Home Blog Page 533

ವಾಜಪೇಯಿಯವರ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಕೆಲಸದ ಒತ್ತಡದಲ್ಲಿರುವ ಕಾರ್ಮಿಕರು ಸೇರಿದಂತೆ ಆರೋಗ್ಯದ ಸಮಸ್ಯೆ ಅನುಭವಿಸುತ್ತಿರುವ ಬಡಜನತೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ಪಟ್ಟಣದ ಅಶೋಕರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಮಾನಸ ಮೆಡಿಕಲ್ ಟ್ರಸ್ಟ್ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇಂತಹ ಶಿಬಿರಗಳ ಉಪಯೋಗಪಡಿದುಕೊಳ್ಳಬೇಕು. ದುಶ್ಚಟಗಳನ್ನು ಬಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಸಿ.ವಿ.ಲೋಕೇಶ್ಗೌಡ, ಬಿ.ಸಿ.ನಂದೀಶ್, ದಾಮೋದರ್, ಶ್ರೀಧರ್, ಎ.ಎಂ.ತ್ಯಾಗರಾಜ್, ಶ್ರೀರಾಮರೆಡ್ಡಿ, ಅನಿಲ್, ಚಲಪತಿ, ಸುಜಾತಮ್ಮ, ಶಿವಮ್ಮ, ರತ್ನಮ್ಮ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು

0

ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದ ರೈತ ರಾಮಚಂದ್ರಾಚಾರ್ ಎಂಬುವವರ ತೋಟದಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಶನಿವಾರ ಆಯೋಜನೆ ಮಾಡಲಾಗಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ರೇಷ್ಮೆಯನ್ನು ಬೆಳೆಯುವಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಈ ಭಾಗದ ರೈತರು ನೀರಿನ ಅಭಾವದಿಂದಾಗಿ ಬೆಳೆ ಬೆಳೆಯಲು ಕಷ್ಟಕರವಾದ ಪರಿಸ್ಥಿತಿಯಲ್ಲಿಯೂ ದ್ವಿತಳಿ ಗೂಡು ಬೆಳೆಯಲು ಮುಂದಾಗುತ್ತಿರುವುದು ಸಂತಸದ ವಿಚಾರವೆಂದರು.
ರೇಷ್ಮೆ ಸಹಾಯಕ ನಿರ್ದೇಶಕ ವೃಷಬೇಂದ್ರ ಮಾತನಾಡಿ, ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು, ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು. ತೋಟಗಳಿಗೆ ಕೊಡುವಂತಹ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳ ಬಗ್ಗೆ ಸೂಕ್ತ ಗಮನಹರಿಸಬೇಕು, ಹುಳುಗಳು ಹಣ್ಣಾದಾಗ ಚಂದ್ರಿಕೆಗಳಿಗೆ ಸೊಂಕು ನಿವಾರಕ ಔಷಧಿಯನ್ನು ಸಿಂಪಡಣೆ ಮಾಡಬೇಕು ಎಂದರು. ದ್ವಿತಳಿ ಗೂಡಿನ ವಿವಿಧ ಹಂತಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದ್ದು, ರೈತರು ಮತ್ತು ಅಧಿಕಾರಿಗಳು ವೀಕ್ಷಿಸಿದರು.
ರೈತ ರಾಮಚಂದ್ರಾಚಾರ್, ಮೈಸೂರಿನ ಸಿ.ಎಸ್.ಆರ್. ಮತ್ತು ಟಿ.ಐ. ಸಂಸ್ಥೆಯ ನಿರ್ದೇಶಕ ಡಾ.ಶಿವಪ್ರಸಾದ್, ವಿಜ್ಞಾನಿ ಡಾ.ಪಣಿರಾಜ್, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರೇಷ್ಮೆ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಶಿವಣ್ಣ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್. ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕುಮಾರ್, ಬಸವರಾಜ್, ರಾಮ್ಕುಮಾರ್, ನಿರಂಜನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟ

0

ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
29dec2ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರಗೌಡ ಮಾತನಾಡಿ,‘ಗ್ರಾಮೀಣ ಭಾಗದ ಜಾನಪದ ಸೊಗಡನ್ನು ಹೊಂದಿರುವ ಕಬಡ್ಡಿ ಪಂದ್ಯವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಯುವಕರ ಆತ್ಮಸ್ಥೈರ್ಯ, ಸಂಘಟನಾ ಚತುರತೆ, ಒಗ್ಗಟ್ಟು, ದೇಹಧಾಡ್ಯವನ್ನು ಹೆಚ್ಚಿಸುವ ಈ ಕ್ರೀಡೆಗೆ ಪ್ರೋತ್ಸಾಹ ಅತ್ಯಗತ್ಯ. ತಾಲ್ಲೂಕು ಮಟ್ಟದ ಈ ಕ್ರೀಡಾಕೂಟದಿಂದಾಗಿ ಹಲವಾರು ಪ್ರತಿಭಾವಂತರು ಬೆಳಕಿಗೆ ಬರಲಿದ್ದಾರೆ. ‘ವಾಜಪೇಯಿ ಕರ್ಣಶ್ರೀ ಕಪ್’ ವಿಜೇತರಿಗೆ ನೀಡಲಿದ್ದೇವೆ. ಭಾಗವಹಿಸಿದವರೆಲ್ಲರಿಗೂ ಪ್ರೋತ್ಸಾಹ ದಾಯಕವಾಗಿ ನೆನಪಿನ ಕಾಣಿಕೆ ನೀಡಲಾಗುವುದು’ ಎಂದು ಹೇಳಿದರು.
ಚೀಮನಹಳ್ಳಿ, ಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ದೇವರಮಳ್ಳೂರು, ನಾಗಮಂಗಲ, ಭಕ್ತರಹಳ್ಳಿ ಮುಂತಾದ ತಾಲ್ಲೂಕಿನ ವಿವಿಧ ಗ್ರಾಮಗಳ 40ಕ್ಕೂ ಹೆಚ್ಚು ತಂಡಗಳು ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
29dec3ಪ್ರಥಮ ಬಹುಮಾನ 25 ಸಾವಿರ ರೂಗಳು, ದ್ವಿತೀಯ ಬಹುಮಾನ 15 ಸಾವಿರ ರೂಗಳು, ತೃತೀಯ ಬಹುಮಾನ 10 ಸಾವಿರ ರೂಗಳನ್ನು, ನಾಲ್ಕನೆಯ ಬಹುಮಾನವಾಗಿ 5 ಸಾವಿರ ರೂಗಳನ್ನು ನೀಡಲಾಯಿತು.
ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ದೇವರಾಜ್, ಸೋಮನಾಥ್, ಮಂಜುನಾಥ್, ನಂದೀಶ್, ನಾರಾಯಣಸ್ವಾಮಿ, ನಾಗನರಸಿಂಹ, ಮುನಿನರಸಿಂಹ, ರವಿ, ಮುನಿಯಪ್ಪ, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಂಬಿಕೆ ಇಲ್ಲದ ಪರೀಕ್ಷೆಗಳು. . . . . ?

0

ವ್ಯಕ್ತಿಯೊಬ್ಬನ ಯೋಗ್ಯತೆಯನ್ನು ಅಳೆಯಲು ಪರೀಕ್ಷೆ ಅಗತ್ಯ ಪರೀಕ್ಷೆಯ ಮಾನದಂಡಗಳೇನೇ ಇದ್ದರೂ ಪ್ರಾಮುಖ್ಯತೆಯಂತೂ ಅನಾದಿಕಾಲದಿಂದಲೂ ಇದ್ದೇಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪರೀಕ್ಷೆ’ ಎಂದರೆ ವಿದ್ಯಾರ್ಥಿಗಳಲ್ಲೇನೋ ಸಾಕಷ್ಟು ಭಯ ಭಕ್ತಿ ಇರಬಹುದು. ಆದರೆ ಅವುಗಳನ್ನು ನಡೆಸುವವರಿಗೆ ಮತ್ತು ಮೌಲ್ಯಮಾಪನ ಮಾಡುವವರಿಗೆ ಅದು ಅಷ್ಟೊಂದು ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ಮಾಡಬೇಕಲ್ಲ ಎಂದು ಮಾಡಿ, ಕೈ ತೊಳೆದುಕೊಂಡರೆ ಸಾಕು ಎಂಬ ಮಟ್ಟಕ್ಕೆ ಶಾಲೆ ಕಾಲೇಜುಗಳಲ್ಲಿನ ಪರೀಕ್ಷಾ ವ್ಯವಸ್ಥೆ ತಲುಪುತ್ತಿರುವುದಕ್ಕೆ ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆ ಎನ್ನಬೇಕೋ ಕುಸಿತ ಎಂದು ಭಾವಿಸಬೇಕೋ ತಿಳಿಯದ ಗೊಂದಲದಲ್ಲಿ ಇದ್ದೇವೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಅನೇಕ ಯೋಜನೆಗಳು ಜಾರಿಯಾದದ್ದು ಸಂತೋಷದ ಸಂಗತಿ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆ, ಸೈಕಲ್ ಯೋಜನೆ ಇವೆಲ್ಲ ಜಾರಿಗೊಂಡು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ತಕ್ಕಮಟ್ಟಿನ ಅನುಕೂಲವಾಗಿದ್ದು ನಿಜ. ಆದರೆ ಪ್ರಶ್ನೆ ಇರುವುದು – ವಿದ್ಯಾರ್ಥಿಗಳು ‘ಶಾಲೆ’ ಎಂಬ ಕಟ್ಟಡಕ್ಕೆ ಭೇಟಿ ನೀಡಿ ಬೆಳಗಿನಿಂದ ಸಂಜೆಯವರೆಗೆ ಇದ್ದು ಬರುವುದಕ್ಕೊ ಅಥವಾ ಶಿಕ್ಷಣವನ್ನು ಕಲಿಯಲಿಕ್ಕೋ? ಯಾಕೆಂದರೆ ಶಿಕ್ಷಣ ಕಲಿಸಲು ಅಗತ್ಯವಾದ ಸಂಖ್ಯೆಯಲ್ಲಿ ಶಿಕ್ಷಕರಿಲ್ಲ. ಪಠೈಪುಸ್ತಕಗಳೂ ಸಕಾಲದಲ್ಲಿ ದೊರಕುವುದು ದುಸ್ತರವಾದ ಸಂಗತಿಯೇ. ಇರುವಷ್ಟೇ ಶಿಕ್ಷಕರಿಗೆ ಶಿಕ್ಷಣದ ಕೆಲಸದ ಹೊರೆಯ ಜೊತೆ ಜೊತೆಗೆ –‘ಗಣತ’ ಇತ್ಯಾದಿಗಳ ವಹಿವಾಟು, ಹಾಗಾಗಿ ನಡೆಯಬೇಕಾದ ಪ್ರಮಾಣದಲ್ಲಿ ಪಾಠ ನಡೆಯದಿದ್ದಾಗ ನಡೆಸುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೆಲ್ಲ ಚೆನ್ನಾಗಿ ಬರೆದು ಪಾಸು ಮಾಡಬೇಕೆಂದು ನಿರೀಕ್ಷಿಸುವುದು ಹೇಗೆ? ಅವರೆಲ್ಲ ಹೇಗೆ ಬರೆದರೂ ಪಾಸು ಮಾಡದೇ ಅವರನ್ನು ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಿಸಿದರೆ – ಅದಕ್ಕೆ ಅವರು, ಪಾಲಕರು ಒಟ್ಟಾಗಿ ಪ್ರಶ್ನಿಸಬಹುದು. ನೀವು ಸರಿಯಾಗಿ ಪಾಠ ಮಾಡಿಲ್ಲ. ಬಹುತೇಕೆ ಸಂದರ್ಭಗಳಲ್ಲಿ ಹೀಗೆ ಹೇಳುವುದು ಇದಕ್ಕೆ ಅಪವಾದಗಳೂ ಇರಲು ಸಾಧ್ಯ ಅದು ಬೇರೆ ಮಾತು. ಹೀಗಾದಾಗ ಅನಿವಾರ್ಯವಾಗಿ ಎಲ್ಲ ವಿದ್ಯಾರ್ಥಿಗಳೂ ಪಾಸು. ಒಂದರಿಂದ ಹತ್ತರವರೆಗೆ ಯಾರೂ ಫೇಲಿಲ್ಲ ಎಂದರೆ ಒಂದು ರೀತಿಯಲ್ಲಿ ಅವರಿಗೆಲ್ಲ ‘ಪಾಸು ಭಾಗ್ಯ’ ಯೋಜನೆ ಪ್ರಾಪ್ತವಾದಂತೆ. ಹಾಗೆ ಹೇಗೂ ಪಾಸು ಮಾಡುತ್ತಾರೆಂದಾದ ಮೇಲೆ ಯಾರಾದರೂ ಯಾಕೆ ಕಲಿಕೆಗೆ ಪ್ರಯತ್ನಿಸುತ್ತಾರೆ? ಫೇಲಾಗುವ ಭಯವಿದ್ದಾಗ ಮಾತ್ರ ಓದುವ ಹಟ ಹುಟ್ಟಿಕೊಳ್ಳುತ್ತದೆ. ಹಟತೊಟ್ಟು, ಓದದಿದ್ದರೆ ಕಲಿಯುವುದಾದರೂ ಹೇಗೆ? ಇದೊಂದು ರೀತಿಯಲ್ಲಿ ‘ಬೀಜ ವೃಕ್ಷ’ ನ್ಯಾಯದಂತಾಗಿಬಿಟ್ಟಿದೆ. ಒಂದೇ ಬಾರಿ ಎಸ್.ಎಸ್.ಎಲ್.ಸಿ. ಕೇಂದ್ರೀಯ ಪರೀಕ್ಷೆಯಲ್ಲಿ ಇದರ ಪರಿಣಾಮ ತಿಳುಯುತ್ತದೆ. ಪಿಯುಸಿಗೂ ಹಾಗೆ ಪಬ್ಲಿಕ್ ಪರೀಕ್ಷೆ, ಪದವಿಗಳಿಗೂ ಹಾಗೆ ಪ್ರತಿ ಸೆಮಿಸ್ಟರ್ ಪರೀಕ್ಷೆಯೂ ಪಬ್ಲಿಕ್ ಪರೀಕ್ಷೆ ಎಂ.ಎ, ಡಿ.ಎಡ್, ಬಿ.ಎಡ್ ಇತ್ಯಾದಿಗಳಿಗೂ ಹಾಗೆ ಪಬ್ಲಿಕ್ ಪರೀಕ್ಷೆ ಹಾಕಿದ ಮೇಲೆ ಈ ಪರೀಕ್ಷೆಗಳೆಲ್ಲ ವಿದ್ಯಾರ್ಥಿಗಳ ನಿಜವಾದ ಜ್ಞಾನದ ಮಟ್ಟವನ್ನು ಗುರುತಿಸಿ ಅದನ್ನು ಅಂಕಪಟ್ಟಿಯಲ್ಲಿ ದಾಖಲಿಸಬೇಕಲ್ಲ? ನಿಜ, ಅವು ದಾಖಲಿಸುತ್ತವೆ. ಹಾಗಿದ್ದರೆ, ಆಯಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಮುಂದಿನ ಶಿಕ್ಷಣಕ್ಕೆ ಪ್ರವೇಶ ಅಥವಾ ನೌಕರಿಯನ್ನು ನೀಡಲಾಗುತ್ತಿದೆಯೇ? ಖಂಡಿತ ಇಲ್ಲ. ಯಾಕೆಂದರೆ ಆ ಪರೀಕ್ಷೆಗಳ ಫಲಿತಾಂಶದ ಮೇಲೆ ಬಹುಶಃ ಇಂದು ನಂಬಿಕೆಯೇ ಇಲ್ಲವಾಗಿದೆ.
ದ್ವಿತೀಯ ಪಿಯೂಸಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳ ಆಧಾರದ ಮೇಲೆ ಆತ/ಆಕೆಗೆ ವೃತ್ತಿ ಶಿಕ್ಷಣ ಪಡೆಯಲು ಅವಕಾಶವಿಲ್ಲ. ಅವರು ಸಿಇಟಿ ಬರೆದು ಅದರ ಆಧಾರದ ಮೇಲೆ ದೊರಕುವ ಕೋರ್ಸುಗಳಿಗೆ ಸಾಗಬೇಕು. ಎಷ್ಟೋ ಸ್ನಾತಕ್ಕೋತ್ತರ ವಿಷಯಗಳಿಗೆ ಸೇರಲು ಕೂಡ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆ ನಡೆಸುತ್ತವೆ. ಹಾಗೇ ಡಿಎಡ್, ಮತ್ತು ಬಿಎಡ್ ಆದವರು. ಅವರು ಪದವಿಯಲ್ಲಿನ ಪರೀಕ್ಷೆಗಳಲ್ಲಿ ಪಡೆದುಕೊಂಡ ಅಂಕಗಳ ಆಧಾರದ ಮೇಲೆ ನೌಕರಿಗೆ ಅರ್ಹರಾಗುವುದಿಲ್ಲ. ಅವರಿಗೆ ಅದಕ್ಕೋಸ್ಕರವಾಗಿಯೇ ‘ಟಿಇಟಿ’ ನಡೆಸುತ್ತಾರೆ. ಎಂ.ಎ., ಎಂ.ಎಸ್ಸಿ; ಎಂ.ಕಾಂ ಆದರೆ ಕಾಲೇಜುಗಳಿಗೆ ಶಿಕ್ಷಕರಾಗಲಾಗುವುದಿಲ್ಲ. ಖಾಯಂ ಶಿಕ್ಷಕರಾಗಲು ನೆಟ್ ಸ್ಲೆಟ್ (NET), (SLET)  ಪರೀಕ್ಷೆಗಳನ್ನು ನಡೆಸುತ್ತಾರೆ. ಇನ್ನು ಬ್ಯಾಂಕ್ ಇತ್ಯಾದಿ ಕಡೆಗಳಲ್ಲಿ ಕೂಡ ಅವರು ಅವರದ್ದೇ ಆದ ಪರೀಕ್ಷೆಗಳನ್ನು ನಡೆಸುತ್ತಾರೆ.
ಯಾರೂ ಕೂಡ ಕೇವಲ ಶೈಕ್ಷಣಿಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನಷ್ಟೇ ಆಧರಿಸಿ ನೌಕರಿ ನೀಡುವುದಿಲ್ಲ. ಇದಕ್ಕೆ ಖಾಸಗಿ ಕಂಪನಿಗಳೂ ಹೊರತಾಗಿಲ್ಲ. ಅಂದರೆ ಏನು ಅರ್ಥ? ಪಡೆದ ಶಿಕ್ಷಣಕ್ಕೆ, ಸಂಬಂಧಿಸಿದಂತೆ ಸಂಬಂಧಿಸಿದ ಪರೀಕ್ಷಾ ಮಂಡಳಿ, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳಲ್ಲಿ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲವೇ? ನಂಬಿಕೆ ಇಲ್ಲದ ಪರೀಕ್ಷೆಗಳು ಇವು ಎಂದಾದ ಮೇಲೆ ಇವುಗಳನ್ನು ನಡೆಸುವುದರ ಪ್ರಯೋಜನ ಕೂಡಾ ಕಾಲ ಕ್ರಮೇಣ ಪ್ರಶ್ನಾರ್ಹವಾಗಬಹುದು. ಹೇಗೂ ಅವರವರು ಅವರವರಿಗೆ ಬೇಕಾದಂತಹ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ‘ಕನಿಷ್ಟ’ ವಿದ್ಯಾರ್ಹತೆಗಾಗಿ ಅಷ್ಟೇ ಈ ಅಂಕಪಟ್ಟಿಗಳು ಎಂದಾದರೆ ಯಾಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು? ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ಎಲ್ಲರೂ ಪಾಸು ಎಂಬ ತತ್ವವನ್ನೇ ಮುಂದುವರಿಸಿದರೆ ತಪ್ಪೇನು ಎಂದು ಪ್ರಶ್ನಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ‘ಪಾಸುಭಾಗ್ಯ’ ಯೋಜನೆಯನ್ನು ಸ್ನಾತಕ – ಸ್ನಾತಕೋತ್ತರ ಹಂತದವರೆಗೂ ವಿಸ್ತರಿಸಿದರೆ ಹೇಗೆ? ಕುಹಕದ ಮಾತಾದೀತು ಅಷ್ಟೆ. ಯಾಕೆಂದರೆ, ಉಳಿದವರಿಗೆ ನಂಬಿಕೆ ಇಲ್ಲ ಎಂದಾದರೆ ಓದುವವರಿಗೆ ಮತ್ತು ಕಲಿಸುವವರಿಗೆ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲ. ಪರೀಕ್ಷೆಗಳಿವೆ, ಪಾಸಾಗಬೇಕಾದ್ದು ಅವಶ್ಯಕ ಎಂಬ ಕಲ್ಪನೆ ಸ್ಥಿರವಾಗಿದ್ದುದರಿಂದಲೇ ಇಷ್ಟರ ಮಟ್ಟಿಗಾದರೂ ಶಿಸ್ತಿನಿಂದ ಇಂದು ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಶೈಕ್ಷಣಿಕ ವಾತಾವರಣಕ್ಕೆ ಇದು ಅಗತ್ಯ ಹಾಗಲ್ಲದೆ ಹೋದರೆ ಒಟ್ಟಾರೆ ವ್ಯವಸ್ಥೆ ಭವಿಷ್ಯದಲ್ಲಿ ಸಂಪೂರ್ಣ ಹದಗೆಟ್ಟುಹೋಗುವ ಸಾಧ್ಯತೆಯಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಪರೀಕ್ಷೆಗಳು ಪ್ರಸ್ತುತ ದಿನಮಾನಗಳಲ್ಲಿ ನಂಬಿಗೆ ಕಳೆದುಕೊಳ್ಳುತ್ತಿರುವುದು ನಿಜ. ಆದರೆ ನಮ್ಮ ಪ್ರಯತ್ನವಿರಬೇಕಾದದ್ದು ನಂಬಿಕೆಯನ್ನು ಉಳಿಸುವ ದಿಕ್ಕಿನಲ್ಲಿ. ಅಂಕಪಟ್ಟಿಗೆ ಅದರದ್ದೇ ಆದ ಮಾನ್ಯತೆ ಮತ್ತು ಯೋಗ್ಯತೆ ಲಭ್ಯವಾಗುವಂತೆ ಒಟ್ಟಾರೆ ವಾತಾವರಣದ ನಿರ್ಮತಿ ಕೂಡ ಇಂದಿನ ಅಗತ್ಯ ಪರೀಕ್ಷಾ ಅಕ್ರಮಗಳು – ಅನಗತ್ಯ ಹಗರಣಗಳು, ಪ್ರಶ್ನೆಪತ್ರಿಕೆಯ ಸೋರಿಕೆ – ಬೇಕಾಬಿಟ್ಟಿ ಮೌಲ್ಯಮಾಪನ ಇಂಥವುಗಳೆಲ್ಲ ನಿಂತ ಪಕ್ಷದಲ್ಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನೆಮ್ಮದಿ ದೊರಕೀತು. ಹಾಗೆ ಪ್ರಾಮಾಣಿಕ ಶ್ರದ್ಧಾವಂತ ಶಿಕ್ಷಕ ಸಮುದಾಯಕ್ಕೆ ಸಂತಸ ದೊರಕಲು ಸಾಧ್ಯ ನಂಬಿಕೆ ಇಲ್ಲದ ಪರೀಕ್ಷೆಗಳು ಎಂದು ಪರೀಕ್ಷೆಗಳನ್ನೇ ರದ್ದುಗೊಳಿಸಿ ಎಲ್ಲರೂ ಪಾಸೆಂದು ಘೋಷಿಸುವುದು ಯುಕ್ತವಾದ ಕ್ರಮವಲ್ಲ. ಬದಲಿಗೆ ಪರೀಕ್ಷೆಗಳೆಲ್ಲ ನಂಬಿಕೆಗೆ ಅರ್ಹವಾಗುವಂತೆ ನೋಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಾಟಾಚಾರದ ಪರೀಕ್ಷಾ ವ್ಯವಹಾರಗಳಿಗೆ ಕಡಿವಾಣ ಹಾಕುವುದಲ್ಲದೆ ಭ್ರಷ್ಟಾಚಾರ ನುಸುಳದಂತೆ ಜಾಗ್ರತೆ ವಹಿಸಬೇಕಾದದ್ದೂ ಅಗತ್ಯ ಹೇಗೆಂದರೆ ‘ಸೀಸರನ ಹೆಂಡತಿ ಪತಿವ್ರತೆಯಾಗಿದ್ದರಷ್ಟೇ ಸಾಲದು; ಹಾಗಂತ ಲೋಕಕ್ಕೆ ನಿರೂಪಿಸುವುದೂ ಮುಖ್ಯ’ ಎಂಬಂತೆ.
ಇನ್ನು ಈ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೆಲ್ಲ ಜಾರಿಗೆ ಬಂದದ್ದೇ ಪ್ರತಿಭಾವಂತರಿಗೆ ಅನ್ಯಾಯವಾಗದಿರಲಿ ಎಂದು. ಈ ಪರೀಕ್ಷೆಗಳೆಲ್ಲ ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ಜರುಗುತ್ತಿರುವುದರಿಂದ ಜನರಿಗೆ ಇವುಗಳ ಮೇಲೆ ನಂಬಿಕೆ ಹುಟ್ಟಿಕೊಂಡಿದೆ. ಹಾಗೆ ಯಾವುದೇ ವಶೀಲಿ ಬಾಜಿಗೂ ಕೈ ಹಾಕದೆ ಮುಂದಿನ ವ್ಯಾಸಂಗ ಕೈಗೊಳ್ಳಲು ಯಾ ನೌಕರಿಯನ್ನು ಪಡೆದುಕೊಳ್ಳಲು ಇವು ಸಹಾಯ ಮಾಡುತ್ತವೆ ಎಂಬ ತೃಪ್ತಿ ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಮೂಡಿರುವುದು ಸುಳ್ಳಲ್ಲ. ಹೀಗಾಗಿ ನಾವು ಇಂದು ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಾದರೂ ಅತ್ಯಂತ ಜವಾಬ್ದಾರಿಯಿಂದ ಈ ಪರೀಕ್ಷೆಗಳಿಗೆ ಮಾತ್ರ ಇನ್ನಿಲ್ಲದ ರೀತಿಯಲ್ಲಿ ತರಬೇತಿ ಪಡೆದುಕೊಳ್ಳುತ್ತ – ಅಧ್ಯಯನ ಮಾಡುತ್ತ ಸಿದ್ಧರಾಗುತ್ತಾರೆ. ಯಾಕೆಂದರೆ ಈ ಪರೀಕ್ಷೆಗಳ ಫಲಿತಾಂಶ ಅವರವರ ಬದುಕಿನ ದಿಕ್ಕನ್ನೇ ಬದಲಿಸುವ ಸಾಮಥ್ರ್ಯ ಹೊಂದಿರುವಂಥದ್ದು. ಹೀಗೆ ಜವಾಬ್ದಾರಿ ಮತ್ತು ಸತತಾಧ್ಯಯನಕ್ಕೆ ಒತ್ತು ನೀಡುವ ಪರೀಕ್ಷೆ ಪದ್ಧತಿ, ಎಲ್ಲ ಹಂತಗಳಲ್ಲೂ ಜಾರಿಯಾದರೆ ಜನ ಅದನ್ನು ಗೌರವಿಸಲು ಸಾಧ್ಯ ಒಬ್ಬ ಟಿಇಟಿ, ನೆಟ್, ಸ್ಲೆಟ್ ಪಾಸಾದರೆ ಅವನನ್ನು ಸಮಾಜ ನೋಡುವ ರೀತಿಗೂ ಯಾವುದೋ ಪದವಿ-ಸ್ನಾತಕೋತ್ತರ ಪದವಿ ಪಡೆದವನನ್ನು ನೋಡುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ನಾವು ಬೇಕಿದ್ದರೆ ಗಮನಿಸಬಹುದು.ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿ ಪರೀಕ್ಷೆಗಳು ಹುಟ್ಟಿದ್ದರ ಹಿಂದಿರುವ ಕಾರಣಗಳನ್ನು ಅರಿತು-ನಮ್ಮ ಮಾಮೂಲಿ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಗಳನ್ನು ತರುವುದು ಅಂದರೆ ಅಲ್ಲಿನ ಪರೀಕ್ಷೆಗಳು ನಂಬಿಕೆಗೆ ಯೋಗ್ಯ ಎಂದು ನಿರೂಪಿಸುವುದು ಮುಖ್ಯ ಸಧ್ಯದ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೂ ಉಳಿದ ಮಾಮೂಲಿ ಪರೀಕ್ಷೆಗಳಂತಾದರೆ ಮತ್ತೆ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಗಳನ್ನು ಜಾರಿಗೆ ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಒಟ್ಟಾರೆ ಸುಧಾರಣೆಯತ್ತ ಸಾಗಬೇಕಾದ ಸಂದರ್ಭದಲ್ಲಿ ಇವೆಲ್ಲ ಅನಿವಾರ್ಯವಾಗುತ್ತ ಹೋಗುತ್ತವೆ. ಹಾಗಾಗಿ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದ ವರೆಗೆ ವಿದ್ಯಾರ್ಥಿಗಳಿಗೆ., ಬೇಕಾದ ಸೌಲಭ್ಯ ಒದಗಿಸಿಕೊಡುವುದಲ್ಲದೆ, ಶೈಕ್ಷಣಿಕ ಅನುಕೂಲತೆಯನ್ನು ದೊರಕಿಸಿಕೊಡುವುದಲ್ಲದೆ, ಕೊಟ್ಟವುಗಳ ಉಪಯೋಗವೆಷ್ಟಾಯ್ತು? ಎಂದು ಕಾಲಕಾಲಕ್ಕೆ ಪರಿಶೀಲಿಸಿದುವುದು ಕೂಡ ಉಪಯುಕ್ತ ಕ್ರಮವಾದೀತು. ಎಲ್ಲವನ್ನೂ ನೀಡಿದ ಬಳಿಕ ಕೂಡ ಓದದೇ ಅಧ್ಯಯನ ಮಾಡದೆ ಒಟ್ಟಾರೆ ಮುಂದಿನ ತರಗತಿಗೆ ಪ್ರವೇಶ ನೀಡಬೇಕೆಂದು ಬಯಸುವುದು – ಒತ್ತಾಯಿಸುವುದು – ಸೂಕ್ತವಾದದ್ದಲ್ಲ. ಪಾಸಾಗಿಯೇ ಪಾಸಾದರೆ ಮಾತ್ರ ಮುಂದೆ ಹೋಗುವುದಕ್ಕೆ ಅವಕಾಶ. ಹಾಗಲ್ಲದಿದ್ದಲ್ಲಿ ಇದ್ದಲ್ಲೇ ಇದ್ದು ಪುನಃ ಪ್ರಯತ್ನಿಸಿ ಮುಂದೆ ಹೋಗಲಿ ಎಂದು ಖಂಡಿತವಾಗಿ ಹೇಳುವುದು. ಆ ಕುರಿತು ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯವಾಗದ ಪಕ್ಷದಲ್ಲಿ ‘ಗುಣಮಟ್ಟ’ ನಿರೀಕ್ಷೆ ಸಾಧ್ಯವಿಲ್ಲ. ಅಷ್ಟೂ ಸೆಮಿಷ್ಟರ್‍ಗಳ ಪರೀಕ್ಷೆಗಳನ್ನು ಕೊನೆಗೆ ಒಟ್ಟಿಗೇ ಬರೆಯಲು ಅವಕಾಶ ಕೊಡಬೇಕೆಂಬ ಬೇಡಿಕೆಗೆ ಯಾವುದೇ ಅರ್ಥವಿಲ್ಲ. ಆಯಾ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಅಷ್ಟಷ್ಟನ್ನೇ ಮುಗಿಸಲಾರೆ ಕೊನೆಗೆ ಅಷ್ಟನ್ನೂ ಪೂರೈಸುತ್ತಾರೆ ಎಂದರೆ – ಅಲ್ಲಿಯವರೆಗೆ ಅವರೇನು ಮಾಡುತ್ತಿರುತ್ತಾರೆ ಎಂದು ಕೂಡ ಪ್ರಶ್ನಿಸಬೇಕಾಗುತ್ತದೆ. ಹಾಗಾಗಿ ನಂಬಿಕೆ ಇಲ್ಲದ ಪರೀಕ್ಷೆಗಳು ನಮಗೆ ಅನಗತ್ಯ ಪರೀಕ್ಷೆಗಳು ನಂಬಿಕೆಗೆ ಯೋಗ್ಯವಾದವುಗಳಾಗಬೇಕೆಂಬುದಷ್ಟೇ ಸದ್ಯದ ಕಳಕಳಿ.
ರವೀಂದ್ರ ಭಟ್ ಕುಳಿಬೀಡು

ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ

0

ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ಈಚೆಗೆ ಜಸ್ಟಿಸ್ ಎಸ್.ಆರ್.ನಾಯಕ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಶಿವರಾಮ, ನಟಿ ದೀಪಿಕಾದಾಸ್ ಪ್ರಧಾನ ಮಾಡಿದರು.

ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಶಿಸುತ್ತಿದೆ

0

ತೀವ್ರ ಬರಗಾಲಕ್ಕೆ ತುತ್ತಾಗಿರುವ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಬೆಳೆಗಳನ್ನು ಬೆಳೆಯಬೇಕಾದರೆ ಅನಿವಾರ್ಯವಾಗಿ ಕ್ರಿಮಿನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡಬೇಕಾಗಿದ್ದು ಕ್ರಿಮಿನಾಶಕಗಳನ್ನು ಉಪಯೋಗಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವ್ಯವಸಾಯ ಮಾಡಲು ಪ್ರತಿನಿತ್ಯ ಸಂಕಷ್ಟಗಳನ್ನು ಅನುಭವಿಸುತ್ತಿರುವ ಈ ಭಾಗದ ರೈತರು ಯಾವುದೇ ಬೆಳೆ ಬೆಳೆಯಬೇಕಾದರೆ ಕ್ರಿಮಿನಾಶಕಗಳ ಮೊರೆಹೋಗುವುದರಿಂದ ಭೂಮಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಾಗಾಗಿ ರೈತರು ರಾಸಾಯನಿಕ ರಸಗೊಬ್ಬರಗಳನ್ನು ಉಪಯೋಗ ಮಾಡುವುದಕ್ಕಿಂತ ಹೆಚ್ಚಾಗಿ ಸಾವಯವ ಕೃಷಿಯತ್ತ ಗಮನಹರಿಸುವುದು ಸೂಕ್ತ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೆಗೌಡ ಮಾತನಾಡಿ, ರೈತರು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡುವುದಕ್ಕಿಂತ ಸರ್ಕಾರದಿಂದ ಆಯೋಜನೆ ಮಾಡುವಂತಹ ತರಬೇತಿಗಳಲ್ಲಿ ಭಾಗವಹಿಸಿ ತಜ್ಞರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಗುಣಮಟ್ಟದ ಇಳುವರಿಯ ಬೆಳೆ ಬೆಳೆಯಬೇಕು. ಇಲಾಖೆಯ ಮುಖಾಂತರ ಸಿಗುವಂತಹ ಎಲ್ಲಾ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಚಂದ್ರಪ್ಪ, ಶಿವಮೂರ್ತಿ, ಆನಂದ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕರ್ನಾಟಕ ರಕ್ಷಣಾ ಸೇನೆಯ ಕಂಬದಹಳ್ಳಿ ಶಾಖೆ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ

0

ಸಂಘಟನೆಗಳು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದರೊಂದಿಗೆ ನಾಡಿನ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ಸೇನೆಯ ಕಂಬದಹಳ್ಳಿ ಶಾಖೆ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಟನೆಗಳು ಸಮಾಜಮುಖಿಯಾಗಿ ಕೆಲಸ ಮಾಡುವುದರೊಂದಿಗೆ ವೈಯಕ್ತಿಕವಾಗಿ ಯಾರಿಗೂ ನೋವು ಉಂಟಾಗುವ ಹಾಗೆ ನಡೆದುಕೊಳ್ಳದೇ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ಅನ್ಯ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಯು ಇತ್ತೀಚೆಗೆ ಅಲ್ಪಸಂಖ್ಯಾತ ಭಾಷೆಯಾಗುತ್ತಿದ್ದು ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲಾ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟಗಳನ್ನು ಮಾಡುವಂತಹ ಕೆಲಸವನ್ನು ಮಾಡಬೇಕು. ಯುವಜನತೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಸಂಘಟಿತರಾಗುವುದರೊಂದಿಗೆ ಪ್ರತಿಯೊಂದು ಗ್ರಾಮದಲ್ಲೂ ಈ ರೀತಿಯಾದ ಸಂಘಟನೆಗಳು ಬೆಳೆಯಬೇಕು ಎಂದರು.
ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಟಿ.ರಮೇಶ್ಗೌಡ ಮಾತನಾಡಿ ರಾಜ್ಯದ ಗಡಿಭಾಗಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಟ ನಡೆಸುವುದರೊಂದಿಗೆ ನಾಡಿನ ಜನತೆಗೆ ರಕ್ಷಣೆ ನೀಡಬೇಕಾದಂತಹ ಅನಿವಾರ್ಯತೆ ಎದುರಾಗಿದ್ದು ಇತ್ತೀಚೆಗೆ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಂಘಟನೆ ಹೋರಾಟ ಮಾಡಲಿದೆ ಎಂದರು.
ಇಡೀ ದೇಶಕ್ಕೆ ಹಣ್ಣು, ಹಾಲು, ತರಕಾರಿ ಉತ್ಪಾದಿಸಿ ನೀಡಿದಂತಹ ಈ ಭಾಗದ ರೈತರು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಸರ್ಕಾರ ಕೂಡಲೇ ಈ ಭಾಗದ ರೈತರಿಗೆ ೧೦೦ ಟಿಎಂಸಿ ಯಷ್ಟು ನೀರು ತರಬೇಕು. ಅದು ಶಾಶ್ವತ ನೀರಾವರಿಯಾಗಬಹುದು ಅಥವ ಎತ್ತಿನಹೊಳೆ ಯೋಜನೆಯಾಗಬಹುದು ಒಟ್ಟಾರೆ ಈ ಭಾಗದ ರೈತರು ವ್ಯವಸಾಯ ಮಾಡಲು ೧೦೦ ಟಿಎಂಸಿ ಯಷ್ಟು ನೀರು ಬೇಕು. ಹಾಗಾಗಿ ಕರ್ನಾಟಕ ರಕ್ಷಣಾ ಸೇನೆಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿದ ನಂತರ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತನುಜಾ, ರಾಜ್ಯ ಸಂಚಾಲಕ ಎಸ್.ಪಿ.ರಾಜು, ತಾಲ್ಲೂಕು ಅಧ್ಯಕ್ಷ ವಿ.ವಿಶ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಪ್ರಾರಂಭಗೊಂಡ ಸುಮಾರು 19 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳನ್ನು ಶಾಸಕ ಎಂ.ರಾಜಣ್ಣ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಗಳ ಹರಿಜನ ಕಾಲೋನಿಗಳಲ್ಲಿ ತಲಾ ಆರೂ ಕಾಲು ಲಕ್ಷ ರೂಪಾಯಿಗಳ ಸಿಮೆಂಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಆನೂರು ಗ್ರಾಮ ಪಂಚಾಯತಿಯ ಆರು ಗ್ರಾಮಗಳಾದ ಆನೂರು, ಜಪ್ತಿಹೊಸಹಳ್ಳಿ, ಬೋದಗೂರು, ಹಿತ್ತಲಹಳ್ಳಿ, ದಬರಗಾನಹಳ್ಳಿ, ಬೈರನಾಯಕನಹಳ್ಳಿಗಳಲ್ಲಿ ಮೂರು ಇಲಾಖೆಗಳಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳು ವಾಸಿಸುವ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ನನ್ನ ಕ್ಷೇತ್ರದ 90 ಹಳ್ಳಿಗಳಲ್ಲಿ ಕಾಮಗಾರಿಗಳು ನಡೆಯಲಿವೆ. ಸಣ್ಣ ನೀರಾವರಿ ಇಲಾಖೆ , ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅನುದಾನಗಳು ಬಿಡುಗಡೆಯಾಗಿದ್ದು ಮೂಲಭೂತ ಸೌಕರ್ಯಗಳು ವೃದ್ಧಿಸಲಿವೆ’ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಮುನಿಯಪ್ಪ, ಪಿ.ವಿ.ನಾಗರಾಜ್, ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಂಜುಂಡಪ್ಪ, ಲಕ್ಷ್ಮೀಪತಿ, ಸೂರ್ಯನಾರಾಯಣಗೌಡ, ಗುತ್ತಿಗೆದಾರ ಚನ್ನಕೇಶವ, ಎ.ಇ.ಇ ಜಮೀರ್ ಅಹಮದ್, ಮಳ್ಳೂರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ

0

ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡೆಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಪರಸ್ಪರ ಪ್ರೀತಿ, ಭಾತೃತ್ವತೆ, ಸ್ನೇಹ ವೃದ್ಧಿಯಾಗಲೂ ಕ್ರೀಡೆಗಳು ಸಹಕಾರಿ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರವರ ಇಷ್ಟದ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ತಪ್ಪದೆ ಭಾಗವಹಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆಟದಲ್ಲಿ ಕ್ರೀಡಾ ಮನೋಭಾವನೆ ಮುಖ್ಯ. ಒತ್ತಡದ ನಡುವೆ ಕೆಲಸ ಮಾಡುವುದರಿಂದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಸಾಮಾನ್ಯವಾಗಿದೆ. ದೈಹಿಕ ವ್ಯಾಯಾಮ ಮತ್ತು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಖಾಯಿಲೆಗಳಿಂದ ದೂರ ಉಳಿಯಲು ಸಾಧ್ಯ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಾವೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ, ಕ್ರೀಡೆಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಸರ್ಕಾರಿ ನೌಕರರು ದಿನದಲ್ಲಿ ಅರ್ಧ ಗಂಟೆಯಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಉಪಾಧ್ಯಕ್ಷ ಎನ್.ಶಶಿಕುಮಾರ್, ಎನ್.ರಾಮಚಂದ್ರ, ಆರ್.ಕೇಶವರೆಡ್ಡಿ, ಬಿ.ವಿ.ಶ್ರೀರಾಮಪ್ಪ, ಅಗಜಾನನಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಶೀವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿಗೆ ದೀಪಾರಾಧನೆ, ಹಾಲಿನ ಅಭಿಷೇಕ

0

ಪಟ್ಟಣದ ಅಶೋಕ ರಸ್ತೆಯಲ್ಲಿರುವ ಕಾಶೀವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶನಿವಾರ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯವರಿಂದ 44ನೇ ವರ್ಷದ ದೀಪಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ 101 ಲೀಟರ್ ಹಾಲಿನ ಅಭಿಷೇಕ, ಹೂವಿನ ಅಲಂಕಾರ, ಭಜನೆ, ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
‘ಹಲವಾರು ವರ್ಷಗಳಿಂದ ಸತತವಾಗಿ ಪ್ರತಿ ವರ್ಷವೂ ವಿಜೃಂಭಣೆಯಿಂದ ದೀಪಾರಾಧನೆ, ಹಾಲಿನ ಅಭಿಷೇಕ ಮತ್ತು ವಿಶೇಷ ಅಲಂಕಾರದೊಂದಿಗೆ ಅಯ್ಯಪ್ಪ ಭಕ್ತರು ಅಯ್ಯಪ್ಪಸ್ವಾಮಿಯ ಪೂಜಾ ಮಹೋತ್ಸವವನ್ನು ನೆರವೇರಿಸುತ್ತಾ ಬಂದಿದ್ದೇವೆ. ಈ ಬಾರಿ ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ ಮತ್ತು 101 ಕಲಶ ಸ್ಥಾಪಿಸಿ ಹೋಮವನ್ನು ಸಹ ನಡೆಸಿದ್ದೇವೆ. ಮಧ್ಯಾಹ್ನ ಭಜನೆ ಕಾರ್ಯಕ್ರಮ ಹಾಗೂ ಸಂಜೆ ಪುಟ್ಟ ಮಕ್ಕಳು ದೀಪಗಳೊಂದಿಗೆ ಮುನ್ನಡೆಸುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವವನ್ನು ಮಂಗಳ ವಾದ್ಯಗಳೊಂದಿಗೆ ಏರ್ಪಡಿಸಲಾಗಿದೆ’ ಎಂದು ಎಂ.ಎಂ.ಕೃಷ್ಣಪ್ಪ ತಿಳಿಸಿದರು.

ಮಳಮಾಚನಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಘಟಕದ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಕನ್ನಡ ರಕ್ಷಣಾ ವೇದಿಕೆ ಘಟಕದ ಉದ್ಘಾಟನಾ ಸಮಾರಂಭವನ್ನು ಶಿವರಾಮಗೌಡರ ನೇತೃತ್ವದಲ್ಲಿ ನಡೆಸಲಾಯಿತು. ಜಿಲ್ಲಾಧ್ಯಕ್ಷ ಛಲಪತಿ, ತಾಲ್ಲೂಕು ಅಧ್ಯಕ್ಷ ಶ್ರೀಧರ್, ಚಂದ್ರಣ್ಣ, ಲಕ್ಷ್ಮಯ್ಯ, ಕೃಷ್ಣಯ್ಯ, ಜಗದೀಶ್ ಹಾಜರಿದ್ದರು.

ನಡಿಪಿನಾಯಕನಹಳ್ಳಿ ಗ್ರಾಮದ ಯುವಕರಿಂದ ರಕ್ತದಾನ

0

ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ಗ್ರಾಮದ ಯುವಕರನ್ನು ರಕ್ತದಾನದಂಥಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜು ಆವರಣದಲ್ಲಿ ರೆಡ್ಕ್ರಾಸ್ ಸೊಸೈಟಿ ಮತ್ತು ಲೋಕಮಾತಾ ಎಜುಕೇಷನಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿ, ಹೊಸ ಜೀವ ನೀಡಬಲ್ಲದು. ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ ರಕ್ತದಾನ ಮಾಡಿದವರಿಗೂ ಕೂಡ ಅನುಕೂಲವಾಗಲಿದೆ. ರಕ್ತದಿಂದ ವಿವಿಧ ರೋಗಿಗಳ ಗಾಯಗಳ ಚಿಕಿತ್ಸೆಗೆ ಬೇಕಾಗುವ ಮತ್ತು ಜೀವ ಉಳಿಸಲು ಅಗತ್ಯವಿರುವ ರಕ್ತ ದೊರಕುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಾಕಷ್ಟು ಜನರಿಗೆ ರಕ್ತ ದಾನ ಮಾಡಿದವರು ದೇವರಿದ್ದಂತೆ. ಒಂದು ಜೀವವನ್ನು ಉಳಿಸುವ ಈ ಕಾರ್ಯದಿಂದ ಆಗುವ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು ಎಂದು ಹೇಳಿದರು. ರಕ್ತದಾನ ಶಿಬಿರದಲ್ಲಿ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ, ರೆಡ್ಕ್ರಾಸ್ ಸೊಸೈಟಿಯ ಗುರುರಾಜರಾವ್, ನಾರಾಯಣಾಚಾರ್, ಪ್ರಾಂಶುಪಾಲ ಸತ್ಯನಾರಾಯಣ, ಸುದರ್ಶನ್, ಸುಮಾ, ರೂಪಾ, ಪ್ರಕಾಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಅಭಿವೃದ್ಧಿ ಅಧಿಕಾರಿ ಗೋಪಿನಾಥ್, ಸದಸ್ಯ ರಾಮಕೃಷ್ಣಪ್ಪ, ರವಿ ಲಂಬಾಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ಗುಂಡು ತೋಪಿನ ತೆರವು ಕಾರ್ಯಾಚರಣೆ

0

ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಒತ್ತುವರಿಯಾಗಿರುವ ಸರ್ಕಾರಿ ಗುಂಡು ತೋಪನ್ನು ತಾಲ್ಲೂಕು ಆಡಳಿತದ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆಯಿತು.
ಜಪ್ತಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 3 ರಲ್ಲಿ 38 ಗುಂಟೆ, ಸರ್ವೆ ನಂಬರ್ 4 ರಲ್ಲಿ 7 ಎಕರೆ 32 ಗುಂಟೆ ಜಮೀನು ಸರ್ಕಾರಿ ಗುಂಡು ತೋಪಿದ್ದು, ಕೆಲ ಭಾಗ ಹಲವಾರು ವರ್ಷಗಳಿಂದ ಖಾಸಗಿಯರ ಅನುಭವದಲ್ಲಿತ್ತು. ಈ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ತಾಲ್ಲೂಕು ಆಡಳಿತದ ವತಿಯಿಂದ ಸರ್ವೆ ನಡೆಸಿದ್ದರು. ಗುಂಡುತೋಪಿನಲ್ಲಿ ಉಳುಮೆ ಮಾಡುತ್ತಿದ್ದವರಿಗೆ ನೋಟಿಸ್ ನೀಡಿದ್ದರು. ಶುಕ್ರವಾರ ಗುಂಡು ತೋಪಿನ ಸುತ್ತ ಜೆಸಿಬಿ ಮೂಲಕ ಕಾಲುವೆ ತೆಗೆಸುವ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಯಾವುದೇ ತಕರಾರಿಲ್ಲದೆ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಈ ಗುಂಡುತೋಪಿನ ಜಾಗದಲ್ಲಿ ಮೂರು ದೇವಾಲಯಗಳು, ಶಾಲಾ ಕಟ್ಟಡ ಹಾಗೂ ಆರು ಮನೆಗಳಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ದೇವಾಲಯ ಮತ್ತು ಶಾಲಾ ಕಟ್ಟಡವನ್ನು ತೆರವುಗೊಳಿಸುವುದಿಲ್ಲ. ಉಳಿದಂತೆ ಆರು ಮನೆಗಳನ್ನು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.
ರಜಸ್ವ ನಿರೀಕ್ಷಕ ಸುಬ್ರಮಣಿ, ರೆವಿನ್ಯೂ ಇಲಾಖೆಯ ಲಾರೆನ್ಸ್, ನಾಗರಾಜು, ಜಂಗಮಕೋಟೆ ಎ.ಎಸ್.ಐ ಈರಪ್ಪ, ಸನಾವುಲ್ಲಾ, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ತೊಂಡೆಕಾಯಿ ಗೊಜ್ಜು

0

ಬೇಕಾಗುವ ಸಾಮಗ್ರಿ:
5-6 ತೊಂಡೆಕಾಯಿ
2 ಹಸಿಮೆಣಸು
1 ಈರುಳ್ಳಿ
ಸಣ್ಣ ಚೂರು ಹುಣಿಸೆಹಣ್ಣು
ಉಪ್ಪು
1 ಕಪ್ಪು ತೆಂಗಿನ ತುರಿ
ಮಾಡುವ ವಿಧಾನ:
ತೊಂಡೆಕಾಯಿ, ಹಸಿಮೆಣಸು, ಹುಣಸೆಹಣ್ಣನ್ನು ಒಟ್ಟಿಗೆ ಬೇಯಿಸಿಕೊಳ್ಳಿ.
ಮೊದಲಿಗೆ ತೆಂಗಿನತುರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತರಿ ತರಿಯಾಗಿ ರುಬ್ಬಿ.
ಅದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಉದ್ದಿನಬೇಳೆ, ಸಾಸಿವೆ, ಒಂದು ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಒಂದು ಈರುಳ್ಳಿಯನ್ನು ಸಣ್ಣಕೆ ಕೊಚ್ಚಿ ಹಾಕಿ. ಇದನ್ನು ಅನ್ನಕ್ಕೆ ಹಾಕಿ ಕಲಸಿ ಊಟಮಾಡಿ.
ಇದೇ ವಿಧಾನದಲ್ಲಿ ಬೀನ್ಸ್, ಬೀಟ್‍ರೂಟ್, ಹೀರೇಕಾಯಿಯಲ್ಲಿಯೂ ಮಾಡಬಹುದು.

ಭಕ್ತರಹಳ್ಳಿ ಗೇಟ್ ಸಮೀಪ ಅಪಘಾತ, ವ್ಯಕ್ತಿಯೊಬ್ಬ ಮೃತ

0

ತಾಲ್ಲೂಕಿನ ಜಂಗಮಕೋಟೆ ರಸ್ತೆಯಲ್ಲಿರುವ ಭಕ್ತರಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಗಂಗರಾಜು(26) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈತ ಆಂಧ್ರದ ರಾಮಸಮುದ್ರದ ನಿವಾಸಿಯಾಗಿದ್ದು, ಭಕ್ತರಹಳ್ಳಿ ಗ್ರಾಮದ ಭವ್ಯಾ ಎಂಬುವವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಕಳೆದ ಹತ್ತು ದಿನಗಳಿಂದ ಭಕ್ತರಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ಬೈಕಿನಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಗುರುವಾರ ಬೆಳಗಿನ ಜಾವ ಅತಿಹೆಚ್ಚು ಮಂಜು ಕವಿದಿದ್ದು, ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಗಂಗರಾಜು ತಲೆಗೆ ಹೆಲ್ಮೆಟ್ ಧರಿಸಿದ್ದರೂ ತೀವ್ರವಾಗಿ ತಲೆಗೆ ಹೊಡೆತ ಬಿದ್ದು ರಸ್ತೆ ಬದಿಯಲ್ಲಿ ಶವವಾಗಿ ಕಂಡುಬಂದಿದ್ದಾರೆ. ಯಾವ ರೀತಿಯ ಅಪಘಾತ ಸಮಭವಿಸಿದೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಸ್ಥಳಕ್ಕೆ ಜಂಗಮಕೋಟೆ ಹೊರಠಾಣೆಯ ಎ.ಎಸ್.ಐ ಈರಪ್ಪ ಭೇಟಿ ನೀಡಿದ್ದರು. ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಯಿಬಾಬಾಗೆ ಸಂತಾಕ್ಲಾಸ್ ಅಲಂಕಾರ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಯಿಬಾಬಾಗೆ ಸಂತಾಕ್ಲಾಸ್ ಅಲಂಕಾರವನ್ನು ಮಾಡಲಾಗಿತ್ತು.

ಎಬೆನೆಜರ್ ಮಾರ್ತೋಮ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆ

0

ಪಟ್ಟಣದ ಎಬೆನೆಜರ್ ಮಾರ್ತೋಮ ಚರ್ಚ್ನಲ್ಲಿ ಗುರುವಾರ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಬೇಧವಿಲ್ಲದೆ ನೂರಾರು ಮಂದಿ ಚರ್ಚ್ಗೆ ಆಗಮಿಸಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚರ್ಚ್ನಲ್ಲಿ ಕೇಕನ್ನು ಹಂಚಿದರು.
‘ವರ್ಷಕ್ಕೊಮ್ಮೆ ಬರುವ ಏಸುಕ್ರಿಸ್ತನ ಜಯಂತಿಯನ್ನು ಸಡಗರದಿಂದ, ಭಕ್ತಿ ಭಾವದಿಂದ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಕ್ರೈಸ್ತರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್ಮಸ್ ಅಥವಾ ಕ್ರಿಸ್ತ ಜಯಂತಿಯನ್ನು ಪ್ರತಿವರ್ಷ ವಿಶ್ವದಾಧ್ಯಂತ ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಗುತ್ತದೆ. ಡಿಸೆಂಬರ್9 ರಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.
ಕ್ರಿಸ್ಮಸ್ ಸಮಯದಲ್ಲಿ ಕ್ರೈಸ್ತ ಕುಟುಂಬಗಳ ಮೇಲೆ ನಕ್ಷತ್ರಗಳನ್ನು ಕಟ್ಟುವುದು ವಾಡಿಕೆ. ಕ್ರೈಸ್ತರು ನಮಗಾಗಿ ಜನಿಸಿದ ರಕ್ಷಕನು ಏಸು ಎಂಬ ನಂಬಿಕೆಯಿಂದ ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ತಮ್ಮ ಮನೆಗಳನ್ನು ವಿವಿಧ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿ, ಸ್ನೇಹಿತರು, ಬಂಧುಗಳು, ಸೇರಿದಂತೆ ಎಲ್ಲರೊಂದಿಗೂ ಶುಭಾಶಯಗಳನ್ನು ಹಂಚಿಕೊಂಡು ಎಲ್ಲರ ಒಳಿತಾಗಿ ಪ್ರಾರ್ಥನೆ ಮಾಡುವುದು ವಾಡಿಕೆಯಾಗಿದೆ. ಚರ್ಚ್ನಲ್ಲಿಯೂ ಏಸುವಿನ ಜನ್ಮವೃತ್ತಾಂತವನ್ನು ಪ್ರತಿನಿಧಿಸುವಂತೆ ಪ್ರತಿಕೃತಿಗಳ ಮೂಲಕ ಅಲಂಕಾರವನ್ನು ಮಾಡಿದ್ದೇವೆ’ ಎಂದು ಎಬೆನೆಜರ್ ಮಾರ್ತೋಮ ಚರ್ಚ್ನ ಫಾದರ್ ರೆನಿನ್ ವರ್ಗೀಸ್ ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಹಣ್ಣು ಮತ್ತು ಬ್ರೆಡ್ ವಿತರಣೆ

0

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯ ತಾಲ್ಲೂಕು ಘಟಕ ಮತ್ತು ರೈತ ಮೋರ್ಚಾದ ವತಿಯಿಂದ ಗುರುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರಗೌಡ, ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಅಪ್ರತಿಮ ನಾಯಕರು. ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ವಾಜಪೇಯಿ ಅವರ ಕನಸಾಗಿರುವ ನದಿಗಳ ಜೋಡಣೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಕಟ್ಟಡದ ಅಕ್ಕಪಕ್ಕ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಮಂಜುಳಾ ಸುರೇಶ್, ರಮೇಶ್ ಬಾಯಿರಿ, ಶ್ರೀರಾಮರೆಡ್ಡಿ, ದಾಮೋದರ್, ಶಿವಕುಮಾರಗೌಡ, ನಂದೀಶ್, ರಾಘವೇಂದ್ರ, ಶ್ರೀಧರ್, ಸುಜಾತಮ್ಮ, ಮುನಿರತ್ನಮ್ಮ, ರತ್ನಮ್ಮ, ಶಿವಮ್ಮ, ಸುಶೀಲಮ್ಮ, ತ್ಯಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಚೆಕ್ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 45 ಜನ ಅಂಗವಿಕಲರಿಗೆ ಚೆಕ್ಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ತುಳಿಸಮ್ಮ ವೆಂಕಟಪ್ಪ, ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ ವಿತರಿಸಿದರು. ಉಪಾಧ್ಯಕ್ಷ ಮುನಿಯಪ್ಪ, ಸದಸ್ಯರಾದ ಬಚ್ಚರೆಡ್ಡಿ, ದ್ಯಾವಪ್ಪ, ನಾರಾಯಣಸ್ವಾಮಿ, ನಾಗರಾಜರೆಡ್ಡಿ, ರತ್ನಮ್ಮ, ನಾರಾಯಣಮ್ಮ, ಲಕ್ಷ್ಮೀದೇವಮ್ಮ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ರೈತರಿಗೆ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ರೈತರಾದ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಅವರಿಗೆ ಶ್ರೇಷ್ಠ ಕೃಷಿಕ ರೈತ ಪ್ರಶಸ್ತಿ, ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ, ಕೊತ್ತನೂರು ಪಿ.ನೇತ್ರಾ, ಬೆಳ್ಳೂಟಿ ಎಸ್.ಎಂ.ಮಾರೇಗೌಡ, ಕಾಚಹಳ್ಳಿ ಶೈಲಜ, ಮೇಲೂರು ಟಿ.ಎಂ.ನವೀನ್, ತಾದೂರು ಟಿ.ಬಿ.ನಾಗರಾಜ್ ಅವರಿಗೆ ಕೃಷಿ ರತ್ನ ಪ್ರಶಸ್ತಿಯನ್ನು, ಅತ್ಯುತ್ತಮ ರೈತಕೂಟವೆಂದು ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟಕ್ಕೆ ಅಂತರರಾಷ್ಟ್ರೀಯ ರೈತರ ದಿನದ ಅಂಗವಾಗಿ ಬೆಂಗಳೂರಿನ ಕೃಷಿ ಭವನದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥಗೌಡ , ಮಾಜಿ ಸಚಿವ ಎಂ.ವಿ.ರಾಜಶೇಖರನ್, ಕೃಷಿ ಇಲಾಖೆಯ ನಿರ್ದೇಶಕ ಧರ್ಮರಾಜನ್, ಯುವಕ ರೈತ ಸಮಾಜದ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ, ಕೆನರಾಬ್ಯಾಂಕಿನ ಮಹಾಪ್ರಬಂಧಕ ರವೀಂದ್ರಭಂಡಾರಿ, ದ್ರಾಕ್ಷಿ ವೈನ್ ಬೋರ್ಡ್ ನಿರ್ದೇಶಕ ಕೃಷ್ಣ ಹಾಜರಿದ್ದರು.