Home Blog Page 541

ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನ

0

ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಮುಖಾಂತರ ದೇಶವನ್ನು ಸ್ವಚ್ಛ ಭಾರತವನ್ನಾಗಿ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ಕೋಟೆ ವೃತ್ತದಲ್ಲಿ ಶಿಡ್ಲಘಟ್ಟ ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಕನಸಿನಂತೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ, ಅಧಿಕಾರಿಗಳಲ್ಲಿ ಬದ್ಧತೆ, ನಾಗರಿಕರಲ್ಲಿ ಸಮರ್ಪಣಾ ಮನೋಭಾವವಿದ್ದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.
ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಜಿಲ್ಲೆಯನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಮನೆಗಳಲ್ಲಿ ಉಪಯೋಗಿಸಿದ ಹಸಿತ್ಯಾಜ್ಯ, ಹಾಗೂ ಒಣತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಮಾಡಿ, ಪುರಸಭೆಯ ಸಿಬ್ಬಂದಿಗೆ ನೀಡಿ, ಪಟ್ಟಣವನ್ನು ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಸಹಕಾರ ನೀಡಬೇಕು. ಮನೆಗಳ ಮುಂಭಾಗಗಳಲ್ಲಿ ಅಂಗಡಿಗಳ ಮುಂಭಾಗದಲ್ಲಿ ಬಿದ್ದಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ರಸ್ತೆಯ ಬದಿಗಳಲ್ಲಿ ಕಸವನ್ನು ಹಾಕಬಾರದು. ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ರೋಗಗಳಿಗೆ ಆಹ್ವಾನ ನೀಡದಂತೆ ಕ್ರಮ ಕೈಗೊಳ್ಳಬೇಕು. ಹೋಟೆಲ್ ಮತ್ತು ಬೇಕರಿಗಳ ಮಾಲೀಕರು, ಬಾರ್ ಅಂಡ್ ರೆಸ್ಟೋರೆಂಟುಗಳ ಮಾಲೀಕರು ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವಮೂರ್ತಿ, ಸಾರ್ವಜನಿಕ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಅನಿಲ್ಕುಮಾರ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಕೌಶಲ್ಯಾಭಿವೃದ್ಧಿ ತಜ್ಞ ಮಂಜುನಾಥ್, ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ಬಾಲಕೃಷ್ಣ, ಸುಹೇಲ್ಅಹ್ಮದ್, ಅಪ್ಸರ್ಪಾಷಾ, ಲಕ್ಷ್ಮಯ್ಯ, ವೆಂಕಟಸ್ವಾಮಿ, ರಮೇಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾದೂರು ಗ್ರಾಮದ ಹೊಲಗಳಿಗೆ ಕೀಟಕೋಟಲೆಗಳು

0

ತಾಲ್ಲೂಕಿನ ತಾದೂರು ಗ್ರಾಮದ ಹೊಲಗಳಿಗೆ ಬುಧವಾರ ಕುರುಬೂರಿನ ರೇಷ್ಮೆ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಕೀಟ ಶಾಸ್ತ್ರಜ್ಞರು ಭೇಟಿ ನೀಡಿ ಕೀಟಗಳಿಂದಾದ ಅನಾಹುತವನ್ನು ಪರಿಶೀಲಿಸಿದರು.
ತಾದೂರು ಗ್ರಾಮದ ರಾಮಾಂಜಿನಪ್ಪ ಅವರ ಹೊಲ ಹಾಗೂ ಸುತ್ತಮುತ್ತಲಿನ ಹೊಲಗಳಿಗೆ ಹುಳಗಳ ಧಾಳಿ ನಡೆದಿದ್ದು, ರಾಗಿ, ಅವರೆ, ಜೋಳದ ಎಲೆಗಳನ್ನೆಲ್ಲಾ ಹುಳುಗಳು ಕಬಳಿಸಿ ಅಲ್ಲೇ ಕೋಶಾವಸ್ಥೆಯನ್ನು ಕೆಲವು ತಲುಪಿದ್ದರೆ, ಕೆಲವಂತೂ ಪತಂಗಗಳಾಗಿವೆ.
ಕೀಟಶಾಸ್ತ್ರಜ್ಞರಾದ ಡಾ.ಸುಮಿತ್ರಮ್ಮ, ಡಾ.ವಿದ್ಯಾಮೂಲೆಮನಿ, ಡಾ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಫಾಸ್ಪನಾಪಾಸ್ ಅಥವಾ ಕ್ಲೋರೋಪೈರಿಪಾಸ್ 2 ಮಿಲಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಕೀಟಗಳ ಹತೋಟಿ ಸಾಧ್ಯ ಎಂದು ಅವರು ಸಲಹೆ ನೀಡಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೃಷಿ ತಾಂತ್ರಿಕ ಅಧಿಕಾರಿ ಶೋಭಾಪಾಟೀಲ್, ರೈತರಾದ ರಾಮಾಂಜಿನಪ್ಪ, ಕೃಷ್ಣಪ್ಪ, ಮುನಿರಾಜು, ರೈತ ಅನುವುಗಾರರಾದ ಬೂದಾಳ ರಾಮಾಂಜಿ, ಮುತ್ತೂರು ಗಜೇಂದ್ರ, ಸಾದಹಳ್ಳಿ ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು.

ಗಂಜಿಗುಂಟೆಯಲ್ಲಿ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮ

0

ತಾಲ್ಲೂಕಿನ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಬರಗಾಲದ ಪ್ರಯುಕ್ತ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಜಿಲ್ಲೆಯಲ್ಲಿ ಬರಗಾಲವಿದ್ದು ಕುರಿ ಮೇಕೆ ಹಾಗೂ ದನಕರುಗಳಿಗೆ ಮೇವು ಸಿಗದೇ ಅತಿ ಹೆಚ್ಚು ಹಣ ಕೊಟ್ಟು ಖಾಸಗಿಯಾಗಿ ಮೇವು ಕೊಂಡುಕೊಳ್ಳಲು ಶಕ್ತಿಯಿಲ್ಲದೆ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಪ್ರಗತಿಪರ ಕುರಿ ಸಾಕಾಣಿಕಾದಾರರ ಸಹಕಾರ ಸಂಘದ ಸದಸ್ಯರುಗಳಿಗೆ ಮತ್ತು ಮೇವು ಬೆಳೆಯುವ ಅರ್ಹರಿಗೆ ಅಗಸೆ, ಜೋಳ, ಲೂಸನ್, ಅಲಸಂಧಿ ಬೀಜಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ’ ಎಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಅಗಿತ್ತು.
ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ.ಶಿವರಾಂ, ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕುರಿ ಉಣ್ಣೆ ನಿಗಮದ ಯೋಜನಾಧಿಕಾರಿ ಸೀತಾರಾಂ, ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ಯಾವಮ್ಮ, ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ ಚಂದ್ರಶೇಖರರೆಡ್ಡಿ, ನರಸಮ್ಮ, ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ಶಿವಣ್ಣ, ದ್ಯಾವಪ್ಪ, ಪಶುವೈದ್ಯಾಧಿಕಾರಿ ಡಾ.ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಆಚರಣೆ

0

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ(ಬಾಬಯ್ಯನವರ)ಹಬ್ಬ ಶ್ರಧ್ಧಾಭಕ್ತಿಯಿಂದ ಪಟ್ಟಣದಲ್ಲಿ ಆಚರಿಸಲಾಯಿತು.
ವಿಶೇಷ ಪ್ರಾರ್ಥನೆ ನಡೆಸಿ ಪಾನಕ ಮತ್ತು ಪ್ರಸಾದಗಳನ್ನು ಬರುವ ಭಕ್ತಾಧಿಗಳಿಗೆ ಹಂಚಿಕೆ ಮಾಡಿದರು. ಕಳೆದ ೬೦ ವರ್ಷಗಳಿಂದ ಕಳೆಗುಂದಿದ್ದ ಮೊಹರಂ ಹಬ್ಬಗೆ ಈ ಬಾರಿ ವಿಶೇಷ ಮೆರುಗು ನೀಡಲಾಗಿತ್ತು. ಈ ಸಂದರ್ಭದಲ್ಲಿ ಮುಜಾವರ್ ಅಬ್ದುಲ್ ರಶೀದ್ ಮತ್ತು ಮುಜಾವರ್ ನೌಷಾದ್(ಅಬ್ದುಲ್ ವಹಾಬ್) ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಿ ಮೊಹರಂ ಮಾಸದ ೧೦ನೇ ದಿನದಂದು ಆಶುರಾ ಕಾರ್ಯಕ್ರಮವನ್ನು ನೆರವೇರಿಸಿ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರು ಹುತಾತ್ಮರಾದ ಚರಿತ್ರೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಸಂಪ್ರದಾಯದಂತೆ ಮೊಹರಂ ಆಚರಣೆಗೆ ತೆರೆ ಎಳೆಯಲಾಯಿತು.
ಮಹಬೂಬ್ ನಗರದಲ್ಲಿ ಕಳೆದ ೧೦ ದಿನಗಳಿಂದ ಹಝರತ್ ಬಾರಾಇಮಾಂಗಳ ಹಸ್ತದ ಗುರುತಗಳನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಗ್ನಿಕುಂಡವನ್ನು ಮುಚ್ಚಿ ಅದರ ಮೇಲೆ ದಾಳಿಂಬೆ ಗಳನ್ನು ನೆಟ್ಟು ಪಂಜಗಳೊಂದಿಗೆ ಮೆರವಣಿಗೆ ನಡೆಸಿ ಇಲ್ಲಿನ ಹಝರತ್ ಅಮೀರ್ ಬಾಬಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪಂಜಗಳನ್ನು ಶುಧ್ದವಾದ ನೀರಿನಿಂದ ಶುಚಿಗೊಳಿಸಿ ಭದ್ರಗೊಳಿಸಿದರು.
‘ನಮ್ಮ ತಾತಾ ದಿ.ಮುಜಾವರ್ ಮಹಡಿ ಅಬ್ದುಲ್ ವಹಾಬ್ ಅವರ ಕಾಲದಿಂದಲೂ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರ ಸ್ಮರಣಾರ್ಥ ಮೊಹರಂ ಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಈ ಬಾರಿ ನಾಗರಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ವರ್ಷವು ಸಹ ವಿಜೃಂಭಣೆಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುವ ಮೂಲಕ ಸಂಪ್ರದಾಯವನ್ನು ಮುಂದುವರೆಸುತ್ತೇವೆ’ ಎಂದು ಮುಜಾವರ್ ಅಬ್ದುಲ್ ರಶೀದ್ ಹೇಳಿದರು.
ಈ ಸಂದರ್ಭದಲ್ಲಿ ಮುಜಾವರ್ ದಸ್ತಗೀರ್, ಮೊಹದೀನ್, ಅತೀಖ್, ಅಬ್ದುಲ್ ವಹಾಬ್, ಅಬ್ದುಲ್ ರಝಾಖ್, ಅಮೀರ್ ಪಾಷ, ಅಯೂಬ್, ಸಾಧಿಕ್ ಪಾಷ, ಶನ್ನು ಮತ್ತಿತರರು ಹಾಜರಿದ್ದರು.
[images cols=”five” lightbox=”true”]
[image link=”2114″ image=”2114″]
[image link=”2115″ image=”2115″]
[image link=”2116″ image=”2116″]
[image link=”2117″ image=”2117″]
[image link=”2118″ image=”2118″]
[/images]

ನೆಹರೂ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟ

0

ತಾಲ್ಲೂಕಿನ ಜಯಂತಿ ಗ್ರಾಮದ ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಫಲಿತಾಂಶ:
ಬಾಲಕರ 100 ಮೀಟರ್:
ಸುರೇಂದ್ರ(ಪ್ರಥಮ), ಶಾಹಿದ್ ಅಫ್ರಿದಿ(ದ್ವಿತೀಯ), ನಾಗರಾಜ್(ತೃತೀಯ)
ಬಾಲಕಿಯರ 100 ಮೀಟರ್:
ಜಿ.ಬಿ.ಭವಾನಿ(ಪ್ರಥಮ), ಎಂ.ಸೌಮ್ಯ(ದ್ವಿತೀಯ), ಎಂ.ಗೌತಮಿ(ತೃತೀಯ)
ಬಾಲಕರ 200 ಮೀಟರ್:
ಸುರೇಂದ್ರ(ಪ್ರಥಮ), ಮೊಹಮ್ಮದ್ ಸಾಗರ್ಪಾಷ(ದ್ವಿತೀಯ), ಜಯರಾಮ್(ತೃತೀಯ)
ಬಾಲಕಿಯರ 200 ಮೀಟರ್:
ಜಿ.ಬಿ.ಭವಾನಿ(ಪ್ರಥಮ), ಎಂ.ಸೌಮ್ಯ(ದ್ವಿತೀಯ), ಎಂ.ಗೌತಮಿ(ತೃತೀಯ)
ಬಾಲಕರ 5000 ಮೀಟರ್:
ನಾರಾಯಣಸ್ವಾಮಿ(ಪ್ರಥಮ), ಭರತ್(ದ್ವಿತೀಯ), ಲಕ್ಷ್ಮೀನಾರಾಯಣ(ತೃತೀಯ)
ಬಾಲಕಿಯರ 1500 ಮೀಟರ್:
ಜಿ.ಸಿ.ಅನೀತಾ(ಪ್ರಥಮ), ಸುವರ್ಣ(ದ್ವಿತೀಯ), ಅರ್ಚನಾ(ತೃತೀಯ)
ಕ್ರೀಡಾಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು

0

ಗ್ರಾಮೀಣ ಪ್ರದೇಶಗಳು ಸ್ವಚ್ಛವಾಗಿದ್ದರೆ ಅನಾರೋಗ್ಯ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಗಂಜಿಗುಂಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚೊಕ್ಕನಹಳ್ಳಿಮೂರ್ತಿ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳು ಸ್ವಚ್ಚವಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಸಾಕಷ್ಟು ಅನುಧಾನಗಳನ್ನು ಬಿಡುಗಡೆ ಮಾಡುತ್ತಿದೆ. ನರೇಗಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮುಖಾಂತರ ಹಳ್ಳಿಗಳ ಸ್ವಚ್ಛತೆಯನ್ನು ಕಾಪಾಡಲು ಒತ್ತು ನೀಡಲಾಗುತ್ತಿದೆ ಎಂದರು.
ಕುಟುಂಬಕ್ಕೊಂದು ಶೌಚಾಲಯ ನಿರ್ಮಾಣ, ಚರಂಡಿಗಳ ನಿರ್ಮಾಣ, ತೋಟಗಳಲ್ಲಿ ಬದುಗಳ ನಿರ್ಮಾಣ, ದನದ ಕೊಟ್ಟಿಗೆಗಳ ನಿರ್ಮಾಣ ಸೇರಿದಂತೆ ಹಲವು ಉದ್ದೇಶಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಆಸ್ಪತ್ರೆಯ ಆವರಣವನ್ನು ಸ್ವಚ್ಚಗೊಳಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ವೀರಭದ್ರಯ್ಯ, ಮುಖಂಡರಾದ ಚಂದ್ರಶೇಖರ್‌ರೆಡ್ಡಿ, ವೆಂಕಟೇಶ್, ಮುಖ್ಯಶಿಕ್ಷಕ ಶ್ರೀನಿವಾಸ್, ನಾಗರಾಜು, ವೆಂಕಟರಾಮಪ್ಪ ಮತ್ತಿತರರು ಹಾಜರಿದ್ದರು.

ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ

0

ಡಿ.ವೈ.ಎಫ್.ಐ. ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಹಳ್ಳಿ ಗ್ರಾಮದ ಬಳಿಯಲ್ಲಿ ಚಿಂತಾಮಣಿ ಬಾಗೇಪಲ್ಲಿ ಕಡೆಗಳಿಂದ ಬರುತ್ತಿದ್ದ ಸಾರಿಗೆ ಬಸ್ಸುಗಳನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಸಹ ತಾಲ್ಲೂಕಿನ ಗಂಗಹಳ್ಳಿ, ಬಾಳೇಗೌಡನಹಳ್ಳಿ, ಕಾಚಹಳ್ಳಿ, ಸೇರಿದಂತೆ ಹಲವು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಭಾಗದಿಂದ ಶಿಡ್ಲಘಟ್ಟ, ಚಿಂತಾಮಣಿ, ಕಡೆಗಳಿಗೆ ಶಾಲಾ ಕಾಲೇಜುಗಳಿಗೆ ವಿಧ್ಯಾಭ್ಯಾಸಕ್ಕಾಗಿ ಹೋಗುವಂತಹ ವಿಧ್ಯಾರ್ಥಿಗಳು ಶಾಲೆಗಳನ್ನು ಬಿಟ್ಟು ಕೂಲಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಇಲಾಖೆಯ ಅಧಿಕಾರಿಗಳೆ ಕಾರಣ. ಈ ಭಾಗದ ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವವರೆಗೂ ಬಸ್ಸುಗಳನ್ನು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಿವಪ್ರಸಾದ್ ಬೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಚರ್ಚೆ ನಡೆಸಿದ ನಂತರ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಡಿ.ವೈ.ಎಫ್.ಐ. ಸಂಘಟನೆಯ ಪದಾಧಿಕಾರಿಗಳಾದ ಕುಂದಲಗುರ್ಕಿ ಮುನೀಂದ್ರ, ಲಕ್ಷ್ಮೀದೇವಮ್ಮ, ವೆಂಕಟೇಶ್, ಸದಾನಂದ, ರಾಜೇಂದ್ರ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ

0

ಪಟ್ಟಣದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ನುರಿತ ವಿಷಯ ತಜ್ಞರಿಂದ ಎರಡು ದಿನಗಳ ವಿಶೇಷ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿರವರು ಎಲ್ಲಾ ಶಿಕ್ಷಕರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ತಮ್ಮ ಕರ್ತವ್ಯಗಳಿಗೆ ಯಾವುದೇ ರೀತಿಯಲ್ಲಿಯೂ ಚ್ಯುತಿತರದೆ ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಕಾರ್ಯಾಗಾರದ ಸದುಪಯೋಗಪಡೆದುಕೊಂಡು ವಿದ್ಯಾರ್ಥಿಗಳ ಜ್ಞಾನವಿಕಸನಗೊಳಿಸುವುದರಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ವಿಷಯ ಪರಿವೀಕ್ಷಕರಾದ ಉಸ್ಮಾನ್ ಸಾಬ್, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ವೆಂಕಟಸುಬ್ಬರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯಶಿಕ್ಷಕಿ ವಿ. ಸೀತಾಲಕ್ಷ್ಮಿ, ವಿಷಯ ಪರಿಣಿತರಾದ ಪ್ರೊ. ವೇಣುಗೋಪಾಲ್, ಪ್ರೊ. ಅರುಣಾಚಲಂ, ಪ್ರೊ. ಅಶ್ರಫ್ ಅಲಿ, ಪ್ರೊ. ಚಂದ್ರಿಕಾ, ವಿಜ್ಞಾನ ಶಿಕ್ಷಕ ಬಾಲಗಂಗಾಧರ ತಿಲಕ್‌, ಸುಂದರನ್‌, ಶಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುಮಧುರವಿಲ್ಲದ ಗಾಯಕರ ಬದುಕು

0

ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾದ ಘಂಟಸಾಲ ಅವರನ್ನು ಅನುಕರಿಸುವವರು ವಿರಳ. ಆದರೆ ಪಟ್ಟಣದಲ್ಲಿ ಮಂಗಳವಾರ ಹಾರ್ಮೋನಿಯಂ ನುಡಿಸುತ್ತಾ ಘಂಟಸಾಲ ಅವರ ಮಧುರ ಗೀತೆಗಳನ್ನು ಹಾಡುತ್ತಾ ಸಾಗಿದ್ದ ವ್ಯಕ್ತಿಯೊಬ್ಬರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಮಧುರ ಗೀತೆಗಳ ಸೊಲ್ಲನ್ನು ತಿಳಿದಿದ್ದ ಹಿರಿಯರು ಆ ದನಿಗೆ ಕಿವಿಯಾಗಿ ಇದ್ದ ಕೆಲಸವನ್ನು ಬಿಟ್ಟು ಅವರ ಹತ್ತಿರ ನಿಂತರೆ, ಯುವಕರು ಕೂಡ ಸುಸ್ವರಕ್ಕೆ ಮಾರುಹೋಗಿ ಇವರ ಬಳಿ ಜಮಾಯಿಸಿದ್ದರು.
ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಮಂಡಲ್‌ನ ಕಮ್ಮದೂರಿನ ವೆಂಕಟೇಶ್ವರ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ತನ್ನ ಹಾಡುವ ಕಲೆಯಿಂದ ಭಿಕ್ಷಾಟನೆ ನಡೆಸುತ್ತಾ ಊರೂರು ಸುತ್ತುತ್ತಾ ಶಿಡ್ಲಘಟ್ಟಕ್ಕೆ ಬಂದಿದ್ದಾರೆ. ಗಂಡನೊಂದಿಗೆ ಹೆಂಡತಿಯೂ ಸುಸ್ವರದಿಂದ ಗತಕಾಲದ ಸುಂದರ ಗೀತೆಗಳನ್ನು ಹಾಡುತ್ತಾ ಘಂಟಸಾಲರನ್ನು ನೆನಪಿಸುತ್ತಿದ್ದಾರೆ. ಪಟ್ಟಣದ ಜನರು ಘಂಟಸಾಲ ಅವರ ಕಂಚು ಕಂಠದ ಎತ್ತರದ ಧ್ವನಿಯ ಮಾಧುರ್ಯದ ಹಾಡುಗಳನ್ನು ಈಗ ಪುನಃ ಸವಿಯುವಂತಾಗಿದೆ.
ಸತ್ಯ ಹರಿಶ್ಚಂದ್ರ ಚಿತ್ರದ ಕ್ಲಿಷ್ಟವಾದ ಹಾಡೆಂದೇ ಪರಿಗಣಿತವಾದ ‘ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ, ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ, ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೆ..’, ಗೃಹಲಕ್ಷ್ಮಿಯಾದ ಮನೆಯೊಡತಿಯ ಕುರಿತು ಹಾಡಿರುವ ದೇವತಾ ಚಿತ್ರದ ‘ಇಲ್ಲಾಲೇ ಈ ಜಗತಿಕಿ ಜೀವನ ಜ್ಯೋತಿ’, ಜೀವನದುದ್ದಕ್ಕೂ ಬಂಧಗಳನ್ನು ಹೊತ್ತರೂ ಸತ್ತ ನಂತರ ಹೊರುವವರಿರರು ಎಂಬ ವಾಸ್ತವ ಸತ್ಯ ಹೇಳುವ ‘ಈ ಜೀವನ ತರಂಗಾಲಲೊ, ಆ ದೇವುನಿ ಚದುರಂಗಂಲೊ, ಎವರಿಕಿ ಎವರು ಸ್ವಂತಮು, ಎಂಥವರಿಕೀ ಬಂಧಮು’ ಎಂಬ ಸಾರ್ವಕಾಲಿಕ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಲೆಯ ದೇವತೆ ಬಡವಳು ಎಂಬ ಆಡು ಮಾತಿನಂತೆ ಉತ್ತಮ ಕಂಠ ಹೊಂದಿದ ವೆಂಕಟೇಶ್ವರ ದಂಪತಿಗಳದ್ದು ಕಷ್ಟದ ಬದುಕು. ಇರುವ ಮೂರು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆಯಾದರೆ ಮತ್ತೊಬ್ಬ ಕಿವುಡ. ‘ನಮ್ಮ ತಾತನ ಕಾಲದಿಂದಲೂ ಕಲೆಯನ್ನೇ ನಂಬಿದ್ದೇವೆ. ಹಿಂದೆ ಹರಿಕಥೆ ನಡೆಸುತ್ತಿದ್ದೆವು, ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದೆವು. ಆದರೆ ಈಗ ಅವುಗಳನ್ನು ಆಸ್ವಾದಿಸುವವರು ಪೋಷಿಸುವವರು ಕಡಿಮೆಯಾಗಿದ್ದಾರೆ. ಜಮೀನು ಇಲ್ಲದ ಕಾರಣ ನಾವು ತಿಳಿದ ವಿದ್ಯೆಯನ್ನೇ ಅವಲಂಬಿಸಿ ಭಿಕ್ಷೆಯ ಮೂಲಕ ಬದುಕುವಂತಾಗಿದೆ. ಹಾರ್ಮೋನಿಯೇ ನಮ್ಮ ಆಸ್ತಿ’ ಎನ್ನುತ್ತಾರೆ ವೆಂಕಟೇಶ್ವರ ದಂಪತಿಗಳು.

ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಐದು ನೂರು ವರ್ಷಗಳ ಇತಿಹಾಸವಿರುವ ಪಾಳೇಗಾರರ ವಂಶಸ್ಥರು

0

ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಚಿಕ್ಕಬಳ್ಳಾಪುರದ ಪಾಳೇಗಾರರ ವಂಶಸ್ಥರು ತಮ್ಮ ಗತ ಇತಿಹಾಸದ ನೆನಪುಗಳೊಂದಿಗೆ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.

ಪಾಳೇಪಟ್ಟಿನ ನೆನಪಿಗಾಗಿ ಆಯುಧಗಳಾದ ಭರ್ಜಿ, ಕಡ್ಗ, ಈಟಿ ಮತ್ತು ಗುರಾಣಿ, ಕಬ್ಬಿಣದ ಪೆಟ್ಟಿಗೆ, ಲೆಕ್ಕಬರೆಯುವ ಆಸನ, ಹಳೆ ಪಾತ್ರೆ ಪಡಗಗಳು ಮತ್ತು ಕೃಷಿ ಉಪಕರಣಗಳನ್ನು ಉಳಿಸಿಕೊಂಡಿದ್ದಾರೆ. ಕಾಲದ ಹೊಡೆತಕ್ಕೆ ಸಿಕ್ಕ ಹಳೆಯ ಮನೆಯನ್ನು ಕೊಂಚ ಆಧುನೀಕರಿಸಿಕೊಂಡಿದ್ದಾರೆ. ಎಂದಿನ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ಇವರಿಗೆ ತಮ್ಮ ಗತ ಇತಿಹಾಸದ ನೆನಪು ಮರುಕಳಿಸುವುದು ವರ್ಷಕ್ಕೊಮ್ಮೆ ಮನೆಯಲ್ಲಿರುವ ಕೆಲವೇ ಆಯುಧಗಳನ್ನು ಪೂಜೆಗೆ ತೆಗೆದಾಗ ಮಾತ್ರ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.

‘೧೪೭೮ರಲ್ಲಿ ಈ ಮನೆತನದ ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಂದಿಗೆ ಈಗ ಚಿಕ್ಕಬಳ್ಳಾಪುರ ಪಟ್ಟಣವಿರುವ ಸ್ಥಳದಲ್ಲಿ ಹಿಂದೆ ಇದ್ದ ಕೋಡಿಮಂಚಹಳ್ಳಿ ಗ್ರಾಮದಲ್ಲಿ ಕೋಟೆ ಕಟ್ಟಿ ಪೇಟೆಯನ್ನು ಸ್ಥಾಪಿಸಿದರಂತೆ. ಈ ಮನೆತನದವರು ಶಿಡ್ಲಘಟ್ಟವನ್ನು ಖರೀದಿಸುವ ಮೂಲಕ ತಮ್ಮ ಪಾಳೇಪಟ್ಟಿನ ವ್ಯಾಪ್ತಿಯನ್ನು ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ ಹಾಗೂ ಇಟ್ಕಲ್ ದುರ್ಗಗಳಲ್ಲಿ ಕೋಟೆಯನ್ನು ಕಟ್ಟುವ ಮೂಲಕ ಪಾಳೇಪಟ್ಟನ್ನು ಭದ್ರಪಡಿಸಿಕೊಂಡರು. ಮರಿಗೌಡ, ದೊಡ್ಡಭೈರೇಗೌಡ, ರಂಗಪ್ಪಗೌಡ, ಜೋಗಿಭೈರೇಗೌಡ ಮುಂತಾದವರು ಆಳ್ವಿಕೆಯನ್ನು ನಡೆಸಿದರು. ಬೈಚೇಗೌಡನ(೧೭೦೫-–೧೭೨೧) ಆಳ್ವಿಕೆಯಲ್ಲಿ ಮೈಸೂರು ಅರಸರ ಮುತ್ತಿಗೆಯನ್ನು ಮರಾಠರ ಸಹಾಯದಿಂದ ಹಿಮ್ಮೆಟ್ಟಿಸಲಾಯಿತು.
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ

೧೭೬೨ರಲ್ಲಿ ಹೈದರಾಲಿಯು ಚಿಕ್ಕಬಳ್ಳಾಪುರದ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಕಾಲ ಹರಸಾಹಸ ಮಾಡಿದರೂ ಸ್ವಾಧೀನಪಡಿಸಿಕೊಳ್ಳಲಾಗದೇ ಐದು ಲಕ್ಷ ಪಗೋಡವನ್ನು ಪೊಗದಿಯಾಗಿ ಪಡೆದು ಮುತ್ತಿಗೆಯನ್ನು ಹಿಂಪಡೆಯಲಾಯಿತು. ಹೈದರಾಲಿಯು ಸೈನ್ಯದೊಂದಿಗೆ ತೆರಳಿದೊಡನೆ ಪಾಳೇಗಾರ ಚಿಕ್ಕಪ್ಪಗೌಡ ಸಹಾಯಕ್ಕಾಗಿ ಮರಾಠ ಸೈನ್ಯವನ್ನು ಕರೆಸಿಕೊಂಡ. ಈ ಬೆಳವಣಿಗೆಯನ್ನು ಸಹಿಸದ ಹೈದರಾಲಿ ತಕ್ಷಣವೇ ಮರುಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡನು. ಅದರ ಬೆನ್ನಲ್ಲೇ ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ, ಇಟ್ಕಲ್‌ದುರ್ಗ ಹಾಗೂ ಕೋಟೆಕೊಂಡಗಳನ್ನೂ ಸ್ವಾಧೀನಪಡಿಸಿಕೊಂಡನು. ಚಿಕ್ಕಬಳ್ಳಾಪುರ ಪಾಳೇಗಾರ ಚಿಕ್ಕಪ್ಪಗೌಡ ಮತ್ತವನ ಕುಟುಂಬವನ್ನು ಬಂಧಿಸಿ ಬೆಂಗಳೂರಿನ ಸೆರೆಮನೆಯಲ್ಲಿಡಲಾಯಿತು.
ಸ್ವಲ್ಪಕಾಲ ಗ್ರಹಣಗ್ರಸ್ಥವಾಗಿದ್ದ ಈ ಪಾಳೇಪಟ್ಟಿಗೆ ಲಾರ್ಡ್ ಕಾರ್ನ್‌ವಾಲೀಸನು ನಾರಾಯಣಗೌಡ ಎಂಬುವರನ್ನು ನೇಮಿಸಿ ಜೀವಂತಿಕೆ ನೀಡಿದನು. ಆದರೆ ಇದರಿಂದ ವಿಚಲಿತನಾದ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಚಿಕ್ಕಬಳ್ಳಾಪುರವನ್ನು ತನ್ನ ಕೈವಶಮಾಡಿಕೊಂಡನು. ೧೭೯೧ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡ ನಂತರ ಸ್ವಲ್ಪಕಾಲ ಅದರ ನಿಯಂತ್ರಣವನ್ನು ಪಾಳೇಗಾರರು ಹೊಂದಿದ್ದರು. ಆದರೆ ಟಿಪ್ಪು ಮತ್ತು ಬ್ರಿಟಿಷರ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಚಿಕ್ಕಬಳ್ಳಾಪುರ ಪಾಳೇಗಾರರು ಅಧಿಕಾರವಿಹೀನರಾದರು. ಇದರೊಂದಿಗೆ ಚಿಕ್ಕಬಳ್ಳಾಪುರ ಪಾಳೇಪಟ್ಟಿನ ಅವಸಾನವಾಯಿತು’ ಎಂದು ಇತಿಹಾಸಕಾರ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.
‘ಪಾಳೇಗಾರ ಅಣ್ಣೀಗೌಡ(೧೬೮೭-–೧೭೦೫) ತನ್ನ ಆಳ್ವಿಕೆಯ ಕಾಲದಲ್ಲಿ ಶಿಡ್ಲಘಟ್ಟವನ್ನು ಖರೀದಿಸಿ ಕೋಟೆ ಪೇಟೆಗಳನ್ನು ಕಟ್ಟಿಸಿದ್ದ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಬಳಿಯ ೧೬೩೧ರ ಶಾಸನ ಇಮ್ಮಡಿ ಬೈಚೇಗೌಡನು ದತ್ತಿ ಬಿಟ್ಟ ವಿಚಾರವನ್ನು ತಿಳಿಸಿದರೆ, ತಾಲ್ಲೂಕಿನ ಮಳ್ಳೂರು ಮತ್ತು ಮೇಲೂರಿನ ಶಾಸನಗಳು ೧೬೯೭ರಲ್ಲಿ ಗೋಪಾಲಗೌಡರು ದತ್ತಿ ಬಿಟ್ಟ ಅಂಶವನ್ನು ತಿಳಿಸುತ್ತದೆ’ ಎಂದು ಅವರು ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.

‘ನಾವೀಗ ರೈತರು. ಪಾಳೇಗಾರಿಕೆ ಒಂದು ಇತಿಹಾಸವಷ್ಟೆ. ಮನೆಯಲ್ಲಿ ನಮ್ಮ ಮುತ್ತಾತ ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣನವರ ಕಪ್ಪು ಬಿಳುಪು ಚಿತ್ರವಿದೆ. ಕೆಲವು ಆಯುಧಗಳಿವೆ. ಅವನ್ನು ವರ್ಷಕ್ಕೊಮ್ಮೆ ಪೂಜಿಸುತ್ತೇವೆ. ಹಳೆಯ ಮನೆಯು ಶಿಥಿಲಗೊಳ್ಳುತ್ತಿದ್ದಂತೆ ದುರಸ್ತಿ ಮಾಡಿದ್ದೇವೆ. ನಮ್ಮ ಸಂಬಂಧಿಕರು ಮಾಗಡಿ ಬಳಿಯ ಹುಳಿಕಲ್‌ನಲ್ಲಿ ವಾಸವಿದ್ದು ಅವರಿನ್ನೂ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ಎಸ್.ದೇವಗಾನಹಳ್ಳಿಯಲ್ಲೂ ನಮ್ಮ ಸಂಬಂಧಿಕರಿದ್ದಾರೆ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲಿ ಹಳೆಯ ಅನೇಕ ವಸ್ತುಗಳನ್ನು ಉಳಿಸಿಕೊಳ್ಳಲಾಗಿಲ್ಲ’ ಎಂದು ಮಲ್ಲಿಶೆಟ್ಟಿಪುರದ ಮಂಜುನಾಥ್ ಹೇಳುತ್ತಾರೆ.
– ಡಿ.ಜಿ.ಮಲ್ಲಿಕಾರ್ಜುನ.

ಶಾಶ್ವತ ನೀರಾವರಿ ಹೋರಾಟಕ್ಕೆ ಅಣ್ಣಾ ಹಜಾರೆ

0

ಬರಪೀಡಿತ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಭಾಗಿಯಾಗುವಂತೆ ಒಪ್ಪಿಸುವಲ್ಲಿ ತಾಲ್ಲೂಕಿನ ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಸದಸ್ಯರು ಸಫಲರಾಗಿದ್ದಾರೆ.
ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ 52 ಮಂದಿ ರೈತರು ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್‌ ಬ್ಯಾಂಕ್‌ ನೆರವಿನಿಂದ ಮಹಾರಾಷ್ಟ್ರಕ್ಕೆ ಏಳು ದಿನಗಳ ಕಾಲ ಹೆಚ್ಚಿನ ತಿಳುವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದಾರೆ. ಅಣ್ಣಾ ಹಜಾರೆ ಅವರ ಸ್ವಗ್ರಾಮ ರಾಲೆಗಾವ್‌ ಸಿದ್ದಿಗೆ ಹೋಗಿ ಅವರನ್ನು ಭೇಟಿ ಮಾಡಿದ ರೈತರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರಪೀಡಿತ ಆರು ಜಿಲ್ಲೆಗಳ ಜನರ ನೀರಿನ ಬವಣೆಯನ್ನು ವಿವರಿಸಿದ್ದಾರೆ. ಕುಡಿಯಲು ಮತ್ತು ವ್ಯವಸಾಯಕ್ಕೆ 1500 ಅಡಿ ಆಳದ ನೀರನ್ನು ಬಳಸುತ್ತಾ ಫ್ಲೋರೈಡ್‌ ಅಂಶದಿಂದ ಖಾಯಿಲೆಗಳು ಹರಡುತ್ತಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪರಮಶಿವಯ್ಯನವರ ವರದಿ ಆಧಾರಿತ ಯೋಜನೆಗಾಗಿ ನಾವೆಲ್ಲಾ ಹೋರಾಡುತ್ತಿದ್ದು ತಾವು ಕೂಡ ಭಾಗಿಯಾಗಿ ಶಕ್ತಿ ತುಂಬಲು ಮನವಿಯನ್ನು ಸಲ್ಲಿಸಿದರು. ತಕ್ಷಣವೇ ರೈತರ ಮನವಿಗೆ ಸ್ಪಂದಿಸಿದ ಅಣ್ಣಾ ಹಜಾರೆ ಅವರು ನಿಮ್ಮ ಹೋರಾಟದಲ್ಲಿ ಭಾಗಿಯಾಗುವೆ. ದಿನಾಂಕವನ್ನು ನಿಗದಿಪಡಿಸಿ ಎಂದು ತಿಳಿಸಿದ್ದಾರೆ.
ರಾಲೆಗಾವ್‌ಸಿದ್ದಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಡಿರುವ ನೀರಿನ ಸದ್ಬಳಕೆ, ನಿರ್ಮಿಸಿರುವ ಚೆಕ್‌ ಡ್ಯಾಮ್‌ಗಳು, ರೀಸೈಕಲ್‌ ಮಾದರಿ ಪ್ರಯೋಗಗಳಿಂದ ಅಂತರ್ಜಲ ವೃದ್ಧಿಸಿರುವ ಬಗ್ಗೆ ಹಾಗೂ ಶ್ರಮದಾನದ ಮೂಲಕ ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಂಡಿರುವ ಮಾಹಿತಿಗಳನ್ನು ಪಡೆದು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
‘ಅಧ್ಯಯನ ಪ್ರವಾಸದಲ್ಲಿ ನಾವು ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಅವರನ್ನು ನೀರಾವರಿ ಹೋರಾಟಕ್ಕೆ ಆಹ್ವಾನಿಸಿದೆವು. ಪೂನಾದ ಎನ್‌.ಆರ್‌.ಸಿ ಸಂಶೋಧನಾ ಕೇಂದ್ರದಲ್ಲಿ ನಮ್ಮ ಪ್ರದೇಶಕ್ಕೆ ಒಗ್ಗುವ 6 ತಳಿಗಳ ಬಗ್ಗೆ ತಿಳಿದುಕೊಂಡೆವು. ನಾಸಿಕ್‌ನಲ್ಲಿ ಪ್ರಗತಿಪರ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದೆವು. ಮುರ್ರಾ ತಳಿಯ ಎಮ್ಮೆಗಳ ಸಾಕಾಣಿಕಾ ಕೇಂದ್ರಕ್ಕೂ ಭೇಟಿ ನೀಡಿದ್ದೆವು’ ಎಂದು ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ನಾಗೇಂದ್ರಪ್ರಸಾದ್‌ ತಿಳಿಸಿದರು.
ಅಧ್ಯಯನ ಪ್ರವಾಸದಲ್ಲಿ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ನಾಗರಾಜ್‌, ಶ್ರೀನಿವಾಸ್‌, ಕೆಂಪೇಗೌಡ, ಮುರಳಿ, ಗೋಪಾಲಪ್ಪ, ಪಿಳ್ಳವೆಂಕಟಶಾಮಣ್ಣ, ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಜನಾರ್ಧನರೆಡ್ಡಿ, ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ರವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಆರೋಗ್ಯಕ್ಕಾಗಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕು

0

ಕಾನೂನಿನ ಭಯದಿಂದ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆರೋಗ್ಯಕ್ಕಾಗಿ, ಗೌರವಕ್ಕಾಗಿ ಮತ್ತು ಮಾದರಿ ಬದುಕಿಗಾಗಿ ಗ್ರಾಮಸ್ಥರೆಲ್ಲಾ ಒಗ್ಗೂಡಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್‌ ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸ್ವಸಹಾಯ ಗುಂಪುಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳಾ ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗುವುದಲ್ಲದೆ, ಹಲವಾರು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅಂಟು ರೋಗಗಳು, ಸೋಂಕು ರೋಗಗಳು ಹರಡುವುದು ನಿಲ್ಲುತ್ತವೆ. ಜನರ ಆರೋಗ್ಯ ಉತ್ತಮಗೊಳ್ಳುವುದಲ್ಲದೆ ಹಣವೂ ಉಳಿತಾಯವಾಗುತ್ತದೆ. ಮಹಿಳೆಯರು ಒಂದೆಡೆ ಸೇರಿದಾಗ ಕಷ್ಟ ಸುಖಗಳನ್ನು ಹಂಚಿಕೊಂಡು ಪರಸ್ಪರರಿಗೆ ನೆರವಾಗಬಹುದು. ಆರ್ಥಿಕ ಸಂಬಂಧಿತ ಯೋಜನೆಗಳು ಮತ್ತು ಯೋಚನೆಗಳನ್ನು ಹಂತ ಹಂತವಾಗಿ ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ನಿರ್ವಹಣೆಗೆ ಅಗತ್ಯದ ದಿನಚರಿ ಕೈಪಿಡಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್‌, ಮುನಿವೀರಪ್ಪ, ರವಿ, ಮುನಿವೆಂಕಟಸ್ವಾಮಿ, ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಠ್ಯದ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

0

ಪಠ್ಯದ ಜ್ಞಾನದೊಂದಿಗೆ ನಡವಳಿಕೆಯಲ್ಲೂ ಪರಿಣತಿಯನ್ನು ಸಾಧಿಸುವ ತರಬೇತಿಯನ್ನು ಪಡೆಯುವುದು ಅತ್ಯವಶ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ತಿಳಿಸಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌, ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು ರೋಟರಿ ಹೈಗ್ರೌಂಡ್ಸ್‌, ಭಕ್ತರಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಸ್ಮೈಲ್‌ ಫೌಂಡೇಷನ್‌ ಸಹಯೋಗದಲ್ಲಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಪ್ರಾರಂಭಗೊಂಡ ಒಂದು ವಾರದ ರಾಷ್ಟ್ರ ಸೇವಾ ದಳದ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿರುವ ಅಂಕಪಟ್ಟಿ ಇದ್ದರೆ ಸಾಲದು, ಒಂದು ಸಮುದಾಯದ ಒಳಗೆ ಅಪೇಕ್ಷಿತವಾದ ವ್ಯಕ್ತತ್ವವಾಗಬೇಕಾದರೆ, ನಾನು ಎಂಬ ವ್ಯಕ್ತಿ ಕೇಂದ್ರದಿಂದ ನಾವು ಎಂಬ ಸಮುದಾಯ ಕೇಂದ್ರಿತ ಚಿಂತನೆ ಅಗತ್ಯವಿದೆ. ಗಾಂಧೀಜಿ, ಅಬ್ದುಲ್‌ಕಲಾಂ, ಸರ್‌.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದುದು ಈ ಕಾಳಜಿ. ಸಧೃಡ ಶರೀರಕ್ಕೆ ಬೇಕಾದುದು ಒಳ್ಳೆಯ ಆಹಾರ ಮತ್ತು ವ್ಯಾಯಾಮ. ಸಧೃಡ ಮನಸ್ಸಿಗೆ ಅಗತ್ಯವಾದುದು ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಮತ್ತು ಕಾಳಜಿಯುಳ್ಳ ಸಕಾರಾತ್ಮಕ ಆಲೋಚನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್‌.ಕಾಳಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಇಂದು ನಾಗರಾಜು, ಬಾಪು ಹೆದ್ದೂರ್‌ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೋಟೆ ಚನ್ನೇಗೌಡ, ಪ್ರೊ.ಹನುಮಂತ, ಆರ್‌.ಬಸವರಾಜು, ಪ್ರದೀಪ್‌ ರಾಧಾಕೃಷ್ಣ, ಬಾಬಾ ಸಾಹೇಬ್‌ ನದಾಫ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌

0

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಶನಿವಾರ ನಡೆದ 59 ನೇ ಕನ್ನಡ ರಾಜ್ಯೋತ್ಸವ, ಕಾರ್ಯಕ್ರಮಕ್ಕೆ ಗೈರು ಹಾಜರಾದ ಒಂಬತ್ತು ಮಂದಿ ಅಧಿಕಾರಿಗಳಿಗೆ ನೋಟೀಸ್‌ ಜಾರಿಯಾಗುವುದರೊಂದಿಗೆ ಪರ್ಯಾವಸಾನಗೊಂಡಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ ಸೆಟ್‌ ವಾದನದೊಂದಿಗೆ ಭುವನೇಶ್ವರಿಯ ಭಾವಚಿತ್ರದ ಅಲಂಕೃತ ವಾಹನದ ಮೆರವಣಿಗೆ ನಡೆಸಲಾಯಿತು. ಉಲ್ಲೂರುಪೇಟೆಯ ಮಂಜುನಾಥ್‌ ಸೈಕಲ್‌ಗೆ ಕನ್ನಡ ಕಲಾವಿದ, ಸಾಹಿತಿಗಳ ಭಾವಚಿತ್ರಗಳನ್ನೊಳಗೊಂಡ ಸ್ಥಬ್ದಚಿತ್ರವನ್ನು ಅಲಂಕರಿಸಿಕೊಂಡು ಮೆರವಣಿಗೆಯ ಮುಂಚೂಣಿಯಲ್ಲಿ ಗಮನ ಸೆಳೆದರೆ, ಆರೋಗ್ಯ ಇಲಾಖೆಯ ಸ್ಥಬ್ದ ಚಿತ್ರ ನಗು ಮಗುವಿನ ಬಗ್ಗೆ ತಿಳಿಸುತ್ತಿತ್ತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ಪುಸ್ತಕಗಳನ್ನು ಕೊಂಡು ಓದಿ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕವು ಓಡಾಡುವ ಗುಡಿಯಿದ್ದಂತೆ. ಕನ್ನಡದ ಸಾಹಿತ್ಯ ಲೋಕ ಚಿರಂತನ, ನಿತ್ಯನೂತನ ಮತ್ತು ಅಮೃತ ಸಮಾನವಾದದ್ದು. ಕನ್ನಡ ನಾಡು ನುಡಿ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ನಾಡಿಗಾಗಿ ದುಡಿದಿರುವ ಮಹನೀಯರ ಬಗ್ಗೆ ನಮ್ಮ ಮುಂದಿನ ತಲೆಮಾರಿಗೂ ತಿಳಿಸಿ ಗೌರವವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದು, ನಾಡ ಹಬ್ಬಕ್ಕೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೇರಿದ್ದ ಕನ್ನಡಾಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದರು. ಶಾಸಕರು ಮತ್ತು ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವುದಾಗಿ ಸಮಾಧಾನಗೊಳಿಸಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಪ್ರತಿಧ್ವನಿಸುವ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಶಾಸಕ ಎಂ.ರಾಜಣ್ಣ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪಿ.ಎಲ್‌.ಡಿ.ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪುರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್‌, ಅಧ್ಯಕ್ಷೆ ಮುಷ್ಠರಿ ತನ್ವೀರ್‌, ಉಪಾಧ್ಯಕ್ಷೆ ಸುಮಿತ್ರಾರಮೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್‌, ಕ.ಸಾ.ಪ ಅಧ್ಯಕ್ಷ ಕೋ.ನಾ.ಶ್ರೀನಿವಾಸ್‌, ಅಮೃತಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಟೋ ಚಾಲಕರ ಸಂಘದ ಕನ್ನಡಾಭಿಮಾನ

0

ಪಟ್ಟಣದ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 300 ಕ್ಕೂ ಹೆಚ್ಚು ಆಟೋಗಳಿಗೆ ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಮ್ಮ ಸಂಘದ ಒಗ್ಗಟ್ಟು ಮತ್ತು ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಹಲವಾರು ಆಟೋಗಳನ್ನು ಕೆಂಪು ಚೆಂಡು ಹೂ ಮತ್ತು ಹಳದಿ ಶಾಮಂತಿಗೆ ಹೂಗಳಿಂದ ಅಲಂಕರಿಸಿ ನಾಡ ಬಣ್ಣವನ್ನು ಹೂಗಳ ಮೂಲಕ ಪ್ರದರ್ಶಿಸಿರುವುದಲ್ಲದೆ, ನಾಡ ಬಾವುಟಗಳನ್ನೂ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿರುವ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಾಡಧ್ವಜಾರೋಹಣ ಮತ್ತು ಸಂಜೆ ಆರ್ಕೇಸ್ಟ್ರಾ ಆಯೋಜಿಸಿದ್ದರು.

‘ಮೇಲೂರು ವೈಭವ’ ಸಾರುವ ಚಿತ್ರಮಾಲೆ

0

ಪ್ರತಿಯೊಂದು ನಗರ, ಊರು, ಹಳ್ಳಿಗೂ ಇತಿಹಾಸವಿರುತ್ತದೆ. ಸಾಧಕರಿರುತ್ತಾರೆ. ವಿಶೇಷ ಆಚರಣೆ, ಘಟನೆ, ಸ್ಥಳ ಹಾಗೂ ಸವಿನೆನಪುಗಳಿರುತ್ತವೆ. ಇಂಥಹ ಅಪರೂಪದ ಸಂಗತಿಗಳನ್ನು ನೆನಪಿಸಿಕೊಳ್ಳುವವರು ವಿರಳ. ಆದರೆ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಇಂಥಹ ಸಿಂಹಾವಲೋಕನವನ್ನು ನಡೆಸಲಾಗುತ್ತಿದೆ. ‘ಮೇಲೂರು ವೈಭವ’ ಎಂಬ ಹೆಸರಿನಲ್ಲಿ ಹಳೆಯ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಮೇಲೂರು ಗ್ರಾಮದ ಇತಿಹಾಸ, ಕಲೆ, ಸಾಂಸ್ಕೃತಿಕ ಪರಂಪರೆ, ಮೇಲೂರಿಗೆ ಭೇಟಿ ನೀಡಿರುವ ಗಣ್ಯರು ಮತ್ತು ಮೇಲೂರಿನ ಪ್ರಸಿದ್ಧರ ಕುರಿತಂತೆ ಜನರು ಮೆಲುಕು ಹಾಕುವಂತೆ ಮಾಡಿದ್ದಾರೆ.
ಮೇಲೂರಿನ ಸರ್ಕಾರಿ ಶಾಲಾ ಆವರಣದ ಸಮುದಾಯಭವನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇಲೂರಿನ ಇತಿಹಾಸದ ಇಣುಕು ನೋಟದೊಂದಿಗೆ ತಾಲ್ಲೂಕಿನ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಣವನ್ನು ನೋಡಬಹುದಾಗಿದೆ.
ಮೇಲೂರಿನ ಸಾಂಸ್ಕೃತಿಕ ವೈಭವ, ನಾಟಕ, ಕಲೆ, ಭಕ್ತಿಪಂಥ, ಸಾಧಕರು, ಪ್ರಸಿದ್ಧ ವ್ಯಕ್ತಿಗಳ ಆಗಮನ, ಭಜನೆ, ಹರಿಕಥೆ ಮುಂತಾದ ಹಲವು ವಿಭಾಗಗಳನ್ನಾಗಿಸಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸಮುದಾಯಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮೇಲೂರು ವೈಭವ’ ಎಂಬ ಗ್ರಾಮದ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಿದ್ದ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದಾಗಿನ ಚಿತ್ರದ ಬಗ್ಗೆ ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸಮುದಾಯಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮೇಲೂರು ವೈಭವ’ ಎಂಬ ಗ್ರಾಮದ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಪ್ರದರ್ಶನವನ್ನು ಏರ್ಪಡಿಸಿದ್ದ ಮೇಲೂರಿನ ಎಂ.ಆರ್‌.ಪ್ರಭಾಕರ್‌, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದಾಗಿನ ಚಿತ್ರದ ಬಗ್ಗೆ ವಿವರಿಸಿದರು.

೧೯೫೨ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಉದ್ಘಾಟಿಸಲು ಆಗಮಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ, ಮೈಸೂರು ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್‌,ಮಿರ್ಜಾ ಇಸ್ಮಾಯಿಲ್‌, ಕೆಂಗಲ್‌ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಹೆಗಡೆ, ಹರಿಕಥಾ ವಿದ್ವಾನ್‌ ಮಾಲೂರು ಸೊಣ್ಣಪ್ಪ, ಮೇಲೂರಿನವರು ಹೋಗಿ ಭೇಟಿ ಮಾಡಿದ್ದ ರಾಷ್ಟ್ರಪತಿಗಳಾದ ಫಕೃದ್ದೀನ್‌ ಅಲಿ ಅಹಮದ್‌, ವಿ.ವಿ.ಗಿರಿ, ರಾಚಯ್ಯ, ಕಪಿಲ್‌ ದೇವ್‌, ಜವಾಹರಲಾಲ್‌ ನೆಹರೂ, ರಾಜೀವ್‌ ಗಾಂಧಿ, ಡಾ.ರಾಜ್‌ಕುಮಾರ್‌, ರಜನಿಕಾಂತ್‌, ದಾಸರಿ ನಾರಾಯಣರಾವ್‌, ರಾಕೇಶ್‌ ಶರ್ಮ, ಸಂತೋಶ್‌ ಹೆಗಡೆ, ಎಂ.ವಿ.ಕೃಷ್ಣಪ್ಪ, ಅಬ್ದುಲ್‌ ಕಲಾಂ ಮುಂತಾದವರೊಂದಿಗಿನ ಗ್ರಾಮಸ್ಥರ ಚಿತ್ರಗಳು ಹತ್ತು ಹಲವು ಸಂಗತಿಗಳನ್ನು ನೆನಪಿಗೆ ತಂದಿಟ್ಟಿದ್ದವು.
ಮೇಲೂರಿಗೆ ಆಗಮಿಸಿದ್ದ ಸಚಿವರುಗಳು ಮತ್ತು ಗಣ್ಯರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯ ಮೇಲೆ ಊಟ ಮಾಡುತ್ತಿರುವ ಚಿತ್ರ, ಸಂಸದ ಕೆ.ಎಚ್‌.ಮುನಿಯಪ್ಪ ಶಾಲಾ ಬಾಲಕನಾಗಿದ್ದಾಗಿನ ಶಾಲಾ ಚಿತ್ರ, ನಿಜಲಿಂಗಪ್ಪ, ಫಕೃದ್ದೀನ್‌ ಅಲಿ ಅಹಮದ್‌ ಮುಂತಾದವರ ಅಪರೂಪದ ಚಿತ್ರಗಳು.
ಮೇಲೂರಿಗೆ ಆಗಮಿಸಿದ್ದ ಸಚಿವರುಗಳು ಮತ್ತು ಗಣ್ಯರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯ ಮೇಲೆ ಊಟ ಮಾಡುತ್ತಿರುವ ಚಿತ್ರ, ಸಂಸದ ಕೆ.ಎಚ್‌.ಮುನಿಯಪ್ಪ ಶಾಲಾ ಬಾಲಕನಾಗಿದ್ದಾಗಿನ ಶಾಲಾ ಚಿತ್ರ, ನಿಜಲಿಂಗಪ್ಪ, ಫಕೃದ್ದೀನ್‌ ಅಲಿ ಅಹಮದ್‌ ಮುಂತಾದವರ ಅಪರೂಪದ ಚಿತ್ರಗಳು.

ಮೇಲೂರಿವರಾದ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಮ.ನಂಜುಡಪ್ಪ, ಕೆ.ಎಸ್‌.ಚನ್ನಪ್ಪ, ಐ.ಎ.ಎಸ್‌ ಅಧಿಕಾರಿ ವೆಂಕಟರಾಮೇಗೌಡ, ಸ್ವಾತಂತ್ರ್ಯ ಹೋರಾಟಗಾರರಾದ ಸಂಜೀವಪ್ಪ, ಮುನಿಶಾಮಯ್ಯ, ಎಂ.ಎಸ್‌.ವೀರಪ್ಪ , ವಿದೇಶಕ್ಕೆ ಹೋಗಿದ್ದ ಬಿ.ಶ್ರೀರಾಮರೆಡ್ಡಿ, ಗ್ರಾಮದ ಹಳೆಯ ತಲೆಮಾರಿನವರಾದ ಪಟೇಲ್‌ ಪಿಳ್ಳೇಗೌಡರು, ಮಲ್ಲಿಕಾರ್ಜುನಪ್ಪ, ಸೈಕಲ್‌ನಲ್ಲಿ ಕರ್ನಾಟಕವನ್ನು ಸುತ್ತಿಬಂದ ಎಂ.ರಾಮಯ್ಯ ಮತ್ತು ಪ್ರಭಾಕರ್‌, ಮ.ಮು.ಸ್ವಾಮಿ ಅವರ ಗಂಗಾದೇವಿ ನಾಟಕ ಮಂಡಳಿ ಮುಂತಾದವರ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
‘ನಾನು ಹುಟ್ಟಿದ ಊರಿನ ಕಲೆ, ಸಂಸ್ಕೃತಿ, ಇತಿಹಾಸ, ಹಳೆ ತಲೆಮಾರಿನ ಜನರ ಚಿತ್ರಗಳನ್ನು ಸಂಗ್ರಹಿಸುತ್ತಾ ಬಂದಂತೆ ಬಹಳ ಹೆಮ್ಮೆ ಎನಿಸುತ್ತಿತ್ತು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜನರ ಸಾಧನೆಗಳ ಬಗ್ಗೆ ಪರಿಚಯ ಮಾಡಿ ಗ್ರಾಮದ ಹಾಗೂ ನಮ್ಮ ಸುತ್ತಲಿನ ಜನರ ಬಗ್ಗೆ ಅವರಲ್ಲಿ ಗೌರವ, ಆದರ, ಪ್ರೀತಿ ಮೂಡಿಸುವುದು ಈ ಪ್ರದರ್ಶನದ ಉದ್ದೇಶ. ಇತಿಹಾಸವನ್ನು ಮರೆತವರಿಗೆ ಉಜ್ವಲ ಭವಿಷ್ಯವಿಲ್ಲ. ನಮ್ಮ ಹಿಂದಿನವರ ಆದರ್ಶ, ಸಾಧನೆ ಮುಂದಿನವರಿಗೆ ಮಾರ್ಗದರ್ಶನವಾಗುತ್ತದೆ. ಒಂದು ಎಚ್ಚರಿಕೆಯ ಕರೆಗಂಟೆಯಾಗುತ್ತದೆ’ ಎಂದು ಎಂ.ಆರ್‌.ಪ್ರಭಾಕರ್‌ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.

ಆನೆಮಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರನಾಯಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನದ ಅಂಗವಾಗಿ ಆಚರಿಸಲಾದ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

0

ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹಾಗು ಗುಣಮಟ್ಟದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು. ಈ ಹಿಂದೆ ಸುಮಾರು ೧೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಇದೀಗ ೮.೯ ಲಕ್ಷ ಲೀಟರ್‌ಗೆ ಇಳಿದಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ಮುಂಬರುವ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು. ಹಾಲಿನ ಉತ್ಪಾದನೆಯ ಜೊತೆ ಜೊತೆಗೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ನಿರ್ದೇಶಕ ತಾದೂರು ರಮೇಶ್, ಶ್ರೀನಿವಾಸಗೌಡ, ಮಲ್ಲೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಏಕತಾ ಓಟ

0

ರಾಷ್ಟ್ರದ ಏಕತೆ, ಅಖಂಡತೆ, ಮತ್ತು ಸುರಕ್ಷತೆಗಾಗಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಾಗ ಮಾತ್ರ ದೇಶವು ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ದೇಶದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲ್ಲಭಭಾಯಿ ಪಟೇಲರ ದೂರದೃಷ್ಟಿ, ದೇಶಕ್ಕಾಗಿ ಅವರು ಮಾಡಿದ ಸೇವೆ, ಇಡೀ ಜನಾಂಗಕ್ಕೆ ಮಾದರಿಯಾಗಬೇಕಾಗಿದೆ. ದೇಶದ ಯುವಜನತೆ ಪಟೇಲರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದರು.
ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಏಕತಾ ಓಟದಲ್ಲಿ ಪಾಲ್ಗೊಂಡವರಿಗೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ್‌ಬಾಯಿರಿ, ಜಿಲ್ಲಾ ಉಪಾಧ್ಯಕ್ಷ ದಾಮೋದರ್, ಸಿ.ವಿ.ಲೋಕೇಶ್‌ಗೌಡ, ಎ.ಎಂ.ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಶಿವಕುಮಾರಗೌಡ, ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಅಶ್ವಥ್, ಶ್ರೀರಾಮ್, ನಂದೀಶ್‌ ಮತ್ತಿತರರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳಿಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡುತ್ತಿದ್ದೇವೆಯೇ?

0

“ನಿಮ್ಮ ನಾಲ್ಕು ವರ್ಷದ ಮಗು…
• ನಿಮ್ಮ ಹಾಗೆ ಓದಬಲ್ಲ
• 6ಕ್ಕೂ ಹೆಚ್ಚು ಭಾಷೆ ಮಾತನಾಡಬಲ್ಲ
• ಕಂಪ್ಯೂಟರ್ ಬಳಸಬಲ್ಲ
• ಸಂಗೀತವಾದ್ಯ ನುಡಿಸಬಲ್ಲ
• ಒಂದು ಗಂಟೆ ಧ್ಯಾನಾವಸ್ಥೆಯಲ್ಲಿ ಕೂರಬಲ್ಲ…. ಇತ್ಯಾದಿ”.
ಇದು ಶಾಲೆಯೊಂದು ಪೋಷಕರನ್ನು ಆಕರ್ಷಿಸಲು ನೀಡಿರುವ ಜಾಹಿರಾತಿನ ಸಾಲುಗಳು. ಬಹುಷಃ ಇಂತಹ ಶಾಲೆಗಳಿಗೆ ಜನ ಮುಗಿಬೀಳುವುದರಲ್ಲಿ, ಕೇಳಿದಷ್ಟು ಫೀಸು, ಡೊನೇಷನ್‍ಗಳನ್ನು ಕಕ್ಕುವುದರಲ್ಲಿ ಆಶ್ಚರ್ಯವೇನಿಲ್ಲ.
ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತು ಹನ್ನೆರೆಡು ವರ್ಷಕ್ಕೆ ವಯಸ್ಕರರ ಜ್ಞಾನ, ಗುಣ ಸ್ವಭಾವಗಳನ್ನೆಲ್ಲಾ ಬೆಳೆಸಿಕೊಳ್ಳುತ್ತಾರೆಂದುಕೊಳ್ಳೋಣ. ಇದು ಪೋಷಕರಿಗೆ ಅತ್ಯಂತ ಆನಂದ ಮತ್ತು ಹೆಮ್ಮೆ ತರುವ ವಿಚಾರವೇನೋ ನಿಜ, ಆದರೆ ಇದರ ಇನ್ನೊಂದು ಮುಖವನ್ನು ನಾವು ಯೋಚಿಸಿದ್ದೇವೆಯೇ? ಇಂತಹ ಮಕ್ಕಳು ಪೋಷಕರ ಹತ್ತಿರ ಬಂದು, “ಅಪ್ಪಾ ನಾನೀಗ ಮಾನಸಿಕವಾಗಿ, ಭೌದ್ಧಿಕವಾಗಿ ಬೆಳೆದಿದ್ದೇನೆ, ನನಗೊಂದು ಮದುವೆ ಮಾಡು” ಅಂದರೆ ಪೋಷಕರೇನು ಮಾಡಬೇಕು? ಹಾಗೊಮ್ಮೆ ನೇರವಾಗಿ ಕೇಳದಿದ್ದರೂ, ಹದಿವಯಸ್ಸಿನ ಮಕ್ಕಳು ಡೇಟಿಂಗ್ ಹೋಗಲು ಶುರುಮಾಡಿದರೆ, ಸಿಗರೇಟ್, ಗುಟ್ಕಾ, ಮದ್ಯ ಮುಂತಾದವುಗಳನ್ನು ಸೇವಿಸತೊಡಗಿದರೆ, ಹೆಣ್ಣು ಮಕ್ಕಳು ಗರ್ಭಧರಿಸಿದರೆ, ಅದನ್ನೆಲ್ಲಾ ಒಪ್ಪಿಕೊಳ್ಳಲು ಪೋಷಕರು ಸಿದ್ಧರಿದ್ದಾರೆಯೇ? ಇದಕ್ಕೆಲ್ಲಾ ಜೀವಂತ ಉದಾಹರಣೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹೇರಳವಾಗಿ ಸಿಕ್ಕುತ್ತವೆ. ನಮ್ಮ ಮೆಟ್ರೋಗಳಲ್ಲಿಯೂ ಇತ್ತೀಚೆಗೆ ಇವು ಅಪರೂಪವೇನಲ್ಲ.
ಮಕ್ಕಳು ಕೆಲವೇ ವಿಚಾರದಲ್ಲಿ, ಅದೂ ಪೋಷಕರಿಗೆ ಬೇಕಾದ ವಿಚಾರದಲ್ಲಿ ಮಾತ್ರ ದೊಡ್ಡವರಂತಿರಬೇಕು; ಉಳಿದಂತೆ ಮಕ್ಕಳೇ ಆಗಿರಬೇಕು-ಎಂದು ಬಯಸುವವರಿಗೆ ನಿರಾಸೆ ಕಾದಿರುತ್ತದೆ. ಒಮ್ಮೆ ವಯಸ್ಕರ ಪ್ರಪಂಚದ ಟಿಕೆಟ್ ಮಕ್ಕಳಿಗೆ ಸಿಕ್ಕ ಮೇಲೆ, ಅವರು ಅದನ್ನು ಎಲ್ಲಾ ಕಡೆ ಉಪಯೋಗಿಸುತ್ತಾರೆ. ಇದೆಲ್ಲಾ ವಿತಂಡವಾದ ಎಂದು ಹೊರನೋಟಕ್ಕೆ ಅನ್ನಿಸಿದರೂ, ದುರಾದೃಷ್ಟವಶಾತ್ ಇದು ವಾಸ್ತವ.
ಪ್ರಕೃತಿಯ ಎಲ್ಲಾ ಚಲನೆಗೂ ಒಂದು ವೇಗವನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಅದನ್ನು ಅಲ್ಪ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಮಾಡಬಹುದೇನೋ. ಆದರೆ ಆಧುನಿಕ ಮಾನವ ಮಾಡುತ್ತಿರುವಂತೆ ಆ ಕೆಲಸಗಳ ವೇಗ ಮತ್ತು ನೀತಿನಿಯಮಗಳನ್ನು ತೀವ್ರವಾಗಿ ಹೆಚ್ಚಿಸಲು ಅಥವಾ ಬದಲಾಯಿಸಲು ಪ್ರಯತ್ನಿಸಿದರೆ, ಅದರ ಭಯಂಕರ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳಲ್ಲಿ ನಾವು ಈಗಾಗಲೇ ಕಾಣುತ್ತಿದ್ದೇವೆ.
kid2ಇದೇ ರೀತಿ ಮನುಷ್ಯನ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕೂಡ ಪ್ರಕೃತಿ ನಿರ್ಧಾರಿತ ವೇಗದಲ್ಲೇ ಮತ್ತು ನಿಯಮಗಳಲ್ಲೇ ಆಗಬೇಕು. ದೇಹದ ಮತ್ತು ಮನಸ್ಸಿನ ಬೆಳವಣಿಗೆಗೆ ಸಾಮರಸ್ಯವಿರಬೇಕು. ಇದನ್ನು ಕಡೆಗಣಿಸಿ ಯಾವುದಾದರೂ ಒಂದರ ಬೆಳವಣಿಗೆಯನ್ನು ತೀವ್ರಗೊಳಿಸಲೆತ್ನಿಸಿದರೆ ಮಕ್ಕಳ ಭಾವೀ ಜೀವನದ ಮೇಲೆ ಕೆಲವು ಅಡ್ಡಪರಿಣಾಮಗಳಾಗಬಹುದು.
ಇದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿದ್ದರೂ ನಾವು ಒಪ್ಪಿಕೊಳ್ಳುವುದಿಲ್ಲ. ಒಲಂಪಿಕ್ ಕ್ರೀಡೆಗಳಲ್ಲಿ ಮೆಡಲ್ ಗೆಲ್ಲುವುದಕ್ಕಾಗಿಯೇ ಮಕ್ಕಳ ಮೇಲೆ ಎಂತಹ ಒತ್ತಡಗಳನ್ನು ಹೇರಿ ಛಾಂಪಿಯನ್‍ಗಳನ್ನು ಸಿದ್ಧಪಡಿಸುತ್ತಾರೆಂಬುದನ್ನು ಹೆಚ್ಚಿನ ದೇಶಗಳು ಗೌಪ್ಯವಾಗಿಡುತ್ತವೆ. ಮೂಳೆಗಳು, ಮಾಂಸಖಂಡಗಳು, ಅದರ ಜೊತೆಗೆ ಮನಸ್ಸು, ಬುದ್ಧಿ ಯಾವುದೂ ಬೆಳೆಯದ ಮೂರ್ನಾಲ್ಕು ವರ್ಷದ ಹಸುಳೆಗಳ ಮೇಲೆ ಏನೆಲ್ಲಾ ಪ್ರಯೋಗ ಮಾಡುತ್ತಾರೆ ಮತ್ತು ಒತ್ತಡಗಳನ್ನು ಹೇರುತ್ತಾರೆ ಎನ್ನುವುದನ್ನು ಓದಿದರೆ ಇವರೇನು ಮನುಷ್ಯರಾ ಅಥವಾ ಕಟುಕರಾ ಎನ್ನುವ ಅನುಮಾನ ಬರುತ್ತದೆ. ದೇಶಕ್ಕಾಗಿ ಮೆಡಲ್‍ಗಳನ್ನು ಗೆದ್ದ ಮೇಲೆ ಈ ಛಾಂಪಿಯನ್‍ಗಳು ಉಳಿದ ಜೀವಮಾನವನ್ನು ಹೇಗೆ ಕಳೆಯುತ್ತಾರೆ ಎಂಬ ಮಾಹಿತಿ ನಮಗೆಲ್ಲಾ ನಗಣ್ಯವಾಬಿಡುತ್ತದೆ. ಚೈನಾದಂತಹ ದೇಶಗಳಲ್ಲಂತೂ ಎಲ್ಲಾ ಗೌಪ್ಯವಾಗಿಯೇ ನಡೆಯುತ್ತದೆ.
ಮೇಲಿನದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆಯಾಗಿರದ ಮಕ್ಕಳ ದೈಹಿಕ ಬೆಳವಣಿಗೆಯನ್ನು ಮಾತ್ರ ತೀವ್ರಗೊಳಿಸುವ ಕ್ರೂರ ಕ್ರಿಯೆಯಾದರೆ, ಇವತ್ತಿನ ವಿದ್ಯಾವಂತ ತಂದೆತಾಯಂದಿರು ಮಾಡುತ್ತಿರುವುದು ಇದರ ಇನ್ನೊಂದು ಮುಖ. ಅಂದರೆ ದೇಹ, ಮನಸ್ಸುಗಳ ಬೆಳವಣಿಗೆಯ ವೇಗವನ್ನು ಮೀರಿ ಬುದ್ಧಿ ಮಾತ್ರ ಬೆಳೆವಣಿಗೆ ಆಗಬೇಕೆಂದು ಅಪೇಕ್ಷಿಸುವ ಇವರುಗಳು ತಮ್ಮ ಮಕ್ಕಳ ಮೇಲೆ ಅದೇ ರೀತಿಯ ಅನ್ಯಾಯಗಳನ್ನು ಮಾಡುತ್ತಿರುತ್ತಾರೆ. ತಮ್ಮ ಜೀವನದ ಬಗೆಗೆ ಇನ್ನೂ ಏನೂ ನಿರ್ಧಾರಗಳನ್ನು ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿರುವ, ಭಾವನಾತ್ಮವಾಗಿ ಮತ್ತು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತರಾಗಿರುವ ಮಕ್ಕಳ ಮೇಲೆ ಪೋಷಕರು ನಡೆಸುವ ಈ ರೀತಿಯ ದಬ್ಬಾಳಿಕೆ ಯಾವುದೇ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾರದ್ದು. ಹಾಗಾಗಿಯೇ ಇಂತಹ ದಬ್ಬಾಳಿಕೆಯನ್ನು ಸಹಿಸಲಾರದ ಮಕ್ಕಳಿಗೆ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ. ಒತ್ತಡವನ್ನು ನಿಭಾಯಿಸಲಾರದ ಎಷ್ಟೋ ಮಕ್ಕಳು ಇದರ ಮೊರೆಹೋಗುತ್ತಿದ್ದಾರೆ.
ಶಾಲಾದಿನಗಳಲ್ಲಿ ಸರಿಯಾಗಿ ಊಟ, ನಿದ್ದೆ ಮಾಡಲೂ ಆಗದಷ್ಟು ಕಲಿಕೆಯ ಒತ್ತಡ, ರಜ ಬಂತೆಂದರೆ ಬೇಸಿಗೆ ಶಿಬಿರಗಳು, ಅಬಾಕಸ್ ತರಗತಿಗಳು, ನೆನಪಿನ ಶಕ್ತಿ ವೃದ್ಧಿಸುವ ತರಬೇತಿ, ಮುಂದಿನ ತರಗತಿ ಟ್ಯೂಷನ್ ಕ್ಲಾಸ್‍ಗಳು ಮುಂತಾದವು. ಪೋಷಕರೇನು ತಮ್ಮ ಮಕ್ಕಳನ್ನು ಕೀ ಹಾಕಿದೊಡನೆ ಸ್ಟಾರ್ಟ್ ಆಗಿ, ಆಕ್ಸಿಲರೇಟರ್ ಒತ್ತಿದೊಡನೆ ಬೇಕಾದ ವೇಗದಲ್ಲಿ ಓಡುವ ತಮ್ಮ ಐಷಾರಾಮಿ ಕಾರು ಎಂದುಕೊಡಿದ್ದಾರೆಯೇ? ದುರಂತ ಅಂದರೆ ನಿರ್ಜೀವ ಕಾರುಗಳಿಗೆ ಸಿಗುವಷ್ಟು ಉಸಿರಾಟದ ಸಮಯವೂ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ.
ಇಂದಿನ ಮಕ್ಕಳು ತಮ್ಮ ಸಹಜವಾದ ತುಂಟಾಟದ, ಚಂಚಲತೆಯ, ಕುತೂಹಲದ, ಹುಡುಕಾಟ-ಪ್ರಯೋಗಶೀಲತೆಯ ಬಾಲ್ಯವನ್ನು ಕಳೆಯುವುದು ಇನ್ನು ಮುಂದೆ ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಜಗಜಿತ್ ಸಿಂಗ್ ಹಾಡಿದ “ಏ ದೌಲತ್ ಭೀ ಲೇಲೋ, ಏ ಷೊಹರತ್ ಭಿ ಲೇ ಲೋ” ಎನ್ನುವ ಗಜಲ್‍ನ ಹಾಡುಗಳನ್ನು ಎಲ್ಲರೂ ಒಮ್ಮೆ ಕೇಳಲೇಬೇಕು. ಈ ಹಾಡಿನ ಹಿನ್ನೆಲೆಯಲ್ಲಿ ಇಂದಿನ ಮಕ್ಕಳ, ಹೆಚ್ಚಾಗಿ ಪಟ್ಟಣಗಳಲ್ಲಿರುವವರ ಪರಿಸ್ಥಿತಿ ನೋಡಿದರೆ, ಜಗಜಿತ್ ಸಿಂಗ್‍ನ ಧ್ವನಿಯ ವಿಷಾದ ನಮ್ಮನ್ನು ಕಾಡುತ್ತದೆ.
kid3ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸದ ಮಕ್ಕಳು ಮುಂದೆ ಕ್ರೂರಿಗಳೂ, ಸಮಾಜಘಾತುಕರೂ ಆಗುವ ಸಾಧ್ಯತೆಗಳಿವೆಯೆಂದು ಸಮಾಜವಿಜ್ಞಾನಿಗಳು ಹೇಳುತ್ತಾರೆ. ಇದು ಎಲ್ಲಾ ಮಕ್ಕಳಿಗೂ ಅನ್ವಯಿಸುವುದಿಲ್ಲವೆಂದುಕೊಂಡರೂ, ನಾವೀಗ ಮಕ್ಕಳಿಗೆ ಕೊಡುತ್ತಿರುವ ಬಾಲ್ಯದ ಅನುಭವಗಳು ಅವರ ಸಂತೃಪ್ತ ಜೀವನಕ್ಕೆ ಬುನಾದಿಯನ್ನಂತೂ ಹಾಕುವುದು ಸಾಧ್ಯವಿಲ್ಲ. ಇದರಿಂದ ತಾವು ಗಳಿಸಿರುವ ಭರಪೂರ ಹಣದ ಮಧ್ಯೆಯೂ ಅವರು ಅಸುಖಿಗಳಾಗುವುದಷ್ಟೇ ಅಲ್ಲ, ಅದನ್ನು ತಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸುತ್ತಾರೆ.
ಈ ಪ್ರಪಂಚದ ಪ್ರತಿಯೊಂದು ಜೀವಿಯೂ ಅನನ್ಯವಾದದ್ದು. ಅದನ್ನು ಸಹಜವಾಗಿ ಬೆಳೆಯಲು ಬಿಟ್ಟರೆ ನಮ್ಮ ಚಿಂತನೆಯ ಮಿತಿಗಳನ್ನು ಮೀರಿ ಅವು ಅರಳುವ ಸಾಧ್ಯತೆಗಳಿರುತ್ತವೆ. ಇದು ನಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಆದ್ದರಿಂದ ಪೋಷಕರೇ ದಯವಿಟ್ಟು ನಿಮ್ಮ ಮಕ್ಕಳನ್ನು ಹಣಗಳಿಸುವ ಭಾವೀ ಯಂತ್ರಗಳಂತೆ ಮಾತ್ರ ನೋಡದೆ, ಅವರಲ್ಲಿ ಒಂದು ಜೀವಂತ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ಅರಳುವ ಪ್ರತಿಭೆಯನ್ನು ಹುಡುಕಿ. ಅವರಿಗೆ ಬಾಲ್ಯದ ಸಹಜ ಆನಂದಗಳನ್ನು ಹೊಂದಲು ಅವಕಾಶಮಾಡಿಕೊಡಿ.
– ವಸಂತ್ ನಡಹಳ್ಳಿ