Home Blog Page 545

ಅಂಧ ಮಕ್ಕಳ ಶಾಲೆಯಲ್ಲಿ ‘ಅವನಿ ಬಳಗ’

0

ಪಟ್ಟಣದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವಿಶಿಷ್ಠವಾಗಿ ಸಾಮಾಜಿಕ ಕಳಕಳಿಯುಳ್ಳ ಸಂಘವೊಂದನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.

‘ಅವನಿ ಬಳಗ’ ಎಂಬ ಹೆಸರಿನ ಸಂಘವನ್ನು ಪ್ರಾಧ್ಯಾಪಕಿ ಡಾ.ಸುಧಾ ಅವರಿಂದ ಉದ್ಘಾಟಿಸಿ, ಅಂಧಮಕ್ಕಳೊಂದಿಗೆ ಹಿರಿಯ ವಿದ್ಯಾರ್ಥಿಗಳು ದಿನ ಪೂರ್ತಿ ಕಳೆದರು. ಅಂಧ ಮಕ್ಕಳಿಗೆ ಹಾಡು ಕಲಿಸಿ, ಆಟ ಆಡಿಸಿ, ಸಿಹಿ ಹಂಚಿ, ಅವರೊಂದಿಗೆ ಊಟ ಮಾಡಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಹಿರಿಯರ ವಾಣಿಯನ್ನು ಪಾಲಿಸಿದರು.
‘ಏನಾಗಲಿ ಮುಂದೆ ಸಾಗು ನೀ..’ ಎಂಬ ಹಾಡನ್ನು ಮಕ್ಕಳೊಂದಿಗೆ ಹಾಡು ತಾವೂ ಸ್ಫೂರ್ತಿಯನ್ನು ಪಡೆದರು. ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಅವರು ಪ್ರದರ್ಶಿಸಿದ ಏಕಪಾತ್ರಾಭಿನಯ, ಸಂಗೀತ, ಕಥೆ ಮುಂತಾದವುಗಳನ್ನು ಕಂಡು ಮೂಕ ವಿಸ್ಮಿತರಾದರು. ಅಂಧ ಮಕ್ಕಳಿಗೆ ಹಾಡುಗಳ ರಸಪ್ರಶ್ನೆಯನ್ನು, ವಿವಿಧ ಆಟಗಳನ್ನು ಏರ್ಪಡಿಸಿ ತಾವೂ ಭಾಗಿಯಾಗಿ ನಲಿದರು. ಜೊತೆಯಲ್ಲೇ ಸಿಹಿ ತಿಂದು, ಊಟ ಮಾಡಿದರು.
‘ಅವನಿ ಎಂದರೆ ಭೂಮಿ. ಬಳಗ ಅಂದರೆ ಕುಟುಂಬ. ಬೇರೆ ಬೇರೆ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ನಮ್ಮ ಭೂತಾಯಿಯ ಸೇವೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಭಾವಿಸಿ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಒಂದು ಕುಟುಂಬದಂತೆ ‘ಅವನಿ ಬಳಗ’ವನ್ನು ಸ್ಥಾಪಿಸಿದ್ದೇವೆ. ಸಮಾಜಕ್ಕೆ ಅಲ್ಪ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಿರುವ ಸಂಘದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಉಚಿತ ಆರೋಗ್ಯ ಸೇವೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಂಧ ಮಕ್ಕಳೊಂದಿಗೆ, ವೃದ್ಧಾಶ್ರಮದ ವೃದ್ಧರೊಂದಿಗೆ ಕಾಲ ಕಳೆದು ನೆರವು ನೀಡುವುದು ಮುಂತಾದ ಯೋಜನೆಗಳಿವೆ. ಭಗತ್‌ಸಿಂಗ್‌ ಅವರ ಜನ್ಮದಿನದಂದು ಈ ಸಂಘ ಉದ್ಘಾಟನೆಯಾಗುತ್ತಿರುವುದು ಸಕಾರಾತ್ಮಕವಾಗಿದೆ. ಯುವಜನರಿಂದ ಬದಲಾವಣೆ ಸಾಧ್ಯ ಎಂಬ ಅವರ ಮಾತುಗಳನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ’ ಎಂದು ‘ಅವನಿ ಬಳಗ’ದ ಗೌರವಾಧ್ಯಕ್ಷೆ ಡಾ.ಸುಧಾ ತಿಳಿಸಿದರು.
ಶಿಕ್ಷಕ ವೇಣುಗೋಪಾಲ್‌, ಪ್ರಾಧ್ಯಾಪಕ ಗಂಗಾಧರ್‌, ‘ಅವನಿ ಬಳಗ’ದ ಅಧ್ಯಕ್ಷೆ ಉಷಾ, ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಗಾಯಿತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಟಿ.ಬೈರಗಾನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ 190 ನೇ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಟಿ.ಬೈರಗಾನಹಳ್ಳಿಯಲ್ಲಿ ಉದ್ಘಾಟನೆಯನ್ನು ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ ಉದ್ಘಾಟಿಸಿದರು. ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಕೋಚಿಮುಲ್‌ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಅಮರೇಶ್‌, ಸಂಘದ ಅಧ್ಯಕ್ಷೆ ಸುಮಾ ಹಾಜರಿದ್ದರು.

ಗೊಂಬೆಗಳ ಮೂಲಕ ಭಾರತದರ್ಶನ

0

ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.
ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ನಮ್ಮ ನಾಡಿನ ಗೃಹಿಣಿಯರು ಮನೆಮನೆಗಳಲ್ಲಿ ಆಚರಿಸುವರು.
ಒರಿಸ್ಸಾದ ಮೀನುಗಾರ ದಂಪತಿಗಳು
ಒರಿಸ್ಸಾದ ಮೀನುಗಾರ ದಂಪತಿಗಳು

ಅರಸರ ಕಾಲದಲ್ಲಿ ಉತ್ತುಂಗದಲ್ಲಿದ್ದ ಬೊಂಬೆಹಬ್ಬದ ಪರಿಕಲ್ಪನೆಯೂ ಈಗ ಬದಲಾಗಿದೆ. ಗೊಂಬೆ ಕೂರಿಸುವ ಬಹುತೇಕ ಮನೆಗಳಲ್ಲಿ ಪಟ್ಟದ ಗೊಂಬೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಧುನಿಕ ಗೊಂಬೆಗಳೇ. ಗೊಂಬೆ ಪ್ರದರ್ಶನದಲ್ಲಿ ಆಧುನಿಕ ಸಂಗತಿಗಳು, ಪ್ರಸ್ತುತ ವಿಷಯಗಳು ಮಹತ್ವ ಪಡೆಯುತ್ತಿವೆ.
ಪಟ್ಟಣದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ. ದಸರಾ ಗೊಂಬೆಗಳ ಮೂಲಕ ನಮ್ಮ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ರಾಷ್ಟ್ರ ಪ್ರಜ್ಞೆಯನ್ನು ಸಾರುತ್ತಿದ್ದಾರೆ.
ತಂಜಾವೂರಿನ ನೃತ್ಯಗಾತಿ
ತಂಜಾವೂರಿನ ನೃತ್ಯಗಾತಿ

ಗೊಂಬೆಹಬ್ಬದ ಕೇಂದ್ರಬಿಂದುವಾದ ಪಟ್ಟದ ಗೊಂಬೆಗಳೊಂದಿಗೆ, ಗೊಂಬೆಗಳಿಗೆ ಖ್ಯಾತಿ ಪಡೆದಿರುವ ತಂಜಾವೂರಿನ ನರ್ತಕಿ, ಶೆಟ್ಟಿ ದಂಪತಿಗಳು, ಮದುರೈನ ಮೀನಾಕ್ಷಿ ಸುಂದರೇಶ್ವರ, ಅಷ್ಟಲಕ್ಷ್ಮಿಯರು, ತಿರುಪತಿಯ ರಾಮ ಸೀತೆ ಲಕ್ಷಣ ಹನುಮ, ಅರ್ಧನಾರೀಶ್ವರ, ಬೆಂಗಳೂರಿನಿಂದ ತಂದ ದಶಾವತಾರ, ಯಕ್ಷಗಾನ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಒರಿಸ್ಸಾದ ಮೀನುಗಾರ, ಮಥುರೆಯ ಶ್ರೀಕೃಷ್ಣ, ಮೀರಾಬಾಯಿ, ರಾಜಾಸ್ಥಾನದ ಪಗಡಿಧಾರಿ ಪುರುಷ ಮತ್ತು ಸಾಂಪ್ರದಾಯಿಕ ಮಹಿಳೆ, ವೈಷ್ಣೋದೇವಿ ಮುಂತಾದ ಗೊಂಬೆಗಳು ದೇಶದ ವಿವಿಧ ರಾಜ್ಯಗಳ ವೈವಿಧ್ಯತೆಯನ್ನು ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ. ಈ ಗೊಂಬೆಗಳನ್ನು ಹಾಗೂ ಇದರೊಂದಿಗೆ ಹಲವು ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ ಅಲಂಕರಿಸಿದ್ದಾರೆ.
ಪಟ್ಟದ ಗೊಂಬೆಗಳು
ಪಟ್ಟದ ಗೊಂಬೆಗಳು

‘ಪ್ರವಾಸಕ್ಕಾಗಿ ಹೋದ ಸ್ಥಳಗಳಿಂದೆಲ್ಲಾ ಗೊಂಬೆಗಳನ್ನು ತರುವ ಅಭ್ಯಾಸವಿದೆ. ದಸರಾ ಹಬ್ಬದ ಪ್ರಯುಕ್ತ ಈ ರೀತಿ ಸಂಗ್ರಹಿಸಿರುವ ಗೊಂಬೆಗಳನ್ನೆಲ್ಲಾ ಜೋಡಿಸಿಟ್ಟಾಗ ನಾವು ಭೇಟಿ ನೀಡಿರುವ ದೇಶದ ವಿವಿಧ ಪ್ರದೇಶಗಳು, ದೇವಾಲಯಗಳು, ಸಂಸ್ಕೃತಿ, ರೀತಿ ರಿವಾಜುಗಳು, ಉಡುಪು, ಖಾದ್ಯ ಎಲ್ಲವೂ ಚಿತ್ರಾವಳಿಯಂತೆ ಕಣ್ಮುಂದೆ ಬರುತ್ತದೆ. ದೇಶದ ಸಾಂಸ್ಕೃತಿಕ ವೈವಿಧ್ಯತೆ ಹೆಮ್ಮೆ ತರುತ್ತದೆ. ‘ನೀರಜ ಮುಖಿಗೆ ಮಡಿಲ ತುಂಬಿದರೋ…, ಮುತ್ತಿನಾರತಿ ಕರವೆತ್ತಿ ಬೆಳಗಿರೋ….’ಎಂದು ಒಕ್ಕೊರಲಿನಿಂದ ಹಾಡುತ್ತಾ ನಾವು ಚಿಕ್ಕಂದಿನಲ್ಲಿ ಮನೆಮನೆಗೆ ತೆರಳಿ ತಮ್ಮ ಗೊಂಬೆ ಬಾಗಿನದ ಡಬ್ಬಿಯನ್ನು ತುಂಬಿಸಿಕೊಳ್ಳುತ್ತಿದ್ದೆವು. ಒಂದು ದಿನ ಚಕ್ಕುಲಿ, ರವೆ ಉಂಡೆ, ಕೋಡುಬಳೆ, ಸಜ್ಜಪ್ಪ, ನಿಪ್ಪಟ್ಟು ಎಂದೆಲ್ಲಾ ಮಕ್ಕಳೇನು ದೊಡ್ಡವರ ಬಾಯಲ್ಲೂ ನೀರು ತರಿಸುವ ತಿಂಡಿಗಳನ್ನು ಮಾಡುತ್ತಿದ್ದರು. ಈಗ ಕಾಲ ಬದಲಾದಂತೆ ಆದ್ಯತೆಗಳೂ ಬದಲಾಗಿವೆ. ಆದರೆ ಮೂಲ ಆಶಯ ಹಾಗೇ ಉಳಿದಿದೆ. ನಮಗೆ ಪುರಾಣಗಳ ಬಗ್ಗೆ ತಿಳಿಸಿಕೊಟ್ಟ ಗೊಂಬೆಗಳ ಮೂಲಕ ದೇಶದ ವೈವಿಧ್ಯತೆಯನ್ನು ತಿಳಿಸಲು ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ ಡಾ. ಡಾ.ರೋಹಿಣಿ ರವಿಶಂಕರ್‌.
–ಡಿ.ಜಿ.ಮಲ್ಲಿಕಾರ್ಜುನ.

ತುಮ್ಮನಹಳ್ಳಿಯ ಹೆಜ್ಜೇನಿನ ಗೂಡುಗಳು

0

ಟೊಮೇಟೋ, ಹುರಳಿಕಾಯಿ, ಕ್ಯಾರೆಟ್, ಈರುಳ್ಳಿ ಮುಂತಾದ ತರಕಾರಿಗಳಿಲ್ಲದೆ ನಮ್ಮ ಆಹಾರ ಅಪೂರ್ಣ. ಇಂತಹ ತರಕಾರಿಗಳ ಹುಟ್ಟಿಗೆ ಕಾರಣವಾಗುವುವು ಅಜ್ಞಾತ ಬಂಧುಗಳಾದ ಜೇನುನೊಣಗಳು. ಇಂತಹ ರೈತಸ್ನೇಹಿ ಹೆಜ್ಜೇನುಗಳ ನೂರಾರು ಗೂಡುಗಳು ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿವೆ.
ತಾಲ್ಲೂಕಿನ ತುಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ಗುಂಡುತೋಪಿನಲ್ಲಿರುವ ಅತ್ಯಂತ ಹಳೆಯದಾದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ನೂರಾರು ಜೇನುಗಳು ಗೂಡುಗಳನ್ನು ಕಟ್ಟಿಕೊಂಡು ಮನುಷ್ಯರೊಂದಿಗೆ ಸಹಬಾಳ್ವೆ ನಡೆಸಿವೆ.
ಪ್ರಪಂಚದ ಆರನೇ ಒಂದು ಭಾಗದ ಹೂ ಬಿಡುವ ಸಸ್ಯಗಳ ಪರಾಗಸ್ಪರ್ಶ ನಡೆಯುವುದು ಮತ್ತು ಸುಮಾರು ನಾನ್ನೂರು ಕೃಷಿ ಸಸ್ಯಗಳ ಪರಾಗಸ್ಪರ್ಶಕ್ಕೆ ಕಾರಣವಾಗಿರುವುದು ಜೇನ್ನೊಣಗಳು. ಸುತ್ತಮುತ್ತ ಹೆಚ್ಚು ಸಸ್ಯ ವೈವಿಧ್ಯವಿರುವ, ತೊಂದರೆ ಇಲ್ಲದ ಎತ್ತರದ ಸ್ಥಳಗಳನ್ನು ಹೆಜ್ಜೇನುಗಳು ಆಯ್ಕೆ ಮಾಡಿಕೊಂಡು ನೆಲೆಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಜೇನಿನ ಸಹಾಯವಿಲ್ಲದೆ ಹೂ ಬಿಡುವ ಸಸ್ಯಗಳು ಕಾಯಿ, ಬೀಜಗಳಾಗದು. ಬೀಜಗಳುದುರಿ ಗಿಡವಾಗಿ ಹೂಬಿಡದಿದ್ದರೆ ಜೇನು ಹುಳುವಿಗೆ ಮಕರಂದ ಸಿಗದು. ಸಮತೋಲನ ಹದ ತಪ್ಪಿದಲ್ಲಿ ಪರಿಸರ ಮತ್ತು ಪ್ರಕೃತಿಯಲ್ಲಿ ವೈಪರೀತ್ಯಗಳು ಸಂಭವಿಸಿ ಮಾನವನ ಜೀವನದಲ್ಲೂ ತನ್ನ ಸ್ವರೂಪ ತೋರಿಸುತ್ತದೆ.
ಜೇನು ತಯಾರಿಗೆ ಬೇಕಾದ ಕಚ್ಚಾ ವಸ್ತು ಹೂವಿನ ಮಕರಂದ. ಜೇನುಗಳು ಹೊಟ್ಟೆಯಲ್ಲಿ ಸುಕ್ರೋಸ್‌ನಂಥ ಸಂಕೀರ್ಣ ಸಕ್ಕರೆ ಎನ್‌ಜೈಮುಗಳ ಮೂಲಕ ಫ್ರಕ್ಟೋಸ್ ಗ್ಲೂಕೋಸ್‌ಗಳಂಥ ಸರಳ ರೂಪಕ್ಕೆ ಪರಿವರ್ತಿತವಾಗುತ್ತದೆ. ಶೇಕಡಾ ೮೦ರಷ್ಟು ಸಕ್ಕರೆ ಅಂಶವಿರುವ ಜೇನು ಸಿದ್ಧವಾಗುತ್ತದೆ. ಜೇನುತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಹೆಜ್ಜೇನು, ಕೋಲುಜೇನು, ತುಡುವಿ, ಮಿಸ್ರಿ ಎಂಬ ನಾಲ್ಕು ಜಾತಿಯ ನೊಣಗಳು ಭಾರತದಲ್ಲಿವೆ. ಇವುಗಳಲ್ಲಿ ತುಡುವಿ ಜೇನ್ನೊಣಗಳನ್ನು ಮಾತ್ರ ಸಾಕಬಹುದು. ಹೆಜ್ಜೇನಿನ ಒಂದು ಹುಟ್ಟಿನಿಂದ ೩೦ ಕೆಜಿ ಜೇನು ಸಿಗುತ್ತದೆ.
ಜೇನಿನ ಹಲವಾರು ಉಪಯುಕ್ತತೆಗಳನ್ನು ಮನಗಂಡಿದ್ದ ಹಿಂದಿನ ರೈತಾಪಿ ಜನರು ಗ್ರಾಮದ ಗುಂಡುತೋಪುಗಳು, ಬಂಡೆಗಲ್ಲುಗಳ ಬಳಿ ಕಟ್ಟಿರುವ ಹೆಜ್ಜೇನುಗಳ ತಂಟೆಗೆ ಹೋಗಬಾರದು ಎನ್ನುತ್ತಿದ್ದರು. ಗ್ರಾಮದ ಸುತ್ತಮುತ್ತ ಜೇನುಗೂಡುಗಳು ಹೆಚ್ಚಿದ್ದಷ್ಟೂ ಗ್ರಾಮಕ್ಕೇ ಉಪಯೋಗ ಎಂಬ ನಂಬಿಕೆಯಿದೆ. ಔಷಧಿ ಸಿಂಪಡನೆ ಹೆಚ್ಚಿದಂತೆ ಮತ್ತು ಜೇನುತುಪ್ಪದ ಆಸೆಗೆ ಜೇನುಗೂಡಿಗೆ ಕೈಹಾಕಿದಂತೆ ಹಲವೆಡೆ ಜೇನುಗಳು ಗ್ರಾಮಗಳ ಬಳಿಯಿರುವ ತಮ್ಮ ವಾಸಸ್ಥಳಗಳನ್ನು ತೊರೆದಿವೆ.
’ನಮ್ಮ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಸ್ತೆ ಬದಿಯಲ್ಲಿರುವ ಗುಂಡು ತೋಪಿನಲ್ಲಿ ಹಳೆಯ ಕಾಲದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿವೆ. ಸುಮಾರು ೧೩೦ ವರ್ಷಗಳಿಗೂ ಹಿಂದಿನ ಮರಗಳಿವು. ಬಹಳ ಎತ್ತರದಲ್ಲಿರುವುದರಿಂದ ಜೇನುಗೂಡುಗಳನ್ನು ಯಾರೂ ಕೀಳಲು ಹೋಗಿಲ್ಲ. ಅವುಗಳೂ ಇದುವರೆಗೂ ಯಾರ ಮೇಲೂ ಧಾಳಿ ಮಾಡಿಲ್ಲ. ನಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಬೆಳೆ ಹೆಚ್ಚಾಗಲು ಈ ಜೇನ್ನೊಣಗಳು ಕಾರಣವಾಗಿವೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವವರಿಗೆ ಇವುಗಳು ನಿಜಕ್ಕೂ ವರದಾನವಾಗಿವೆ’ ಎನ್ನುತ್ತಾರೆ ತುಮ್ಮನಹಳ್ಳಿಯ ಬಚ್ಚರೆಡ್ಡಿ.
–ಡಿ.ಜಿ.ಮಲ್ಲಿಕಾರ್ಜುನ.

ಮಳ್ಳೂರು, ಎಚ್‌.ಕ್ರಾಸ್‌ನ ದೇವಾಲಯಗಳಲ್ಲಿ ಕಳ್ಳತನ

0

ತಾಲ್ಲೂಕಿನ ಮಳ್ಳೂರು ಮತ್ತು ಎಚ್‌.ಕ್ರಾಸ್‌ ದೇವಾಲಯಗಳಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಕರಗದಮ್ಮ ದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಕರಗದಮ್ಮ ದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.

ಮಳ್ಳೂರಿನ ಕರಗದಮ್ಮ ದೇವಿ ದೇವಾಲಯದ ಬಾಗಿಲನ್ನು ಮುರಿದು ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂಗಳ ದೇವಿಯ ಕಿರೀಟ, ಆಭರಣಗಳು ಹಾಗೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಹುಂಡಿಯಿಂದ ದೋಚಿ ಹುಂಡಿಯನ್ನು ಕೆರೆಯ ಅಂಗಳದಲ್ಲಿ ಬಿಸಾಡಿದ್ದು ಕಂಡು ಬಂದಿದೆ.
ಕರಗದಮ್ಮ ದೇವಿ ದೇವಾಲಯ ಪುರಾತನವಾಗಿದ್ದು ಕಳೆದ ವರ್ಷವಷ್ಟೇ ಪುನರುಜ್ಜೀವನಗೊಳಿಸಲಾಗಿತ್ತು. ದೇವಾಲಯದ ಸುತ್ತ ಮನೆಗಳಿದ್ದರೂ ಸಹ ಕಳ್ಳತನವಾಗಿರುವುದು ಸೋಜಿಗವಾಗಿದೆ ಮತ್ತು ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಕಳ್ಳರು ಹತ್ತಿರದ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿದ್ದರು ಎನ್ನಲಾಗಿದೆ. ದೇವಾಲಯ ಸಮಿತಿಯವರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳವನ್ನೂ ಕರೆಸಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ  ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.

ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಲಾಗಿದೆ. ದೇವಾಲಯದ ಹಿಂಬಾಗದ ಆವರಣದಲ್ಲಿಯೇ ಪೊಲೀಸ್‌ ಠಾಣೆಯಿದ್ದು, ಮುಂದೆ ಹಾಗೂ ಪಕ್ಕ ಹೆದ್ದಾರಿಯಿದೆ. ಆದರೂ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಭಜನೆ ಸೇವೆ

0

ಶಿಡ್ಲಘಟ್ಟ ಪಟ್ಟಣದ ಉಲ್ಲೂರುಪೇಟೆ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪ್ರತಿ ಶನಿವಾರದ ಮುಂಜಾನೆಯ ಭಜನೆ ಸೇವೆ ಲಕ್ಷ್ಮಯ್ಯ – ತಬಲ, ಗೋಪಾಲಪ್ಪ – ಕಂಜರಿ, ಮುನಿಯಪ್ಪ – ಹಾರ್ಮೋನಿಯಮ್ ಹಾಗೂ ದೇವರಮಳ್ಳೂರು ವೆಂಕಟರಾಯಪ್ಪನವರ ಗಾಯನದೊಂದಿಗೆ ಹಲವು ವರ್ಷಗಳಿಂದ ನೆರವೇರಲ್ಪಡುತ್ತಿದೆ.

ಬರಗಾಲ, ಮೇವು ನೀರಿನ ಕೊರತೆಯ ಹೊರತಾಗಿಯೂ ಹೈನುಗಾರಿಕೆ ಕ್ಷೇತ್ರದಲ್ಲಿ ತಾಲ್ಲೂಕು ಮುಂದಿದೆ

0

ಬಯಲುಸೀಮೆಯ ಪ್ರದೇಶದಲ್ಲಿ ಅಲ್ಪಸ್ವಲ್ಪ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಶ್ರಮಿಕ ರೈತರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 20 ಲಕ್ಷ ರೂಗಳ ವೆಚ್ಚದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಮಳೆಯಾಗದೇ ಬರಗಾಲ ಬಂದಿದ್ದು, ರಾಸುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ. ಈಚೆಗೆ ಪರಿಶೀಲನೆಗೆಂದು ಆಗಮಿಸಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಿದ್ದೇನೆ. ನೀರಿನ ತೊಂದರೆಯಿದ್ದರೂ ಜಿಲ್ಲೆಯು ಹಾಲಿನ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಗುಣಮಟ್ಟದ ಹಾಲಿಗೂ ಜಿಲ್ಲೆ ಹೆಸರುಪಡೆದಿದೆ. ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಬಹುಮುಖ್ಯ. ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರತಿದಿನ 3000 ಲೀಟರ್ ಹಾಲು ಸಂಗ್ರಹಿಸಿ ತಾಲ್ಲೂಕಿನಲ್ಲೇ ದ್ವಿತೀಯ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಹೆಚ್ಚು ಹಾಲನ್ನು ಉತ್ಪಾದಿಸುವ ಸದಸ್ಯರಿಗೆ ಬಹುಮಾನಗಳನ್ನು ನೀಡಲಾಯಿತು.
ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಚನ್ನೇಗೌಡ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಉಪಾಧ್ಯಕ್ಷೆ ಶಶಿಕಲಾ ನಟರಾಜ್, ಮೇಲೂರು ರವಿಕುಮಾರ್, ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಕೆ.ಎನ್.ಬಿ.ರೆಡ್ಡಿ, ಕೆನರಾಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ್, ಎಸ್.ಎಫ್.ಸಿ.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ಕೆ.ರಾಮಚಂದ್ರ, ರಮೇಶ, ಸೂರ್ಯನಾರಾಯಣಗೌಡ, ಅಫ್ಸರ್ಪಾಷ, ರಘುರಾಜ್, ನಾರಾಯಣಸ್ವಾಮಿ, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರೇಷ್ಮೆ ಉದ್ದಿಮೆಯ ಅಧ್ಯಯನಕ್ಕಾಗಿ ಥಾಯ್ಲೆಂಡ್ ಅಧಿಕಾರಿಗಳ ಭೇಟಿ

0

ಶಿಡ್ಲಘಟ್ಟದ ರೇಷ್ಮೆ ಉದ್ದಿಮೆಯನ್ನು ಅಧ್ಯಯನ ಮಾಡಿ ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲೆಂದು ಗುರುವಾರ ಥಾಯ್ಲೆಂಡ್ ದೇಶದ ರೇಷ್ಮೆ ಇಲಾಖೆಯ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು.
ಥಾಯ್ಲೆಂಡ್ ದೇಶದ ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಹಾಗೂ ಆರ್ಥಿಕ ತಜ್ಞರ ಒಂಬತ್ತು ಮಂದಿಯ ತಂಡ, ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆ, ರೇಷ್ಮೆ ನೂಲು ಬಿಚ್ಚಾಣಿಕಾ ಕೇಂದ್ರಗಳು, ಟ್ವಿಸ್ಟಿಂಗ್ ಘಟಕಗಳು, ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕವನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು.
ಥಾಯ್ಲೆಂಡ್ ಅಧಿಕಾರಿಗಳ ತಂಡದ ಒಂದು ವಾರದ ಭಾರತ ಭೇಟಿಯಲ್ಲಿ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ರೇಷ್ಮೆ ಉದ್ದಿಮೆ, ಕಾಮಗಾರಿ ವೀಕ್ಷಣೆ, ಆರ್ಥಿಕತೆಯ ಅಧ್ಯಯನದೊಂದಿಗೆ ಮೈಸೂರು ಹಾಗೂ ಬೆಂಗಳೂರು ರೇಷ್ಮೆ ಸಂಶೋಧನಾ ಕೇಂದ್ರಗಳಿಗೂ ಭೇಟಿ ನೀಡಲಿದ್ದಾರೆ.
ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ರೇಷ್ಮೆ ಗೂಡಿನ ವಹಿವಾಟು, ಹರಾಜು ಪ್ರಕ್ರಿಯೆ, ರೇಷ್ಮೆ ಗೂಡಿನ ಗುಣಮಟ್ಟವನ್ನು ವೀಕ್ಷಿಸಿ, ಕಚ್ಛಾ ರೇಷ್ಮೆ ಉತ್ಪಾದನಾ ಘಟಕಗಳಾದ ಚರಕಾ, ಫಿಲೇಚರ್ ಹಾಗೂ ಮಲ್ಟಿ ಎಂಡ್ ಕೇಂದ್ರಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿಯನ್ನು ಪಡೆದರು. ತಾಲ್ಲೂಕಿನ ಹನುಮಂತಪುರದ ಬಳಿಯಿರುವ ಎಸ್.ಪಿ.ಎಸ್ ಮುನಾವರ್ ಅವರ ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕಕ್ಕೂ ಭೇಟಿ ನೀಡಿ, ತ್ಯಾಜ್ಯರೇಷ್ಮೆಯನ್ನು ಸಂಸ್ಕರಿಸಿ ಹತ್ತಿಯಂತೆ ಮಾಡಿ ಅದರಿಂದ ನೂಲು ತಯಾರಿಸುವ ರೀತಿಯನ್ನು ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕೌಶಲ್ಯದ ಬಗ್ಗೆಯೂ ತಿಳಿದುಕೊಂಡರು.
‘ಥಾಯ್ಲೆಂಡ್ನಲ್ಲಿ ರೇಷ್ಮೆ ಉದ್ದಿಮೆ ಸಣ್ಣ ಪ್ರಮಾಣದಲ್ಲಿದೆ. ನಮ್ಮ ದೇಶ ಕೂಡ ಭಾರತದಂತೆಯೇ ಉಷ್ಣವಲಯದ ದೇಶವಿದ್ದು, ರೇಷ್ಮೆ ಉದ್ದಿಮೆ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಯಾಂತ್ರಿಕತೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ನಾವು ಇಲ್ಲಿನ ಶ್ರಮಿಕರ ಕೌಶಲ್ಯವನ್ನು ಕಂಡು ಬೆರಗಾದೆವು. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ. ನಮ್ಮೊಂದಿಗೆ ನಮ್ಮ ದೇಶದ ಆರ್ಥಿಕ ತಜ್ಞರೂ ಬಂದಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯ ಉತ್ತಮವಾಗಿರುವುದರಿಂದ ತಂತ್ರಜ್ಞಾನ, ಕೌಶಲ್ಯ, ಗುಣಮಟ್ಟದ ಬಗ್ಗೆ ತಿಳಿದುಕೊಂಡು ನಮ್ಮಲ್ಲೂ ರೇಷ್ಮೆ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಬಂದಿದ್ದೇವೆ’ ಎಂದು ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆಯ ನಿರ್ದೇಶಕಿ ಸಿರಿಪೋರ್ನ್ ಬೂನ್ಚೋ ತಿಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಎಚ್.ಎನ್.ಮಹೇಶ್, ಪ್ರಕಾಶ್ ಭಟ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಪ್ಪ, ಥಾಯ್ಲೆಂಡ್ ನಿಯೋಗದ ಮೊನ್ಚಾಯ್ ಮೀಸುಕ್, ಸಮ್ರನ್ ಸುಕ್ಜಯ್, ದಿರಕೆ ಸುಂಗ್ಸೋರ್ನ್, ರುಂಗ್ಸಕ್ ಬೂನೋಂನ್ಟೆ, ತಿಪ್ಪತ್ತೊಸ್ನ್ ಮಸ್ಗರೂನ್, ಪಕ್ವಿಪಾ ಪೆಚ್ವಿಚಿಟ್, ಕನ್ನಿಕಾ ಸೊಂತಿ, ಕನೋಕ್ವಾನ್ ಕುನ್ನಥಮ್ ಹಾಜರಿದ್ದರು.

ನವರಾತ್ರಿಯ ದಸರಾ ಗೊಂಬೆ ಆಕರ್ಷಣೆ

0

ಶಿಡ್ಲಘಟ್ಟದ ಗೌಡರಬೀದಿಯ ಮಂಜುನಾಥ್ ಅವರ ಮನೆಯಲ್ಲಿ ನವರಾತ್ರಿಯ ಪ್ರಯುಕ್ತ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.

ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ನವರಾತ್ರಿ ಹೋಮಗಳನ್ನು ಹಮ್ಮಿಕೊಂಡಿದ್ದು, ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.

ರಾಜೀ ಸಂಧಾನದ ಮೂಲಕ ಹಣ, ಸಮಯ ಉಳಿಸಿ

0

ರಾಜೀ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾದ ಅವಕಾಶವಿದ್ದು ಅದರ ಸದುಪಯೋಗಪಡಿಸಿಕೊಳ್ಳುವಂತೆ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ವಿಜಯ್ದೇವರಾಜ್ ಅರಸ್ ತಿಳಿಸಿದರು.
ನ್ಯಾಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರಾದ್ಯಂತ ಸೆಪ್ಟೆಂಬರ್ 1ರಿಂದ ಡಿಸೆಂಬರ್ 6 ರವರೆಗೆ ಬೃಹತ್ ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಶಿಡ್ಲಘಟ್ಟದ ನ್ಯಾಯಾಲಯದಲ್ಲೂ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕಾನೂನಿನನ್ವಯ ರಾಜೀ ಇತ್ಯರ್ಥಕ್ಕೆ ಅರ್ಹವಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಸಿವಿಲ್ ದಾವೆಗಳು ಮುಂತಾದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಅದೇ ರೀತಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಈ ರೀತಿ ಇತ್ಯರ್ಥಪಡಿಸಿಕೊಂಡ ದಾವೆಗಳಲ್ಲಿ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಸಂಬಂಧಪಟ್ಟ ಪಕ್ಷಗಾರರಿಗೆ ಹಿಂದಿರುಗಿಸಲಾಗುತ್ತದೆ ಎಂದು ತಿಳಿಸಿದರು.

ಆಂಥ್ರಾಕ್ಸ್ ಖಾಯಿಲೆಯಿಂದ ರಾಸುಗಳ ಸಾವು

0

ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಸುಮಾರು ಹನ್ನೊಂದು ರಾಸುಗಳ ಮರಣದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಜುಲೈ ತಿಂಗಳ ಕೊನೆಯ ವಾರದಲ್ಲಿ ಎಲ್.ಮುತ್ತುಗದಹಳ್ಳಿಯ ಅಂಗಡಿ ಮುನಿವೆಂಕಟಸ್ವಾಮಿ ಅವರ ಒಂದು ಮಿಶ್ರತಳಿ ಹಸು, ಆಗಸ್ಟ್ ತಿಂಗಳಿನಲ್ಲಿ ಅಕ್ಕಲಪ್ಪ ಅವರ ಮಿಶ್ರತಳಿ ಹಸುವಿಗೆ ಚಿಕಿತ್ಸೆ ನೀಡಿದ ನಂತರ ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಕಿವಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ನೆರಡಿ ರೋಗ(ಆಂಥ್ರಾಕ್ಸ್) ಎಂದು ತಿಳಿದು ಬಂದಿತು. ಹೀಗಾಗಿ ಗ್ರಾಮದ 138 ದನಗಳು, 48 ಎಮ್ಮೆಗಳು, 518 ಕುರಿಗಳು ಮತ್ತು 40 ಮೇಕೆಗಳಿಗೆ ಆಂಥ್ರಾಕ್ಸ್ ಖಾಯಿಲೆಯ ವಿರುದ್ಧ ಲಸಿಕೆ ಹಾಕಿದ್ದೇವೆ. ನಾವು ಚಿಕಿತ್ಸೆ ನೀಡಿ ಪ್ರಯೋಗಾಲಯದಿಂದ ವರದಿ ಬಂದಿರುವ ಪ್ರಕಾರ ಎರಡು ಹಸುಗಳು ಆಂಥ್ರಾಕ್ಸ್ ಖಾಯಿಲೆಯಿಂದ ಮೃತಪಟ್ಟಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ತಿಳಿಸಿದರು.
‘ಎಲ್.ಮುತ್ತುಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆಂಥ್ರಾಕ್ಸ್ ರೋಗಗ್ರಸ್ಥ ಗ್ರಾಮಗಳಾಗಿರುವುದರಿಂದ ಸತ್ತ ಜಾನುವಾರುಗಳನ್ನು ಆಳವಾದ ಗುಣಿಯಲ್ಲಿ ಹೂಳಬೇಕು. ನಂತರ ಸುಣ್ಣ ಹಾಕಬೇಕು. ಈ ರೋಗ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ. ಹಲವು ವರ್ಷಗಳ ಹಿಂದೆ ಅಲಗುರ್ಕಿ ಗ್ರಾಮದ ಶ್ರೀರಾಮಪ್ಪ ಅವರಿಗೆ ಈ ಖಾಯಿಲೆ ತಗುಲಿ ರಾಷ್ಟ್ರೀಯ ಸುದ್ದಿಯಾಗಿತ್ತು’ ಎಂದು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್.ಶಿವರಾಮ್ ಹೇಳಿದರು.
‘ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಆಂಥ್ರಾಕ್ಸ್ ಖಾಯಿಲೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಆಂಥ್ರಾಕ್ಸ್, ಗಳಲೆ ಮತ್ತು ಚಪ್ಪೆರೋಗಗಳ ಗುಣಲಕ್ಷಣಗಳು ಒಂದೇ ರೀತಿಯಾಗಿದ್ದು ಪ್ರಯೋಗಾಲಯದ ಮೂಲಕವಷ್ಟೇ ಅವನ್ನು ಗುರುತಿಸಬೇಕು. ಈ ರೀತಿಯ ಖಾಯಿಲೆಗಳು ಕಂಡುಬಂದಲ್ಲಿ ತಕ್ಷಣವೇ ಕೋಚಿಮುಲ್, ಪಶುವೈದ್ಯಾಧಿಕಾರಿಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗೆ ಮಾಹಿತಿ ನೀಡಿ. ಗುಂಪು ವಿಮಾ ಯೋಜನೆಯನ್ನು ಹಾಲು ಒಕ್ಕೂಟ ಜಾರಿಗೆ ತಂದಿದ್ದು, ಕೇವಲ 400 ರೂಗಳಷ್ಟು ಹಣ ಕಟ್ಟಿ 40 ಸಾವಿರ ರೂಗಳ ವಿಮೆಯನ್ನು ಪಡೆದುಕೊಳ್ಳಬಹುದು. ಸುಮಾರು 150 ರಾಸುಗಳಿರುವ ಎಲ್.ಮುತ್ತುಗದಹಳ್ಳಿಯಲ್ಲಿ ಕೇವಲ 40 ರಾಸುಗಳಿಗೆ ವಿಮೆ ಮಾಡಿಸಿದ್ದಾರೆ’ ಎಂದು ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಅವರಿಗೆ ಸರ್ಕಾರ ಪರಿಹಾರ ನೀಡಬೇಕು. ಆಂಥ್ರಾಕ್ಸ್ ಖಾಯಿಲೆಯೆಂದು ದೃಢಪಟ್ಟಿರುವುದರಿಂದ ಪಂಚಾಯತಿ ವತಿಯಿಂದ ಸ್ವಚ್ಛತೆಗೆ ಗಮನ ಕೊಡಬೇಕು. ಆಂಥ್ರಾಕ್ಸ್ ಖಾಯಿಲೆ ಮನುಷ್ಯರಿಗೂ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಮೊಕ್ಕಾಂ ಹೂಡಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಒತ್ತಾಯಿಸಿದರು.

ಪರೋಪಕಾರದಿಂದ ಆತ್ಮ ತೃಪ್ತಿ

0

ಎಂದಿನಂತೆ ಇಂದು ಬೆಳಿಗ್ಗೆ ಪೇಪರ್ ಓದುತ್ತಿರುವಾಗ ಒಂದು ಲೇಖನ ಕಣ್ಣಿಗೆ ಬಿತ್ತು. ಅದರಲ್ಲಿ ಕತ್ತಲೆಯಾಗಿ ದಾರಿ ಕಾಣದೇ ಹೋದಾಗ ದೇವರು ಒಂದು ಸಣ್ಣ ಬೆಳಕನ್ನು ಚೆಲ್ಲುತ್ತಾನೆ ಎನ್ನುವ ಉಲ್ಲೇಖವಿತ್ತು. ಅದನ್ನು ಓದುತ್ತಾ ನನ್ನ ಜೀವನದ ಒಂದು ಘಟನೆ ನೆನಪಿಗೆ ಬಂತು.
15 ವರ್ಷಗಳ ಕೆಳಗಿನ ಮಾತು, ಒಮ್ಮೆ ಅಮ್ಮ ಹೇಳಿದ ವಸ್ತುಗಳನ್ನು ತರಲು ನಾನು ನಮ್ಮ ಮನೆಯ ಹತ್ತಿರದ ಅಂಗಡಿಗೆ ಹೊಗುತ್ತಿರುವಾಗ, 10-12 ವರ್ಷದ ಸಣ್ಣ ಬಾಲಕ ಸೈಕಲನ್ನು ಜೋರಾಗಿ ತುಳಿದುಕೊಂಡು ಬರುತ್ತಿದ್ದ. ಅದು ಏನಾಯಿತೋ ನಾಕಾಣೆ, ಸೈಕಲ್ ಮೇಲಿನ ಸಂತುಲನೆ ತಪ್ಪಿ ಆ ಹುಡುಗ ಬಿದ್ದುಬಿಟ್ಟ. ನಾನು ಒಮ್ಮೆಲೆ ಓಡಿ ಹೋಗಿ ಅವನ ಸೈಕಲ್ ಎತ್ತಿ ನಿಲ್ಲಿಸಿ “ಯಾಕೋ ಪುಟ್ಟ ಏನಾಯಿತು, ನಿಧಾನವಾಗಿ ಹೊಡೆಯಬಾರದಾ ಪೆಟ್ಟಾಯಿತಾ” ಎಂದು ಕೇಳುತ್ತಾ ಅವನನ್ನು ಎತ್ತಿ ನಿಲ್ಲಿಸಿ ಮೈದಡವಿದೆ, ಗಾಯವೇನಾದರೂ ಆಗಿದೆಯಾ ಎಂದು ನೋಡಿದೆ. ಆದರೆ ಆತ ನಾಚಿಕೆಯಿಂದ ಮುದ್ದೆಯಾಗಿ “ಇಲ್ಲ ಅಕ್ಕ ಏನೂ ಆಗಿಲ್ಲ” ಎಂದು ಹೇಳಿ ಒಂದು ಕ್ಷಣವೂ ನಿಲ್ಲದೆ ಸೈಕಲ್ ಏರಿ ಹೊರಟು ಹೋದ. ಆ ಘಟನೆಯನ್ನು ಅಲ್ಲಿಗೆ ಬಿಟ್ಟು ಅಮ್ಮ ಹೇಳಿದ್ದನ್ನು ತರಲು ಅಂಗಡಿಯ ಕಡೆಗೆ ನಡೆದೆ.
ಕೆಲವು ದಿನಗಳ ನಂತರ ಅದೇ ದಾರಿಯಲ್ಲಿ ಹೋಗುವಾಗ ಒಬ್ಬ ಹುಡುಗ “ಅಕ್ಕ ಚೆನ್ನಾಗಿದ್ದಿರಾ” ಎಂದು ಕೇಳಿದ, ಅರೆ! ಇವನ್ಯಾರು ನಾನು ನೋಡೇ ಇಲ್ಲ ಎಂದು ಯೋಚಿಸುತ್ತಾ, ” ನೀನು ಯಾರು ಪುಟ್ಟ ನನಗೆ ಗೊತ್ತಾಗಲಿಲ್ಲ” ಎಂದೆ. ಆಗ ಆ ಹುಡುಗ ಹೇಳಿದ, “ಅಂದು ಸೈಕಲ್‍ನಿಂದ ಬಿದ್ದಾಗ ನೀವು ಎತ್ತಿದ್ದಿರಲ್ಲ ಅವನು ನಾನು” ಎಂದ. ಆಗ ನೆನಪಾಯಿತು ಆತ ಅಂದು ನಾಚಿಕೆಯಿಂದ ಓಡಿದ ಕಾರಣ ಅವನ ಮುಖ ಪರಿಚಯ ನನಗೆ ಆಗಿರಲಿಲ್ಲ. ಆತನ ಕುಶಲೋಪರಿ ವಿಚಾರಿಸಿ ನಾನೂ ಮುಂದೆ ನಡೆದೆ.
ಆದರೆ ಅಂದಿನ ದಿನ ನನ್ನ ಮನಸ್ಸು ಅದೆಷ್ಟು ಉಲ್ಲಸಿತವಾಗಿ ಹಾರಾಡುತ್ತಿತ್ತು ಎಂದು ನಾನು ಮಾತಿನಲ್ಲಿ ವ್ಯಕ್ತಪಡಿಸಲಾರೆ. ಪರಿಚಯವೇ ಇಲ್ಲದೇ ಮಾಡಿದ ಒಂದು ಸಣ್ಣ ಸಹಾಯಕ್ಕೆ ಆತ ನನ್ನ ನೆನಪಿಟ್ಟು ಮಾತನಾಡಿಸಿದ್ದ. ನಮಗೆ ಅದೆಷ್ಟೇ ಕಷ್ಟವಾದರೂ ಆ ಸಮಯದಲ್ಲಿ ದೊರೆಯುವ ಸಣ್ಣ ಸಹಾಯವೂ ಅತೀ ಮಹತ್ವದ ಪಾತ್ರವಹಿಸುತ್ತದೆ.
ಮನುಷ್ಯ ಮತ್ತೊಬ್ಬರಿಗೆ ಸಹಾಯ ಮಾಡಿದಾಗ ದೊರೆಯುವ ತೃಪ್ತಿ, ಆನಂದ ಬೇರೆಯಾವುದರಿಂದಲೂ ಸಿಗಲಾರದು. ಮನುಷ್ಯರಾದ ನಾವು ಇಂಥ ಆನಂದವನ್ನು ಅನುಭವಿಸಿದಾಗಲೇ ಜೀವನ ಸಾರ್ಥಕ ಎನ್ನಿಸುತ್ತದೆ.
– ಕುಸುಮ

ಶಾಸಕರ ಸ್ವಗ್ರಾಮದಲ್ಲಿ ಹನ್ನೊಂದು ರಾಸುಗಳ ಮರಣ

0

ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಸುಮಾರು ಹನ್ನೊಂದು ಹಸುಗಳು ಮೃತಪಟ್ಟಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಪಶುವೈದ್ಯಾಧಿಕಾರಿಗಳು ಬಂದು ಹೋಗಿದ್ದಾರೆ ಆದರೆ ಇದುವರೆಗೂ ಜಾನುವಾರುಗಳಗೆ ಯಾವ ರೋಗ ಬಂದಿದೆ, ಏಕೆ ಸಾಮೂಹಿಕವಾಗಿ ಮರಣವನ್ನಪ್ಪುತ್ತಿದೆ ಎಂಬುದನ್ನು ಧೃಡಪಡಿಸುತ್ತಿಲ್ಲ. ಹಸುಗಳನ್ನೇ ನಂಬಿ ಬದುಕುತ್ತಿದ್ದೇವೆ. ಹಲವರು ಮೃತಪಟ್ಟ ಜಾನುವಾರುಗಳನ್ನು ಹೂಳಲೂ ಆಗದೇ ಕೆರೆಯ ಪಕ್ಕ ಬಿಸಾಡಿದ್ದಾರೆ. ಖಾಯಿಲೆ ವಾಸಿಯಾಗುವುದಿಲ್ಲವೆಂದು ಕೆಲವರು ಕಸಾಯಖಾನೆಗೆ ಮಾರಿದ್ದಾರೆ. ಯಾರೋ ಒಬ್ಬಿಬ್ಬರು ಮಾತ್ರ ಸ್ವಂತ ಖರ್ಚಿನಿಂದ ಜೆಸಿಬಿ ತರಿಸಿ ಹೂಳು ತಗಿಸಿ ಸತ್ತ ಹಸುಗಳನ್ನು ಮಣ್ಣು ಮಾಡಿದ್ದಾರೆ. ಸತ್ತ ಹಸುವಿನ ನೋವು, ಆರ್ಥಿಕ ಹೊರೆಯನ್ನು ಹೊತ್ತಿರುವ ರೈತನಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಇಲ್ಲವಾಗಿದ್ದಾರೆ. ಹಾಲು ಒಕ್ಕೂಟದವರಾಗಲೀ, ಹಾಲು ಉತ್ಪಾದಕರ ಸಹಕಾರ ಸಂಘದವರಾಗಲೀ ರೋಗ ಹರದಂತೆ ತಡೆಯಲು ಕನಿಷ್ಠ ಹಸುವನ್ನು ಹೂಳಲಾದರೂ ಸಹಾಯ ಮಾಡಬೇಕು. ಕೆಲವಕ್ಕೆ ವಿಮೆ ಮಾಡಿಸಿದ್ದರೆ, ಕೆಲವಕ್ಕೆ ಮಾಡಿಸಿಲ್ಲ. ಹೈನುಗಾರಿಕೆಯನ್ನು ನಂಬಿದವರು ನೆಲಕಚ್ಚಿದ್ದಾರೆ. ಸರ್ಕಾರ ಸಹಾಯ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.
ಎಲ್.ಮುತ್ತುಗದಹಳ್ಳಿ ಗ್ರಾಮದ ಮುನಿವೆಂಕಟಸ್ವಾಮಿ, ಸೊಣ್ಣಪ್ಪ, ಅಕ್ಕಲಪ್ಪ, ಎಂ.ನಾರಾಯಣಸ್ವಾಮಿ, ವೆಂಕಟೇಶಪ್ಪ, ರಾಮಣ್ಣ, ಸುಬ್ರಮಣಿ ಅವರ ಒಂದೊಂದು ಹಸುಗಳು ಹಾಗೂ ಕೃಷ್ಣಪ್ಪ ಮತ್ತು ಸುಬ್ಬರಾಯಪ್ಪ ಅವರ ಎರಡು ಹಸುಗಳು ಸೇರಿದಂತೆ ಒಟ್ಟು 11 ಹಸುಗಳು ಮೃತಪಟ್ಟಿವೆ.
‘ಮೇವು ತಿನ್ನುತ್ತಾ ನೀರು ಕುಡಿಯುತ್ತಿದ್ದ ಹಸು ಇದ್ದಕ್ಕಿದ್ದಂತೆಯೇ ಸಪ್ಪಗಾಯಿತು. ತಿನ್ನುವುದನ್ನು ನಿಲ್ಲಿಸಿಬಿಟ್ಟಿತು. ತಕ್ಷಣ ಹೋಗಿ ಪಶುವೈದ್ಯಾಧಿಕಾರಿ ಡಾ.ಮುನಿನಾರಾಯಣರೆಡ್ಡಿ ಅವರನ್ನು ಕರೆದುಕೊಂಡು ಬಂದೆವು. ಅವರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ಹಸು ಮೃತಪಟ್ಟಿತು. ವೈದ್ಯಾಧಿಕಾರಿ ಅದರ ಕಿವಿಯನ್ನು ಕತ್ತರಿಸಿ ರೋಗದ ಕಾರಣ ಕಂಡು ಹಿಡಿಯಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಇನ್ನೊಂದು ಹಸುವೂ ಅದೇ ರೀತಿ ಆಯಿತು. ಅದಕ್ಕೂ ವೈದ್ಯರು ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ. ಯಾವ ರೋಗ, ಏನಾಗುತ್ತಿದೆ ಎಂದು ತಿಳಿಯದಂತೆ ಕೆಲ ಗಂಟೆಗಳಲ್ಲಿ ನಮ್ಮ ಎರಡು ಹಸುಗಳನ್ನು ಕಳೆದುಕೊಂಡೆವು. ವೈದ್ಯರು ಆಂಥ್ರಾಕ್ಸ್ ರೋಗವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ’ ಎಂದು ಎಚ್.ಕೃಷ್ಣಪ್ಪ ತಿಳಿಸಿದರು.
‘ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಜಾನುವಾರುಗಳಿಗೆ ಮೇವಿಲ್ಲ. ಕುಡಿಯಲು ನೀರಿಲ್ಲ ಎಂದು ಈಗಾಗಲೇ ರೈತಸಂಘದಿಂದ ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವಾಗ ಕಷ್ಟಪಟ್ಟು ಜಾನುವಾರುಗಳನ್ನು ಸಾಕುವ ರೈತನಿಗೆ ಕೊಡಲಿಪೆಟ್ಟಿನಂತೆ ಹಸುಗಳಿಗೆ ಖಾಯಿಲೆ ಬಂದು ಮೃತಪಡುತ್ತಿವೆ. ಇಷ್ಟೊಂದು ರಾಸುಗಳು ಸತ್ತಿದ್ದರೂ ಖಾಯಿಲೆ ಯಾವುದು ಎಂಬುದನ್ನು ಅಧಿಕಾರಿಗಳು ಧೃಡಪಡಿಸದಿರುವುದು ದುರದೃಷ್ಟಕರ. ಸತ್ತ ರಾಸುಗಳ ಮಾಲೀಕರಿಗೆ ಸರ್ಕಾರ ಕನಿಷ್ಠ 50 ಸಾವಿರ ರೂಗಳಾದರೂ ಪರಿಹಾರ ನೀಡಿ ಅವರನ್ನು ಉಳಿಸಬೇಕು’ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಬ್ಲೂಡು ಆರ್.ದೇವರಾಜ್, ಗ್ರಾಮದ ಮಂಜುನಾಥರೆಡ್ಡಿ, ಶಶಿಧರ್, ಮುನಿನಾರಾಯಣಪ್ಪ, ಸುಶೀಲಮ್ಮ, ಕೆಂಪಮ್ಮ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಶೆಟ್ಟಹಳ್ಳಿ ಗ್ರಾಮದದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಗುಂಪು ರಚನಾ ಕಾರ್ಯಕ್ರಮ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕು ಬಶೆಟ್ಟಹಳ್ಳಿ ಗ್ರಾಮದ ಈಶ್ವರದೇವಾಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗುಂಪು ರಚನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ರೆಡ್ಡಿಯವರು ಉದ್ಘಾಟಿಸಿದರು. ಮೇಲ್ವಿಚಾರಕ ಜನಾರ್ಧನ್ ನಾಯ್ಕ್, ಶಶಿಕುಮಾರ್, ವಕೀಲೆ ಲಕ್ಷ್ಮಿ, ಚಿಕ್ಕದಾಸಪ್ಪ, ಕೆಂಪಣ್ಣ, ಆಂಜನೇಯರೆಡ್ಡಿ, ವೆಂಕಟೇಶಪ್ಪ ಹಾಜರಿದ್ದರು.

ವೃತ್ತಿಯನ್ನು ಗೌರವ ಹಾಗೂ ಪ್ರೀತಿಯಿಂದ ಕಾಣಬೇಕು – ಶಾಸಕ ಎಂ.ರಾಜಣ್ಣ

0

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪುರದ ಸ್ವಚ್ಛದ ಕಾರ್ಯ ಕೈಗೊಳ್ಳುತ್ತಾರೆ. ಅವರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಜ್ಯ ಪೌರ ನೌಕರರ ಸೇವಾ ಸಂಘದ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಸಮಸ್ಯೆಗಳೂ ಸಾಕಷ್ಟಿದ್ದು ಅದರ ಬಗ್ಗೆ ಚರ್ಚೆ ಹಾಗೂ ಸಮಸ್ಯೆ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳುವುದು ಕೂಡ ನಡೆಯಬೇಕಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಗೌರವ ಹಾಗೂ ಪ್ರೀತಿಯಿಂದ ಕಾಣುವುದಲ್ಲದೆ ಇತರ ವೃತ್ತಿಯನ್ನೂ ಗೌರವಿಸಬೇಕು. ಪೌರಕಾರ್ಮಿಕರೂ ಕೂಡ ತಮ್ಮ ಜವಾಬ್ದಾರಿಯುತ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.
ರಾಜ್ಯ ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ‘ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ಸಿಕ್ಕಿದೆ. ನಮ್ಮ ಕಷ್ಟ ಹಾಗೂ ತೊಂದರೆಗಳನ್ನು ನಿವಾರಿಸುವಲ್ಲಿ ಸಂಘವು ಶ್ರಮಿಸುತ್ತಿದೆ’ ಎಂದು ನುಡಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೌರಕಾರ್ಮಿಕರಾದ ಮುನಿಯಪ್ಪ, ಷಮೀವುಲ್ಲಾ, ಕೋದಂಡ, ಶ್ರೀರಾಂ, ರಾಮು, ಮಾರಕ್ಕ, ಲೋಕೇಶ್, ವೆಂಕಟಮ್ಮ, ಜಯಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರಾಜ್ಯ ಪೌರ ನೌಕರರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ನಾರಾಯಣಸ್ವಾಮಿ, ಡಾ.ಸತ್ಯನಾರಾಯಣರಾವ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ವೆಂಕಟಸ್ವಾಮಿ, ಬಾಲಕೃಷ್ಣ, ಲಕ್ಷ್ಮಣ, ನಂದಕಿಶನ್, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳು

0

ಪುರಾತನವಾದ, ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳನ್ನು ಕೆಲವೆಡೆ ಮಾತ್ರ ವೀರರಗುಡಿ ಎಂದು ಕರೆದು ಪೂಜಿಸಿದರೆ, ಬಹುತೇಕ ಕಡೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಆದರೆ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಸುತ್ತಮುತ್ತ ಸಿಕ್ಕ ಎಲ್ಲ ವೀರಗಲ್ಲುಗಳನ್ನು ಅಂದವಾಗಿ ಕಾಂಪೋಂಡ್ಗೆ ಅಳವಡಿಸಿ ಸಂರಕ್ಷಿಸಿದ್ದಾರೆ.
ಚೀಮಂಗಲ ಗ್ರಾಮದ ಚೌಡೇಶ್ವರಮ್ಮ ದೇವಾಲಯದ ಕಾಂಪೋಂಡ್ ಬಳಿ ಎಂಟು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಕುದುರೆಯ ಮೇಲೆ ಕತ್ತಿ ಹಿಡಿದಿರುವ ವೀರನಿಗೆ ಚಾಮರ ಹಿಡಿದಿರುವ ಸೇವಕ, ಕಳಶ ಹೊತ್ತ ಮಹಿಳೆಯರು, ಕತ್ತಿ ಗುರಾಣಿ ಹಿಡಿದ ವೀರ, ಬಿಲ್ಲುಬಾಣ ಹಿಡಿದ ವೀರ, ಹಸುಗಳನ್ನು ಸಂರಕ್ಷಿಸಲು ಪ್ರಾಣತೆತ್ತ ವೀರ… ಹೀಗೆ ನಾನಾ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
’ಗ್ರಾಮದಲ್ಲಿ ಮೊದಲು ವೀರಗುಡಿ ಎಂಬುದಿತ್ತು ಅಲ್ಲಿ ಕೆಲವು ಕಲ್ಲುಗಳಿದ್ದವು. ಅದೆಲ್ಲ ಕುಸಿದು ಹಾಳಾಗಿತ್ತು. ಚೌಡೇಶ್ವರಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಅವನ್ನು ಮತ್ತು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಬಿದ್ದಿದ್ದ ಇಂಥಹ ಕಲ್ಲುಗಳನ್ನು ತಂದು ಕಾಂಪೋಂಡ್ಗೆ ಅಳವಡಿಸಿದೆವು. ನಮ್ಮ ಗ್ರಾಮಕ್ಕೆ ಸಂಬಂಧಿಸಿದ ವೀರರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕಗಳಿವು ಎಂದು ಹಿರಿಯರು ಹೇಳುತ್ತಾರೆ. ಅಂಥಹ ವೀರರ ಚಿತ್ರಗಳನ್ನು ಜೋಪಾನವಾಗಿರಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಗ್ರಾಮದ ಆಂಜಿನಪ್ಪ.
’ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ವೀರಗಲ್ಲುಗಳು ಮತ್ತು ಶಾಸನಗಳು ಅನಾಥವಾಗಿವೆ. ಗ್ರಾಮಗಳ ದೇವಾಲಯಗಳನ್ನು ದುರಸ್ಥಿ ಅಥವಾ ಜೀಣೋದ್ಧಾರ ಮಾಡುವಾಗ ಚೀಮಂಗಲದ ಚೌಡೇಶ್ವರಿ ದೇವಾಲಯದಂತೆ ವೀರಗಲ್ಲುಗಳನ್ನು ಜೋಡಿಸಿಟ್ಟರೆ, ದೇವಾಲಯದ ಅಂದವೂ ಹೆಚ್ಚುತ್ತದೆ ಮತ್ತು ವೀರಗಲ್ಲುಗಳ ಸಂರಕ್ಷಣೆಯೂ ಆಗುತ್ತದೆ’ ಎಂದು ಗ್ರಾಮದ ಶಿಕ್ಷಕರು ತಿಳಿಸಿದರು.
– ಡಿ ಜಿ ಮಲ್ಲಿಕಾರ್ಜುನ

ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಅಂಗವಿಕಲರಿಗೆ ಚೆಕ್ ವಿತರಣೆ

0

ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಹದಿನಾರು ಮಂದಿ ಅಂಗವಿಕಲರಿಗೆ ಒಟ್ಟು 85 ಸಾವಿರ ರೂಗಳನ್ನು ವಿತರಿಸಿದರು.
‘ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಅಂಗವಿಕಲರಿಗಾಗಿ 85 ಸಾವಿರ ರೂಗಳ ಅನುದಾನ ಬಂದಿದ್ದು, ಅದನ್ನು 16 ಮಂದಿ ಅಂಗವಿಕಲರಿಗೆ ವಿತರಿಸುತ್ತಿದ್ದೇನೆ. ಮತ್ತೊಬ್ಬರ ಮೇಲೆ ಅವಲಂಬಿತರಾಗಿರುವ ಬಹುಪಾಲು ಅಂಗವಿಕಲರು ತಮಗೆ ಅತ್ಯಗತ್ಯವನ್ನು ಪೂರೈಸಿಕೊಳ್ಳಲು ಈ ಹಣವನ್ನು ಸದುಪಯೋಗ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.

ದೇವರಮಳ್ಳೂರು ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ

0

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ ಮತ್ತು ರೇಷ್ಮೆ ಕೃಷಿ) ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ ಕೃಷಿಗೆ ಸಂಬಂಧಪಟ್ಟ ಹಲವು ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸುವುದರ ಜೊತೆಗೆ ಆಧುನಿಕ ಕೃಷಿ ಮಾಹಿತಿಯನ್ನು ರೇಷ್ಮೆ ಕೃಷಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿವಿಧ ಇಲಾಖೆಯ ವಿಷಯ ತಜ್ಞರು ನೀಡಿದರು.

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಳೆದ ಮೂರು ತಿಂಗಳಿನಿಂದ ದೇವರಮಳ್ಳೂರು ಗ್ರಾಮದಲ್ಲಿ ಬೀಡುಬಿಟ್ಟು ಸ್ಥಳೀಯ ಬೆಳೆಗಳು, ರೈತರ ಸಮಸ್ಯೆಗಳು, ಮಳೆ, ಭೂಮಿ, ಕೃಷಿ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡಿ ಗ್ರಾಮೀಣ ಅನುಭವ ಪಡೆದು ರೈತರೊಂದಿಗೆ ಸಂವಾದಿಸಿದ್ದ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ ಮತ್ತು ರೇಷ್ಮೆ ಕೃಷಿ) ವಿದ್ಯಾರ್ಥಿಗಳು ರೈತರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದಾಗಿ ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆಕೃಷಿ, ಪಶುವೈದ್ಯ ತಜ್ಞರು, ಮೀನುಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಸಾವಯವ ಕೃಷಿ, ಎರೆಹುಳು ಗೊಬ್ಬರ, ಸಮಗ್ರ ಕೃಷಿ ಪದ್ಧತಿಗಳು, ಮಣ್ಣಿನ ಆರೋಗ್ಯ, ಸಮಗ್ರ ರೋಗಗಳ ನಿರ್ವಹಣೆ, ಹಿಪ್ಪುನೇರಳೆ ಬೇಸಾಯ, ಜೈವಿಕ ಇಂಧನ, ರೇಷ್ಮೆ ಹುಳು ಸಾಕಾಣಿಕೆ, ಮಾವಿನ ಮತ್ತು ಗೋಡಂಬಿ ಬೇಸಾಯ ಕ್ರಮಗಳು, ಹೈನುಗಾರಿಕೆ ಕುರಿತಂತೆ ಮಾಹಿತಿ ತಿಳಿಸುವ ವಸ್ತುಪ್ರದರ್ಶನದ ಮಳಿಗೆಗಳಿದ್ದವು. ಅಜೊಲ್ಲಾ ಬಗ್ಗೆ ಅರಿವು, ಉತ್ತಮ ರಾಸುಗಳ ಪ್ರದರ್ಶನ, ವಿಜ್ಞಾನಿಗಳು ಮತ್ತು ರೈತರಿಂದ ವಿಚಾರ ವಿನಿಮಯ ವಿಶೇಷವಾಗಿತ್ತು.
ದೇವರಮಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.
ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡಾ.ಕೆ.ಜಗದೀಶ್ವರ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಮ್ಮ ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಗೋಪಿನಾಯ್ಕ, ಡಾ.ವಿಜಯೇಂದ್ರ, ಡಾ.ಡಿ.ವಿ.ನವೀನ್, ಡಾ.ಎಂ.ವಿ.ಶ್ರೀನಿವಾಸರೆಡ್ಡಿ, ಡಾ.ಸಿ.ನಾರಾಯಣಸ್ವಾಮಿ, ಡಾ.ಆರ್.ಎನ್.ಲಕ್ಷ್ಮೀಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜಿಲ್ಲೆಯು ತೀವ್ರ ಬರವನ್ನು ಎದುರಿಸುತ್ತಿದೆ – ಕೃಷಿ ಸಚಿವ ಕೃಷ್ಣ ಬೈರೇಗೌಡ

0

ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಸೋಮವಾರ ತಾಲ್ಲೂಕಿನ ಹೊಸಪೇಟೆ ಪಂಚಾಯತಿಯ ಘಟಮಾರನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೊಸಕೋಟೆಯ ಮೂಲಕ ಕೋಲಾರ ಜಿಲ್ಲೆಯ ಭೇಟಿಯನ್ನು ಮುಗಿಸಿ ತಾಲ್ಲೂಕಿನ ಮೂಲಕ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಚಿಕ್ಕಬಳ್ಳಾಪುರದ ಕಡೆಗೆ ತೆರಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ತಾಲ್ಲೂಕು ಪಂಚಾಯತಿ, ಪುರಸಭೆ ಹಾಗೂ ರೈತ ಸಂಘದವರಿಂದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ‘ಜಿಲ್ಲೆಯು ಸಾಕಷ್ಟು ತೀವ್ರ ಬರವನ್ನು ಎದುರಿಸುತ್ತಿದೆ. ಈಗಾಗಲೇ ಅಂತರ್ಜಲ ಕುಸಿದು ಹುಲ್ಲೂ ಬೆಳೆಯದ ಸ್ಥಿತಿಯಲ್ಲಿದೆ. ಮಾವೂ ಒಣಗಿದೆ. ಅನೇಕ ಕಡೆ ಮೊಳಕೆಯಾಗಿಯೇ ಇಲ್ಲ. ಕೆಲವೆಡೆ ಮೊಳಕೆಯಾಗಿದ್ದರೂ ಒಣಗಿವೆ. ಎರಡನೇ ಬಿತ್ತನೂ ಒಣಗಿದ ನಿದರ್ಶನಗಳಿವೆ. ಶೇಕಡಾ 70 ರಿಂ 80 ರಷ್ಟು ಬೆಳೆ ನಷ್ಟವಾಗಿದೆ. ಜಾನುವಾರುಗಳಿಗೆ ನೀರಿಲ್ಲ, ಮೇವಿಲ್ಲದಂಥ ಪರಿಸ್ಥಿತಿಯಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಿಲ್ಲಾಧಿಕಾರಿಗಳು ಎಲ್ಲರೂ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಮುಖ್ಯಮಂತ್ರಿಗಳಿಗೆ ಸಮಗ್ರ ವರದಿಯನ್ನು ನೀಡಿ ತೀವ್ರ ಬರಗಾಲದ ಚಿತ್ರಣವನ್ನು ನೀಡುತ್ತೇವೆ. ಈ ವಾರದ ಸಂಪುಟದ ಸಭೆಯಲ್ಲಿ ಬರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಯಾವ ರೀತಿಯ ಪರಿಹಾರ ನೀಡಬೇಕು ಹೇಗೆ ನೀಡಬೇಕೆಂಬುದನ್ನೂ ಚರ್ಚಿಸಲಿದ್ದೇವೆ. ಪರಿಹಾರ ಎಷ್ಟೇ ನೀಡಿದರೂ ಅದು ನಷ್ಟಕ್ಕೆ ಸಮನಾದುದಲ್ಲ. ಆದರೂ ಸರ್ಕಾರದ ಕಡೆಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಜಾನುವಾರುಗಳ ಮೇವನ್ನು ಇತರ ಜಿಲ್ಲೆಗಳಿಂದ ತರಿಸುವ ಉದ್ದೇಶವೂ ಇದೆ. ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸಲು ದೂರಗಾಮಿ ಯೋಜನೆಗಳಾದ ಎತ್ತಿನ ಹೊಳೆ ಹಾಗೂ ಬೆಂಗಳೂರಿನಿಂದ ವರ್ತೂರು ಕೆರೆಗೆ ಹೋಗುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸುವ ಕೆಲಸಗಳೂ ಜಾರಿಯಲ್ಲಿವೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ,‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗುತ್ತಿದೆ. ಜನರು ಕಷ್ಟದಲ್ಲಿದ್ದಾರೆ. ಜಿಲ್ಲೆಯ ಮಗನಾಗಿರುವ ಕೃಷಿ ಸಚಿವರು ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವರದಿ ನೀಡಿ ರೈತರ ಸಂಕಷ್ಟ ಮತ್ತು ಜಾನುವಾರುಗಳ ಮೇವಿನ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ನುಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ಪುರಸಭಾ ಸದಸ್ಯರಾದ ಬಾಲಕೃಷ್ಣ, ಚಿಕ್ಕಮುನಿಯಪ್ಪ, ಸುಬ್ರಮಣಿ, ಎನ್.ಮುನಿಯಪ್ಪ, ಮುನೇಗೌಡ, ಸುರೇಶ್, ಗೋಪಾಲ್, ಲಕ್ಷ್ಮೀನಾರಾಯಣ, ಬ್ಯಾಟರಾಯಶೆಟ್ಟಿ, ಎಚ್.ಎಂ.ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕ

0

ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ದುಡಿಯುವ ಹೆಂಗಸಿನ ಕಷ್ಟಗಳು, ಅನಕ್ಷರತೆ ಮುಂತಾದ ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಗಾಂಧಿ ನಗರದ ವಿಸ್ಡಂ ವಿದ್ಯಾಸಂಸ್ಥೆ ಆವರಣದಲ್ಲಿ ಈಚೆಗೆ ಐನಾ ಸಂಸ್ಥೆಯ ವತಿಯಿಂದ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಅದಕ್ಕೆ ಪರಿಹಾರವನ್ನೂ ಸೂಚಿಸುವ ನಾಟಕವನ್ನು ಪ್ರದರ್ಶಿಸಲಾಯಿತು.
ಗಂಡು ಮಕ್ಕಳು ವಂಶೋದ್ಧಾರಕರು ಎಂಬ ಭ್ರಮೆಯಿಂದ ವೈದ್ಯರಿಗೆ ಹಣ ನೀಡಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಬೆಳಕು ಚೆಲ್ಲಿದರು. ಹೆಣ್ಣು ಕೂಡ ಕುಟುಂಬವನ್ನು ಪೋಷಿಸಬಲ್ಲಳು ಎಂಬ ಸಂದೇಶ ನೀಡುತ್ತಾ ವೈದ್ಯರು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವುದು ಅಪರಾಧ ಎಂಬುದನ್ನು ನಾಟಕದ ಪಾತ್ರಗಳ ಮೂಲಕ ತಿಳಿಸಲಾಯಿತು.
ಬಾಲ್ಯ ವಿವಾಹ ಮಾಡುವುದು ಅಪರಾಧ ಎಂಬುದನ್ನು ತಿಳಿಸಿಕೊಡುತ್ತಾ ಶಿಕ್ಷಣದಿಂದ ಹೆಣ್ಣು ಸ್ವಾವಲಂಭಿ ಜೀವನ ನಡೆಸಬಹುದೆಂದು ನಾಟಕದಲ್ಲಿ ತೋರಿಸಿದರು. ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪೋಕರಿಗಳನ್ನು ಶಿಕ್ಷಿಸುವ ಚಿತ್ರಣವನ್ನೂ ನೀಡಲಾಯಿತು.
‘ಹೆಣ್ಣಿನ ಶೋಷಣೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ. ಇಂಥಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಶಾಲೆಯ ವತಿಯಿಂದ ಈ ರೀತಿಯ ಸಾಮಾಜಿಕ ಸಂದೇಶ ನೀಡುವ ನಾಟಕವನ್ನು ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುತ್ತಾ ಅರಿವು ಮೂಡಿಸುತ್ತಿರುವುದು ಸಮಂಜಸವಾಗಿದೆ. ಹಿಂದುಳಿದ ವರ್ಗದ ಜನರಿರುವ ಪ್ರದೇಶಗಳಲ್ಲಿ ಈ ರೀತಿಯ ಸಂದೇಶ ಬೀರುವ ನಾಟಕಗಳನ್ನು ಪ್ರದರ್ಶಿಸಬೇಕು’ ಎಂದು ಶಿಕ್ಷಣ ಸಂಯೋಜಕ ರಾಮಣ್ಣ ತಿಳಿಸಿದರು.
ಏಕ ಪೋಷಕ ಇರುವ ಮಕ್ಕಳಿಗೆ ಇಲಾಖೆಯ ವಸತಿ ನಿಲಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಶೋಷಣೆ ಕಂಡುಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡುವಂತೆ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕಾ ಹೇಳಿದರು.
ವಿಸ್ಡಂ ವಿದ್ಯಾಸಂಸ್ಥೆಯ ಮುಖ್ಯಸ್ಥ ವಿ.ನಾಗರಾಜ್, ಮುಖ್ಯಶಿಕ್ಷಕಿ ಮಾಲಾ ನಾಗರಾಜ್, ಶಿಕ್ಷಕಿಯರಾದ ಮಾಲಾಶ್ರೀ, ನಂದಿನಿ, ವಿನುತಾ, ಮಾನಸ, ನಯನ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧಮ್ಮ, ಐನಾ ಸಂಸ್ಥೆಯ ಸೆಲ್ವಾ ಮೇರಿ ದೊರೈ, ವೆರೋನಿಕಾ, ಜಯಶ್ರೀ, ಶಶಿಕಲಾ, ಮಂಜುಳಾ, ರೇಷ್ಮಾ, ಗಾಯತ್ರಿ. ಲಕ್ಕೀನಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.