ಆಧುನಿಕ ತಾಂತ್ರಿಕತೆ ಬಳಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡುವತ್ತ ರೈತರು ಉತ್ಸುಕರಾಗಬೇಕು ಎಂದು ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್ ಹೇಳಿದರು.
ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ಏರ್ಪಡಿಸಿದ್ದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯಬೇಕು. ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಲು ಅಗತ್ಯವಾಗಿರುವ ವಿಧಾನಗಳನ್ನು ರೈತರು ಖಡ್ಡಾಯವಾಗಿ ಅನುಸರಿಸಬೇಕು.
ಹಿಪ್ಪುನೇರಳೆ ತೋಟಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವುದರೊಂದಿಗೆ ದ್ವಿತಳಿ ರೇಷ್ಮೆ ಗೂಡಿಗೆ ಪಕ್ವವಾಗಿರುವ ಹಿಪ್ಪುನೇರಳೆ ಸೊಪ್ಪನ್ನು ಕೊಡುವುದರಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಹಾಗೂ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಖಡ್ಡಾಯವಾಗಿದ್ದು, ರೇಷ್ಮೆ ಹುಳುಸಾಕಾಣಿಕೆ ಮನೆಗಳಿಂದ ತೆಗೆದ ತ್ಯಾಜ್ಯವನ್ನು ಚೆನ್ನಾಗಿ ಕೊಳೆಸಿ ತೋಟಗಳಿಗೆ ನೀಡಬೇಕು. ಹಿಪ್ಪುನೇರಳೆ ಸೊಪ್ಪನ್ನು ಕಟಾವು ಮಾಡುವಂತಹ ಪದ್ದತಿಗಳನ್ನು ಬದಲಾವಣೆ ಮಾಡಬೇಕು. ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು ಸೇರಿದಂತೆ ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು ಎಂದು ಎಚ್ಚರಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ರೈತರು ಬೆಳೆದ ದ್ವಿತಳಿ ರೇಷ್ಮೆ ಗೂಡನ್ನು ದೂರದ ರಾಮನಗರಕ್ಕೆ ಕೊಂಡೊಯ್ಯಬೇಕು ಹೀಗೆ ಕೊಂಡೊಯ್ಯಲು ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ ಇದಕ್ಕೆ ರೈತರು ಏನು ಮಾಡಬೇಕು? ಎಂದು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾಲೂಕಿನಾಧ್ಯಂತ ಹೆಚ್ಚು ಹೆಚ್ಚು ದ್ವಿತಳಿ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡಿದಾಗ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಆದರೆ ಬಹುತೇಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರಾದರೂ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ಹಿಂದೇಟು ಹಾಕುವುದು ಸರಿಯಲ್ಲವೆಂದರು.
ಚಿಂತಾಮಣಿಯ ರೇಷ್ಮೆ ಸಹಾಯಕ ನಿರ್ದೇಶಕ ಕಾಳಪ್ಪ, ವಿಜ್ಞಾನಿ ಫಣಿರಾಜ್, ಶಿಡ್ಲಘಟ್ಟ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರೈತರಾದ ಶಿವಣ್ಣ, ನಿರಂಜನ್, ದೊಡ್ಡಮಾರಪ್ಪ, ಶೆಟ್ಟಿಹಳ್ಳಿ ಆಂಜಿನಪ್ಪ, ಬಚ್ಚರೆಡ್ಡಿ, ಕೆ.ಹೆಚ್.ಮಂಜುನಾಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡಿ
ಮಕ್ಕಳಿಗೆ ಕೃತಜ್ಞತೆ ಕಲಿಸಿದ ಶಿಕ್ಷಕರು ಧನ್ಯರು
ಮಕ್ಕಳಿಗೆ ಅಭಿವ್ಯಕ್ತಿ, ಕೃತಜ್ಞತೆ ಮತ್ತು ಜಾನಪದ ಕತೆಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಕಲಿಸಿರುವ ಕನ್ನಮಂಗಲದ ಶಿಕ್ಷರು ಹಾಗೂ ಅವರ ಐಕ್ಯಮತ್ಯ ಅಭಿನಂದನೀಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಶೇಷಶಾಸ್ತ್ರಿ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 11ನೇ ವರ್ಷದ ಅಂತರ ಶಾಲಾ ನಾಟಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಶಾಲಾ ಆವರಣದ ವಿದ್ಯಾಗಣಪತಿ ಮಂದಿರದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಟಕದಂಥಹ ಪ್ರದರ್ಶಕ ಕಲೆಗಳ ಅಂತರ ಶಾಲಾ ನಾಟಕೋತ್ಸವ ನಡೆಸುವ ಮೂಲಕ ತಾಲ್ಲೂಕಿನಲ್ಲಿ ನಟನಾ ಪ್ರವೃತ್ತಿ ಮತ್ತು ಅದರೊಂದಿಗೆ ಸೃಜನಶೀಲತೆ ಹೆಚ್ಚಾಗುತ್ತದೆ. ನಾಟಕಗಳಿಗೆ ಆಯ್ದುಕೊಂಡ ವಿಷಯಗಳು ಸಮಕಾಲೀನ ಸಮಸ್ಯೆ, ಪ್ರಕೃತಿ ಮುಂತಾದವುಗಳಿದ್ದು, ಸರಳವಾಗಿವೆ. ಮಕ್ಕಳು ಮೊದಲ ಬಾರಿಯಾದರೂ ನುರಿತ ಕಲಾವಿದರಂತೆ ಅಭಿನಯಿಸಿದ್ದಾರೆ. ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದವರು ಮಕ್ಕಳ ಅಭಿವ್ಯಕ್ತಿಯನ್ನು, ಬರಹಗಳನ್ನು ಪುಸ್ತಕ ರೂಪದಲ್ಲಿ ತರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಕನ್ನಮಂಗಲ ಗ್ರಾಮದ ಅಭಿವೃದ್ಧಿಗೆ ಮತ್ತು ಮಕ್ಕಳ ಬಹುಮುಖಿ ಬೆಳವಣಿಗೆಗೆ ಗ್ರಾಮದ ಯುವಕರು ಸಜ್ಜಾಗಿರುವುದು ಎಲ್ಲಾ ಗ್ರಾಮಗಳಿಗೂ ಪ್ರೇರಣೆಯಾಗಿದೆ. ಇಲ್ಲಿನ ಒಗ್ಗಟ್ಟು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಆರ್.ವೇಣುಗೋಪಾಲ್, ಡಾ. ಆರ್.ಶೇಷಶಾಸ್ತ್ರಿ, ಜಲತಜ್ಞ ಕೆ.ನಾರಾಯಣಸ್ವಾಮಿ, ವರ್ಗಾವಣೆಗೊಂಡ ಶಿಕ್ಷಕರಾದ ಎಚ್.ಡಿ.ಮಂಜುನಾಥ್, ವಿದ್ಯಾಲಕ್ಷ್ಮಿ, ನಿವೃತ್ತ ಅಂಗನವಾಡಿ ಸಹಾಯಕಿ ಆಂಜನಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಎಂ.ದೇವರಾಜ್ ಅವರಿಗೆ ಗ್ರಾಮಸ್ಥರು ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ ವೆಂಕಟೇಶಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸುಬ್ರಮಣಿ, ಗ್ರಾಮ ಪಂಚಾಯತಿ ಸದಸ್ಯ ಡಿ.ಕೆ.ಶ್ರೀರಾಮ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಕೆ.ಎಂ.ಕೇಶವಪ್ಪ, ನರಸಿಂಹಪ್ಪ, ಅರಿಕೆರೆ ಮುನಿರಾಜು, ಆರ್.ಮಧುಸೂದನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೊಲೀಸರಿಗೆ ಆಧಾರ್ ಕಾರ್ಡ್
ಮೊಬೈಲ್ ಸಿಮ್ ತೆಗೆದುಕೊಳ್ಳಲು, ಬ್ಯಾಂಕ್ ಅಕೌಂಟ್ ಮಾಡಿಸಲು, ಪಾಸ್ ಪೋರ್ಟ್ ಮಾಡಿಸಲು, ಗ್ಯಾಸ್ ಪಡೆಯಲು ಆಧಾರ್ ಸಂಖ್ಯೆ ಕೊಡಿ ಎಂದು ಹೇಳುತ್ತಾರೆ. ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರ ನೀಡುವ 12 ಅಂಕಿಗಳ ಆಧಾರ್ ಕಾರ್ಡ್ಗೆ ಅಷ್ಟು ಪ್ರಾಮುಖ್ಯತೆ ಇದೆ.
ಸದಾ ಕೆಲಸದಲ್ಲಿ ತೊಡಗಿರುವ ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆ ಆಧಾರ್ ಕಾರ್ಡ್ ಮಾಡಿಸಲು ಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಆಧಾರ್ ನೋಂದಣಿ ತಂಡವು ಆಗಮಿಸಿ ನೋಂದಣಿ ಕಾರ್ಯವನ್ನು ನಡೆಸಿತು.
‘ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದಿಂದ ಎಲ್ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯ. ಉದ್ಯೋಗ, ಶಿಕ್ಷಣ, ಪಿಂಚಣಿ ಯೋಜನೆಗಳು, ವಿಮೆ, ಮೊಬೈಲ್ ಸಿಮ್ ಖರೀದಿ, ಹೊಸ ಗ್ಯಾಸ್ ಖರೀದಿ, ಪಾಸ್ ಪೋರ್ಟ್ ಪಡೆಯವುದು ಸೇರಿದಂತೆ ಆಧಾರ್ ಕಾರ್ಡ್ನಿಂದ ಹಲವು ಉಪಯೋಗಗಳಿವೆ. ಇದೊಂದು ಬಹುಮುಖ್ಯವಾದ ವಿಳಾಸ ದೃಡೀಕರಣ ಪತ್ರವಾಗಿದೆ. ನಮ್ಮ ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆಲ್ಲಾ ಈ ಸೌಲಭ್ಯ ಸಿಗಲು ಈ ದಿನ ಪೊಲೀಸ್ ಠಾಣೆಯಲ್ಲಿಯೇ ನೋಂದಣಿ ಕಾರ್ಯವನ್ನು ನಡೆಸುತ್ತಿದ್ದೇವೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಈ ಸಂದರ್ಭದಲ್ಲಿ ತಿಳಿಸಿದರು.
ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆ
ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆಯಲ್ಲದೆ ಅವಶ್ಯಕವೂ ಕೂಡ. ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿ ಹಂತದಲ್ಲೂ ಕಾನೂನು ಅವಶ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್ ಅರಸ್ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ನೆರವು-ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರನ್ನು ತಾಯಿ, ದೇವತೆಯ ಸ್ಥಾನದಲ್ಲಿನೋಡುವ ನಮ್ಮ ಸಮಾಜದಲ್ಲಿ ಅತ್ಯಾಚಾರ ನಡೆಯುವುದು ಇಡೀ ಸಮಾಜವೇ ತಲೆ ತಗ್ಗಿಸುವಂತ ವಿಚಾರ. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ಪಾಲಿಸಬೇಕು. ಆಗಲೇ ಸಮಾಜದಲ್ಲಿ ಎಲ್ಲರು ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮಗುವನ್ನು ಶಾಲೆಗೆ ಸೇರಿಸಲು ಕಾನೂನು ಪಾಲನೆ, ಕಡ್ಡಾಯ ಶಿಕ್ಷಣ ಹಕ್ಕು, ವಸ್ತುವೊಂದನ್ನು ಮಾರುಕಟ್ಟೆಯಲ್ಲಿ ಖರೀಸಿದಾಗ ವ್ಯತ್ಯಾಸವಾದಲ್ಲಿ ಗ್ರಾಹಕರ ಕಾಯಿದೆ, ಜಮೀನು, ಮನೆ, ನಿವೇಶನ ಖರೀದಿ ಮಾರಾಟಕ್ಕೆ ಭೂ ಕಾಯ್ದೆ ಇದೆ. ಹೀಗೆ ಪ್ರತಿಯೊಂದು ವಿಷಯಕ್ಕೂ ಸಂಬಂಸಿದಂತೆ ನಮ್ಮಲ್ಲಿ ಕಾನೂನು ಇದ್ದು ಅದು ಕಾಲ ಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿಯಾಗುತ್ತಾ ಬಂದಿದೆ. ಎಲ್ಲರೂ ಕಾನೂನನ್ನು ತಿಳಿದುಕೊಂಡು ಪಾಲಿಸಿ ಎಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಧರ್ಮ, ಸಾಮಾಜಿಕ ಸ್ಥಿತಿಗತಿ, ಭೌಗೋಳಿಕ ವ್ಯವಸ್ಥೆಯನ್ನು ಆಧರಿಸಿಯೆ ಕಾನೂನುಗಳು ರೂಪುಗೊಂಡಿವೆ. ಯಾರು ಕಾನೂನನ್ನು ಗೌರವಿಸಿ ಪಾಲಿಸುತ್ತಾರೋ ಅವರನ್ನು ಕಾನೂನು ಕಾಪಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಂದ ಹಿಡಿದು ಮುದುಕರವರೆಗೂ ಭಾಷೆ, ಗಡಿ, ಜಾತಿ, ಧರ್ಮದ ಅಂತರವಿಲ್ಲದೆ ಎಲ್ಲರೂ ಕಾನೂನುಗಳನ್ನು ತಿಳಿದು ಜೀವನದಲ್ಲಿ ಕಾನೂನು ಚೌಕಟ್ಟಿನೊಳಗೆ ಜೀವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಪೋಸ್ಕೋ ಕಾಯಿದೆ ಕುರಿತು ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್ ಉಪನ್ಯಾಸ ನೀಡಿದರೆ, ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಮೋಟಾರ್ ವಾಹನ ಕಾಯಿದೆ ಕುರಿತು ವಕೀಲ ಎಂ.ಬಿ.ಲೊಕೇಶ್ ಉಪನ್ಯಾಸ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಶಾಲೆಯ ಮುಖ್ಯೋಪಾದ್ಯಾಯ ಟಿ.ಎ.ಸಿದ್ದೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆಯಿಡುತ್ತಿದ್ದಾರೆ – ಶ್ರೀರಾಮರೆಡ್ಡಿ
ಕಾರ್ಪೊರೇಟ್ ಸಂಸ್ಥೆಗಳ ಸಿ.ಇ.ಒ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆಯಿಡುತ್ತಿದ್ದಾರೆ ಎಂದು ಸಿ.ಪಿ.ಐ.ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಸಿ.ಪಿ.ಐ.ಎಂ ಪಕ್ಷದ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮನ್ನು ಆಳುತ್ತಿರುವ ಸರ್ಕಾರಗಳು ತಾವು ನೀಡಿರುವ ಆಶ್ವಾಸನೆಗಳಿಗೆ ತದ್ವಿರುದ್ದವಾಗಿ ನಡೆಯುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅಸಮರ್ಥತೆಯಿಂದಾಗಿ ದೇಶದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿತ್ತು. ಈಗ ಹೊಸ ಸರ್ಕಾರ ಬಂದು ಆರು ತಿಂಗಳಾದರೂ ಏನೂ ಬದಲಾವಣೆ ಆಗಿಲ್ಲ. ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಕಂಪೆನಿಗಳ ಲಾಭಕ್ಕಾಗಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಕೂಡ ಮಾಡುತ್ತಿದ್ದಾರೆ. ಇದರ ಪರಿಣಾಮ ಸಾಮಾನ್ಯ ಜನರ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಔಷಧಿ ದರ ನಿಯಂತ್ರಣ ಸರ್ಕಾರದ ಅಧೀನದಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸದ ಸಾಧನೆಯಿದು. ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಿ ಹಾಕಿದ ಒಡಂಬಡಿಕೆಯಿಂದಾಗಿ 80 ಜೀವರಕ್ಷಕ ಔಷಧಿಗಳ ದರ ಹೆಚ್ಚುತ್ತಿವೆ. ಸಾವಿರಾರು ಕೋಟಿ ರೂಗಳು ಚುನಾವಣೆಯ ಸಮಯದಲ್ಲಿ ಖರ್ಚು ಮಾಡಿದ ಅದಾನಿ ಗ್ರೂಪ್ ಕಂಪೆನಿಗೆ ಕೃತಜ್ಞತೆಯ ರೂಪವಾಗಿ ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಒಪ್ಪಂದ ಮಾಡಿಸಿಕೊಡಲಾಗಿದೆ. ಕಪ್ಪು ಹಣ ವಾಪಸ್ ತರುವುದಾಗಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಗಾಂಧಿಯನ್ನು ಹತ್ಯೆ ಮಾಡಿದ ಜನ ಸ್ವಚ್ಛಭಾರತದ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ದುರಂತವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಲಕ್ವ ಹೊಡೆದಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ಸಿ.ಪಿ.ಐ.ಎಂ ಮತ್ತು ಎಡಪಕ್ಷಗಳ ಆಡಳಿತದಿಂದ ಮಾತ್ರ ಜನಸಾಮಾನ್ಯರಿಗೆ ಅನುಕೂಲ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಹಿಂದೆ ದೇಶದ ಭೂಮಾಲೀಕರು ಹಾಗೂ ಬಂಡವಾಳಶಾಹಿಗಳ ವಿರುದ್ಧ ಹೋರಾಡುವುದೊಂದೇ ಸಿ.ಪಿ.ಐ.ಎಂ ಪಕ್ಷದ ಮುಖ್ಯ ಉದ್ದೇಶವಾಗಿತ್ತು. ಈಗ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಮುವಾದಿ ಅಪಾಯವಿದೆ, ಧರ್ಮದ ಹೆಸರಿನಲ್ಲಿ ಶೋಷಣೆ, ಜಾತಿಯ ಹೆಸರಿನಲ್ಲಿ ಶೋಷಣೆ, ಮೂಡನಂಬಿಕೆಗಳ ಮೂಲಕ ಜನಸಾಮಾನ್ಯರ ಶೋಷಣೆ ನಡೆಯುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ತುರ್ತಿದೆ. ನಮ್ಮ ಭಾಗದಲ್ಲಿ ಎಲ್ಲಾ ಜನಪ್ರತಿನಿಧಿಗಳೂ ಮತ್ತು ಕೆಲ ಮುಖಂಡರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಶಾಶ್ವತ ನೀರಾವರಿ ಯೋಜನೆಯ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ನೀರು ತರಲು ಅವರಿಗೆ ಆಸಕ್ತಿಯಿಲ್ಲ ಎಂದು ಲೇವಡಿ ಮಾಡಿದರು.
ಸಿ.ಪಿ.ಐ.ಎಂ ಮುಖಂಡರಾದ ಕೆ.ಎಂ.ವೆಂಕಟೇಶ್, ಲಕ್ಷ್ಮೀದೇವಮ್ಮ, ಮುನಿವೆಂಕಟಪ್ಪ, ಮಳ್ಳೂರು ಶಿವಣ್ಣ, ಕೆ.ಸಿ.ವೆಂಕಟೇಶ್, ಮುನಿಕೃಷ್ಣಪ್ಪ, ಮುನೀಂದ್ರ, ಪಾಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೀವನದಲ್ಲಿ ಸ್ವಚ್ಛತೆ
ಪ್ರತಿಯೊಬ್ಬರ ಜೀವನ ಕ್ರಮವು ಬೇರೆ ಬೇರೆಯಾಗಿರುತ್ತದೆ. ಬೆಳಿಗ್ಗೆ ಏಳುವುದರಿಂದ ರಾತ್ರಿಯವರೆಗೂ ಉನ್ನತ ಸ್ತರದವರು ಕೆಳವರ್ಗದವರೂ ಎಲ್ಲರೂ ಅವರವರದೇ ಆದ ರೀತಿಯನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಜೀವನದಲ್ಲಿ ಸ್ವಚ್ಛತೆಯ ಪ್ರಾಧಾನ್ಯತೆ ಏನು? ಹೇಗಿರಬೇಕು? ಮಕ್ಕಳ ವಿಷಯದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಏನು?
ನನಗೆ ತಿಳಿದ ಮಟ್ಟಿಗೆ ಕೆಳವರ್ಗದ ಮಕ್ಕಳು ಅದ್ಭುತವಾದ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತವೆ. ಕೊಳಚೆ ಪ್ರದೇಶದ ಮಕ್ಕಳು, ರಸ್ತೆ ಮಾಡುವವರ ಮಕ್ಕಳು, ಕಲ್ಲು ಕೊರೆಯುವವರ ಮಕ್ಕಳು ದಷ್ಟಪುಷ್ಠವಾಗಿ ಆರೋಗ್ಯವಾಗಿರುವಂತೆ ಕಂಡುಬರುತ್ತದೆ. ಎಣ್ಣೆಯೇ ಕಾಣದ ತಲೆಕೂದಲು, ಸ್ನಾನವನ್ನು ಕಾಣದೇ ಎಷ್ಟು ದಿನಗಳೇ ಕಳೆದು ಹೋದವೆನೋ ಎನ್ನುವಂತೆ ಕಾಣುವ ಮೈ, ಬಟ್ಟೆಯ ಪರಿವೆಯೇ ಇಲ್ಲದೆ ಮಣ್ಣುರಾಶಿಯ ಮೇಲೋ, ಕಲ್ಲುರಾಶಿಯ ಮೇಲೋ ಆಡುತ್ತಿರುತ್ತವೆ. ಹಾಗಿದ್ದರೆ ಆ ಮಕ್ಕಳು ಅದೆಷ್ಟರ ಮಟ್ಟಿಗೆ ಸ್ವಚ್ಛತೆಯಲ್ಲಿ ಬೆಳೆಯಲು ಸಾಧ್ಯವಾಗಬಹುದು. ದೇವರು ಆ ಮಕ್ಕಳಿಗೆ ವಿಶೇಷವಾದ ಪ್ರತಿರೋಧ ಶಕ್ತಿಯನ್ನು ಕೊಟ್ಟಿರಬಹುದೇ?
ನನ್ನ ಅಜ್ಜಿ ಹೇಳುತ್ತಿದ್ದಳು “ಕೋಣೆ ಮಕ್ಕಳು ಕೊಳೆಯುತ್ತವೆ, ಬೀದಿ ಮಕ್ಕಳು ಬೆಳೆಯುತ್ತವೆ” ಎಂದು, ಅಂದರೆ ಅದರರ್ಥ ನಾವು ಸ್ವಚ್ಛತೆಯಲ್ಲಿ ಬೆಳೆಸುವುದರಿಂದ ಮಕ್ಕಳು ಆರೋಗ್ಯವಾಗಿ ಬೆಳೆಯಲಾರರು ಎಂದರ್ಥವಲ್ಲ. ಕೋಣೆಯ ಮಕ್ಕಳು ಅಂದರೆ ಅತಿ ಕಾಳಜಿಯಿಂದ ಬೆಳೆಸಿದ ಮಕ್ಕಳು, ಅಂದರೆ ಮಣ್ಣಿನಲ್ಲಿ ಹೋಗಬೇಡ, ಸೋಂಕು ತಗುಲುತ್ತದೆ, ಮಳೆಯಲ್ಲಿ ನೆನೆಯಬೇಡ ಶೀತ ಆಗುತ್ತದೆ ಎಂದು ಹೇಳುತ್ತಾ ಮನೆಯಲ್ಲಿಯೇ ಬಂಧಿಯಾಗಿರುವ ಮಕ್ಕಳು. ಬೀದಿಯ ಮಕ್ಕಳು ಎಂದರೆ ಸ್ವತಂತ್ರವಾಗಿ ತಮಗೆ ಬೇಕೆಂದಲ್ಲಿ ಹೋಗಿ ಆಡಿಕೊಂದು ಇರುವ ಮಕ್ಕಳು.
ಈಗಿನ ಮಕ್ಕಳು ಎಂದಿಗೂ ಮಣ್ಣಿನಲ್ಲಿ ಆಟವಾಡಲಾರರು, ಮಳೆಯಲ್ಲಿ ನೆನೆಯಲಾರರು, ಬಿಸಿಲಲ್ಲಿ ಬೇಯಲಾರರು ಅಥವಾ ನಾವು ಬಿಡಲಾರೆವು ಮಕ್ಕಳನ್ನು ಪ್ರಕೃತಿಯ ಸನಿಹಕ್ಕೆ. ಇಲ್ಲಿ ಯಾಕೆ ಬಿಡಲಾರೆವು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲೇ ಉತ್ತರವೂ ಇದೆ, ನಾವೇ ಕಲುಷಿತಗೊಳಿಸಿರುವ ಪ್ರದೇಶಕ್ಕೆ ಗೊತ್ತಿದ್ದು ಗೊತ್ತಿದ್ದು ಯಾವ ತಂದೆ ತಾಯಿ ತಾನೆ ಮಕ್ಕಳನ್ನು ಕಳಿಸಲು ಇಚ್ಛಿಸುತ್ತಾರೆ. ಎಲ್ಲಿ ನೋಡಿದರೂ ಉಗುಳುತ್ತಾ ಓಡಾಡುವ ಜನ, ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ಕಡ್ಡಿ, ಕೊಳಚೆ ನೀರು ಇರುವಂತಹುದು, ಹೀಗೇ ಉದ್ದವಾಗುತ್ತಾ ಹೋಗುತ್ತದೆ ನಮ್ಮ ಘನಂದಾರಿ ಕೆಲಸಗಳು. ಇಂಥ ಪರಿಸ್ಥಿಯನ್ನು ತಂದೊಡ್ಡಿ ಈಗಿನ ಮಕ್ಕಳು ನಮ್ಮಂತೆ ಪ್ರಕೃತಿಯಲ್ಲಿ ಬೆರೆಯಲಾರವು ಎಂದು ಅವಲತ್ತುಕೊಂಡರೆ ಪ್ರಯೋಜನವೇನು? ನಾವು ಚಿಕ್ಕವರಾಗಿದ್ದಾಗ ಇದ್ದ ನೆಲ ಜಲ ಯಾವುದೂ ಈಗ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಈಗ ನಾವೆಷ್ಟು ನಮ್ಮನ್ನು ನಾವು ಪ್ರಕೃತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ಲವೆ? ಪ್ರಕೃತಿಯ ಯಾವುದೇ ಸೃಷ್ಠಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದ ಕಾರಣ ಪ್ರತಿರೋಧ ಶಕ್ತಿ ಕುಂಠಿತವಾಗಬಹುದೇನೋ ಎನ್ನುವುದು ಇದರ ಅರ್ಥ ಇರಬಹುದೆಂದು ನನ್ನ ಅನಿಸಿಕೆ.
ಸ್ವಚ್ಛತೆಯ ಬಗ್ಗೆ ಮಾತನಾಡಲು ಹೋದರೆ ಎಲ್ಲರೂ ಅವರವರದೇ ಅದ ಕ್ರಮವನ್ನು ಹೇಳುತ್ತಾರೆ ಕೆಲವರು ಮಕ್ಕಳು ಮಣ್ಣಿನಲ್ಲಿ ಆಡಬೇಕು, ಮಳೆಯಲ್ಲಿ ನೆನೆಯಬೇಕು ಆಗ ಮಕ್ಕಳಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಬರುತ್ತದೆ ಎಂದರೆ ಕೆಲವರು ಇದಕ್ಕೆ ವಿರುದ್ದವಾಗಿ ಹಾಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ. ಯಾವುದು ಸರಿ ಯಾವುದು ತಪ್ಪು ಎಂದು ವಿಮರ್ಶೆ ಮಾಡಲು ಬರುವುದಿಲ್ಲವೆನೊ, “ಲೋಕೋ ಭಿನ್ನ ರುಚಿ:”
ಇದೆಲ್ಲವನ್ನೂ ಮೀರಿ ಪ್ರತಿಯೊಬ್ಬರೂ ಅವರದೇ ಆದ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡು ಜೀವಿಸುವುದೂ ಅಷ್ಟೇ ಸತ್ಯ ಅಲ್ಲವೇ….?
ಚಳಿ ಚಳಿ ತಾಳೆನು ಈ ಚಳಿಯಾ
ಬೆಚ್ಚನೆಯ ಹೊದಿಕೆಯನ್ನು ಹೊದೆದು ಸೂರ್ಯನ ಕಿರಣಗಳು ಮಲಗುವ ಕೋಣೆಯ ಕಿಟಕಿಗಳನ್ನು ಹಾದು ಬರುವವರೆಗೆ ಮಲಗುವುದೆಂದರೆ ಚಳಿಗಾಲದಲ್ಲಿ ಆಪ್ಯಾಯಮಾನ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಕಾಲ ಇದು. ಬಿಸಿ ಬಿಸಿ ಕಾಫಿಯನ್ನು ಹೀರುತ್ತಾ ಮುಂಜಾನೆಯ ವೃತ್ತ ಪತ್ರಿಕೆಗಳನ್ನು ಓದುವುದು ಅಥವಾ ದೂರದರ್ಶನದಲ್ಲಿ ವಾರ್ತೆಗಳನ್ನು ವೀಕ್ಷಿಸುವವರ ಗುಂಪು ಒಂದು ಕಡೆಯಾದರೆ ಈ ಚಳಿಗಾಲದಲ್ಲೂ (ಮಾಘ ಮಾಸ) ಮುಂಜಾನೆ ಬೇಗನೆ ಎದ್ದು, ಸ್ನಾನ ಮುಗಿಸಿ ಪೂಜೆ ಪುನಸ್ಕಾರಗಳನ್ನು ಮುಗಿಸಿ ದೇವಸ್ಥಾನಗಳಿಗೆ ಭೇಟಿ ಕೊಡುವವರ ಗುಂಪು ಇನ್ನೊಂದು ಕಡೆ ಈ ಕಾಲದಲ್ಲಿ ಗಿಡಮರಗಳ ಎಲೆಗಳು ಉದುರುತ್ತವೆ. ಇದು ಪ್ರಕೃತಿಯ ಬದಲಾವಣೆಗೆ ತಕ್ಕಂತೆ ನೀರಿನ ಅಂಶವನ್ನು ತನ್ನಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಮರ, ಗಿಡಗಳು ಮಾಡಿಕೊಳ್ಳುವ ಬದಲಾವಣೆ. ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುತ್ತದೆ. ದೇಹದ ಬಲವೂ ಚೆನ್ನಾಗಿರುತ್ತದೆ. ಪರಿಸರದಲ್ಲಿ ಒಣ ಗಾಳಿಯು ಬೀಸುತ್ತಿರುವುದರಿಂದ ಚರ್ಮವು ಒಡಿಯುವುದಲ್ಲದೆ, ಚರ್ಮದ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತವೆ. ಇದಲ್ಲದೆ ಜ್ವರ, ನೆಗಡಿ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳೂ ಕೂಡ ಕಂಡು ಬರುವ ಸಾಧ್ಯತೆ ಹೆಚ್ಚು. ಆದ ಕಾರಣ ಚಳಿಗಾಲದಲ್ಲಿ ಆಹಾರ ವಿಹಾರ ಹೀಗಿದ್ದರೆ ಒಳ್ಳೆಯದು.
ಆಹಾರ:
1. ಅಧಿಕವಾಗಿ ಹಸಿವು ಇರುವುದರಿಂದ ಜೀರ್ಣಕ್ಕೆ ಜಡವಾದಂಥಹ ಆಹಾರ ಸೇವನೆ ಮಾಡುವುದು
2. ಒಣ ಗಾಳಿಯು ಬೀಸುತ್ತಿರುವುದರಿಂದ ಜಿಡ್ಡಿನಂಶ ಹೆಚ್ಚಾಗಿರುವ ಆಹಾರ ಸೇವನೆ ಅಗತ್ಯ. ಆಹಾರವನ್ನು ಸೇವಿಸುವಾಗ ಬಿಸಿ ಆಹಾರದೊಂದಿಗೆ ಒಂದರಿಂದ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.
3. ಸಿಹಿ, ಹುಳಿ ಉಪ್ಪು, ಖಾರ ಹಾಗೂ ಕ್ಷಾರ ರಸ ಪ್ರಧಾನವಾಗಿರುವ ಆಹಾರ ಸೇವನೆ ಈ ಋತುವಿನಲ್ಲಿ ಒಳ್ಳೆಯದು.
4. ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸುವುದು ಹಿತಕರ ಸಾಸಿವೆ ಎಣ್ಣೆ ದೇಹವನ್ನು ಬೆಚ್ಚಗಿಡುವುದಲ್ಲದೆ ವಾತವನ್ನು ಶಮನಗೊಳಿಸುವುದು.
5. ಗೋಧಿ ಹಿಟ್ಟಿನಿಂದ ತಯಾರಿಸಿದ ಪೂರಿ, ಚಪಾತಿ, ದೋಸೆಗಳನ್ನೂ ಕೂಡ ಈ ಋತುವಿನಲ್ಲಿ ಹಿತಕರ. ಗೋಧಿ ಜೀರ್ಣಕ್ಕೆ ಜಡ ಅಲ್ಲದೆ ವಾತವನ್ನು ಶಮನಗೊಳಿಸುವುದು.
6. ತುಪ್ಪದಲ್ಲೇ ತಯಾರಿಸಿದ ಸಜ್ಜಿಗೆ, ಹಿಟ್ಟಿನ ಉಂಡೆ, ಪೊಂಗಲ್ ಹಾಗೂ ಇತರೇ ಸಿಹಿ ತಿನಿಸುಗಳೂ ಕೂಡ ಈ ಋತುವಿನಲ್ಲಿ ಅಗತ್ಯ.
7. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಪದಾರ್ಥಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನೂ ಕೂಡ ಈ ಋತುವಿನಲ್ಲಿ ಯಥೇಚ್ಛವಾಗಿ ಬಳಸಬಹುದು.
8. ಹಾಲು ಹಾಗೂ ತುಪ್ಪದಿಂದ ತಯಾರಿಸಿದ ಬೂದುಗುಂಬಳದ ಹಲ್ವಾ, ಸೋರೇಕಾಯಿ ಹಲ್ವಾ, ಸೀಮೆ ಬದನೆಕಾಯಿ ಹಲ್ವಾ, ಪಾಯಸಗಳೂ ಕೂಡ ಈ ಋತುವಿನಲ್ಲಿ ಉತ್ತಮ.
9. ಮೊಸರಿನಿಂದ ಶ್ರೀಖಂಡವನ್ನು ತಯಾರಿಸಿ ಬಳಸಬಹುದು.
10. ಬೂದುಗುಂಬಳ, ಸೋರೇಕಾಯಿ, ಸೌತೆಕಾಯಿ, ಮಂಗಳೂರು ಸೌತೆ, ಸೀಮೆ ಬದನೆಕಾಯಿ, ಇವುಗಳಿಂದ ಮಜ್ಜಿಗೆ ಹುಳಿಯನ್ನು ತಯಾರಿಸಿ ಸೇವಿಸುವುದು ಹಿತಕರ.
11. ನುಗ್ಗೇಕಾಯಿ, ಹೀರೇಕಾಯಿ, ತೊಂಡೇಕಾಯಿ, ಕ್ಯಾರೆಟ್ ಹಾಗೂ ವಿವಿಧ ರೀತಿಯ ಸೊಪ್ಪುಗಳು (ಉದಾ: ಪಾಲಕ್, ಮೆಂತ್ಯ, ಸಬ್ಬಸಿಗೆ, ಹರಿವೆ, ದಂಟಿನ ಸೊಪ್ಪು) ಗಳನ್ನೂ ಕೂಡ ಈ ಋತುವಿನಲ್ಲಿ ಬಳಸಬಹುದು.
12. ಅಲ್ಲದೆ ಗಡ್ಡೆ, ಗೆಣಸುಗಳು ಬೀಟ್ರೂಟ್, ಆಲುಗಡ್ಡೆ, ಕೆಸವಿನ ಗಡ್ಡೆ, ಬಾಳೆದಿಂಡು ಇವುಗಳನ್ನೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇವೆಲ್ಲವೂ ಜೀರ್ಣಕ್ಕೆ ಜಡವಾದರೂ ಕೂಡ ಈ ಋತುವಿನಲ್ಲಿ ಜೀರ್ಣ ಶಕ್ತಿ ಹೆಚ್ಚಿರುವುದರಿಂದ ಇವುಗಳ ಬಳಕೆ ಹಿಚ್ಚಿನ ತೊಂದರೆಯನ್ನುಂಟು ಮಾಡುವುದಿಲ್ಲ.
13. ಕಬ್ಬು, ಕಬ್ಬಿನಿಂದ ತಯಾರಿಸಿದ ಬೆಲ್ಲ, ಸಕ್ಕರೆ ಹಾಗೂ ಇತರೇ ಬೆಲ್ಲದಿಂದ ತಯಾರಿಸಿದ ಆಹಾರವನ್ನು ಬಳಸುವುದು ಒಳ್ಳೆಯದು.

ವಿಹಾರ:
1. ನಿತ್ಯವೂ ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ ತಿಕ್ಕಿ ಬಿಸಿ ನೀರಿನ ಸ್ನಾನ ಮಾಡಬೇಕು. ಇದರಿಂದ ವಾತ ಶಮನವಾಗುವುದಲ್ಲದೆ, ಮೈ ಒಡೆಯುವುದು ಕಡಿಮೆಯಾಗಿ, ಚರ್ಮ ನುಣುಪಾಗಿ ಕಾಂತಿಯುಕ್ತವಾಗುತ್ತದೆ.
2. ತಲೆಗೆ ನಿತ್ಯವೂ ಎಣ್ಣೆಯನ್ನು ಹಚ್ಚುವುದು ಹಿತಕರ ಸ್ವಲ್ಪ ಹತ್ತಿಯನ್ನು ಎಣ್ಣೆಯಲ್ಲಿ ಅದ್ದಿ ನೆತ್ತಿಯ ಮೇಲೆ ಇಟ್ಟುಕೊಳ್ಳುವುದೂ ಹಿತಕರ.
3. ಕಪ್ಪನೆಯ ಹತ್ತಿಯ ಅಥವಾ ಉಣ್ಣೆಯ ಬಟ್ಟೆಗಳನ್ನು ಬಳಸುವುದು ಹಿತಕರ. ಕಂಬಳಿ, ಉಣ್ಣೆಯ ಬಟ್ಟೆಗಳು, ಚರ್ಮದ ಹೊದಿಕೆಗಳು ಈ ಋತುವಿನಲ್ಲಿ ಅಗತ್ಯ.
4. ಮನೆಯ ಒಳಗಡೆ ಅಗ್ಗಿಷ್ಠಿಕೆ ಅಥವಾ ಕೆಂಡದ ಒಲೆಗಳನ್ನು ಉರಿಸಿ, ಅವುಗಳಲ್ಲಿ ಮೈ ಕಾಯಿಸಿಕೊಳ್ಳಬೇಕು.
5. ಸ್ನಾನ ಮತ್ತು ಇತರೇ ಶೌಚ ಕಾರ್ಯಗಳಿಗೆ ಬೆಚ್ಚಗಿನ ನೀರನ್ನು ಬಳಸಬೇಕು.
6. ಸ್ನಾನದ ನಂತರ ಮೈಗೆ ಚಂದನ, ಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳ ಲೇಪನ ಹಿತಕರ.
7. ವ್ಯಾಯಾಮ ಈ ಋತುವಿನಲ್ಲಿ ಅಗತ್ಯ. ನಮ್ಮ ಶಕ್ತಿಯ ಅರ್ಧದಷ್ಟು ವ್ಯಾಯಾಮ ಅವಶ್ಯಕ.
8. ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ಧ.
ಡಾ. ನಾಗಶ್ರೀ.ಕೆ.ಎಸ್.
ರಾಗಿ ಬೆಳೆ ಕ್ಷೇತ್ರೋತ್ಸವ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ ಅವರ ಹೊಲದಲ್ಲಿ ಮಂಗಳವಾರ ಭೂ ಚೇತನ ಯೋಜನೆಯಡಿಯಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಮಗ್ರ ಪೋಷಕಾಂಶಗಳ ನಿರ್ವಹಣೆ, ತಳಿ ಬದಲಾವಣೆ, ಮಣ್ಣು ಹಾಗೂ ನೀರು ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಬೆಳೆ ಉತ್ಪಾದನೆ ಹೆಚ್ಚಿಸಲು ತಾಂತ್ರಿಕ ಮಾಹಿತಿಗಳನ್ನು ತಿಳಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪ ಮಾತನಾಡಿ,‘ಶೇಕಡಾ 70 ರಿಂದ 80 ಭಾಗ ಮಳೆಯಾಶ್ರಿತ ಪ್ರದೇಶದಲ್ಲಿ ಒಣಬೇಸಾಯವನ್ನು ನಡೆಸಲಾಗುತ್ತಿದೆ. ಅದರ ಉತ್ಪಾದನೆಯನ್ನು ಹೆಚ್ಚಿಸಲು ಭೂ ಚೇತನ ಯೋಜನೆಯನ್ನು ರೂಪಿಸಲಾಗಿದೆ. ನಮ್ಮ ಭಾಗದ ಮಣ್ಣಿನಲ್ಲಿ ಸಾವಯವ ಗೊಬ್ಬರದ ಅಂಶವು ಕಡಿಮೆಯಿರುವುದು ಮಣ್ಣಿನ ಪರೀಕ್ಷೆಯಿಂದ ತಿಳಿದುಬಂದಿದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಬೆಳೆಗೆ ಪೂರಕವಾದ ಜೀವಾಣುಗಳ ಕೊರತೆಯನ್ನು ಎದುರಿಸುತ್ತಿದೆ. ದನಕರುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಈಗ ಕೊಟ್ಟಿಗೆ ಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಈ ಎಲ್ಲಾ ಅಂಶಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಒಟ್ಟಾರೆಯ ಉತ್ಪಾದನೆಯ ಕೊರತೆಯುಂಟಾಗಿದೆ’ ಎಂದು ತಿಳಿಸಿದರು.
ಅಪ್ಪೇಗೌಡನಹಳ್ಳಿ ಗ್ರಾಮದ ಎ.ಎನ್.ಮುನಿನಾರಾಯಣಪ್ಪ, ತಮ್ಮ ಅನುಭವಗಳನ್ನು ವಿವರಿಸುತ್ತಾ, ಹಿಂದೆ ಎತ್ತುಗಳನ್ನು ಬಳಸಿ ಭೂಮಿಯನ್ನು ಉಳುಮೆಮಾಡಲಾಗುತ್ತಿತ್ತು. ಆದರೆ ಈಗ ಟ್ರಾಕ್ಟರ್ನ ಕಲ್ಟಿವೇಟರ್ ಮೂಲಕ ಉಳುಮೆ ಮಾಡಿ ಬೇಕಾಬಿಟ್ಟಿ ವ್ಯವಸಾಯ ಮಾಡುವುದರಿಂದ ಇಳುವರಿ ಕ್ಷೀಣಿಸುತ್ತಿದೆ. ಭೂಮಿಯನ್ನು ಸಮಯಕ್ಕನುಗುಣವಾಗಿ ಹದವಾಗಿ ಟ್ರಾಕ್ಟರ್ನ ಡಿಸ್ಕ್ ಬಳಸಿ ಉಳುಮೆ ಮಾಡಿದ್ದಲ್ಲಿ ಮಳೆ ಏರುಪೇರಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರಬಲ್ಲದು. ಇದರಿಂದ ಇಳುವರಿ ಹೆಚ್ಚುತ್ತದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಆತ್ಮಾ ತಾಂತ್ರಿಕ ಅಧಿಕಾರಿ ಅಶ್ವತ್ಥನಾರಾಯಣ, ರಾಮಣ್ಣ, ರಾಮಾಂಜಿನಪ್ಪ, ಅಪ್ಪಾಜಿಗೌಡ, ಪ್ರಕಾಶ್, ಮಂಜುನಾಥ್, ಆನಂದ್, ಕೃಷ್ಣ, ಪಟಾಲಪ್ಪ, ತ್ಯಾಗರಾಜ್, ಅನುವುಗಾರ ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಪರಾಧ ತಡೆಯಲು ಪೊಲೀಸರ ಜಾಗೃತಿ ಕಾರ್ಯಕ್ರಮ
ವಾಯುವಿಹಾರಕ್ಕೆ ಹೋದಾಗ ಚಿನ್ನದ ಚೈನ್ ಅಪಹರಿಸುವ ಚೋರರು, ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವಾಗ ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲ ಕದಿಯುವ ಕಳ್ಳರು, ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುವುದು ಮುಂತಾದ ಅಪರಾಧಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ಸ್ವತಃ ಅಭಿನಯಿಸುವುದರ ಮೂಲಕ ಪುರಠಾಣೆ ಪೊಲೀಸರು ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿದ್ದರು.
ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಮುಂದೆ ಪೊಲೀಸರು ಅಣಕು ಪ್ರದರ್ಶನವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪರಾಧ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಠಾಣೆ ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ‘ಅಪರಾಧವನ್ನು ತಡೆಯಬೇಕಾದರೆ ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಕರೆದಾಗ ಶಾಲಾ ವಿದ್ಯಾರ್ಥಿಗಳು, ಒಂಟಿಯಾಗಿ ಮಹಿಳೆಯರು ತೆರಳಬಾರದು. ವಾಕಿಂಗ್ ಹೋಗುವಾಗ ಗುಂಪಿನಲ್ಲಿ ಹೋಗಬೇಕು. ಬ್ಯಾಂಕಿನಿಂದ ಹಣ ತರುವಾಗ ಬಹು ಎಚ್ಚರಿಕೆಯಿಂದಿರಬೇಕು. ಗಮನವನ್ನು ಬೇರೆಡೆಗೆ ಸೆಳೆದು ಹಣದ ಚೀಲವನ್ನು ಲಪಟಾಯಿಸುವವರಿರುತ್ತಾರೆ. ಎಟಿಎಂ ನ ಕಾರ್ಡ್ ಮತ್ತು ಪಾಸ್ವರ್ಡ್ ಬೇರೆಯವರಿಗೆ ಕೊಡಬಾರದು. ದ್ವಿಚಕ್ರ ವಾಹನಗಳನ್ನು ಮನೆಯ ಆವರಣದಲ್ಲಿ ನಿಲ್ಲಿಸುವಾಗ ಚೈನ್ ಹಾಕಿ ಭದ್ರಪಡಿಸಬೇಕು. ಅಪರಿಚಿತರು ಕೋಳಿ ವ್ಯಾಪಾರ, ಶಾಸ್ತ್ರ, ಮಣಿ ವ್ಯಾಪಾರ, ಪಾಲಿಷ್ ನೆಪದಲ್ಲಿ ಬಂದಾಗ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಿ. ಅಪರಿಚಿತರು ಮನೆಗೆ ಬಂದಾಗ ಬಾಗಿಲು ತೆರೆಯಬೇಡಿ’ ಎಂದು ಹಲವಾರು ಎಚ್ಚರಿಕೆಯ ಮಾತುಗಳನ್ನು ತಿಳಿಸಿದರು.
ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಇಸ್ಮಾಯಿಲ್, ಮುಖ್ಯಪೇದೆಗಳಾದ ಪ್ರಕಾಶ್, ಆಂಜಿನೇಯ, ರಮೇಶ್, ಶಿವಕುಮಾರ್, ದಿಬ್ಬೂರಹಳ್ಳಿ ಮಹಿಳಾಪೇದೆ ಗಾಯತ್ರಿ, ಡಾಲ್ಫಿನ್ ವಿದ್ಯಾಸಂಸ್ಥೆಯ ನಿರ್ದೇಶಕ ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೀಟರ್ಗಳನ್ನು ಕಿತ್ತು ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು
ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಖಂಡಿಸಿ, ಈಗಾಗಲೇ ಕೆಲ ರೈತರ ಪಂಪ್ಸೆಟ್ಗಳಿಗೆ ಅಳವಡಿಸಿರುವ ಮೀಟರ್ಗಳನ್ನು ಕಿತ್ತು ಪ್ರತಿಭಟನಾ ಮೆರವಣಿಗೆಯನ್ನು ರೈತರು ನಡೆಸಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆಯಿತು.
ಪಟ್ಟಣದ ಉಲ್ಲೂರುಪೇಟೆಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ಬೆಸ್ಕಾಂ ಕಚೇರಿಯನ್ನು ತಲುಪಿದರು.
ಕಳೆದ ಬಾರಿ ಪ್ರತಿಭಟನೆಯನ್ನು ರೈತರು ಹಮ್ಮಿಕೊಂಡಿದ್ದಾಗ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದಿಲ್ಲವೆಂದಿದ್ದ ಅಧಿಕಾರಿಗಳು ಈಗ ಮಾತಿಗೆ ತಪ್ಪಿದ್ದಾರೆ. ಬಯಲುಸೀಮೆ ಪ್ರದೇಶದ ರೈತು ಅತೀವ ಸಂಕಷ್ಟದಲ್ಲಿದ್ದಾರೆ. ಆಳವಾದ ಕೊಳವೆ ಬಾವಿಗಳನ್ನು ಕೊರೆಸಿ ಸಾಲಗಳ ಸುಳಿಯಲ್ಲಿ ಸಿಲುಕಿ ಅತ್ಯಲ್ಪ ನೀರಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಷ್ಟಕ್ಕೆ ನಷ್ಟ ಎನ್ನುವಂತೆ ಬರೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಪಟ್ಟಣಕ್ಕೆ ಹೊಂದಿಕೊಂಡ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿದ್ದಾರೆ. ನಗರ ಪ್ರದೇಶದ ರೈತರು ಗ್ರಾಮೀಣ ರೈತರು ಎಂದು ಅಧಿಕಾರಿಗಳು ವಿಂಗಡನೆ ಮಾಡುತ್ತಾ ರೈತರಲ್ಲಿ ಒಡಕನ್ನು ಉಂಟುಮಾಡುತ್ತಿರುವುದನ್ನು ಖಂಡಿಸುತ್ತೇವೆ. ರೈತರೆಲ್ಲರೂ ಒಂದೇ, ಎಲ್ಲರದ್ದೂ ಒಂದೇ ಸಮಸ್ಯೆಯಾಗಿದೆ. ಒಂದೆಡೆ ಸರಿಯಾಗಿ ವಿದ್ಯುತ್ ಒದಗಿಸದೇ ಬೆಸ್ಕಾಂ ಇಲಾಖೆಯು ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಇನ್ನೊಂದೆಡೆ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಮೂಲಕ ಶೋಷಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಾಂ ಇಲಾಖೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು 26 ಮೀಟರ್ಗಳನ್ನು ಬೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಶಿವಣ್ಣ ಮತ್ತು ಶ್ರೀಧರ್ ಅವರಿಗೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಂಜಪ್ಪ, ಅಬ್ಲುಡು ಆರ್.ದೇವರಾಜ್, ನಾರಾಯಣಸ್ವಾಮಿ, ವೇಣುಗೋಪಾಲ್, ಶ್ರೀನಿವಾಸ್, ಮಂಜುನಾಥ್, ಮಾದವಪ್ಪ, ಮೂರ್ತಿ, ರಮೇಶ್, ಸೋಮಶೇಖರ್, ಕೃಷ್ಣ, ರವಿಕುಮಾರ್, ಗೋಪಾಲಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಘಟಮಾರನಹಳ್ಳಿ ಮತ್ತು ತೊಟ್ಲಗಾನಹಳ್ಳಿ ರಸ್ತೆ ಕಾಮಗಾರಿ ಉದ್ಘಾಟನೆ
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಘಟಮಾರನಹಳ್ಳಿ ಗ್ರಾಮ ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯತಿಯ ತೊಟ್ಲಗಾನಹಳ್ಳಿ ಗ್ರಾಮಗಳಿಗೆ ಒಟ್ಟು ಹತ್ತೂವರೆ ಲಕ್ಷ ರೂಪಾಯಿಗಳ ರಸ್ತೆ ಕಾಮಗಾರಿಯನ್ನು ಶಾಸಕ ಎಂ.ರಾಜಣ್ಣ ಭಾನುವಾರ ಉದ್ಘಾಟಿಸಿದರು.
ಸುಮಾರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಮಳೆ ಬಂದರೆ ಓಡಾಡಲು ಅಸಾಧ್ಯವಾಗಿದ್ದ ರಸ್ತೆಯ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ವಿಶೇಷ ಅನುದಾನದ ಅಡಿಯಲ್ಲಿ ತೊಟ್ಲಗಾನಹಳ್ಳಿ ಗ್ರಾಮಕ್ಕೆ ಐದು ಲಕ್ಷ ರೂಪಾಯಿ ವೆಚ್ಚದ 500 ಮೀಟರ್ ರಸ್ತೆ ಡಾಂಬರೀಕರಣ ಮತ್ತು ಘಟಮಾರನಹಳ್ಳಿ ಗ್ರಾಮಕ್ಕೆ ಐದೂವರೆ ಲಕ್ಷ ರೂಪಾಯಿ ವೆಚ್ಚದ 600 ಮೀಟರ್ ರಸ್ತೆ ಡಾಂಬರೀಕರಣ ನಡೆಸಲಾಗುತ್ತದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಪಕ್ಷಾತೀತವಾಗಿ ಗ್ರಾಮಸ್ಥರು ಒಗ್ಗೂಡಬೇಕು’ ಎಂದು ತಿಳಿಸಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಗೌಡ, ನಾರಾಯಣಸ್ವಾಮಿ, ಕೃಷ್ಣಪ್ಪ, ತ್ಯಾಗರಾಜ್, ನರಸಿಂಹಪ್ಪ, ರಮೇಶ್, ಗುತ್ತಿಗೆದಾರ ದೇವರಾಜ್, ಕೇಶವ, ಕಲ್ಯಾಪುರ ಆಂಜಿನಪ್ಪ, ಅಂಬರೀಶ್, ನಂಜಪ್ಪ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳಲ್ಲಿ ಸುರಕ್ಷತಾ ಭಾವನೆ ಹೆಚ್ಚಿದರೆ ಕಲಿಕೆಯೂ ಸುಲಭ
ಮಕ್ಕಳಿಗೆ ಮನೆ, ಸಮಾಜ, ಶಾಲೆಗಳೆಲ್ಲೆಡೆ ಸುರಕ್ಷತಾ ಹಾಗೂ ಸ್ವತಂತ್ರ ವಾತಾವರಣ ಸೃಷ್ಠಿಯಾದರೆ ಕಲಿಕೆಯೂ ಸುಲಭವಾಗುತ್ತದೆ ಎಂದು ಶಿಕ್ಷಕ ಬೈರಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಬೇಕಾದ ಹೊಣೆಗಾರಿಕೆಯು ಪೋಷಕರು, ಶಿಕ್ಷಕರು, ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಮಕ್ಕಳೊಡನೆ ಸುರಕ್ಷತೆ ಕುರಿತಾಗಿ ಸಂವಾದ ನಡೆಯಿತು. ಗ್ರಾಮದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಂದ ಮಕ್ಕಳ ಸುರಕ್ಷೆಯ ಬಗ್ಗೆ ಕಿರುರೂಪಕ ಪ್ರದರ್ಶನ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ಆರತಿ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಲಾತಂಡಗಳ ಮೂಲಕ ಎಚ್.ಐ.ವಿ ಜಾಗೃತಿ ಕಾರ್ಯಕ್ರಮ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ವಿವಿದೆಡೆ ಈಚೆಗೆ ಕಲಾತಂಡಗಳ ಮೂಲಕ ಎಚ್.ಐ.ವಿ ಮತ್ತು ಏಡ್ಸ್ ಕುರಿತಂತೆ ಜಾಗೃತಿ ಮೂಡಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ವೀರಭದ್ರೇಶ್ವರ ವೀರಗಾಸೆ ಕಲಾತಂಡದ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ 2009 ರಿಂದ 2014 ಅಕ್ಟೋಬರ್ ವರೆಗೆ 334 ಎಚ್.ಐ.ವಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ 15 ವರ್ಷದಿಂದ 29 ವರ್ಷದ ವಯೋಮಾನದವರು ಈ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಯುವಪೀಳಿಗೆಗೆ ಏಡ್ಸ್ ಕುರಿತಂತೆ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎನ್.ಗಂಗಾಧರಯ್ಯ ಎಚ್.ಐ.ವಿ/ಏಡ್ಸ್ ನ ಬಗ್ಗೆ, ಹರಡುವ ವಿಧಾನ ಮತ್ತು ತಡೆಗಟ್ಟುವ ಬಗ್ಗೆ ತಿಳಿಸಿದರು.
ಆರೋಗ್ಯ ಸಿಬ್ಬಂದಿ, ಸೌಖ್ಯ ಸಂಜೀವಿನಿ ಸಂಸ್ಥೆ, ಮೈರಾಡ ಸಂಸ್ಥೆ ಸಿಬ್ಬಂದಿ, ದಿಬ್ಬೂರಹಳ್ಳಿ ಪ್ರಾಥಮಿಕ ಕೇಂದ್ರದ ಡಾ.ಮುನಿಸ್ವಾಮಿರೆಡ್ಡಿ, ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎಂ.ಯತೀಶ್ ಮತ್ತಿತರರು ಹಾಜರಿದ್ದರು.
ಸೂಕ್ಷ್ಮ ಹಸ್ತಾಕ್ಷರದಲ್ಲಿ ವೇದ ಮಂತ್ರಗಳು
‘ಅಗ್ನಿಮಿಳೇ ಪುರೋಹಿತಂ…ಯಜ್ಞಸ್ತದೇವಮೃತ್ವಿಜಂ|
ಹೊರಾರಂ ರತ್ನಧಾತಮಂ||೧||’
ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ, ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಕೂಡ ಪ್ರಭಾವಿತರಾಗಿದ್ದರಂತೆ.
ಈ ವೇದಗಳೆಡೆಗೆ ತಾಲ್ಲೂಕಿನ ಮೇಲೂರು ಗ್ರಾಮದ ಎಂ.ಆರ್.ಪ್ರಭಾಕರ್ ಕೂಡ ಆಕರ್ಷಿತರಾಗಿದ್ದಾರೆ. ಸುಮಾರು 10 ಸಾವಿರ ಪುಟಗಳ ನಾಲ್ಕೂ ವೇದಗಳ 21 ಸಾವಿರ ಮಂತ್ರಗಳನ್ನು ಕೇವಲ 60 ಪುಟಗಳಲ್ಲಿ ಸೂಕ್ಷ್ಮವಾದ ಅಕ್ಷರಗಳಲ್ಲಿ ಬರೆಯಲು ಮುಂದಾಗಿದ್ದಾರೆ.
ಈ ಪ್ರಯತ್ನದಲ್ಲಿ ಒಂದಿನಿತೂ ಚಿತ್ತಿಲ್ಲದೆ ಸೂಕ್ಷ್ಮವಾಗಿ ಸುಮಾರು 13 ಸಾವಿರ ಮಂತ್ರಗಳನ್ನು ಬರೆದಿದ್ದಾರೆ. ಋಗ್ವೇದ, ಯಜುರ್ವೇದವನ್ನು ಮುಗಿಸಿ ಸಾಮವೇದದ ಮಂತ್ರಗಲನ್ನು ಬರೆಯುತ್ತಿದ್ದಾರೆ.
ಈಗಾಗಲೇ ಭಗವದ್ಗೀತೆಯ 18 ಅಧ್ಯಾಯಗಳ ಏಳು ನೂರು ಶ್ಲೋಕಗಳನ್ನು 9 ಅಂಗುಲ ಉದ್ದ ಮತ್ತು 8 ಅಂಗುಲ ಅಗಲದ ಹಾಳೆಯಲ್ಲಿ ಬರೆದಿರುವ ಅವರು ಕೆಲ ದಿನಗಳಲ್ಲಿ ವೇದಗಳನ್ನು ಬರೆದು ಒಂದೆಡೆ ಪ್ರದರ್ಶಿಸುವ ಆಶಯದಲ್ಲಿದ್ದಾರೆ.
‘ಸುಮಾರು 60 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಋಗ್ವೇದವನ್ನು ಕನ್ನಡಕ್ಕೆ ತಂದಿದ್ದರು. ಅದರ ನಂತರ ಆರ್ಯ ಸಮಾಜದವರು ಈಚೆಗೆ ನಾಲ್ಕೂ ವೇದಗಳನ್ನು ಕನ್ನಡಕ್ಕೆ ತಂದರು. ಈ ಪ್ರಯತ್ನ ಭಾರತೀಯ ಭಾಷೆಗಳಲ್ಲಿ ಅಪರೂಪದ್ದು. ಅವರ ಒಡನಾಟದಿಂದ ಈ ಪುಸ್ತಕಗಳನ್ನು ಕೊಂಡು ಕನ್ನಡದಲ್ಲಿ ಓದುವಾಗ ಈ 10 ಸಾವಿರ ಪುಟಗಳನ್ನು 60 ಪುಟದಲ್ಲಿ ಬರೆಯುವ ಮನಸ್ಸಾಯಿತು. ಹಿಂದೆ ಭಗವದ್ಗೀತೆಯ ಶ್ಲೋಕಗಳನ್ನು ಸೂಕ್ಷ್ಮ ಅಕ್ಷರದಲ್ಲಿ ಬರೆದಿದ್ದ ಅನುಭವವಿದ್ದುದರಿಂದ ಈ ಕೆಲಸವನ್ನು ಪ್ರಾರಂಭಿಸಿದೆ. ಈ ಮಂತ್ರಗಳಲ್ಲಿ ಬಹಳಷ್ಟು ಕನ್ನಡ ಪದಗಳಿವೆ. ಅಥವಾ ಅಲ್ಲಿನ ಸಂಸ್ಕೃತ ಪದಗಳು ಈಗ ಕನ್ನಡದ್ದಾಗಿವೆ ಎನ್ನಬಹುದು. ಹೀಗಾಗಿ ಕನ್ನಡಕ್ಕೂ ವೇದಕ್ಕೂ ನಂಟಿದೆ. ಆದಷ್ಟು ಬೇಗ ಬರೆದು ಮುಗಿಸಿ ಈ ಎಲ್ಲಾ ಮಂತ್ರಗಳನ್ನೂ ಒಂದೆಡೆ ದರ್ಶಿಸುವಂತೆ ಪ್ರದರ್ಶಿಸುತ್ತೇನೆ’ ಎಂದು ಎಂ.ಆರ್.ಪ್ರಭಾಕರ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಮಕ್ಕಳ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಎಸ್.ಭವಾನಿ ಮಾತನಾಡಿದರು. ಆಡಳಿತ ಅಧಿಕಾರಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕರಾದ ಗೋಪಿನಾಥ್, ವೆಂಕಟರಮಣಪ್ಪ ಹಾಜರಿದ್ದರು.
ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ ವಿಶೇಷವಾಗಿದ್ದು ನೆರೆರಾಜ್ಯಗಳಿಂದಲೂ ಜನರು ದನಗಳೊಂದಿಗೆ ಆಗಮಿಸುತ್ತಾರೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ರಜಸ್ವ ನಿರೀಕ್ಷಕ ಸುಬ್ರಮಣಿ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ, ಛಾಯಾರಮೇಶ್ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸಮವಸ್ತ್ರ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 24 ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಾದ ಚಂದ್ರ, ಶ್ರೀಕಾಂತ್, ರಾಮಾಂಜಿ, ಚಂದ್ರಶೇಖರ್ ಸಮವಸ್ತ್ರಗಳನ್ನು ವಿತರಿಸಿದರು.
ಸಿದ್ದಾರ್ಥ ನಗರದ ಸ್ಮಶಾನದಲ್ಲಿ ಮೂಢನಂಬಿಕೆ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ
ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಮೂಢನಂಬಿಕೆ ವಿರುದ್ಧ ಜನ ಜಾಗೃತಿ ಮೂಡಿಸಲು ಪರಿವರ್ತನಾ ದಿನವನ್ನಾಗಿ ಪಟ್ಟಣದ ಸಿದ್ದಾರ್ಥ ನಗರದ ಸ್ಮಶಾನದಲ್ಲಿ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ಮಾತನಾಡಿ,‘ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಮೌಢ್ಯತೆಯನ್ನು ಶಿಕ್ಕರಿಸುವ ಪರಿವರ್ತನಾ ದಿನವನ್ನಾಗಿ ಈ ಬಾರಿ ಆಚರಿಸುತ್ತಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಕಲ್ಪನೆಯ ಸಮಾಜ ಸ್ಥಾಪನೆಗಾಗಿ ಈ ಕ್ರಾಂತಿಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೌಢ್ಯಾಚರಣೆಗಳು, ಅರ್ಥಹೀನ ಕಂದಾಚರಣೆಗಳ ಮೂಲಕ ಪುರೋಹಿತಶಾಹಿ ಶಕ್ತಿಗಳು ಸಾವಿರಾರು ವರ್ಷಗಳಿಂದ ದಲಿತ ಸಮುದಾಯವನ್ನು ಮತ್ತು ಮಹಿಳೆಯರನ್ನು ಶೋಷಿಸುತ್ತಾ ಬಂದಿದೆ. ಕನ್ನಡ ನಾಡಿನ ಹಳ್ಳಿಗಳಲ್ಲಿ ಸ್ವಾಭಿಮಾನದ ಕೂಗನ್ನು ಮೊಳಗಿಸಬೇಕಿದೆ’ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಂತೆ ಹಾಡುಗಳನ್ನು ಹಾಡಿ, ಅಡುಗೆಯನ್ನು ಸಿದ್ದಾರ್ಥ ನಗರದ ಸ್ಮಶಾನದಲ್ಲಿ ತಯಾರಿಸಿ ದಾಸೋಹವನ್ನು ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ಡಿ.ಎಂ.ವೆಂಕಟೇಶ್, ಹುಜಗೂರು ವೆಂಕಟೇಶ್, ದೊಡ್ಡತಿರುಮಳಯ್ಯ, ರವಿ. ನರಸಿಂಹಪ್ಪ, ಶ್ರೀರಾಮಪ್ಪ, ಪುರಸಭಾ ಸದಸ್ಯ ಚಿಕ್ಕಮುನಿಯಪ್ಪ, ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ
ವಿಶ್ವದಲ್ಲೇ ಶ್ರೇಷ್ಠ ಲಿಖಿತ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಅವರ ಆಶಯಗಳು ಇನ್ನೂ ಜಾರಿಗೊಳ್ಳದಿರುವುದು ದುರಂತ ಎಂದು ನಿವೃತ್ತ ಶಿಕ್ಷಣ ಸಂಯೋಜಕ ತಲದುಮ್ಮನಹಳ್ಳಿ ಆರ್.ಕೃಷ್ಣಪ್ಪ ವಿಷಾಧಿಸಿದರು.
ಪಟ್ಟಣದ ಕೋಟೆ ವೃತ್ತದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಸರ್ಕಾರಿ ನೌಕರರು ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
ದಲಿತ ಜನಾಂಗದವರು ಇಂದಿಗೂ ಶೋಷಣೆಗೆ ಒಳಗಾಗುತ್ತಿರುವುದರೊಂದಿಗೆ ಅಸ್ಪೃಶ್ಯತೆಗೂ ಈಡಾಗುತ್ತಿದ್ದಾರೆ. ಈ ಜನಾಂಗ ಶಿಕ್ಷಣ ಪಡೆದು, ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ವೆಂಕಟಸ್ವಾಮಿ, ನರಸಿಂಹಯ್ಯ, ಎಂ.ಮಂಜುನಾಥ್, ವಿಜಯಕುಮಾರ್, ಎ.ವಿ.ವೆಂಕಟನರಸಪ್ಪ, ಮುನಿಯಪ್ಪ, ಗುರುರಾಜ್, ಲಕ್ಷ್ಮೀದೇವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.


