17.1 C
Sidlaghatta
Wednesday, December 31, 2025
Home Blog Page 969

ನಮ್ಮ ಮಿದುಳಿಗೆ ನಮ್ಮದೇ ಸಾಫ್ಟ್ ವೇರ್!!!

0

ನನ್ನ ಹತ್ತಿರದ ಸಂಬಂಧಿಯೊಬ್ಬನಿಗೆ ಮೊದಲನೆ ಮದುವೆಯಲ್ಲಿ ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ವಿಚ್ಛೇದನ ಪಡೆದುಕೊಳ್ಳಬೇಕಾಯಿತು. ಸ್ವಲ್ಪ ಕಾಲದ ನಂತರ ಮತ್ತೊಬ್ಬ ಅನುರೂಪಳಾದ ಹುಡುಗಿಯೊಡನೆ ಮದುವೆ ನಿಶ್ಚಯವಾಯಿತು.
ಮದುವೆಗೆ ಎರಡು ದಿನಗಳ ಮೊದಲು ಅವರ ಮನೆಗೆ ಹೋದೆ. ಮನೆಯಲ್ಲಿ ಮದುವೆಯ ಸಂಭ್ರಮವೇನೂ ಕಾಣದೆ ಬಿಕೋ ಎನ್ನುತ್ತಿತ್ತು. “ಏನಯ್ಯಾ, ನಾಡಿದ್ದು ಮದುವೆ ಅಂತೀರಿ. ಇನ್ನೂ ಏನೂ ತಯಾರಿ ನಡೆದ ಹಾಗೆ ಕಾಣುವುದಿಲ್ವಲ್ಲಯ್ಯಾ” ಎಂದು ವಿಚಾರಿಸಿದೆ.
“ಸರಳವಾಗಿ ದೇವಸ್ಥಾನದಲ್ಲಿ ತಾಳಿಕಟ್ಟೋದಕ್ಕೆ ಏನಪ್ಪಾ ತಯಾರಿ, ಸಂಭ್ರಮ ಬೇಕು. ಹೇಳಿ ಕೇಳಿ ಎರಡನೇ ಮದುವೆ. ಅದ್ದೂರಿಯಾಗಿ ಮಾಡಿದ್ರೆ ಜನ ಆಡ್ಕೊಂಡು ನಗಲ್ವಾ?”
ಈ ರೀತಿಯ ಮಾತುಗಳನ್ನು ಕೇಳಿದರೆ ನನಗೆ ಸ್ವಲ್ಪ ರೇಗುತ್ತದೆ. ಹಾಗಾಗಿ ಕಡಕ್ ಧ್ವನಿಯಲ್ಲಿ ಉತ್ತರಿಸಿದೆ, “ನೋಡಯ್ಯಾ ಸರಳವಾಗಿ ಮದುವೆ ಆಗೋ ನಿನ್ನ ಕ್ರಮದ ಬಗ್ಗೆ ನನಗೆ ಗೌರವ ಇದೆ. ಮೊದಲಯನೆಯ ಮದುವೆಯನ್ನೂ ಹಾಗೇ ಆಗಿದ್ದರೆ ಅದು ನಿನ್ನ ಆದರ್ಶ ಎಂದು ನಾನು ಇನ್ನೂ ಸಂತೋಷಪಡುತ್ತಿದ್ದೆ. ಆದರೆ ಆಗ ನೀನು ಅದ್ದೂರಿಯಾಗಿ ಆಗಿದ್ದೀಯಾ. ಈಗಲೂ ಹಾಗೇ ಮಾಡಿದರೆ ಸಮಾಜದ ಗೇಲಿಗೊಳಗಾಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಮಾತ್ರ ನೀನು ಸರಳವಾಗಿ ಮದುವೆ ಆಗುತ್ತಿದ್ದರೆ ನಿನಗೆ ನೀನೇ ಮೋಸ ಮಾಡಿಕೊಳ್ತಾ ಇದೀಯಾ”
“ಅದು ಹಾಗಲ್ಲ….” ಎಂದೇನೋ ರಾಗ ತೆಗೆದವನನ್ನು ಬಾಯ್ಮಿಚ್ಚಿಸಿ ನಾನು ಮುಂದುವರೆಸಿದೆ. “ನೋಡಪ್ಪಾ ನೀನು ಮದುವೆಯಾಗುವುದು ನಿನ್ನ ಖುಷಿಗಾಗಿ, ಅದನ್ನು ನಿನಗೆ ಬೇಕಾದ ರೀತಿಯಲ್ಲಿ ಯಾಕಾಗಬಾರದು? ಎರಡನೆ ಮದುವೆ ಅಂತ ನೀನೇ ನಿನ್ನ ಖುಷಿಯನ್ನು ಕೀಳುಗೈದುಕೊಂಡರೆ ಸುತ್ತಲಿನ ಜನರ ಪ್ರತಿಕ್ರಿಯೆ ಇನ್ಹೇಗೆ ಇರಲು ಸಾಧ್ಯ? ಜನ ಏನೆಂದರೆ ಏನಂತೆ, ನಿನ್ನ ಸಂತೋಷವನ್ನು ಅನುಭವಿಸಲು ನೀನೇಕೆ ಹಿಂಜರಿಯಬೇಕು?” ಇನ್ನು ಹೆಚ್ಚು ಮಾತನಾಡಿದರೆ ತೀರಾ ಕಟುವಾಗಬಹುದು ಎಂದು ಸುಮ್ಮನಾದೆ.
ಇದಕ್ಕೆಲ್ಲ ಕಾರಣ ಸಮಾಜ ಅನ್ನಿ, ಸಂಪ್ರದಾಯ ಅನ್ನಿ ಅಥವಾ ಇನ್ನಾವುದೋ ಹೆಸರಿನಿಂದ ಕರೆಯಿರಿ. ನಮ್ಮಲ್ಲೆರ ಕ್ರಿಯೆ, ಪ್ರತಿಕ್ರಿಯೆ, ಮಾತು ಮತ್ತು ಸ್ವಭಾವಗಳನ್ನೆಲ್ಲಾ ಇಂತಿಂತಹ ಸಂದರ್ಭಗಳಲ್ಲಿ ಹೀಗೇ ಇರಬೇಕೆಂದು ಮಾನಕೀಕರಣ [ಸ್ಟಾಂಡರ್ಡೈಸ್] ಗೊಳಿಸಿಬಿಟ್ಟುಕೊಂಡಿರುತ್ತೇವೆ. ಮೊದಲನೆ ಮದುವೆ ಅಲ್ಲದಿದ್ದರೆ ಅದನ್ನು ಹೆಚ್ಚಿನ ಜನರಿಗೆ ಆಹ್ವಾನ ನೀಡದೆ ಯಾವುದೋ ಮೂಲೆಯಲ್ಲಿ ಒಂದು ತಾಳಿಕಟ್ಟಿ ಮುಗಿಸಿದರಾಯಿತು. ಹಾಗೊಮ್ಮೆ ಹುಡುಗಿಗೆ ಅದು ಪ್ರಥಮ ವಿವಾಹವೇ ಆಗಿದ್ದರೂ ಅವಳು ಬಲವಂತವಾಗಿ ತನ್ನ ಖುಷಿಯನ್ನು ಹತ್ತಿಕ್ಕಿಕೊಂಡು ಜೋಲು ಮೋರೆಯನ್ನು ಹಾಕಿಕೊಂಡಿರಬೇಕಾಗುತ್ತದೆ.
ಯಾರಾದರು ಮರಣಹೊಂದಿದಾಗ, ಅದೂ ನಮ್ಮ ಒಡಹುಟ್ಟಿದವರು ಅಥವಾ ಆಪ್ತರಾದರಂತೂ ಬಿಡಿ, ಕಡ್ಡಾಯವಾಗಿ ಅಳಲೇಬೇಕು. ಅಕಾಲ ಮರಣವಾದಾಗ ಅಥವಾ ಭಾವನಾತ್ಮಕವಾಗಿ ಹತ್ತಿರವಾದವರು ಸತ್ತಾಗ ದುಃಖವಾಗುವುದು ಸಹಜ. ಆದರೆ ಸಾರ್ಥಕವಾದ ತುಂಬು ಜೀವನ ನಡೆಸಿದವರು ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ವೇದನೆ ಅನುಭವಿಸುತ್ತಿರುವವರು ಮರಣ ಹೊಂದಿದಾಗ, ಅವರು ನಮ್ಮ ಹೆತ್ತವರೇ ಆಗಿದ್ದಾಗಲೂ, ಅತ್ತು ಕೂಗಾಡಿ ದುಃಖ ವ್ಯಕ್ತಪಡಿಸಬೇಕೇಕೆ? ಬದುಕಿದ್ದಾಗ ತಂದೆತಾಯಂದಿರನ್ನು ಪ್ರೀತಿಯಿಂದ ನೋಡದ ಮಕ್ಕಳು ಅವರು ಸತ್ತಾಗ ಗೋಳಾಡುವುದನ್ನು ನೋಡಿದರೆ ಹಾಸ್ಯಾಸ್ಪದವೆನ್ನಿಸುವುದಿಲ್ಲವೇ? ಇವರೇಕೆ ಸಾಯಲು ಇಷ್ಟು ತಡಮಾಡಿದರು ಅಂತ ಅಳುತ್ತಿರಬೇಕು ಅನ್ನಿಸುತ್ತದೆ! ಪ್ರಾಮಾಣಿಕ ಶ್ರದ್ಧಾಂಜಲಿಯನ್ನು ಮೌನದಲ್ಲಿ ಅಥವಾ ಇನ್ನಾವುದೋ ಕ್ರಿಯೆಯ ಮೂಲಕ ವ್ಯಕ್ತಪಡಿಸಬಹುದು ಅಂತ ನಮಗನ್ನಿಸುವುದೇ ಇಲ್ಲ.
ಜನ ಆಡ್ಕೋತಾರೆ ಅಂತ ಆಡಂಬರದ ಮದುವೆ ಮಾಡಿ ಸಾಲಗಾರರಾಗುವುದು, ನಮಗೆ ನಂಬಿಕೆ ಇಲ್ಲದಿದ್ದರೂ ಯಾರ್ಯಾರನ್ನೋ ಮೆಚ್ಚಿಸಲು ಪೂಜೆ ಪುನಸ್ಕಾರಗಳ ಡಂಬಾಚಾರ ಮಾಡುವುದು, “ಯಾರಾದರೂ ಏನಂದ್ಕೋತಾರೆ” ಅಂತ ನಮ್ಮ ಸಹಜ ಸ್ವಭಾವಕ್ಕೆ ಹೊರತಾದ ಒಣ ಗಾಂಭೀರ್ಯ ಪ್ರದರ್ಶಿಸುವುದು – ಈ ರೀತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಇಲ್ಲೆಲ್ಲಾ ಸಹಜವಾಗಿ ಕಾಣುವುದು ನಮ್ಮ ತಲೆಗೆ ನಾವು ಯಾವುದೋ ಸಿದ್ಧ ಸಾಫ್ಟ್ ವೇರ್ ಅಳವಡಿಸಿಕೊಂಡಿರುವುದು. ಇದನ್ನು ಜನ ಅಥವಾ ಸಮಾಜ ತಯಾರಿಸಿಟ್ಟಿದ್ದು ಅಂತ ಹೇಳಿ ನಮ್ಮನ್ನು ನಾವೇ ಸಮಾಧಾನಪಡಿಸಿಕೊಂಡು ಒಂದು ರೀತಿಯಲ್ಲಿ ನಮ್ಮನ್ನೇ ಮೋಸಗೊಳಿಸಿಕೊಳ್ಳುತ್ತೇವೆ. ಈ ಜನಗಳು ಯಾರು ಅಥವಾ ಸಮಾಜ ಯಾವುದು ಅಂತ ಸ್ಪಷ್ಟತೆಯೇನೂ ಇರುವುದಿಲ್ಲ. ಎಲ್ಲರಿಗೂ ಅವರವರದ್ದೇ ಆದ ಬೇಕು ಬೇಡಗಳಿರುವಾಗ ಎಷ್ಟು ಜನರನ್ನು ನಾವು ಮೆಚ್ಚಿಸಲು ಸಾಧ್ಯ? ಅವರು ಹೊರಗಡೆ ಮೆಚ್ಚುಗೆ ವ್ಯಕ್ತಪಡಿಸಿದರೂ ಅದೂ ಬರೀ ತೋರಿಕೆಯಾಗಿರುವ ಸಾಧ್ಯತೆಯಿಲ್ಲವೇ? ಈ ಎಲ್ಲಾ ಗೊಂದಲದಲ್ಲಿ ಕೊನೆಗೆ ನಮ್ಮಿಚ್ಛೆಯಂತೆಯೂ ಬದುಕದೇ, ಇತರರನ್ನೂ ಖುಷಿಪಡಿಸಲಾರದ ಇಬ್ಬಂದಿತನದಲ್ಲಿ ಜೀವನವನ್ನು ಕಳೆದುಬಿಡುತ್ತೇವೆ.
ನಿಮಗೊಂದು ಕಟು ವಾಸ್ತವವನ್ನು ಹೇಳಿದರೆ ನೀವು ಒಪ್ಪಲಾರಿರಿ. ಈ ರೀತಿ ನಮ್ಮ ನಡೆ ನುಡಿಗಳ ಜವಾಬ್ದಾರಿಯನ್ನು ಸುತ್ತಲಿನವರ ಅಥವಾ ಸಮಾಜದ ಮೇಲೆ ಹೊರಿಸುವುದರ ಅರ್ಥ ನಮಗೆ ಏನು ಬೇಕು ಎನ್ನುವುದರ ಸ್ಪಷ್ಟತೆ ನಮಗೇ ಇಲ್ಲದಿರುವುದು ಅಥವಾ ಬೇಕಾಗಿದ್ದನ್ನು ಮಾಡಲು ಹಿಂಜರಿಯುವುದು – ಎನ್ನುವುದಷ್ಟೇ. ಕಾರಣಗಳೇನೇ ಇದ್ದರೂ ಇಂತಹ ಕಾಲ್ಪನಿಕ ನಿರ್ಬಂಧಗಳನ್ನು ನಮ್ಮ ಮೇಲೆ ಹೇರಿಕೊಳ್ಳುವುದರಿಂದ ನಾವು ಬದುಕಿನ ಹೊಸ ಸಾಧ್ಯತೆಗಳಿಗೆ ವಿಮುಖರಾಗುತ್ತೇವೆ. ನಮ್ಮನ್ನು ಜೀವನದ ಖುಷಿಗಳಿಂದ ನಾವೇ ವಂಚಿಸಿಕೊಳ್ಳುತ್ತೇವೆ. ಎಷ್ಟೋ ಸಾರಿ ನಮ್ಮಲ್ಲಿರಬಹುದಾದ ಪ್ರತಿಭೆಗಳು ಹೊರಬರದೆ ಮುಕ್ಕಾಗುತ್ತವೆ.
ಈ ರೀತಿಯ ನಿರ್ಬಂಧಗಳನ್ನು ಪೋಷಕರು ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಹೇರಿಬಿಟ್ಟಿರುತ್ತಾರೆ. ಅದೇ ಮಿತಿಯಲ್ಲಿ ಬೆಳೆದ ಮಕ್ಕಳು ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಾರೆ. ಯಾವುದಾದರೂ ಮಗು “ಈ ಜನ, ಸಮಾಜ ಅಂದ್ರೆ ಯಾವುದು, ನಾವೇಕೆ ಅವರಿಚ್ಛೆಯಂತೆ ನಡೆಯಬೇಕು?” ಅಂತ ಪ್ರಶ್ನಿಸಿದರೆ, ನಮ್ಮ ಸಿದ್ಧ ಉತ್ತರ ಹೀಗಿರುತ್ತದೆ, “ಪ್ರಪಂಚ ನಡೆದುಕೊಂಡು ಬಂದಿರೋದೇ ಹೀಗೆ”, ಅಥವಾ “ದೊಡ್ಡವನಾದ ಮೇಲೆ ನಿನಗೇ ಗೊತ್ತಾಗುತ್ತೆ”. ಮಗು ದೊಡ್ಡವನಾದ ಮೇಲೆ ಗೊತ್ತಾಗುವುದು ತನ್ನ ಮಕ್ಕಳನ್ನೂ ಇದೇ ಉತ್ತರಗಳಿಂದ ಬಾಯ್ಮುಚ್ಚಿಸಬೇಕು ಎನ್ನುವುದು ಮಾತ್ರ!
ನಾನು ಹೇಳುವುದು ಮನೆಯವರು, ಬಂಧುಗಳು, ಸಮಾಜ ಇವನ್ನೆಲ್ಲಾ ಧಿಕ್ಕರಿಸಿ ನಮ್ಮದೇ ಹಾದಿಯಲ್ಲಿ ನಡೆಯಬೇಕು ಅಂತಲ್ಲ. ಮಹಾಪುರುಷರುಗಳೆಲ್ಲಾ ಯಶಸ್ವಿಯಾಗಿ ಅಳವಡಿಸಿಕೊಂಡ ಕೆಲವು ನಿಯಮಗಳನ್ನು ಸರಳೀಕರಿಸಿದರೆ ಹೀಗಿರಬಹುದು ನೋಡಿ;
1. ಅನವಶ್ಯಕವಾಗಿ ಯಾರನ್ನು ನಮ್ಮ ಮಾತು ಅಥವಾ ಕೃತಿಯಿಂದ ನೋಯಿಸಬಾರದು.
2. ನಾವು ಮಾಡುವ ಕೆಲಸಗಳು ಆಥವಾ ಆಡುವ ಮಾತುಗಳು ಕಾನೂನು ಬಾಹಿರ ಅಥವಾ ಅನೈತಿಕವಾಗಿರಬಾರದು ಅಥವಾ ಸಾಮಾಜಿಕವಾಗಿ ಕೆಟ್ಟ ಮೇಲ್ಪಂಕ್ತಿ ಹಾಕುವಂತದ್ದಾಗಿರಬಾರದು.
3. ಸಾಧ್ಯವಾಗುವುದಾದರೆ ಇತರರಿಗೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬೇಕು ಅಥವಾ ಕಡಿಮೆಮಾಡಬೇಕು.
ಈ ಮಿತಿಯೊಳಗೆ ನಮ್ಮ ತಲೆಗೆ ನಾವೇ ತಯಾರಿಸಿದ ಒಂದು ಹೊಸ ಸಾಫ್ಟವೇರ್ ಅಳವಡಿಸಿಕೊಳ್ಳೋಣ. ಈ ಸಾಫ್ಟವೇರ್‍ನಲ್ಲಿ ನಮ್ಮ ಬೇಕು ಬೇಡಗಳಿಗೆ ಪ್ರಮುಖ ಆದ್ಯತೆ ನೀಡಿ, ನಮ್ಮ ಬದುಕನ್ನು, ಪ್ರತಿಭೆಯನ್ನು ಚುರುಕುಗೊಳಿಸಬಲ್ಲ ಕಮ್ಯಾಂಡ್‍ಗಳನ್ನು ಬಳಸಿಕೊಳ್ಳಬೇಕು. ಆಗ ನಾವೂ ಖುಷಿಯಾಗಿದ್ದು ಸುತ್ತಲಿನವರಿಗೂ ಅದನ್ನು ಹಂಚಲು ಸಾಧ್ಯವಾಗುತ್ತದೆ.
ಇದರ ಬಗೆಗೆ ಯಾರಾದರೂ ಪ್ರಶ್ನಿಸಿದರೆ, ಅವರ ಅಭಿಪ್ರಾಯವನ್ನು ಕೇಳಿ, ಸರಿಯೆನ್ನಿಸಿದರೆ ಅಳವಡಿಸಿಕೊಳ್ಳೋಣ. ಇಲ್ಲದಿದ್ದರೆ ತಣ್ಣನೆಯ ಧ್ವನಿಯಲ್ಲಿ ನಮ್ಮ ನಿಲುವನ್ನು ಹೇಳಿ, “ಇದರ ಬಗೆಗೆ ಚರ್ಚೆ ಮಾಡಲು ನನಗಿಷ್ಟವಿಲ್ಲ” ಎಂದು ಮಾತು ಮುಗಿಸಿದರೆ ಸಂದೇಶ ಪರಿಣಾಮಕಾರಿಯಾಗಿ ತಲುಪಿರುತ್ತದೆ; ಸಂಬಂಧಗಳೂ ಸೌಹಾರ್ಧಯುತವಾಗಿ ಉಳಿಯುತ್ತದೆ.
ವಸಂತ್ ನಡಹಳ್ಳಿ

‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಸ್ನೇಹ ಯುವಕರ ಸಂಘದ ಶಾಲಾಪರ ಚಟುವಟಿಕೆಗಳಿಗಾಗಿ ಸಂದಿರುವ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಎಂಬ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರದಲ್ಲಿ ಯುವಜನ ಸೇವಾ ಇಲಾಖೆಯ ವತಿಯಿಂದ ಈಚೆಗೆ ಕೊಡಲಾಯಿತು. ಉಪವಿಭಾಗಾಧಿಕಾರಿ ಅಮರೇಶ್, ಸಹಾಯಕ ನಿರ್ದೇಶಕಿ ಜಯಲಕ್ಷ್ಮಮ್ಮ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಬಾಲಾಜಿ ಸಿಂಗ್, ಸ್ನೇಹ ಯುವಕರ ಸಂಘದ ವಾಸುದೇವ್ ಹಾಗೂ ರವಿಶಂಕರ್ ರವರಿಗೆ ಈ ಪ್ರಶಸ್ತಿಯನ್ನು ನೀಡಿದರು.

ಚೌಡರೆಡ್ಡಿಹಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ‘ರಾಜಾ ಸತ್ಯವ್ರತ’ ನಾಟಕ

0

ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಚೌಡರೆಡ್ಡಿಹಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ಶನಿವಾರ ರಾತ್ರಿ ‘ರಾಜಾ ಸತ್ಯವ್ರತ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.

ಉನ್ನತ ಶಿಕ್ಷಣ ನೀಡುವುದೆಂದರೆ

0

ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಬಹಳ ಕಡಿಮೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ಲಭ್ಯವಾಗಬೇಕು. ನಮ್ಮದು ಶೈಕ್ಷಣಿಕವಾಗಿ ಮುಂದುವರಿದ ದೇಶವಾಗಬೇಕು. ಇದು ಸಾಧ್ಯವಾಗಬೇಕಾದರೆ ದೇಶದ ಉದ್ದಗಲಗಳಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕನುಗುಣವಾಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಬೇಕು.
ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಅವುಗಳ ಸ್ಥಾಪನೆಯಾಗಬೇಕು. ಕೇವಲ ಪದವಿಗಳದ್ದೆ ಅಲ್ಲದೇ ಸ್ನಾತಕೋತ್ತರ ಶಿಕ್ಷಣ ಕೂಡ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪೇಚಾಡುವಂತಾಗಬಾರದು. ಹೌದು ಆದರೆ ಅದಕ್ಕನುಗುಣವಾಗಿ ವ್ಯವಸ್ಥೆ ರೂಪುಗೊಳ್ಳುತ್ತಿದೆಯೇ ಎಂದು ನೋಡಿದಾಗ ನಿರಾಸೆಯಾಗುತ್ತದೆ.
ಉನ್ನತ ಶಿಕ್ಷಣ ಎಲ್ಲರಿಗೂ – ಎಲ್ಲ ಕಡೆಗೂ ದೊರಕಬೇಕೆಂದಾಕ್ಷಣ ಮೊದಲು ಪ್ರಾರಂಭಿಸುತ್ತಿರುವುದು ಪದವಿ ಕಾಲೇಜುಗಳನ್ನು, ಅವುಗಳಲ್ಲೇ ಸ್ನಾತಕೊತ್ತರ ಕೇಂದ್ರಗಳು ಇವುಗಳಲ್ಲಿ ದೊರೆಯುವುದು ಸಾಮಾನ್ಯ ಪದವಿ ಶಿಕ್ಷಣವೇ ವಿನಃ ಇನ್ನೇನೂ ಇಲ್ಲ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಹೀಗೆ ಅದೇ ಪದವಿಗಳು ಅವುಗಳಿಗೆ ಅದೇ ಪಠ್ಯಗಳು ಒಂದೇ ರೀತಿಯ ಪದ್ಧತಿ-ಪರೀಕ್ಷೆಗಳು ಅವನ್ನೂ ವ್ಯವಸ್ಥಿತವಾಗಿ ಮಾಡಲಾಗದೆ ಕೇವಲ ಮಾಡಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವುದಕ್ಕೆ ವ್ಯವಸ್ಥೆ ಸೀಮಿತವಾಗಿದೆ. ಇವುಗಳಿಂದ ಪದವಿ ಪಡೆದವರ ಸಂಖ್ಯೆ ಗಣನೀಯವಾಗಿ ಏರಬಹುದು. ಪದವೀಧರರ ಕ್ಷೇತ್ರಗಳಿಗೆ ಮಾತ್ರ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಆದರೆ ಹಾಗೆ ಪಡೆದ ಪದವಿಗಳಿಂದ ವಿದ್ಯಾರ್ಥಿಗಳಿಗಾಗಲೀ, ಸಮಾಜಕ್ಕಾಗಲೀ ಪ್ರಯೋಜನವಾಗುತ್ತಿದೆಯೇ? ಆಗುತ್ತಿದ್ದರೆ ಎಷ್ಟರಮಟ್ಟಿಗೆ? ಎಂದು ಯೋಚಿಸಲು ಸಕಾಲ. ಸರಕಾರದ ಹಣವೆಂದರೆ ತೆರಿಗೆದಾರರ ಹಣ ಅದರ ಸದ್ವಿನಿಯೋಗ ಆಗುತ್ತಿದೆಯೇ? ವಿಚಾರಿಸಲು ಹೊರಟರೆ ಗಾಬರಿಯಾಗುತ್ತದೆ.
ಮೂರು ವರ್ಷಗಳ ಪದವಿ ಹೀಗೆ ವಿದ್ಯಾರ್ಥಿಗಳ ಅಮೂಲ್ಯವಾದ ವಯಸ್ಸು ಮತ್ತು ಶಕ್ತಿಯನ್ನು ವ್ಯಯಿಸಿ ಪಡೆದ ಪದವಿಗಳಿಂದ ಸುಲಭವಾಗಿ ಉದ್ಯೋಗ ಪ್ರಾಪ್ತವಾಗುತ್ತದೆಯೇ? ಸರಕಾರ ಇತ್ತೀಚೆಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಶಾಲಾ ಶಿಕ್ಷಕರ ನೇಮಕಕ್ಕೆ ಏರ್ಪಡಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಗುಜಾರಾಯಿಸಿದವರ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತದೆ. ಒಂದು ಸಾವಿರ ಉದ್ಯೋಗಕ್ಕೆ ಒಂದು ಲಕ್ಷಕ್ಕಿಂತ ಅಧಿಕ ಆಕಾಂಕ್ಷೆಗಳು ಕೊನೆಗೆ ತೊಂಭತ್ತೊಂಭತ್ತು ಸಾವಿರಕ್ಕಿಂತ ಅಧಿಕ ಮಂದಿ ಹಾಗೆಯೇ ಉಳಿದಿರುತ್ತಾರೆ. ಮುಂದಿನ ನೇಮಕಾತಿ ದಿನಗಳಿಗೆ ಕಾಯುತ್ತಿರುತ್ತಾರೆ. ಅಲ್ಲಿಯವರೆಗೆ ಸಿಕ್ಕ-ಸಿಕ್ಕ ಉದ್ಯೋಗಗಳಿಗೆ ಸಾಧ್ಯವಾದರೆ ಒಗ್ಗಿಕೊಳ್ಳುತ್ತಾರೆ. ಅಂದರೆ ಪಡೆವ ಪದವಿಗಳಿಗೆ ಉದ್ಯೋಗದ ಗ್ಯಾರಂಟಿ ಇಲ್ಲ. ಕೇವಲ ವಯಸ್ಸನ್ನು ವ್ಯರ್ಥಗೊಳಿಸುವ ಕಸರತ್ತಾಗುತ್ತಿದೆ ಅದಕ್ಕೆ ಬದಲಾಗಿ ಉದ್ಯೋಗ ಖಾತ್ರಿ ಶಿಕ್ಷಣ ವ್ಯವಸ್ಥೆ ಜಾರಿಯಾಗುತ್ತ ಸಾಗಿದರೆ ಓದಿದವರೂ ತಮ್ಮ ಓದಿಗೆ ಒಂದು ಬೆಲೆಯಿದೆ ಎಂದು ಶ್ರದ್ಧೆಯಿಂದ ಓದಬಹುದು ಮತ್ತು ಅದರಿಂದ ಅವರ ಬದುಕಿಗೊಂದು ನಿರ್ದಿಷ್ಟ ನೆಲೆ ಪ್ರಾಪ್ತವಾಗಬಹುದು.
ಇಂದಿನ ಪದವಿಗಳೆಂದರೆ – ಉಳಿದ ಎಲ್ಲೂ ಜಾಗೆ ಸಿಗದ ವಿದ್ಯಾರ್ಥಿಗಳ ಕೊನೆಯ ಆಸರೆಯಾಗಿದ್ದು – ಭ್ರಮನಿರಸನ ಹೊಂದಿದ – ಒಟ್ಟಾರೆ ಕಾಟಾಚಾರಕ್ಕೆ ಕಾಲೇಜಿಗೆ ಬರುವವರ ಸಂಖ್ಯೆಯೇ ಅಧಿಕ. ಪಿಯುಸಿ ಆದ ಅನಂತರ ಕಲಾ ವಿಭಾಗದವರಿಗೆ ಬಿ.ಎ ಸೇರಲು ಒಂದು ಕಾಲೇಜು ಬೇಕು. ವಾಣಿಜ್ಯ ವಿಭಾಗದವರಿಗೆ – ಬಿ.ಕಾಂ. – ಬಿ.ಬಿ.ಎಂ. ಹೀಗೆ ಬೇಕು. ತಾಂತ್ರಿಕ ಶಿಕ್ಷಣ ಅಥವಾ ಇನ್ನಿತರ ಕಡೆ ಜಾಗೆ ಸಿಗದವರು ಅನಿವಾರ್ಯವಾಗಿ ಬಿ.ಎಸ್ಸಿ ಸೇರುವುದೇ ಹೆಚ್ಚು. ಆಸಕ್ತಿಯಿಂದ ಸೇರುವವರ ಸಂಖ್ಯೆ ಅತಿ ಕಡಿಮೆ. ಮತ್ತೆ ಇವರೇ ಬಿ.ಎಡ್, ಎಂ.ಎಸ್ಸಿ ಮಾಡಿ ಪಾಠ ಹೇಳಲು ಜಾಗೆ ದೊರಕುವುದೋ ನೋಡುತ್ತಾರೆ. ಹೀಗಾಗಿ ಉತ್ತಮ ಅಂಕಗಳಿಸಿದವರೆಲ್ಲ ಬೇರೆಡೆ ಹೋದರೆ – ಸಾಮಾನ್ಯ ಪದವಿಗಳಿಗೆ ಕೇವಲ ಸಾಮಾನ್ಯ ವಿದ್ಯಾರ್ಥಿಗಳಷ್ಟೇ ಉಳಿದುಕೊಂಡು – ಭವಿಷ್ಯ ರೂಪಿಸಿಕೊಳ್ಳಲು ಹೆಣಗಾಡುತ್ತಾರೆ. ಹತ್ತಿರದಲ್ಲೇ ಇರುವ ಕಾಲೇಜಿನಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಇದೆ ಎಂದರೆ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಹಲವರು ಬೇರೆನೂ ಮಾಡಲಾಗದಿದ್ದ ಪಕ್ಷದಲ್ಲಿ ಅವುಗಳಿಗೆ ಅಲ್ಲಲ್ಲೇ ಸೇರುತ್ತಿರುವ ದೃಶ್ಯ ಸಾಮಾನ್ಯ. ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಅನುಕೂಲತೆಗಳಾಗಲೀ, ವಾತಾವರಣವಾಗಲೀ ಇವುಗಳಲ್ಲಿ ಇರದೆ ಇಲ್ಲಿನ ಎಂ.ಎ, ಎಂ.ಕಾಂ, ಎಂಎಸ್ಸಿಗಳು ಕೂಡ ಒಂದರ್ಥದಲ್ಲಿ ನಾಲ್ಕು-ಐದನೇ ವರ್ಷದ ಬಿ.ಎ ಬಿ.ಕಾಂ, ಬಿಎಸ್ಸಿಗಳಂತೆ ಕಂಡುಬಂದರೆ ಯಾರೂ ಹುಬ್ಬೇರಿಸುವ ಅವಶ್ಯಕತೆ ಇಲ್ಲ ಇದು ವಸ್ತುಸ್ಥಿತಿ.
ಹೀಗಾಗಿ ಉನ್ನತ ಶಿಕ್ಷಣದ ಪರಿಕಲ್ಪನೆಯೇ ಸಮಗ್ರವಾಗಿ ಬದಲಾಗುವ ಅವಶ್ಯಕತೆ ಇದೆ. ಕೇವಲ ಕಾಲೇಜುಗಳನ್ನು ಪ್ರಾರಂಭಿಸುವುದು ವಿಶ್ವವಿದ್ಯಾಲಯಗಳನ್ನು ಸೃಷ್ಠಿಸುವುದಕ್ಕೆ ಸೀಮಿತಗೊಳ್ಳದೆ – ಪದವೀಧರ ನಿರುದ್ಯೊಗಿಗಳನ್ನು ಸೃಷ್ಠಿಸುವ ಕಾರ್ಖಾನೆಗಳನ್ನು ತೆರೆಯದೆ – ಸ್ವಂತ ಉದ್ಯೋಗ ಮಾಡಬಲ್ಲ – ಅದಕ್ಕೆ ಭರವಸೆ ಮೂಡಿಸಬಲ್ಲ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಅನುಕೂಲ. ಮೂರು ಅಥವಾ ಐದು ವರ್ಷಗಳಷ್ಟು ಕಾಲ ತಮ್ಮ ಜೀವಿತದ ಅತ್ಯಮೂಲ್ಯ ಕಾಲವನ್ನು – ಶ್ರಮವನ್ನು ವ್ಯಯಿಸುವವರಿಗೆ – ಉದ್ಯೋಗದ ಭರವಸೆಯೇ ಇರದಿದ್ದರೆ ಅವರ ಆಯಸ್ಸು ಮತ್ತು ಶ್ರಮವನ್ನು ಅನವಶ್ಯಕವಾಗಿ ಹಾಳುಗೆಡವಿದ ಕೀರ್ತಿ ಮಾತ್ರ ಕಾಲೇಜುಗಳಿಗೆ ಲಭ್ಯವಾಗಬಹುದು.
ಉಳಿದ ದೇಶಗಳ ಶಿಕ್ಷಣ ವ್ಯವಸ್ಥೆಯನ್ನು ನೋಡುವುದರಲ್ಲಿ ಮತ್ತು ಅಭ್ಯಸಿಸುವುದರಲ್ಲಾಗಲಿ ತಪ್ಪಿಲ್ಲ. ಅಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಉನ್ನತ ಶಿಕ್ಷಣ ದೊರಕುತ್ತಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಅದರಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಉನ್ನತ ಶಿಕ್ಷಣ ಲಭ್ಯವಾಗಬೇಕು ಎಂಬ ಆದರ್ಶದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಉಳಿದ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೇವಲ ನಿರುದ್ಯೋಗಿಗಳಾಗಿಯೇ ದಿನ ದೂಡುತ್ತಿದ್ದಾರೆಯೇ? ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನ ಮಾನಗಳು ಲಭಿಸಿವೆಯೇ? ಎಂದು ನೋಡಬೇಕಾಗುತ್ತದೆ. ಅಲ್ಲಿ ಉನ್ನತ ಶಿಕ್ಷಣ ಪಡೆದವರೆಲ್ಲ ಒಂದೋ ನೌಕರಿಯಲ್ಲಿ ಅಥವಾ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತೆಂದಾದರೆ ಇಲ್ಲೂ ಅದಾಗಬೇಕು. ಅಂತಹ ಶಿಕ್ಷಣ ಲಭ್ಯವಾಗಬೇಕು. ಉನ್ನತ ಶಿಕ್ಷಣ ಪಡೆದವರಾರೂ ಅಲೆಮಾರಿಗಳಂತಾಗಬಾರದು. ಇಲ್ಲಿ ಇಲ್ಲಿನವರೆಗೆ ಉನ್ನತ ಶಿಕ್ಷಣದ ಹೆಸರಿನಲ್ಲಿ ಪಡೆದ ಪದವಿಗಳನ್ನು ಹಿಡಿದುಕೊಂಡು ಒದ್ದಾಡುತ್ತಿರುವ ಯುವ ಸಮುದಾಯವನ್ನು ನೋಡಿದರೆ – ಇದನ್ನು ಇನ್ನಷ್ಟು ಅಧಿಕಗೊಳಿಸಲು ನಾವು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆಯೇ ವಿನಃ ಬೇರೇನೂ ಅಲ್ಲ. ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಏರಬಹುದು ಹೀಗೆ ಸಂಖ್ಯೆ ಏರಿದ್ದನ್ನು ತೋರಿಸಿ ಸರಕಾರ ಹೆಮ್ಮೆ ಪಡಬಹುದು. ಆದರೆ ಇದರಿಂದಾದ ಪ್ರಯೋಜನವನ್ನು ಕೂಡ ನೋಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ. ಇನ್ನೂ ಕೊಡೋ ಸದಾಶಿವ ಎಂಬಂತಿದೆ.
ಉನ್ನತ ಶಿಕ್ಷಣವನ್ನು ಎಲ್ಲಡೆ – ಎಲ್ಲರ ಕೈಗೆಟಕುವಂತೆ ಮಾಡುವ ಮೊದಲು – ಅವುಗಳಿಗೆ ವಿದ್ಯಾರ್ಥಿಗಳು ವ್ಯಯಿಸುವ ವಯಸ್ಸು ಮತ್ತು ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಯೌವನದ ಕಸವು ವ್ಯರ್ಥವಾಗದಂತೆ ಶಿಕ್ಷಣ ನೀಡುವುದು ಒಳ್ಳೆಯದು ಅದನ್ನು ಬೇಕಾದರೆ ಉನ್ನತ ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಶಿಕ್ಷಣವೆಂದು ಕರೆದರೂ ಸರಿ ಆ ಮೂರು ಅಥವಾ ಐದು ವರ್ಷಗಳ ಓದು ಅವರ ಬದುಕಿನ ತರಬೇತಿಯ ಅವಧಿಯಂತಿದ್ದರೆ ಅನುಕೂಲ ಅದು ಬಿಟ್ಟು ಮಾಮೂಲಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳನ್ನು ತೆರೆದು ಅವರನ್ನು ಕೇವಲ ಗಿಳಿಪಾಠ ಒಪ್ಪಿಸುವ ಯಂತ್ರಗಳಂತೆ ತಯಾರು ಮಾಡಿದರೆ ಏನು ಪ್ರಯೋಜನ? ಪ್ರಯೋಜನಕ್ಕೆ ಬಾರದ – ವ್ಯರ್ಥವಾಗಿ ಸಮಯವನ್ನು ವ್ಯಯಿಸುವ ಪದ್ಧತಿ ರದ್ದಾಗುತ್ತಲೇ ಆ ಜಾಗೆಯಲ್ಲಿ ಹೊಸ ಹೊಸ ಪದ್ಧತಿಗಳು ಪ್ರತಿಷ್ಠಾಪನೆಗೊಳ್ಳುತ್ತಾ ಸಾಗಿದರೆ ಭsವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗಬಹುದು. ಕೇವಲ ಪುಸ್ತಕದ ಬದನೆಗಳನ್ನು ನೀಡಿದರೆ ಊಟಕ್ಕೆ ಬರುವುದಿಲ್ಲ.!
ಇಂದು ದೊರೆಯುತ್ತಿರುವ ಸಾಮಾನ್ಯ ಪದವಿಗಳಲ್ಲಿ ಸತ್ವ ಎಷ್ಟಿದೆ ಎಂದು ಯೋಚಿಸಬೇಕು ಪ್ರಾಮಾಣಿಕವಾಗಿ ಅದನ್ನು ವಿಮರ್ಶಿಸಬೇಕು. ಅದನ್ನು ಮಾಡದೆ ಒಂದಿಷ್ಟು ಕಾಲೇಜುಗಳನ್ನು ಹುಟ್ಟುಹಾಕಿದರೆ – ಅವು ಒಂದಿಷ್ಟು ಪದವಿಗಳನ್ನು ನೀಡಿದರೆ ಸರಕಾರದ ಬೊಕ್ಕಸ ಖಾಲಿಯಾಗಬಹುದೇ ವಿನಃ ಪ್ರಯೋಜನವಂತೂ ಖಂಡಿತ ಸಾಧ್ಯವಿಲ್ಲ. ಹಾಗಂತ ಪದವಿ ಕಾಲೇಜುಗಳಲ್ಲಾಗಲಿ – ಪದವಿಗಳಲ್ಲಾಗಲಿ ಬೇಡವೇ ಬೇಡವೆಂದು ಇದರ ಅರ್ಥವಲ್ಲ – ಒಟ್ಟಾರೆ ಉದ್ಯೋಗಕ್ಕೆ ಎಷ್ಟೂ ಬೇಕೋ ಅಷ್ಟು ಉತ್ಪನ್ನಗಳಾದರೆ ಸಾಕು. ದೇಶದಲ್ಲಿ ಲಭ್ಯವಿರುವ ನೌಕÀರಿಗೆ ಅನುಗುಣವಾಗಿ ಶಿಕ್ಷಣ ನೀಡಲು ಪ್ರಾರಂಭಿಸಿದರೆ, ಅವುಗಳ ಪ್ರವೇಶಕ್ಕೆ ಖಂಡಿತವಾಗಿ ವಿದ್ಯಾರ್ಥಿಗಳು ಶ್ರಮವಹಿಸಿ ಕಲಿತು, ಪ್ರಯತ್ನಿಸುತ್ತಾರೆ. ಹಾಗಲ್ಲದೆ ರಾಶ್ಯುತ್ಪನ್ನವಾಗಿ ಬೇಡಿಕೆ ಇರದಿದ್ದರೆ, ಆ ಉತ್ಪನ್ನ ಅಲ್ಲೇ ಕೊಳೆಯಲು ಪ್ರಾರಂಭಿಸುತ್ತದೆ. ಹಾಗಾಗಿ ಉನ್ನತ ಶಿಕ್ಷಣವೆಂಬುದು ಬೇಡಿಕೆಯಿಂದ ರಾಶ್ಯುತ್ಪನ್ನದ ಕಾರ್ಖಾನೆಗಳ ಸೃಷ್ಟಿಯಾಗದಿರಲೆಂಬುದೇ ನಮ್ಮ ಕಾಳಜಿಯಾಗಿರಬೇಕು. ವಿಶಾಲವಾದ ಪ್ರಪಂಚದಲ್ಲಿ ಲಭ್ಯವಿರುವ ಅನೇಕಾನೇಕ ಅವಕಾಶಗಳಿಗೆ ಅನುಗುಣವಾಗುವಂತಹ ಶಿಕ್ಷಣ ಪಡೆಯಲು ಹಾತೊರೆಯಬಹುದು. ಹಾಗಲ್ಲದಿದ್ದಲ್ಲಿ ಅದೇ ಅಸಡ್ಡೆಯಿಂದ ಪಾಲ್ಗೊಳ್ಳುತ್ತ, ಪದವಿ ಪಡೆಯಲೂ ಅಡ್ಡಮಾರ್ಗಗಳನ್ನು ಹುಡುಕುತ್ತ, ಅಂಡತೀವ ಪ್ರವೃತ್ತಿಗೆ ವ್ಯವಸ್ಥೆಯೇ ಹೇತುವಾಗಬಲ್ಲದು.
ಹಾಗಲ್ಲದೆ ಇದ್ದವುಗಳನ್ನೇ ಇನ್ನಷ್ಟು, ಮತ್ತಷ್ಟು ಹೆಚ್ಚಿಸುತ್ತ ಹೋಗುವುದೆಂದರೆ ಉಪಯೋಗಕ್ಕೆ ಬಾರದ ಬಿಳಿಯಾನೆಗಳನ್ನು ಹೆಚ್ಚು, ಹೆಚ್ಚು ಸಾಕಿದಂತೆ ಹೊಟ್ಟೆಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದು ಜಂಬಪಡುತ್ತಾ ದಿಕ್ಕು, ದೆಸೆಯಿಲ್ಲದೆ ಸಾಗುವಂತೆಯೇ ಸರಿ.
ರವೀಂದ್ರ ಭಟ್ ಕುಳಿಬೀಡು.

ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ

0

ರಜಾ ಸಮಯದಲ್ಲಿ ಬೇಸಿಗೆ ಶಿಬಿರಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುವುದು ಅಭಿನಂದನಾರ್ಹ. ಈ ಶಿಬಿರಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್ ಸಂಸ್ಥೆಯ ಕಲಿಕಲಿಸು ಯೋಜನೆಯ ಅನ್ವಯ ಹಾಗೂ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದಿಂದ ಹಮ್ಮಿಕೊಂಡ ನಾಲ್ಕನೇ ವರ್ಷದ ಸಹಜ ಬೇಸಿಗೆ ಶಿಬಿರವನ್ನು ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಜಾ ಸಮಯದಲ್ಲಿ ಏನೂ ಸಾಧನೆ ಮಾಡಲಾಗದೇ, ಸಮಯ ಕಳೆಯದಂತೆ ಇಂತಹ ಜೀವನ ಶಿಕ್ಷಣ ಶಿಬಿರ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಈ ಶಿಬಿರ ನೆರವಾಗಲಿ ಎಂದರು.
ಮಕ್ಕಳಿಗೆ ಶಿಬಿರಕ್ಕೆ ಅಗತ್ಯವಾದ ಲೇಖನ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲಾಯಿತು. ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಶಾಲೆಯಿಂದ ಆಯ್ಕೆಯಾದ ಆರ್. ವರ್ಷಾ ಎಂಬ ವಿದ್ಯಾರ್ಥಿನಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಾಲೆಯ ಮಕ್ಕಳು ಬರೆದ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕ್ರಾಫ್ಟ್, ಪೇಪರ್ಕಟಿಂಗ್, ಹಾಡು, ಕೊಲಾಜ್. ಕ್ಲೇ ಮಾಡಲಿಂಗ್, ಲೇಖನಗಳ ಬರವಣಿಗೆ, ಕಥೆ ಹಾಗೂ ಕವನ ಇತ್ಯಾದಿಗಳ ಕುರಿತು ಒಂಭತ್ತು ದಿನಗಳ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಸಹಶಿಕ್ಷಕ ಎಸ್. ಕಲಾಧರ ತಿಳಿಸಿದರು.
ಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಸ್ನೇಹ ಯುವಕರ ಸಂಘದ ವಾಸುದೇವ್, ನರಸಿಂಹಯ್ಯ, ಶಿಕ್ಷಕ ಜೆ. ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗೋಣಿ ಮರದಲ್ಲಿ ಹಕ್ಕಿಗಳ ಭೋಜನ

0

ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಮರದ ತುಂಬೆಲ್ಲಾ ಬರೀ ಹಣ್ಣುಗಳೇ. ಹಳದಿ ಮತ್ತು ಕೆಂಬಣ್ಣದ ಹಣ್ಣುಗಳು ಎಲ್ಲೋ ಅಪರೂಪಕ್ಕೆಂಬತಿರುವ ಹಸಿರೆಲೆಗಳನ್ನು ಮರೆಮಾಡಿರುತ್ತವೆ. ತಾಲ್ಲೂಕಿನಲ್ಲಿ ಅಲ್ಲಲ್ಲಿ ಹರಡಿರುವ ಈ ಮರಗಳು ಪಕ್ಷಿಗಳಿಗೆ ಉಚಿತ ಭೋಜನಶಾಲೆಯಿದ್ದಂತೆ.

19apr11
ಗಂಡು ಕೋಗಿಲೆ

ಅಂದಹಾಗೆ, ಇದರ ಹೆಸರು ‘ಗೋಣಿ ಮರ’. ಸಸ್ಯ ವಿಜ್ಞಾನಿಗಳು ಇದನ್ನು ಫೈಕಸ್ ಡ್ರುಪೇಸಿಯಾ ಎಂದು ಕರೆದು ಮೊರೇಸಿ ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ. ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರಗಳನ್ನು ತಾಲ್ಲೂಕಿನ ಹನುಮಂತಪುರ, ಚೌಡಸಂದ್ರ, ಸಾದಲಿ, ಅಬ್ಲೂಡು ಮುಂತಾದೆಡೆ ಕಾಣಬಹುದು.
ಮಾಗಿದ ಈ ಮರದ ಹಣ್ಣುಗಳನ್ನು ಸವಿಯಲು ಪಕ್ಷಿ ಸಂಕುಲದ ಜಾತ್ರೆಯೇ ನೆರೆಯುತ್ತದೆ. ಅವುಗಳ ವೈವಿಧ್ಯಮಯ ಧ್ವನಿಯು ಎಲ್ಲೆಡೆ ಅನುರಣಿಸುತ್ತದೆ.
19apr10
ಪಿಕಳಾರ

ಈ ಹಣ್ಣನರಸಿ ಬರುವ ಪಕ್ಷಿ-ಗಳು ಅದೆಷ್ಟೋ… ಮನಿಯಾಡಲು, ಗಿಳಿ, ಕೋಗಿಲೆ, ಕಂಚು ಕುಟಿಗ, ಹಸಿರು ಕುಟುರ, ಮೈನಾ, ಬೆಳ್ಗಣ್ಣು, ಪಿಕಳಾರಗಳು ಅಲ್ಲದೆ ಅಳಿಲೂ ಬಂದು ಈ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಈ ಹಣ್ಣು ಪಕ್ಷಿ- ಪ್ರಾಣಿಗಳ ಹೊಟ್ಟೆ ಸೇರಿ ಜಿರ್ಣಕ್ರಿಯೆ ನಡೆದಾದ ಅಲ್ಲಿಯ ಆಮ್ಲದ ಜೊತೆಗೂಡಿ ಬೀಜೋಪಚಾರ ನಡೆದು ಅವು ಹಾಕುವ ಹಿಕ್ಕೆ ನೆಲಕ್ಕೆ ಬೀಳುತ್ತದೆ. ಅದರ ಮೇಲೆ ವರುಣನ ಸಿಂಚನ. ನಂತರ ಭೂ ತಾಯಿಯ ಒಡಲಿನಿಂದ ಅದರ ವಂಶಾಭಿವೃದ್ಧಿ. ಹೀಗೆ ಮರ ಮತ್ತು ಪಕ್ಷಿ-ಪ್ರಾಣಿಗಳ ನಂಟು ಯುಗ ಯುಗಗಳಿಂದ ಸಾಗಿದೆ.
19apr9
ಹಸಿರು ಕುಟುರ ಹಕ್ಕಿ

ಈ ಮರದ ಇನ್ನೊಂದು ವಿಚಿತ್ರವೆಂದರೆ, ಹಳದಿಯಿಂದ ಕೆಂಪು ವರ್ಣಕ್ಕೆ ತಿರುಗಿ ಹಣ್ಣಿನಂತೆ ಕಾಣುವ ಇವು ಹಣ್ಣಲ್ಲ, ‘ಹೈಪ್ಯಾನ್ ತೋಡಿಯಂ’ ಎಂಬ ವಿಶಿಷ್ಟ ಬಗೆಯ ಹೂಗೊಂಚಲು! ಇದರೊಳಗೆ ಗಂಡು ಹೂವು, ಹೆಣ್ಣು ಹೂವು ಹಾಗೂ ಸ್ಟರೈಲ್ಗಳೆಂಬ ಮೂರು ಬಗೆಗಳಿವೆ. ಅವುಗಳ ತುದಿಯಲ್ಲಿರುವ ಸಣ್ಣ ರಂಧ್ರದ ಮೂಲಕ ಪರಾಗಸ್ಪರ್ಶ ಕ್ರಿಯೆ ನಡೆದು, ಒಳಾವರಣದಲ್ಲಿ ಬೀಜಗಳು ಮೂಡುತ್ತವೆ.
19apr13
ಪುಟ್ಟ ಬೆಳ್ಗಣ್ಣ ಹಕ್ಕಿ

‘ಕೇವಲ ಒಂದು ಮರ ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ಆಶ್ರಯದಾತನಾಗಿ, ಆಹಾರ ಮತ್ತು ಆಮ್ಲಜನಕ ನೀಡುತ್ತದೆಂಬುದನ್ನು ಮನಗಂಡರೆ, ಅವುಗಳ ಪ್ರಾಮುಖ್ಯತೆ ತಿಳಿಯುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಮರಗಿಡಗಳನ್ನು ನೆಟ್ಟು ಪ್ರಕೃತಿಯ ಉಸಿರಾದ ಹಸಿರನ್ನು ಕಾಪಾಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
– ಡಿ.ಜಿ.ಮಲ್ಲಿಕಾರ್ಜುನ

ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಕ್ರಾಂತಿ

0

‘ಮನೆಗೊಂದು ಮಗು, ಮನೆಗೊಂದು ಗಿಡ’ ಸಂದೇಶವಿದ್ದಂತೆ, ಪ್ರಾಥಮಿಕ ಶಾಲೆಗೊಂದು ಕಂಪ್ಯೂಟರ್ ಅತ್ಯವಶ್ಯ ಸಂಗತಿಯಾಗಿ ಪರಿಣಮಿಸುತ್ತಿದೆ. ತಂತ್ರಜ್ಞಾನ ಏರು ಗತಿಯಲ್ಲಿ ಸಾಗುವಾಗ ಕಲಿಕೆಯೂ ಅದರೊಂದಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆಯಿದೆ. ಇದನ್ನು ಮನಗಂಡು ಈಗಾಗಲೇ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಪೋಷಕರನ್ನು ಆಕರ್ಷಿಸುತ್ತಿವೆ. ಹತ್ತು ಹಲವು ಖಾಸಗಿ ಶಾಲೆಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕಂಪ್ಯೂಟರ್ ಶಿಕ್ಷಣ ಕ್ರಾಂತಿ ಸದ್ದಿಲ್ಲದೆ ನಡೆದಿದೆ. ಗ್ರಾಮಸ್ಥರ ಸಹಾಯದಿಂದ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರನ್ನು ತಂದು ಶಿಕ್ಷಕರು ಅದರಿಂದ ಹಲವಾರು ಉಪಯುಕ್ತ ಕೆಲಸಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಆಟದ ಮೂಲಕ, ಚಿತ್ರಗಳ ಮೂಲಕ, ವೀಡಿಯೋ ನೋಡುವ ಮೂಲಕ, ಅಕ್ಷರಗಳನ್ನು ಮೂಡಿಸುವ ಮೂಲಕ ಕಂಪ್ಯೂಟರ್ ಕಲಿಕೆಯನ್ನು ನಡೆಸಿದ್ದಾರೆ.
‘ನಮ್ಮ ಶಾಲೆಯ ವಿಜ್ಞಾನ ಶಿಕ್ಷಕ ರಾಮಕೃಷ್ಣ ಅವರಿಗೆ ಕಂಪ್ಯೂಟರ್ ಜ್ಞಾನವಿದ್ದು, ಗ್ರಾಮಸ್ಥರ ಸಹಕಾರದಿಂದ ಶಾಲೆಗೆ ತರುವಂತಾಯಿತು. ಪ್ರಶ್ನೆಪತ್ರಿಕೆಗಳನ್ನು ಮೊದಲು ಡಿ.ಟಿ.ಪಿ ಮಾಡಿಸಿ ಜೆರಾಕ್ಸ್ ಪ್ರತಿಗಳನ್ನು ತರಬೇಕಿತ್ತು. ಆದರೆ ಈಗ ನಾವೇ ಶಾಲೆಯಲ್ಲಿ ತಯಾರಿಸುತ್ತೇವೆ. ಮಕ್ಕಳಿಗೆ ಕೊಡಲು ಮಾರ್ಕ್ಸ್ ಕಾರ್ಡ್ ನಾವೇ ಸುಂದರವಾಗಿ ರೂಪಿಸಿದ್ದು, ಶಾಲೆಯ ಚಿತ್ರವನ್ನೂ ಅದರ ಮೇಲೆ ಮೂಡಿಸಿದ್ದೇವೆ. ಅಕ್ಷರ ದಾಸೋಹ ಸೇರಿದಂತೆ ಶಾಲೆಯ ವಿವಿಧ ದಾಖಲೆಗಳನ್ನು ಕಂಪ್ಯೂಟರಿನಲ್ಲೇ ನಿರ್ವಹಿಸುತ್ತೇವೆ ಮತ್ತು ಇಲಾಖೆಗೆ ಬೇಕಿರುವುದನ್ನು ಪ್ರಿಂಟ್ ತೆಗೆದು ಕೊಡುತ್ತೇವೆ. ಶಾಲೆಯ ಗೋಡೆ ಪತ್ರಿಕೆಯನ್ನು ಮಕ್ಕಳೀಗ ಕಂಪ್ಯೂಟರ್ ನಲ್ಲಿ ರಚಿಸುತ್ತಿದ್ದಾರೆ. ಚಿತ್ರಕಲೆ, ಆಟ, ಪಾಠಕ್ಕೆ ಪೂರಕ ವೀಡಿಯೋ ವೀಕ್ಷಣೆ ಮಾಡುವ ಮಕ್ಕಳು, ಅವರು ರಚಿಸಿರುವ ವಿವಿಧ ಕ್ರಿಯಾಶೀಲತೆಗಳನ್ನು ಪ್ರಿಂಟ್ ತೆಗೆದು ಮನೆಗೂ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
‘ನಮ್ಮ ಊರಿಗೆ ಪ್ರತಿ ದಿನ ಖಾಸಗಿ ಶಾಲೆಗಳ ಎಂಟು ಬಸ್ಸುಗಳು ಬಂದು ಮಕ್ಕಳನ್ನು ಕರೆದೊಯ್ಯುತ್ತವೆ. ಆದರೂ ಸರ್ಕಾರಿ ಶಾಲೆಯಲ್ಲಿ ಎಂಬತ್ತು ಮಂದಿ ಮಕ್ಕಳು ಓದುತ್ತಿದ್ದಾರೆ. ಖಾಸಗಿ ಶಾಲೆಗಳೊಂದಿ ಪೈಪೋಟಿ ನಡೆಸಲು ಮಕ್ಕಳಿಗೆ ಚೆನ್ನಾಗಿ ಕಲಿಸಲು ಶಿಕ್ಷಕರು ಅಪಾರ ಶ್ರಮವಹಿಸುತ್ತಾರೆ. ಅದಕ್ಕೆ ನಾವು ಗ್ರಾಮಸ್ಥರೂ ಸಹಕರಿಸುತ್ತೇವೆ. ಹಲವಾರು ಪ್ರೌಢಶಾಲೆಗಳಲ್ಲಿ ಸರ್ಕಾರದಿಂದ ನೀಡಿರುವ ಕಂಪ್ಯೂಟರ್ಗಳನ್ನು ಬಳಸದೇ ಬಿಟ್ಟಿರುವಾಗ, ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುವುದು ನಮಗೆ ಹೆಮ್ಮೆ ತಂದಿದೆ’ ಎಂದು ಗ್ರಾಮದ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

19apr4
ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆಂದು ತಯಾರಾದ ಮಾರ್ಕ್ಸ್ ಕಾರ್ಡ್.

19apr4a
ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆಂದು ತಯಾರಾದ ಮಾರ್ಕ್ಸ್ ಕಾರ್ಡ್.

–ಡಿ.ಜಿ.ಮಲ್ಲಿಕಾರ್ಜುನ.

ಗ್ರಾಮಾಂತರ ಠಾಣೆಯ ಮುಂದೆ ಪ್ರತಿಭಟನೆ

0

ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ವಿರುದ್ಧ ಶಾಸಕ ಎಂ.ರಾಜಣ್ಣ ಸೇರಿದಂತೆ ನೂರಾರು ಮಂದಿ ಗ್ರಾಮಾಂತರ ಠಾಣೆಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ತಾದೂರು ಗೇಟ್ ಬಳಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸುವಾಗ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯದಿಂದ ವರ್ತಿಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
19apr6ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿ,‘ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವರ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳಿಂದ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ನಾನೇ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದರೂ ಸಹ ಪ್ರಯೋಜನವಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೂ ದೂರು ನೀಡಿದ್ದೇನೆ. ಇಂದು ಎಲ್ಲಾ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಆಚರಿಸುತ್ತಿದ್ದು, ನನ್ನ ಕ್ಷೇತ್ರದ ತಾದೂರು, ಬಸವಾಪಟ್ಟಣ ಹಾಗೂ ವೆಂಕಟಾಪುರ ಗ್ರಾಮದ ಯುವಕರು ಪ್ರತಿಭಟಿಸುವಾಗ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೌರ್ಜನ್ಯದಿಂದ ವರ್ತಿಸಿರುವುದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಅವರನ್ನು ವರ್ಗಾವಣೆ ಮಾಡುವ ತನಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿ ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ ಮಾತನಾಡಿ, ಶಾಸಕರನ್ನು ಹಾಗೂ ಪ್ರತಿಭಟನಾ ನಿರತರನ್ನು ಮನವೊಲಿಸಲಾಗುವುದು. ಈ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ಸಂಪೂರ್ಣ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪುರಸಭಾ ಸದಸ್ಯ ಲಕ್ಷ್ಮಣ, ತಾದೂರು ರಘು, ಮಂಜುನಾಥ, ಮುಖಂಡರಾದ ಮೇಲೂರು ರವಿಕುಮಾರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆರ್.ಎ.ಉಮೇಶ್, ಕೆ.ಮಂಜುನಾಥ್, ಮಳಮಾಚನಹಳ್ಳಿ ರಾಜಶೇಖರ್, ಮಳ್ಳೂರು ರಾಜೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕಿನಾದ್ಯಂತ ಯಶಸ್ವಿ ಬಂದ್

0

ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಅವರ ಪ್ರತಿಕೃತಿ ದಹನ ಮಾಡಿದ ಹಸಿರುಸೇನೆ, ಜನಪರ ವೇದಿಕೆ ಹಾಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಶನಿವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಂಕ್, ಪೆಟ್ರೋಲ್ ಬಂಕ್, ಸಿನಿಮಾ ಥಿಯೇಟರ್, ಹೋಟೆಲ್ ಮುಚ್ಚುವ ಮೂಲಕ ಬಂದ್ಗೆ ಬೆಂಬಲಿಸಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆ, ಔಷಧಿ ಅಂಗಡಿಗಳು ಹಾಗೂ ಕೆ.ಎಂ.ಎಫ್ ಹಾಲಿನ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ವಕೀಲರು ನ್ಯಾಯಾಂಗ ಕಲಾಪದಿಂದ ಹೊರಗುಳಿದು ಬಂದ್ಗೆ ಬೆಂಬಲಿಸಿದರು.
ತಾಲ್ಲೂಕಿನ ಮೇಲೂರು, ಮಳ್ಳೂರು, ಚೌಡಸಂದ್ರ, ಹಿತ್ತಲಹಳ್ಳಿ, ಹಂಡಿಗನಾಳ, ತಾದೂರು, ಜಂಗಮಕೋಟೆ, ಎಚ್.ಕ್ರಾಸ್, ದಿಬ್ಬೂರಹಳ್ಳಿ, ಸಾದಲಿ, ಸೊಣ್ಣೇನಹಳ್ಳಿ ಮುಂತಾದೆಡೆ ರಸ್ತೆ ತಡೆ ನಡೆಸಿ ಬಂದ್ ಆಚರಿಸಿದರು. ಜನಗಣತಿ ಮಾಡಲು ಗ್ರಾಮಾಂತರ ಪ್ರದೇಶಗಳಿಂದ ಹೋಗಬೇಕಿದ್ದ ಶಿಕ್ಷಕರಿಗೆ ಬಂದ್ನಿಂದಾಗಿ ತೊಂದರೆಯಾಯಿತು.
ರೈತ ಸಂಘ ಹಾಗೂ ಹಸಿರುಸೇನೆ, ಕರ್ನಾಟಕ ಜನಪರ ವೇದಿಕೆ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗದ ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರಾಜ್ಯ ಸರ್ಕಾರವು ಮೇಕೆದಾಟು ಬಳಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ, ಇದನ್ನು ಖಂಡಿಸುತ್ತೇವೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸ್ವ ಸಹಾಯ ಸಂಘಕ್ಕೆ ಆರ್ಥಿಕ ನೆರವು

0

ಸ್ವ ಸಹಾಯ ಸಂಘಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಾಮಾಜಿಕ ಬದಲಾವಣೆಯೊಂದಿಗೆ ಮಹಿಳಾ ಸಬಲೀಕರಣಕ್ಕೆ ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈಚೆಗೆ ನಗರದ ಸಿದ್ದಾರ್ಥನಗರದ ಮೀರಾಬಾಯಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೨.೨೫ ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಅವರು ಮಾತನಾಡಿದರು.
ಪುರುಷರಿಗಿಂತಲೂ ಮಹಿಳೆಯರಿಗೆ ಹಣದ ಉಳಿತಾಯ ಹಾಗೂ ಆರ್ಥಿಕ ಶಿಸ್ತು ಹೆಚ್ಚು ಇರುತ್ತದೆ. ಹಾಗಾಗಿ ಬ್ಯಾಂಕ್ ಅಥವಾ ಇನ್ನಾವುದೆ ಮೂಲಗಳಿಂದ ಪಡೆದಂತಹ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರವೇ ಬಳಸುವುದರಲ್ಲಿ ಮಾತ್ರವಲ್ಲ ಸಾಲದ ಮರುಪಾವತಿಯಲ್ಲೂ ಮಹಿಳೆಯರು ಮುಂದಿದ್ದಾರೆ. ಹಾಗೆಯೆ ಮಹಿಳೆಯರ ಸಾಲದ ಮರುಪಾವತಿಯ ಪ್ರಮಾಣ ಶೇ೯೯ರಷ್ಟು ಇರುವುದು ಮಹಿಳೆ ಆರ್ಥಿಕ ಶಿಸ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಮಾತನಾಡಿ, ಮೀರಾಬಾಯಿ ಮಹಿಳಾ ಸಂಘಕ್ಕೆ ೨.೨೫ ಲಕ್ಷ ರೂಪಾಯಿಗಳ ಚೆಕ್ನ್ನು ನೀಡಲಾಗಿದೆ. ಸಂಘದಲ್ಲಿ ೧೫ ಮಂದಿ ಸದಸ್ಯರಿದ್ದು ಪ್ರತಿಯೊಬ್ಬರಿಗೂ ತಲಾ ೧೫ ಸಾವಿರ ರೂಪಾಯಿಗಳನ್ನು ನೀಡಲಾಗುವುದು.
ಮೈಕ್ರೋ ಕಿರುಸಾಲ ಯೋಜನೆಯಡಿ ಚೆಕ್ ನೀಡಿದ್ದು ಈ ಪೈಕಿ ತಲಾ ೧೦ ಸಾವಿರ ರೂ.ಗಳು ಪ್ರೋತ್ಸಾಹ ಧನ ಹಾಗೂ ತಲಾ ೫ ಸಾವಿರ ರೂ.ಗಳು ಸಾಲವಾಗಿದ್ದು ಆ ಹಣವನ್ನು ನಿಗದಿತ ಕಾಲಮಿತಿಯೊಳಗೆ ಮರುಪಾವತಿ ಮಾಡಬೇಕಾಗುತ್ತಿದೆ ಎಂದು ವಿವರಿಸಿದರು.
ಸಂಘದ ಪ್ರತಿನಿಧಿಗಳಾದ ಕೆ.ರಾಧ, ಮುನಿವೆಂಕಟಮ್ಮ, ಸಂಘದ ನಿರ್ವಹಣೆಗಾರರಾದ ಅಂಗನವಾಡಿ ಕಾರ್ಯಕರ್ತೆ ಸುನಂದಮ್ಮ, ಸೌಭಾಗ್ಯಮ್ಮ, ಜೆಡಿಎಸ್ ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ಮಳ್ಳೂರಯ್ಯ, ಅಪ್ಪೇಗೌಡನಹಳ್ಳಿ ಮಂಜುನಾಥ್, ತಾಟಪರ್ತಿ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!