
‘ಈ ಪಾರಿವಾಳವನ್ನು ಇಂಗ್ಲೀಷ್ ಕ್ಯಾರಿಯರ್ ಎನ್ನುತ್ತಾರೆ. ಇಂಗ್ಲೆಂಡಿನಲ್ಲಿ ಬಹಳ ಹಿಂದೆ ಪರ್ಶಿಯ ಮತ್ತು ಪೌಟರ್ ಎಂಬ ಎರಡು ವಿಧದ ಪಾರಿವಾಳಗಳ ಸಂಕುರದಿಂದ ಹುಟ್ಟಿದ್ದು ಈ ಪ್ರಭೇಧ. ಅದರ ಕೊಕ್ಕೇ ವಿಚಿತ್ರವಾಗಿದೆ. ಪ್ರಸಿದ್ಧ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ಪುಸ್ತಕ ’ದ ವೇರಿಯೇಷನ್ ಆಫ್ ಅನಿಮಲ್ಸ್ ಅಂಡ್ ಪ್ಲಾಂಟ್ಸ್ ಅಂಡರ್ ಡೊಮೆಸ್ಟಿಕೇಷನ್’ ಎಂಬ ಪುಸ್ತಕದಲ್ಲಿ ಸಾಕು ಪ್ರಾಣಿಗಳಲ್ಲಾಗುವ ಜೀವವಿಕಾಸದ ಬಗ್ಗೆ ಬರೆಯುವಾಗ ಇಂಗ್ಲೀಷ್ ಕ್ಯಾರಿಯರ್ ಹುಟ್ಟಿನ ಬಗ್ಗೆಯೂ ವಿವರಿಸಿದ್ದಾರೆ’ ಎಂದು ತಮ್ಮ ಕೈಯಲ್ಲಿ ಬೆಚ್ಚಗೆ ಕುಳಿತಿರುವ ವಿಶೇಷವಾದ ಪಾರಿವಾಳದ ಬಗ್ಗೆ ಅತ್ಯಂತ ಆಸ್ತೆಯಿಂದ ವಿವರಣೆ ಕೊಡಲು ಪ್ರಾರಂಭಿಸಿದರು.
ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ’ಒಡಿಗೆರೆ ಮಾಸ್ತರ್’ ಎಂದೇ ಹೆಸರುವಾಸಿಯಾಗಿರುವ ಕೆ.ನರಸಿಂಹಪ್ಪ ಪ್ರವೃತ್ತಿಯಲ್ಲಿ ನಿಸರ್ಗಪ್ರಿಯರು. ಬಾಗೇಪಲ್ಲಿ ತಾಲ್ಲೂಕಿನ ಪೋಲನಾಯಕನಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಇವರ ಬಳಿ ಸುಮಾರು ಎಂಟು ವಿಧಧ 60 ಪಾರಿವಾಳಗಳಿವೆ. ವಿವಿಧ ಜಾತಿಯ ಕುರಿಗಳಿವೆ. ಕೋಳಿಗಳು, ಮೊಲಗಳನ್ನೂ ಸಾಕಿದ್ದಾರೆ. ಜೂಲುಪಾಳ್ಯ ಪಂಚಾಯಿತಿಯ ಒಡಿಗೆರೆ ಗ್ರಾಮದಲ್ಲಿ ಇವರ ಮನೆ ಹಾಗೂ ತೋಟ ಈ ಎಲ್ಲಾ ಜೀವಿಗಳ ಆಶ್ರಯತಾಣವಾಗಿದೆ.
’ಬಡಂಕಾ, ಬ್ಯೂಟಿ ಹೋಮರ್, ರೇಸ್ ಹೋಮರ್, ಲಕ್ವಾ ಪಾರಿವಾಳ ಮುಂತಾದ ಹಲವಾರು ವೈವಿಧ್ಯಮಯ ಪಾರಿವಾಳಗಳಿವೆ. ಒಂದೊಂದು ಪಾರಿವಾಳಕ್ಕೂ ಒಂದೊಂದು ವಿಶೇಷತೆಯಿದೆ. ಆಯಾ ಜಾತಿಯಲ್ಲೂ ವಿವಿಧ ಬಣ್ಣಗಳಿವೆ. ಬಹಳ ಹಿಂದೆ ಇಂಗ್ಲೆಂಡಿನಲ್ಲಿ ಪಾರಿವಾಳ ಸಾಕುವವರ ಪ್ರಯತ್ನದಿಂದ ಅಭಿವೃದ್ಧಿಯಾದ ತಳಿ ಇಂಗ್ಲೀಷ್ ಕ್ಯಾರಿಯರ್. ಇದು ಸಂದೇಶ ರವಾನೆಗೆ ಹೆಚ್ಚಾಗಿ ಆಗ ಬಳಸಲಾಗುತ್ತಿತ್ತು. ಆದರೆ ಈಗ ಕೇವಲ ಅಲಂಕಾರಿಕ ಸಾಕುವುದಕ್ಕೆ ಸೀಮಿತವಾಗಿದೆ. ವೈವಿಧ್ಯಮಯ ತಳಿಗಳ ಸಂತತಿಗಳನ್ನು ಮುಂದುವರೆಸಲು ಅದೇ ಜಾತಿ ಹಾಗೂ ಬಣ್ಣದ ಪಾರಿವಾಳಗಳನ್ನು ಜೋಡಿ ಮಾಡಬೇಕು. ಕೆಲ ಬಾರಿ ನನ್ನಲ್ಲಿ ಗಂಡು ಅಥವಾ ಹೆಣ್ಣಿನ ಕೊರತೆಯಿದ್ದರೆ, ಎಷ್ಟೇ ದೂರವಾದರೂ ಅದನ್ನು ಸಾಕುವವರ ಬಳಿ ಹೋಗಿ ತರುತ್ತೇನೆ. ಸಣ್ಣ ವಯಸ್ಸಿನಿಂದಲೂ ನನಗೆ ಪಕ್ಷಿ ಪ್ರಾಣಿಗಳ ಮೇಲೆ ಒಲವು. ಪ್ರೀತಿಯಿಂದ ನಾವು ಸಾಕದಿದ್ದಲ್ಲಿ ಯಾವುದೇ ಪ್ರಾಣಿ ನಮ್ಮೊಂದಿಗೆ ಬಾಳುವುದಿಲ್ಲ’ ಎಂದು ಒಡಿಗೆರೆ ಮಾಸ್ತರ್ ನರಸಿಂಹಪ್ಪ ಹೇಳುತ್ತಾರೆ.
’ಎಲ್ಲರೂ ನಿವೃತ್ತಿಯಾದ ಮೇಲೆ ಏನಪ್ಪಾ ಮಾಡುವುದು ಅಂದುಕೊಳ್ಳುತ್ತಾರೆ. ಆದರೆ ನಾನಂತೂ ಇನ್ನಷ್ಟು ಪ್ರಾಣಿಗಳನ್ನು ಸಾಕುವ ಯೋಜನೆ ಹಾಕಿಕೊಂಡಿದ್ದೇನೆ. ಈ ಜೀವಿಗಳೊಂದಿಗೆ ಹೆಚ್ಚು ಕಾಲ ಕಳೆಯಬಹುದೆಂದು ಖುಷಿಪಡುತ್ತೇನೆ’
ನರಸಿಂಹಪ್ಪರವರ ಪಾರಿವಾಳ ಪ್ರೇಮ
ಶಿಡ್ಲಘಟ್ಟದಲ್ಲಿ ನಾಗರಪಂಚಮಿ ಆಚರಣೆ
ಶಿಡ್ಲಘಟ್ಟದಲ್ಲಿ ಶುಕ್ರವಾರ ನಾಗರಪಂಚಮಿಯ ಪ್ರಯುಕ್ತ ಮಹಿಳೆಯರು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಚನ್ನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಕೆ.ಎಂ.ಎಫ್ ನಿರ್ದೇಶಕ ಬಂಕ್ ಮುನಿಯಪ್ಪ, ಉಪವ್ಯವಸ್ಥಾಪಕರಾದ ಡಾ.ಕೆ.ಜಿ.ಈಶ್ವರಯ್ಯ, ಗೋಪಾಲರಾವ್, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ. ಉಮೇಶ್ರೆಡ್ಡಿ, ಶ್ರೀನಿವಾಸ್, ಅಮರೇಶ್, ತಮ್ಮರೆಡ್ಡಿ, ಗ್ರಾಮಸ್ಥರಾದ ಕ್ಯಾತಪ್ಪ, ನಾರಾಯಣಸ್ವಾಮಿ, ರವಿ, ವಕೀಲರಾದ ವೆಂಕಟೇಶ್, ವೇಣುಗೋಪಾಲ್, ನಾಗರಾಜ್, ಸಂಘದ ಅಧ್ಯಕ್ಷ ಸಂತೋಷ್ ಹಾಜರಿದ್ದರು.
ಹೋಬಳಿ ಮಟ್ಟದ ಕರಾಟೆ ಸ್ಪರ್ಧೆ
Hobli level karate competitions, Sidlaghatta
ತಾಲ್ಲೂಕಿನ ಹೋಬಳಿ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆ ಮತ್ತು ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಕುಮಿತೆ 30–35 ಕೆಜಿ ವಿಭಾಗದಲ್ಲಿ ಹರ್ಷಿತ್(ಪ್ರಥಮ), ವಂದನಾ(ದ್ವಿತೀಯ), 20–25 ಕೆಜಿ ವಿಭಾಗದಲ್ಲಿ ರಾಮ್ಕುಮಾರ್(ಪ್ರಥಮ), ಧನುಷ್(ದ್ವಿತೀಯ), 31–36 ಕೆಜಿ ವಿಭಾಗದಲ್ಲಿ ಹೇಮಂತ್(ಪ್ರಥಮ), ಮಧುಯಾದವ್(ದ್ವಿತೀಯ) ಸ್ಥಾನ ಪಡೆದಿದ್ದಾರೆ ಎಂದು ತೀರ್ಪುಗಾರರಾಗಿದ್ದ ಜಂಗಮಕೋಟೆ ಕೋಡೋ ಕರಾಟೆ ಕ್ಲಬ್ ಶಿಕ್ಷಕ ಎಸ್.ಮಹಮ್ಮದ್ ಮತ್ತು ಎಸ್.ನೂರುಲ್ಲಾ ತಿಳಿಸಿದ್ದಾರೆ.
ಮಹಿಳೆಯರು ಹಾಗು ಶಾಲಾಮಕ್ಕಳ ಅತ್ಯಾಚಾರ ವಿರೋಧಿಸಿ ನಡೆದ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಮಹಿಳೆಯರು ಹಾಗು ಶಾಲಾಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ನಡೆದ ಬಂದ್ಗೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗಡಿ, ಮುಗ್ಗಟ್ಟು, ಹೋಟೆಲ್ಗಳು ಮುಚ್ಚಿದ್ದು ಜನ ಜೀವನ ಅಸ್ತವ್ಯಸ್ಥವಾಗಿತ್ತು.
ಬಸ್ ಸಂಚಾರವಿಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಪಟ್ಟಣದ ಪ್ರಮುಖ ಬೀದಿಗಳಾದ ಪ್ರವಾಸಿ ಮಂದಿರ ರಸ್ತೆ, ಅಶೋಕ ರಸ್ತೆ ಸೇರಿದಂತೆ ಇನ್ನಿತರೆ ಜನನಿಬಿಡ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಪ್ರಸಿದ್ಧ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾತ್ರ ಹರಾಜು ಪ್ರಕ್ರಿಯೆ ಸೇರಿದಂತೆ ವಿವಿಧ ಚಟುವಟಿಕೆಗಳು ಸುಗಮವಾಗಿ ನಡೆದವು.
ಮಾರುಕಟ್ಟೆಗೆ ಎಂದಿನಂತೆ ೧,೧೦೦ ಲಾಟುಗಳಷ್ಟು ರೇಷ್ಮೆಗೂಡು ಆಗಮಿಸಿದ್ದು ಸಮಯಕ್ಕೆ ಸರಿಯಾಗಿ ಹರಾಜು, ತೂಕ ಹಾಕುವುದು, ರೈತರಿಗೆ ಹಣ ಸಂದಾಯ ಸೇರಿದಂತೆ ಮಾರುಕಟ್ಟೆಯಲ್ಲಿ ದಿನವೂ ನಡೆಯುವ ಎಲ್ಲಾ ಪ್ರಕ್ರಿಯೆಗಳು ಗುರುವಾರ ಸುಗಮವಾಗಿ ನಡೆದವು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಆ ನಂತರ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದ ಪ್ರತಿಭಟನಾಕಾರರು ರಾಜ್ಯದಾದ್ಯಂತ ಮಹಿಳೆಯರ ಹಾಗು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು ಸದನದಲ್ಲಿ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗು ಅತ್ಯಾಚಾರಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಕಷ್ಟದಲ್ಲಿ ರೇಷ್ಮೆ ಕೃಷಿಕರು – ಶಾಸಕ ಎಂ.ರಾಜಣ್ಣ
ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆ ತೆಗೆಯಬೇಕಾದ ಪರಿಸ್ಥಿತಿಯಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಬುಧವಾರ ನಡೆದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ತಾಂತ್ರಿಕತೆಗಳ ಜ್ಞಾನವನ್ನು ಪಡೆದು ಉತೃಷ್ಟವಾದ ಗುಣಮಟ್ಟದ ರೇಷ್ಮೆ ಬೆಳೆ ಬೆಳೆಯುವ ಅನಿವಾರ್ಯತೆಯಿದೆ. ಸರ್ಕಾರ ಅನುದಾನಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಿದೆ. ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಭಾರತ ಚೀನಾ ರೇಷ್ಮೆಗೆ ಪೈಪೋಟಿ ನೀಡುವಂತೆ, ನಮ್ಮ ರೈತರು ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಲು ಬೇಕಾದ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿಯನ್ನೇ ನಂಬಿ, ಅದರಲ್ಲೂ ರೇಷ್ಮೆ ಕೃಷಿಯ ಮೇಲೆ ಅವಲಂಬಿತ ಲಕ್ಷಾಂತರ ಮಂದಿಯ ಬದುಕು ಹಸನಾಗಲು ಸಾಕಷ್ಟು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ರೇಷ್ಮೆ ಹುಳು ಸಾಕಾಣಿಕಾ ಮನೆಗಳ ಸಂಖ್ಯೆ ಹೆಚ್ಚಿಸಿ ಅದಕ್ಕಾಗಿ ನೀಡುವ ಸಹಾಯಧನವನ್ನೂ ಹೆಚ್ಚಿಸಬೇಕು ಎಂದು ಹೇಳಿದರು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಜಿ.ಸತೀಶ್ ಮಾತನಾಡಿ, ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಮಾಡುತ್ತಿರುವ 85 ಸಾವಿರ ಮಂದಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ 66 ಸಾವಿರ ಮಂದಿಯಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 180 ಕೋಟಿ ಬರುತ್ತಿದೆ. ಅದು ಸಾಲದಾಗಿದ್ದು, ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ದ್ವಿತಳಿ ರೇಷ್ಮೆ ಗೂಡನ್ನು ಉತೃಷ್ಟವಾಗಿ ಬೆಳೆದಿರುವ ಶೀಗೆಹಳ್ಳಿ ನಾರಾಯಣಸ್ವಾಮಿ ಅವರ ರೇಷ್ಮೆ ಗೂಡುಗಳು, ಹುಳುಗಳಿರುವ ಚಂದ್ರಂಕಿಯನ್ನು ಪ್ರದರ್ಶಸಲಾಗಿತ್ತು.
ಉತ್ತಮ ರೇಷ್ಮೆ ಬೆಳೆ ಬೆಳೆಯುತ್ತಿರುವ ರೈತರಾದ ಮುನಿಯಮ್ಮ, ನಾರಾಯಣಸ್ವಾಮಿ, ಕೋಗಿಲಪ್ಪ, ವೆಂಕಟೇಶಪ್ಪ ಮತ್ತು ರೀಲರುಗಳಾದ ಮೆಹಬೂಬ್ಖಾನ್, ರಾಮಚಂದ್ರಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಲಘಟ್ಟಪುರ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಸುಕುಮಾರ್, ಡಾ.ತಿಮ್ಮರೆಡ್ಡಿ, ಡಾ.ಎನ್.ಆರ್.ಪ್ರಸಾದ್, ಡಾ.ಹೇಮಾನಂದರೆಡ್ಡಿ, ಡಾ.ಸತೀಶ್ವರ್ಮ, ಡಾ.ಫಣಿರಾಜ್ ಹಿಪ್ಪುನೇರಳೆ ತೋಟದ ನಿರ್ವಹಣೆ ಮತ್ತು ರೇಷ್ಮೆ ಬೆಳೆಯ ಸಂರಕ್ಷಣೆ ಕುರಿತಂತೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾ ರಾಜಣ್ಣ, ಕೆ.ಎಂ.ಎಫ್. ನಿರ್ದೇಶಕ ಬಂಕ್ ಮುನಿಯಪ್ಪ, ಸೂರ್ಯನಾರಾಯಣಗೌಡ, ಸಹಕಾರ ಸಂಘದ ಶಿವಣ್ಣ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾದ ಆರ್.ಕೆ.ರಾಮಕೃಷ್ಣಪ್ಪ, ಯಲುವಳ್ಳಿ ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜನಮ್ಮ, ಸದಸ್ಯೆ ಪಿ.ನೇತ್ರ, ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ, ಜಂಟಿ ನಿರ್ದೇಶಕರಾದ ಪ್ರಭಾಕರ್, ರಾಜಣ್ಣ, ಉಪನಿರ್ದೇಶಕ ಎಂ.ನರಸಿಂಹಮೂರ್ತಿ, ಸಹಾಯಕ ನಿರ್ದೇಶಕ ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಾಲೆಗೆ ತರಲು ಮಕ್ಕಳ ಮನೆಗಳ ಮುಂದೆ ಧರಣಿ – Education Quest, Sidlaghatta
Education quest from school children of Anemadugu Govt School promoting admission to schools.
ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ತರಲು ಅವರ ಮನೆಗಳ ಮುಂದೆ ಧರಣಿ ನಡೆಸಿದರು.
ಶಾಲೆಯ ಎಂಟು ಮಕ್ಕಳು ಧೀರ್ಘ ಗೈರು ಹಾಜರಾಗಿದ್ದುದರಿಂದ ಒಂದರಿಂದ ಎಂಟನೇ ತರಗತಿಯ 200 ಮಕ್ಕಳು ಗ್ರಾಮದಲ್ಲೆ ಜಾಥಾ ನಡೆಸಿ, ಘೋಷಣೆಗಳನ್ನು ಕೂಗುತ್ತಾ ಗೂರುಹಾಜರಾದ ಮಕ್ಕಳ ಮನೆಯ ಮುಂದೆ ಧರಣಿ ನಡೆಸಿದರು.
‘ದಾಖಲಾತಿ ಆಂಧೋಲನಕ್ಕೆ ಜಯವಾಗಲಿ’, ‘ಬಾ ಬಾ ಶಾಲೆಗೆ’, ‘ಕಳಿಸಿ ಕಳಿಸಿ ಶಾಲೆಗೆ ಕಳಿಸಿ’, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಘೋಷಣೆಗಳನ್ನು ಕೂಗಿದರು.
ಶಾಲೆಗೆ ಮಕ್ಕಳು ಬರುವವರೆಗೂ ಧರಣಿ ನಡೆಸಿ, ಗೈರು ಹಾಜರಾಗಿದ್ದು, ಮನೆಗೆಲಸ ಮಾಡಿಕೊಂಡಿದ್ದ ಎಂಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದರು.
ಮುಖ್ಯ ಶಿಕ್ಷಕ ಕೆ.ವಿ.ಪ್ರಕಾಶ್ಬಾಬು, ಶಿಕ್ಷಕರಾದ ನಾರಾಯಣಸ್ವಾಮಿ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ, ಹೇಮಲತಾ ಈ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳು ತಮ್ಮ ಅನುಭವಗಳನ್ನು ಬರೆದಿಡಬೇಕು – ಕನ್ನಡ ಲೇಖಕಿ ಪಿ.ಆರ್.ಮೀರಾ
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್.ಮೀರಾ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು.
ಶಾಲಾ ವಿದ್ಯಾರ್ಥಿಗಳು ತಯಾರಿಸಿರುವ ಪ್ಲಾಸ್ಟಿಕ್ ಹೂ ಹಾರಗಳು, ದ್ರವ ಸಾಬೂನು, ಚಿತ್ರಗಳು, ಕರಕುಶಲ ವಸ್ತುಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು. ಶಿಕ್ಷಕರಾದ ಎಚ್.ವಿ.ವೆಂಕಟರೆಡ್ಡಿ, ನಾಗಭೂಷಣ್, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಸಡಗರ, ಸಂಭ್ರಮದೊಂದಿಗೆ ರಂಜಾನ್ ಹಬ್ಬದ ಆಚರಣೆ
ಪಟ್ಟಣದಲ್ಲಿ ಮಂಗಳವಾರ ಮುಸ್ಲೀಮರು ಸಡಗರ, ಸಂಭ್ರಮದೊಂದಿಗೆ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿದರು. ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಹಂಚಿಕೊಂಡರು. ತಮ್ಮ ಮನೆಗಳಲ್ಲಿ ವಿಶೇಷ ಹಬ್ಬದೂಟ ಆಚರಿಸಿದರು. ಕ್ಷೇತ್ರದ ಶಾಸಕ ಎಂ.ರಾಜಣ್ಣ ಈದ್ಗಾ ಮೈದಾನಕ್ಕೆ ತೆರಳಿ ತಾಲ್ಲೂಕಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯವನ್ನು ಕೋರಿದರು. ಕೆಲವರು ತಮ್ಮ ಹಿರಿಯರ ಸಮಾಧಿಗೆ ಹೂಗಳಿಂದ ಅಲಂಕರಿಸಿ, ಅತ್ತರ್ ಹಾಕಿ, ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿದರು. ಬಡವರಿಗೆ ದಾನವನ್ನು ನೀಡಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಪರಸ್ಪರ ಅಪ್ಪಿಕೊಳ್ಳುತ್ತ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಇಡೀ ದಿನ ನಡೆದೇ ಇತ್ತು. ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಎಲ್ಲರೂ ಹೊಸ ಉಡುಗೆಗಳನ್ನು ತೊಟ್ಟು ಸಿಹಿಯನ್ನು ಸೇವಿಸಿ ಸಂಭ್ರಮಿಸಿದರು. ಮುಸ್ಲೀಮರು ತಮ್ಮ ಬಂಧು ಬಾಂಧವರು, ಸ್ನೇಹಿತರನ್ನು ಆದರದಿಂದ ಮನೆಗೆ ಬರಮಾಡಿಕೊಂಡು ಭೋಜನ ಮಾಡಿಸಿದರು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೀರವ ವಾತಾವರಣವಿತ್ತು. ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು, ವ್ಯಾಪಾರ ವಹಿವಾಟು ಮಂದವಾಗಿತ್ತು. ಪಟ್ಟಣದ ಬೀದಿಗಳಲ್ಲಿ ಎಂದಿನಂತೆ ವಾಹನ ಸಂಚಾರ ಅಷ್ಟೊಂದು ಕಂಡುಬರಲಿಲ್ಲ. ಈದ್ಗಾ ಮೈದಾನದ ಬಳಿ ವಿವಿಧ ಅಂಗಡಿ ಮುಂಗಟ್ಟುಗಳು ತಾತ್ಕಾಲಿಕವಾಗಿ ತೆರೆದಿದ್ದು, ತಿನಿಸುಗಳು, ಆಟಿಕೆಗಳು, ಹೂಗಳು, ಪೂಜಾ ಸಾಮಾನುಗಳು ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದರು. ವಿವಿಧ ಮಸೀದಿಗಳ ಮೌಲ್ವಿಗಳು ಈ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿದವರಿಗೆ ಹಿತನುಡಿಗಳನ್ನು ಹೇಳಿದರು.
‘ರಂಜಾನ್ ಉಪವಾಸ ಮುಸ್ಲಿಮನೆನಿಸಿಕೊಳ್ಳಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳ್ಲಲಿ ಒಂದು. ಉಪವಾಸವನ್ನು ಅರಬಿಕ್ ಭಾಷೆಯ್ಲಲಿ ‘ಸೌಮ್’ ಎಂದರೆ, ಪರ್ಷಿಯನ್ ಮತ್ತು ಉರ್ದು ಭಾಷೆಯ್ಲಲಿ ‘ರೋಜಾ’ ಎಂದು ಕರೆಯಲಾಗುತ್ತದೆ. ಇಸ್ಲಾಮ್ ಧರ್ಮದ ಅನುಯಾಯಿಗಳು ಕಡ್ಡಾಯವಾಗಿ ವರ್ಷದ ಒಂಭತ್ತನೆಯ ತಿಂಗಳಾದ ರಂಜಾನ್ ತಿಂಗಳು ಪೂರ್ತಿ ಹಗಲು ಉಪವಾಸವನ್ನು ಆಚರಿಸಬೇಕಾಗುತ್ತದೆ. ಈ ತಿಂಗಳ್ಲಲಿ ಉಪವಾಸ, ದಾನ ಧರ್ಮ ಮಾಡುವುದರಿಂದ ಅರಿಶಡ್ವರ್ಗಗಳೇ ಮುಂತಾದ ಆಂತರ್ಯದ ಕಲ್ಮಶಗಳನ್ನು ಸುಟ್ಟು ಹೃದಯವನ್ನು ಪವಿತ್ರಗೊಳಿಸಲಾಗುತ್ತದೆ.
ಈ ಆಚರಣೆಯನ್ನು ನಿಯಮ, ಶಿಸ್ತುಗಳಿಗೆ ಬದ್ಧವಾಗಿಸಿ ಸರಳವಾಗಿ ಆಚರಿಸುವಂತೆ ಮುಸ್ಲಿಮರಿಗೆ ಪ್ರವಾದಿಯವರು ಕಡ್ಡಾಯಗೊಳಿಸಿದರು. ದಾನವನ್ನು ಕೂಡ ಉಳ್ಳವರು ಕ್ರಮಬದ್ಧವಾಗಿ ಮತ್ತು ನಿಯಮಬದ್ಧವಾಗಿ, ಬಡಬಗ್ಗರಿಗೆ ಇಂತಿಷ್ಟು ಪಾಲು ತಮ್ಮ ಧನಕನಕಗಳಿಂದ ನೀಡಬೇಕೆಂದು ನಿಯಮವನ್ನು ರೂಢಿಯನ್ನು ತಂದರು’ ಎಂದು ಈ ಸಂದರ್ಭದಲ್ಲಿ ಹಿರಿಯ ಮೌಲ್ವಿ ಮಹಮ್ಮದ್ ಅಷ್ಸ್ವಾಖ್ ಅಹಮದ್ ರಜ್ವಿ ತಿಳಿಸಿದರು.
ಮೌಲ್ವಿ ಮಹಮ್ಮದ್ ಅಸ್ಲಂ, ಸದರ್ ರಫೀಕ್ ಸಾಬ್, ಅಬ್ದುಲ್ ಸಲಾಂ, ಮುಖಂಡರಾದ ಬಂಕ್ಮುನಿಯಪ್ಪ, ಸೂರ್ಯನಾರಾಯಣಗೌಡ, ಅಫ್ಸರ್ಪಾಷ, ರಹಮತ್ತುಲ್ಲ, ಓ.ಟಿ.ಮುನಿಕೃಷ್ಣಪ್ಪ, ಮಹಬೂಬ್, ಸದರ್ ರಫೀಕ್ ಸಾಬ್, ಅಬ್ದುಲ್ ಸಲಾಂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜುಲೈ 31 ರಂದು ಬಂದ್
ಮಹಿಳೆಯರು ಹಾಗೂ ಶಾಲಾ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ದೌರ್ಜನ್ಯಗಳನ್ನು ಖಂಡಿಸಿ ಜುಲೈ 31 ರಂದು ಬಂದ್ಗೆ ಕರೆ ನೀಡಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಸಿ.ಐ.ಟಿ.ಯು.ಜಿಲ್ಲಾ ಪ್ರಧಾನಕಾರ್ಯದರ್ಶಿ ಲಕ್ಷ್ಮೀದೇವಮ್ಮ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಇತ್ತಿಚೆಗೆ ರಾಜ್ಯದಲ್ಲಿ ಮಹಿಳೆಯರು ಹಾಗೂ ಶಾಲಾ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ದಕ್ಷ ಆಡಳಿತವನ್ನು ನೀಡುವ ಭರವಸೆಯನ್ನು ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅತ್ಯಾಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆ, ಚರ್ಚೆ ನಡೆಯುವ ಸಂಧರ್ಭದಲ್ಲಿ ಸದನದಲ್ಲಿ ನಿದ್ದೆ ಮಾಡುತ್ತಿದ್ದಾರೆ, ಇವರ ಆಡಳಿತ ವೈಖರಿಗೆ ಪೋಲಿಸ್ ಇಲಾಖೆ ಕೂಡಾ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದರು.
ಜುಲೈ 31 ರಂದು ಬಂದ್ಗೆ ಕರೆ ನೀಡಿದ್ದು, ಸಾರಿಗೆ ವ್ಯವಸ್ಥೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ನಾಗರಿಕರು ಸಹಕಾರ ನೀಡಬೇಕು ಎಂದಿದ್ದಾರೆ.
ಸಿ.ಪಿ.ಐ.ಎಂ.ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಸಾವಿತ್ರಮ್ಮ, ಡಿ.ವೈ.ಎಫ್.ಐ.ಸಂಘಟನೆಯ ಫಯಾಜ್ಅಹ್ಮದ್, ತಾಲ್ಲೂಕು ಸಂಚಾಲಕ ಸದಾನಂದ, ಅಪ್ಪು, ವಿಸ್ಡಂ ನಾಗರಾಜ್, ಮಕ್ಸೂದ್ ಮುಂತಾದವರು ಹಾಜರಿದ್ದರು.
ವಿಶೇಷ ದಾಖಲಾತಿ ಆಂದೋಲನ ಜಾಥಾ
ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಶಿಕ್ಷಣ ಇಲಾಖೆಯ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೋಮವಾರ ಮೆರವಣಿಗೆಯ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
‘ಮಕ್ಕಳನ್ನು ಶಾಲೆಗೆ ಕಳುಹಿಸಿ’, ‘ಬಾಲ ಕಾರ್ಮಿಕ ಪದ್ಧತಿಗೆ ಧಿಕ್ಕಾರ’, ‘ಮಕ್ಕಳು ಶಿಕ್ಷಣ ವಂಚಿತರಾಗಬಾರದು’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
‘ಆರರಿಂದ ಹದಿನಾಲ್ಕು ವರ್ಷದ ಮಕ್ಕಳು ಶಾಲೆಯಲ್ಲಿರಬೇಕು. ಯಾವುದೇ ರೀತಿಯ ದುಡಿಮೆ ಹಾಗೂ ಜೀತಕ್ಕೆ ಅವರನ್ನು ಕಳುಹಿಸಬಾರದು. ಅದು ಕಾನೂನು ರೀತಿಯಲ್ಲಿ ಅಪರಾಧ ಕೂಡ. ಆಡುವ ವಯಸ್ಸಿನಲ್ಲಿ ಆಡಬೇಕು. ಓದುವ ವಯಸ್ಸಿನಲ್ಲಿ ಓದಬೇಕು. ಆಡುತ್ತಾ ಕಲಿಯಬೇಕಿರುವ ಮಕ್ಕಳನ್ನು ಕೆಲಸಕ್ಕೆ ಹಾಕುವುದು ಅಮಾನುಷವಾದದ್ದು. ಸಾರ್ವಜನಿಕರು ಈ ರೀತಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡಾಗ ಅವರ ಪೋಷಕರ ಮನವೊಲಿಸಿ ಶಾಲೆಗೆ ಕಳುಹಿಸಬೇಕು. ಈಗಾಗಲೇ ಮನೆಮನೆಗೆ ಹೋಗಿ ಎಂಟು ಮಕ್ಕಳನ್ನು ಶಾಲೆಗೆ ಕರೆತಂದಿದ್ದೇವೆ. ಸಮುದಾಯದ ಸಹಕಾರವಿದ್ದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ’ ಎಂದು ಶಿಕ್ಷಕ ಸರ್ದಾರ್ ತಿಳಿಸಿದರು.
ಬೂದಾಳ ಗೇಟ್ನ ಗರುಡಾದ್ರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ಸೆಟ್ನೊಂದಿಗೆ ವಿಶೇಷ ದಾಖಲಾತಿ ಆಂದೋಲನ ಜಾಥಾ ನಡೆಸಿದರು.
ಮನವಿ ಸಲ್ಲಿಸಿದ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು
ರಾಜ್ಯದಲ್ಲಿ ಇತ್ತೀಚೆಗೆ ಶಾಲಾ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳನ್ನು ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಸೋಮವಾರ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಮಹಿಳಾ ಅಧ್ಯಕ್ಷೆ ಯಾಸ್ಮೀನ್ತಾಜ್ ಮಾತನಾಡಿ ಇತ್ತಿಚೆಗೆ ರಾಜ್ಯದಲ್ಲಿ ಸೇರಿದಂತೆ ದೇಶದಲ್ಲಿ ಆಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟಹಾಕಲು ಸರ್ಕಾರಗಳು ವಿಫಲವಾಗಿವೆ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ರಕ್ಷಣೆಗಾಗಿ ವಿಶೇಷವಾದ ಕಾಯಿದೆಯನ್ನು ರೂಪಿಸಿ, ಸುಭದ್ರವಾದ ರಾಷ್ಟ್ರನಿರ್ಮಾಣಕ್ಕೆ ಸರ್ಕಾರಗಳು ಮುಂದಾಗಬೇಕು ಎಂದರು.
ತಾಲ್ಲೂಕು ಘಟಕದ ಪದಾಧಿಕಾರಿಗಳು ವೇಣುಗೋಪಾಲಸ್ವಾಮಿ ದೇವಾಲಯದಿಂದ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಅತ್ಯಾಚಾರ ಪ್ರಕರಣಗಳ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಹಶೀಲ್ದಾರರ ಮುಖಾಂತರ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಎಚ್.ಶಂಕರ್, ಉಪಾಧ್ಯಕ್ಷ ಎಂ.ಮಂಜುನಾಥ್, ನಗರದ ಅಧ್ಯಕ್ಷ ಕೃಷ್ಣಮೂರ್ತಿ, ರಾಮಾಂಜಿನಪ್ಪ, ಕೆ.ಶ್ರೀನಾಥ್, ದೇವರಾಜು, ಎಲ್.ಮಧುಸೂದನ್, ವೆಂಕಟೇಶ್, ಜೆ.ಜೆ.ಹರೀಶ್, ಕಿಟ್ಟಿ, ಮುರಳಿ, ಅಣ್ಣಪ್ಪ, ಗೌಸ್, ಪ್ರಭಾಕರ್, ಮುನಿಕೃಷ್ಣ, ಮತ್ತಿತರರು ಹಾಜರಿದ್ದರು.
ನೆನಪಿನಂಗಳಕ್ಕೆ ಜಾರಿದ ಶಿಡ್ಲಘಟ್ಟದ ಮೊಟ್ಟಮೊದಲ ಚಿತ್ರಮಂದಿರ
ಬೆಳ್ಳಿಪರದೆಯ ಮೇಲೆ ಕಾಣುವ ಕನಸಿನ ಲೋಕದಲ್ಲಿ ವಿಹರಿಸಿ ಬರುವುದೇ ಒಂದು ಕಾಲದ ಪ್ರಮುಖ ಮನರಂಜನೆಯಾಗಿತ್ತು. ಆದ್ಯತೆಗಳು ಬದಲಾಗುತ್ತಿದ್ದಂತೆ ಜನರ ಮನರಂಜನಾ ಮೂಲವಾಗಿದ್ದ ಚಿತ್ರಮಂದಿರಗಳು ತೆರೆಮರೆಗೆ ಸರಿಯುತ್ತಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಾಲೀಕರಿಗೆ ಸರಿಯಾದ ಆದಾಯ ತರದ ಹಿನ್ನಲೆಯಲ್ಲಿ ನಗರಗಳಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲೂ ಚಿತ್ರಮಂದಿರ ಮುಚ್ಚುತ್ತಿರುವುದು ಕಾಲದ ವಿಪರ್ಯಾಸವಾಗಿದೆ.
ಶಿಡ್ಲಘಟ್ಟದ ಮೊಟ್ಟಮೊದಲ ಚಿತ್ರಮಂದಿರವಾಗಿದ್ದ ವಿಜಯಲಕ್ಷ್ಮಿ ಚಿತ್ರಮಂದಿರ ತನ್ನ ಆಟ ಮುಗಿಸಿದೆ. ಸುಮಾರು ಆರೂವರೆ ದಶಕಗಳ ಕಾಲ ತಾಲ್ಲೂಕಿನ ಜನರನ್ನು ಕನಸಿನ ಲೋಕದಲ್ಲಿ ನೆಚ್ಚಿನ ತಾರೆಯರೊಂದಿಗೆ ವಿಹರಿಸುವಂತೆ ಮಾಡಿದ್ದ ಚಿತ್ರಮಂದಿರ ಇತಿಹಾಸಕ್ಕೆ ಸೇರಿದೆ. ತಾಲ್ಲೂಕಿನ ಮೇಲೂರು, ಮಳ್ಳೂರು, ದಿಬ್ಬೂರಹಳ್ಳಿ ಮತ್ತು ಎಚ್.ಕ್ರಾಸ್ನಲ್ಲಿದ್ದ ಚಿತ್ರಮಂದಿರಗಳು ಈಗಾಗಲೇ ಇತಿಹಾಸ ಸೇರಿವೆ. ಟೀವಿ, ಕೇಬಲ್ ನೆಟ್ವರ್ಕ್, ಸೆಟಲೈಟ್ ಚಾನಲ್, ಡಿವಿಡಿ, ಮೊಬೈಲ್, ಇಂಟರ್ನೆಟ್ ಮುಂತಾದ ತಾಂತ್ರಿಕ ಪ್ರಗತಿಯಿಂದಾಗಿ ಈಗ ಮನೆಯಲ್ಲೇ ಕುಳಿತು, ಅಂಗೈನಲ್ಲೇ ಚಿತ್ರವನ್ನು ವೀಕ್ಷಿಸುವಂತಾಗಿದೆ. ಬದಲಾದ ಜನರ ಅಭಿರುಚಿ ಹಾಗೂ ಸಿಕ್ಕ ಅನುಕೂಲಗಳು ಚಿತ್ರಮಂದಿರದ ಅವಸಾನಕ್ಕೆ ಕಾರಣವೆನ್ನುತ್ತಾರೆ ಹಿರಿಯರು.
ಶಿಡ್ಲಘಟ್ಟದಲ್ಲಿ ಇರುವುದು ಮೂರೇ ಚಿತ್ರಮಂದಿರಗಳು. ವಿಜಯಲಕ್ಷ್ಮಿ, ಮಯೂರ ಮತ್ತು ವೆಂಕಟೇಶ್ವರ. ಪಟ್ಟಣದ ಮೊಟ್ಟ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆ ಹೊಂದಿದ್ದ ವಿಜಯಲಕ್ಷ್ಮಿ ಚಿತ್ರಮಂದಿರದ ಮೊದಲ ಹೆಸರು ‘ಶಂಕರ್ ಟಾಕೀಸ್’. ದೇಶಕ್ಕೆ ಸ್ವಾತಂತ್ರ್ಯ ಬಂದ ಸುಮಾರಿನಲ್ಲಿ ಎಂ.ಎಸ್. ಶಂಕರಪ್ಪ ಅದನ್ನು ಕಟ್ಟಿಸಿ ತಮ್ಮ ಹೆಸರನ್ನೇ ಇಟ್ಟಿದ್ದರು. ಅವರ ನಂತರ ಗೌಡನಹಳ್ಳಿ ಸೊಣ್ಣಪ್ಪ, ಸೀತಾರಾಮಯ್ಯ, ಆರ್.ಆರ್. ರಾಜಣ್ಣ, ದೊಡ್ಡಬಳ್ಳಾಪುರದ ವಿಶ್ವನಾಥ್ ಮುಂತಾದವರ ಕೈ ಬದಲಾಯಿಸಿತು. ಬದಲಾದ ಕಾಲಮಾನಕ್ಕೆ ತಕ್ಕಂತೆ ಚಿತ್ರಮಂದಿರವೂ ಬದಲಾಗುತ್ತಾ ಶಂಕರ್ ಟಾಕೀಸ್ ಎಂಬ ಹೆಸರು ಕೂಡ ಎಪ್ಪತ್ತರ ದಶಕದಲ್ಲಿ ಸೀತಾರಾಮಯ್ಯ ಅವರ ಮಾಲೀಕತ್ವದಲ್ಲಿ ವಿಜಯಲಕ್ಷ್ಮಿ ಚಿತ್ರಮಂದಿರ ಎಂಬ ಹೆಸರಾಯಿತು. ಚಿತ್ರಮಂದಿರದಿಂದಾಗಿ ಹತ್ತಿರದ ವೃತ್ತವನ್ನು ವಿಜಯಲಕ್ಷ್ಮಿ ವೃತ್ತವೆಂದು ಕರೆದರೆ, ಆ ರಸ್ತೆಯನ್ನು ವಿಜಯಲಕ್ಷ್ಮಿ ಟಾಕೀಸ್ ರಸ್ತೆಯೆಂದೇ ಕರೆಯುವರು.
ಮಯೂರ ಚಿತ್ರಮಂದಿರದ ಮಾಲೀಕರಾದ 85 ವರ್ಷದ ಎನ್.ವೆಂಕಟನಾರಾಯಣಯ್ಯ ಅವರು ತಮ್ಮ ಚಿತ್ರಮಂದಿರ ಕಟ್ಟುವ ಮುನ್ನ ಕೆಲ ಕಾಲ ವಿಜಯಲಕ್ಷ್ಮಿ ಚಿತ್ರಮಂದಿರದ ಮಾಲೀಕರಾಗಿದ್ದರು. ತಮ್ಮ ಕಾಲದಲ್ಲಿ ಲವಕುಶ, ಅಡವಿರಾಮುಡು, ವೇಟಗಾಡು, ಆರಾಧನಾ ಮುಂತಾದ ಚಿತ್ರಗಳು 50ಕ್ಕೂ ಹೆಚ್ಚು ದಿನಗಳು ಪ್ರದರ್ಶನಗೊಂಡಿದ್ದವು. ಜನರು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಹಳ್ಳಿಗಳಿಂದೆಲ್ಲಾ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
‘ನಾನು ಆರು ವರ್ಷದ ಬಾಲಕನಿದ್ದಾಗ ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಭಕ್ತ ಸಿರಿಯಾಳ ಚಿತ್ರವನ್ನು ಚಿತ್ರಮಂದಿರ ಭರ್ತಿಯಾಗಿದ್ದರಿಂದ ಪರದೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ನೋಡಿದ್ದೆ. ಚಿತ್ರ ಪ್ರಾರಂಭವಾಗುವ ಮುನ್ನ ದೇವರ ಸ್ತೋತ್ರದ ಹಿನ್ನೆಲೆಯಲ್ಲಿ ನಿಧಾನವಾಗಿ ಮೇಲಕ್ಕೇರುವ ಪರದೆ ಇನ್ನೂ ನನ್ನ ಕಣ್ಣಮುಂದಿದೆ’ ಎಂದು ಶಿಕ್ಷಕ ನಾಗಭೂಷಣ್ ನೆನಪಿಸಿಕೊಂಡರೆ, ‘ನಾವು ಓದುತ್ತಿದ್ದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಮಕ್ಕಳರಾಜ್ಯ ಚಿತ್ರವನ್ನು ತೋರಿಸಿದ್ದರು. ಒಂದೊಂದು ಕುರ್ಚಿಯಲ್ಲಿ ಮೂವರು ಕುಳಿತು ನೋಡಿದ್ದೆವು’ ಎಂದು ಅಬ್ಲೂಡಿನ ಆರ್.ದೇವರಾಜ್ ನೆನಪಿಸಿಕೊಳ್ಳುತ್ತಾರೆ.
‘ರೈಲಿನಲ್ಲಿ ಚಿಂತಾಮಣಿ ಕಡೆಯಿಂದ ಬಂದಾಗ ಶಂಕರ್ ಟಾಕೀಸ್ ಕಂಡೊಡನೆ ನಮಗೆ ಶಿಡ್ಲಘಟ್ಟ ತಲುಪಿದೆವೆಂದು ತಿಳಿಯುತ್ತಿದ್ದೆವು. ಆಗಿನ ಹಿರಿಯರು ಶಂಕರ್ ಟಾಕೀಸ್ ಮುಂದಿದ್ದ ಚಂದ್ರಭವನ್ ಹೋಟೆಲಿನಲ್ಲಿ ಮಸಾಲೆ ದೋಸೆ ತಿಂದು ಪಿಚ್ಚರ್ ನೋಡಿ ಬರುತ್ತಿದ್ದರು. ನಾಲ್ಕಾಣೆಗೆ ಮುಂದಿನ ಬೆಂಚುಗಳು, ಐವತ್ತು ಪೈಸೆಗೆ ಹಿಂದಿನ ಸೀಟುಗಳು. ಅದಕ್ಕೂ ಹಿಂದೆ ಮಹಿಳೆಯರಿಗಾಗಿಯೇ ಮೀಸಲಿದ್ದ ಸ್ಥಳವಿತ್ತು. ಅದರ ಹಿಂದೆ ಎರಡು ಮೂರು ಖುರ್ಚಿಗಳಿದ್ದ ಬಾಲ್ಕನಿ ಬಾಕ್ಸ್ಗಳಿದ್ದವು. ಆಗೆಲ್ಲಾ ಜನ ಒರಟು. ಕ್ಯೂ ನಿಲ್ಲುತ್ತಿರಲಿಲ್ಲ. ಎಲ್ಲೆಂದರಲ್ಲಿ ಉಗಿಯುತ್ತಿದ್ದರು. ಶಂಕರ್ ಟಾಕೀಸ್ ಮ್ಯಾನೇಜರಾಗಿದ್ದ ಸಂಜೀವಪ್ಪ ಎಲ್ಲರನ್ನೂ ಸುಧಾರಿಸುತ್ತಿದ್ದರು. ಅವರು ಅತ್ಯಂತ ನಿಷ್ಠುರ ಹಾಗೂ ಧಾರಾಳ ವ್ಯಕ್ತಿತ್ವವುಳ್ಳವರಾಗಿದ್ದರು’ ಎಂದು ಹೇಳುತ್ತಾರೆ ಕುಚ್ಚಣ್ಣನವರ ಮುರಳೀಧರ್.
’ಈ ಚಿತ್ರಮಂದಿರದಲ್ಲಿ ಎಲ್ಲಾ ಭಾಷೆಗಳ ಚಿತ್ರಗಳನ್ನೂ ಪ್ರದರ್ಶಿಸುತ್ತಿದ್ದರು. 60 ರ ದಶಕದಲ್ಲಿ ಮಲ್ಲಿಮದುವೆ, ಸಾಕುಮಗಳು, ಕನ್ಯಾರತ್ನ ಕನ್ನಡ ಚಿತ್ರಗಳು, ಹರ್ಕ್ಯುಲಸ್ ಅನ್ಚೈನ್ಡ್ ಎಂಬ ಆಂಗ್ಲ ಚಿತ್ರ, ರಾಜ್ಕಪೂರ್, ಧಾರಾಸಿಂಗ್, ದಿಲೀಪ್ಕುಮಾರ್, ಮನೋಜ್ಕುಮಾರ್ ಅವರ ಹಿಂದಿ ಚಿತ್ರಗಳು, ಎಂ.ಜಿ.ಆರ್, ಶಿವಾಜಿಗಣೇಶನ್ ರ ತಮಿಳು, ಎನ್.ಟಿ.ಆರ್, ನಾಗೇಶ್ವರರಾವ್ ಅವರ ತೆಲುಗು ಎಲ್ಲವೂ ಮನಸ್ಸಿನಲ್ಲಿ ಹಸಿರಾಗಿವೆ. ಹಬ್ಬಗಳಿಗಾಗಿ ಹೊಸ ಚಿತ್ರಗಳು ಪ್ರದರ್ಶಿಸುತ್ತಿದ್ದರು. ಶಿವರಾತ್ರಿಯಂದು ಮಧ್ಯರಾತ್ರಿಯ ವಿಶೇಷ ಪ್ರದರ್ಶನವನ್ನು ನೋಡಿಕೊಂಡು ನಾವು ಜಾಗರಣೆ ಮುಗಿಸುತ್ತಿದ್ದೆವು. ಶಾಲಾ ವಿದ್ಯಾರ್ಥಿಗಳಿಗಾಗಿ ಮಧ್ಯಾನ್ಹದ ವೇಳೆ ಹಲವಾರು ಡಾಕ್ಯುಮೆಂಟರಿಗಳನ್ನು ತೋರಿಸುತ್ತಿದ್ದರು. ಸಂಜೆ ‘ನಮೋ ವೆಂಕಟೇಶ’ ಹಾಡು ಕೇಳಿಸಿದೊಡನೆ ಶಾಲೆಯ ಬೆಲ್ ಹೊಡೆದಂತೆ ಇನ್ನು ಅರ್ಧ ಗಂಟೆಯಲ್ಲಿ ಫಸ್ಟ್ ಶೋ ಪ್ರಾರಂಭವಾಗುತ್ತದೆಂಬುದು ಎಲ್ಲರಿಗೂ ತಿಳಿಯುತ್ತಿತ್ತು’ ಎಂದು ಅವರು ತಮ್ಮ ನೆನಪಿನ ರೀಲನ್ನು ಬಿಚ್ಚಿಟ್ಟರು.
– ಡಿ.ಜಿ.ಮಲ್ಲಿಕಾರ್ಜುನ
ಲಾಭದಾಯಕ ಹಾಗೂ ರಾಸಾಯನ ಮುಕ್ತ ಸಾವಯವ ಕೃಷಿ ವಿಧಾನ
ತಾಲ್ಲೂಕಿನಲ್ಲಿ ಹಲವಾರು ರೈತರು ಸಾವಯವ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕೆಲವರು ರಾಸಾಯನಿಕವನ್ನು ಕ್ರಮೇಣ ನಿಧಾನ ಮಾಡುತ್ತಾ ಸಾವಯವ ಪದ್ಧತಿಯತ್ತ ಸಾಗುತ್ತಿದ್ದಾರೆ. ಆದರೆ ಸಹಜಕೃಷಿ ಹರಿಕಾರನೆಂದೇ ಪ್ರಸಿದ್ಧಿ ಪಡೆದ ಜಪಾನಿನ ಮಸನೊಬು ಫುಕುವೊಕ ತೋರಿಸಿಕೊಟ್ಟ ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವವರು ವಿರಳ. ಆದರೆ ತಾಲ್ಲೂಕಿನ ಬೋದಗೂರಿನ ವೆಂಕಟಸ್ವಾಮಿರೆಡ್ಡಿ ಸದ್ದಿಲ್ಲದೇ ಹನ್ನೆರಡು ವರ್ಷಗಳಿಂದ ತಮ್ಮ ಐದು ಎಕರೆ ಜಮೀನಿನಲ್ಲಿ ಸಹಜ ಕೃಷಿಯನ್ನು ಮಾಡುತ್ತಿದ್ದಾರೆ.
ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಬ್ಬರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗೂ ಕೀಟನಾಶಕ ಸಿಂಪಡಿಸದೇ ಇರುವುದು ಸಹಜ ಕೃಷಿಯ ಮೂಲ ಪಾಠ. ಈ ಪದ್ಧತಿಯನ್ನು ಅಳವಡಿಸಿಕೊಂಡು ಹಲವಾರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಪದ್ಧತಿಯಿಂದಲೂ ಕೆಲವು ಬೆಳೆಗಳನ್ನು ರೈತ ವೆಂಕಟಸ್ವಾಮಿರೆಡ್ಡಿ ಬೆಳೆಯುತ್ತಿದ್ದಾರೆ. ಜೇನುಸಾಕಣೆ, ಸೀಮೆಹಸುಗಳು, ಕುರಿಗಳು, ಕೋಳಿಗಳನ್ನೂ ಸಾಕಿರುವ ಇವರು ಕೃಷಿ ತ್ಯಾಜ್ಯಗಳಿಂದ ಗೋಬರ್ ಗ್ಯಾಸ್ ಅನಿಲ, ರಸಸಾರ ತೊಟ್ಟಿ ಹಾಗೂ ಕಾಂಪೋಸ್ಟ್ಗಳನ್ನೂ ನಿರ್ಮಿಸಿಕೊಂಡಿದ್ದಾರೆ. ದನಗಳಿಗೆ ಆಹಾರವಾಗಿ ಅಜೋಲ ಬೆಳೆಸಿದ್ದಾರೆ.
ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಅರಿವೆ ಸೊಪ್ಪು, ದಂಟಿನಸೊಪ್ಪು, ಕೊತ್ತಂಬರಿಸೊಪ್ಪು, ಪಾಲಕ್, ಸಬಾಕ್ಷಿಸೊಪ್ಪು, ಕರಿಬೇವು, ರಾಗಿ, ಮುಸುಕಿನ ಜೋಳ, ಸಾಸಿವೆ, ಅವರೆ, ಬದನೇಕಾಯಿ, ಬೆಂಡೇಕಾಯಿ, ನಿಂಬೆಹಣ್ಣು, ಹುಣಸೆಹಣ್ಣು, ಅರಳು, ಹೊಂಗೆಬೀಜ, ಬೇವು, ಮೆಣಸಿನಕಾಯಿ, ನುಗ್ಗೇಕಾಯಿ, ಸಪೋಟಾ, ತೆಂಗು, ಮಾವು, ಗೋಡಂಬಿ, ಸಿಹಿಗುಂಬಳ, ಸೋರೇಕಾಯಿ, ಜೇನು, ಹಿಪ್ಪುನೇರಳೆ, ಹಾಲು, ಹಲಸು, ಗೆಣಸು, ಚಪ್ಪರದವರೆ, ಕಾಕಿಜೋಳ, ಪುದೀನ, ಶುಂಠಿ, ಅಂಟವಾಳ, ವೆಲ್ವೆಟ್ ಬೀನ್ಸ್ ಹಾಗೂ ಅಗಸೆ ಇವರ ಕಳೆದ ವರ್ಷದ ಕೃಷಿ ಉತ್ಪನ್ನಗಳು.
ಸಪೋಟ, ತೆಂಗು, ಮಾವು ಮುಂತಾದ ತೋಟಗಾರಿಕಾ ಬೆಳೆಗಳ ನಡುವೆ ಒಂದೂವರೆ ಎಕರೆ ಪ್ರದೇಶದಲ್ಲಿ ಅರಿಶಿನವನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಉತ್ತಮ ಗುಣಮಟ್ಟದ ಸುಮಾರು ೨೦ ಕ್ವಿಂಟಾಲಿನಷ್ಟು ಇಳುವರಿಯನ್ನು ಪಡೆದಿದ್ದಾರೆ.
‘ಅರಿಶಿನ ೯ ರಿಂದ ೧೦ ತಿಂಗಳ ಬೆಳೆ. ಮೇ ತಿಂಗಳ ಭರಣಿ ಮಳೆಯ ಸಮಯದಲ್ಲಿ ಸಾಮಾನ್ಯವಾಗಿ ಇದರ ನಾಟಿ ಕಾರ್ಯ ಮಾಡಲಾಗುತ್ತದೆ. ನಾವಿದನ್ನು ಮಿಶ್ರ ಬೆಳೆಯಾಗಿ ಬೆಳೆದಿರುವುದರಿಂದ ಬೆಳೆಯಷ್ಟೂ ಲಾಭದಾಯಕವಾಗಿದೆ. ನಮ್ಮ ಭೂಮಿಯನ್ನು ೧೨ ವರ್ಷಗಳಿಂದ ರಾಸಾಯನಿಕ ಮುಕ್ತವಾಗಿರಿಸಿರುವುದರಿಂದ ಸಂಪೂರ್ಣ ಸಾವಯವ ಪದ್ಧತಿಯಿಂದ ಅರಿಶಿನವನ್ನು ಬೆಳೆದಿದ್ದೇನೆ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿಯ ಜೊತೆಗೆ ಡ್ರಿಪ್ ಮೂಲಕ ರಸಸಾರವನ್ನು ಹರಿಸಿರುವುದರಿಂದ ಬೆಳೆ ತುಂಬ ಚೆನ್ನಾಗಿ ಬಂದಿದೆ.’
‘ಅರಿಶಿನದ ಕುಯಿಲಾದ ನಂತರ ಬೇರು ಕಾಂಡ ಗೆಡ್ಡೆಗಳನ್ನೆಲ್ಲಾ ಬೇರ್ಪಡಿಸಿ ರಾಶಿಹಾಕಿ ಅದರ ಮೇಲೆ ಎಲೆಗಳನ್ನು ಹೊದಿಸಿ ಗೆಡ್ಡೆಗಳು ಶಾಖಕ್ಕೆ ಬೆವರುವಂತೆ ಮಾಡಿ ಅನಂತರ ಸಂಸ್ಕರಿಸಬೇಕು. ಬಣ್ಣಗಳ ತಯಾರಿಕೆ ಹಾಗೂ ಔಷಧೀಯ ಬಳಕೆಯಿರುವುದರಿಂದ ಇದಕ್ಕೆ ಬಹುವಾಗಿ ಬೇಡಿಕೆಯಿದೆ. ಸಂಪೂರ್ಣ ಸಾವಯವದಲ್ಲಿ ಬೆಳೆದಿರುವುದರಿಂದ ಹಾಗೂ ರಾಸಾಯನಿಕ ಬೆರೆಯದಿರುವುದರಿಂದ ಈ ಅರಿಶಿನದ ಗುಣಮಟ್ಟ ಹೆಚ್ಚಿನದ್ದು. ರೈತರು ಸಾವಯವದಲ್ಲಿ ಅರಿಶಿನ ಬೆಳೆಯಲು ಮುಂದಾದಲ್ಲಿ ನಾನು ಗೆಡ್ಡೆಗಳನ್ನು ಕೊಡುತ್ತೇನೆ’ ಎನ್ನುತ್ತಾರೆ ರೈತ ವೆಂಕಟಸ್ವಾಮಿರೆಡ್ಡಿ.
‘ಕೃಷಿಯ ಅಂತಿಮ ಉದೇಶ ಬೆಳೆ ಬೆಳೆಯುವುದಲ್ಲ. ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು ಎಂದು ಹೇಳಿದ ಫುಕುವೊಕ ಅವರ ಮಾತುಗಳು ಎಲ್ಲ ರೈತರಿಗೂ ಪ್ರೇರಣೆಯಾಗಬೇಕು. ಪ್ರಕೃತಿಯ ಭಾಗವಾದ ಕಲ್ಲು, ಮಣ್ಣು, ನೀರು ಗಾಳಿ, ಅಗ್ನಿ, ಆಕಾಶ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯಾ, ಎರೆಹುಳು ಎಲ್ಲವೂ ಅವಯವಗಳೇ ಆಗಿವೆ. ಈ ಅವಯವಗಳನ್ನು ಬಳಸುವ ಹಾಗೂ ಹೆಚ್ಚಿಸುವ ಕೃಷಿ ವಿಧಾನವೇ ಸಾವಯವ’ ಎಂದು ಅವರು ತಿಳಿಸಿದರು.
ರಾಜ್ – ಅಕ್ಕಿಕಾಳಿನ ಮೇಲೊಂದು ಹೆಸರು
‘ಅನ್ನ ಪರಬ್ರಹ್ಮ’ ಎನ್ನುತ್ತಾರೆ. ಕಾರಣ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಜೀವ ಚೈತನ್ಯರೂಪಿಯಾಗಿರಲು ಅನ್ನ ಅಥವಾ ಅಕ್ಕಿ ಬೇಕು. ವಿವಿಧ ಕಾಯಕಗಳನ್ನು ಕೈಗೊಂಡು ಜನರು ಅನ್ನದ ಮೂಲವಾದ ಅಕ್ಕಿಯನ್ನು ಸಂಪಾದಿಸಿದರೆ, ಇಲ್ಲೊಬ್ಬರು ಅಕ್ಕಿಯಿಂದಲೇ ಅಕ್ಕಿಯನ್ನು ಸಂಪಾದಿಸಲು ಹೊರಟಿದ್ದಾರೆ.
ಶಿಡ್ಲಘಟ್ಟದಲ್ಲಿ ರಾಜ್ ಎಂಬ ಯುವಕ ಅಕ್ಕಿಯ ಮೇಲೆ ಹೆಸರು ಬರೆದುಕೊಡುತ್ತಾ ತನ್ನ ಅನ್ನವನ್ನು ಅಥವಾ ಅಕ್ಕಿಯನ್ನು ಸಂಪಾದಿಸುತ್ತಿದ್ದಾನೆ. ಸಣ್ಣ ಆಕಾರದ ಅಕ್ಕಿಯ ಮೇಲೆ ಸೂಕ್ಷ್ಮವಾಗಿ ಹೆಸರನ್ನು ಎರಡೂ ಬದಿಯಲ್ಲಿ ಬರೆದುಕೊಡುವ ಈತ ಅದನ್ನು ದ್ರವವಿರುವ ಪುಟ್ಟ ಗಾಜಿನ ಕೊಳವೆಯಲ್ಲಿ ಹಾಕಿ ಅದನ್ನು ಕೀ ಬಂಚ್ ಮಾಡಿಕೊಡುತ್ತಾನೆ. ದ್ರವವಿರುವ ಕಾರಣ ಅಕ್ಕಿಕಾಳು ಕೊಂಚ ದಪ್ಪವಾಗಿ ಕಾಣುವುದರಿಂದ ನಮ್ಮ ಹೆಸರನ್ನು ಸ್ಪಷ್ಟವಾಗಿ ಓದಬಹುದು.
ಆಂಧ್ರದ ಅಲೆಮಾರಿ ಕುಟುಂಬದ ಸದಸ್ಯನಾದ ಈತ ಊರೂರು ಸುತ್ತುತ್ತಾ, ಸಂತೆ, ಜಾತ್ರೆ, ಪರಿಷೆ ಇರುವೆಡೆ, ಜನಸಂದಣಿ ಹೆಚ್ಚಿರುವಲ್ಲಿ ತನ್ನ ಕಲೆಯಿಂದ ಬದುಕನ್ನು ಕಂಡುಕೊಳ್ಳುತ್ತಿದ್ದಾನೆ. ಓದಿರುವುದು ಎರಡನೇ ತರಗತಿಯಾದರೂ ಸ್ಪಷ್ಟವಾಗಿ ಇಂಗ್ಲೀಷ್ ಅಕ್ಷರಗಳನ್ನು ಅಕ್ಕಿಕಾಳಿನ ಮೇಲೆ ಮೂಡಿಸಬಲ್ಲಷ್ಟು ಅಕ್ಷರಜ್ಞಾನವನ್ನು ಹೊಂದಿದ್ದಾನೆ. ಕನ್ನಡ ಅಕ್ಷರವನ್ನೂ ಸಹ ಬರೆಯಬಲ್ಲನಾದರೂ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ, ಜನಜಂಗುಳಿಯ ಮಧ್ಯೆ ಬರೆಯಲು ಕಷ್ಟವೆನ್ನುತ್ತಾನೆ. ಭೂತಕನ್ನಡಿಯಲ್ಲಿ ನೋಡಬೇಕಾದ ಅಕ್ಷರಗಳನ್ನು, ಬರಿಗಣ್ಣಿನಲ್ಲೇ ನೋಡುತ್ತಾ ಅಕ್ಕಿಯ ಮೇಲೆ ಅಕ್ಷರ ರಚಿಸುವುದು ಈತನ ಹೆಚ್ಚುಗಾರಿಕೆ.
’ನಮ್ಮ ಮೂಲ ಆಂಧ್ರದ ಮಹಬೂಬ್ನಗರ ಜಿಲ್ಲೆ. ಅಲೆಮಾರಿಗಳಾದ ನಾವು ಅಲ್ಲಲ್ಲಿ ಟೆಂಟ್ ಹಾಕಿಕೊಂಡು ವಿವಿಧ ಕಸುಬುಗಳನ್ನು ಮಾಡುತ್ತಾ ಅಪರೂಪಕ್ಕೊಮ್ಮೆ ಊರಿನ ಕಡೆ ಹೋಗಿ ಬರುತ್ತೇವೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ಕರ್ನಾಟಕದ ಭಾಗಶಃ ಎಲ್ಲಾ ಊರುಗಳನ್ನೂ ಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಅಕ್ಕಿಕಾಳಿನ ಮೇಲೆ ಹೆಸರು ಬರೆಯುತ್ತಾ ಜೀವನೋಪಾಯ ಮಾಡುತ್ತಿದ್ದೇನೆ. ನಮ್ಮ ಕುಟುಂಬದವರು ಸಧ್ಯ ಚಿಂತಾಮಣಿಯ ಬಳಿ ಟೆಂಟ್ ಹಾಕಿದ್ದಾರೆ’ ಎಂದು ಅಕ್ಕಿಯ ಮೇಲೆ ಅಕ್ಕರೆಯ ಹೆಸರು ಮೂಡಿಸುವ ರಾಜ್ ಹೇಳುತ್ತಾರೆ.
ಕಿಡಿಗೇಡಿಗಳ ದುಶ್ಕೃತ್ಯದಿಂದ ರೈತನಿಗೆ ನಷ್ಟ
ತಾಲ್ಲೂಕಿನ ಜಂಗಮಕೋಟೆಯ ರೈತ ಗುಡಿಯಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ಬುಧವಾರ ಕಿಡಿಗೇಡಿಗಳು ಔಷಧಿ ಸಿಂಪಸಿದ್ದು, ಆ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸತ್ತು ಸುಮಾರು ಒಂದು ಲಕ್ಷ ರೂಗಳಷ್ಟು ನಷ್ಟ ಸಂಭವಿಸಿದೆ.
ನಾನ್ನೂರು ಮೊಟ್ಟೆಯನ್ನು ಮೇಯಿಸಿದ್ದು, ನಾಲ್ಕು ಜ್ವರ ದಾಟಿ ನಾಲ್ಕು ದಿನಗಳಾಗಿದ್ದ ರೇಷ್ಮೆ ಹುಳುಗಳು ಎಲ್ಲವೂ ವಿಷವಾದ ಸೊಪ್ಪನ್ನು ತಿಂದು ಸತ್ತಿವೆ. ಕೈಗೆ ಬಂದಿದ್ದ ಬೆಳೆಯು ನೆಲಕಚ್ಚಿದ್ದರಿಂದಾಗಿ ರೈತರು ಕಂಗಾಲಾಗಿದ್ದಾರೆ. ರೇಷ್ಮೆ ಇಲಾಖೆಯ ಸಹನಿರ್ದೇಶಕ ಚಂದ್ರಪ್ಪ, ವಿಸ್ತರಣಾಧಿಕಾರಿ ತಿಮ್ಮರಾಜು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದೇಶದ ಪ್ರಗತಿಗೆ ಮೂಲ ಶಿಕ್ಷಣ
ಸ್ವಾತಂತ್ರ್ಯಾನಂತರ ಶಿಕ್ಷಣದಿಂದ ಕಾನೂನು ಅರಿವು ಉಂಟಾಗಿದ್ದು ಈಗ ಹಲವಾರು ಸೌಲಭ್ಯಗಳು ದೊರಕುವಂತಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಗತಿಗೆ ಮೂಲ ಶಿಕ್ಷಣ. ಪ್ರತಿಯೊಬ್ಬರೂ ಶಿಕ್ಷಿತರಾದಾಗ ಮಾತ್ರ ತಿಳುವಳಿಕೆ, ಸಾಮಾಜಿಕ ಕಳಕಳಿ, ದೇಶದ ಬಗ್ಗೆ ಗೌರವ, ಅಭಿಮಾನ, ಪರಿಸರ ಪ್ರೇಮ ಮೂಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಾಮುಖ್ಯತೆಯನ್ನು ಸಂದರ್ಭಸಹಿತವಾಗಿ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ಮಾತನಾಡಿ, ‘ಕಾನೂನು, ಜಗಳ, ರಾಜಿ ಮುಂತಾದ ಸಂಗತಿಗಳು ಶಾಲಾ ಹಂತದಿಂದಲೇ ಪ್ರಾರಂಭವಾಗುತ್ತವೆ. ಶಾಲಾ ಹಂತದಲ್ಲೇ ಮಕ್ಕಳ ಮಾನಸಿಕ ಪರಿವರ್ತನೆ ಸಕಾರಾತ್ಮಕವಾಗಿ ರೂಪಿಸುವುದರಿಂದ ಮುಂದೆ ಜೀವನದಲ್ಲಿ ಅವರು ಉತ್ತಮರಾಗಲು ಸಾಧ್ಯ’ ಎಂದು ನುಡಿದರು. ವಕೀಲೆ ನೌತಾಜ್ ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಕುರಿತು ಮಾತನಾಡಿದರೆ, ವಕೀಲ ಸಿ.ಭಾಸ್ಕರ್ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು. ಸರ್ಕಾರಿ ವಕೀಲೆ ಎಸ್.ಕುಮುದಿನಿ, ಶಿಕ್ಷಕರಾದ ನಾಗಭೂಷಣ್, ರಾಮಕೃಷ್ಣ, ಗಂಗಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಗಂಗಮ್ಮ ದೇವಿಯ ಉತ್ಸವ
ಪಟ್ಟಣದ ವಾಸವಿ ರಸ್ತೆಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ದೇವಸ್ಥಾನ ಹಾಗೂ ಗಂಗಮ್ಮ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಗಂಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮುತ್ತಿನಪಲ್ಲಕ್ಕಿಯಲ್ಲಿಟ್ಟು ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮನೆಯ ಮುಂದೆ ಬಂದ ದೇವಿಗೆ ಮಹಿಳೆಯರು ದೀಪ ಬೆಳಗಿ ಪೂಜೆ ಸಲ್ಲಿಸಿದರು. ಭಕ್ತರಿಗೆ ಮಹಾಮಂಗಳಾರತಿಯ ನಂತರ ಪ್ರಸಾದವನ್ನು ವಿನಿಯೋಗಿಸಲಾಯಿತು. ಶಾಂತಿ, ನೆಮ್ಮದಿ, ಮಳೆ, ಬೆಳೆಗಾಗಿ ಗಂಗಮ್ಮ ದೇವಿಯ ಪೂಜೆಯನ್ನು ಹಾಗೂ ಮೆರವಣಿಗೆಯನ್ನು ಮಾಡುತ್ತಿರುವುದಾಗಿ ಭಕ್ತರು ತಿಳಿಸಿದರು.
ಶಿಡ್ಲಘಟ್ಟದ ದೇವಿ ಜಾತ್ರೆ ಮಹೋತ್ಸವ
ಶಿಡ್ಲಘಟ್ಟ ಪಟ್ಟಣದ ಸಿದ್ಧಾರ್ಥ ನಗರದ ಜನರು ದೇವಿ ಜಾತ್ರೆಯನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಗಂಗಮ್ಮ, ಎಲ್ಲಮ್ಮ, ಪೂಜಮ್ಮ, ನಾಗಲಮುದ್ದಮ್ಮ ದೇವಿಗಳ ದೇವಸ್ಥಾನಕ್ಕೆ ಮಹಿಳೆಯರು ವಿಶೇಷವಾಗಿ ಅಲಂಕರಿಸಿರುವ ತಂಬಿಟ್ಟು ದೀಪಗಳನ್ನು ತಲೆಯ ಮೇಲಿಟ್ಟುಕೊಂಡು ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಿದರು. ಹೆಣ್ಣು ಮಕ್ಕಳ ಮೆರವಣಿಗೆಯ ಮುಂದೆ ತಮಟೆ ವಾದ್ಯಗಳೊಂದಿಗೆ ಮಕ್ಕಳು ಕುಣಿಯುತ್ತಾ ಸಾಗಿದರು. ದೀಪಗಳನ್ನು ಹೊತ್ತ ಮಹಿಳೆಯರು ಅಮ್ಮನಕೆರೆಗೂ ತೆರಳಿ ದೀಪ ಬೆಳಗಿ ಮಳೆ ಬೆಳೆ ಆಗಲೆಂದು ಪ್ರಾರ್ಥಿಸಿದರು. ಮೆರವಣಿಗೆಯಲ್ಲಿ ಸಾಗುವಾಗ ಮಹಿಳೆಯರು ವಿವಿಧ ಜನಪದ ಭಕ್ತಿಗೀತೆಗಳನ್ನು ಹಾಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆ
ಪಟ್ಟಣದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆಯನ್ನು ಮಾಡಲಾಯಿತು.
ಆನ್ಲೈನ್ ಸೇವೆಯ ಉದ್ಘಾಟನೆಯನ್ನು ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕುಗಳ ನೀಡುವ ಎಲ್ಲಾ ಸೇವೆಗಳನ್ನೂ ಈಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲೂ ಒದಗಿಸಲಾಗುತ್ತಿದೆ. ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ರೈತರು ಹೊಸ ಸೇವೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬ್ಯಾಂಕ್ ಅಭಿವೃದ್ಧಿಯಾಗಬೇಕಾದರೆ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು.ಶೀಘ್ರ ಹಣ ವರ್ಗಾವಣೆ, ಸಮಯದ ಉಳಿತಾಯ ಹಾಗೂ ಕಡಿಮೆ ಬಡ್ಡಿ ಹಣ ಮುಂತಾದ ಸೇವೆಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರವನ್ನು ಬಲಗೊಳಿಸಬೇಕು’ ಎಂದು ಹೇಳಿದರು.
‘ಇದುವರೆಗೂ ಸಹಕಾರಿ ಬ್ಯಾಂಕುಗಳಿಗೆ ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಐ.ಎಫ್.ಎಸ್.ಸಿ ಕೋಡ್ ಇರಲಿಲ್ಲ. ಈಗ ಪ್ರಪ್ರಥಮವಾಗಿ ಈ ಕೋಡ್ ಪಡೆದ ಹೆಗ್ಗಳಿಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗೆ ಸಲ್ಲುತ್ತದೆ. ಇದರಿಂದ ವರ್ತಕರಿಗೆ, ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸ್ವಸಹಾಯ ಗುಂಪುಗಳು ಸಾಲ ಹಿಂತಿರುಗಿಸುವಲ್ಲಿ ಪ್ರಥಮರಾಗಿದ್ದು ಮಾದರಿಯಾಗಿದ್ದಾರೆ’ ಎಂದು ಅವರು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಕೆ.ಎಂ.ಎಫ್ ನಿರ್ದೇಶಕ ಬಂಕ್ ಮುನಿಯಪ್ಪ, ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಎಸ್.ಎಫ್.ಸಿ.ಎಸ್ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

