Home Blog Page 532

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತನೆ ಮಾಡಿ – ಎಂ.ರಾಜಣ್ಣ

0

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತನೆ ಮಾಡಿ ಅವರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡುವಂತೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಅವರು ನಡೆಸಿ ಮಾತನಾಡಿದರು. ಅಧಿಕಾರಿಗಳು ನಾಗರಿಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡುತ್ತಿಲ್ಲ. ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಕೆಲಸಗಳಾಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬಹಳಷ್ಟು ಮಂದಿ ವೃದ್ದರು ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನಗಳು ಸ್ಥಗಿತವಾಗಿದ್ದು, ಬಹಳಷ್ಟು ಪರದಾಡುತ್ತಿದ್ದಾರೆ, ಸ್ಥಗಿತವಾಗಿರುವ ಫಲಾನುಭವಿಗಳನ್ನು ಪಟ್ಟಿಗಳನ್ನು ಗ್ರಾಮಲೆಕ್ಕಾಧಿಕಾರಿಗಳ ಮುಖಾಂತರ ತಯಾರಿಸಿ ವೃದ್ಧರಿಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರರಿಗೆ ತಿಳಿಸಿದರು.
ಕಂಪ್ಯೂಟರ್ ಕೊಠಡಿಯಲ್ಲಿ ಅಕ್ರಮವಾಗಿ ಫಹಣಿಗಳಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿವೆ. ಇಂತಹ ವಿಚಾರಗಳಲ್ಲಿ ಸಂಬಂಧಪಟ್ಟ ರಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗಮನಹರಿಸಬೇಕು. ನ್ಯಾಯಾಲಯಗಳಲ್ಲಿದ್ದರೆ, ವಿಳಂಬವಾಗುವ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡಿ, ಭೂ ಮಾಪನ ಇಲಾಖೆಯಲ್ಲಿಯೂ ಕೂಡಾ ಅರ್ಜಿಗಳು ಬಂದಾಗ ಅರ್ಜಿದಾರರಿಗೆ ಯಾವಾಗ ಭೂಮಿಯನ್ನು ಅಳತೆ ಮಾಡಲಾಗುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟವಾಗಿ ತಿಳುವಳಿಕೆ ಹೇಳಿ ವಿನಾಕಾರಣ ಅಲೆದಾಡಿಸಬೇಡಿ ಎಂದರು.
ರೆಕಾರ್ಡ್ ವಿಭಾಗದಲ್ಲಿ ರಾತ್ರಿಯ ವೇಳೆಯಲ್ಲಿ ಪ್ರಭಾವಿಗಳು, ಅನಾಮಧೇಯ ವ್ಯಕ್ತಿಗಳು ಬಂದು ಕಡತಗಳನ್ನು ಹುಡುಕಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ, ಬಡವರ ಮೂಲ ಕಡತಗಳನ್ನು ಕಬಳಿಸಿಕೊಂಡು ಹೋದರೆ ಯಾರು ಹೋಣೆ ಎಂದು ಶಾಸಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಭೂ ಮಾಪನ ಇಲಾಖೆಯ ಪರಿವೀಕ್ಷಕರು ಮಾತನಾಡಿ, ಅಳತೆ ಕಾರ್ಯದ ಬಗ್ಗೆ ಬಂದಿರುವ ಎಲ್ಲಾ ಅರ್ಜಿಗಳು ಆನ್ಲೈನ್ನಲ್ಲಿ ಬಂದಿವೆ. ಸುಮಾರು ೭ ವರ್ಷಗಳಲ್ಲಿ ೭೦೦೦ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಎಲ್ಲಾ ಅರ್ಜಿಗಳು ಆನ್ಲೈನ್ ಆಗಿರುವುದರಿಂದ ಪ್ರತಿಯೊಂದು ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದರಿಂದ ಸೀರಿಯಲ್ ಪ್ರಕಾರವೇ ಅಳತೆ ಮಾಡಬೇಕು, ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿಗೊಳಿಸಲಾಗುತ್ತದೆ ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಆಹಾರ ಇಲಾಖೆಯ ನಿರೀಕ್ಷಕ ಶ್ರೀಧರ್, ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಕ್ಕಳಿಗೆ ಬೆಂಬಲವೇ?, ಮಕ್ಕಳೊಡನೆ ಪಾಲುದಾರಿಕೆಯೇ?

0

ಇವನಿಗೆ ಏನೆಲ್ಲಾ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಆದರೂ ಸರಿಯಾಗಿ ಓದಿ ಅಂಕ ತೆಗೆಯಲ್ಲ ನೋಡಿ.
ಇವಳನ್ನು ಇಪ್ಪತ್ತೈದು ವರ್ಷ ಗಿಣಿ ಸಾಕಿದ ಹಾಗೆ ಸಾಕಿ, ಇವಳು ಕೇಳಿದ್ದನ್ನೆಲ್ಲಾ ಕೊಡಿಸಿ, ಇವಳು ಹೇಳಿದ ಹಾಗೆ ಕುಣಿದಿದ್ದಕ್ಕೆ, ಈಗ ನೋಡಿ ಎಂತಹ ಉಪಕಾರ ಮಾಡಿದಾಳೆ. ನಮ್ಮನ್ನು ಕೇಳದೆ ನಮಗೆ ಗೊತ್ತಿಲ್ಲದ ಹಾಗೆ ಅದ್ಯಾವನ್ನೋ ಕಟ್ಟಿಕೊಂಡು ಹೋಗಿದ್ದಾಳೆ.
ನೋಡಿ ಇವನಿಗೆ ದೊಡ್ಡ ಕೆಲಸ ಸಿಗೋವರೆಗೆ ನಾವು ಎಂತಹಾ ತ್ಯಾಗ ಮಾಡಿ ಇವನನ್ನು ಬೆಳೆಸಿದ್ದೇವೆ, ಈಗ ಅಪ್ಪ ಅಮ್ಮ ಅಂದ್ರೆ ಲೆಕ್ಕಕ್ಕೇ ಇಲ್ಲದ ಹಾಗಿ ವರ್ತಿಸುತ್ತಾನೆ. ನಾವು ಕೇಳೆದ್ದೆಲ್ಲಾ ತಂದುಕೊಡ್ತಾನೆ ಸರಿ, ಆದರೆ ಹಾಸಿಗೆ ಹಿಡಿದಿರುವ ನಮ್ಮ ಜೊತೆಗೆ ದಿನಕ್ಕೆ ಹತ್ತು ನಿಮಿಷನಾದ್ರೂ ಪ್ರೀತಿ, ಸಮಾಧಾನದಿಂದ ಮಾತಾಡೋದು ಬೇಡ್ವಾ? ಹೆಂಡತಿ ಮಕ್ಕಳ ಜೊತೆ ಮನೆಯಲ್ಲಿ ಯಾವಾಗ್ಲೂ ಲಲ್ಲೆಗರೆಯುತ್ತಾ ಇರುತ್ತಾನೆ, ನಾವು ಮಾತನಾಡಿಸಿದರೆ ಮಾತ್ರ ಸಿಡುಕುತ್ತಾನೆ.
ಇಂತಹ ಮಾತುಗಳನ್ನು ಸಾಕಷ್ಟು ಪೋಷಕರ ಬಾಯಲ್ಲಿ ಕೇಳುತ್ತೇವೆ. ತಂದೆ ತಾಯಿಗಳನ್ನು ಕಡೆಗಣಿಸಿದ ಇಂತಹ ಕೃತಘ್ನ ಮಕ್ಕಳ ಬಗೆಗೆ ಎಲ್ಲಾ ಭಾಷೆಯಲ್ಲಿ ಸಾವಿರಾರು ಕಾದಂಬರಿಗಳು ಬಂದಿವೆ, ನೂರಾರು ಸಿನಿಮಾಗಳು ಬಂದಿವೆ. ಸಾಹಿತ್ಯ ಸಿನಿಮಾಗಳಲ್ಲಿ ಬಿಡಿ, ಮಕ್ಕಳಿಗೆ ಕೊನೆಗೆ-ಕೆಲವೊಮ್ಮೆ ಅಪ್ಪ ಅಮ್ಮ ಸತ್ತ ಮೇಲಾದರೂ – ಜ್ಞಾನೋದಯ ಆಗುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಆಗುವುದು ಬಹಳ ಕಡಿಮೆ. ಹಾಗಿದ್ದರೆ ಸಾಹಿತ್ಯ ಸಿನಿಮಾಗಳಲ್ಲಿ ತೋರಿಸಿರುವಂತೆ ಇಂತಹ ಮಕ್ಕಳೆಲ್ಲಾ ದುಷ್ಟರೇ, ಸ್ವಾರ್ಥಿಗಳೇ? ಅಥವಾ ಇದಕ್ಕಿಂತ ಹೆಚ್ಚಿನ ಆಯಾಮವೇನಾದರೂ ಇದೆಯೇ?
ಪ್ರೀತಿ ಹುಟ್ಟುವುದು ಹೇಗೆ?
ಮಕ್ಕಳ ವರ್ತನೆಯ ಬಗೆಗೆ ಬಹಳ ಬೇಸರದಲ್ಲಿದ್ದ ತಂದೆತಾಯಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಕಥೆಯನ್ನು ತಾಳ್ಮೆಯಿಂದ ಆಲಿಸಿದ ನಂತರ ಕೇಳಿದೆ, “ಸಾರ್ ನಿಮ್ಮ ಮಕ್ಕಳು ನಿಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು, ಸಾಧ್ಯವಿದ್ದರೆ ನಡೆಸಿಕೊಡಬೇಕು ಅಂತ ನಿಮಗೆ ಏಕೆ ಅನಿಸುತ್ತದೆ?”
ಇಬ್ಬರೂ ಒಕ್ಕೊರಲಿನಲ್ಲಿ ಹೇಳಿದರು, “ಏನ್ಸಾರ್ ಹೀಗೆ ಕೇಳ್ತೀರಾ. ಮಕ್ಕಳನ್ನು ಹೊತ್ತು, ಹೆತ್ತು ಇಷ್ಟೆಲ್ಲಾ ವರ್ಷ ಅವರು ಕೇಳಿದ್ದನ್ನೆಲ್ಲಾ ಕೊಡಿಸಿ ಪ್ರೀತಿಯಿಂದ ಸಾಕಿದೀವಿ. ಈಗ ಅವರು ನಮ್ಮನ್ನು ಸರಿಯಾಗಿ ನೋಡಿಕೊಳ್ಳಲೇ ಬೇಕಲ್ವಾ?”
“ನೋಡಿ ಸಾರ್ ಹೊರುವುದು ಹೆರುವುದು ಪ್ರಾಕೃತಿಕ ಕ್ರಿಯೆ. ಇದರಿಂದ ನಮಗೆ ಮಕ್ಕಳ ಮೇಲೆ ಮಮಕಾರ ಹುಟ್ಟುತ್ತದೆ. ಆದರೆ ಮಕ್ಕಳಿಗೆ ಇವರು ತಂದೆತಾಯಿಗಳು ಅನ್ನುವ ಕಲ್ಪನೆ ಒಡನಾಟದಿಂದ ಮಾತ್ರ ಬರುತ್ತದೆ. ತಂದೆತಾಯಿಗಳಿಂದ ದೂರವಿದ್ದ ಮಕ್ಕಳು ತಮ್ಮನ್ನು ಬೆಳೆಸಿದ ಅಜ್ಜಿ, ಮಾವ ಮುಂತಾದವರನ್ನೇ ಹೆಚ್ಚಾಗಿ ಹಚ್ಚಿಕೊಳ್ಳೋದನ್ನು ನಾವು ನೋಡಿರುತ್ತೇವೆ. ಅಂದರೆ ಹೆಚ್ಚು ಒಡನಾಡಿದವರೊಡನೆ ಆತ್ಮೀಯತೆ ಹೆಚ್ಚಾಗಿರುತ್ತದೆ. ಇನ್ನು ಅವರು ಕೇಳಿದ್ದನ್ನೇಲ್ಲಾ ಕೊಡಿಸಿದ್ದೇವೆ ಅಂತ ಹೇಳಿದಿರಿ. ಅಂದರೆ ಹಣದಿಂದ ಕೊಳ್ಳಬಹುದಾದ್ದನ್ನು ನೀವು ಅವರಿಗೆ ಕೊಡಿಸಿ ಅದನ್ನೇ ಪ್ರೀತಿ ಅಂದುಕೊಂಡಿರಿ. ಅಥವಾ ಮಕ್ಕಳಿಗೆ ಖಾಯಿಲೆಯಾದಾಗ ನರ್ಸಗಳಂತೆ ಕರ್ತವ್ಯದ ರೀತಿಯಲ್ಲಿ ಅವರಿಗೆ ಶುಶ್ರೂಷೆ ಮಾಡಿದ್ದನ್ನೇ ಕಾಳಜಿ ಅಂದುಕೊಂಡಿರಿ. ಅಲ್ಲವೇ?”
“ಇದಕ್ಕಿಂತ ಹೆಚ್ಚಿಗೆ ನಾವು ಏನು ಮಾಡಬೇಕಾಗಿತ್ತು ಅಂತ ನಿಮ್ಮ ಅನಿಸಿಕೆ ಸಾರ್?” ನನ್ನ ಚಿಂತನೆಯ ಧಾಟಿ ಅರ್ಥವಾಗದ ದಂಪತಿಗಳು ನನ್ನನ್ನೇ ಪ್ರಶ್ನಿಸಿದರು. ಈ ಪ್ರಶ್ನೆ ನಿಮ್ಮಲ್ಲಿ ಹೆಚ್ಚಿನವರ ಮನಸ್ಸಿನಲ್ಲಿ ಈಗಾಗಲೇ ಬಂದಿರುತ್ತದೆ. ಹಾಗಾಗಿ ಆಪ್ತಸಲಹೆಯ ಮುಂದಿನ ಭಾಗವನ್ನು ಮರೆತು ಈ ಪ್ರಶ್ನೆಯ ಬಗೆಗೆ ಮಾತ್ರ ನೋಡೋಣ.
ಬೆಂಬಲವೋ? ಒಳಗೊಳ್ಳುವಿಕೆಯೋ?
ನಾವೆಲ್ಲಾ ಹೆಚ್ಚಿನ ಸಮಯ ಮಕ್ಕಳಿಗೆ ಕೊಡುತ್ತಿರುವುದು ಬರಿಯ ಬೆಂಬಲ ಮಾತ್ರ, ಇಂತಹ ಬೆಂಬಲವನ್ನೇ ನಾವು ಪ್ರೀತಿ ಅಂದುಕೊಳ್ಳುವ ತಪ್ಪು ಮಾಡುತ್ತೇವೆ. ಆದರೆ ನಿಜವಾದ ಪ್ರೀತಿ, ಆತ್ಮೀಯತೆ, ಅಂಟಿಕೊಳ್ಳುವಿಕೆ (ಅಟ್ಯಾಚ್‍ಮೆಂಟ್) ಹುಟ್ಟುವುದು ಮತ್ತು ದೀರ್ಘಕಾಲ ಉಳಿಯುವುದು ಬರಿಯ ಬೆಂಬಲ ಅಥವಾ ಕರ್ತವ್ಯದಿಂದ ಸಾಧ್ಯವಿಲ್ಲ. ಇದಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಒಂದು ರೀತಿಯ ಒಳಗೊಳ್ಳುವಿಕೆಯ (ಇನ್‍ವಾಲ್ವ್‍ಮೆಂಟ್) ಅಗತ್ಯವಿರುತ್ತದೆ. ಹಾಗೆ ನೋಡಿದರೆ ಈ ಇನ್‍ವಾಲ್ವ್‍ಮೆಂಟ್ ಎಲ್ಲಾ ಸಂಬಂಧಗಳಲ್ಲಿಯೂ ಇರಬೇಕಾಗುತ್ತದೆ. ಆದರೆ ಸ್ವರೂಪಗಳಲ್ಲಿ ಭಿನ್ನತೆ ಇರುತ್ತದೆ. ಪತಿಪತ್ನಿಯರ ಸಂಬಂಧಗಳಲ್ಲಂತೂ ಇದು ಅತ್ಯಗತ್ಯ ಇನ್‍ವಾಲ್ವ್‍ಮೆಂಟ್ ಇಲ್ಲದ ದಂಪತಿಗಳು ಒಟ್ಟಾಗಿ ಬದುಕುತಿದ್ದರೂ ಅಪರಿಚಿತರಂತೆಯೇ ಇರುತ್ತಾರೆ.
ಸಧ್ಯಕ್ಕೆ ಮಕ್ಕಳ ವಿಚಾರದಲ್ಲಿ ಬೆಂಬಲಕ್ಕೂ ಒಳಗೊಳ್ಳುವಿಕೆಗೂ ಇರುವ ವ್ಯತ್ಯಾಸವನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ;
1. ಮಕ್ಕಳಿಗೆ ಕೇಳಿದ ಆಟಿಕೆಗಳನ್ನು ಕೊಡಿಸುವುದು ಬೆಂಬಲ. ಅಂತಹ ಆಟಿಕೆಗಳನ್ನು ಉಪಯೋಗಿಸಿ ಅಥವಾ ಅವು ಇಲ್ಲದಿದ್ದಾಗಲೂ ಮಕ್ಕಳ ಜೊತೆ ಸೇರಿ ಮನದಣಿಯೆ ಆಟವಾಡಿ ಖುಷಿಪಡುವುದು ಒಳಗೊಳ್ಳುವಿಕೆ.
2. ಖಾಯಿಲೆಯಾದಾಗ ಮಕ್ಕಳಿಗೆ ಔಷಧಿ ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಇದ್ದು ಅವರ ನೋವು ಆತಂಕಗಳಿಗೆ ಸ್ಪಂದಿಸುವುದು, ಅವರ ಅಗತ್ಯಗಳನ್ನು ಪುರೈಸುವುದು ಇನ್‍ವಾಲ್ವ್‍ಮೆಂಟ್.
3. ಮಕ್ಕಳಿಗೆ ಒಳ್ಳೆಯ ಶಾಲೆಗೆ ಸೇರಿಸುವುದು, ಪುಸ್ತಕ ಮತ್ತಿತರ ಓದುವ ಪರಿಕರಗಳನ್ನು ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಕುಳಿತು, ನಾವೂ ಅವರ ಪಠ್ಯಗಳನ್ನು ಜೊತೆಗೆ ಓದುತ್ತಾ ಅವರಿಗೆ ಸಹಾಯ ಮಾಡುವುದು ಒಳಗೊಳ್ಳುವಿಕೆ.
4. ಮಕ್ಕಳಿಗೆ ಕಥೆ ಪುಸ್ತಕಗಳನ್ನು ಕೊಡಿಸುವುದು ಬೆಂಬಲ. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಕಥೆ ಹೇಳುವುದು, ಅವರು ಬೆಳೆದ ಮೇಲೆ ಕೂಡ ನಾವು ಅವರ ಜೊತೆ ಓದುತ್ತಾ ಸಂತೋಷವನ್ನು ಹಂಚಿಕೊಳ್ಳುವುದು ಒಳಗೊಳ್ಳುವಿಕೆ.
5. ಮಕ್ಕಳ ಸಮಸ್ಯೆಗಳನ್ನು ನಾವಾಗಿಯೇ ಪರಿಹರಿಸುವುದು ಬೆಂಬಲ. ಆದರೆ ಮಕ್ಕಳಿಗೆ ಹೆಚ್ಚು ಮಾತನಾಡಲು ಉತ್ತೇಜಿಸುವುದು, ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕೊಡುವುದು, ಅವರ ಅಭೀಪ್ರಾಯಗಳನ್ನು ಗೌರವಿಸುವುದು, ನಂತರ ಇಬ್ಬರೂ ಸೇರಿ ಪರಿಹಾರ ಹುಡುಕುವುದು ಇನ್‍ವಾಲ್ವ್‍ಮಂಟ್.
6. ಕೇಳಿದಷ್ಟು ಹಣ ನೀಡಿ ಮಕ್ಕಳನ್ನು ಪ್ರವಾಸಕ್ಕೆ ಕಳಿಸುವುದು ಬೆಂಬಲ. ಅವಕಾಶವಿದ್ದಲ್ಲಿ ನಾವೂ ಅವರ ಜೊತೆ ಹೋಗಿ ಜೊತೆಗಿದ್ದು ಸಂತೋಷಿಸುವುದು ಒಳಗೊಳ್ಳುವಿಕೆ.
ಅಂದರೆ ಮಕ್ಕಳಿಗೆ ‘ಧನ’ ಬೆಂಬಲಕ್ಕಿಂತ ಹೆಚ್ಚಾಗಿ ‘ತನು ಮನ’ಗಳಿಂದ ಬೆಂಬಲ ನೀಡಿದಾಗ ಅದು ಒಳಗೊಳ್ಳುವಿಕೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಪೋಷಕರು ಇದರ ಕಡೆ ಗಮನ ನೀಡದೆ ಧನ ಬೆಂಬಲವನ್ನೇ ತಮ್ಮ ಪ್ರೀತಿ ಮತ್ತು ಕಾಳಜಿ ಎಂದು ಭ್ರಮಿಸಿ, ಅದರಿಂದಲೇ ಆತ್ಮೀಯತೆ ಹುಟ್ಟಬಲ್ಲದು ಅಂದುಕೊಳ್ಳುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಪೋಷಕರಿಗೆ ವಿಧೇಯರಾಗಿದ್ದರೂ ಅವರ ಜೊತೆ ಅಟ್ಯಾಚ್‍ಮೆಂಟ್ ಬೆಳೆಸಿಕೊಳ್ಳದೆ ಹೋದಾಗ ಸಂಬಂಧಗಳ ಕೊಂಡಿ ಬಿಗಿಯಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಮತ್ತು ಮಕ್ಕಳ ಸಂಬಂಧಗಳನ್ನು ಪುನರಾವಲೋಕಿಸಿದಾಗ ನಮಗೆ ಉತ್ತಮ ಒಳನೋಟಗಳು ಸಿಗುತ್ತವೆ. ನಮಗೆ ಈಗಾಗಲೇ ಇರುವ ಯಾವುದಾದರೂ ಒಂದು ಉತ್ತಮ ಸಂಬಂಧ ರೂಪಗೊಂಡ ರೀತಿಯನ್ನು ಗಮನಿಸಿದರೆ ಅದೂ ಕೂಡ ಇನ್‍ವಾಲ್ವ್‍ಮೆಂಟ್‍ನಿಂದಾಗಿಯೇ ಈ ಸ್ಥಿತಿಗೆ ಬಂದಿರುವುದು ಎನ್ನುವುದರ ಅರಿವಾಗುತ್ತದೆ. ಮಕ್ಕಳು ನಮ್ಮ ರಕ್ತ ಮಾಂಸಗಳನ್ನು ಹಂಚಿಕೊಂಡಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಅವರು ನಮ್ಮನ್ನು ಪ್ರೀತಿಸಲೇಬೇಕು ಎನ್ನುವ ನಿಯಮವೇನೂ ಇರುವುದಿಲ್ಲ. ಆತ್ಮೀಯ ಸಂಬಂಧವೊಂದನ್ನು ಮಕ್ಕಳ ಬಾಲ್ಯದಿಂದಲೇ ಪೋಷಕರು ರೂಪಿಸಿಕೊಳ್ಳಬೇಕಾಗುತ್ತದೆ.
ಮಕ್ಕಳು ಮತ್ತು ಪೋಷಕರ ಮಧ್ಯೆ ಅಟ್ಯಾಚ್‍ಮೆಂಟ್ ಇದ್ದರೆ ಮಕ್ಕಳು ಪೋಷಕರು ಹೇಳಿದ್ದನೆಲ್ಲಾ ನಡೆಸಿಕೊಡುತ್ತಾರೆ ಅಂತ ತಿಳಿಯಬೇಕಿಲ್ಲ. ಇಬ್ಬರಿಗೂ ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವ ಪರಿಪಾಠ ಬೆಳೆಯುತ್ತದೆ. ಇದರಿಂದ ಇಬ್ಬರ ಸಂಬಂಧಗಳು ಸೌಹಾರ್ಧಯುತವಾಗಿದ್ದು ಅನಗತ್ಯ ಮನಸ್ತಾಪಗಳಿರುವುದಿಲ್ಲ. ಇರುವ ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ಚರ್ಚಿಸಿ ಪರಿಹರಿಸಿಕೊಳ್ಳಬಹುದು. ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದಲ್ಲಿ ಉತ್ತಮ ಸ್ನೇಹದ ಅಂಶಗಳಿದ್ದು ಇದು ಇಳಿ ವಯಸ್ಸಿನಲ್ಲಿ ಪೋಷಕರಿಗೆ ಮಾನಸಿಕ ಆಧಾರವಾಗುತ್ತದೆ.
ವಸಂತ್, ನಡಹಳ್ಳಿ

ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ಶಾಸಕರು ಮುಂದಾಗಿದ್ದಾರೆ – ಡಿ.ವೈ.ಎಫ್.ಐ

0

ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ಶಾಸಕ ಎಂ.ರಾಜಣ್ಣ ಮುಂದಾಗುತ್ತಿದ್ದಾರೆ ಎಂದು ಡಿ.ವೈ.ಎಫ್.ಐ.ಸಂಘಟನೆಯ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ವರ್ಷದ ಹಿಂದೆ ಶಾಸಕರಾದ ನಂತರ ಎಂ.ರಾಜಣ್ಣ ಅವರಿಗೆ ನಗರದ ಪದವಿ ಪೂರ್ವ ಕಾಲೇಜಿನಲ್ಲಿನ ಹಲವಾರು ಮೂಲಭೂತಸೌಕರ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ತಂದಿದ್ದೆವು, ಈ ಬಗ್ಗೆ ಹಲವು ಬಾರಿ ಪ್ರತಿಭಟನೆಗಳನ್ನೂ ಮಾಡಿದ್ದೇವೆ, ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ಬರುವಂತಹ ನೂರಾರು ಮಂದಿ ಹೆಣ್ಣು ಮಕ್ಕಳು ಕಾಲೇಜಿನಲ್ಲಿ ಶೌಚಾಲಯಗಳ ಕೊರತೆಯಿಂದ ನೀರು ಕುಡಿಯುವುದನ್ನು ಬಿಟ್ಟಿದ್ದಾರೆ, ಪುಂಡಪೋಕರಿಗಳು ಕಾಲೇಜಿನ ಸಮೀಪದಲ್ಲಿ ಬಂದು ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಪ್ರಕರಣಗಳು ನಡೆದಿರುವ ಬಗ್ಗೆಯೂ ಶಾಸಕರ ಗಮನಕ್ಕೆ ತಂದಿದ್ದೇವೆ, ಒಂದು ತಿಂಗಳ ಅವಧಿಯಲ್ಲಿ ಕಾಲೇಜಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದ್ದ ಶಾಸಕರು, ಒಂದೂವರೆ ವರ್ಷವಾದರೂ ಈ ಬಗ್ಗೆ ಗಮನಕ್ಕೆ ತೆಗೆದುಕೊಂಡಿರಲಿಲ್ಲ, ಹಾಗಾಗಿ ಶಾಸಕರ ಮನೆಯ ಮುಂದೆ ಎಸ್.ಎಫ್.ಐ.ಸಂಘಟನೆಯ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಶಾಸಕರು ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ವಿಧ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರನ್ನು ಕರೆದು ಸಂಘಟನೆಗಳಿಗೆ ಬೆಂಬಲ ನೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ಪರೀಕ್ಷೆಗಳಲ್ಲಿ ನಿಮ್ಮ ಅನುತ್ತೀರ್ಣ ಮಾಡುವುದಾಗಿ ವಿದ್ಯಾರ್ಥಿಗಳಲ್ಲಿ ಭಯವನ್ನು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯ ಪೂರ್ವದಲ್ಲಿ ತಾಲ್ಲೂಕಿನ ಪ್ರತಿಯೊಂದು ಮನೆಯ ಬಾಗಿಲಿಗೆ ಬಂದು ಮತ ನೀಡುವಂತೆ ಕೇಳುವ ಹಕ್ಕು ಅವರಿಗಿರುವುದಾದರೆ, ಅವರ ಮನೆಯ ಮುಂದೆ ಕುಳಿತು ಸಂವಿಧಾನ ಬದ್ಧವಾಗಿ ನಮ್ಮ ಹಕ್ಕುಗಳನ್ನು ಕೇಳುವ ಹಕ್ಕು ನಮಗಿಲ್ಲವೆ. ನಮ್ಮಲ್ಲಿ ಭಯವನ್ನು ಹುಟ್ಟಿಸುವಂತಹ ತಂತ್ರಗಾರಿಕೆಯನ್ನು ಶಾಸಕರು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿ ಎಂದಿದ್ದಾರೆ. ನಾವು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ರಾಜಕೀಯ ಮಾಡುವವರು ರಾಜಕಾರಣಿಗಳು, ನಮ್ಮ ಸಂಘಟನೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತದೆ. ಕಾಲೇಜಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಎಸ್.ಎಫ್.ಐ ಜಿಲ್ಲಾ ಮುಖಂಡ ರಾಜಶೇಖರ್ ಮಾತನಾಡಿ, ಸಂವಿಧಾನಬದ್ಧವಾಗಿ ಸಂಘಟನೆಗಳನ್ನು ರೂಪಿಸುವಂತಹ ಹಕ್ಕು ಪ್ರತಿಯೊಬ್ಬರಿಗೂ ಇದೆ, ಕಳೆದ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಅವರು, ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ದಿನವೂ ಗಮನಹರಿಸಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿದ್್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ, ರಸ್ತೆಯ ಅವ್ಯವಸ್ಥೆಗಳ ಬಗ್ಗೆ ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ನೀಡಲು ಕರೆದರೆ, ನಾನು ಬರುವುದಿಲ್ಲವೆಂಬ ಉತ್ತರವನ್ನು ನೀಡಿದ್ದಾರೆ. ನಮ್ಮ ಹಕ್ಕುಗಳನ್ನು ಕೇಳುವ ಅಧಿಕಾರ ನಮಗಿದೆ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ನೇರವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ನಮ್ಮ ಮೇಲೆ ಕೇಸುಗಳನ್ನು ದಾಖಲಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ, ನಮ್ಮ ಹೋರಾಟದ ಹಕ್ಕನ್ನು ಕಸಿಯಲಾಗುತ್ತಿದೆ, ಶಾಸಕರ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಶಿಡ್ಲಘಟ್ಟದಲ್ಲಿ ಈದ್-ಮಿಲಾದ್ ಆಚರಣೆ

0

ಪಟ್ಟಣದಲ್ಲಿ ಭಾನುವಾರ ಈದ್-ಮಿಲಾದ್ ಅಂಗವಾಗಿ ಮುಸ್ಲಿಂ ಭಾಂದವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮಹಮದ್ ಪೈಗಂಬರರ ಹುಟ್ಟಿದ ದಿನವನ್ನು ಈದ್-ಮಿಲಾದ್ ಎಂದು ಆಚರಿಸಲಾಗುತ್ತಿದ್ದು, ಪಟ್ಟಣದಲ್ಲಿ ಮಂಗಳವಾರ ಮುಸ್ಲಿಂ ಬಾಂಧವರು ದಿಬ್ಬೂರಹಳ್ಳಿ ರಸ್ತೆಯಿಂದ ವಾಹನ ಮತ್ತು ಕಾಲ್ನಡಿಗೆಯ ಮೂಲಕ ಮೆರವಣಿಗೆ ಆರಂಭಿಸಿ, ನಂತರ ಮುಖ್ಯರಸ್ತೆ ಟಿ.ಬಿ.ರಸ್ತೆಯ ಮೂಲಕ ಕೋಟೆ ವೃತ್ತಕ್ಕೆ ಬಂದು, ಅಲ್ಲಿಂದ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದವರೆಗೂ ಮೆರವಣಿಗೆ ನಡೆಸಿದರು. ಮೊಹಮ್ಮದ್ ಫೈಗಂಬರ್ ಜನ್ಮದಿನವಾದ ಇಂದು ಅಲ್ಲಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮನುಕುಲದ ಏಳಿಗೆಗಾಗಿ ಜನ್ಮ ತಾಳಿದ ಫೈಗಂಬರರ ತತ್ವ ಅಳವಡಿಸಿಕೊಂಡರೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಮುಸ್ಲಿಂ ಧರ್ಮಗಳು ಬೋಧಿಸಿದರು.
ಮಸೀದಿ ಹಾಗೂ ಕೆಲವಾರು ಮನೆಗಳಿಗೆ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಈದ್-ಮಿಲಾದ್ನಂದು ವಿವಿಧ ಭೋಜನ ತಯಾರಿಸಿ ನೆರೆಹೊರೆಯವರಿಗೆ ಪರಸ್ಪರ ವಿನಿಮಯ ಮಾಡಿಕೊಂಡರು.
ಪಟ್ಟಣದ ಕೋಟೆ ವೃತ್ತದ ಬಳಿ ಮುಸ್ಲಿಂ ಯುವಕರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು. ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು, ಸಿಹಿತಿಂಡಿ ಮತ್ತು ಬ್ರೆಡ್ ವಿತರಿಸಿದರು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಹೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ವಾಸವಿ ಶಾಲೆಯಲ್ಲಿ ಭಾವಗೀತೆ, ಜನಪದ ಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ

0

ಸ್ಪರ್ಧೆಗಳು ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ಹೆಚ್ಚಿಸಿ ಸೃಜನಶೀಲತೆಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಕ್ಷೇತ್ರ ಶಿಕ್ಷ್ಷಣಾಕಾರಿ ಎಸ್.ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ನಗರದ ವಾಸವಿ ಶಾಲೆಯಲ್ಲಿ ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಹಮ್ಮಿಕೊಂಡಿದ್ದ ಜನಪದ ಗೀತೆ, ಬಾವಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಾಹಿತ್ಯಾತ್ಮಕ ಸ್ಪರ್ಧೆಗಳನ್ನು ನಡೆಸುವುದರಿಂದ ಮಕ್ಕಳು ಆಲೋಚನೆಗೆ ಬೀಳುತ್ತಾರೆ. ಆಲೋಚನೆಗಳಿಂದ ಹೊಸ ಹೊಸ ಚಿಂತನೆಗಳಿಗೆ ಅವರ ಮನಸು ತೆರೆದುಕೊಂಡು ಮಾನಸಿಕ ವಿಕಸನಕ್ಕೆ ದಾರಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್ರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ಮೂರ್ತಿ, ಮಂಜುನಾಥ್, ನಾರಾಯಣಸ್ವಾಮಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಎಂ.ಆರ್.ಗೋಪಿನಾಥ್, ಕೆಂಪಣ್ಣ, ವಿನಾಯಕ, ಟಿ.ಎನ್.ವಿಜಯ್ಕುಮಾರ್, ಎಸ್.ವಿ.ಮಾಲತಿ, ಎಂ.ಆರ್.ಶಂಕರ್ನಾರಾಯಣರಾವ್, ಅನಂತಲಕ್ಷ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜೇತರು:
ಜನಪದಗೀತೆ ವಿಭಾಗದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯ ಮೋನಿಕಾ(ಪ್ರಥಮ), ವಾಸವಿ ಶಾಲೆಯ ವಿದ್ಯಾಶ್ರೀ(ದ್ವಿತೀಯ), ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೋನಿಕಾ(ತೃತೀಯ) ಸ್ಥಾನಪಡೆದಿದ್ದಾರೆ.
ಭಾವಗೀತೆ ವಿಭಾಗದಲ್ಲಿ ವಾಸವಿ ಶಾಲೆಯ ಎಸ್.ಅನುಷಾ(ಪ್ರಥಮ), ಸರಸ್ವತಿ ಕಾನ್ವೆಂಟ್ನ ಮೋನಿಕಾಯಾದವ್(ದ್ವಿತೀಯ), ಆಶಾಕಿರಣ ಅಂಧಮಕ್ಕಳ ಶಾಲೆಯ ಜಾಸ್ಮಿನ್ ತಾಜ್(ತೃತೀಯ) ಬಹುಮಾನವನ್ನು ತನ್ನದಾಗಿಸಿಕೊಂಡರು.
ರಸಪ್ರಶ್ನೆ ವಿಭಾಗದಲ್ಲಿ ಜಂಗಮಕೋಟೆಯ ಕಾರ್ತಿಕ್ಕುಮಾರ್ ಮತ್ತು ತಂಡ(ಪ್ರಥಮ), ವಾಸವಿ ಶಾಲೆಯ ಕೆ.ಎಂ.ಮಧು ಮತ್ತು ತಂಡ(ದ್ವಿತೀಯ) ಹಾಗೂ ಡಾಲಿನ್ ಶಾಲೆಯ ಕೈಲಾಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಶಾಸಕರ ಕನಿಷ್ಠ ಜವಾಬ್ದಾರಿ – ವಿ.ಮುನಿಯಪ್ಪ

0

ಕ್ಷೇತ್ರದ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಶಾಸಕರ ಅನುದಾನವನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಳಂಬ ಮಾಡಿ ಅವರಿಂದ ಮನೆಯ ಮುಂದೆ ಪ್ರತಿಭಟನೆ ಮಾಡಿಸಿಕೊಂಡಿರುವುದು ದುರದೃಷ್ಟಕರ ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಸರ್ಕಾರಿ ಕಾಲೇಜು ಕಟ್ಟುವ ಮುನ್ನವೇ ನನ್ನ ಅಧಿಕಾರಾವಧಿಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೆ. ಅನೈತಿಕ ಚಟುವಟಿಕೆಗಳನ್ನು ತಡೆಯಲು ಕಾಂಪೋಂಡ್ ನಿರ್ಮಿಸಲು ವಿದ್ಯಾರ್ಥಿಗಳು ಕೋರಿದ್ದು ತಪ್ಪಲ್ಲ. ಶಾಸಕರ ವಿವೇಚನಾ ಅನುದಾನ ಬಳಸಿ ತಕ್ಷಣವೇ ಮಾಡಬಹುದಾದ ಕೆಲಸವನ್ನು ತಡ ಮಾಡುತ್ತಿರುವುದು ಅವರ ಆಧ್ಯತೆಗಳನ್ನು ತೋರಿಸುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಆಡಳಿತದ ನಿರ್ವಹಣೆ ನಡೆಯುತ್ತಿರುವುದು ನೋಡಿದಾಗ ಬೇಸರ ಮತ್ತು ನೋವುಂಟಾಗುತ್ತಿದೆ. ಭೂಗಳ್ಳರ ಕಪ್ಪುಹಣದ ಪ್ರಭಾವ ತಾಲ್ಲೂಕು ಕಚೇರಿಯ ಮೇಲೆ ಬೀರುತ್ತಿರುವುದು ದೊಡ್ಡ ದುರಂತವಾಗಿದೆ. ಜನಪ್ರತಿನಿಧಿಗಳೆ ನೇರವಾಗಿ ಭೂ ಮಾಫಿಯಾಗೆ ನೆರವು ನೀಡುತ್ತಿದ್ದರೆ ತಾಲ್ಲೂಕನ್ನು ರಕ್ಷಣೆ ಮಾಡುವವರ್ಯಾರು ಎನ್ನುವಂತಹ ಆತಂಕ ಜನತೆಯನ್ನು ಕಾಡುತ್ತಿದೆ. ತಾಲ್ಲೂಕು ಆಡಳಿತದ ಮೇಲಿನ ಕಪ್ಪುಹಣದ ದುಷ್ಪರಿಣಾಮದಿಂದ ಸಾಮಾನ್ಯ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಕುರಿತಂತೆ ಈಚೆಗೆ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಆದರೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಸಂಸದ ಕೆ.ಹೆಚ್.ಮುನಿಯಪ್ಪ ಅವರು ಜೆಡಿಎಸ್ನ ಸಖ್ಯವನ್ನು ಹೆಚ್ಚಾಗಿ ಬೆಳೆಸುತ್ತಿರುವುದರಿಂದ ಅವರ ವರ್ತನೆ ನನಗೆ ಬೇಸರ ತಂದಿದ್ದು ದೂರವಿದ್ದೇನೆ. ಈಚೆಗೆ ಔತಣಕೂಟವೊಂದರಲ್ಲಿ ಪಕ್ಷೇತರರಾಗಿರುವ ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್ ಅವರೊಂದಿಗೆ ಅಲ್ಲಿನ ಸ್ಥಳೀಯ ಅಭಿಮಾನಿಗಳ ಒತ್ತಡಗಳಿಂದಾಗಿ ಅವರೊಂದಿಗೆ ಮಾತನಾಡಿದ್ದರ ಬಗ್ಗೆ ಬೇರೆ ಅರ್ಥ ಕಲ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತಿದ್ದು, ಪುನಃ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಸುಧಾಕರ್ ಅವರನ್ನು ಆಹ್ವಾನಿಸಲಾಗಿದೆ, ಮುಂಬರುವ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಲು ಅವರ ಸಹಕಾರ ಬೇಕಾಗಿದೆ. ಪಕ್ಷದ ಅಭ್ಯರ್ಥಿಗಳನ್ನು ಬಲಗೊಳಿಸುವಂತಹ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದೇನೆ ಎಂದು ನುಡಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ವಿಚಾರ ಸತ್ಯಕ್ಕೆ ದೂರವಾದದ್ದು, ಸುಧಾಕರ್ ಅವರೂ ಪಕ್ಷೇತರರಾಗಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಾನೂ ಶಾಸಕನಾಗಿದ್ದೆ, ಬಹಳಷ್ಟು ಮಂದಿ ಶಾಸಕರು ಕೋಟಿಗಟ್ಟಲೆ ಹಣವನ್ನು ಪಡೆದುಕೊಂಡು ಬಿಜೆಪಿಗೆ ಹೋಗಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದಿದ್ದಾರೆ, ನಾನು ಹೋಗುವುದಾದರೆ ಅಂದೇ ಹೋಗುತ್ತಿದ್ದೆ, ಈಗ ಕಾಂಗ್ರೆಸ್ ಪಕ್ಷದಲ್ಲೆ ಇದ್ದೇನೆ, ಮುಂದೆಯೂ ಇರುತ್ತೇನೆ. ನನಗೆ ಸಿಕ್ಕಿರುವ ಜವಾಬ್ದಾರಿಯ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ರಾಜ್ಯದಲ್ಲಿ ಕೆ.ಪಿ.ಸಿ.ಸಿ.ಯ ಉಪಾಧ್ಯಕ್ಷನಾಗಿ ಒಂದು ಜವಾಬ್ದಾರಿಯನ್ನು ಪಕ್ಷ ನೀಡಿದೆ, ಕಾಂಗ್ರೆಸ್ ಪಕ್ಷದಿಂದಲೇ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ, ಪ್ರತಿಯೊಂದು ಚುನಾವಣೆಯಲ್ಲಿಯೂ ಅನುಕೂಲಕರವಾದ ರಾಜಕಾರಣ ಮಾಡುವುದನ್ನು ನಾವು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಕೋಚಿಮುಲ್ ನಿರ್ದೇಶಕ ಕೆ.ಗುಡಿಯಪ್ಪ, ಚಿಕ್ಕಮುನಿಯಪ್ಪ, ಬಾಲಕೃಷ್ಣ, ನಾಗರಾಜ್, ಎನ್.ಮುನಿಯಪ್ಪ, ಸಮೀರ್, ತನ್ವೀರ್, ಕೃಷ್ಣಪ್ಪ, ಅಬ್ದುಲ್ಗಫೂರ್, ಸಾದಿಕ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಕ್ಷುದ್ರಗ್ರಹಗಳ ಅಧ್ಯಯನ: ಶೋಧನೌಕೆ ಡಾನ್ ಪಯಣ

0

‘ನಾವಿಂದು ವೆಸ್ತಾದ ಕಕ್ಷೆಯನ್ನು ಸೇರಲಿದ್ದೇವೆ!!’ ಸೆಕ್ಯುರಿಟಿ ಚೆಕ್ ಮಾಡಲು ಬಂದÀವನಿಗೆ ಮುಖದ ತುಂಬಾ ನಗು ತುಂಬಿದ ಇಂಜಿನಿಯರ್ ಮಾರ್ಕ್ ರೇಮಂಡ್ ಹೇಳಿದ. ಆ ನಗು ಸಾಂಕ್ರಾಮಿಕವಾಗಿ ಬಿಗುಮುಖದ ಗಾರ್ಡ್‍ನನ್ನೂ ಆವರಿಸಿಕೊಂಡುಬಿಟ್ಟಿತು. ಆತನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ, ‘ಹೌದೇ ಸರ್?’ ಎಂದು ಆತನೂ ಸಂಭ್ರಮಿಸುತ್ತ ತಪಾಸಣೆ ನಡೆಸತೊಡಗಿದ.
ಅಂದು ಜುಲೈ 16, 2011. ಮುಂಜಾನೆಯೇ ತಂತ್ರಜ್ಞರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯ ಕಛೇರಿಯೊಳಗೆ ನುಗ್ಗುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹಾರಿಬಿಟ್ಟ ‘ಡಾನ್’ ಅಂದು ತನ್ನ ಗುರಿಯನ್ನು ತಲುಪಲಿದೆ.
ಏನಿದು ವೆಸ್ತಾ? ಏನಿದು ಡಾನ್? ಅದು ಹೊರಟಿದ್ದೆಲ್ಲಿಗೆ?
‘ಡಾನ್’ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತರಿಕ್ಷಕ್ಕೆ ಕಳುಹಿಸಿದ ರೊಬಾಟ್ ನೌಕೆ. ಸೌರಮಂಡಲದ ನಡುವಿನ ‘ಕ್ಷುದ್ರಗ್ರಹಗಳ ಪಟ್ಟಿ’ಯ* ಪ್ರಮುಖ ಎರಡು ಕಾಯಗಳಾದ ವೆಸ್ತಾ ಮತ್ತು ಸಿರಿಸ್‍ಗಳ ರಹಸ್ಯಗಳನ್ನು ಭೇದಿಸಲು ಹೊರಟ ಬಾನವಾಹನ.
ತುಂಬಾ ಹಿಂದೆ ಬಾನಲ್ಲಿ ದೂಳು ಮತ್ತು ಅನಿಲ ಒಗ್ಗೂಡುತ್ತ ಬಂದು ಅಲ್ಲಲ್ಲಿ ಗುರುತ್ವದ ಕೇಂದ್ರಗಳಾಗುತ್ತಾ ಗ್ರಹಗಳು ತಯಾರಾದವು ಮತ್ತು ಕೇಂದ್ರದಲ್ಲಿದ್ದ ಸೂರ್ಯನ ಸುತ್ತ ಸುತ್ತತೊಡಗಿದವು, ಆ ಗ್ರಹಗಳಲ್ಲೊಂದು ಭೂಮಿ, ಮುಂದೆ ಭೂಮಿಯಲ್ಲಿ ಜೀವಿಗಳ ಉಗಮವಾಯಿತು ಎಂದೆಲ್ಲ ನಾವು ಶಾಲೆಯಲ್ಲಿ ಓದಿದ್ದೇವೆ. ಆದರೆ ನಮ್ಮ ಸೌರಮಂಡಲದ ವಿಧವಿಧದ ಗ್ರಹಗಳ ರಚನೆಗೆ ಕಾರಣವೇನು? ಭೂಮಿ ಹೇಗೆ ನೀಲಿ ಗ್ರಹವಾಯಿತು? ಭೂಮಿಯ ಹೊರತಾಗಿ ಬೇರೆಲ್ಲಾದರೂ ನೀರಿರಬಹುದೆ? ಜೀವಿಗಳಿರಬಹುದೆ?
ಇವು ಮಾನವನನ್ನು ಎಂದಿನಿಂದಲೂ ಕಾಡುತ್ತಿರುವ ಪ್ರಶ್ನೆಗಳು. ಪುರಾತನ ಕಾಲದಿಂದ ಹಿಡಿದು ಇಂದಿನ ಆಧುನಿಕ ವಿಜ್ಞಾನದವರೆಗೆ ಬಾಹ್ಯಾಕಾಶದ ಕೌತುಕಗಳಿಗೆ ವಿವರಣೆ ನೀಡಲು ಮಾನವ ಹಿಡಿದ ದಾರಿ ನೂರಾರು. ಐವತ್ತು ವರ್ಷಗಳ ಹಿಂದೆ ಮೊದಲ ಮಾನವ ನಿರ್ಮಿತ ಉಪಗ್ರಹ ಗಗನಕ್ಕೆ ಹಾರಿದ ನಂತರದ ವರ್ಷಗಳಲ್ಲಿ ಸಿರಿವಂತ, ಮಧ್ಯಮವರ್ಗಕ್ಕೆ ಸೇರಿದ (ಆರ್ಥಿಕ ಸಂಪತ್ತಿನ ಅರ್ಥದಲ್ಲಿ) ದೇಶಗಳು ಅಂತರಿಕ್ಷ ಅವಲೋಕನಕ್ಕೆ ಸಾಕಷ್ಟು ಹಣವನ್ನು ಮೀಸಲಾಗಿಡತೊಡಗಿವೆ. ಈ ನಿಟ್ಟಿನಲ್ಲಿ ಅಮೆರಿಕದ ನಾಸಾ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಹೆಚ್ಚಿನ ದೇಶಗಳು ಭೂಮಿಯ ಸುತ್ತಲ ಪ್ರದೇಶಕ್ಕೆ ತಮ್ಮ ಸಂಶೋಧನೆಗಳನ್ನು ಸೀಮಿತವಾಗಿರಿಸಿದರೆ ನಾಸಾ ಸೌರಮಂಡಲದ ಇತರ ಗ್ರಹಗಳನ್ನು, ಅಂತರ ಗ್ರಹ ವಲಯಗಳನ್ನು ಹಾಗೂ ಅನ್ಯತಾರೆಗಳನ್ನು ಅಧ್ಯಯನ ನಡೆಸುವ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ಇಂಥಹ ಯೋಜನೆಗಳಲ್ಲೊಂದು ಕ್ಷುದ್ರಗ್ರಹಗಳ ಪರಿಶೋಧನೆ. ನಾಸಾದ ‘ಡಾನ್’ ಹೆಸರಿನ ಗಗನನೌಕೆ ಕ್ಷುದ್ರಗ್ರಹಗಳ ವಲಯದ ಪ್ರಮುಖ ಸದಸ್ಯರುಗಳಾದ ವೆಸ್ತಾ ಮತ್ತು ಸಿರಿಸ್ ಗಳ ಬಳಿ ಸಾಗಿ ಸಂಶೋಧನೆ ನಡೆಸಲಿದೆ. ಇದೇ ಮೊದಲ ಬಾರಿ ಎರಡು ಆಕಾಶಕಾಯಗಳ ಅಧ್ಯಯನಕ್ಕೆಂದು ಮಾನವ ನಿರ್ಮಿತ ಬಾನನೌಕೆ ಹಾರಿದೆ.
ವೆಸ್ತಾ ಮತ್ತು ಸಿರಿಸ್ ಇವೆರಡೂ ಸೌರಮಂಡಲದ ಉಗಮದ ವೇಳೆಯಲ್ಲಿ ರೂಪುಗೊಂಡ ಕಾಯಗಳು. ಇದುವರೆಗಿನ ಅನ್ವೇಷಣೆಯ ಪ್ರಕಾರ ಗ್ರಹಗಳಾಗಬೇಕಿದ್ದ ವೆಸ್ತಾ ಮತ್ತು ಸಿರಿಸ್ ರಚನೆ ಬೃಹದ್ ಕಾಯವಾದ ಗುರುಗ್ರಹದ ಗುರುತ್ವದ ಬಲದೆದುರು ಒಂದು ಹಂತದಲ್ಲಿ ಸ್ತಬ್ಧವಾಗಿಬಿಟ್ಟಿದೆ. ಇಲ್ಲವಾದರೆ ಮಂಗಳನ ಸಮೀಪವಿರುವ ವೆಸ್ತಾ ಬುಧ, ಶುಕ್ರ ಭೂಮಿ ಮತ್ತು ಮಂಗಳರಂತೆ ಗಟ್ಟಿ ಗ್ರಹವೂ ಗುರುವಿಗೆ ಸಮೀಪವಿರುವ ಸಿರಿಸ್ ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್‍ಗಳಂತೆ ಅನಿಲದ ಚೆಂಡಾಗಿಯೂ ಹಾರುವ ಸಾಧ್ಯತೆ ಇತ್ತು. ಈ ಎರಡೂ ಸಂಪೂರ್ಣ ವಿಕಾಸ ಹೊಂದಿಲ್ಲದ ಕಾರಣ ಅವುಗಳ ಅಧ್ಯಯನವು ಸೌರಮಂಡಲದ ರಚನೆಯ ಕುರಿತು ಇನ್ನಷ್ಟು ಬೆಳಕು ಚೆಲ್ಲಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ. ಸೌರವ್ಯೂಹದ ಉಗಮದ ಕುರುಹುಗಳನ್ನು ಇನ್ನೂ ಧರಿಸಿರುವ ಇವೆರಡೂ ಕ್ಷುದ್ರಗ್ರಹಗಳನ್ನು ‘ಪ್ರೋಟೋಗ್ರಹಗಳು’ ಅಥವಾ ಆದಿಗ್ರಹಗಳೆಂದು ಕರೆಯಲಾಗುತ್ತಿದೆ.
ಡಾನ್ ಉಡ್ಡಯನ:
ನಾಲ್ಕು ವರ್ಷಗಳ ಹಿಂದೆ ಹತ್ತಾರು ಉಪಕರಣಗಳನ್ನು ಹೊತ್ತ ಡಾನ್ ನೌಕೆ ದಿಗಂತದೆಡೆಗೆ ಹಾರಿತು. ಮೂರು ಹಂತದ ಉಡ್ಡಯನದಲ್ಲಿ ರಾಕೆಟ್ಟುಗಳಿಂದ ವೇಗವನ್ನು ಪಡೆದು ಭೂಗುರುತ್ವವನ್ನು ಮೀರಿ ಚಿಮ್ಮುತ್ತ ಮುನ್ನಡೆದ ಡಾನ್ ಭೂವಾತಾವರಣವನ್ನು ದಾಟುತ್ತಲೇ ಕೇಬಲ್ ಹಗ್ಗಗಳಿಂದ ಬಂಧಿತವಾಗಿದ್ದ ಸೌರರೆಕ್ಕೆಗಳು ನಿಧಾನವಾಗಿ ಬಿಚ್ಚಿಕೊಂಡವು. ಇದಕ್ಕೆ ಮುನ್ನ ಸೂರ್ಯನಿರುವ ದಿಕ್ಕನ್ನು ಖಚಿತಪಡಿಸಿಕೊಂಡು ಆಕಡೆಗೆ ಸೌರರೆಕ್ಕೆಗಳನ್ನು ತಿರುಗಿಸಲೆಂದು ಪುಟ್ಟದೆರಡು ಸೋಲಾರ್ ಸೆಲ್ಲುಗಳು ಕಣ್ಣುಬಿಟ್ಟು ಸೂರ್ಯನನ್ನು ಗುರುತಿಸಿದವು. ಮುಂದಿನ 8 ವರ್ಷಗಳ ಕಾರ್ಯಾವಧಿಗೆ ಡಾನ್‍ನ ಉಪಕರಣಗಳಿಗೆ ಬೇಕಾದೆಲ್ಲ ವಿದ್ಯುತ್ ಶಕ್ತಿಯನ್ನೂ ಈಗಲೇ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಏಕೆಂದರೆ ಈಗ ಡಾನ್ ಸಾಗುತ್ತಿರುವುದು ಸೂರ್ಯನಿಂದ ದೂರದೂರಕ್ಕೆ, ಅಂದರೆ ಬಿಸಿಲು ಪ್ರಖರವಾಗಿಲ್ಲದ ಪ್ರದೇಶಕ್ಕೆ. (ಈ ಸೋಲಾರ್ ರೆಕ್ಕೆಗಳೋ ಅಮಿತ ಸಾಮಥ್ರ್ಯವುಳ್ಳವು. ಇರುವ ಐದು ರೆಕ್ಕೆಗಳಲ್ಲಿ ಒಂದೇ ಒಂದು ಕೆಲಸ ಮಾಡಿದರೂ ಇಡೀ ನೌಕೆಗೆ ಬೇಕಾಗುವಷ್ಟು ಸೌರವಿದ್ಯುತ್ ದೊರೆಯುತ್ತದೆ.)
ಡಾನ್ ಹೊತ್ತು ಸಾಗುತ್ತಿರುವ ಪ್ರಮುಖ ವೈಜ್ಞಾನಿಕ ಉಪಕರಣಗಳು: 1. ಫ್ರೇಮಿಂಗ್ ಕ್ಯಾಮೆರಾ 2. ಅವಗೆಂಪು ಮತ್ತು ಬೆಳಕಿನ ಸ್ಪೆಕ್ಟ್ರೋಮೀಟರ್ 3. ಗಾಮಾ ಕಿರಣ ಮತ್ತು ನ್ಯೂಟ್ರಾನ್ ಕಣ ಡಿಟೆಕ್ಟರ್
ಈ ಹಂತದಲ್ಲಿ ಅಯಾನ್ ಇಂಜಿನ್ ನೌಕೆಯನ್ನು ಮುನ್ನಡೆಸುತ್ತದೆ. ಅಯಾನ್ ಇಂಜಿನ್ನಿನಲ್ಲಿ ಕ್ಸೆನಾನ್ ಎಂಬ ಜಡ ಅನಿಲವನ್ನು ಬಳಸಲಾಗುತ್ತದೆ. ಬಲವಾದ ಸೌರವಿದ್ಯುತ್ ಕಿರಣಗಳು ಕ್ಸೆನಾನ್ ಅನಿಲದ ಮೇಲೆ ಬಿದ್ದಾಗ ಅದರ ಅಯಾನುಗಳು(ಅಂದರೆ ಅಸ್ಥಿರವಾದ ಅಣುಗಳು) ಬಿಡುಗಡೆಯಾಗುತ್ತವೆ. ಆ ಅಣುಗಳು ಅಪಾರ ವೇಗದಿಂದ ನೌಕೆಯ ಹಿಂಭಾಗದ ಸೂಸುನಳಿಕೆಯ ಮೂಲಕ ಹೊರಬಿದ್ದಾಗ ನೌಕೆಯು ಅದೇ ವೇಗವನ್ನು ಪಡೆದು ಮುಂದೆ ಹಾರುತ್ತದೆ.
ಇನ್ನು ಮುಂದೆ ಮಾತೃಗ್ರಹಕ್ಕೆ ಸಂದೇಶಗಳನ್ನು ಕಳುಹಿಸುವ ಸಮಯ. ಇಲ್ಲಿಯವರೆಗೂ ನಿದ್ರಾವಸ್ಥೆಯಲ್ಲಿರುವ (ಹೈಬರ್‍ನೇಶನ್) ಒಳಗಿರುವ ವೈಜ್ಞಾನಿಕ ಉಪಕರಣಗಳೆಲ್ಲವೂ ಬೆಚ್ಚಗಾಗುತ್ತವೆ. ಡಾನ್‍ನ ಅಂಟೆನಾಗಳ ಮೂಲಕ ರೇಡಿಯೋ ಟ್ರಾನ್ಸ್‍ಮೀಟರ್ ತನ್ನ ಕೆಲಸವನ್ನು ಆರಂಭಿಸುತ್ತದೆ. ಇದಕ್ಕೆಂದು ನೌಕೆಯೊಳಗೆ ಭದ್ರಪಡಿಸಿರುವ ಪ್ರಮುಖ ಅಂಟೆನಾ ಐದಡಿ ಉದ್ದವಿದೆ. ಇನ್ನೆರಡು ಪುಟ್ಟ ಅಂಟೆನಾಗಳು ನೌಕೆಯ ನಿರ್ವಹಣಾ ವಿವರಗಳನ್ನು ಕಳಿಸಿದರೆ ಈ ಮುಖ್ಯ ಅಂಟೆನಾ ಮಹತ್ವದ ವೈಜ್ಞಾನಿಕ ಮಾಹಿತಿಗಳು ಹಾಗೂ ಸ್ಪಷ್ಟ ಚಿತ್ರಗಳನ್ನು ಕಳಿಸಲು ಬಳಕೆಯಾಗುತ್ತದೆ. ಭೂಮಿಯತ್ತ ಸಂದೇಶಗಳು ಪ್ರಸಾರವಾಗತೊಡಗುತ್ತವೆ. ಗಿರಕಿ ಹೊಡೆಯುತ್ತಿರುವ ಡಾನ್‍ನ ಅಂಟೆನಾಗಳು ಭೂಮಿಯತ್ತ ಮುಖ ಮಾಡಿದಾಗ ಅಂದರೆ ತಾಸಿಗೆ ಮೂವತ್ತು ನಿಮಿಷಗಳ ಕಾಲ ಮಾತ್ರ ಸಂದೇಶಗಳು ಬೆಳಕಿನ ವೇಗದಲ್ಲಿ ಓಡುತ್ತ ಭೂಪ್ರಯೋಗಾಲಯಗಳನ್ನು ಸೇರುತ್ತವೆ.
ಮೊದಲ ಮೂರು ತಾಸಿನೊಳಗೆ ವಾಯುಮಂಡಲವನ್ನು ದಾಟಿ, ಭೂಉಪಗ್ರಹಗಳ ವಲಯವನ್ನೂ ಹಾದು ಹಾರಿದ ಡಾನ್ ಮುಂದೆ ಒಂದೇ ದಿನದೊಳಗೆ ಚಂದ್ರನ ಎಲಿಪ್ಟಿಕಲ್ ಕಕ್ಷೆಯನ್ನೂ ದಾಟಿ, ಇದುವರೆಗೆ ಮಾನವ ಅನ್ವೇಷಿಸದ ಬಾಹ್ಯಾಕಾಶ ಪ್ರದೇಶದಲ್ಲಿ ಹಾರಾಟ ನಡೆಸಿತು. ಆದರೆ ಅದಿನ್ನೂ ಡಾನಿಗೆ ಪ್ರಾರಂಭಿಕ ಹಂತವಷ್ಟೆ. ಮುಂದೆ ಇನ್ನೂ ಮತ್ತೂ ಪಯಣಿಸಬೇಕು.
ಎಂಥ ವಿಚಿತ್ರ! ‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎನ್ನುತ್ತಾರೆ. ಆದರೆ ಬಾಹ್ಯಾಕಾಶದ ವಿಷಯದಲ್ಲಿ ವಿಜ್ಞಾನಿಗಳು ಯಾವ ಕಲಾವಿದನ ಕಲ್ಪನೆಗೂ ಕಡಿಮೆಯಿಲ್ಲದಂತೆ ಅಥವಾ ಕಲಾವಿದನೊಬ್ಬ ಊಹೆಯನ್ನೂ ಮಾಡಲಾಗದ ಬ್ರಹ್ಮಾಂಡದ ಭಾಗವನ್ನು ಭೂಗ್ರಹದ ಪುಟ್ಟ ಪ್ರಯೋಗಾಲಯದಲ್ಲಿ ಕುಳಿತೇ ಶೋಧಿಸ ಹೊರಟಿದ್ದಾರೆ. ಆದರಿದು ಒಬ್ಬಿಬ್ಬರ ಬುದ್ಧಿವಂತಿಕೆಯ ಪ್ರದರ್ಶನವಲ್ಲ. ವಿಜ್ಞಾನದ ನಾನಾ ಕ್ಷೇತ್ರದ ಸಾವಿರಾರು ಅನ್ವೇಷಕರು ಹತ್ತಾರು ವರ್ಷಗಳಲ್ಲಿ ಸಾಧಿಸಿದ ಅಪ್ರತಿಮ ಸಾಧನೆಯ ಫಲವಿದು. ನಮ್ಮ ಪೂರ್ವಜರು ಹಾಕಿಕೊಟ್ಟ ಖಗೋಳಶಾಸ್ತ್ರದ ತಳಹದಿಯ ಮೇಲೆ ಇಂದಿನ ವಿಜ್ಞಾನ ವಿಕಾಸಗೊಂಡಿದೆ.
ದಿನಗಳು ಕಳೆದಂತೆ ಡಾನ್ ಇನ್ನೂ, ಮತ್ತೂ ವೇಗವನ್ನು ಪಡೆಯುತ್ತ ವೆಸ್ತಾದತ್ತ ಮುನ್ನುಗ್ಗುತ್ತಿದೆ. ಅಯಾನ್ ಇಂಜಿನ್ನಿನ ನೂಕು ಬಲವೇ ಅಂಥಾದ್ದು. ಮೊದಮೊದಲು ನಿಧಾನವಿದ್ದು ಮುಂದೆ ನಿರ್ವಾತ ಆಕಾಶದಲ್ಲಿ ಹೆಚ್ಚು ಬಲದಿಂದ ನೌಕೆಯನ್ನು ಮುಂದೂಡುತ್ತದೆ. ದಾರಿಯಲ್ಲಿ ಆಚೀಚಿನ ಆಕಾಶಕಾಯಗಳÀನ್ನು ಕ್ಯಾಮೆರಾ ಕ್ಲಿಕ್ಕಿಸುತ್ತದೆ. ಡಾನ್‍ನ ಅವರೋಹಿತ ಹಾಗೂ ದೃಷ್ಟಿಗೋಚರ ಸ್ಪೆಕ್ಟ್ರೋಮೀಟರ್‍ಗಳು ಸುತ್ತಲಿನ ಕಾಯಗಳು ಹೊರಸೂಸುವ ಬೆಳಕನ್ನು ಸೆರೆಹಿಡಿಯುತ್ತವೆ. ಆ ಚಿತ್ರಗಳು ಅದರ ಪಥ ನಿರ್ದೇಶನ ಮಾಡಲು ತಂತ್ರಜ್ಞರಿಗೆ ಸಹಾಯಕವಾಗುತ್ತವೆ. ಎರಡು ವರ್ಷ ಹಾರಿದ ಡಾನ್ 2009 ರಲ್ಲಿ ಮಂಗಳನ ಬಳಿ ಬಂದಾಗ ಅದರ ಗುರುತ್ವ ಬಲವನ್ನು ಉಪಯೋಗಿಸಿಕೊಂಡು ಇನ್ನೂ ವೇಗವನ್ನು ಹೆಚ್ಚಿಸಿಕೊಂಡಿದೆ.
ಮಂಗಳನನ್ನು ದಾಟಿ ಕ್ಷುದ್ರಗ್ರಹಗಳ ವಲಯವನ್ನು ಪ್ರವೇಶಿಸುವವರೆಗೂ ಡಾನ್ ವೇಗ ಏರುತ್ತಲೇ ಇತ್ತು. ವೆಸ್ತಾ ಡಾನ್‍ನ ಕ್ಯಾಮೆರಾ ಕಣ್ಣಿಗೆ ಬಿದ್ದಾಗಿನಿಂದ ಅದರ ವೇಗವನ್ನು ಹತೋಟಿಯಲ್ಲಿಟ್ಟು ಲೆಕ್ಕಾಚಾರ ಹಾಕಿ ಮುಂದುವರೆಯುವಂತೆ ಆದೇಶ ನೀಡಲಾಯಿತು.
ಜುಲೈ 1 ರಂದು ವೆಸ್ತಾ ತನ್ನ ಅಕ್ಷದ ಸುತ್ತ ತಿರುಗಲು 5 ತಾಸು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆಂಬುದನ್ನು ಡಾನ್ ದಾಖಲಿಸಿತು. ಇದೇ ಜುಲೈನಿಂದ ಮುಂದಿನ ಜುಲೈವರೆಗೆ ವೆಸ್ತಾದ ಕಕ್ಷೆಯಿಂದ ಸ್ವಲ್ಪವೇ ದೂರದಲ್ಲಿ ಅದರೊಂದಿಗೇ ಹಾರಾಟ ನಡೆಸುತ್ತ (ಭೂಮಿಯ ಸುತ್ತ ಚಂದ್ರ ತಿರುಗಿದಂತೆ) ಸತತ ಚಿತ್ರೀಕರಣ ನಡೆಸಲಿದೆ. ಸೂರ್ಯನನ್ನು ಸುತ್ತಲು ಭೂಮಿಯ ಐದೂಕಾಲು ವರ್ಷ ಕಾಲ ತೆಗೆದುಕೊಳ್ಳುವ ವೆಸ್ತಾಗೆ ಈ ಕಾಲ ಬೇಸಿಗೆ. ಅದರಲ್ಲೂ ಬೃಹದ್ ಕಣಿವೆಯುಳ್ಳ ದಕ್ಷಿಣ ಗೋಲಾರ್ಧದಲ್ಲಿ ಈಗ ಬಿರಿಬಿರಿ ಬಿಸಿಲು. ಚಿತ್ರಗಳನ್ನು ತೆಗೆಯಲು ಸಕಾಲ.
16 ಜುಲೈ. ಅಂದು ತಂತ್ರಜ್ಞರು ತವಕದಿಂದ ಕಾಯುತ್ತಿದ್ದ ದಿನ. ವೆಸ್ತಾದ ಕಕ್ಷೆಯನ್ನು ಪ್ರವೇಶಿಸಿದ ಡಾನ್ ಅದರ ಹಿಂದೆಯೇ ಹಾರುತ್ತ 16 ಸಾವಿರ ಕಿಮೀ ದೂರದಿಂದ ಚಿತ್ರವನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿದೆ. ಅಂದುಕೊಂಡಂತೆ, ಇನ್ನೂರೆಂಬತ್ತು ಕೋಟಿ ಕಿಮೀ ದೂರವನ್ನು ನಾಲ್ಕು ವರ್ಷಗಳಲ್ಲಿ ಕ್ರಮಿಸಿ ಪಂಕ್ಚರ್ ಆದ ಫುಟ್ ಬಾಲಿನಂತಿದ್ದ ವೆಸ್ತಾದ ಸ್ಪಷ್ಟ ಚಿತ್ರವನ್ನು ಅಂದು ಡಾನ್ ಕಳುಹಿಸಿದಾಗ ಪ್ರಯೋಗಾಲಯದಲ್ಲಿ ಕುಳಿತ ಡಾನ್ ತಂತ್ರಜ್ಞರು ಹರ್ಷಿಸಿದ್ದಾರೆ. ಇನ್ನೂ ವೆಸ್ತಾದ ಬಳಿ ಸಾಗುತ್ತ ಜುಲೈ 23ಕ್ಕೆ ಬರೀ 5200 ಕಿಮೀ ದೂರದಿಂದ ಡಾನ್ ಕಳಿಸಿರುವ ವೆಸ್ತಾದ ಮೇಲ್ಮೈ ಚಿತ್ರ ಸುಟ್ಟ ಹಪ್ಪಳದಂತಿದೆ.
ಇನ್ನೊಂದು ವರ್ಷ ವೆಸ್ತಾದೊಂದಿಗೆ ಹಾರಾಟ ನಡೆಸಿ ಡಾನ್ ತನ್ನ ಪಥವನ್ನು ಬದಲಿಸಲಿದೆ. ಅದರ ಅಯಾನ್ ಎಂಜಿನ್ನುಗಳು ಭೂಮಿಯಿಂದ ಆದೇಶ ಪಡೆದು ಹೊಸ ನೂಕು ಬಲವನ್ನು ಒದಗಿಸಿ ವೆಸ್ತಾದ ಕಕ್ಷೆಯಿಂದ ಆಚೆ ಜಿಗಿದು ಸಿರಿಸ್ ನತ್ತ ತಳ್ಳಲಿವೆ.
ಇದುವರೆಗೆ ದೊರೆತ ವಿವರಗಳೆಲ್ಲವೂ ಭೂದೂರದರ್ಶಕಗಳು ಹಾಗೂ ಗಗನದಲ್ಲಿದ್ದ ಹಬ್ಬಲ್ ದರ್ಶಕ ತೆಗೆದ ಚಿತ್ರಗಳಾಗಿವೆ. ಈಗ ಡಾನ್ ಕಳುಹಿಸುವ ಚಿತ್ರಗಳು ಇದುವರೆಗೆ ನಮಗೆ ತಿಳಿದಿಲ್ಲದ ನೂರಾರು ರಹಸ್ಯಗಳನ್ನು ಬಹಿರಂಗಪಡಿಸಲಿವೆ.
ಹಾರಲು ಅಡ್ಡಬಂದ ತೊಂದರೆಗಳು: ಡಾನ್ 2007ರ ಜೂನ್ 20 ರಂದೇ ಹಾರಬೇಕಿತ್ತು. ಆದರೆ ಒಂದಾದ ನಂತರ ಒಂದು ಅಡ್ಡ ತೊಂದರೆಗಳು ಎದುರಾದವು. ಮೊದಲ ನಿಗದಿತ ದಿನದಂದು ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಡಾನ್ ನ ಬಿಡಿಭಾಗಗಳಲ್ಲಿ ಕೆಲವು ಉಡ್ಡಯನಾ ಸ್ಥಳಕ್ಕೆ ಬಂದಿರಲಿಲ್ಲ. ಎಲ್ಲಾ ಸಿದ್ಧತೆ ನಡೆಸುತ್ತಿರುವಾಗ ಬಿಡಿಭಾಗಗಳನ್ನು ಜೋಡಿಸುವ ಕ್ರೇನ್ ಮುರಿಯಿತು, ಆನಂತರ ಎರಡನೇ ಹಂತದ ರಾಕೆಟ್ ಉಡ್ಡಯನಕ್ಕೆಂದು ಇಂಧನ ತುಂಬಿಸುವ ಕಾರ್ಯ ನಿಧಾನವಾಯಿತು. ಇಷ್ಟೆಲ್ಲ ನಡೆದಾಗ ಮಂಗಳ ಗ್ರಹಕ್ಕೆ ಹೊರಟಿದ್ದ ಫೀನಿಕ್ಸ್ ಅದೇ ಉಡ್ಡಯನಾ ಕೇಂದ್ರದಿಂದ ಹಾರುವ ಕಾರ್ಯದಲ್ಲಿ ಮತ್ತೂ ಒಂದಿಷ್ಟು ದಿನ ಕಳೆಯಿತು. ಇನ್ನೇನು ಹಾರುವ ದಿನದ ಕ್ಷಣಗಣನೆ ನಡೆಯುತ್ತಿರುವಾಗ ರಾಕೆಟ್ ಕಳಚಿ ಬೀಳಬೇಕಾಗಿದ್ದ ಸಮುದ್ರ ಪ್ರದೇಶದಲ್ಲಿ ನಿಷೇಧವಿದ್ದರೂ ಹಡಗೊಂದು ಚಲಿಸುತ್ತಿರುವುದು ಕಂಡುಬಂದಿತು. ದೂರಹೋಗಲು ಅದಕ್ಕೆ ಆಣತಿ ನೀಡುತ್ತಿರುವಂತೆಯೇ ಡಾನ್ ನ ಏರು ಮಾರ್ಗದಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಅಡ್ಡ ಬರುವ ಸೂಚನೆ ದೊರಕಿತು. ಅದೂ ದೂರ ಚಲಿಸಿದ ನಂತರ ಅಂತೂ 2007 ರ ಸೆಪ್ಟೆಂಬರ್À ಹತ್ತರಂದು ಡಾನ್ ಅಂತರಿಕ್ಷನೌಕೆ ದೂರದ ಪಯಣವನ್ನು ಆರಂಭಿಸಿತು.
*ಕ್ಷುದ್ರಗ್ರಹಗಳ ಪಟ್ಟಿ: ಆ ಕಡೆ ನಾಲ್ಕು, ಈ ಕಡೆ ನಾಲ್ಕು (ಪ್ಲೂಟೋ ಈಗ ಗ್ರಹವಲ್ಲ) ಹೀಗೆ ಎಂಟು ಗ್ರಹಕಕ್ಷೆಗಳ ನಡುವಿನ ತೆಳ್ಳನೆಯ ನಡುಪಟ್ಟಿ ಇದು. ಇದರಲ್ಲಿ ಲಕ್ಷಗÀಟ್ಟಲೆ ವಿವಿಧ ಆಕಾರದ, ವಿವಿಧ ಬಣ್ಣದ ಲೋಹ ಮತ್ತು ಬಂಡೆಚೂರುಗಳು ಹಾಗೂ ಧೂಳಿನ ಮೋಡಗಳು ಸೂರ್ಯನ ಸುತ್ತ ಗಿರಗಿಟ್ಲೆ ಸುತ್ತುತ್ತಿವೆ. ಪ್ರಮುಖ ಎಂಟುಗ್ರಹಗಳಿಗಿಂತ ಆಕಾರದಲ್ಲಿ ಚಿಕ್ಕದಾಗಿರುವ ಹಾಗೂ ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುವ ಈ ಕಾಯಗಳಿಗೆ ‘ಕ್ಷುದ್ರಗ್ರಹಗಳು’ ಎಂದು ಹೆಸರು. ಇವುಗಳಲ್ಲಿ ಸುಮಾರು ಒಂದು ಲಕ್ಷದಷ್ಟನ್ನು ಎಣಿಕೆ ಮಾಡಲಾಗಿದೆ, 12 ಸಾವಿರದಷ್ಟನ್ನು ಹೆಸರಿಸಲಾಗಿದೆ. ಇವೆಲ್ಲವುಗಳನ್ನು ಕ್ಷುದ್ರಗ್ರಹಗಳು ಎಂದು ಕರೆಯಲಾಗುತ್ತಿದೆ. ಆಗೀಗ ನಮಗೆ ಬಾನಿನಿಂದುದುರುವ ಉಲ್ಕೆಗಳು ಕಂಡು ಬರುತ್ತವಲ್ಲ? ಅವು ಇದೇ ಪಟ್ಟಿಯಲ್ಲಿ ನಡೆಯುವ ಗುದ್ದಾಟದ ಪರಿಣಾಮವಾಗಿ ಭೂಮಿಯತ್ತ ಜಿಗಿಯುವ ವಸ್ತುಗಳು. ಈ ಪಟ್ಟಿಯ ಆಚೆ ಸುತ್ತುತ್ತಿರುವ ಬೃಹದ್ ಕಾಯ ಗುರುಗ್ರಹ. ಈವರೆಗಿನ ಅನ್ವೇಷಣೆಗಳ ಪ್ರಕಾರ ನಾನೂರರವತ್ತು ಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಉಗಮವಾಗುತ್ತಿರುವಾಗ, ಈ ವಲಯದಲ್ಲಿ ಪಯಣಿಸುತ್ತಿದ್ದ ಪುಟ್ಟ ಪುಟ್ಟ ಕಾಯಗಳು ಗುರುತ್ವದ ಸೆಳೆತದಲ್ಲಿ ಒಂದಾಗಿ ದೊಡ್ಡದಾಗುತ್ತ ಗ್ರಹಗಳಾಗುವ ಸಂಭವವನ್ನು ತಪ್ಪಿಸಿದ್ದು ಗುರು ಗ್ರಹ. ಏಕೆಂದರೆ ಭರ್ರೆಂದು ಹಾರುತ್ತಿದ್ದ ಗುರುವಿನ ಗುರುತ್ವ ಈ ಪುಟ್ಟ ಕಾಯಗಳ ಕಕ್ಷಾಪಥವನ್ನೇ ತಪ್ಪಿಸಿ ಅವು ಒಂದಾಗುವ ಅವಕಾಶವನ್ನೇ ನೀಡುತ್ತಿಲ್ಲ.
ಇವುಗಳಲ್ಲಿ ಅತಿ ದೊಡ್ಡ ಕಾಯ ಸಿರಿಸ್. ಕ್ಷುದ್ರಗ್ರಹಗಳ ವಲಯಕ್ಕೆ ಅದ್ಯಾವುದೋ ತಪ್ಪಿನಿಂದಾಗಿ ಸಿಕ್ಕಿಬಿದ್ದಂತೆ ತೋರುವ ಭಾರವಾದ ಕಾಯ ಸಿರಿಸ್. ಏಕೆಂದರೆ ಉಳಿದ ಕ್ಷುದ್ರಗ್ರಹಗಳಂತೆ ಜಜ್ಜಿದ ಬಟಾಟೆಯ ಆಕಾರದ ಬದಲಾಗಿ ದುಂಡಗಿರುವ ಸಿರಿಸ್ ಮೇಲ್ಮೈನಲ್ಲಿ ದಪ್ಪನಾದ ಹಿಮ ಕವಚ ಹಾಗೂ ಒಳಗಡೆ ವಿವಿಧ ಪದರಗಳನ್ನು ಹೊದ್ದಿರುವ ಕಪ್ಪು ಕಾಯ. ಇದರ ವ್ಯಾಸ ಸುಮಾರು 930 ಕಿಮೀ. 1801 ರಲ್ಲಿ ಇದರ ಪತ್ತೆಯಾದಾಗಿನಿಂದ, ಇದರ ದುಂಡನೆಯ ಆಕಾರದಿಂದಾಗಿ ಮುಂದಿನ ಐವತ್ತು ವರ್ಷಗಳ ಕಾಲ ಎಂಟನೆಯ ಗ್ರಹವೆಂದೇ ಹೆಸರುಪಡೆದಿತ್ತಿದು. ಈಗಿದನ್ನು ಕಿರುಗ್ರಹ ಎಂದು ಕರೆಯಲಾಗುತ್ತಿದೆ.
ಎರಡನೆಯ ದೊಡ್ಡ ಕಾಯ ವೆಸ್ತಾ. ಎರಡೂ ಒಂದಕ್ಕೊಂದು ಸಮೀಪವಿದ್ದರೂ ರಚನೆಯಲ್ಲಿ ಅಜಗಜಾಂತರ. 530 ಕಿಮೀ ಅಗಲದ ವೆಸ್ತಾ ಮೊದಲ ನಾಲ್ಕು ಗ್ರಹಗಳಂತೆ ಬಂಡೆಗ್ರಹ. ಹಿಂದೊಂದು ಕಾಲದಲ್ಲಿ ಇದು ಕರಗಿದ ಲಾವಾದಿಂದ ಕೂಡಿದ್ದು ಕಾಲಾಂತರದಲ್ಲಿ ಅದು ಗಟ್ಟಿಯಾಗಿ ಭಾರಲೋಹಗಳು ತಳಕ್ಕೆ ಸೇರಿ ಬಂಡೆಕಲ್ಲುಗಳ ಕವಚ ಉಂಟಾಗಿರಬಹುದೆಂದು ಈವರೆಗಿನ ಶೋಧ ತಿಳಸುತ್ತದೆ. ಎಷ್ಟೋ ವರ್ಷಗಳ ಹಿಂದೆ ಯಾವುದೋ ವಸ್ತು ಢಿಕ್ಕಿ ಹೊಡೆದು ಆಳವಾದ ಕುಳಿಯೊಂದು ವೆಸ್ತಾದಲ್ಲಿ ಒಡಮೂಡಿದೆ. ಅದೆಷ್ಟು ಆಳವಾಗಿದೆಯೆಂದರೆ ವೆಸ್ತಾದ ಗರ್ಭದೊಳಗಿನ ರಚನೆಯೂ ಕಂಡುಬರುತ್ತಿವೆ. ಇದೇನಾದರೂ ನಿಜವಾದಲ್ಲಿ, ಭೂಮಿಯಂತೆ ಶಿಲಾಗ್ರಹವಾದ ವೆಸ್ತಾವನ್ನು ಅಧ್ಯಯನ ಮಾಡಿ ಭೂಮಿಯ ರಚನೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಈ ಕುಳಿಯಿರುವ ಭಾಗವೇ ಈಗ ಡಾನ್‍ಗೆ ಎದುರಾಗಿದೆ.
ಸರೋಜ ಪ್ರಕಾಶ್

ಅಂಧಮಕ್ಕಳೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ವರ್ಷಾಚರಣೆ

0

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಅಂಧಮಕ್ಕಳಿಗೆ ಊಟ ಮತ್ತು ಬಟ್ಟೆಗಳನ್ನು ನೀಡುವ ಮೂಲಕ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಹೊಸವರ್ಷಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಅಂಧಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ‘ಅಂಗವಿಕಲತೆ ಶಾಪವಲ್ಲ. ಅದೊಂದು ಆಕಸ್ಮಿಕವಷ್ಟೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಹಲವು ದಾರಿಗಳಿವೆ. ಅಂಗವಿಕಲರಿಗೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಸಿಗಬೇಕು. ಸರ್ಕಾರದ ಯೋಜನೆಗಳು ಅವರನ್ನು ತಲುಪಬೇಕು. ಹೊಸವರ್ಷವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಇದೇ ಉತ್ತಮ ಆದರ್ಶಗಳೊಂದಿಗೆ ಬಲಪಡಿಸುವತ್ತ ಶ್ರಮಿಸಬೇಕು. ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಒಳ್ಳೆಯ ಕೆಲಸಗಳು ಉತ್ತಮ ಫಲಗಳನ್ನೇ ನೀಡುತ್ತವೆ’ ಎಂದು ಹೇಳಿದರು. ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಹಾಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಚಿಕ್ಕಮುನಿಯಪ್ಪ, ಲಕ್ಷ್ಮೀನಾರಾಯಣ, ಗುಡಿಯಪ್ಪ, ಎಚ್.ಎಂ.ಮುನಿಯಪ್ಪ, ರಾಮಕೃಷ್ಣಪ್ಪ, ಬಾಲಕೃಷ್ಣ, ಎನ್.ಮುನಿಯಪ್ಪ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಉದ್ಘಾಟನೆ

0

ರೈತರಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಅವಕಾಶ ಸಿಗುವಂತೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಮತ್ತು ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಅಭಾವದಿಂದಾಗಿ ಕೃಷಿ ಕಾರ್ಯ ಕಷ್ಟವಾಗುತ್ತಿದೆ. ಅದಕ್ಕಾಗಿ ಹಲವಾರು ಯಂತ್ರೋಪಕರಣಗಳ ಆವಿಷ್ಕಾರವಾಗುತ್ತಿವೆ. ಆದರೆ ಎಲ್ಲಾ ರೈತರೂ ಯಂತ್ರೋಪಕರಣಗಳಿಗೆ ಹಣ ವ್ಯಯಿಸಲು ಶಕ್ತರಾಗಿರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಹೋಬಳಿ ಮಟ್ಟದಲ್ಲಿ ಕಚೇರಿಗಳನ್ನು ತೆರೆದಿದ್ದು, ರೈತರಿಗೆ ಸುಲಭ ಬೆಲೆಯಲ್ಲಿ ಬಾಡಿಗೆಗೆ ಯಂತ್ರೋಪಕರಣಗಳು ಸಿಗುತ್ತಿರುವುದು ಒಂದು ರೀತಿಯ ವರದಾನದಂತಿದೆ ಎಂದು ಹೇಳಿದರು.
ಅಲ್ಪ ಸ್ವಲ್ಪ ನೀರಿನಲ್ಲೇ ನಮ್ಮ ಭಾಗದ ರೈತರು ಹಲವಾರು ಬೆಳೆಗಳನ್ನು ಬೆಳೆಯುವ ಸಾಹಸಿಗಳಾಗಿದ್ದಾರೆ. ಇನ್ನು ಶಾಶ್ವತ ನೀರಾವರಿ ಯೋಜನೆಯು ಈ ಭಾಗಕ್ಕೆ ಬಂದಲ್ಲಿ ಆಹಾರ ಉತ್ಪನ್ನ ಬೆಳೆಯುವುದಲ್ಲದೆ, ಆರ್ಥಿಕವಾಗಿಯೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರಾಧಾಕೃಷ್ಣರಾವ್ ಮಾತನಾಡಿ, ‘ಕಳೆದ 33 ವರ್ಷಗಳಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಯೋಜನೆಯನ್ನು ನಡೆಸುತ್ತಿದ್ದೇವೆ. ಕೆಲವು ವರ್ಷಗಳಿಂದ ಸರ್ಕಾರದೊಂದಿಗೆ ಸೇರಿ 180 ಹೋಬಳಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಒಟ್ಟು 90 ಕೋಟಿ ರೂಗಳನ್ನು ಕೃಷಿ ಯಂತ್ರೋಪಕರಣಗಳಿಗೆ ಮೀಸಲಿಡಲಾಗಿದೆ. ರಾಜ್ಯಾದ್ಯಂತ 2 ಲಕ್ಷ 25 ಸಾವಿರ ವೃದ್ಧ ರೈತರಿಗೆ ಪಿಂಚಣಿ ಸೌಲಭ್ಯವನ್ನು ನಮ್ಮ ಸಂಸ್ಥೆ ವತಿಯಿಂದ ಒದಗಿಸುತ್ತಿದ್ದೇವೆ. ಜಂಗಮಕೋಟೆ ಹೋಬಳಿಯಲ್ಲಿಯೂ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ’ ಎಂದು ಹೇಳಿದರು.
ಟ್ರಾಕ್ಟರ್, ಮಿನಿ ಟ್ರಾಕ್ಟರ್, ಟಿಲ್ಲರ್, ಡಿಸ್ಕ್, ಕಲ್ಟಿವೇಟರ್, ರಾಗಿ ಕ್ಲೀನಿಂಗ್ ಮಿಷಿನ್, ಪವರ್ ಸ್ಪ್ರೇಯರ್, ಯಂತ್ರಚಾಲಿತ ಬಿತ್ತನೆ ಕೂರಿಗೆ ಮುಂತಾದ ಬಾಡಿಗೆ ನೀಡುವ ಯಂತ್ರೋಪಕರಣಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕ್ರೆ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎಸ್.ಅಬೀದ್, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಆನಂದ್, ಗುಡಿಯಪ್ಪ, ಭಕ್ತರಹಳ್ಳಿ ಬೈರೇಗೌಡ, ಸೂರ್ಯನಾರಾಯಣಗೌಡ, ಎಚ್.ಎಂ.ಮುನಿಯಪ್ಪ, ಕೃಷ್ಣಪ್ಪ, ಜಯಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಗೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೆಂತೆಸೊಪ್ಪಿನ ಅನ್ನ (ಮೇತಿ ಬಾತ್)

0

ಬೇಕಾಗುವ ಸಾಮಗ್ರಿ:
3-4 ಮೆಂತೆ ಸೊಪ್ಪು ಕಟ್ಟು
2 ಕ್ಯಾರೆಟ್
6-8 ಬೀನ್ಸ್
1 ಡೊಳ್ಳು ಮೆಣಸು
2 ಈರುಳ್ಳಿ
2-3 ಹಸಿಮೆಣಸು
1/2 ಮುಷ್ಟಿಯಾಗುವಷ್ಟು ಶೇಂಗ
ಉಪ್ಪು
ಅರ್ಧ ನಿಂಬೆಹಣ್ಣು
ಮಾಡುವ ವಿಧಾನ:
ಮೊದಲು ಅನ್ನವನ್ನು ತಯಾರು ಮಾಡಿಟ್ಟುಕೊಳ್ಳಿ.
ಮೆಂತೆ ಸೊಪ್ಪಿನ ದಂಟನ್ನು ತೆಗೆದು ಸ್ವಚ್ಛ ಮಾಡಿ, ತರಕಾರಿಯನ್ನು ಮತ್ತು ಸೊಪ್ಪನ್ನು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಶೇಂಗವನ್ನು ಹುರಿದುಕೊಳ್ಳಿ, ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನಬೇಳೆ ಅರಿಶಿನ ಪುಡಿ ಹಾಕಿ, ಅದು ಸಿಡಿದ ನಂತರ ಹಸಿ ಮೆಣಸು ಈರುಳ್ಳಿ ಹೆಚ್ಚಿಟ್ಟುಕೊಂಡ ಸೊಪ್ಪು ತರಕಾರಿಯನ್ನು ಹಾಕಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹಾಕಿ ಹುರಿಯಿರಿ. ಮಿಶ್ರಣಕ್ಕೆ ಉಪ್ಪು ಹಾಕಿದ ಕಾರಣ ಸ್ವಲ್ಪ ನೀರು ಬರುತ್ತದೆ. ಆ ನೀರು ಪೂರ್ತಿಯಾಗಿ ಆರುವವರೆಗೆ ಹುರಿಯಿರಿ. ಅದೇ ನೀರು ತರಕಾರಿ ಬೇಯಲು ಸಾಕಾಗುತ್ತದೆ.
ಮೆಂತೆ ಸೊಪ್ಪಿನ ಪಲ್ಯ ತಯಾರಾಗಿದೆ. ಇದಕ್ಕೆ ರುಚಿಗೆ ಸರಿಯಾಗುವಷ್ಟು ಅನ್ನವನ್ನು ಹಾಕಿ ಕಲಸಿ. ಕೊನೆಯದಾಗಿ ಲಿಂಬುವನ್ನು ಹಿಂಡಿ ಮತ್ತೊಮ್ಮೆ ಮಿಶ್ರಣವನ್ನು ಕಲಸಿ. ಲಿಂಬುವು ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ, ಹುಳಿ ಬೇಡದವರು ಹಾಕದೆಯು ತಿನ್ನಬಹುದು.
ತರಕಾರಿಯನ್ನು ಕೂಡ ಇಷ್ಟವಾಗದೇ ಇರುವವರು ಹಾಗೆಯೇ ಮೆಂತೆ ಈರುಳ್ಳಿಯ್ನನು ಹಾಕಿ ಪಲ್ಯ ಮಾಡಿ ಅದಕ್ಕೆ ಅನ್ನ ಕಲಸಿ ತಿನ್ನಬಹುದು. ಇನ್ನು ಬೇರೆ ತರಕಾರಿ ಅಂದರೆ ಹೂಕೋಸು, ಎಲೆಕೋಸು, ಆಲೂ ಕೂಡ ಸೇರಿಸಿ ಪಲ್ಯ ಮಾಡಬಹುದು.
ಇದನ್ನು ಹಾಗೆಯೂ ತಿನ್ನಬಹುದು, ಇಲ್ಲದಿದ್ದರೆ ಮೊಸರು ಬಜ್ಜಿ (ಸ್ವಲ್ಪ ಮೊಸರಿಗೆ 1 ಈರುಳ್ಳಿಯನ್ನು ಹೆಚ್ಚಿ ಉಪ್ಪು ಕೊತ್ತುಂಬರಿ ಸೊಪ್ಪು ಹಾಕಿ ಮಾಡುವುದು) ಯೊಡನೆಯು ತಿನ್ನಬಹುದು.
ತರಕಾರಿ ಯಾವುದು ಬೇಕು ಯಾವುದು ಬೇಡ ಎನ್ನುವುದು ತಿನ್ನುವವರ ಇಚ್ಛೆ.
ಇದೇ ವಿಧಾನದಲ್ಲಿ ಸಬ್ಬಸ್ಸಿಗೆ ಸೊಪ್ಪಿನ ಅನ್ನವನ್ನು ಮಾಡಬಹುದು.

ಶಿಡ್ಲಘಟ್ಟದಲ್ಲಿ ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ

0

ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂಬ ವಿಶೇಷ ದಿನವೆಂದು ಗುರುವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮೀ ಶ್ರೀನಿವಾಸರ ಅಲಂಕೃತ ಬೃಹತ್ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗಾಗಿ ವೈಕುಂಠ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.

2jan2
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ಮುಂದಿನ ಅಲಂಕೃತ ದೀಪ.

ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ವಾಸವಿ ರಸ್ತೆಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
‘ಈ ವರ್ಷದ ಮೊದಲ ದಿನವೇ ವೈಕುಂಠ ಏಕಾದಶಿ ಬಂದಿರುವುದರಿಂದ ದೇವರ ಸೇವೆಯೊಂದಿಗೆ ವರ್ಷಾರಂಭವನ್ನು ಮಾಡುತ್ತಿದ್ದೇವೆ. ಬೆಳಿಗ್ಗೆ ದೇವರ ಆಶೀರ್ವಾದದಂತೆ ಮಳೆ ಬರುವ ಮೂಲಕ ಶುಭಪ್ರದವಾಗಿದೆ. ವೈಕುಂಠವನ್ನು ದರ್ಶಿಸಿ ಭಕ್ತರು ಸಾಯಿನಾಥ, ಗಣೇಶ, ಅಯ್ಯಪ್ಪ, ಸುಬ್ರಮಣ್ಯ ಸ್ವಾಮಿಯವರ ದರ್ಶನವನ್ನು ಹಾಗೂ ಪೂಜೆಯನ್ನು ನಡೆಸಿಕೊಂಡು ಪ್ರಸಾದವನ್ನು ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.

ರೇಷ್ಮೆ ಗೂಡಿಗೆ ಸರ್ಕಾರದಿಂದ 350 ರೂಪಾಯಿಗಳ ಬೆಲೆ ನಿಗದಿಗೊಳಿಸಬೇಕು

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಂಘವನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ಹಿಂದೆ ಇದ್ದ ಸಮಿತಿಯನ್ನು ವಿಸರ್ಜಿಸಿ ನೂತನ ಶಿಡ್ಲಘಟ್ಟ ತಾಲ್ಲೂಕು ಶಾಖೆಯನ್ನು ರೂಪಿಸುತ್ತಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೇಷ್ಮೆ ಗೂಡಿಗೆ ಸರ್ಕಾರದಿಂದ 350 ರೂಪಾಯಿಗಳ ಬೆಲೆ ನಿಗದಿಗೊಳಿಸಬೇಕು. ಅದಕ್ಕಿಂತ ಕಡಿಮೆಯಾದಲ್ಲಿ ಸರ್ಕಾರ ಸಹಾಯಧನ ನೀಡಬೇಕು. ಬಯಲುಸೀಮೆ ಪ್ರದೇಶಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೈನುಗಾರಿಕೆಗೆ ಸಾಕಷ್ಟು ತೊಂದರೆಗಳಿವೆ. ಅವನ್ನು ನಿವಾರಿಸಲು ಕ್ರಮ ಕೈಗೊಳ್ಳುವುದರೊಂದಿಗೆ ಹಾಲಿನ ಬೆಲೆ ಲೀಟರ್ಗೆ 30 ರೂಪಾಯಿ ನಿಗದಿಗೊಳಿಸಬೇಕು. ರೈತರ ಮೋಟರ್ ಪಂಪ್ಸೆಟ್ಗಳಿಗೆ ಬೆಸ್ಕಾಂ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು. ರೈತ ದಿನಾಚರಣೆಗೆ ರಜಾ ಘೋಷಿಸಬೇಕು. ರಾಜಕೀಯ ಮುಖಂಡರು ಶಾಶ್ವತ ನೀರಾವರಿ ವಿಚಾರದಲ್ಲಿ ಸುಳ್ಳಿ ಭರವಸೆಗಳನ್ನು ನೀಡುವುದನ್ನು ನಿಲ್ಲಿಸಿ ರೈತರೊಂದಿಗೆ ಹೋರಾಟಕ್ಕಿಳಿಯಬೇಕು. ಎಲ್ಲಾ ಸಂಘ ಸಂಸ್ಥೆಗಳೂ ಒಗ್ಗೂಡಿ ಶಾಶ್ವತ ನೀರಾವರಿಗೆ ಹೋರಾಡಬೇಕೆಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೆಂಪಣ್ಣ, ಟಿ.ಆರ್.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಗೌರವಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ನಾಗರಾಜು, ಸುರೇಶ್, ರಾಮಮೂರ್ತಿ, ಬೈರಪ್ಪ, ಬಾಲಮುರಳಿ, ಹನುಮಂತಯ್ಯ, ಮುನೇಗೌಡ, ಆಂಜಿನಪ್ಪ, ಮುರಳಿ, ಮುನಿಶಾಮಗೌಡ, ನಾಗೇಶ್, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಭೆ

0

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು.
ಈಚೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ಸಂಗಟನೆಗಳ ನೇತೃತ್ವದಲ್ಲಿ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸರಿಪಡಿಸಿಲ್ಲವೆಂದು ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಂ.ರಾಜಣ್ಣ ಅವರು ಭಾಗವಹಿಸಿದ ಸಭೆಯು ಪ್ರಾಮುಖ್ಯತೆ ಪಡೆದಿತ್ತು.
ಸಭೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್,ಕಾಲೇಜಿನ ಸಮಸ್ಯೆಗಳ ಕುರಿತಂತೆ ಮನವಿ ಪತ್ರವನ್ನು ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಯಾದ ಕಾಂಪೋಂಡ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಸುಭದ್ರ ಕಾಂಪೋಂಡ್ ಇಲ್ಲದೆ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಬೆಳಿಗ್ಗೆ ಕಾಲೇಜು ಪ್ರಾರಂಭವಾಗುವ ವೇಳೆಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮುಜುಗರ ಪಡುವ ಸನ್ನಿವೇಶ ಉಂಟಾಗಿರುತ್ತದೆ. ಸುಭದ್ರ ಕಾಂಪೋಂಡ್, ಹೆಣ್ಣುಮಕ್ಕಳಿಗೆ ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಕಿಟಕಿಗಳ ಗಾಜು ಒಡೆದಿರುವುದರಿಂದ ಪೂರಕ ದುರಸ್ಥಿ, ಪ್ರಯೋಗಾಲಯಗಳು, ರಾತ್ರಿ ಪಾಳಿಯ ಕಾವಲುಗಾರನ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ಸಲ್ಲಿಸಿದರು.
ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಈಗಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅತಿ ಶೀಘ್ರವಾಗಿ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈಚೆಗೆ ವಿದ್ಯಾರ್ಥಿಗಳು ಸಂಘಟನೆಗಳ ಮುಖಂಡರೊಂದಿಗೆ ನಮ್ಮ ಮನೆಯ ಮುಂದೆ ಪ್ರತಿಭಟಿಸುವಾಗ ಅನುಚಿತವಾಗಿ ವರ್ತಿಸಿದ್ದು ಮನಸ್ಸಿಗೆ ಬೇಸರವಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದೇನೆ’ ಎಂದು ಹೇಳಿದರು.
‘ಶಿಡ್ಲಘಟ್ಟದ ಮೊಟ್ಟಮೊದಲ ಪುರಸಭಾ ಅಧ್ಯಕ್ಷರಾಗಿದ್ದ ಬಿ.ಎಂ.ವಿರೂಪಾಕ್ಷಪ್ಪನವರು ಕಟ್ಟಿಸಿ ದಾನವಾಗಿ ಸರ್ಕಾರಕ್ಕೆ ನೀಡಿದ್ದ ಈಗಿನ ಕಾಲೇಜು ಕಟ್ಟಡವು ಹಳೆಯದಾಗಿದೆ. ಅದನ್ನು ಪುನಶ್ಚೇತನಗೊಳಿಸಲು 35 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಪ್ರಾಂಶುಪಾಲ ಆನಂದ್, ಅಬ್ದುಲ್ ಸಮದ್, ಬದ್ರಿನಾಥ್, ಸುಬ್ಬಾರೆಡ್ಡಿ, ಚಿಕ್ಕಮುನಿಯಪ್ಪ, ಮಂಜುಳಾ, ದೀಪಕ್, ವೆಂಕಟಶಿವಾರೆಡ್ಡಿ, ಮಧು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಹೊಗಳಿಕೆ ಎನ್ನುವ ಶೂಲ

0

ಮನುಷ್ಯ ಭಾವುಕ ಜೀವಿ ಅರಿಷದ್ವರ್ಗಗಳನ್ನು ಹೊಂದಿದವನು. ಅದರಲ್ಲೂ ಹೊಗಳಿಕೆಗೆ ಅತೀ ಬೇಗ ಸೋಲುತ್ತಾನೆ. ಇದಕ್ಕೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾರೂ ಹೊರತಲ್ಲ.
ಇಲ್ಲಿ ಹೊಗಳಿಕೆ ಎಂದರೆ ಮೆಚ್ಚುಗೆ ಆತನ/ಆಕೆಯ ಪ್ರತಿಭೆಗೆ ಅಥವಾ ಕೆಲಸಕ್ಕೆ ತುಂಬು ಹೃದಯದಿಂದ ಅಭಿನಂದಿಸುವುದು. ಈ ಮೆಚ್ಚಿಗೆಯೂ ಆರೋಗ್ಯಕರ ಮಟ್ಟದಲ್ಲಿದ್ದರೆ ಒಳ್ಳೆಯದು, ಯಾವುದೊಂದು ಜಾಸ್ತಿ ಆದರೂ ಅದರಿಂದ ಹಾನಿ ತಪ್ಪಿದ್ದಲ್ಲ.
ಮೆಚ್ಚುಗೆ ಎನ್ನುವುದು ಮನುಷ್ಯನ ಸಹಜ ಸ್ವಭಾವ ಅದು ಪ್ರತಿಯೊಬ್ಬರಿಗೂ ಪ್ರೇರಣೆಯ್ನನು ಕೊಡುತ್ತದೆ. ಇನ್ನೂ ಮುಂದೆ ಹೋಗಿ ಹೇಳಬೇಕೆಂದರೆ ಒಂದು ರೀತಿಯಲ್ಲಿ ಹೊಗಳಿಕೆ ಎನ್ನುವುದು “ಗುರುತಿಸುವಿಕೆ”ಯಾಗಿದೆ. (ಐಡೆಂಟಿಟಿ) ನಾವು ಮಾಡಿದ ಒಂದು ಸಣ್ಣ ಕೆಲಸವೇ ಆಗಲಿ ಅದನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಕೆಲಸ ಮಾಡಿರುವಾತ/ಕೆ ಗೆ ತನ್ನ ಕೆಲಸದ ಅಥವಾ ತನ್ನ ಸಾಮಥ್ರ್ಯದ “ಗುರುತಿಸುವಿಕೆ”ಯಿಂದ ಸಂತೋಷ, ಹೆಮ್ಮೆಯಾದರೆ, ಹೊಗಳುವಾತ/ಕೆ ಯು ಒಂದು ಮೆಟ್ಟಿಲು ಏರಿ ನಿಂತು ಇನ್ನೊಬ್ಬರ ಕೆಲಸವನ್ನು ಗೌರವಿಸಿ ಮೆಚ್ಚುವಂತ ಗುಣ ಬೆಳೆಸಿಕೊಳ್ಳುವಂತಾಗುತ್ತದೆ.
ಆಶ್ಚರ್ಯವಾಗಬಹುದು ಇದರಲ್ಲಿ ಬೆಳೆಸಿಕೊಳ್ಳುವಂತದ್ದೇನು ಇಲ್ಲದಿರಬಹುದು. ಆದರೆ ಮನೆಯಲ್ಲಿ ಯಾರೂ ಯಾರನ್ನು ಹೊಗಳಿ ಒಂದು ಮಾತನಾಡಲಾರರು. ಹೆಂಡತಿಯ ರಂಗೋಲಿ, ಅಡುಗೆ ಅಚ್ಚುಕಟ್ಟುತನ, ಮಕ್ಕಳ ಆಟಪಾಠ, ಕೆಲಸದವಳ ಕೆಲಸ, ಹೀಗೆ ಯಾವುದನ್ನೂ ನಾವು ಮೆಚ್ಚಿ ಒಂದು ಒಳ್ಳೆ ಮಾತನಾಡುತ್ತೇವೆ? ಪ್ರತಿಯೊಬ್ಬರಿಗೂ ತನ್ನ ಕೆಲಸವನ್ನು ಬೇರೆಯವರು ಗುರುತಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಕಡೇ ಪಕ್ಷ ದಿನ ಅಲ್ಲದಿದ್ದರೂ ಅಪರೂಪಕ್ಕೊಮ್ಮೆ ಒಂದು ಒಳ್ಳೆ ಮಾತನಾಡುತ್ತೇವಾ ನಾವು? ಇಲ್ಲ….. ನಮಗೆ ಅಹಂ! ಇದೇನು ಮಹಾಕೆಲಸ ಎನ್ನುವ ಉಢಾಫೆ. ಆದರೆ ದಿನಚರಿಯಲಿ ಯಾವುದೇ ಕೆಲಸ ಏರುಪೇರಾದರೂ ಕಷ್ಟವೇ ಪ್ರತಿಯೊಂದು ಅದರದರದ್ದೇ ಆದ ಮಹತ್ವ ಹೊಂದಿರುತ್ತದೆ. ಅದನ್ನು ಗುರುತಿಸುವ ಗುಣ ನಾವು ಬೆಳೆಸಿಕೊಳ್ಳಬೇಕಲ್ಲವೇ?
ಮನೆಯ ಮುಂದೆ ಸಣ್ಣ ರಂಗೋಲಿ ಹಾಕುವ ಗೃಹಿಣಿಯಿಂದ ಹಿಡಿದು ಉನ್ನತ ಹುದ್ದೆಗೇರಿದ ಗಂಡಸು/ಹೆಂಗಸಿನ ತನಕ, ಹುಟ್ಟಿದ ಮಗುವಿನಿಂದ ಹಿಡಿದು ಕೊನೆದಿನ ಎಣಿಸುತ್ತಿರುವ ಮುದುಕರವರೆಗೂ ಹೊಗಳಿಕೆ ಪ್ರಭಾವ ಬೀರುತ್ತದೆ. ಮೆಚ್ಚುಗೆಯಲ್ಲಿ ವಿಚಿತ್ರವಾದ ಶಕ್ತಿಯಿದೆ, ಒಮ್ಮೆ ನಿಮ್ಮ ಮನೆ ಕೆಲಸದಾಕೆಗೆ ಅಥವಾ ಮಕ್ಕಳಿಗೆ, ಅಥವಾ ಬೇರೇಯಾರಿಗೇ ಅಗಿರಲಿ ಅವರು ಮಾಡಿದ ಕೆಲಸದ ಬಗ್ಗೆ ಒಳ್ಳೆ ಮಾತನಾಡಿ ಅದರ ಪರಿಣಾಮ ನೀವೇ ಕಾಣುವಿರಿ.
– ರಚನ

ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ

0

ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ಜನ್ಮದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಂಗಮಕೋಟೆಯ ‘ನಮ್ಮುಡುಗ್ರು ಬಳಗ’ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ೨೦ಕ್ಕೂ ಹೆಚ್ಚು ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಆಯ್ದ ಪುಸ್ತಕಗಳನ್ನು ಓದಿ ಅದರ ಅರ್ಥವನ್ನು ವಿವರಿಸುವುದು ಹಾಗೂ ಆ ನಂತರ ಅದರ ಮೇಲೆಯ ರಸಪ್ರಶ್ನೆಯ ಕಾರ್ಯಕ್ರಮ ನಡೆಯಿತು.
ಹಿರಿಯ ಪ್ರಾಥಮಿಕ ಶಾಲೆಗಳ ಪುಸ್ತಕ ವಾಚನ ವಿಭಾಗದಲ್ಲಿ ಆನೂರು ಸರಕಾರಿ ಶಾಲೆ(ಪ್ರಥಮ), ಜಂಗಮಕೋಟೆ ತೋಟಗಳ ಸರಕಾರಿ ಶಾಲೆ(ದ್ವಿತೀಯ) ಹಾಗೂ ತೃತೀಯ ಸ್ಥಾನವನ್ನು ಯಣ್ಣೂರು ಶಾಲೆಯ ಮಕ್ಕಳು ಪಡೆದರು.
ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಜಂಗಮಕೋಟೆ ತೋಟದ ಶಾಲೆ(ಪ್ರಥಮ), ವರದನಾಯಕನಹಳ್ಳಿಯ ಶಾಲೆ(ದ್ವಿತೀಯ) ಹಾಗೂ ಯಣ್ಣೂರಿನ ಶಾಲೆ ತೃತೀಯ ಬಹುಮಾನ ಪಡೆಯಿತು.
ಮುಖ್ಯ ಶಿಕ್ಷಕ ಶಿವಶಂಕರ್, ಚೀಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರ್, ಎಸ್ಡಿಎಂಸಿ ಅಧ್ಯಕ್ಷ ಎಂ.ಮಂಜುನಾಥ್, ಸದಸ್ಯ ಪಿ.ಬಿ.ಕೃಷ್ಣಪ್ಪ, ಸಿ.ಕೆ.ಮಂಜುನಾಥ್, ನಮ್ಮುಡಗ್ರು ಬಳಗದ ವಿಜಯಕುಮಾರ್, ಮೋಹನ್, ಸಹಶಿಕ್ಷಕರಾದ ರಾಜೀವ್ಗೌಡ, ನಾಗೇಶ್, ನಾಗವೇಣಿ, ಮಮತ, ಲಕ್ಷ್ಮಿ, ಶ್ರೀನಿವಾಸ್, ವೆಂಕಟೇಶ್, ತೀರ್ಪುಗಾರರಾಗಿ ಶ್ರೀಕಂಠ, ಪ್ರಶಾಚಿತ್, ಸವಿತ, ಪ್ರವೀಣ್, ಸುರೇಶ್ ಮತ್ತಿತರರು ಹಾಜರಿದ್ದರು.

ಡಿ.ಬಿ.ಟಿ.ಎಲ್ ಯೋಜನೆಗೆ ಎಲ್ಲರೂ ಒಳಪಡಬೇಕು

0

ಸರ್ಕಾರ ನೀಡುವ ಸಹಾಯಧನ ದುರುಪಯೋಗವಾಗಬಾರದು ಮತ್ತು ನೇರವಾಗಿ ಗ್ರಾಹಕರಿಗೇ ತಲುಪಬೇಕು ಎಂದು ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯ ಬಗ್ಗೆ ಇಂಡೇನ್ ಗ್ಯಾಸ್ ಏಜನ್ಸೀಸ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 16,458 ಅನಿಲ ಸಿಲಿಂಡರ್ ಗ್ರಾಹಕರಿದ್ದು, 9 ಸಾವಿರ ಗ್ರಾಹಕರು ಮಾತ್ರ ಇದುವರೆಗೂ ಡಿ.ಬಿ.ಟಿ.ಎಲ್ ಯೋಜನೆಯ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಯೋಜನೆಗೆ ಒಳಪಡಬೇಕು. ಈ ಯೋಜನೆಯು ಪಾರದರ್ಶಕವಾದುದು. ಗೃಹ ಬಳಕೆ ಅನಿಲ ಸಿಲಿಂಡರ್ ಸಹಾಯಧನ ಪಡೆಯುವ ಪರಿಷ್ಕೃತವಾದ ಈ ಪದ್ಧತಿಯು ಪ್ರಾರಂಭವಾದ ಮೇಲೆ ಗ್ರಾಹಕರು ಮಾರುಕಟ್ಟೆ ದರವನ್ನೇ ಪಾವತಿಸಿ ಸಿಲಿಂಡರ್ ಪಡೆಯಬೇಕು. ಸಹಾಯಧನವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಪದ್ಧತಿಯಿಂದ ಸಬ್ಸಿಡಿ ಸಿಲಿಂಡರುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುವುದು ನಿಲ್ಲುತ್ತದೆ. ಈ ತಕ್ಷಣಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗೂ ಆಧಾರ್ ಕಾರ್ಡ್ ಆದರಿಸಿಯೇ ನಡೆಯುವುದರಿಂದ ಎಲ್ಲರೂ ವಿಳಂಬ ಮಾಡದೆ ಆಧಾರ್ ಕಾರ್ಡ್ದಾರರಾಗಬೇಕು ಎಂದು ಹೇಳಿದರು.
ಆಧಾರ್ ಕಾರ್ಡ್ ನೋಂದಣಿ ಪಟ್ಟಣ ಪ್ರದೇಶದಲ್ಲಿ ಈಗ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗುತ್ತದೆ. ಡಿ.ಬಿ.ಟಿ.ಎಲ್ ಯೋಜನೆಗೆ ಒಳಪಡಲು ಸಿಲಿಂಡರ್ ಗ್ರಾಹಕರು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಿಲಿಂಡರ್ ಖರೀದಿಯ ರಸೀದಿ, ಆಧಾರ್ ಗುರುತಿನ ಚೀಟಿಯ ಪ್ರತಿ(ಕಡ್ಡಾಯವಲ್ಲ) ನೀಡಬೇಕು ಎಂದು ವಿವರಿಸಿದರು.
ಆಹಾರ ಶಿರಸ್ತೆದಾರ ಪರಶಿವಮೂರ್ತಿ, ಶ್ರೀಧರ್, ಪ್ರಕಾಶ್, ಭಕ್ತರಹಳ್ಳಿ ಬೈರೇಗೌಡ, ಇಂಡೇನ್ ಗ್ಯಾಸ್ ಏಜನ್ಸಿ ಮಾಲೀಕ ನಾಗರಾಜ್, ಡಾ.ವೆಂಕಟೇಶಮೂರ್ತಿ, ಗೋಪಿನಾಥ್, ಮುರಳಿ, ಅಣ್ಣಯ್ಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಿದ್ರೆ

0

ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಆಧಾರ ಸ್ತಂಭಗಳು. ಇವುಗಳಲ್ಲಿ ನಿದ್ರೆ ಅತಿ ಮುಖ್ಯವಾಗಿ ಬೇಕಾದ ಅಂಶ. ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್, ಜಂಕ್ ಫುಡ್‍ಗಳ ಸೇವನೆ, ಅತಿಯಾದ ಕೆಲಸದ ಒತ್ತಡ, ಅನಿಯಮಿತ ಕಾಲದಲ್ಲಿ ಆಹಾರ ಸೇವನೆ, ಅನಿಯಮಿತವಾದ ದಿನನಿತ್ಯದ ಚಟುವಟಿಕೆಗಳಿಂದಾಗಿ ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವಂಥಹ ಸಮಸ್ಯೆ.
ನಿದ್ರೆಯ ಉತ್ಪತ್ತಿ:
ಯದಾ ತು ಮನಸಿ ಕ್ಲಾಂತೆ ಕರ್ಮಾತ್ಮಾನ: ಕ್ಲಮಾನ್ವಿತ||
ವಿಷಯೇಭ್ಯೋ ನಿವರ್ತಂತೆ ತದಾ ಸ್ವಪಿತಿ ಮಾನವ|| ಚರಕ ಸೂತ್ರ||
ಯಾವಾಗ ಕಾರ್ಯ ನಿರ್ವಹಿಸಿ ಮನಸ್ಸು ದಣಿಯುವುದೋ ಇಂದ್ರಿಯಗಳು (ಕಣ್ಣು, ಕಿವಿ ಮೂಗು, ಬಾಯಿ, ನಾಲಿಗೆ) ದಣಿಯುವುದರಿಂದ ತಮ್ಮ ತಮ್ಮ ವಿಷಯಗಳಿಂದ (ಉದಾ:- ಸ್ಪರ್ಶ, ರೂಪ, ರಸ, ಗಂಧ, ಶ್ರವಣ) ನಿವೃತ್ತವಾಗುತ್ತವೆಯೋ ಅಂದರೆ ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಿಂದ ಬೇರ್ಪಡುವವೋ ಆಗ ಮನುಷ್ಯನನ್ನು ನಿದ್ರೆ ಆವರಿಸುತ್ತದೆ. ಅಂದರೆ ಮನುಷ್ಯ ನಿದ್ರಿಸುತ್ತಾನೆ.
ನಿದ್ರೆಯ ಲಾಭಗಳು:
ಒಬ್ಬ ಆರೋಗ್ಯವಂತ ಮನುಷ್ಯನಿಗೆ ರಾತ್ರಿ ಸಾಮಾನ್ಯವಾಗಿ 7 ರಿಂದ 8 ತಾಸುಗಳಷ್ಟು ನಿದ್ರೆ ಅತ್ಯಗತ್ಯ. ಈ ಮಾಪನವು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಮಕ್ಕಳಲ್ಲಿ ಯುವಕರಲ್ಲಿ ಹಾಗೂ ವೃದ್ಧಾಪ್ಯದಲ್ಲಿ ವ್ಯತ್ಯಾಸಗೊಳ್ಳುತ್ತದೆ.
1. ಸುಖ ಪೂರ್ವಕವಾಗಿ ನಿದ್ರಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.
2. ಶರೀರದ ಪೋಷಣೆಯಾಗುತ್ತದೆ.
3. ಶರೀರದ ಬಲ ವೃದ್ಧಿಯಾಗುತ್ತದೆ.
4. ದೀರ್ಘವಾದ ಆಯುಸ್ಸನ್ನು ಒದಗಿಸುತ್ತದೆ.
5. ನಪುಂಸಕತೆಯನ್ನು ಹೋಗಲಾಡಿಸುತ್ತದೆ.
6. ದೇಹದ ಧಾತುಗಳು ಸಮ ಸ್ಥಿತಿಯಲ್ಲಿರುತ್ತವೆ.
ನಿದ್ರೆಯ ಭೇದಗಳು: 6 ವಿಧಗಳು:
1. ತಮೋಭವಾ:- ತಮೋ ಗುಣದ ಪ್ರಧಾನತೆಯಿಂದ ಉಂಟಾಗುವ ನಿದ್ರೆ.
2. ಶ್ಲೇಷ್ಮ ಸಮುದ್ಭವ:- ಕಫ ಪ್ರಧಾನತೆಯಿಂದ ಉತ್ಪತ್ತಿಯಾಗುವ ನಿದ್ರೆ.
3. ಮನ: ಶರೀರ ಶ್ರಮಸಂಭವ:- ಮನಸ್ಸಿನ ಹಾಗೂ ಶರೀರದ ಆಯಾಸದಿಂದ ಉತ್ಪತ್ತಿಯಾಗುವ ನಿದ್ರೆ.
4. ಆಗಂತುಕಿ ನಿದ್ರೆ:- ಇದು ಆಗಂತುಕ ಕಾರಣಗಳಿಂದ (ರೋಗ ಇತ್ಯಾದಿ) ಉತ್ಪತ್ತಿಯಾಗುವ ನಿದ್ರೆ.
5. ವ್ಯಾದ್ಯನುವರ್ತಿನಿ:- ರೋಗಗಳ ಸಂದರ್ಭದಲ್ಲಿ ಉಂಟಾಗುವ ನಿದ್ರೆ ಅಥವಾ ರೋಗ ಶಮನದ ನಂತರ ಅವುಗಳೊಂದಿಗೆ ಉತ್ಪತಿಯಾಗುವ ನಿದ್ರೆ.
6. ರಾತ್ರಿಸ್ವಭಾವ ಪ್ರಭಾವ:- ಇದು ಸ್ವಾಭಾವಿಕವಾಗಿದ್ದು ರಾತ್ರಿಯಲ್ಲಿ ಉತ್ಪತ್ತಿಯಾಗುವ ನಿದ್ರೆ.
ಇವುಗಳಲ್ಲಿ ತಮೋ ಭವ ಹಾಗೂ ರಾತ್ರಿ ಸ್ವಭಾವ ಪ್ರಭವ ವಿಧದ ನಿದ್ರೆಗಳು ಸ್ವಾಭಾವಿಕ. ಉಳಿದವುಗಳೆಲ್ಲವೂ ರೋಗಗಳಲ್ಲಿ ಉತ್ಪತ್ತಿಯಾಗುವಂಥಹವುಗಳು.
ನಿದ್ರಾನಾಶಕ್ಕೆ ಕಾರಣಗಳು:
1. ಕೆಲಸದ ಒತ್ತಡ ಹಾಗೂ ಕೆಲಸದಲ್ಲಿ ನಿರತರಾಗಿರುವುದು.
2. ಅನಿಯಮಿತ ಕಾಲದಲ್ಲಿ ನಿದ್ರೆ ಮಾಡುವಂಥಹುದು.
3. ರೋಗಗಳು (ಉದಾ:- ಜ್ವರ, ಉನ್ಮಾದ, ಬ್ಲಡ್ ಪ್ರೆಷರ್).
4. ವಾತ ಹಾಗೂ ಪಿತ್ತ ಪ್ರಕೃತಿ ವ್ಯಕ್ತಿಗಳಲ್ಲಿ.
6. ವೃದ್ಧಾಪ್ಯದಲ್ಲಿ.
6. ಅತಿಯಾದ ಚಿಂತೆ, ಭಯ, ಶೋಕ, ಸಿಟ್ಟು ಇತ್ಯಾದಿಗಳೂ ಕೂಡ ನಿದ್ರೆಯನ್ನು ನಾಶಮಾಡುತ್ತವೆ.
ನಿದ್ರಾನಾಶದ ಚಿಕಿತ್ಸೆಗಳು:
1. ಅಭ್ಯಂಗ:- ಪ್ರತಿ ನಿತ್ಯವೂ ಮೈಗೆ ಎಣ್ಣೆಯನ್ನು ಹಚ್ಚುವುದು.
2. ಉತ್ಸಾದನ:- ಎಣ್ಣೆ ಹಚ್ಚಿ ಮೈಯನ್ನು ಕ್ರಮಬದ್ಧವಾಗಿ ಉಜ್ಜುವುದು.
3. ಸ್ನಾನ:- ಬಿಸಿ ನೀರಿನಿಂದ ಸ್ನಾನ ಮಾಡುವುದು.
4. ಕೆಂಪು ಅಕ್ಕಿ ಅಥವಾ 60 ದಿನಗಳಲ್ಲಿ ಬೆಳೆದ ಅಕ್ಕಿಯ ಅನ್ನವನ್ನು ಮೊಸರಿನ ಜೊತೆಗೆ ಸೇವನೆ ಮಾಡುವುದು ಹಿತಕರ.
5. ಬಿಸಿಯಾದ ಹಾಲಿಗೆ ತುಪ್ಪ ಮತ್ತು ಕಲ್ಲುಸಕ್ಕರೆಯನ್ನು ಅಥವಾ ಬೆಲ್ಲವನ್ನು ಸೇರಿಸಿ ಸೇವಿಸುವುದು ಉತ್ತಮ
6. ಮನಸ್ಸಿಗೆ ಅನುಕೂಲಕರವಾದ ಸುವಾಸನೆಯನ್ನು ಆಘ್ರಾಣಿಸುವುದು. (ಉದಾ:- ಊದುಬತ್ತಿ ಅಥವಾ ಸೆಂಟ್‍ಗಳು ಸುವಾಸನೆ)
7. ತಲೆ ಮತ್ತು ಮುಖದ ಮೇಲೆ ಶೀತ ದ್ರವ್ಯಗಳ ಲೇಪವನ್ನು ಹಚ್ಚುವುದು.
8. ಪಾದಾಭ್ಯಂಗ (ಮಲಗುವ ಮುನ್ನ ಅಂಗಾಲುಗಳಿಗೆ ಎಣ್ಣೆಯನ್ನು ಹಚ್ಚಿ ಉಜ್ಜುವುದು)
9. ಸುಖವಾದ, ಸ್ವಚ್ಛವಾದ, ಮೃದುವಾದ ಹತ್ತಿಯಿಂದ ತಯಾರಿಸಿದ ಹಾಸಿಗೆಯಲ್ಲಿ ಮಲಗುವುದು.
10. ಮನಸ್ಸಿಗೆ ಹಿತವೆನಿಸುವ ಕತೆಗಳನ್ನು, ಪುಸ್ತಕಗಳನ್ನು ಓದುವುದು ಇತ್ಯಾದಿ.
11. ನಸ್ಯ:- ಎರಡೆರಡು ಹನಿ ಆಕಳ ತುಪ್ಪವನ್ನು ಕರಗಿಸಿ ಎರಡೂ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳುವುದು.
ಶರೀರದ ಧಾರಣೆಗೆ ಹೇಗೆ ನಿಯಮಪೂರ್ವಕವಾದ ಆಹಾರದ ಸೇವನೆಯು ಅವಶ್ಯಕವೋ ಅದೇ ರೀತಿ ನಿಯಮಪೂರ್ವಕವಾದ ನಿದ್ರೆಯು ಅತ್ಯವಶ್ಯಕ.
ಡಾ. ನಾಗಶ್ರೀ ಕೆ.ಎಸ್.

ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು

0

ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ತಿಳಿಸಿದರು.
ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಪದ ಸಂಪತ್ತು’ ಉಪನ್ಯಾಸ ಕಮ್ಮಟದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕೇವಲ ಭಾಷೆಯನ್ನಾಗಿ ಪರಿಗಣಿಸದೆ, ಅದೊಂದು ರೀತಿ, ನೀತಿ, ಖ್ಯಾತಿ, ಗತಿ, ಮತಿ ಮತ್ತು ಪದ್ಧತಿಯನ್ನು ತಿಳಿಸುವ, ಸತ್ಯಗಳನ್ನು ಸಾಕ್ಷಾತ್ಕಾರ ಮಾಡಿಸುವ ಕ್ರಿಯೆಯಾಗಿ, ಸಂಸ್ಕೃತಿಯಾಗಿ, ಅಕ್ಷರ ಅಕ್ಷಯವಾಗಿಸುವ ಶಿಕ್ಷಣವನ್ನು ಲಕ್ಷಣವಾಗಿಸುವಲ್ಲಿ ಅಕ್ಷರದೊಂದಿಗೆ ಆಡುತ್ತಾ ಕಲಿಯಬೇಕು ಎಂದು ಹೇಳಿದರು.
‘ಜನವರಿ’ ಕೇವಲ ವರ್ಷಾರಂಭವಾಗಿರದೆ ಅದೊಂದು ಮಹತ್ತರ ಸಂದೇಶ ಸಾರುವ, ಸರ್ವಧರ್ಮಗಳನ್ನು ಸಾಂಕೇತಿಸುವ, ಸತ್ಯಗಳ ದರ್ಶನ ಮಾಡಿಸುವ ಪದವಾಗಿದೆ ಎಂದು ಹೇಳಿ ಜನವರಿ ಎಂಬ ಪದದ ನೂರೈವತ್ತಕ್ಕೂ ಮೀರಿ ಅರ್ಥಗಳನ್ನು ವ್ಯಾಖ್ಯಾನಿಸಿದರು.
ವಕೀಲ ರವೀಂದ್ರನಾಥ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಭಾಷೆಯ ಬೆಳವಣಿಗೆಯಾಗಬೇಕು, ಓದುವ ಆಸಕ್ತಿ ಹೆಚ್ಚಬೇಕು, ಸ್ಪಷ್ಟ ಉಚ್ಛಾರಣೆ ಕಲಿಯಬೇಕು. ವಿದ್ಯಾರ್ಥಿಗಳು ವ್ಯರ್ಥವಾಗಿ ಸಮಯವನ್ನು ಕಳೆಯುವ ಬದಲಿಗೆ ಅರ್ಥವತ್ತಾದ, ಸೃಜನಾತ್ಮಕ, ಗುಣಾತ್ಮಕ, ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಸರಳ ಕನ್ನಡ ಪದಗಳಲ್ಲಿನ ಅಕ್ಷರದರ್ಥ ಶ್ರೀಮಂತಿಕೆಯನ್ನು ಗುರುತಿಸುವುದನ್ನು ಕಲಿಯಬೇಕು. ವಿವೇಕಾನಂದರ ಚಿಂತನೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಿ ವಿವೇಕವಂತರಾಗಬೇಕು’ ಎಂದು ಹೇಳಿದರು.
ಪ್ರಾಂಶುಪಾಲ ಆನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಉಚಿತ ಸೈಕಲ್ ವಿತರಣೆ

0

ಸರ್ಕಾರ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ತರಗತಿಯಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮತ್ತು ದೇಹಾರೋಗ ಹೆಚ್ಚಿಸಿಕೊಳ್ಳಲು ಸೈಕಲ್ ಬಳಕೆ ಅತ್ಯುತ್ತಮ ಸಾಧನೆಯಾಗಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಉಚಿತ ಸೈಕಲ್ ವಿತರಣಾ ಯೋಜನೆ ಯಶಸ್ವಿಯಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಾದ್ಯಂತ ಬಸ್ಪಾಸ್ ಹೊಂದಿರುವ ಮತ್ತು ಹಾಸ್ಟೆಲ್ ಸೌಲಭ್ಯವಿರುವವರನ್ನು ಹೊರತುಪಡಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿಯ ಗಂಡು ಮಕ್ಕಳಿಗೆ 920 ಸೈಕಲ್ಗಳು ಮತ್ತು ಹೆಣ್ಣು ಮಕ್ಕಳಿಗೆ 930 ಸೈಕಲ್ಗಳು ಸೇರಿದಂತೆ ಒಟ್ಟು 1,850 ಸೈಕಲ್ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪುರಸಭಾ ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯ ಅಫ್ಸರ್ಪಾಷ, ಲಕ್ಷ್ಮಣ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪ್ರಾಂಶುಪಾಲ ಆನಂದ್, ಶಿಕ್ಷಣ ಸಂಯೋಜಕ ಮನ್ನಾರಸ್ವಾಮಿ, ಸೂರ್ಯನಾರಾಯಣಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ?

0

ವಿನಯ್ ಒಂಬತ್ತು ವರ್ಷದ ಬಾಲಕ. ಮೂರನೆ ತರಗತಿಯಲ್ಲಿ ಓದುತ್ತಿರುವ ಅವನೂ ಈಗಲೂ ಸಾಮಾನ್ಯವಾಗಿ ದಿನಾ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಮಕ್ಕಳ ತಜ್ಞರು ಕೊಟ್ಟ ಯಾವುದೇ ಔಷಧಿ ಅಥವಾ ಸಲಹೆಗಳು ಕೆಲಸಮಾಡಿರಲಿಲ್ಲ. ಯಾವುದೇ ದೈಹಿಕ ತೊಂದರೆಗಳಿಲ್ಲ, ಹಾಗಾಗಿ ಆಪ್ತಸಲಹೆಯ ಮೂಲಕ ಅವನ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಿ, ಎಂದು ವೈದ್ಯರು ಹೇಳಿದ್ದರು. ಅದರಂತೆ ಪೋಷಕರ ನಮ್ಮ ಸಹಾಯ ಕೋರಿದ್ದರು.
ಮಕ್ಕಳಿಗೆ ಆಪ್ತಸಲಹೆ ನೀಡುವ ವಿಷಯದಲ್ಲಿರುವ ದೊಡ್ಡ ತೊಂದರೆ ಎಂದರೆ ಮಕ್ಕಳನ್ನು ನಾವು ನೇರವಾಗಿ ಪ್ರಶ್ನಿಸಿ, ಅವರಿಗೆ ಒಪ್ಪುವ ಸಲಹೆಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಅಪರಿಚಿತರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ ಮತ್ತು ಅವರಿಗೆ ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಭಾಷೆಯ ಮೂಲಕ ವ್ಯಕ್ತಮಾಡುವುದು ಸಾಧ್ಯವಾಗಲಾರದು. ಹಾಗಾಗಿ ನಿಧಾನವಾಗಿ ಮಕ್ಕಳ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಅವರಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕಾಗುತ್ತದೆ. ಜೊತೆಗೆ ಪೋಷಕರಿಗೆ ಮಕ್ಕಳ ಜೊತೆ ವರ್ತಿಸಬೇಕಾದ ರೀತಿಯ ಬಗೆಗೆ ತರಬೇತಿ ನೀಡಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಇದು ಪೋಷಕರಿಗೇ ಆಪ್ತಸಲಹೆಯಾಗಿರುತ್ತದೆ.
ಯಾವಾಗ ಇದು ಸಮಸ್ಯೆ?
ಮಕ್ಕಳಿಗೆ ಸುಮಾರು ಒಂದು ವರ್ಷವಾದಾಗಿನಿಂದ ಅಮ್ಮಂದಿರು ಶೌಚ ತರಬೇತಿಯನ್ನು ನೀಡಲು ಪ್ರಾರಂಭಿಸಬೇಕು. ಸುಮಾರು ಎರಡು ವರ್ಷದಿಂದ ಮೂರು ವರ್ಷದ ಒಳಗೆ ಮಕ್ಕಳು ಹಗಲು ಹೊತ್ತಿನಲ್ಲಿ ತಮಗೆ ಮಲಮೂತ್ರಗಳ ಒತ್ತಡವುಂಟಾದಾಗ ಇತರರಿಗೆ ಹೇಳುಲು ಸಮರ್ಥರಾಗುತ್ತಾರೆ. ಮೂರು ವರ್ಷದ ನಂತರವೂ ರಾತ್ರಿ ಹೊತ್ತಿನಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದನ್ನು ಮುಂದುವರೆಸಬಹುದು. ಇದಕ್ಕಾಗಿ ಪೋಷಕರು ಆತಂಕ ಪಡಬೇಕಿಲ್ಲ. ಆದರೆ ಇದೇ ಪ್ರವೃತ್ತಿ ಐದು ವರ್ಷಗಳ ನಂತರವೂ ಮುಂದುವರೆದರೆ ಮಕ್ಕಳಿಗೆ ಇದರಿಂದ ಹೊರಬರಲು ಸಹಾಯ ಬೇಕಾಗುತ್ತದೆ.
ಎಲ್ಲಿದೆ ಇದರ ಮೂಲ?
ಕೆಲವು ದೈಹಿಕ ನ್ಯೂನತೆಗಳಿಂದ ಮಕ್ಕಳಿಗೆ ಈ ಸಮಸ್ಯೆ ಉಂಟಾಗಬಹುದು. ಮೂತ್ರ ಮಾಡುವ ಅಂಗಾಗಗಳಲ್ಲಿ ಇರಬಹುದಾದ ತೊಂದರೆಗಳು, ಮೂತ್ರನಾಳಗಳ ಸೋಂಕು, ಕೆಲವು ನರದೋಷಗಳು ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಮೂತ್ರ ವಿಸರ್ಜನೆಯ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಬಹುದು.
ದೈಹಿಕವಾಗಿ ಯಾವುದೇ ತೊಂದರೆ ಇಲ್ಲವೆಂದಾದರೆ ಇದರ ಮೂಲ ಮನಸ್ಸಿನಲ್ಲೆಲ್ಲೋ ಇರುತ್ತದೆ ಎಂದು ತಿಳಿಯಬೇಕು. ಇಷ್ಟು ಚಿಕ್ಕ ಮಕ್ಕಳಿಗೆ ಅದೆಂತಹ ಮಾನಸಿಕ ಸಮಸ್ಯೆ ಎಂದು ಮೂಗು ಮುರಿಯಬೇಡಿ. ವಾಸ್ತವವಾಗಿ ಮಕ್ಕಳಿಗೆ ಬರುವ ಮಾನಸಿಕ ಸಮಸ್ಯೆಗಳೆಲ್ಲಾ ಪೋಷಕರ ಬಳುವಳಿ. ಇವುಗಳು ಈ ಕೆಳಗಿನಂತೆ ಇರಬಹುದು;
1. ಮಕ್ಕಳಿಗೆ ಸೌಹಾರ್ದಯುತ ಕೌಟುಂಬಿಕ ವಾತಾವರಣ ದೊರಕದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಪೋಷಕರ ಕಲಹ, ವಿಚ್ಛೇದನ, ಕುಡಿತ ಮುಂತಾದ ದುಶ್ಚಟಗಳು, ಪೋಷಕರಿಂದ ದೂರವಿರುವ ಮಕ್ಕಳು, ಪೋಷಕರ ಸಾವು ಮುಂತಾದವು.
2. ಪೋಷಕರಿಂದ ಸೂಕ್ತವಾದ ಶೌಚ ತರಬೇತಿ ದೊರೆಯದಿರುವುದು.
3. ಶಾಲೆಯಲ್ಲಿ ಅಥವಾ ಸ್ನೇಹಿತರೊಡನೆ ಬೆರೆಯುವಾಗ ಮಗುವಿಗೆ ಉಂಟಾಗಬಹುದಾದ ಒತ್ತಡಗಳು.
4. ಮಕ್ಕಳ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕ, ಭಯ, ಹಿಂಜರಿತ, ಆತ್ಮವಿಶ್ವಾಸದ ಕೊರತೆ ಮುಂತಾದವು.
ಎಲ್ಲಿಂದ ಚಿಕಿತ್ಸೆಯನ್ನು ಆರಂಭಿಸಬೇಕು?
1. ಚಿಕಿತ್ಸೆಯ ಮೊದಲ ಹಂತವಾಗಿ ಮಕ್ಕಳ ತಜ್ಞರಲ್ಲಿ ಹೋಗಿ ಮಗು ಸಂಪೂರ್ಣ ದೈಹಿಕವಾಗಿ ಆರೋಗ್ಯವಾಗಿ ಇದೆಯೆಂದು ಖಚಿತಪಡಿಸಕೊಳ್ಳಬೇಕು.
2. ದೈಹಿಕ ತೊಂದರೆಗಳಿಲ್ಲವೆಂದು ಖಾತ್ರಿಯಾದಮೇಲೆ ಮನೆಯಲ್ಲಿಯೇ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು.
3. ರಾತ್ರಿ ಮಲಗುವುದಕ್ಕೆ ಎರಡು ಗಂಟೆಗೆ ಮೊದಲು ಮಾತ್ರ ನೀರು ಕುಡಿಯಲು ಹೇಳಬೇಕು.
4. ಮಲಗುವಾಗ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಮಾಡಿಸಬೇಕು.
5. ರಾತ್ರಿ ಒಮ್ಮೆ ಮಗುವನ್ನು ಎಬ್ಬಿಸಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸಮಾಡಿಸಬಹುದು.
6. ಈ ಸರಳ ನಿಯಮಗಳು ಪ್ರಯೋಜನಕ್ಕೆ ಬರದಿದ್ದರೆ ತಜ್ಞರಿಂದ ಆಪ್ತಸಲಹೆ ಬೇಕಾಗುತ್ತದೆ. ಹಾಗೆ ಆಪ್ತಸಲಹೆಗೆ ಬರುವ ಮುನ್ನ ಪೋಷಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
7. ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಕ್ಕಾಗಿ ಮಗುವನ್ನು ಬೈಯುವುದು, ಹೊಡೆಯುವುದು ಅಥವಾ ಭಯಹುಟ್ಟಿಸುವುದು ಮುಂತಾದವುಗಳನ್ನು ಮಾಡಬಾರದು. ಇದರಿಂದ ಮಗುವಿನ ಆತಂಕ ಮತ್ತು ಅದರ ಮೇಲಿನ ಒತ್ತಡ ಜಾಸ್ತಿಯಾಗಿ ಈ ಅಭ್ಯಾಸದಿಂದ ಹೊರಬರಲು ಹೆಚ್ಚಿನ ಸಮಯ ಬೇಕಾಗಬಹುದು.
8. ಮಗುವಿನ ಅಭ್ಯಾಸವನ್ನು ಎಲ್ಲರೆದುರು ಹೇಳಿ ಅದಕ್ಕೆ ಅವಮಾನ ಮಾಡುವುದರ ಮೂಲಕ ಮಗುವಿನ ಆತ್ಮಗೌರಕ್ಕೆ ಧಕ್ಕೆ ತರಬಾರದು.
9. ಮಗು ಯಾವುದೋ ದೊಡ್ಡ ಕಾಯಲೆಯಿಂದ ನರಳುತ್ತಿದೆ ಎನ್ನವು ಭಾವನೆ ಹುಟ್ಟಿಸಬಾರದು. ಈ ತೊಂದರೆಯಲ್ಲಿ ಮಗುವಿನದು ಏನೂ ತಪ್ಪಿಲ್ಲ, ಅದರ ಸಹಾಯಕ್ಕೆ ನಾವಿದ್ದೇವೆ ಎನ್ನವು ಭರವಸೆಮೂಡಿಸಬೇಕು.
10. ಕೌಟುಂಬಿಕ ವಾತಾವರಣ ಇದಕ್ಕೆ ಕಾರಣವಾಗಿದ್ದರೆ, ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಹಾಸಿಗೆಯಲ್ಲಿ ಮೂತ್ರ ಮಾಡುವುದು ಹೊರನೋಟಕ್ಕೆ ಭಾರೀ ಸಮಸ್ಯೆಯಾಗಿ ಕಾಣದಿರಬಹುದು. ಆದರೆ ಇದಕ್ಕಾಗಿ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಮಗುವಿನ ಆತ್ಮವಿಶ್ವಾಸ ಮತ್ತು ಆತ್ಮಗೌರವಕ್ಕೆ ಪೆಟ್ಟುಬೀಳಬಹುದು. ಮಗು ಹಾಸ್ಟೆಲ್‍ಗಳಿಗೆ ಹೋಗಿರಲು ಅಥವಾ ಸ್ನೇಹಿತರೊಡನೆ ಮುಕ್ತವಾಗಿ ಬೆರೆಯಲು ಹಿಂಜರಿಯಬಹುದು. ಇದರಿಂದ ಮಗುವಿನ ಒಟ್ಟಾರೆ ವ್ಯಕ್ತಿತ್ವ ವಿಕಸನ ಸಮರ್ಪಕವಾಗಿರುವುದಿಲ್ಲ.
ವಸಂತ್ ನಡಹಳ್ಳಿ