Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿ “ಗುಡಿಬಂಡೆ” ಹೆಸರಿನ ಪ್ರಸ್ತಾಪವಿರುವ ಮೊಟ್ಟ ಮೊದಲ ಶಾಸನ ಪತ್ತೆಯಾಗಿದೆ.
“ವಿಜಯನಗರ ಅರಸರ ಕಾಲಕ್ಕೆ ಅಂದರೆ ಕ್ರಿ.ಶ. 1346 ಗೆ ಸೇರಿದ ಈ ವೀರಗಲ್ಲು ಮತ್ತು ಕನ್ನಡ ಲಿಪಿಯ ಶಾಸನ ವಿಶಿಷ್ಟವಾದುದಾಗಿದೆ. ಪೆನುಗೊಂಡೆಯ ಕಾಮಯನಾಯಕನ ಪ್ರಸ್ತಾಪ ಮತ್ತು ಗುಡಿಬಂಡೆಯ ದುರ್ಗದ ಕೊಂಡಯದೇವನ ಆಳ್ವಿಕೆಯಲ್ಲಿ ಮರಗಯ್ಯನ ಮಗ ಕಾಟೆಯನೆಂಬ ವೀರನು ಇಬ್ಬರು ಕುದುರೆ ವೀರರೊಂದಿಗೆ ನಡೆದ ಹುಯ್ಯಲಿನಲ್ಲಿ(ಹೋರಾಟದಲ್ಲಿ) ಕುದುರೆಗಳನ್ನೂ ಕೊಂದು ಮರಣಿಸಿದಂತೆ ತೋರುತ್ತಿದೆ” ಎಂದು ಶಾಸನವನ್ನು ಅಧ್ಯಯನ ಮಾಡಿದ ಲಿಪಿತಜ್ಞ ಹಾಗೂ ಶಾಸನತಜ್ಞ ಪಿ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
“ಮೂರು ಹಂತಗಳಲ್ಲಿರುವ ಈ ವೀರಗಲ್ಲಿನ ಚಿತ್ರಣದಲ್ಲಿ ಕೆಳಗಿನ ಹಂತದಲ್ಲಿ ಇಬ್ಬರು ಕುದುರೆ ಮೇಲೆ ಕುಳಿತ ವೀರರ ನಡುವೆ ಒಬ್ಬ ವೀರ ಹೋರಾಡುತ್ತಿದ್ದಾನೆ. ಮಧ್ಯದ ಹಂತದಲ್ಲಿ ಕೈಲಾಸಕ್ಕೆ ಅಪ್ಸರೆಯರು ಹೋರಾಡಿ ಮಡಿದ ವೀರನನ್ನು ಕರೆದೊಯ್ಯುತ್ತಿದ್ದಾರೆ. ಮೇಲಿನ ಹಂತದಲ್ಲಿ ಲಿಂಗ, ನಂದಿ ಮತ್ತು ಪೂಜೆಯಲ್ಲಿ ನಿರತನಾದ ಕಾಳಾಮುಖ ಯತಿ ಮತ್ತು ವೀರನನ್ನು ನಾವು ಕಾಣಬಹುದಾಗಿದೆ” ಎಂದು ಅವರು ವಿವರಿಸಿದರು.
ಶಾಸನದ ಅಧ್ಯಯನಕ್ಕೆ ಆಗಮಿಸಿದ್ದ ಶಾಸನತಜ್ಞ ಕೆ.ಆರ್.ನರಸಿಂಹನ್ ಅವರು ಮಾತನಾಡಿ, “ನೊಳಂಬವಾಡಿಯ ಒಂದು ಪ್ರಮುಖ ವಿಭಾಗವಾಗಿದ್ದ ಸಾದಲಿನಾಡು, ಚೋಳರ ಕಾಲಕ್ಕೆ ಮಾರಾಯಪಾಡಿಯ ಒಂದು ವಿಭಾಗವಾಗಿತ್ತು. ಆದರೆ ಈಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾದಲಿ ಹೋಬಳಿ ಕೇಂದ್ರವಾಗಿದೆ.
ನೊಳಂಬರು ಚೋಳರ ಸಾಮಂತರಾಗಿದ್ದ ಕಾಲದಲ್ಲಿ, ಅಂದರೆ ಹತ್ತನೆಯ ಶತಮಾನದ ಅಂತಿಮಭಾಗದಲ್ಲಿ ಇಲ್ಲಿ ನಿರ್ಮಾಣವಾದ ಶಿವಾಲಯವೊಂದರ ದೇವಕೋಷ್ಟಗಳು, ಮತ್ತು ಸಪ್ತಮಾತೃಕೆಯರ ವಿಗ್ರಹಗಳು ಹೊಲವೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೊಯ್ಸಳರ ವಿಷ್ಣುವರ್ಧನನು ಹನ್ನೊಂದನೆಯ ಶತಮಾನದಲ್ಲಿ ಚೋಳರನ್ನು ಕಂಚಿಯವರೆಗೂ ಓಡಿಸಿ ವಾಪಾಸು ರಾಜಧಾನಿಗೆ ಬರುವಾಗ ಸಾದಲಿಯಲ್ಲಿದ್ದ ಇರುಂಗೋಳಚೋಳನ ಉತ್ತರಾಧಿಕಾರಿಗಳನ್ನು ಹಿಮ್ಮೆಟ್ಟಿಸಿದ ಸಮಾಚಾರವೂ ಚರಿತ್ರೆಯಲ್ಲಿ ಇದೆ.
ಆನಂತರ ಈ ಪ್ರಾಂತಕ್ಕೆ ವಿಜಯನಗರದ ಸೇನಾಪತಿ ಕಂಟಿಕಾರರಾಯರಗಂಡ ತೆಪ್ಪದ ನಾಗಣ್ಣ ಒಡೆಯರ್ ಅಧಿಕಾರಿಯಾಗುತ್ತಾನೆ. ಆತ ಮತ್ತು ಆತನ ಮಗನಾದ ದೇವಣ್ಣ ಒಡೆಯರುಗಳಿಂದಲೇ ಈ ಗ್ರಾಮದ ಪೆದ್ದಗುಡಿ ಎವಿಸಿಕೊಂಡ ಚನ್ನಕೇಶವನ ಆಲಯ ನಿರ್ಮಾಣ ಆಗಿರುವುದು.
ಇವುಗಳ ಜೊತೆ ಈ ಪರಿಸರದಲ್ಲಿ ಕಾಳಿ, ಭೈರವ, ಭೈರವ ಪಾದಗಳು, ಅಪ್ರಕಟಿತ ವೀರಗಲ್ಲು ಶಾಸನ ಇರುವ ಪುರಾತನ ನಿರ್ಜನವಸತಿ ಕಾಣಸಿಗುತ್ತದೆ.
ಈಗ ಸಿಕ್ಕಿರುವ ವೀರಗಲ್ಲು ಶಾಸನದಲ್ಲಿ ಗುಡಿಬಂಡೆಯ ಹೆಸರಿರುವ ಮೊದಲ ಶಾಸನವಿದು ಎಂಬುದು ವಿಶೇಷವಾಗಿದೆ” ಎಂದು ಹೇಳಿದರು. ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸಾದಲಿ ನಾಗೇಶ್, ನಾಗರಾಜ್, ವಿಜಯಶಂಕರ್, ಡಿ.ಎನ್.ಸುದರ್ಶನರೆಡ್ಡಿ ಹಾಜರಿದ್ದರು.
Sidlaghatta : ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಚಿಂತಾಮಣಿಯ ಕೀರ್ತಿನಗರದ ಮೂಲದ, ಹೊಸಕೋಟೆ ತಾಲ್ಲೂಕಿನ ಕಟ್ಟಿಗೆನಹಳ್ಳಿಯ ನಿವಾಸಿ ಅರ್ಬಾಜ್ ಖಾನ್ 25 ವರ್ಷ ಎಂಬಾತನನ್ನು ಸುಗಟೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಶಕ್ಕೆ ಪಡೆದಿರುವ ಗ್ರಾಮಾಂತರ ಠಾಣೆ ಪೊಲೀಸರು. ದೂರು ದಾಖಲಿಸಿಕೊಂಡು, ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇಬ್ಬರು ವ್ಯಕ್ತಿಗಳು ಸ್ಕೂಟಿ ದ್ವಿಚಕ್ರ ವಾಹನದಲ್ಲಿ, ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ತೆಗೆದುಕೊಂಡು ಸುಗಟೂರು ಗ್ರಾಮದ ಕಡೆಯಿಂದ ಜಂಗಮಕೋಟೆಗೆ ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ದಾಳಿ ನಡೆಸಿರುವ ಪೊಲೀಸರು, 80 ಸಾವಿರ ರೂ ಬೆಲೆ ಬಾಳುವ 2 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡು, ತಪ್ಪಿಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Sidlaghatta : ಅನುದಾನಿತ ಶಾಲೆಯಲ್ಲಿ ಕೆಲಸ ಮಾಡಿರುವ, 45 ವರ್ಷಗಳ ಕಾಲ ಎಂ.ಎಲ್.ಸಿ ಆಗಿ ಅನುಭವವಿರುವ ಬಸವರಾಜ ಹೊರಟ್ಟಿ ಸೇರಿದಂತೆ ಯಾವೊಬ್ಬ ಎಂ.ಎಲ್.ಸಿ ಯೂ ಶಿಕ್ಷಕರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಗೌರವಾಧ್ಯಕ್ಷ ಗೋಪಿನಾಥ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇವಲ ಚುನಾವಣೆಗಳನ್ನು ಅವರದ್ದೇ ಆದ ಮಾರ್ಗದಲ್ಲಿ ಮಾಡಿಕೊಂಡು ಗೆದ್ದಿರುವ ಹದಿನಾಲ್ಕೂ ಮಂದಿ ಎಂ.ಎಲ್.ಸಿ ಗಳಲ್ಲಿ ಯಾರೊಬ್ಬರೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದಾಗಲೀ, ಅವರ ನೋವಿಗಾಗಲೀ ಸ್ಪಂದಿಸುತ್ತಿಲ್ಲ ಎಂದರು.
ಅನುದಾನಿತ ಶಾಲಾ ಶಿಕ್ಷಕರಿಗೂ ಆರೋಗ್ಯ ಸಂಜೀವಿನಿ ಯೋಜನೆಯ ನೆರವನ್ನು ಕಲ್ಪಿಸಿಕೊಡಬೇಕು. ಓಪಿಎಸ್ ಪಿಂಚಣಿ ಸೌಲಭ್ಯವನ್ನು ಅನುದಾನಿತ ನೌಕರರಿಗೂ ಸಿಗಬೇಕು. ಅನುದಾನಿತ ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಮಾಡಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಶೇ 60 ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ನೋಟೀಸ್ ಕೊಡುವ ಮೂಲಕ ಅನುದಾನಿತ ಪ್ರೌಢಶಾಲೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಮೊದಲು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಶಿಕ್ಷಕರೇ ಇಲ್ಲದಿದ್ದರೆ ಫಲಿತಾಂಶ ಹೇಗೆ ತಾನೆ ಬರಲು ಸಾಧ್ಯ. ಶಿಕ್ಷಕರಿದ್ದೂ ಆನಂತರ ಫಲಿತಾಂಶ ಕಡಿಮೆ ಬಂದರೆ ಶಾಲೆಗಳ ಮೇಲೆ ಕ್ರಮ ವಹಿಸಬೇಕು ಎಂದರು.
ಒಳಮೀಸಲಾತಿ ಜಾರಿಗೆ ನಾವು ವಿರೋಧಿಸುತ್ತಿಲ್ಲ. ಒಳಮೀಸಲಾತಿ ಜಾರಿಗೆ ಬರುವ ಮುಂಚೆ ಖಾಲಿ ಇದ್ದ ಹುದ್ದೆಗಳನ್ನು ಮೊದಲು ತುಂಬಿ. ಆನಂತರ ಒಳಮೀಸಲಾತಿ ಜಾರಿಗೊಳಿಸಿ ಎಂಬುದು ನಮ್ಮ ಆಗ್ರಹ. ಆರು ತಿಂಗಳಿನಿಂದ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಇನ್ನೂ ಆರು ತಿಂಗಳಾದರೂ ಬಗೆಹರಿಯುವುದಿಲ್ಲ. ಒಳಮೀಸಲಾತಿ ನೆಪದಲ್ಲಿ ಹುದ್ದೆಗಳನ್ನು ತುಂಬದಿರುವುದು ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ವಿ. ವೆಂಕರೆಡ್ಡಿ, ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುಮನ್, ಸಿದ್ದರಾಜು, ಚಂದ್ರಶೇಖರ್, ಮುನಿನಾರಾಯಣಸ್ವಾಮಿ, ನಾರಾಯಣಸ್ವಾಮಿ ಹಾಜರಿದ್ದರು
Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲರೂ ಸೇರಿ ಭಾನುವಾರದಂದು ದೇವರುಗಳ ಉತ್ಸವದ ಮೆರವಣಿಗೆಯನ್ನು ನಡೆಸಿ ಪೂಜಿಸಿ ಆರಾಧಿಸಿ ಭಕ್ತಿಭಾವದಲ್ಲಿ ಮಿಂದೆದ್ದರು.
ಕಾಡಹಳ್ಳಿಯ ಶ್ರೀಮಹೇಶ್ವರಮ್ಮ, ಚೀಮಂಗಲದ ಮುನೇಶ್ವರಸ್ವಾಮಿ ಹಾಗೂ ಶ್ರೀಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ನಂತರ ಉತ್ಸವ ಮೂರ್ತಿಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಚಿಟ್ಟಿಮೇಳ, ತಮಟೆ, ನಾದಸ್ವರ, ಡೋಲು ಇನ್ನಿತರೆ ಜನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಊರ ಅಭಿವೃದ್ದಿ ಮತ್ತು ಯುವಕರ ಏಳಿಗೆಗೆಂದು ನಡೆಸಿಕೊಂಡು ಬರುತ್ತಿರುವ ಈ ಉತ್ಸವು 9 ದಿನಗಳ ಕಾಲ ನಡೆಯಲಿದ್ದು ಕಡೆಯ ದಿನವಾದ ಇಂದು ವಿಶೇಷವಾಗಿ ಚಿಟ್ಟಿಮೇಳ, ನಾದಸ್ವರ, ಡೋಲಿನೊಂದಿಗೆ ಉತ್ಸವವು ಗಮನ ಸೆಳೆಯಿತು. ಹೆಣ್ಣು ದೇವರಿಗೆ ಮಡಿಲು ತುಂಬಿಸಿ ಕಳುಹಿಸಿಕೊಡಲಾಯಿತು. ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.
Melur, Sidlaghatta : ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ಭಾವಪೂರ್ಣ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಬೆಂಗಳೂರು ಮೂಲದ ಮಾರ್ಗದರ್ಶಿ ವಿಕಲಚೇತನ ಸ್ವಯಂ ಸೇವಾ ಸಂಸ್ಥೆ, ಸ್ಟೇಟ್ ಸ್ಟ್ರೀಟ್ ಮತ್ತು ನವಜೀವನ ಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು.
ಕಾರ್ಯಕ್ರಮದ ಭಾಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ 10ನೇ ತರಗತಿಯ ಮುರಳಿ, 8ನೇ ತರಗತಿಯ ಹರ್ಷ ಮತ್ತು 10ನೇ ತರಗತಿಯ ಮಧುಶ್ರೀ ವಿಜೇತರಾಗಿ ಬಹುಮಾನ ಸ್ವೀಕರಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನೂ ವಿತರಿಸಲಾಯಿತು. ಶಾಲೆಯ ಮಕ್ಕಳಿಂದ ಹಾಗೂ ಅಂಗವಿಕಲರ ಸಹಭಾಗಿತ್ವದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಗೆ ಮೆರವಣಿಗೆ ನಡೆಯಿತು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್ ಮಾತನಾಡಿ, “ಅಂಗವೈಕಲ್ಯ ಎಂದರೆ ಶಕ್ತಿ ಕಡಿಮೆ ಎಂಬುದಲ್ಲ. ಸಾಧನೆಗೆ ಇಚ್ಛಾಶಕ್ತಿ ಇರುವವರು ಯಾವುದೇ ಅಡ್ಡಿಯನ್ನು ಮೀರಿ ಸಾಧಿಸಬಹುದು. ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಜವಾಬ್ದಾರರು. ಪರಿಸರದ ರಕ್ಷಣೆಗೆ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಮುಂದಾಗಬೇಕು” ಎಂದು ತಿಳಿಸಿದರು.
ಮಾರ್ಗದರ್ಶಿ ಸಂಸ್ಥೆಯ ಸಂಚಾಲಕಿ ಗೀತಾ ಅವರು ಮಾತನಾಡಿ, “ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಠ್ಯಬಾಹ್ಯ ಜ್ಞಾನವನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತವೆ. ನಾವು ಪ್ರತಿವರ್ಷ ಒಂದೊಂದು ಶಾಲೆ ಆಯ್ಕೆ ಮಾಡಿಕೊಂಡು, ಪರಿಸರ ಕುರಿತ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಭಾವನೆ ಬೆಳೆಸುವ ಕೆಲಸ ಮಾಡುತ್ತೇವೆ” ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ಭಾಸ್ಕರ್, ಎಸ್ಡಿಎಂಸಿ ಅಧ್ಯಕ್ಷೆ ನಂದಿನಿ, ಸದಸ್ಯ ಚಂದ್ರೇಗೌಡ, ಮಾರ್ಗದರ್ಶಿ ಸಂಸ್ಥೆಯ ಸೀತಾ, ನವಜೀವನ ಸಂಸ್ಥೆಯ ಮುನಿರಾಜು ಹಾಗೂ ರವಿ, ಶಿಕ್ಷಕರು ಹಾಗೂ ಸಹಶಿಕ್ಷಕರಾದ ಸುಜಾತ, ಸವಿತಾ, ಗಾಯತ್ರಿ, ಪದ್ಮಾ, ವೆಂಕಟಶಿವಾರೆಡ್ಡಿ, ನಾಗರಾಜ್, ದೇವಮ್ಮ, ಅರುಣ, ಸೌಂದರ್ಯ ಮತ್ತು ಇನ್ನಿತರರು
ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳು, ನಿಗಮ, ಸ್ಥಳೀಯ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಸ್ಥಾನಗಳಲ್ಲಿ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರನ್ನು ಕೂಡಲೆ ನೇಮಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಹಿಂದುಳಿದ ವರ್ಗಗಳ ಕಾರ್ಯಕರ್ತರೆ ಪಕ್ಷದ ನಾಯಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು DCC ಬ್ಯಾಂಕ್ನ ನಿರ್ದೇಶಕ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯಿತು. ಇದುವರೆಗೂ ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಮ ನಿರ್ದೇಶನ ಸ್ಥಾನಗಳನ್ನು ತುಂಬಿಲ್ಲ ಎಂದು ದೂರಿದರು.
ಇದರಿಂದ ಅಭಿವೃದ್ದಿಗೆ ಅಡೆತಡೆ ಆಗುತ್ತಿದೆಯಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೂ ನಿರಾಶೆ ಆಗಿದೆ ಎಂದು ಆಪಾದಿಸಿದರು.
ಈಗಾಗಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲು ಮೂರ್ನಾಲ್ಕು ಬಾರಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರಿಗೆ ಕೊಟ್ಟರೂ ಶಿಡ್ಲಘಟ್ಟದಲ್ಲಿ ರಾಜೀವ್ಗೌಡ ಮತ್ತು ಪುಟ್ಟು ಆಂಜಿನಪ್ಪ ಬಣಗಳು ಇವೆ ಎಂದು ಸಬೂಬು ಹೇಳಿ ನೇಮಕ ಮಾಡುತ್ತಿಲ್ಲ. ಆದರೆ ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಬಣಗಳು ಇಲ್ಲವಾ, ನೀವು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿರುವುದು ಅಭಿವೃದ್ದಿ ಕಾರ್ಯಗಳನ್ನು ಮಾಡಲೋ ಅಥವಾ ಅಧಿಕಾರಿಗಳ ವರ್ಗಾವಣೆ ಮಾಡಲು ಮಾತ್ರವಾ ಎಂದು ಗಂಭೀರ ಆರೋಪ ಮಾಡಿದರು.
ಚಿಂತಾಮಣಿಯಲ್ಲಿ ಎಲ್ಲ ಅಭಿವೃದ್ದಿ ಕೆಲಸಗಳು, ನಾಮ ನಿರ್ದೇಶಕ ಸ್ಥಾನಗಳ ಭರ್ತಿ ಆಗುತ್ತಿದೆ. ಆಗಲಿ ನಮ್ಮದೇನು ತಕರಾರು ಇಲ್ಲ. ಆದರೆ ಜಿಲ್ಲೆಯ ಇತರೆ ತಾಲೂಕುಗಳ ಜನ ಸಾಮಾನ್ಯರು, ಕಾಂಗ್ರೆಸ್ನ ಕಾರ್ಯಕರ್ತರು ಏನು ಪಾಪ ಮಾಡಿದ್ದಾರೆ ಸ್ವಾಮಿ ಎಂದು ಪ್ರಶ್ನಿಸಿದರು.
ಶಿಡ್ಲಘಟ್ಟ ಕಾಂಗ್ರೆಸ್ನಲ್ಲಿ ಯಾವುದೇ ಬಣಗಳು ಇಲ್ಲ. ಆದರೆ ನೀವೇ ಬಣಗಳ ನೆಪ ಹೇಳಿ ನಾಮ ನಿರ್ದೇಶಕ ಸ್ಥಾನಗಳ ಭರ್ತಿ ಮಾಡುತ್ತಿಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ನೀವೇ ಬಣಗಳನ್ನು ಸೃಷ್ಟಿ ಮಾಡಿ, ನಮ್ಮ ತಾಲೂಕು ಹಿಂದುಳಿಯಲು ನೀವೇ ಕಾರಣ ಆಗುತ್ತಿದ್ದೀರಿ ಎಂದು ನೇರವಾಗಿ ಆರೋಪಿಸಿದರು.
ನಮ್ಮ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೂರ್ನಾಲ್ಕು ದಶಕಗಳಿಂದಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇಲ್ಲಿ ಕಾಂಗ್ರೆಸ್ನ ಶಾಸಕರು ಇರೊಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲ. ಎಲ್ಲಿ ಕಾಂಗ್ರೆಸ್ನ ಶಾಸಕರು ಇರುವುದಿಲ್ಲವೋ ಆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ, ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ನಿಲ್ಲಬೇಕು ತಾನೇ. ಆದರೆ ನೀವು ಏನು ಮಾಡುತ್ತಿದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.
ರೈತರು, ಮಹಿಳೆಯರ ಪರ ನಿಲ್ಲಿ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಪಾಲಿಗೆ ಅಕ್ಷಯ ಪಾತ್ರೆಯಂತಿದ್ದ ಡಿಸಿಸಿ ಬ್ಯಾಂಕ್ಗೆ ಚುನಾವಣೆ ನಡೆದು ಒಂದೂವರೆ ತಿಂಗಳು ಆಯಿತು. ಕಾಂಗ್ರೆಸ್ ಬೆಂಬಲಿತರೆ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಇಬ್ಬರು ಸಚಿವರು ಇದ್ದೀರಿ, ಇದುವರೆಗೂ ಒಂದೇ ಒಂದು ಸಭೆಯನ್ನಾದರೂ ನಡೆಸಿದ್ದೀರಾ, ಇಲ್ಲ ಏಕೆ ಎಂದು ಪ್ರಶ್ನಿಸಿದರು.
ನಿಮಗೆ ಡಿಸಿಸಿ ಬ್ಯಾಂಕ್ನ್ನು ಉಳಿಸಬೇಕೆಂಬ ಮನಸೇ ಇಲ್ಲ. ಇದ್ದಿದ್ದರೆ ಇಷ್ಟೊತ್ತಿಗಾಗಲೆ ಸಭೆ ಕರೆದು ಆಡಳಿತ ಮಂಡಳಿ ರಚಿಸಿ ರೈತರಿಗೆ, ಮಹಿಳೆಯರಿಗೆ ಸಾಲ ಇನ್ನಿತರೆ ಸವಲತ್ತುಗಳನ್ನು ನೀಡುವ ಕೆಲಸ ಮಾಡುತ್ತಿದ್ದೀರಿ. ಆದರೆ ಆ ಮನಸು ನಿಮಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಚಿಂತಾಮಣಿಗೆ ಮಾತ್ರ ಸಚಿವರಲ್ಲ. ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದು ಅಭಿವೃದ್ದಿ ಜತೆಗೆ ಜಿಲ್ಲೆಯಲ್ಲಿ ಎಲ್ಲಿ ಕಾಂಗ್ರೆಸ್ನ ಶಾಸಕರು ಇಲ್ಲವೋ ಅಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ಕೂಡ ಮಾಡಿ, ಕೇವಲ ಚಿಂತಾಮಣಿಗೆ ಸೀಮಿತರಾಗಬೇಡಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಮುರಳಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್ಸಿ ಘಟಕ, ನಾರಾಯಣಸ್ವಾಮಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ಮುಖಂಡರಾದ ಕೆ.ಶ್ರೀನಾಥ್, ರಾಮಾಂಜಿ, ಅಫೀಸ್ಉಲ್ಲಾ, ಎಂ.ನಾಗರಾಜ್, ಎಮ.ಮಂಜುನಾಥ್ ಮತ್ತಿತರರು ಹಾಜರಿದ್ದರು.