Sidlaghatta : ರಾಜ್ಯ ರೈತ ಸಂಘ(ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಸದಸ್ಯರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮುಂಗಾರು ಮಳೆ ಆಗುತ್ತಿದ್ದು ಕೃಷಿ ಇಲಾಖೆಯಲ್ಲಿ ಅಥವಾ ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಮತ್ತು ಬೀಜಗಳ ಹಂಚಿಕೆಯಲ್ಲಿ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು. ಕೆರೆಗಳು ಮತ್ತು ರಾಜಕಾಲುವೆಗಳು ತಾಲ್ಲೂಕಿನಲ್ಲಿ ಒತ್ತುವರಿಯಾಗಿದ್ದು ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ 10-15 ವರ್ಷಗಳಿಂದ ಸಾಗುವಳಿ ಚೀಟಿ ಕೊಡದೆ, 30 ವರ್ಷಗಳಿಂದ ದುರಸ್ಥಿ ಮಾಡದಿರುವುದರಿಂದ ರೈತರು ತಾಲ್ಲೂಕು ಕಚೇರಿಗೆ ತಿರುಗುವಂತಾಗಿದೆ. ತಕ್ಷಣ ಹಕ್ಕುಪತ್ರ ಕೊಡಿಸಿ ದುರಸ್ಥಿ ಮಾಡಿಕೊಡಬೇಕು.
ಜಂಗಮಕೋಟೆ ಹೋಬಳಿಯಲ್ಲಿ ಕೆ.ಐ.ಡಿ.ಇ.ಬಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರು ಒಪ್ಪಿಗೆಕೊಟ್ಟರೆ ಮಾತ್ರ ವಶಪಡಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ಹೆಚ್ಚಾಗುತ್ತಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಕೆ.ಇ.ಬಿ ಅಧಿಕಾರಿಗಳನ್ನು ಕರೆಸಿ ರೈತರ ಪಂಪ್ ಸೆಟ್ ಗಳಿಗೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಸೂಚಿಸಬೇಕು. ತಾಲ್ಲೂಕಿನಲ್ಲಿ ಗುಂಡುತೋಪುಗಳು ಒತ್ತುವರಿಯಾಗಿದ್ದು, ಸರ್ವೆ ಮಾಡಿಸಿ ಆ ಜಾಗದಲ್ಲಿ ಗಿಡ ನೆಡುವ ಕೆಲಸ ಆಗಬೇಕು.
ಈ ಎಲ್ಲಾ ರೈತ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ರೈತರನ್ನೊಳಗೊಂಡಂತೆ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ(ಕೆ.ಎಸ್.ಪುಟ್ಟಣ್ಣಯ್ಯ ಬಣ) ಜಿಲ್ಲಾ ಅಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಭಕ್ತರಹಳ್ಳಿ ಕೋಟೆ ಚನ್ನೇಗೌಡ, ಶಂಕರನಾರಾಯಣ, ದ್ಯಾವಪ್ಪ, ಕೃಷ್ಣಪ್ಪ, ಶ್ರೀನಾಥ್, ರಾಮಾಂಜಿ, ಲಗುಮಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಲೋಕೇಶ್, ಮನೋಜ್ ಕುಮಾರ್, ಗೌತಮ್, ನಾಗರಾಜ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ನಗರದ ಪ್ರಮುಖ ವ್ಯಾಪಾರ ಮತ್ತು ಸಂಚಾರದ ಪ್ರದೇಶವಾಗಿರುವ KSRTC ಬಸ್ ನಿಲ್ದಾಣದ ಬಳಿಯ ಸಲ್ಲಾಪುರಮ್ಮ ದೇವಸ್ಥಾನದ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ ಅರಳಿಮರದ ಒಂದು ದೊಡ್ಡ ರೆಂಬೆ ಕೆಳಗೆ ಬಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಆ ರೆಂಬೆ ಬಿದ್ದು ಗಾಯವಾಗಿದ್ದು, ಸ್ಥಳೀಯರು ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಿ ಆಸ್ಪತ್ರೆಗೆ ಕರೆದೊಯ್ದರು.
ಸ್ಥಳೀಯರು ಮಾತನಾಡಿ, ಇದು ಬಹುಜನ ಸಂಚಾರದ ಪ್ರದೇಶ. ಇಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವಿದ್ದು, ಯಾವಾಗಲೂ ಜನ ಸೇರಿರುತ್ತಾರೆ. ಈ ರೀತಿಯಲ್ಲಿ ಮರದ ರೆಂಬೆ ಬಿದ್ದು ಅಪಾಯವಾಗಿರುವುದು ಭಯಹುಟ್ಟಿಸಿದೆ. ನಗರಸಭೆ , ಬೆಸ್ಕಾಂ ಅಧಿಕಾರಿಗಳು ಮರಗಳ ಪರಿಶೀಲನೆ ಮಾಡಿ, ಅವು ಸುರಕ್ಷಿತವಾಗಿಲ್ಲ ಎಂದರೆ ಮುಂಚಿತವಾಗಿ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ನಗರಸಭೆ ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಇಂತಹ ಘಟನೆಗಳು ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Sidlaghatta : ಶಿಡ್ಲಘಟ್ಟದಲ್ಲಿ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದ ವತಿಯಿಂದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳು 2025 ಮಾರ್ಚ್/ಏಪ್ರಿಲ್ ನಲ್ಲಿ ನಡೆದ SSLC ಮತ್ತು ದ್ವಿತೀಯ PUC ವಾರ್ಷಿಕ ಪರೀಕ್ಷೆಗಳಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದವರು ಜುಲೈ 31 ರ ಒಳಗೆ ತಮ್ಮ ಅಂಕಪಟ್ಟಿ ಮತ್ತು ಅರ್ಜಿಯನ್ನು “ಅಧ್ಯಕ್ಷರು, ಚಿಕ್ಕಬಳ್ಳಾಪುರ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗ, ಶಿಡ್ಲಘಟ್ಟ – 562105 : ವಿಳಾಸಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ದೂ ಸಂಖ್ಯೆ : 9242327071, 6361160262, 9741790332
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕಾರ್ಯಗಳಿಗೆ ಅಂದ್ರೆ ಬೂತ್ ಮಟ್ಟದ ಅಧಿಕಾರಿಗಳಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಶಿಡ್ಲಘಟ್ಟ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಗಗನ ಸಿಂಧು ಅವರನ್ನು ಭೇಟಿ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು, ಇಲಾಖೆಯ ಆದೇಶದ ಅನ್ವಯ ಅನ್ಯ ಇಲಾಖೆಯ ಸೇವೆಗಳನ್ನು ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ. ಜೊತೆಗೆ ಬಿಎಲ್ಒ ಗಳನ್ನು ನೇಮಕಾತಿ ಮಾಡುವಾಗ ಗ್ರೂಪ್ ಸಿ ದರ್ಜೆಯ ನೌಕರರನ್ನು ನೇಮಕ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ನೇಮಕ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಹಲವು ಕೇಂದ್ರಗಳಲ್ಲಿ ಸಹಾಯಕಿಯರ ನಿಯೋಜನೆ ಇಲ್ಲ. ಅಲ್ಲಿ ಅಂಗನವಾಡಿ ಕಾರ್ಯಕರ್ತರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎಲ್ ಓಗಳ ಸಭೆ ನಡೆಸಿದಾಗ ಅಂಗನವಾಡಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬೇಕಾಗುತ್ತದೆ. ಆಗ ಮಕ್ಕಳ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಕೇಳಿದರು.
ಅಂಗನವಾಡಿ ಕಾರ್ಯಕರ್ತರಲ್ಲಿ ಅನೇಕರು ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏಕಕಾಲಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದರ ಜೊತೆಗೆ ಬಿಎಲ್ಒ ಕೆಲಸ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಒ ಕೆಲಸಕ್ಕೆ ನಿಯೋಜಿಸಿರುವುದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತರ ಮನವಿಯನ್ನು ಆಲಿಸಿದ ತಹಶೀಲ್ದಾರ್, ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಅಥವಾ ರದ್ದು ಮಾಡುವ ಅಧಿಕಾರ ನನಗಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ನೇಮಕಾತಿ ಆಗಿರುತ್ತದೆ. ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸುತ್ತೇನೆ. ಮೊದಲು ತಾವು ತರಬೇತಿಗಾಗಿ ಹಾಜರಾಗಿ ಅನಂತರ ತಮ್ಮ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಯಾರಾದರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅದರ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡುವಂತೆ ಸೂಚಿಸಿದರು
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ತಾಲ್ಲೂಕಿನಲ್ಲಿ 133 ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪಾಠಪ್ರವಚನ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗಕ್ಕೆ ಗಮನಕ್ಕೆ ತಂದು ಅಂಗನವಾಡಿ ಕಾರ್ಯಕರ್ತರನ್ನು ಬಿ ಎಲ್ ಓ ಕೆಲಸಗಳಿಗೆ ನಿಯೋಜಿಸಬಾರದು ಎಂದು ಮನವರಿಕೆ ಮಾಡಿಕೊಡಬೇಕೆಂದು ವಿನಂತಿಸಿದರು.
ಈಗಾಗಲೇ ಇಲಾಖೆ ಮೂಲಕ ಅನೇಕ ರೀತಿಯ ಸೇವೆಗಳನ್ನು ಅಂಗನವಾಡಿ ಕಾರ್ಯಕರ್ತರು ಮಾಡುತ್ತಿದ್ದಾರೆ ಅದರ ಜೊತೆಗೆ ಹೆಚ್ಚುವರಿಯಾಗಿ ಬಿ ಎಲ್ ಓ ಅಧಿಕಾರಿಗಳನ್ನು ನೇಮಕ ಮಾಡಿದರೆ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುವಂತಾಗುತ್ತದೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ವಿಸ್ತ್ರದ್ ಅವರಿಗೂ ಪ್ರತ್ಯೇಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವಥಮ್ಮ, ಮಾಜಿ ಅಧ್ಯಕ್ಷೆ ಸುನಂದಮ್ಮ,ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಉಪಾಧ್ಯಕ್ಷೆ ರತ್ನಮ್ಮ, ಸುಚಿತ್ರ ಹಾಜರಿದ್ದರು
Sidlaghatta : ಸರ್ವರಿ ಕರ್ಬಲಾ ಮತ್ತು ಅಹ್ಲೆಬೈತ್ ನ ಹುತಾತ್ಮರ ಜ್ಞಾಪಕಾರ್ಥವಾಗಿ ಸರ್ವರಿ ಬೈತುಲ್ ಮಾಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ನಿಸಾರ್ ಪಾಳ್ಯದಲ್ಲಿರುವ ಖಾನ್ಬಾ ಇ ಚಾನ್ವರಿಯಾ ಭವನದಲ್ಲಿ ಮಂಗಳವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಲ್ಲಿ 71 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಈ ವೇಳೆ ಧರ್ಮಗುರುಗಳಾದ ಹಜರತ್ ಸುಲ್ತಾನ್ ಜುಲ್ಫಿಕರ್ ಅಲಿ ಶಾ ಹುಸೇನಿ ಮಾತನಾಡಿ ತುರ್ತು ಸಮಯಗಳಲ್ಲಿ ಜೀವ ಉಳಿಸಲು ರಕ್ತದ ಅವಶ್ಯಕತೆ ಬಹಳಷ್ಟಿದೆ. ಹಿಂದು ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಟಿಪ್ಪು ಶಾಲೆಯ ಮುಖ್ಯಸ್ಥ ಮುಷ್ಟಾಕ್ ಅಹಮದ್ , ನೂರ್ ಮಹಮ್ಮದ್ ಸರ್ವರಿ , ಬಾಬು ಸರ್ವರಿ , ಮದರ್ ಸಾಬ್ ಸರ್ವರಿ , ಬಾಬ ಸರ್ವರಿ ಹಾಜರಿದ್ದರು.
Idludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಊರ ದೇವಿ ಹಾಗೂ ಸಪ್ಪಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಮೂರು ದಿನಗಳ ಕಾಲ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದರು.
ಜಾತ್ರೆಯ ಮೊದಲ ದಿನ ಸೋಮವಾರ ಊರ ನಡುವಿನ ಶ್ರೀಚನ್ನಕೇಶವಸ್ವಾಮಿ, ಶ್ರೀಕೃಷ್ಣಸ್ವಾಮಿ, ಶ್ರೀ ಅಭಯ ಆಂಜನೇಯಸ್ವಾಮಿ ಹಾಗೂ ಗ್ರಾಮ ದೇವತೆ ಶ್ರೀಗಂಗಮ್ಮ ದೇವಿಯ ಪ್ರತಿರೂಪ ಗೊಡ್ಡು ಕಲ್ಲಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಎರಡನೇ ದಿನ ಮಂಗಳವಾರ ಊರ ಹೊರಗಿನ ಕೆರೆಯಂಗಳದಲ್ಲಿ ಲಕ್ಕಲಿ ಸೊಪ್ಪು ಹೊಂಗೆ ಸೊಪ್ಪಿನಿಂದ ಗುಡಿ ಕಟ್ಟಿ ಗುಡಿಯಲ್ಲಿ ಮಣ್ಣಿನಲ್ಲಿ ರಚಿಸಿದ ಸಪ್ಪಲಮ್ಮನ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸಲಾಯಿತು.
ಊರ ಮನೆ ಮನೆಯಿಂದಲೂ ಗೃಹಿಣಿಯರು, ಹೆಂಗಳೆಯರು, ತವರಿಗೆ ಬಂದ ಹೆಣ್ಣು ಮಕ್ಕಳು ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರು ಹಾಗೂ ದೇವಾಲಯದ ಪ್ರದಕ್ಷಿಣೆ ಹಾಕಿ ಕೆರೆ ಅಂಗಳಕ್ಕೆ ತೆರಳಿ ಅಲ್ಲಿ ಸಪ್ಪಲಮ್ಮ ದೇವಿಗೆ ತಂಬಿಟ್ಟು ದೀಪದಾರತಿ ಬೆಳಗಿದರು. ಇಷ್ಟಾರ್ಥಗಳು ಈಡೇರಲೆಂದು ತಾಯಿಗೆ ಕೈ ಮುಗಿದು ಬೇಡಿಕೊಳ್ಳಲಾಯಿತು.
ಕೋಳಿ ಕುರಿ ಬಲಿ ನೀಡಲಾಯಿತು. ಕುರಿಯ ರಕ್ತ ಹಾಗೂ ಉಪ್ಪು ಹಾಕದೆ ಹೊಸ ಮಡಿಕೆಯಲ್ಲಿ ಬೇಯಿಸಿದ ಅನ್ನವನ್ನು ನೈವೇಧ್ಯವಾಗಿ ಸಪ್ಪಲಮ್ಮ ತಾಯಿಗೆ ಅರ್ಪಿಸಲಾಯಿತು.
ಬುಧವಾರ ಮಾಂಸಾಹಾರದ ವಿವಿಧ ಭಕ್ಷ್ಯ ಭೋಜನವನ್ನು ತಯಾರಿಸಿ ಬಂಧು ಬಳಗ ಸ್ನೇಹಿತರನ್ನು ಕರೆದು ಉಣ ಬಡಿಸಲಿದ್ದಾರೆ. ಇದಕ್ಕಾಗಿ ನೂರಾರು ಕುರಿ ಮೇಕೆ ಕೋಳಿಗಳನ್ನು ಮನೆ ಮುಂದೆ ತಂದು ಕಟ್ಟಿ ಹಾಕಿದ್ದಾರೆ, ಪೆಂಡಾಲ್ಗಳನ್ನು ಹಾಕಿದ್ದು ಭೂರಿ ಭೋಜನ ತಯಾರಿಸಲು ಮನೆ ಮನೆಗಳಲ್ಲೂ ಸಕಲ ಸಿದ್ದತೆಗಳು ನಡೆದಿವೆ.
ಹದಿಮೂರು ವರ್ಷಗಳ ನಂತರ ಗ್ರಾಮದಲ್ಲಿ ನಡೆದ ಊರ ಜಾತ್ರೆಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ಎಂ.ವೆಂಕಟಪ್ಪ, ಡಿ.ವಿ.ಮುನಿಸ್ವಾಮಿ, ಸಿ.ವಿ.ವೆಂಕಟೇಶಪ್ಪ, ಸಿ.ಎಂ.ರಾಧಾಕೃಷ್ಣ, ಎಂ.ಮುನಿವೆಂಕಟಸ್ವಾಮಿ, ಲಕ್ಷ್ಮಪ್ಪ, ನರಸಿಂಹಪ್ಪ, ಚನ್ನರಾಯಪ್ಪ ಸೇರಿದಂತೆ ಗ್ರಾಮದ ಯುವಕರು, ಮುಖಂಡರು, ಮಹಿಳೆಯರು ಎಲ್ಲರೂ ಸಂಭ್ರಮದಿಂದ ಭಾಗವಹಿಸಿದ್ದರು.
Sidlaghatta : ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಘಟ್ಟಕ್ಕೆ ಮತ್ತೆ ರವಿಯಣ್ಣ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿರುವುದು ಅದು ಅವರ ಪಕ್ಷದ ಅಭಿಪ್ರಾಯ, ತೀರ್ಮಾನವಾಗಿದೆಯೆ ಹೊರತು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರ ತೀರ್ಮಾನವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನಮ್ಮ ಪಕ್ಷವನ್ನು ಸಂಘಟಿಸುವಂತೆಯೆ ಜೆಡಿಎಸ್ನವರು ಅವರ ಪಕ್ಷವನ್ನು ಸಂಘಟಿಸುತ್ತಾರೆ. ಕುಮಾರಸ್ವಾಮಿ ಅಥವಾ ಯಾರನ್ನೇ ಆಗಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಿ ನಮ್ಮದೇನು ತಕರಾರು ಇಲ್ಲ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಆಗ ಮೈತ್ರಿಯ ಸಿಎಂ ಅಭ್ಯರ್ಥಿ ಯಾರೆಂದು ಬಿಜೆಪಿ, ಜೆಡಿಎಸ್ ನ ಮೈತ್ರಿಯ ಹಿರಿಯ ನಾಯಕರು ನಿರ್ಧರಿಸುತ್ತಾರೆ. ಇದೀಗ ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರಾಗಿದ್ದು ಅವರ ನಾಯಕತ್ವದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲೆ ಇಲ್ಲದಂತ ಸಮಯದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಅನೇಕ ಹಿರಿಯ ನಾಯಕರು ಇದೀಗ ಸಕ್ರೀಯವಾಗಿಲ್ಲ. ಒಂದು ಕಾಲದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಜಿಲ್ಲೆಯಲ್ಲಿರುವ ಅಂತಹ ಎಲ್ಲರನ್ನೂ ಭೇಟಿ ಮಾಡಿ ಚರ್ಚಿಸಿ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಮತ್ತೆ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.
ಸಂಘಟನಾ ಪ್ರವಾಸ :
ಮೊದಲಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೆ ಹೋಬಳಿವಾರು ಪ್ರವಾಸ ಮಾಡಲಾಗುವುದು, ಮುಂದಿನ ಶುಕ್ರವಾ ಚಿಲಕಲನೇರ್ಪು ಹೋಬಳಿಯಿಂದ ಆರಂಭಿಸಿ ಎಲ್ಲ ಹೋಬಳಿವಾರು ಪ್ರವಾಸದ ನಂತರ ಅಂತಿಮವಾಗಿ ಆಗಷ್ಟ್ 3 ರಂದು ಶಿಡ್ಲಘಟ್ಟದಲ್ಲಿ ಸಂಘಟನಾ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು. ಈ ರೀತಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸಂಘಟನಾ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.
ಶಾಸಕರ ತಟಸ್ಥ ಸರಿಯಲ್ಲ :
ನಮ್ಮ ಪಕ್ಷವಾಗಲಿ ನಾನಾಗಲಿ ಕೈಗಾರಿಕೆಗಳ ವಿರೋಧಿಗಳಲ್ಲ. ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುತ್ತೇವೆ. ಜಂಗಮಕೋಟೆ ಭಾಗದಲ್ಲಿನ ಬಹುತೇಕ ಜಮೀನು ಎ ಮತ್ತು ಬಿ ವರ್ಗದ ಫಲವತ್ತಾದ ಭೂಮಿಯಾಗಿದ್ದು ಇಂತಹ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸರ್ಕಾರದ ನಿಯಮಗಳೆ ಹೇಳುತ್ತವೆ ಎಂದು ತಿಳಿಸಿದರು.
ಈ ಕ್ಷೇತ್ರದ ಶಾಸಕರು ರೈತರ ಹಿತದೃಷ್ಟಿಯಿಂದ ಕೆಐಎಡಿಬಿಯಿಂದ ಜಮೀನು ಸ್ವಾಧೀನ ವಿಚಾರವಾಗಿ ಯಾವುದಾದರೂ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿರ್ಲಿಪ್ತತೆ ಬಿಟ್ಟು ರೈತ ಪರ ನಿಲ್ಲಬೇಕಿದೆ ಎಂದು ಆಶಿಸಿದರು.
ಇಡಿ ದಾಳಿಗೆ ರಾಜಕೀಯ ಬಣ್ಣ ಬಳಿಯಬಾರದು:
ಬಾಗೇಪಲ್ಲಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಮನೆ ಕಚೇರಿಗಳ ಮೇಲಿನ ಇಡಿ ದಾಳಿಯು ಸಹಜ ಕಾನೂನು ಪ್ರಕ್ರಿಯೆಯಾಗಿದ್ದು ರಾಜಕೀಯ ಪ್ರೇರಿತವಲ್ಲ. ಸುಬ್ಬಾರೆಡ್ಡಿ ವಿರುದ್ದ ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಚುನಾವಣೆ ಸಮಯದಲ್ಲಿ ಸುಬ್ಬಾರೆಡ್ಡಿ ವಿರುದ್ಧ ಆಸ್ತಿಯ ಅಫಡಿವಿಟ್ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎರಡು ವರ್ಷ ಆಗಿದೆ.
ಅದಕ್ಕೂ ಇದೀಗ ಇಡಿ ದಾಳಿಗೂ ಸಂಬಂಧವಿಲ್ಲ. ನೀವು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಮ್ಮ ಪಕ್ಷದಲ್ಲೇ ಇರುವ ಇತರೆ ಸಚಿವ ಸ್ಥಾನದ ಆಕಾಂಕ್ಷಿಗಳೆ ನಿಮಗೆ ಸಚಿವ ಸ್ಥಾನ ತಪ್ಪಿಸುವ ಉದ್ದೇಶದಿಂದ ಇಡಿಗೆ ಮಾಹಿತಿ ಕೊಟ್ಟಿರಬಹುದಲ್ಲವೇ ? ಎಂದು ಪ್ರಶ್ನಿಸಿದರು.
ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಬೇಡ, ಇಡಿ ಕೇಳಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಿ ಕ್ಲೀನ್ ಚಿಟ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಬಿನ್ನಾಭಿಪ್ರಾಯವಿಲ್ಲ :
ಮಾಜಿ ಶಾಸಕ ಎಂ.ರಾಜಣ್ಣ ಅವರಿಗೂ ನನಗೂ ಯಾವುದೆ ರೀತಿಯ ಬಿನ್ನಾಭಿಪ್ರಾಯವಿಲ್ಲ. ಮುನಿಸೂ ಇಲ್ಲ. ಸಹಜವಾಗಿ ಅಭಿಪ್ರಾಯ ಬೇಧಗಳಿರುತ್ತವೆ. ಕೆಲವೊಂದು ಪದಾಧಿಕಾರಿಗಳ ನೇಮಕ ಇನ್ನಿತರೆ ವಿಷಯಗಳ ವಿಚಾರವಾಗಿ ಅವರ ಬೆಂಬಲಿಗರು, ನಮ್ಮ ಬೆಂಬಲಿಗರು ಮುನಿಸಿಕೊಳ್ಳುವುದುಂಟು. ನಮ್ಮಿಬ್ಬರಿಗೂ ಪಕ್ಷ ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ಇಬ್ಬರೂ ಜತೆಯಾಗಿ ನಡೆಯಲಿದ್ದೇವೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಮುಖಂಡರಾದ ಸುರೇಂದ್ರಗೌಡ, ಕನಕಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.