ಕ್ರಿಸ್ತ ಯೇಸುವಿನ ಭೋದನೆಗಳು ಸಾರ್ವಕಾಲಿಕವಾಗಿದ್ದು, ಎಲ್ಲಾ ಕಾಲಘಟ್ಟಗಳಿಗೂ ಅನ್ವಯಿಸುವಂತಹ ಸತ್ಯ ಬೋದನೆಗಳನ್ನು ಅನುಸರಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಹುಜುಗೂರು ಗ್ರಾಮದಲ್ಲಿ ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟಿನಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಅವರು ಮಾತನಾಡಿದರು.
ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಶಾಂತಿ, ಐಕ್ಯತೆ, ನೆಲೆಸಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬ ಮುನುಷ್ಯನೂ ಕೂಡಾ ಯಾವುದೇ ಧರ್ಮದಲ್ಲಿದ್ದರೂ ಸಮಾಜದಲ್ಲಿನ ಬಡವರ್ಗದ ಜನತೆಯ ಹಿತವನ್ನು ಬಯಸಬೇಕು, ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕು, ದೀನರನ್ನು ಪ್ರೀತಿಸುವಂತಹ ಕೆಲಸ ಮಾಡಬೇಕು, ಎಲ್ಲಾ ವರ್ಗದ ಜನತೆಗೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಕಾಣುವಂತೆ ಪ್ರೋತ್ಸಾಹ ಮಾಡಿದಾಗ ಮಾತ್ರ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾರಾಜಣ್ಣ ಮಾತನಾಡಿ, ಯೇಸುಕ್ರಿಸ್ತನು ಮಾನವಕುಲಕ್ಕೆ ನೀಡಿದಂತಹ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಪಾಪರಹಿತವಾದ ಜೀವಿತವನ್ನು ಜೀವಿಸಿದಾಗ ಮಾನವನಿಗೆ ಮುಕ್ತಿದೊರೆಯುತ್ತದೆ ಈ ನಿಟ್ಟಿನಲ್ಲಿ ಒತ್ತಡದ ಜೀವನದ ನಡುವೆಯೂ ಇಂತಹ ಧಾರ್ಮಿಕವಾದ ಕಾರ್ಯಗಳಿಂದ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಟ್ರಸ್ಟಿನ ವತಿಯಿಂದ ಬಡವರಿಗೆ ಬಟ್ಟೆಗಳನ್ನು ದಾನಮಾಡಲಾಯಿತು.
ಬೆಂಗಳೂರು ಉತ್ತರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೂಡಿ ನಾಗರಾಜ್,
ಜಿಲ್ಲಾ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಹುಜುಗೂರು ಗ್ರಾಮದ ರಾಮಚಂದ್ರಪ್ಪ, ರಾಮಪ್ಪ, ಎಚ್.ಸಿ.ಸಿದ್ದಪ್ಪ, ಮುನಿರೆಡ್ಡಿ, ಸೋಮಶೇಖರ್, ಟ್ರಸ್ಟಿನ ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಖಜಾಂಚಿ ಶಾಮಣ್ಣ, ನಿರ್ದೇಶಕರಾದ ಗೋವಿಂದಪ್ಪ, ಹರೀಶ್, ಎಚ್.ಎನ್.ಮುನಿನಾರಾಯಣ, ಮುನೀಂದ್ರ, ಮುನಿಕೃಷ್ಣಪ್ಪ, ಮುನಿನಾರಾಯಣ, ಜಿ.ಎನ್.ಚೌಡಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಹುಜುಗೂರು ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ
ದಿನಚರಿಯಲ್ಲಿ ಸಾಮಾನ್ಯ ಜ್ಞಾನ
ಮನುಷ್ಯ ಬುದ್ಧಿಜೀವಿ ದಿನ ದಿನ ಹೊಸ ಹೊಸದನ್ನು ಕಲಿಯುತ್ತಾ ನೋಡುತ್ತಾ ಬದುಕುತ್ತಾನೆ. ಕಲಿಕೆ ಇಲ್ಲದಿದ್ದರೆ ಜೀವನ ನಿಂತನೀರಿನಂತೆ ಕೊಳೆಯುತ್ತದೆ. ಕೆಲವೊಮ್ಮೆ ನಮಗೆ ತೀರಾ ಸಣ್ಣ ಸಣ್ಣ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ. ಮನೆಯಲ್ಲಿ ಇರುವ ಗೃಹಿಣಿಯಿಂದ ಹಿಡಿದು ಹೊರಗೆ ಹೋಗಿ ದುಡಿಯುವ ಗಂಡಸಿನವರೆಗೆ ಯಾರೂ ಹೊರತಲ್ಲ.
ನಾನು ನಮ್ಮದೇ ಆದ ಗ್ಯಾಸ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲವದು. ಹೊಸದಾಗಿ ಪ್ರಾರಂಭವಾಗಿದ್ದ ಕಾರಣ ಯಾವುದೇ ಗ್ರಾಹಕರಿರಲಿಲ್ಲ. ಬೇರೆ ಊರಿನಲ್ಲಿ ಕನೆಕ್ಷನ್ ಹೊಂದಿದ ಗ್ರಾಹಕರನ್ನು ಅವರದೇ ಊರಿನಲ್ಲಿ ಪ್ರಾರಂಭವಾಗಿದ್ದ ನಮ್ಮ ಏಜನ್ಸಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗಿತ್ತು. ಹೀಗೆ ವರ್ಗಾವಣೆ ಮಾಡಿದಾಗ ಆ ಏಜನ್ಸಿಯವರು ಠೇವಣಿ ಹಣವನ್ನು ಚೆಕ್ ಮೂಲಕ ಅಥವಾ ಹಣದ ಮುಖಾಂತರ ವಾಪಾಸು ಕೊಡುತ್ತಾರೆ, ಆ ಹಣವನ್ನು ನಮ್ಮ ಏಜನ್ಸಿಗೆ ಕೊಟ್ಟು ಸಿಲಿಂಡರ್ ಪಡೆದು ಗ್ರಾಹಕರಾಗಬೇಕು.
ಇಂಥ ಒಂದು ಪ್ರಸಂಗದಲ್ಲಿ ಒಬ್ಬ ವ್ಯಕ್ತಿ ಆತ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದವರು, ಬಂದು ಒಂದು ಚೆಕ್ ಅನ್ನು ತೋರಿಸಿ “ಇದು ಚೆಕ್ ಇದನ್ನು ಏನು ಮಾಡಬೇಕು” ಎಂದು ಕೇಳಿದರು. ನಾನು ನನ್ನ ತಮ್ಮ ಇಬ್ಬರೂ ಮುಖ ಮುಖ ನೋಡಿಕೊಳ್ಳುವಂತಾಯಿತು. ಅಂದರೆ ಆ ಚೆಕ್ ಅನ್ನು ಬ್ಯಾಂಕ್ಗೆ ಕೊಟ್ಟು ದುಡ್ಡು ತಂದು ನಮಗೆ ಕೊಡಬೇಕು ಎನ್ನುವುದು ತಿಳಿಯದೇ ಹಾಗೆ ಕೇಳಿದರೋ ಅಥವಾ ಒಮ್ಮೆ ಕೇಳಿ ಮುಂದುವರೆಯೋಣ ಎಂದು ಭಾವಿಸಿದರೋ ನಮಗೆ ತಿಳಿಯದು. ಇದರಲ್ಲಿ ಇನ್ನೊಂದು ವಿಪರ್ಯಾಸದ ಸಂಗತಿಯೆಂದರೆ ಯಾವುದೇ ರಾಜಕೀಯ ವ್ಯಕ್ತಿಗೆ ಯಾವುದೇ ಪದವಿಯ ಅವಶ್ಯಕತೆ ಇಲ್ಲದೆ ಅಧಿಕಾರಕ್ಕೆ ಬರುವುದು ನಮ್ಮ ದೇಶದ ದುರಂತ.
ಅದೇ ರೀತಿಯಲ್ಲಿ ತೀರ ಹತ್ತಿರದ ನನ್ನ ಸಂಬಂಧಿಯೊಬ್ಬರು ದೂರವಾಣಿ (ಲ್ಯಾಂಡ್ ಲೈನ್) ಕರೆಯ ಬಗ್ಗೆಯೂ ಇದೇ ರೀತಿಯ ಅಜ್ಞಾನವನ್ನು ತೋರ್ಪಡಿಸಿದರು. ನಮಗೆ ಯಾರದ್ದಾದರೂ ದೂರವಾಣಿ ಕರೆ ಬಂದಾಗ (ಇನ್ ಕಮಿಂಗ್ ಕಾಲ್) ಆ ಕರೆ ಕಡಿದು ಹೋದರೆ, ಪುನ: ಕರೆ (ರೀ ಡಯಲ್) ಮಾಡಿದರೆ ಯಾರಿಂದ ಕರೆ ಬಂದಿತ್ತೋ ಅವರಿಗೆ ವಾಪಾಸು ಹೋಗುತ್ತದೆ ಎನ್ನುವುದು. ಆದರೆ ಆದು ಹಾಗೆ ಅಲ್ಲ, ಒಳಕರೆ (ಇನ್ ಕಮಿಂಗ್ ಕಾಲ್) ಬಂದಾಗ ನಾವು ಪುನ: ಕರೆ ಮಾಡಿದರೆ ಅದು ಒಳಕರೆ ಮಾಡಿದವರಿಗೆ ಹೋಗುವುದಿಲ್ಲ, ಬದಲಾಗಿ ನಾವು ಮೊದಲೆ ಯಾರಿಗೆ ಫೋನ್ ಮಾಡಿ ಮಾತನಾಡಿ ಇಟ್ಟಿರುತ್ತೆವೆಯೋ ಅವರಿಗೆ ಹೋಗುತ್ತದೆ.
ಹೀಗೆ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ, ತೀರಾ ದಿನಚರಿಗೆ ಬೇಕಾದ್ದನ್ನು ನಾವು ಕೇಳಿಯಾದರೂ ತಿಳಿದುಕೊಳ್ಳಬೇಕಾದ್ದು ಅತೀ ಅವಶ್ಯ. ಇಲ್ಲದಿದ್ದರೆ ಕೆಲವೊಮ್ಮೆ ಹಾಸ್ಯಕ್ಕೆ ಈಡಾಗುವ ಪರಿಸ್ಥಿತಿ ಒದಗಿಬರುತ್ತದೆ.
– ರಚನ
ನಾಟಕದ ತಯಾರಿ ಹಿಂದಿನ ಕಥೆ
ನಾಟಕವೊಂದು ಪ್ರದರ್ಶಿತವಾದಾಗ ಗ್ರಾಮಗಳಲ್ಲಿ ನೂರಾರು ಮಂದಿ ಸೇರುತ್ತಾರೆ. ಚಪ್ಪಾಳೆ, ಸಿಳ್ಳೆ ಹೊಡೆದು ನಟರನ್ನು ಪ್ರೋತ್ಸಾಹಿಸುತ್ತಾ ನಾಟಕವನ್ನು ಆಸ್ವಾದಿಸುತ್ತಾರೆ.
ಈ ರೀತಿಯ ನಾಟಕವನ್ನು ಪ್ರದರ್ಶಿಸುವುದರ ಹಿಂದೆ ಹಲವು ತಿಂಗಳುಗಳ ಪರಿಶ್ರಮವಿರುತ್ತದೆ. ಸಾಮಾನ್ಯವಾಗಿ ನಟರು ಸ್ಥಳೀಯರೇ ಆಗಿದ್ದು, ನಾಟಕವನ್ನು ಕಲಿಸುವ ಗುರುವನ್ನು ಹೊರಗಿನಿಂದ ಕರೆತಂದು ಅವರಿಂದ ಹಾವ ಭಾವ, ಅಭಿನಯ, ಸಂಗೀತ, ಸಂಭಾಷಣೆಯನ್ನು ಕಲಿಯುತ್ತಾರೆ.
ತಾಲ್ಲೂಕಿನ ಎಚ್.ಕ್ರಾಸ್ನಲ್ಲಿ ಸುತ್ತ ಮುತ್ತ ಗ್ರಾಮಗಳಲ್ಲಿ ವ್ಯವಸಾಯ, ರೇಷ್ಮೆ ಕಸುಬು, ಅಂಗಡಿ ಮುಂತಾದ ಕಸುಬುಗಳ ಹಿನ್ನೆಲೆಯಿರುವ ಸ್ನೇಹಿತರು ಒಂದೆಡೆ ಸೇರಿಕೊಂಡು ಪೌರಾಣಿಕ ನಾಟಕದ ತಯಾರಿ ನಡೆಸಿದ್ದಾರೆ. ಜೀವನ ನಿರ್ವಹಣೆಗೆ ಹಗಲಿನಲ್ಲಿ ದುಡಿದು ರಾತ್ರಿಯ ವೇಳೆಯಲ್ಲಿ ನಾಟಕಕ್ಕೆ ತಾಲೀಮು ನಡೆಸಿದ್ದಾರೆ.
‘ಹೊಸಕೋಟೆ ತಾಲ್ಲೂಕು ದೊಡ್ಡನೆಲ್ಲೂರಹಳ್ಳಿ ಮುತ್ತಪ್ಪನವರಿಂದ ಈ ನಾಟಕವನ್ನು ಕಲಿಯುತ್ತಿದ್ದೇವೆ. ನಮಗೆಲ್ಲಾ ಬೇರೆ ಬೇರೆ ಉದ್ಯೋಗಗಳಿದ್ದರೂ ರಂಗಭೂಮಿಯು ನಮ್ಮನ್ನು ಒಂದೆಡೆ ಸೇರಿಸಿದೆ. ನಾವೇನೂ ವೃತ್ತ ಕಲಾವಿದರಲ್ಲ. ಕಲಾಸಕ್ತಿಯಿಂದಾಗಿ ನಾವು ಗುರುವನ್ನು ಕರೆದುಕೊಂಡು ಬಂದು ಕಲಿಯುತ್ತಿದ್ದೇವೆ. ಸಾಕಷ್ಟು ಸಂಭಾಷಣೆ, ರಾಗ, ಹಾಡು, ಅಭಿನಯವನ್ನು ನೆನಪಲ್ಲಿಟ್ಟುಕೊಂಡು ಕೊಂಚವೂ ತಪ್ಪಿಲ್ಲದೆ ನಟಿಸಬೇಕಿರುವುದರಿಂದ ನಿದ್ರೆಕೆಟ್ಟು ಕಲಿಯುತ್ತಿದ್ದೇವೆ. ಈ ಪೌರಾಣಿಕ ನಾಟಕದ ತಯಾರಿಯಿಂದ ಪ್ರಾರಂಭವಾಗಿ ಪ್ರದರ್ಶನದವರೆಗೂ ಸುಮಾರು ಒಂದೂವರೆ ಲಕ್ಷ ರೂಗಳು ವೆಚ್ಚವಾಗಲಿದ್ದು ನಾವೇ ನಟರು ಭರಿಸುತ್ತೇವೆ. ಕಲೆಯ ಪೋಷಣೆಗಾಗಿ ವೆಚ್ಚ ಮಾಡುವ ಹಣ ಮತ್ತು ಪರಿಶ್ರಮ ನಮಗೆ ಸಿಗುವ ಮನಸ್ಸಂತೋಷದ ಮುಂದೆ ಹೆಚ್ಚಿನದ್ದಲ್ಲ’ ಎನ್ನುತ್ತಾರೆ ದುರ್ಯೋಧನ ಪಾತ್ರದಾರಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಯ್ಯಪ್ಪ.
ಕೊತ್ತನೂರು ಗ್ರಾಮದಲ್ಲಿ ಪ್ಲೇನ್ ಪ್ರೀನಿಯಾ ಹಕ್ಕಿ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಹೊರವಲಯದ ಜೋಳದ ತೋಟದಲ್ಲಿ ಕಂಡುಬಂದ ಪ್ಲೇನ್ ಪ್ರೀನಿಯಾ ಹಕ್ಕಿ.
http://en.wikipedia.org/wiki/Plain_prinia
ರಸ್ತೆ ಅಗಲೀಕರಣ ಹಾಗೂ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
ಚಿಂತಾಮಣಿ ಬಾಗೇಪಲ್ಲಿ ರಸ್ತೆ ಅಗಲೀಕರಣ ಹಾಗೂ ಗಂಗಾಪುರ, ಕಾಚಹಳ್ಳಿ, ರಾಚನಹಳ್ಳಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ತಾಲ್ಲೂಕಿನ ಗೋಣಿಮರದಹಳ್ಳಿ ಬಳಿ ಮಂಗಳವಾರ ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಸ್ಥಳೀಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ,‘ಬಂಗಾರಪೇಟೆ ಬಾಗೇಪಲ್ಲಿ ರಸ್ತೆ ಬಿ.ಬಿ ರಸ್ತೆಯೆಂದೇ ಖ್ಯಾತವಾಗಿದೆ. ಶಿಡ್ಲಘಟ್ಟ ತಾಲ್ಲೂಕು ಗಡಿಭಾಗದಿಂದ ಬಾಗೇಪಲ್ಲಿ ಗಡಿಭಾಗದವರೆಗಿನ ರಸ್ತೆ ಅಗಲೀಕರಣವಿಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸಿದ್ದು ನಾಗರೀಕರಿಗೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಇತ್ತೀಚೆಗೆ ಸರ್ಕಾರಿ ಬಸ್ಸು ಇರಗಪ್ಪನಹಳ್ಳಿ ಬಳಿ ಉರುಳಿದ್ದರಿಂದ ಸಾಕಷ್ಟು ಜನರಿಗೆ ತೊಂದರೆಯಾಗಿತ್ತು. ಈ ಭಾಗದಲ್ಲಿ ಹಲವಾರು ಬಾರಿ ಅವಘಡಗಳು ಸಂಭವಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗದಿರುವುದು ಖಂಡನೀಯ’ ಎಂದು ಹೇಳಿದರು.
ಪ್ರತಿಭಟನೆಯನ್ನು ನಾಲ್ಕು ಗಂಟೆಗಳ ಕಾಲ ನಡೆಸಿದ್ದರಿಂದಾಗಿ ಸಾರಿಗೆ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಲೋಕೇಶ್ ಭೇಟಿ ನೀಡಿ ಸಧ್ಯಕ್ಕೆ ಕೇತನಾಯಕನಹಳ್ಳಿಯಿಂದ ಗಂಜಿಗುಂಟೆವರೆಗೂ ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 15 ದಿನಗಳಲ್ಲಿ ಡಾಂಬರೀಕರಣ ಮಾಡಲಾಗುವುದು. ಇನ್ನು 70 ಕಿಮೀ ರಸ್ತೆ ಕಾಮಗಾರಿ ಸರ್ಕಾರದ ಮಟ್ಟದಲ್ಲಿ ಆಗುತ್ತಿದ್ದು ಸಮಸ್ಯೆ ಬಗೆಹರಿಸಲಾಗುವುದೆಂದು ತಿಳಿಸಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ಫೈಯಾಜುಲ್ಲಾ, ಪ್ರವೀಣ್, ಮುರಳಿ, ಮುನಿ, ಬಾಬು, ವೆಂಕಟರಮಣ, ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು
ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅನವಶ್ಯಕ ಭಯ, ಆತಂಕದ ಬಗ್ಗೆ ಚಿಂತಿಸದೆ ತಮ್ಮ ಶ್ರಮವನ್ನು ನಂಬಬೇಕು ಎಂದು ಪ್ರವಚನಕಾರ ಟಿ.ಎಲ್.ಆನಂದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪರೀಕ್ಷೆಯ ಪೂರ್ವಸಿದ್ದತೆ ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಏಕಾಗ್ರತೆ ಇಲ್ಲದ ಓದು ಜೀರ್ಣವಾಗದ ಆಹಾರದಂತೆ. ಏಕಾಗ್ರತೆಯಿಂದ ಓದುವ, ಓದು ಆನಂದವನ್ನು ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ. ವಿದ್ಯಾರ್ಥಿಗಳು ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಏಕಾಗ್ರತೆ ತಾನೇ ತಾನಾಗಿ ಬರುತ್ತದೆ. ಪರೀಕ್ಷಾ ತಯಾರಿ ವ್ಯವಸ್ಥಿತವಾಗಿದ್ದಾಗ ಯಾವುದೇ ಭಯ ಆತಂಕಗಳಿಗೆ ಆಸ್ಪದವಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ಪೋಷಕಪಾತ್ರವೂ ಮಹತ್ವದ್ದು. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಚೆನ್ನಾಗಿ ಶ್ರಮಪಟ್ಟು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಿಲ್ಲವೆನಿಸಿದರೆ, ಪ್ರಗತಿ ಸಾಧಿಸುತ್ತಿಲ್ಲವಾದರೆ, ನಿಮ್ಮ ಅಭ್ಯಾಸಕ್ರಮವನ್ನು ಬದಲಿಸಿ, ಆತ್ಮಾವಲೋಕನ ಮಾಡಿಕೊಳ್ಳುತ್ತಾ ಶಿಕ್ಷಕರ ಸಲಹೆ ಪಡೆಯಿರಿ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಟಿ.ಸಿದ್ದೇಶ್, ಶಾಲೆಯ ಶಿಕ್ಷಕರಾದ ಎಸ್.ಎ.ವಿಶ್ವನಾಥ್, ಎಸ್.ನಾಗೇಶ್, ಸಿ.ಕೆ.ಹರೀಶ್ ಬಾಬು, ಸಿ.ಅಮರನಾಥ್, ಎಸ್.ಶಿವಲೀಲಾ, ಭರಮಪ್ಪ ಹಿರೇಕೆರೂರ್ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಹೀಗಿರಲಿ ನಿಮ್ಮ ದಿನಚರಿ
1. ಪ್ರತಿದಿನ ಆರು ಘಂಟೆಗೆ ಏಳುವ ಅಭ್ಯಾಸ ಒಳ್ಳೆಯದು. ಬೆಳಗಿನ ಪ್ರಶಾಂತ ವಾತಾವರಣ ಓದಲಿಕ್ಕೆ, ಅಭ್ಯಾಸಕ್ಕೆ ಒಳ್ಳೆಯದು. ವಾತಾವರಣದಲ್ಲಿನ ಓಜೋನ್ ಅಂಶವು ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
2. ಇಷ್ಟ ದೇವರನ್ನೂ, ತಾಯಿತಂದೆಯರನ್ನೂ, ಗುರುಹಿರಿಯರನ್ನೂ ನೆನೆದು ದಿನದ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಬೆಳಿಗ್ಗೆ ಎದ್ದ ಕೂಡಲೇ ಮಲ-ಮೂತ್ರ ವಿಸರ್ಜನೆ ಮಾಡುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
3. ಅನಂತರ ಹಲ್ಲು ಉಜ್ಜುವುದು ಮುಖ್ಯ ಕ್ರಮ ಮೆತ್ತಗಿರುವ ಬ್ರಷ್ನಿಂದ, ಬೇವಿನ ಕಡ್ಡಿ ಅಥವಾ ಹೊಂಗೆ ಕಡ್ಡಿಯಿಂದ ಒಸಡಿಗೆ ಪೆಟ್ಟಾಗದಂತೆ ಮೇಲ್ಭಾಗ-ಕೆಳಭಾಗಗಳಲ್ಲಿ ಸರಿಯಾಗಿ ಉಜ್ಜಬೇಕು. ಒಸಡುಗಳನ್ನು ಕೈ ಬೆರಳುಗಳಿಂದ ಉಜ್ಜುವುದು ಉತ್ತಮ. ನಾಲಿಗೆಯನ್ನು ಇದೇ ರೀತಿಯಲ್ಲಿ ಸ್ವಚ್ಛಮಾಡಿಕೊಲ್ಲುವುದು ಸರಿಯಾದ ಕ್ರಮ.
4. ಶುದ್ಧವಾದ ನೀರಿನಿಂದ ಸುಮಾರು ಎರಡು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು.
5. ಪ್ರತಿ ಬಾರಿ ಆಹಾರವನ್ನು ಸೇವಿಸಿದ ನಂತರ ಹಲ್ಲುಗಳನ್ನು ನಾಲಿಗೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
6. ಪ್ರತಿದಿನ ಎರಡೆರಡು ಹನಿ ಎಳ್ಳೆಣ್ಣೆ / ಕೊಬ್ಬರಿ ಎಣ್ಣೆಯನ್ನು ಹದವಾಗಿ ಬಿಸಿಮಾಡಿ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು. ಇದರಿಂದ ನೆಗಡಿ, ಕೆಮ್ಮು ಮುಂತಾದ ತೊಂದರೆಗಳು ನಮ್ಮನ್ನು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
7. ವಾರಕ್ಕೆರಡು ಬಾರಿ ಶರೀರಕ್ಕೆ ಎಳ್ಳೆಣ್ಣೆಯನ್ನು ನೀವಿಕೊಳ್ಳಬೇಕು. ಕೈಕಾಲುಗಳಿಗೆ ಮೇಲ್ಭಾಗದಿಂದ ಕೆಳಭಾಗದವರೆಗೆ ನೀವಬೇಕು. ಎದೆ, ಹೊಟ್ಟೆಯ ಭಾಗಕ್ಕೆ ವೃತ್ತಾಕಾರವಾಗಿ ಎಣ್ಣೆಯನ್ನು ನೀವಬೇಕು. ತಲೆ ಹಾಗೂ ಮುಖಭಾಗಗಳಿಗೂ ವೃತ್ತಾಕಾರವಾಗಿ ನೀವಬೇಕು.
8. ಸ್ನಾನಕ್ಕೆ ಉಗುರುಬೆಚ್ಚಗಿನ ನೀರನ್ನು ಬಳಸುವುದು, ಹಾಗೂ ಸ್ನಾನದ ನಂತರ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.
9. ಅರ್ಧಲೋಟ ಬೆಚ್ಚಗಿರುವ ನೀರನ್ನು ಪ್ರತಿದಿನ ಪ್ರಾತ:ಕಾಲ ಸೇವಿಸುವುದು ಒಳ್ಳೆಯದು.
10. ಸ್ನಾನದ ನಂತರ ನಮ್ಮ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು. ಶ್ಲೋಕ, ಸ್ತೋತ್ರಗಳನ್ನು ಹೇಳಿಕೊಳ್ಳಬೇಕು.
11. ಸ್ನಾನಕ್ಕೆ ಸೋಪುಗಳನ್ನು ಬಳಸುವ ಬದಲು ಸ್ನಾನಚೂರ್ಣಗಳನ್ನು ಬಳಸಬಹುದು. ಕಡಲೆಹಿಟ್ಟು, ಅರಿಶಿನ, ತುಳಸಿ ಎಲೆಯ ಪುಡಿ, ಬೇವಿನ ಎಲೆಯ ಪುಡಿ – ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿಕೊಂಡು, ಪರಿಮಳಕ್ಕೆ ಗಂಧದ ಪುಡಿ ಹಾಗೂ ಕರ್ಪೂರವನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಈ ಪುಡಿಯನ್ನು ಸ್ನಾನಕ್ಕೆ ಬಳಸಬೇಕು. ಇದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಚರ್ಮವು ಸುಸ್ಥಿತಿಯಲ್ಲಿ ಇರುತ್ತದೆ.
12. ಶುದ್ಧವಾದ-ಶುಭ್ರವಾದ ಬಟ್ಟೆಯನ್ನು ಧರಿಸಬೇಕು, ಹತ್ತಿಯ ಬಟ್ಟೆ ಧರಿಸುವುದು ಒಳ್ಳೆಯದು. ಒಳ ಉಡುಪುಗಳು ಮಾತ್ರ ಹತ್ತಿಯದೇ ಆಗಿರಬೇಕು.
13. ಶುದ್ಧವಾದ ಗಾಳಿ, ಸರಿಯಾದ ಬೆಳಕು ಇರುವ ಜಾಗದಲ್ಲಿ ಓದುವುದು – ಬರೆಯುವುದು ಒಳ್ಳೆಯದು.
14. ನಮ್ಮ ಶರೀರವು ಗಡಿಯಾರದಂತೆಯೇ ಕೆಲಸ ಮಾಡುತ್ತದೆ ಅದನ್ನು ನಾವು “ಜೈವಿಕ ಗಡಿಯಾರ” ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ದಿನದ ಎಲ್ಲ ಚಟುವಟಕೆಗಳೂ ಸಮಯಕ್ಕೆ ಸರಿಯಾಗಿ ನಡೆಯಬೇಕು.
15. ವಾರಕ್ಕೊಮ್ಮೆ ಕೈ ಬೆರಳು-ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು. ಕಿವಿ-ಮೂಗುಗಳನ್ನೂ ಆಗಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು.
16. ಪ್ರತಿದಿನ ತಲೆಗೆ ಕೊಬ್ಬರಿ ಇಣ್ಣೆಯನ್ನು ಹಚ್ಚಿಕೊಳ್ಳಬೇಕು. ಅಕಸ್ಮಾತ್ ಸಾಧ್ಯವಾಗದಿದ್ದಲ್ಲಿ ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
17. ದಿನಕ್ಕೆ ಐದಾರು ಬಾರಿ ತಣ್ಣೀರಿನಿಂದ ಮುಖ ಹಾಗೂ ಕಣ್ಣುಗಳನ್ನು ತೊಳೆದುಕೊಳ್ಳಬೇಕು.
18. ದಿನಕ್ಕೆರಡು ಬಾರಿ ಕೂದಲನ್ನು ಸರಿಯಾಗಿ ಬಾಚಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ಸರಿಯಾದ ಬಟ್ಟೆಯನ್ನು ಧರಿಸಿಕೊಂಡು ಕೂದಲನ್ನು ಬಾಚಿಕೊಂಡು ಹೋಗಬೇಕು.
ಡಾ. ಶ್ರೀವತ್ಸ
ವೃತ್ತಿ ನಿಷ್ಟೆ, ನಿಷ್ಕಳಂಕ ಸೇವೆಯಿಂದ ಯಶಸ್ಸು ಸಾಧ್ಯ
ಯಾವೊಬ್ಬ ನೌಕರನೂ ತನ್ನ ವೃತ್ತಿಯಲ್ಲಿ ವೃತ್ತಿ ನಿಷ್ಠೆ, ಪಾರದರ್ಶಕತೆ ಮತ್ತು ದಕ್ಷತೆಯಂತಹ ಗುಣಗಳನ್ನು ಪರಿಪಾಲಿಸಿದಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಜೆ.ವಿ.ಶಿವನಂಜಪ್ಪ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸಿಆರ್ಸಿ ಕೇಂದ್ರದಲ್ಲಿ ಈಚೆಗೆ ಶಿಕ್ಷಕವೃಂದವು ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಸಮಯಪಾಲನೆ, ಅತ್ಯುತ್ತಮ ಮಟ್ಟದ ನಾಯಕತ್ವ ತರಬೇತಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಹತ್ತು-ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ ಹೆಮ್ಮೆಯಿದೆ ಎಂದು ತಿಳಿಸಿದರು.
ನಿವೃತ್ತಮುಖ್ಯ ಶಿಕ್ಷಕ ನಂದೀಶ್ ಮಾತನಾಡಿ, ಎಲ್ಲೆಡೆ ತುಂಬಿ-ತುಳುಕುತ್ತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಯುವಪೀಳಿಗೆಯು ಎಚ್ಚೆತ್ತುಕೊಳ್ಳಬೇಕು. ಸಮಾಜಕ್ಕೆ ಹತ್ತು-ಹಲವು ರೀತಿ ಸೇವೆಗಳನ್ನು ಮಾಡುವ, ಆತ್ಮಸ್ಥೈರ್ಯದ ಜೊತೆಗೆ ಸಾಧಿಸುವ ಛಲವನ್ನು ಮಕ್ಕಳಲ್ಲಿ ತುಂಬುವ ಕಾರ್ಯವಾಗಬೇಕಿದೆ ಎಂದರು.
ಮುಖ್ಯಶಿಕ್ಷಕ ಮುನಿಬಸವಯ್ಯ, ಶಿಕ್ಷಕರಾದ ವಿಜಯಕುಮಾರ್, ಸಿ.ಆರ್.ಪಿ ಸುಂದರಾಚಾರಿ, ಎಚ್.ಎಸ್.ರುದ್ರೇಶಮೂರ್ತಿ, ವಿ.ಎನ್.ಗೋಪಾಲಕೃಷ್ಣಯ್ಯ, ನೇತ್ರಾವತಿ, ಶಕುಂತಲಮ್ಮ, ಗೀತಾ, ಚಂದ್ರಶೇಖರ್, ಜೆ.ಬಿ.ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
SSLC ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಅಭಿನಂದನಾ ಫಲಕ
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 2014 ರ ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದುಅತ್ಯುತ್ತಮವಾಗಿ ಸಾಧನೆ ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಅಭಿನಂದನಾ ಫಲಕವನ್ನು ನೀಡಲಾಗಿದೆ.
ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ರಾಘವೇಂದ್ರ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ
ಶಿಡ್ಲಘಟ್ಟ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ರಾಘವೇಂದ್ರ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುವ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯ ಸೃಜನಾತ್ಮಕ ಕಲಾ ವಿಭಾಗದಲ್ಲಿ (ಕ್ಲೇ ಮಾಡೆಲಿಂಗ್, ಕರಕುಶಲ ಕಲೆ ಹಾಗೂ ಚಿತ್ರಕಲೆ) ವಿಜೇತರಾಗಿ ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಸಾಮಾನ್ಯ ಸದಸ್ಯರ ಸಮಿತಿ ರಚನೆ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಸಾಮಾನ್ಯ ಸದಸ್ಯರ ಸಮಿತಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಂ.ರಾಜಣ್ಣ, ಕಾರ್ಯದರ್ಶಿಯಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್ಕುಮಾರ್, ತಹಶಿಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಒಬ್ಬ ಮಹಿಳೆಯನ್ನು ಒಳಗೊಂಡ ಚುನಾಯಿತಿ ಜನಪ್ರತಿನಿಧಿಗಳನ್ನು ಒಳಗೊಂಡ ಸದಸ್ಯರ ಸಮಿತಿಯನ್ನು ರಚಿಸಿ ಅನುಮೋದನೆ ನೀಡಲಾಯಿತು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಿತಿ ರಚನೆಯ ಉದ್ದೇಶ ತಾಲ್ಲೂಕಿನಾದ್ಯಂತ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಸಿಗಬೇಕು. ಆಸ್ಪತ್ರೆಯಲ್ಲಿನ ಕೊರತೆಗಳನ್ನು ನೀಗಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿಗಳು ನಡೆಯಲಿವೆ. ಔಷಧಿಗಳ ಕೊರತೆಯನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್ಕುಮಾರ್, ಪ್ರಥಮ ಸಭೆಯಲ್ಲಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಔಷಧಿಗಳ ಖರೀದಿಗೆ ನೇರವಾಗಿ 56 ಸಾವಿರ ರೂಗಳನ್ನು ಆಡಳಿತಾಧಿಕಾರಿಗಳು ಉಪಯೋಗಿಸಬಹುದು. ಹೆಚ್ಚಿನ ಮೊತ್ತಕ್ಕೆ ಸಮಿತಿಯ ಅನುಮೋದನೆ ಪಡೆಯಬೇಕು ಎಂದು ತೀರ್ಮಾನಿಸಲಾಗಿದೆ. ಆಸ್ಪತ್ರೆಯಲ್ಲಿ ಸಮಸ್ಯೆಗಳಾದ ನೀರು, ವಿದ್ಯುತ್, ಸಲಕರಣೆಗಳ ಕೊರತೆಯನ್ನು ಅತಿಶೀಘ್ರವಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಜಬೀವುಲ್ಲಾ, ಟಿ.ಬಾಬು, ಸುಬ್ರಮಣಿ, ಅಫ್ಸರ್ಪಾಷ, ಶ್ರೀನಿವಾಸ್, ಸುನಂದಮ್ಮ, ನವೀನ್ಕುಮಾರ್, ಕಿರಣ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವ ಅಂಗವಿಕರ ದಿನಾಚರಣೆ ಕಾರ್ಯಕ್ರಮ
ಅಂಗವಿಕಲರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಧೃಡರಾಗಲು ಸಹಕರಿಸಬೇಕು. ಅವರು ಸ್ವಾವಲಂಬಿಗಳಾದಾಗ ಕುಟುಂಬಕ್ಕೆ ಹೊರೆಯಾಗುವುದಿಲ್ಲ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ತಾಲ್ಲೂಕು ಆಡಳಿತ ಸಹಯೋಗದಲ್ಲಿ ನಡೆದ ‘ವಿಶ್ವ ಅಂಗವಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮೊದಲ ಆದ್ಯತೆ ನೀಡಿ ತ್ವರಿತವಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸಮಾಜದಲ್ಲಿ ಅಂಗವಿಕಲರನ್ನು ತಾತ್ಸಾರ ಮನೋಭಾವದಿಂದ ನೋಡದೆ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹಿಸಿ ಸ್ವಾವಲಂಬಿಗಳಾಗಲು ಸಹಾಯ ಮಾಡಬೇಕು. ತಾಲ್ಲೂಕಿನಲ್ಲಿ 15,193 ಅಂಗವಿಕಲರು ಪಿಂಚಣಿ ಪಡೆಯುತ್ತಿದ್ದರೆ. ಅಂಗವಿಕಲರಿಗೆ ಪೆಟ್ರೋಲ್ ಚಾಲಿತ ವಾಹನಗಳನ್ನು ಶಾಸಕರ ಅನುದಾನದಲ್ಲಿ ನೀಡಲು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯವರು ಪಟ್ಟಿ ಸಿದ್ಧಪಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ ಅವರಿಗೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯವರು ತಾಲ್ಲೂಕಿನಲ್ಲಿ ನಿವೇಶನವನ್ನು ಒದಗಿಸಿ ಭವನವನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಅಂಗವಿಕಲತೆ ಯಾವುದೇ ಶಾಪವಲ್ಲ. ದೈಹಿಕ ನ್ಯೂನತೆಯಷ್ಟೆ. ತಾವು ಅಸಹಾಯಕರು ಎಂದು ಭಾವಿಸದೆ ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಅನುದಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಕೋಚಿಮುಲ್ ನಿರ್ದೇಶಕ ಮುನಿಯಪ್ಪ ತಮ್ಮ ಅನುದಾನದಲ್ಲಿ 50 ಸಾವಿರ ರೂಗಳನ್ನು ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ನೀಡುವುದಾಗಿ ಘೋಷಿಸಿದರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗವಿಕಲರ ಮೆರವಣಿಗೆಯನ್ನು ಆಯೋಜಿಸಿದ್ದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎನ್.ಎಂ.ಶಾಂತರಸ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ರೈತ ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಮಂಜುನಾಥ್, ಮುನಿರಾಜು, ಚಲಪತಿ, ನಟೇಶ್, ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ವಿನೋದಮ್ಮ, ಉಪಾಧ್ಯಕ್ಷ ಮಾರಪ್ಪ, ಲಕ್ಷ್ಮಿನಾರಾಯಣ, ಸಂತೋಷ್, ರಾಮಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಕ್ಕಳ ಅಶಿಸ್ತು-ತಾಯಂದಿರ ಗೋಳು
“ನನ್ನ ಮಗ ಪುಸ್ತಕ, ಅವನ ಆಟದ ಸಾಮಾನುಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಕುತ್ತಾನೆ: ನನ್ನ ಮಗಳು ಅವಳ ಡ್ರೆಸ್ ಮತ್ತಿತರ ವಸ್ತುಗಳನ್ನು ಸರಿಯಾಗಿ ಇಟ್ಕೊಳ್ಳಲ್ಲ: ಬೆಳೆದ ಮಕ್ಕಳೂ ಕೂಡ ಕಾಫಿ ಕುಡಿದ ಲೋಟವನ್ನೂ ತೊಳೆಸಲ್ಲ, ಚಿಕ್ಕ ಪುಟ್ಟ ಮನೆಕೆಲಸ ಕೂಡ ಮಾಡಲ್ಲ” ಈ ರೀತಿಯ ಗೋಳನ್ನು ಸಾಕಷ್ಟು ಮಂದಿ ತಾಯಂದಿರು ತೋಡಿಕೊಳ್ಳುತ್ತಾರೆ.
ಮಕ್ಕಳಿಗೆ ಮತ್ತೆ ಮತ್ತೆ ತಿಳಿಸಿ ಹೇಳಿ, ಸಮಾಧಾನದಿಂದ ನಿಧಾನವಾಗಿ ಶಿಸ್ತನ್ನು ಕಲಿಸಿ ಅಂತ ತಜ್ಞರು ಸಲಹೆ ಕೊಡುತ್ತಾರೆ. ಪದೇ ಪದೇ ಹೇಳಿದರೆ ಮಕ್ಕಳು ಕಡೆಗಣಿಸುತ್ತಾರೆ. ಅಥವಾ ಸ್ವಲ್ಪ ದೊಡ್ಡ ಮಕ್ಕಳಾದರೆ, “ಅಮ್ಮಾ, ದಿನಾ ನಿಂದು ಇದೇ ಗೋಳು. ನನ್ನ ಕೈಲಿ ಮಾಡಕ್ಕಾಗಲ್ಲ. ನಾನು ಇರೋದು ಹೀಗೇನೇ ನೀನು ಏನು ಬೇಕಾದ್ರೂ ಮಾಡ್ಕೋ” ಅಂತ ಪ್ರತಿಭಟಿಸುತ್ತಾರೆ. ಇತರ ನಾನಾ ತರದ ಒತ್ತಡದಲ್ಲಿರುವ ತಾಯಂದಿರೂ ಮಕ್ಕಳಿಗೆ ದಬಾಯಿಸತೊಡಗುತ್ತಾರೆ. ಒಟ್ಟಾರೆ ಮನೆ ರಣರಂಗ. ಆದರೂ ಪರಿಣಾಮ ಮಾತ್ರ ಶೂನ್ಯ, ಮರುದಿನ ತಾಯಿ ಮಕ್ಕಳು ಇಬ್ಬರದ್ದೂ ಮತ್ತೆ ಅದೇ ಹಾಡು.
ಹಾಗಿದ್ದರೆ ಹೇಗೆ ಈಗ ಚಕ್ರವ್ಯೂಹವನ್ನು ಛೇಧಿಸುವುದು? ಇದಕ್ಕೆಲ್ಲಾ ಒಂದು ಖಾಯಮ್ಮಾದ ಪರಿಹಾರವಿಲ್ಲವೇ?
ನೀವು ಸ್ವಲ್ಪ ತಾಳ್ಮೆ ಇಟ್ಕೊಂಡು, ವ್ಯವಸ್ಥಿತವಾಗಿ ಕೆಲಸ ಮಾಡುವುದು ಸಾಧ್ಯವಾಗುವುದಾದರೆ, ಹೀಗೆ ಮಾಡಬಹುದು;
• ಎಲ್ಲಾ ಶಿಸ್ತನ್ನು ಒಮ್ಮೆಲೆ ಕಲಿಸುವ ಪ್ರಯತ್ನ ಮಾಡಬೇಡಿ. ಮಕ್ಕಳು ಹೇಳಿದ ಕೆಲಸವನ್ನು ತಕ್ಷಣ ಮಾಡದಿದ್ದರೆ, ಪೋಲಿಸರ ಶಿಸ್ತನ್ನು ಹೇರಬೇಡಿ. ಹಾಗೆ ಮಾಡಿದರೆ ಚಿಕ್ಕ ಮಕ್ಕಳು ಹೆದರಿಕೆಯಿಂದ ತಕ್ಷಣ ನೀವು ಹೇಳಿದ್ದನ್ನು ಮಾಡಿದರೂ, ಪ್ರತೀ ಬಾರಿಯೂ ಕೂಗಾಡಿಯೇ ಕೆಲಸ ಮಾಡಿಸಬೇಕಾಗುತ್ತದೆ ಮತ್ತು ಅವರು ನಿಮ್ಮ ಕಣ್ಣಳತೆಯಿಂದ ದೂರ ಹೋದೊಡನೆ ಸ್ವೇಚ್ಛಾಚಾರಿಗಳಾಗಬಹುದು. ಬೆಳೆದ ಮಕ್ಕಳಾದರೆ ನಮಗಿಂತ ದೊಡ್ಡ ಧ್ವನಿಯಲ್ಲಿ ಅವರೂ ಕೂಗಾಡಿ ಮನೆ ಯುದ್ಧಭೂಮಿಯಾಗುತ್ತದೆ.
• ಶಿಸ್ತನ್ನು ಮೊದಲು ನೀವು ಪಾಲಿಸಿ. ತಾಯಿ ಕೆಲಸ ಹೇಳಿದಾಗ, ತಂದೆ “ಹೋಗ್ಲಿ ಬಿಡೆ ಪಾಪ, ಮಗು ಆಡಿಕೊಳ್ಳಲಿ” ಅಂತ ಸಹಾನುಭೂತಿ ತೋರಿಸುವುದಾಗಲಿ, ಅಥವಾ ತಂದೆ ಮಗುವನ್ನು ಸಹಾಯಕ್ಕೆ ಕರೆದಾಗ ಅಮ್ಮ, “ಅವನ್ನ್ಯಾಕ್ರೀ ಕರೀತೀರಾ, ನಿಮ್ಮ ಕೆಲಸ ನೀವು ನೆಟ್ಟಗೆ ಮಾಡ್ಕೊಳ್ಳೋದು ಕಲೀರಿ” ಅಂತ ಹಂಗಿಸುವುದಾಗಲೀ, ಮಾಡಬೇಡಿ. ಮಕ್ಕಳು ಪೋಷಕರ ಭಿನ್ನಾಭಿಪ್ರಾಯಗಳ ಭರಪೂರ ಉಪಯೋಗವನ್ನು ಪಡೆಯುತ್ತವೆ. ಇಬ್ಬರೂ ಒಂದು ಒಪ್ಪಂದಕ್ಕೆ ಬಂದು ಮಕ್ಕಳೊಡನೆ ಮಾತನಾಡಿ.
• ಮಕ್ಕಳ ಮನಸ್ಸು ಪ್ರಫುಲ್ಲವಾಗಿರುವಾಗ ಶಿಸ್ತಿನ ಪಾಠಗಳನ್ನು ಹೇಳಿಕೊಡಿ. ಅವರ ಜೊತೆ ಸ್ವಲ್ಪ ಹೊತ್ತು ಆಟವಾಡಿದ ನಂತರ ಅಥವಾ ಮನೆಯವರೆಲ್ಲ ಕುಳಿತು ಖುಷಿಯಾಗಿ ಊಟಮಾಡುವಾಗ ನಿಮ್ಮ ಅಗತ್ಯಗಳ ಬಗೆಗೆ ತಿಳಿಸಿ.
• “ನೀನು ಹೀಗೆ ಮಾಡಬೇಕು; ಹೀಗೆ ಮಾಡದಿದ್ದರೆ ನಿನಗೇ ತೊಂದರೆ; ಶಿಸ್ತನ್ನು ಕಲಿಯದಿದ್ದರೆ ಮುಂದೆ ಹಾಳಾಗುತ್ತೀಯಾ” ಎನ್ನುವ ರೀತಿಯ ಪೋಲೀಸ್ ಭಾಷೆ ಬಳಸಬೇಡಿ. “ನೋಡು ಮರೀ, ನೀನು ನಿನ್ನ ಸಾಮಾನುಗಳನ್ನು ಸರಿಯಾಗಿಟ್ಟುಕೊಂಡರೆ ನನಗೆ ಮನೆಕೆಲಸದಲ್ಲಿ ಬಹಳ ಸಹಾಯ ಆಗುತ್ತೆ. ಆಗ ನಾನು ನಿನ್ನ ಜೊತೆ ಆಟ ಆಡಬಹುದು ಅಥವಾ ನಿನಗೆ ಹೊಸ ತಿಂಡಿ ಮಾಡಬಹುದು” ಎಂದು ನಿರ್ಮಲ ಪ್ರೀತಿಯಿಂದ ಮಾತನಾಡಿ. ಮಕ್ಕಳು ಮಾಡುವ ಕೆಲಸ ನಮಗಾಗುವ ದೊಡ್ಡ ಸಹಾಯ ಎಂದು ತಿಳಿಸಿ.
• ಇದು ಪೂಸಿಹೊಡೆಯುವ ಕೆಲಸ, ನಮಗಾಗಲ್ಲ, ಎಂದುಕೊಳ್ಳಬೇಡಿ. ಇದು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದುಕೊಳ್ಳಿ. ಒಮ್ಮೆ ಮಕ್ಕಳಿಗೆ ತಮ್ಮ ಜವಾಬ್ದಾರಿಗಳ ಅರಿವು ಮೂಡಿ, ಶಿಸ್ತಿನ ಅಭ್ಯಾಸವಾಯಿತೆಂದರೆ ಅದು ಅವರ ಸ್ವಭಾವವಾಗಿಬಿಡುತ್ತದೆ.
• “ನೀನು ಇದು ಮಾಡದಿರುವುದಕ್ಕೆ ನಾನು ಅದು ಮಾಡಲ್ಲ” ಎನ್ನುವ ರೀತಿಯ ವ್ಯಾಪಾರದ ಮಟ್ಟದಲ್ಲಿ ಮಾತನಾಡಿ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ.
• ಮಿಲಿಟರಿ ರೀತಿ ಎಲ್ಲಾ ಕೆಲಸಕ್ಕೂ ನೀತಿ ನಿಯಮಗಳನ್ನು ಮಾಡಿದರೆ ನಿಮ್ಮ ಸೋಲು ಖಂಡಿತ. ಅಲ್ಲದೆ ಎಲ್ಲಾ ವಿಚಾರಕ್ಕೂ ಕಿರಿಕಿರಿ ಮಾಡುವವರು ಎಂಬ ಕೆಟ್ಟ ಹೆಸರೂ ಮುಫತ್ತಾಗಿ ಸಿಗುತ್ತದೆ.
• ಎಲ್ಲಾ ಕೆಲಸಕ್ಕೂ ಅದರದೇ ಆದ ಶಿಸ್ತಿನ ಅಗತ್ಯವಿರುತ್ತದೆ. ಉದಾಹರಣೆಗೆ ಮಕ್ಕಳು ಕಾಯಿಲೆ ಬೀಳಬಾರದೆನ್ನುವುದಕ್ಕಾಗಿ ಶುಚಿಯಾಗಿರುವುದನ್ನು ಕಲಿಸಬೇಕಾಗುತ್ತದೆ. ಹಾಗಂತ ಅವರು ಆಟವಾಡುವಾಗ ಅಥವಾ ಹೊರಗಡೆ ಹೋದಾಗ ಬಟ್ಟೆ, ಮೈಕೈಗಳನ್ನು ಹೊಲಸೇ ಮಾಡಿಕೊಳ್ಳಬಾರದೆಂದು ನಿಯಮ ಮಾಡಿದರೆ ಅವರ ಸಹಜ ತುಂಟಾಟಗಳಿಗೇ ಕಟ್ಟುಹಾಕಿದಂತಾಗುತ್ತದೆ. ಅಥವಾ ಮನೆಗೆ ಬಂದ ಮರುಕ್ಷಣದಲ್ಲೇ ಕೈಕಾಲು ತೊಳೆಯಲೇಬೇಕು ಎನ್ನುವ ನಿಯಮ ಮಾಡಿದರೆ ನಿಮಗೆ ನಿರಾಸೆ ಕಾದಿರುತ್ತದೆ.
ನೆನಪಿಡಿ, ಶಿಸ್ತಿಗಾಗಿ ಶಿಸ್ತಲ್ಲ, ಜೀವನಕ್ಕಾಗಿ ಶಿಸ್ತು. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಸಹಜ ತುಂಟಾಟಗಳನ್ನು ನಿಲ್ಲಿಸಿ ಅವರ ಬಾಲ್ಯವನ್ನೇ ಕಸಿದುಕೊಳ್ಳಬೇಡಿ.
ವಸಂತ್ ನಡಹಳ್ಳಿ
ಮತ್ತೆ ಆಗಸಕ್ಕೇರಿದ ಡಿಸ್ಕವರಿ
ತನ್ನ ೨೮ನೆಯ ಅಂತರಿಕ್ಷಯಾನದಲ್ಲಿ ದುರಂತಕ್ಕೀಡಾದ ಕೊಲಂಬಿಯಾ ಅಂತರಿಕ್ಷ ನೌಕೆಯ ಘಟನೆ ನಡೆದು ಮೂರು ವರ್ಷಗಳು ಕಳೆದಿವೆ. ಅದಕ್ಕಿಂತ ಮೊದಲು ಏಳು ಮಂದಿ ಗಗನಯಾತ್ರಿಗಳನ್ನೊಳಗೊಂಡ ಚಾಲೆಂಜರ್ ನೌಕೆ ೧೯೮೬ರಲ್ಲಿ ಉರಿದು ಭಸ್ಮವಾಗಿತ್ತು. ಭಾರತದ ಕಲ್ಪನಾ ಚಾವ್ಲಾ ಸೇರಿದಂತೆ ಒಟ್ಟೂ ಏಳು ಗಗನಯಾತ್ರಿಗಳನ್ನು ಹೊತ್ತ ಕೊಲಂಬಿಯಾ ೧೬ ದಿನಗಳ ಯಾತ್ರೆಯನ್ನು ಮುಗಿಸಿ ಮರಳಿ ಭೂಮಿಗೆ ಮರಳುತ್ತಿತ್ತು. ಭೂಮಿಯ ಮೇಲೆ ಸುಮಾರು ೨೦೮ ಅಡಿ ಎತ್ತರದಲ್ಲಿರುವಾಗ ಹಾಗೂ ಕೆನಡಿ ಅಂತರಿಕ್ಷ ಕೇಂದ್ರದ ನಿಗದಿತ ಸ್ಥಳ ಸೇರಲು ಬರೀ ೧೬ ನಿಮಿಷಗಳು ಉಳಿದಿರುವಾಗ, ಘಂಟೆಗೆ ೧೨,೫೦೦ ಮೈಲುಗಳ ವೇಗದಲ್ಲಿ ಧರೆಗಿಳಿಯುತ್ತಿದ್ದ ಕೊಲಂಬಿಯಾದಿಂದ ಬರುತ್ತಿದ್ದ ಸಂದೇಶಗಳು ಥಟ್ಟನೆ ನಿಂತವು. ಟಿವಿ ಪರದೆಯ ಮೇಲೆ ನೋಡುತ್ತಿದ್ದ ತಂತ್ರಜ್ಞರಿಗೆ ಕಂಡಿದ್ದು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ನೌಕೆಯ ಒಂದು ಭಾಗದಿಂದ ಮೇಲೆದ್ದ ಹೊಗೆ ಹಾಗೂ ಸೀಳು ಸೀಳಾಗುತ್ತ ಅಂತರಿಕ್ಷದಲ್ಲಿ ಹಾರಾಡಿದ ನೌಕೆಯ ಚೂರುಗಳು. ಏಳೂ ಮಂದಿ ಯಾತ್ರಿಗಳು ಕ್ಷಣಮಾತ್ರದಲ್ಲಿ ಅನಂತ ಆಗಸದಲ್ಲಿ ಲೀನವಾಗಿದ್ದರು. ನೌಕೆಯ ಅಂಗಾಂಗ ಅವಶೇಷಗಳು ಅಮೆರಿಕದ ಟೆಕ್ಸಾಸ್ ನಗರದಲ್ಲಿ ಹಲವೆಡೆ ಬಿದ್ದವು. ಇಡೀ ವಿಶ್ವವೇ ಈ ಅವಘಡಕ್ಕೆ ಕಣ್ಣೀರಿಟ್ಟಿತು. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ’ನಾಸಾ’ದ ಇತಿಹಾಸಕ್ಕೆ ಇದೂ ಒಂದು ಕಪ್ಪು ಕಲೆಯಾಗಿ ಸೇರ್ಪಡೆಯಾಯಿತು.
ಆದರೆ ಛಲಬಿಡದ ತಿವಿಕ್ರಮನಂತೆ ಚೇತರಿಸಿಕೊಂಡ ನಾಸಾ ಮತ್ತೊಮ್ಮೆ ಮಾನವ ಸಹಿತ ಅಂತರಿಕ್ಷನೌಕೆಯನ್ನು ಹಾರಿಬಿಡಲು ಸಜ್ಜಾಯಿತು. ಕಳೆದ ವರ್ಷ ಅತಿ ಮುತುವರ್ಜಿಯಿಂದ ಸಿದ್ಧಗೊಳಿಸಿ, ಹಾರಿಬಿಟ್ಟ ಡಿಸ್ಕವರಿ ನೌಕೆಯನ್ನು ತಾಂತ್ರಿಕ ದೋಷಗಳಿಂದಾಗಿ ಕೆಲವೇ ಕ್ಷಣಗಳಲ್ಲಿ ನೆಲಕ್ಕಿಳಿಸಬೇಕಾಯಿತು. ಈ ಬಾರಿ ಜುಲೈ ನಾಲ್ಕರಂದು ಮತ್ತೊಮ್ಮೆ ನಾಸಾ ತಂಡ ಏಳು ಯಾತ್ರಿಗಳನ್ನು ಹೊತ್ತ ಡಿಸ್ಕವರಿ ನೌಕೆಯನ್ನು ಆಕಾಶಕ್ಕೆ ಕಳಿಸಿತು.
ಡಿಸ್ಕವರಿಯ ಉಡ್ಡಯನ ಜುಲೈ ಒಂದರಂದೇ ನಡೆಯಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಎರಡು ಬಾರಿ ಉಡ್ಡಯನವನ್ನು ಮುಂದೂಡಲಾಯಿತು. ಜುಲೈ ನಾಲ್ಕರಂದು ಆಕಾಶಕ್ಕೆ ಹಾರಿದ ಡಿಸ್ಕವರಿಯ ಇಂಧನ ಟ್ಯಾಂಕಿನ ಉಷ್ಣ ನಿರೋಧಕ ಹೊದಿಕೆಯಿಂದ ಹೊರಬಿದ್ದ ಒಂದೆರಡು ಹತ್ತಿಯಂತಹ ಚೂರುಗಳು ಗಾಳಿಯಲ್ಲಿ ಚದುರಿದವು. ಅದರಿಂದ ನೌಕೆಗೆ ಯಾವುದೇ ಅಪಾಯ ಇಲ್ಲವೆಂದು ನಾಸಾದ ತಂತ್ರಜ್ಞರು ಅಭಿಪ್ರಾಯಪಟ್ಟರು. ಅಮೆರಿಕದ ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡ ಡಿಸ್ಕವರಿಯಲ್ಲಿ ಐವರು ಅಮೆರಿಕನ್ನರು ಹಾಗೂ ಒಬ್ಬ ಜರ್ಮನ್ ಗಗನಯಾತ್ರಿಗಳಿದ್ದರು. ಸದಸ್ಯರಲ್ಲಿ ಇಬ್ಬರು ಮಹಿಳೆಯರು. ಆಕಾಶದಿಂದ ನೌಕೆ ಜುಲೈ ೧೬ಕ್ಕೆ ಮರಳಿ ಸುರಕ್ಷಿತವಾಗಿ ಬಂದಿಳಿಯಿತು.
ಈ ಬಾರಿ ಡಿಸ್ಕವರಿ ನೌಕೆಯ ಉಡಾವಣೆ ಹಾಗೂ ನಂತರದ ಕಾರ್ಯಚಟುವಟಿಕೆಗಳ ಸಮಯದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆಕಾಶಕ್ಕೆ ಅದು ಹಾರತೊಡಗಿದಂತೆ ನೌಕೆಯ ಮೇಲು ಮತ್ತು ಕೆಳಭಾಗದಲ್ಲಿ ಹಾಗೂ ಇಂಧನ ಟ್ಯಾಂಕಿನ ಬಳಿ ಅಳವಡಿಸಲಾದ ಕ್ಯಾಮೆರಾಗಳು ಚಿತ್ರಗಳನ್ನು ತೆಗೆದು ನಾಸಾದ ಪ್ರಯೋಗಶಾಲೆಯ ತಂತ್ರಜ್ಞರಿಗೆ ರವಾನಿಸತೊಡಗಿದವು. ಇಷ್ಟೇ ಅಲ್ಲ, ನೌಕೆಗೆ ಜೋಡಿಸಲಾದ ಐವತ್ತು ಅಡಿ ಉದ್ದದ ಕೃತಕ ಕೈ(ರೊಬಾಟ್) ಕೂಡ ಅದರೊಳಗಿದ್ದ ಕ್ಯಾಮೆರಾಗಳ ಮೂಲಕ ನೌಕೆಯ ವಿವಿಧ ಕೋನಗಳ ಚಿತ್ರಗಳನ್ನು ಕಳಿಸಲಾರಂಭಿಸಿತು.
ಡಿಸ್ಕವರಿಯನ್ನು ಹಾರಿಬಿಟ್ಟ ಪ್ರಮುಖ ಉದ್ದೇಶವೆಂದರೆ ’ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’* ಯಲ್ಲಿ ವಾಸವಾದ ಗಗನಯಾತ್ರಿಗಳಿಗೆ ಅವಶ್ಯವಿರುವ ಆಹಾರ ಸಾಮಗ್ರಿಗಳ ಹಾಗೂ ಮತ್ತಿತರ ಸಾಮಗ್ರಿಗಳ ಪೂರೈಕೆ. ಬಾಹ್ಯಾಕಾಶ ಅಟ್ಟಣಿಗೆಯನ್ನು ಸಮೀಪಿಸಿದಂತೆ ಡಿಸ್ಕವರಿಯನ್ನೊಮ್ಮೆ ತಲೆ ಕೆಳಗಾಗಿ ನಿಲ್ಲಿಸಲಾಯಿತು. ಅಟ್ಟಣಿಗೆಯಲ್ಲಿದ್ದ ತಂತ್ರಜ್ಞರು ನೌಕೆಯ ಚಿತ್ರಗಳನ್ನು ತೆಗೆದು ನಾಸಾಕ್ಕೆ ಕಳಿಸಿದರು. ಇಂಧನ ಟ್ಯಾಂಕಿರುವ ನೌಕೆಯ ತಳಭಾಗವು ಯಾವುದೇ ಹಾನಿಗೊಳಗಾಗಿಲ್ಲವೆಂಬುದನ್ನು ಖಾತ್ರಿಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.
ನೌಕೆ ಬಾಹ್ಯಾಕಾಶ ಅಟ್ಟಣಿಗೆಯ ವೇಗಕ್ಕೆ ಸರಿಯಾಗಿ ಅದರ ಪಕ್ಕದಲ್ಲಿ ಹಾರತೊಡಗಿತು. ಕೂಡಲೇ ಎರಡೂ ನೌಕೆಗಳ ನಡುವೆ ಸೇತುವೆಯೊಂದರ ಜೋಡಣೆಯಾಯಿತು. ನೌಕೆಯಿಂದ ಆಹಾರ ಮತ್ತು ಇತರ ಪರಿಕರಗಳನ್ನು ಗಗನ ಯಾತ್ರಿಗಳು ಅಟ್ಟಣಿಗೆಗೆ ದಾಟಿಸಿದರು. ಇದುವರೆಗೆ ಕೈಗೆಟುಕದ ಅಟ್ಟಣಿಗೆಯ ಭಾಗಗಳು ರಿಪೇರಿ ವ್ಯವಸ್ಥೆಗೆ ಲಭ್ಯವಾಗುವಂತೆ ಈಗಿರುವ ರೋಬೊಟ್ ಕೈಯ್ಯನ್ನು ಬಲಪಡಿಸುವ ಪ್ರಯತ್ನಗಳೂ ಮುಂದಿನ ಎರಡು ದಿನಗಳಲ್ಲಿ ನಡೆದವು. ಈ ಎರಡೂ ಕಾರ್ಯಗಳಿಗಾಗಿ ಇಬ್ಬರು ಯಾತ್ರಿಗಳು ನೌಕೆ ಮತ್ತು ಅಟ್ಟಣಿಗೆಯ ಹೊರಗಡೆ ಆಕಾಶನಡಿಗೆಯನ್ನು ಮಾಡಿದ್ದನ್ನು ಬಾಹ್ಯಾಕಾಶ ಆಸಕ್ತರೆಲ್ಲರೂ ಟಿವಿಯಲ್ಲಿ ನೋಡಿದರು. ಪತ್ರಿಕೆಗಳಲ್ಲೂ ಗಗನಯಾತ್ರಿಗಳ ಸಾಹಸ ಕಾರ್ಯಗಳ ಚಿತ್ರಗಳು ಪ್ರಕಟವಾಗತೊಡಗಿದವು.
ಜುಲೈ ೧೭. ಅಂದು ಡಿಸ್ಕವರಿ ಭೂಮಿಗೆ ಮರಳುವ ದಿನ. ನಾಸಾದ ತಂತ್ರಜ್ಞರ ಮನದಲ್ಲಿ ಅದೇನೋ ಆತಂಕ. ಕೊಲಂಬಿಯಾ ದುರಂತದ ಕಹಿ ನೆನಪು ಮನದಲ್ಲಿ. ಆದರೆ ಏಳು ಗಗನಯಾತ್ರಿಗಳನ್ನು ಹೊತ್ತು ೧೩ ದಿನಗಳು ಅಂತರಿಕ್ಷದಲ್ಲಿದ್ದು ೨೦೨ ಭೂಪ್ರದಕ್ಷಿಣೆಗಳನ್ನು ನಡೆಸಿದ ಡಿಸ್ಕವರಿ ಆರು ಮಂದಿಯೊಂದಿಗೆ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದೆ.
ಕೊಲಂಬಿಯಾ, ಡಿಸ್ಕವರಿ, ಎಂಡೇವರ್ ಮತ್ತು ಅಟ್ಲಾಂಟಿಸ್ ಈ ನಾಲ್ಕು ಅಂತರಿಕ್ಷ ನೌಕೆಗಳು ಮಾನವಸಹಿತ ಆಗಸಕ್ಕೇರಿ ಅಮೆರಿಕದ ಅಂತರಿಕ್ಷ ಸಾಹಸ ಕಾರ್ಯಗಳಲ್ಲಿ ಮಹತ್ವದ ಪಾತ್ರವಹಿಸಿದ ಒಂದೇ ಪೀಳಿಗೆಯ ನೌಕೆಗಳು. ಈಗ ಉಳಿದಿರುವ ಮೂರೂ ನೌಕೆಗಳು ೨೦೧೦ರಲ್ಲಿ ನಿವೃತ್ತಿ ಹೊಂದಲಿವೆ. ಅಷ್ಟರೊಳಗೆ ಇನ್ನೂ ೧೭ ಬಾರಿ ಅಂತರಿಕ್ಷಯಾನ ನಡೆಸುವ ಯೋಜನೆ ಇದೆ. ಈಗಿನ ಡಿಸ್ಕವರಿಯ ಉಡ್ಡಯನ ಸಫಲಗೊಂಡಿದೆಯಾದ್ದರಿಂದ ಮುಂದಿನ ತಿಂಗಳು ಬಾನಿಗೆ ಹಾರಲು ಅಟ್ಲಾಂಟಿಸ್ ನೌಕೆ ಭಾರೀ ತಯಾರಿ ನಡೆಸಿದೆ. ಡಿಸ್ಕವರಿ ಈಗಾಗಲೇ ೩೨ ಬಾರಿ ಆಕಾಶದಲ್ಲಿ ಹಾರಾಡಿದ್ದು ISS ಗೆ ಭೆಟ್ಟಿ ನೀಡುತ್ತಿರುವ ೧೮ನೇ ನೌಕೆಯಾಗಿದೆ.
ಡಿಸ್ಕವರಿಯಾನ ಯಶಸ್ವಿಯಾಗಿ ಮುಗಿಯುವುದೆಂದು ನಾಸಾ ಮತ್ತು ಜಗತ್ತಿನೆಲ್ಲೆಡೆಯ ಅಂತರಿಕ್ಷ ವಿಜ್ಞಾನಿಗಳು ಆಶಿಸಿದ್ದು ಸುಳ್ಳಾಗಲಿಲ್ಲ. ಅಂತೂ ನಾಸಾದ ಆತ್ಮವಿಶ್ವಾಸ ಹೆಚ್ಚಿದೆ. ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಕೊಳ್ಳಲು ಡಿಸ್ಕವರಿಯಾನ ಹೊಸಹುಮ್ಮಸ್ಸು ತಂದಿದೆ.
* ಅಮೆರಿಕ, ರಷ್ಯಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹಾಗೂ ಜಪಾನ್ ದೇಶಗಳ ಸಹಯೋಗದಲ್ಲಿ ೧೯೭೨ ರಲ್ಲಿ ನಿರ್ಮಿಸಲಾದ ಬಾಹ್ಯಾಕಾಶ ಅಟ್ಟಣಿಗೆ ನೋಡಲು ಬಾಹ್ಯಾಕಾಶ ನೌಕೆಯಂತೆಯೇ ಇದ್ದು, ಭೂಮಿಯಿಂದ ಸುಮಾರು ೩೬೦ ಕಿಮೀ ಎತ್ತರದಲ್ಲಿ ತನ್ನದೇ ಆದ ಕಕ್ಷೆಯಲ್ಲಿ ಗಸ್ತು ತಿರುಗುತ್ತಿದೆ. ಮೂವರು ಗಗನಯಾತ್ರಿಗಳು ಇರಬಹುದಾದ ಈ ಅಟ್ಟಣಿಗೆಯಲ್ಲಿ ಇಲ್ಲಿಯವರೆಗೆ ಅಮೆರಿಕ ಮತ್ತು ರಷ್ಯಾದ ಬಾಹ್ಯಾಕಾಶ ತಜ್ಞರು ಉಳಿದು ಬಂದಿದ್ದಾರೆ. ಈಗಿರುವ ಅಮೆರಿಕ ಮತ್ತು ರಷ್ಯಾದ ತಜ್ಞರು ತಮ್ಮ ೧೮೦ ದಿನಗಳ ಬಾಹ್ಯಾಕಾಶ ವಾಸದ ಅರ್ಧದಷ್ಟು ಅವಧಿಯನ್ನು ಪೂರೈಸಿದ್ದಾರೆ. ಡಿಸ್ಕವರಿಯಲ್ಲಿ ಹಾರಿಬರುವ ಇನ್ನೊಬ್ಬ ವಿಜ್ಞಾನಿ ಜರ್ಮನ್ನಿನ ಥಾಮಸ್ ರೆಯ್ಟರ್ ಅವರು ಕೂಡ ಈ ಬಾರಿ ಅವರನ್ನು ಸೇರಿಕೊಳ್ಳಲಿದ್ದಾರೆ. ಕೊಲಂಬಿಯಾ ದುರಂತದಿಂದಾಗಿ ಅಮೆರಿಕಾ ಕೆಲಕಾಲ ಮಾನವಸಹಿತ ನೌಕೆಯನ್ನು ಕಳಿಸಲು ಹಿಂದೆಗೆದಿದ್ದರಿಂದ ಅಟ್ಟಣಿಗೆಗೆ ಆಹಾರ ಪದಾರ್ಥಗಳನ್ನು ಪೂರೈಸುವ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ರಷ್ಯಾ ದೇಶ ತನ್ನ ಈ ಕಾರ್ಯಕ್ಕಾಗಿ ಎರಡು ಬಾರಿ ತನ್ನ ನೌಕೆಗಳನ್ನು ಕಳುಹಿಸಿತ್ತು. ಮೂವರಿದ್ದರೆ ಅಟ್ಟಣಿಗೆಯ ಮೇಲುಸ್ತುವಾರಿಯ ಜೊತೆಗೆ ಇತರ ಸಂಶೋಧನೆಗಳನ್ನು ನಡೆಸಬಹುದು, ಅಲ್ಲದೆ ಅಟ್ಟಣಿಗೆಯ ಉಳಿದ ನಿರ್ಮಾಣ ಕಾರ್ಯವನ್ನೂ ಆದಷ್ಟು ಬೇಗನೆ ಮುಗಿಸಬಹುದೆಂಬ ಆಶಯವನ್ನು ವಿಜ್ಞಾನಿಗಳು ಹೊಂದಿದ್ದಾರೆ.
ಸರೋಜ ಪ್ರಕಾಶ್
ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಳಮಾಚನಹಳ್ಳಿ ಗ್ರಾಮದ ಎಂ.ರಾಮಾಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗೂಡಿ
ಕನ್ನಡ ನಾಡು ನುಡಿ ಸಂಸ್ಕೃತಿ ಭಾಷೆಯನ್ನು ಸಂರಕ್ಷಿಸಲು ಕನ್ನಡಿಗರೆಲ್ಲಾ ಒಂದಾಗಿ ಶ್ರಮಿಸುವಂತೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಕನ್ನಡ ರಾಜ್ಯೋತ್ಸವಗಳನ್ನು ಸಂಘಸಂಸ್ಥೆಗಳು ಆಚರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶುಕ್ರವಾರ ಭುವನೇಶ್ವರಿ ಕನ್ನಡ ಕಲಾ ಯುವಕರ ಸಂಘ, ಉಪ್ಪಿ ಗೆಳೆಯರ ಬಳಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷಿಗರು ಸಹೃದಯರು. ಕನ್ನಡ ಭಾಷೆಯೊಂದಿಗೆ ಬೇರೆ ಭಾಷೆಯನ್ನೂ ಗೌರವಿಸುತ್ತಾರೆ. ಕನ್ನಡ ನೆಲ, ಜಲ, ಭೂಮಿ, ಸಂಸ್ಕೃತಿ, ಭಾಷೆಗೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಹೋರಾಡಿ ರಕ್ಷಣೆ ಮಾಡುವ ಕೆಲಸ ಕನ್ನಡಿಗರಾದ ನಮ್ಮ ಜವಾಬ್ದಾರಿ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಿ.ಪಿ ರಾಮಕೃಷ್ಣಪ್ಪ ನೆರವೇರಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷ ವಿ.ಸುಬ್ರಮಣಿ, ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಆರ್.ಶ್ರೀನಿವಾಸ್, ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಅದ್ಯಕ್ಷೆ ಆಂಜನಮ್ಮ, ಸದಸ್ಯ ವೆಂಕಟೇಶ್, ಸಂತೋಷ್, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬೈರೇಗೌಡ, ಜಂಗಮಕೋಟೆ ಬ್ಲಾಕ್ ಕಾಂಗ್ರೆ್ರಸ್ ಅದ್ಯಕ್ಷ ಎಚ್.ಎಂ.ಮುನಿಯಪ್ಪ, ವೈ-ಹುಣಸೇನಹಳ್ಳಿ ಕ್ಯಾತಪ್ಪ, ಬಿ.ಕೆ.ಮುನಿಕೆಂಪಣ್ಣ, ಎಸ್.ವೆಂಕಟೇಶ್, ಡಿ.ವಿ.ಚಂದ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶವಸಾಗಾಣಿಕೆಯ ವಾಹನ ಸಾರ್ವಜನಿಕ ಸೇವೆಗೆ
ಶವಸಾಗಾಣಿಕೆಯ ವಾಹನವನ್ನು ಪುರಸಭೆಯ ಆವರಣದಲ್ಲಿ ಪುರಸಭಾ ಅಧ್ಯಕ್ಷೆ ಮತ್ತು ಸದಸ್ಯರು ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರ ಸೇವೆಗೆ ಶನಿವಾರ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ‘ಪಟ್ಟಣದ ಎಲ್ಲಾ ವರ್ಗದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಮಾಜಿ ಶಾಸಕ ವಿ.ಮುನಿಯಪ್ಪ ಅವರು ಅಧಿಕಾರದಲ್ಲಿದ್ದಾಗ ಸುಮಾರು ೧೦ ಲಕ್ಷ ರೂಪಾಯಿ ಹಣವನ್ನು ಶವಸಾಗಾಣಿಕೆ ವಾಹನದ ಖರೀದಿಗಾಗಿ ನೀಡಿದ್ದು ತಾಂತ್ರಿಕ ದೋಷಗಳಿಂದ ವಾಹನದ ಕಾರ್ಯಾರಂಭ ವಿಳಂಬವಾಗಿತ್ತು. ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮೂರು ವರ್ಷಗಳ ಕಾಲ ಸತತ ಪರಿಶ್ರಮದಿಂದ ಈ ವಾಹನ ಜನರ ಸೇವೆಗೆ ಲಭ್ಯವಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ವಾಹನವು ಕಾರ್ಯನಿರ್ವಹಿಸುವುದು. ಪಟ್ಟಣದ ಜನತೆಗೆ ರುದ್ರಭೂಮಿಗಳು ದೂರವಿರುವುದರಿಂದ ಯಾರಾದರೂ ಮೃತಪಟ್ಟರೆ ಮೃತದೇಹವನ್ನು ಸಾಗಿಸಲು ವಾಹನವನ್ನು ಉಪಯೋಗಿಸಿಕೊಳ್ಳಬಹುದು. ವಾಹನದ ಸಂಪೂರ್ಣ ನಿರ್ವಹಣೆಯನ್ನು ಪುರಸಭೆಯಿಂದಲೇ ಮಾಡಲಾಗುತ್ತದೆ. ವಾಹನದ ಶುಲ್ಕ ನಿಗಧಿಯ ಬಗ್ಗೆ ಪುರಸಭೆ ಸರ್ವ ಸದಸ್ಯರ ಸಮ್ಮುಖದಲ್ಲಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರಮ್ಮ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ, ಸದಸ್ಯರಾದ ಜೆ.ಎಂ.ಬಾಲಕೃಷ್ಣ, ಸುಹೇಲ್ಅಹ್ಮದ್, ಎಚ್.ಎಸ್.ನಯಾಜ್, ಜಬೀವುಲ್ಲಾ, ವಿಪ್ರಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಪುರಸಭಾ ಸದಸ್ಯ ಎನ್.ಲಕ್ಷ್ಮೀನಾರಾಯಣ್ ಮತ್ತು ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್, ಮುಸ್ತು, ಎಲ್.ಮಂಜುನಾಥ್, ಸುರೇಶ್, ಸಾಧಿಕ್ ಮತ್ತಿತರರು ಹಾಜರಿದ್ದರು.
ರೈತರ ಪಂಪ್ಸೆಟ್ಗಳಿಗೆ ಮೀಟರು ಅಳವಡಿಸಬಾರದು
ವಿದ್ಯುತ್ ಮೀಟರ್ ತಯಾರಿಕೆ ಕಂಪನಿಗಳ ಆಮಿಷಕ್ಕೆ ಒಳಗಾಗಿರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಅವರು ನೀಡುವ ಕಮೀಷನ್ ಹಣಕ್ಕೆ ಆಸೆ ಬಿದ್ದು ರೈತರ ಪಂಪ್ಸೆಟ್ಗಳಿಗೆ ಮೀಟರು ಅಳವಡಿಸಲು ಮುಂದಾಗಿದ್ದಾರೆ ಎಂದು ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು.
ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಿರುವ ಕ್ರಮ ಖಂಡಿಸಿ ಪಟ್ಟಣದ ಬೆಸ್ಕಾಂ ಕಚೇರಿಗೆ ಮೀಟರ್ಗಳ ಸಮೇತವಾಗಿ ರೈತರು ಮುತ್ತಿಗೆ ಹಾಕಿದ್ದರ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಶನಿವಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದೇ ಆದಲ್ಲಿ ಅದೇ ವಿದ್ಯುತ್ ಕಂಬಗಳಿಗೆ ಕಟ್ಟಿಹಾಕುತ್ತೇವೆ. ಈ ಹಿಂದೆ ಎರಡು ಬಾರಿ ಪಟ್ಟಣದ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತಾದರೂ ಕೆಲವು ಮಂದಿ ಲೈನ್ಮೆನ್ಗಳು ರೈತರಿಗೆ ಬೆದರಿಕೆಯೊಡ್ಡಿ ಮೀಟರುಗಳನ್ನು ಅಳವಡಿಸಿದ್ದುದನ್ನು ಖಂಡಿಸಿ ಇಲಾಖೆಗೆ ಮುತ್ತಿಗೆಯೂ ಹಾಕಲಾಗಿತ್ತು ಎಂದರು.
ಈ ಭಾಗದಲ್ಲಿ ಅಂತರ್ಜಲ ಕುಸಿದು ೧೫೦೦ ಅಡಿಗಳಿಂದ ನೀರು ತೆಗೆಯುತ್ತಿದ್ದು ಸಿಗುವ ಅಲ್ಪ ಪ್ರಮಾಣದ ನೀರಿನಲ್ಲಿ ರೈತ ವ್ಯವಸಾಯ ಮಾಡುತ್ತಿದ್ದಾನೆ. ಅಂತಹ ರೈತನ ಬೆನ್ನ ಮೇಲೆ ಬರೆ ಹಾಕುವ ಕೆಲಸಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಡಬಾರದು ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಕಳೆದ ಎರಡು ದಶಕಗಳಿಂದ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸಬೇಕೆಂದು ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ರೈತರ ತೋಟಗಳಿಗೆ ಅಳವಡಿಸಿರುವ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರು ಅಳವಡಿಕೆ ಮಾಡಲು ಹೊರಟಿರುವ ಕ್ರಮ ಸರಿಯಿಲ್ಲ. ಈವರೆಗೂ ಶಾಂತರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿರುವ ನಾವು ಉಗ್ರಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಸ್ಕಾಂ ಇಲಾಖೆಯ ಪ್ರಭಾರಿ ಎಇಇ ಅನ್ಸರ್ಪಾಷಾ ಮಾತನಾಡಿ ವಿದ್ಯುತ್ ಟ್ರಾನ್ಸ್ಫರ್ಗಳ ಹತ್ತಿರ ಮೀಟರುಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರ ಪಂಪ್ಸೆಟ್ಗಳಿಗೆ ಮೀಟರ್ಗಳನ್ನು ಅಳವಡಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಮುನಿನಂಜಪ್ಪ, ಓ.ಟಿ.ಮುನಿಕೃಷ್ಣಪ್ಪ, ರಾಮಕೃಷ್ಣಪ್ಪ, ವೇಣುಗೋಪಾಲ್, ಅನಂತ್, ಮಂಜುನಾಥ್, ಪರಮೇಶ್ವರ್, ಪುರುಷೋತ್ತಮ್, ದೇವರಾಜು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ತಿನಬಡಿಸುವ ಹಬ್ಬ
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಅಪೌಷ್ಠಿಕ ಮಕ್ಕಳಿಗೆ ‘ಪೌಷ್ಠಿಕ ಆಹಾರವನ್ನು ತಿನಬಡಿಸುವ ಹಬ್ಬ’ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು.
ಮಕ್ಕಳ ವೈದ್ಯರಾದ ಡಾ.ಗಿರೀಶ್ ಮಕ್ಕಳ ಆರೋಗ್ಯವನ್ನು ತಪಾಸಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 49 ಮಕ್ಕಳಿಗೆ ವಿವಿಧ ಬಗೆಯ ಪೌಷ್ಠಿಕ ಆಹಾರಗಳನ್ನು ತಯಾರಿಸಿ ಬಡಿಸಿ ತಿನಿಸಲಾಯಿತು. ಅಪೌಷ್ಠಿಕ ಮಕ್ಕಳ ತಾಯಂದಿರಿಗೆ ಮಕ್ಕಳ ಪೋಷಣೆ, ಶುಚಿತ್ವ,ಔಷಧೋಪಚಾರ ಮತ್ತು ಆಹಾರ ಪದ್ಧತಿಯ ಬಗ್ಗೆ ತಿಳಿಸಿಕೊಡಲಾಯಿತು.
ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಮೇಲ್ವಿಚಾರಕರಾದ ಗಿರಿಜಾಂಬಿಕೆ, ಶಾಂತಾಜಿಂದಾಳೆ, ಸರೋಜಮ್ಮ, ಸಂದೀಪ್, ಅಂಗನವಾಡಿ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸದಸ್ಯತ್ವ ಅಭಿಯಾನ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ತಾಲ್ಲೂಕು ಘಟದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ನಾಡು, ನುಡಿ ಹಾಗೂ ರೈತರ ಏಳಿಗೆಗಾಗಿ ಶ್ರಮಿಸುವುದಾಗಿ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್, ಜನಪರ ಹೋರಾಟಗಳಿಗೆ ಬೆಂಬಲ ನೀಡುತ್ತಾ, ರೈತರ ಸಮಸ್ಯೆಗಳು ಮತ್ತು ನಾಡು ನುಡಿಗಾಗಿ ಸದಾ ಜಾಗೃತ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ವಿನೋದ್ಕುಮಾರ್, ತಾಲ್ಲೂಕು ಅಧ್ಯಕ್ಷ ಪವನ್ಕುಮಾರ್ಗೌಡ, ಪ್ರವೀಣ್ಕುಮಾರ್, ಶಶಿಕುಮಾರ್, ರಮೇಶ್, ಮಂಜು, ಕೊಂಡಪ್ಪ, ಬೈರೇಗೌಡ, ಮಹಾರವಿಚಂದ್ರ, ನರಸಿಂಹಮೂರ್ತಿ, ಅಪ್ಪಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

