಲ್ಲೆ
ಚಲಾವಣೆ ರದ್ದಾದ ನೋಟುಗಳ ಬದಲಾವಣೆ ಸಮಯದಲ್ಲಿ ನಾಗರಿಕರೊಬ್ಬರಿಗೆ ಅರ್ಜಿಯನ್ನು ಭರ್ತಿ ಮಾಡಿಕೊಡುತ್ತಿದ್ದ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷರ ಮೇಲೆ ನಗರಸಭೆ ಸದಸ್ಯರೊಬ್ಬರು ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಆಮ್ ಆದ್ಮಿ ಪಕ್ಷದ ನಗರ ಘಟಕದ ಸಂಚಾಲಕ ಕದಿರಿಪಾಳ್ಯದ ಬಿ.ಆರ್.ರಾಮಚಂದ್ರರ ಮೇಲೆ ನಗರಸಭೆ ಸದಸ್ಯ ವೆಂಕಟಸ್ವಾಮಿ ಹಲ್ಲೆ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಭವನದ ಬಳಿ ಇರುವ ಪ್ರಧಾನ ಅಂಚೆ ಕಚೇರಿ ಬಳಿ ಚಲಾವಣೆ ರದ್ದಾದ ಐದುನೂರು ಹಾಗೂ ಸಾವಿರ ರೂಪಾಯಿಯ ನೋಟುಗಳ ಬದಲಾವಣೆಗೆ ಸರತಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಅಂಚೆ ಕಚೇರಿ ಬಳಿ ರಾಮಚಂದ್ರ ಅಂಚೆ ಕಚೇರಿಯಲ್ಲಿ ಒದಗಿಸಬೇಕಿದ್ದ ಅರ್ಜಿಯನ್ನು ಭರ್ತಿ ಮಾಡಿಕೊಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ವೆಂಕಟಸ್ವಾಮಿ ಇದು ನನ್ನ ಏರಿಯಾ ಇಲ್ಲಿ ಜನರಿಗೆ ಅರ್ಜಿ ಬರೆದುಕೊಡಲು ನಿನಗೆ ಯಾರು ಹೇಳಿದ್ದು ಎಂದು ನಾನು ತಲೆಗೆ ಧರಿಸಿದ್ದ ಪಕ್ಷದ ಟೋಪಿಯನ್ನು ಕಿತ್ತೆಸೆದು ತಲೆಗೆ ಹೊಡೆದಿದ್ದಾರೆ.
ನಿನ್ನನ್ನು ಸುಮ್ಮನೆ ಬಿಡೊಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ನಗರಠಾಣೆಯಲ್ಲಿ ಬಿ.ಆರ್.ರಾಮಚಂದ್ರ ದೂರು ದಾಖಲಿಸಿದ್ದಾರೆ.
ಜೆಡಿಎಸ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ರಾಜ್ಯದ ಜನತೆಗಾಗಿ ರೂಪಿಸಿದ ಅನೇಕ ಯೋಜನೆಗಳು ಸೇರಿದಂತೆ ಅವರ ಜನಪರ ಕಾಳಜಿಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಪಟಾಲಮ್ಮ ದೇವಾಲಯದ ಆವರಣದಲ್ಲಿ ಎಪಿಎಂಸಿ ಚುನಾವಣೆಯ ಪೂರ್ವಭಾವಿಯಾಗಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂಬರುವ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಬಯಲುಸೀಮೆಯ ಭಾಗದ ಜನರ ಸಮಸ್ಯೆ ಹಾಗು ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರ ಹಿಡಿಯಬೇಕು ಹಾಗಾಗಿ ಮುಂಬರುವ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಯಶೀಲರನ್ನಾಗಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದಲ್ಲಿ ಈ ಹಿಂದೆ ಕಾಣದಷ್ಟು ಅಭಿವೃದ್ಧಿ ಕಾರ್ಯಗಳು ಶಾಸಕ ಎಂ.ರಾಜಣ್ಣರ ಅಧಿಕಾರಾವಧಿಯಲ್ಲಿ ಮಾಡಿದ್ದು, ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮುಖಾಂತರ ಎಪಿಎಂಸಿ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಜಯರಾಮರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲಾ, ಮುಖಂಡರಾದ ಕೆ.ಎಸ್.ಕನಕಪ್ರಸಾದ್, ಮುನಿವೆಂಕಟಶಾಮಿ, ನಗರಸಭೆ ಸದಸ್ಯರಾದ ಪಿ.ಕೆ.ಕಿಷನ್, ಶಫಿ ಮತ್ತಿತರರು ಹಾಜರಿದ್ದರು.

