Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಪ್ಪನಹಳ್ಳಿ ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿ ಸ್ಥಳ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೇಂದ್ರ ಹಾಗೂ ಗ್ರಾಮದ ಮನೆ ಮನೆಗೆ ಸರಬರಾಜು ಆಗುವ ಬೃಹತ್ ನೀರು ಸರಬರಾಜು ಟ್ಯಾಂಕ್ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರಕ್ಕೆ ಭೇಟಿ ನೀಡಿ, ಎನ್ ಜಿ ಓ ಕಡೆಯಿಂದ ಮಂಜೂರಾದ ಸೈಕಲ್ ಗಳನ್ನು ಅವರು ವಿತರಣೆ ಮಾಡಿದರು. ನಂತರ ಗ್ರಾಮದಲ್ಲಿರುವ ಮನೆ ಮನೆಗೆ ಗಂಗೆ ಅಳವಡಿಸಿರುವ (ನಲ್ಲಿ) ನಳಗಳನ್ನು ಮಾನ್ಯರು ನೀರು ಬರುವುದರ ಬಗ್ಗೆ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಗುಣಮಟ್ಟದ ಕಾಮಗಾರಿ ಆದ್ಯತೆಯಾಗಿರಲಿ. ಕಾಮಗಾರಿಯಲ್ಲಿ ಗುಣಮಟ್ಟ ಪ್ರಮುಖವಾಗಿದ್ದು, ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯಬಾರದು. ಪರಿಶೀಲನೆ ವೇಳೆ ಲೋಪ ಕಂಡುಬಂದರೆ ಗುತ್ತಿಗೆದಾರರ ಜೊತೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಎಇಇ ಲೋಕೇಶ, ತಲಕಾಯಲಬೆಟ್ಟ ಪಂಚಾಯಿತಿ ಪಿಡಿಒ ಶ್ರೀನಿವಾಸ, ಈ.ತಿಮ್ಮಸಂದ್ರ ಪಂಚಾಯಿತಿ ಪಿಡಿಒ ತನ್ವೀರ್ ಅಹ್ಮದ್, ಜಿಲ್ಲಾ ಪಂಚಾಯತ್ ಜೆಜೆಎಂ ಸಂಯೋಜಕ ಜಗದೀಶ್, ನರೇಗಾ ಸಂಯೋಜಕ ಲೋಕೇಶ, ತಲಕಾಯಲಬೆಟ್ಟ ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Sidlaghatta : ಮಾನವ ಕಳ್ಳಸಾಗಣೆ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಸಾಮಾನ್ಯವಾಗಿ ಉದ್ಯೋಗ ಗಿಟ್ಟಿಸುವ ಅಥವಾ ಹೇಗಾದರೂ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಜನರು ಸುಲಭವಾಗಿ ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ವ್ಯಾಪ್ತಿಯ ಎಲ್ಲಾ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಹಾಗು ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಬಲವಂತದ ಗುಲಾಮಗಿರಿಗೆ ಅನಾಥ ಮತ್ತು ಬಡಕುಟುಂಬದ ಮಕ್ಕಳು, ಅಂಗಾಂಗ ದಂಧೆಗೆ ಅಸಹಾಯಕ ವೃದ್ಧರು ಗುರಿಯಾಗುತ್ತಿದ್ದಾರೆ. ಕಳ್ಳಸಾಗಣೆಗೆ ಸಿಲುಕುವ ಜನರ ಬದುಕು ಬಹುಬೇಗ ಛಿದ್ರವಾಗುತ್ತದೆ ಎಂದು ನುಡಿದರು.
ಮಾನವ ಕಳ್ಳಸಾಗಣೆ ಮಾಡುವವರಿಗೆ 7 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಾನೂನಿನ ಮೂಲಕವೇ ಈ ಜಾಲ ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘ-ಸಂಸ್ಥೆಗಳು ಮತ್ತು ಸೇವಾ ಮನೋಭಾವ ಹೊಂದಿದ ಜನರ ಬೆಂಬಲದ ಅಗತ್ಯವಿದೆ ಎಂದರು.
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ, 14 ರಿಂದ 18 ರೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕಾದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯಬೇಕು. 18 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬುದು ಕಾನೂನಾತ್ಮಕವಾಗಿದೆ. ಯಾವುದೇ ಪುರುಷ ಅಥವಾ ಮಹಿಳೆಯರಿಗೆ ಉದ್ಯೋಗ ನೀಡಿದಲ್ಲಿ ಕನಿಷ್ಠ 581 ರೂಪಾಯಿ ವೇತನ ನೀಡಬೇಕೆಂಬ ಹಕ್ಕುಗಳು ನಿರ್ಧರಿಸಲಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಿ ಪಡೆಯಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಹರ್ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರವು ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿಯಾಗಿದ್ದು ಇಲ್ಲಿನ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಕಾರ್ಮಿಕರಲ್ಲಿ ಅಸ್ಥಮಾ, ಕ್ಯಾನ್ಸರ್, ಚರ್ಮರೋಗ, ಉಸಿರಾಟದ ತೊಂದರೆ, ಕೆಮ್ಮು, ಕಫ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದು ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನವಹಿಸಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿದ್ಯಾ ಎ.ವಸ್ತ್ರದ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಮನೋವೈದ್ಯ ಹೇಮಂತ್ಕುಮಾರ್, ಆಯುಷ್ ವೈದ್ಯ ಡಾ.ವಿಜಯ್ ಕುಮಾರ್, ಅಂಚೆ ಇಲಾಖೆಯ ನಂದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Jangamkote, Sidlaghatta : ಇತ್ತೀಚೆಗೆ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗುತ್ತಿದೆ. ಸೂಕ್ತ ವಿದ್ಯಾರ್ಹತೆ, ಕೆ.ಪಿ.ಎಂ.ಎ ಪ್ರಮಾಣಪತ್ರ ಇಲ್ಲದವರಿಗೆ ಅಂಗಡಿಯನ್ನು ಬಾಡಿಗೆ ಕೊಡುವ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ವೃತ್ತದ ಹತ್ತಿರದ ಪೆಟ್ರೋಲ್ ಬಂಕ್ ಬಳಿಯ ಅಂಗಡಿ ಮಳಿಗೆಯಲ್ಲಿ ಶ್ರೀ ಶ್ರದ್ಧಾ ಸ್ಟೋರ್ಸ್ ಎಂದು ಫಲಕವನ್ನು ಹಾಕಿಕೊಂಡು ದೈನಂದಿನ ವಸ್ತುಗಳನ್ನು ಮಾರುತ್ತಾ ಒಳಗೆ ಕ್ಲಿನಿಕ್ ನಡೆಸುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ಆರೋಗ್ಯ ನಿರೀಕ್ಷಕ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಒಳಗಿನ ಕೋಣೆಗೆ ಬೀಗ ಹಾಕಿದ್ದರಿಂದ ಪೊಲೀಸ್ ಅಲ್ತಾಫ್ ಮುಖಾಂತರ ಬೀಗ ತೆರೆಸಿದಾಗ, ಒಳಗೆ ಔಷಧಿ ಅಂಗಡಿಯೇ ಇತ್ತು. ಅಲ್ಲದೆ ರೋಗಿಗೆ ಚಿಕಿತ್ಸೆ ನೀಡುವ ಎಲ್ಲಾ ಸಲಕರಣೆಗಳೂ ಇದ್ದವು. ಸ್ಥಳಕ್ಕೆ ಸಹಾಯಕ ಔಷಧ ನಿಯಂತ್ರಕಿ ಸವಿತಾ ಅವರು ಸಹ ಬಂದು ಪರಿವೀಕ್ಷಿಸಿದರು.
“ಭಾಗ್ಯಮ್ಮ ಎನ್ನುವವರು ಎ.ಎನ್.ಎಂ ತರಬೇತಿ ಪಡೆದಿದ್ದು, ಈ ಕ್ಲಿನಿಕ್ ನಡೆಸುತ್ತಿದ್ದರು. ಹೊರಗಡೆಯಿಂದ ನೋಡಿದಾಗ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವ ಅಂಗಡಿಯಂತೆ ಕಾಣುತ್ತಿತ್ತಾದರೂ, ಒಳಗೆ ಎಲ್ಲಾ ರೀತಿಯ ಔಷಧಿಗಳು, ಚುಚ್ಚುಮದ್ದು, ಯಂತ್ರೋಪಕರಣಗಳನ್ನೆಲ್ಲಾ ಇಟ್ಟುಕೊಂಡಿದ್ದರು. ನಾವು ಹೋದಾಗ ಅವರಿಗೆ ಫೋನ್ ಮಾಡಿ ಕರೆದರೂ ಬರಲಿಲ್ಲ. ಆದರೆ ಮಾರನೆ ದಿನ ಬಂದು ತಪ್ಪೊಪ್ಪಿಗೆ ಬರೆದುಕೊಟ್ಟರು. ಈಗ ಅಂಗಡಿಯನ್ನು ಸೀಜ್ ಮಾಡಿದ್ದು, ನಾವು ಹಾಗೂ ಸಹಾಯಕ ಔಷಧ ನಿಯಂತ್ರಕಿ ಇಬ್ಬರೂ ಜಿಲ್ಲಾಧಿಕಾರಿ ಅವರ ನ್ಯಾಯಾಲಯಕ್ಕೆ ಪುರಾವೆ, ವರದಿ ಸಲ್ಲಿಸುತ್ತೇವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದೇವೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
Sidlaghatta : ಹಲವಾರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ಹಣವನ್ನು ವಸೂಲಿ ಮಾಡಲು ಮಂಗಳವಾರ ನಗರಸಭೆ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಮೊಬೈಲ್ ಟವರ್ ಗಳ ಫ್ಯೂಸ್ ತೆಗೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತೆ ಅಮೃತ, “ನಗರಸಭೆ ವ್ಯಾಪ್ತಿಯಲ್ಲಿರುವ 18 ಮೊಬೈಲ್ ಟವರ್ ಗಳಿಂದ ಸುಮಾರು 20 ಲಕ್ಷ ರೂಗಳಷ್ಟು ಸೇವಾ ಶುಲ್ಕ ಬರಬೇಕಿದ್ದು, ಸುಮಾರು ಆರು ತಿಂಗಳುಗಳಿಂದ ನೋಟೀಸ್ ನೀಡಲಾಗಿತ್ತು. ಫೋನ್ ಮಾಡಿದಾಗ ಉದಾಸೀನವಾಗಿ ಮಾತನಾಡುತ್ತಿದ್ದರು. ಬಾಕಿ ಪಾವತಿಸಿದೆ ನಿರ್ಲಕ್ಷ ವಹಿಸಿದ್ದರಿಂದ ನಗರಸಭೆ ಆದಾಯ ಕುಂಠಿತಗೊಂಡಿದೆ. ಹಾಗಾಗಿ ಈ ದಿನ ನಾವು ಅಧಿಕಾರಿಗಳೊಂದಿಗೆ ಬಂದು ಮೊಬೈಲ್ ಟವರ್ ಗಳ ಫ್ಯೂಸ್ ಗಳನ್ನು ತೆಗೆದಿದ್ದೇವೆ. ಈಗಲಾದರೂ ಅವರು ಬಂದು ಬಾಕಿ ಹಣ ಪಾವತಿಸುತ್ತಾರೆ ಎಂದು ಆಶಿಸುತ್ತೇನೆ” ಎಂದು ಹೇಳಿದರು.
ನಗರಸಭೆಯ ಹಲವು ಪ್ರದೇಶದಲ್ಲಿ ವಿವಿಧ ಕಂಪನಿಗಳ ಸುಮಾರು 18 ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ. ಕೇವಲ ಒಂದನ್ನು ಹೊರತುಪಡಿಸಿದರೆ, ಉಳಿದ ಕಂಪೆನಿಗಳು ಸುಮಾರು ವರ್ಷಗಳಿಂದ ಸೇವಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ. ಅದನ್ನು ಪಾವತಿಸಲು ಜನವರಿಯಲ್ಲಿ ನೋಟಿಸ್ ನೀಡಿದ್ದರೂ ಸಹ ಇದುವರೆಗೂ ಹಣ ಪಾವತಿಸಿಲ್ಲ. ಇದೀಗ ನಗರಸಭೆಗೆ ಹಣ ನಿರ್ಲಕ್ಷ ವಹಿಸಿರುವ ಮೊಬೈಲ್ ಟವರ್ ಗಳ ಫ್ಯೂಸ್ ಗಳನ್ನು ಕಿತ್ತುಹಾಕುವ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಮೆಹಬೂಬ ನಗರದಲ್ಲಿ ಅಳವಡಿಸಿರುವ ಮೊಬೈಲ್ ಟವರ್ ಗಳಿಂದ ಫ್ಯೂಸ್ ಕಿತ್ತಾಕಿದ ಬಳಿಕ ಮೊಬೈಲ್ ಕಂಪನಿಯ ಟೆಕ್ನಿಶಿಯನ್ ಪುನಃ ಫೀಸ್ ಹಾಕಿದ್ದರಿಂದ ಕುಪಿತಗೊಂಡ ನಗರಸಭೆಯ ಪೌರಾಯುಕ್ತೆ ಅಮೃತ ಮತ್ತು ಸಿಬ್ಬಂದಿ ಟೆಕ್ನಿಷಿಯನ್ ಅನ್ನು ತರಾಟೆಗೆ ತೆಗೆದುಕೊಂಡರು.
ಟವರ್ ಗಳಿಗೆ ಅಳವಡಿಸಿರುವ ಫ್ಯೂಸುಗಳನ್ನು ತೆಗೆಯಲು ತಾಂತ್ರಿಕ ನೈಪುಣ್ಯತೆ ಹೊಂದಿರಬೇಕು ಎಂದು ಖಾಸಗಿ ಕಂಪನಿಯ ಟೆಕ್ನಿಷಿಯನ್ ನಗರಸಭೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ. ಇದರಿಂದ ಕೆರಳಿದ ನಗರಸಭೆಯ ಪೌರಾಯುಕ್ತೆ ಅಮೃತ ಮತ್ತು ನಗರ ಪೊಲೀಸ್ ಠಾಣೆ ಪಿ.ಎಸ್.ಐ ವೇಣುಗೋಪಾಲ್, ಇಂಡಸ್ ಕಂಪನಿಯ ಟೆಕ್ನಿಷಿಯನ್ ನನ್ನು ತರಾಟೆಗೆ ತೆಗೆದುಕೊಂಡರು. ಜನವರಿ ತಿಂಗಳಿಂದ ನೋಟಿಸ್ ಕೊಟ್ಟರು ಯಾಕೆ ಬಾಕಿ ಪಾವತಿಸಿಲ್ಲ ಎಂದು ಪ್ರಶ್ನಿಸಿದರು. ನಿಮ್ಮ ಕಂಪನಿಯವರು ಬಾಕಿ ಪಾವತಿಸಿದ ಕಾರಣ ನಗರಸಭೆಯಲ್ಲಿರುವ ತಾಂತ್ರಿಕ ನಿಪುಣರಿಂದ ಫ್ಯೂಸುಗಳನ್ನು ತೆಗೆದಿದ್ದೇವೆ. ಮೊದಲು ಬಾಕಿ ಪಾವತಿಸಿ ಆನಂತರ ಮಾತನಾಡಿ ಎಂದರು.
ಆಗ ಟೆಕ್ನಿಷಿಯನ್ ನನಗೆ ಯಾವುದೇ ರೀತಿಯ ನೋಟೀಸ್ ಬಂದಿಲ್ಲ ಎಂದು ಹೇಳಿದ್ದಲ್ಲದೆ, ನಮ್ಮ ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.
ಎಲೆವರ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅವರು ಮಾತ್ರ 4 ಮೊಬೈಲ್ ಟವರ್ ಗಳಿಗೆ ಸಂಬಂಧಿಸಿದಂತೆ ನಾಲ್ಕು ಲಕ್ಷ 32 ಸಾವಿರಗಳನ್ನು ಮಾತ್ರ ಪಾವತಿ ಮಾಡಿದರು. ಇನ್ನುಳಿದಂತೆ ಹಲವರು ಮೊಬೈಲ್ ಟವರ್ ಗಳ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಂದಾಯ ನಿರೀಕ್ಷಕ ಅತೀಕ್, ಸಂಜೀವ್ ಕುಮಾರ್, ಕಂದಾಯ ಅಧಿಕಾರಿ ನಾಗರಾಜ್, ಕರ ವಸೂಲಿಗಾರ ಅಪ್ಪಿ, ಶ್ರೀನಿವಾಸ್, ಅಮರ್ ಹಾಜರಿದ್ದರು.
Sidlaghatta : ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡುವ, ಅಪಘಾತ ಕೃತ್ಯಕ್ಕೆ ಕಾರಣರಾಗುವ ವಾಹನ ಮಾಲೀಕರ, ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಅವರು ಮಾತನಾಡಿದರು.
ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾಯಿಸಿ ಆಗುವ ಅನಾಹುತಗಳಿಗೆ ಪೋಷಕರೇ ಕಾರಣರಾಗಿ, ಜೀವನ ಪರ್ಯಂತ ಕೊರಗುವ ಪರಿಸ್ಥಿತಿ ಬರಬಹುದು. ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಅಪ್ರಾಪ್ತ ವಾಹನ ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ವಾಹನ ಕಾಯ್ದೆಯಂತೆ 18 ವರ್ಷ ವಯಸ್ಸಿನೊಳಗಿನವರು ವಾಹನ ಚಲಾಯಿಸುವುದು ಹಾಗೂ ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ. ಸಂಚಾರಿ ನಿಯಮಗಳ ತಿಳುವಳಿಕೆ ಹಾಗೂ ಅಗತ್ಯ ಚಾಲನಾ ಪರವಾನಗಿ ಪಡೆಯದ ಹೊರತು ಅವರು ವಾಹನ ಚಲಾಯಿಸದಂತೆ ಪೋಷಕರು ಎಚ್ಚರಿಕೆವಹಿಸಬೇಕು ಎಂದು ಹೇಳಿದರು.
ಅಪ್ರಾಪ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಪಾಲಕರು ಯಾವುದೇ ಕಾರಣಕ್ಕೂ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನ, ಕಾರು ಚಲಾಯಿಸಲು ಬಿಡಬಾರದು. ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
20ಕ್ಕೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅಪ್ರಾಪ್ತರ ಪಾಲಕರನ್ನು ಕರೆಸಿ ಕಾನೂನು ಪಾಠ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್.ಐ ವೇಣುಗೋಪಾಲ್, ಸಿಬ್ಬಂದಿ ನಟೇಶ್, ನವೀನ್, ಚೀತಾ ರಾಜೇಶ್, ಮೇಘ, ಪ್ರೇಮ ಹಾಜರಿದ್ದರು.
Kalanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿಯಲ್ಲಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಗ್ರಾಮೀಣ ಕೃಷಿ ಕಾರ್ಯಾನುಭವ ತರಬೇತಿ ಕಾರ್ಯಾಗಾರದ ಅಂಗವಾಗಿ ಗ್ರಾಮದ ನಕ್ಷೆ ಬಿಡಿಸಿ, ಜನರಿಗೆ ವಿವರಿಸಿದರು.
ಕಾಳನಾಯಕನಹಳ್ಳಿಯ ಗ್ರಾಮದ ಜನಸಂಖ್ಯೆ, ಜನಜೀವನ, ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿಸಾಕಾಣಿಕೆ, ಮಾವು, ಗೋಡಂಬಿ, ದಾಳಿಂಬೆ, ಸೇರಿದಂತೆ ಅಂತರ್ಜಲದ ಮಟ್ಟವನ್ನು ವೃದ್ಧಿಗೊಳಿಸುವ ವಿಧಾನ, ಕಡಿಮೆ ನೀರಿನಲ್ಲಿ ಅಧಿಕ ಇಳುವರಿಯ ಬೆಳೆಗಳು ಬೆಳೆಯುವ ವಿಧಾನ, ಸೇರಿದಂತೆ ಗ್ರಾಮದ ಸಂಪೂರ್ಣ ಚಿತ್ರಣವನ್ನು ಬಿಡಿಸಿದ್ದರು.
ರೈತರು, ಅಂತರ್ಜಲವನ್ನೆ ನಂಬಿಕೊಂಡು ಜೀವನ ರೂಪಿಸಿಕೊಂಡಿದ್ದು, ನೀರಿಗಾಗಿ ಕೊಳವೆ ಬಾವಿಗಳನ್ನೆ ಅವಲಂಬಿಸಿದ್ದಾರೆ. ಮಳೆಯ ಕೊರತೆಯಿಂದಾಗಿ, ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿರುವ ಕಾರಣ, ಬಹುತೇಕ ರೈತರು ಕೃಷಿ ಚಟುವಟಿಕೆಗಳನ್ನು ಬಿಟ್ಟುಬಿಟ್ಟಿದ್ದಾರೆ. ಆದ್ದರಿಂದ ಅಂತರ್ಜಲವನ್ನು ವೃದ್ಧಿ ಮಾಡಿಕೊಳ್ಳಬೇಕಿದೆ. ಜಲಮರುಪೂರಣ ವ್ಯವಸ್ಥೆಯನ್ನು ಕೈಗೊಳ್ಳಬೇಕಿದೆ. ಮಳೆ ನೀರು ಸಂಗ್ರಹಣೆ ಮಾಡಿಕೊಳ್ಳುವ ಮೂಲಕ ನೀರಿನ ಕೊರತೆಯನ್ನು ಸ್ವಲ್ಪಮಟ್ಟಿಗೆ ನಿವಾರಣೆ ಮಾಡಿಕೊಳ್ಳಬೇಕು. ಕೃಷಿ, ಮತ್ತು ತೋಟಗಾರಿಕೆ ಬೆಳೆಗಳಿಗೆ ಅಧಿಕವಾಗಿ ರಾಸಾಯನಿಕಗಳನ್ನು ಸಿಂಪಡಣೆ ಮಾಡುವುದರ ಬದಲಿಗೆ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ, ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂಬೆಲ್ಲಾ ಮಾಹಿತಿಗಳನ್ನು ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ನೀಡಿದರು.
ಕಾಳನಾಯಕನಹಳ್ಳಿ ಗ್ರಾಮದ ಸುತ್ತಮುತ್ತಲಿನ ಸುಮಾರು 65 ಕಿ.ಮಿ. ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ತಿಳಿಯಬೇಕಿರುವುದು ಏನೇನಿದೆ ಎನ್ನುವುದರ ಕುರಿತು, ನಕ್ಷೆಯ ಮೂಲಕ ವಿವರಿಸಿದರು. ಗ್ರಾಮಕ್ಕೆ ಬೇಕಾಗಿರುವ ಮೂಲಸೌಕರ್ಯಗಳ ಕುರಿತು, ಜನಪ್ರತಿನಿಧಿಗಳಿಗೆ ತಿಳಿಸಿಕೊಟ್ಟರು. ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಗ್ರಾಮದವರು, ವಿದ್ಯಾರ್ಥಿಗಳು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರೂ ಸಹಾ ವಿದ್ಯಾರ್ಥಿಗಳು ಬಿಡಿಸಿದ್ದ ಗ್ರಾಮದ ನಕ್ಷೆಯನ್ನು ವೀಕ್ಷಣೆ ಮಾಡಿದರು.
Jangamakote, sidlaghatta : ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಪ್ರದೇಶವನ್ನು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆಯಲ್ಲಿ, ರೈತರ ತೀವ್ರ ವಿರೋಧದ ನಡುವೆಯೂ ಪೊಲೀಸರ ಸರ್ಪಗಾವಲಿನಲ್ಲಿ, ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಅವರು ರೈತರ ಜಮೀನನ್ನು ವೀಕ್ಷಣೆ ಮಾಡಿದರು.
ಹೋಬಳಿಯ ದೇವಗಾನಹಳ್ಳಿ, ಗೊಲ್ಲಹಳ್ಳಿ, ಕೊಲುಮೆ ಹೊಸೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ ಯಣ್ಣಂಗೂರು, ಅರಿಕೆರೆ, ಸಂಜೀವಪುರ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳಿಗೆ ಪೊಲೀಸ್ ಸರ್ಪಗಾವಲಿನಲ್ಲಿ ತೆರಳಿ, ರೈತರ ಭೂಮಿಗಳನ್ನು ವೀಕ್ಷಣೆ ಮಾಡಿದರು.
ಬಸವಾಪಟ್ಟಣದಲ್ಲಿ ರೈತರ ಜಮೀನುಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಸಮಯದಲ್ಲಿ,ರೈತರು ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಕೊಡುವುದಿಲ್ಲ. ಯಾರು ನಿಮಗೆ ಭೂಮಿ ಕೊಡುವುದಾಗಿ ಹೇಳಿದ್ದಾರೋ ಅವರ ಭೂಮಿಗಳಿಗೆ ಹೋಗಿ ವೀಕ್ಷಣೆ ಮಾಡಿಕೊಳ್ಳಿ, ರೈತರ ಅನುಮತಿಯಿಲ್ಲದೆ, ರೈತರ ಭೂಮಿಯ ಬಳಿಗೆ ಬರುವುದಕ್ಕೆ ನಿಮಗೇನು ಅಧಿಕಾರವಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಅವರು, ನಾವು ಈಗ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಂದಿಲ್ಲ. ಕೆಲ ರೈತರು, ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ. ಆದ್ದರಿಂದ ನಾನೇ ಖುದ್ದಾಗಿ ಬಂದು, ರೈತರ ಭೂಮಿಗಳಲ್ಲಿ ಏನೇನು ಬೆಳೆ ಬೆಳೆದಿದ್ದೀರಿ ಎಂದು ಕಣ್ಣಾರೆ ನೋಡಿ, ವರದಿ ಸಲ್ಲಿಸಬೇಕಾಗಿದೆ. ನಾನು ಕೆಐಎಡಿಬಿ ಕಚೇರಿಯಲ್ಲಿ ಕುಳಿತು ವರದಿ ಮಾಡಲು ಸಾಧ್ಯವಿಲ್ಲ. ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯಲ್ಲಿ ಏನೇನು ಬೆಳೆ ಬೆಳೆದಿದ್ದಾರೆ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಯಾವ ರೈತರು, ಭೂಮಿಯನ್ನು ಕೊಡುವುದಕ್ಕೆ ಇಷ್ಟವಿದೆಯೋ ಅಂತಹವರ ಭೂಮಿಯನ್ನಷ್ಟೇ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ. ರೈತರ ಒಪ್ಪಿಗೆ ಇಲ್ಲದೆ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಈ ವೇಳೆ ಕೆರಳಿದ ರೈತರು, ರೈತರ ಭೂಮಿಯಲ್ಲಿ ಏನೇನು ಬೆಳೆ ಬೆಳೆಯುತ್ತಿದ್ದಾರೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಬೇಕಾದರೆ, ಕಂದಾಯ ಇಲಾಖೆಯವರು ಪ್ರತಿಯೊಂದು ಪಹಣಿಯಲ್ಲೂ ಬೆಳೆ ನಮೂದು ಮಾಡಿರುತ್ತಾರೆ ಅವರಿಂದ ಮಾಹಿತಿ ತರಿಸಿಕೊಳ್ಳಿ ಅದನ್ನು ಬಿಟ್ಟು, ರೈತರು, ಹೊಲಗಳಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆಗಳು ಮಾಡಿಕೊಳ್ಳುವ ಸಮಯದಲ್ಲಿ ಈ ರೀತಿಯಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲೆ ಪ್ರತಿಭಟನೆ: ಯಣ್ಣಂಗೂರು ಗ್ರಾಮದ ರೈತರ ಜಮೀನುಗಳ ವೀಕ್ಷಣೆಗಾಗಿ ಬಂದು ಅಧಿಕಾರಿಗಳ ತಂಡವನ್ನು ಊರೊಳಗೆ ಬಿಡುವುದಿಲ್ಲವೆಂದು ರೈತರು ಊರ ಬಾಗಿಲಿನಲ್ಲೆ ಅಡ್ಡಗಟ್ಟಿ, ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು. ಪೊಲೀಸರು, ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ರೈತರು ಕೇಳಲಿಲ್ಲ. ಮತ್ತೊಂದು ಕಡೆಯಲ್ಲಿ ನಾವು ಭೂಮಿ ಕೊಡ್ತೇವೆ. ಕಡ್ಡಾಯವಾಗಿ ಸ್ಥಳ ಪರಿಶೀಲನೆಯಾಗಬೇಕು. ಸ್ಥಳ ಪರಿಶೀಲನೆಯಾಗದೆ ನಾವೂ ಇಲ್ಲಿಂದ ಕದಲುವುದಿಲ್ಲವೆಂದು ಕೆಲವರು ಪಟ್ಟು ಹಿಡಿದು ರಸ್ತೆಯಲ್ಲೆ ಘೋಷಣೆಗಳು ಕೂಗಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಸರ್ಕಲ್ ಇನ್ ಸ್ಪೆಕ್ಟರ್ ಎಂ.ಶ್ರೀನಿವಾಸ್ ಅವರು, ಕೆಐಎಡಿಬಿ ಅಧಿಕಾರಿಗಳನ್ನು ರೈತರ ಪಕ್ಕದಿಂದಲೇ ಕರೆದುಕೊಂಡು ರೈತರ ಜಮೀನುಗಳ ಬಳಿಯ ಹೋದರು. ಕೆಲ ಮಹಿಳೆಯರು, ಓಡಿ ಬಂದು ನಮ್ಮೂರಿನ ಒಳಗೆ ನೀವು ಬರಬೇಡಿ ಎಂದು ಅಡ್ಡಿಪಡಿಸಲು ಮುಂದಾದರೂ ಮಹಿಳಾ ಪೊಲೀಸರು ಅವರನ್ನು ತಡೆದರು.
ಕೈ-ಕೈ ಮೀಲಾಯಿಸುವ ಹಂತಕ್ಕೆ ಹೋದ ರೈತರು: ಬಸವಾಪಟ್ಟಣದಲ್ಲಿ, ವೀಕ್ಷಣೆ ಮಾಡುವ ಸಮಯದಲ್ಲಿ, ನಾವು ಭೂಮಿ ಕೊಡಲು ಸಿದ್ಧರಿದ್ದೇವೆ. ನಮ್ಮ ಭೂಮಿ ಖರೀದಿಸಿ, ನಮಗೆ ಸೂಕ್ತ ಬೆಲೆ ಕೊಡಿ ಎಂದು ಒಂದು ಗುಂಪಿನ ರೈತರು ಹೇಳುತ್ತಿದ್ದಂತೆ, ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ನಡುವೆ ಮಾತಿನಚಕಮಕಿ ಆರಂಭವಾಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಅಧಿಕಾರಿಗಳ ತಂಡವನ್ನು ವಾಹನಗಳಿಗೆ ಹತ್ತಿಸಿ, ರೈತರನ್ನು ತಡೆದು, ಗಲಾಟೆಯಾಗದಂತೆ ನೋಡಿಕೊಂಡರು.