ಇತ್ತೀಚಿನ ದಿನಗಳಲ್ಲಿ ಮನೆ ಮಾತಾದ ಹಂದಿಜ್ವರ (H.N.) ಹಾಗೂ ಚಿಕುನ್ ಗೂನ್ಯಾ ಜ್ವರಗಳು ಬೇರೆ ಬೇರೆ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಿಂದ ಗುಣಪಡಿಸಲಾರದಾದಾಗ ಜನರು ಮೊರೆ ಹೋಗಿದ್ದು ಆಯುರ್ವೇದ ಚಿಕಿತ್ಸಾ ಪದ್ಧತಿಯ ಗಿಡಮೂಲಿಕೆಗಳನ್ನು “ತಲೆಗೊಂದೇ ಮಂತ್ರ” ವೆಂಬಂತೆ ಅಮೃತ ಬಳ್ಳಿಯ ಕಾಂಡಗಳನ್ನು ಉಪಯೋಗಿಸಿ ಕಷಾಯಗಳನ್ನು ತಯಾರಿಸಿ ಉಪಯೋಗಿಸಿದರು. ಆದರೆ “ಅತಿಯಾದರೆ ಅಮೃತವೂ ವಿಷ’ ರೋಗಗಳ ಕಾರಣಗಳನ್ನು ಅರಿತು ಲಕ್ಷಣಗಳನ್ನು ನೋಡಿ ವೈದ್ಯರ ಸಲಹೆಯ ಮೇರೆಗೆ ಔಷಧ ಸಸ್ಯಗಳನ್ನು ಬಳಸುವುದು ಆರೋಗ್ಯಕರ.
ಹೆಸರೇ ಸೂಚಿಸುವಂತೆ ಅಮೃತಕ್ಕೆ ಸಮಾನವಾದಂಥಹ “ಅಮೃತ ಬಳ್ಳಿ”ಯ ಪರಿಚಯ ಹಾಗೂ ಅದರ ಗುಣ ಲಕ್ಷಣಗಳು ಹಾಗೂ ರೋಗಗಳಲ್ಲಿ ಬಳಕೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಅಮೃತ ಬಳ್ಳಿಯು (menispermaceae) ಮೆನಿಸ್ಪರ್ಮೇಶಿಯೆ ಎಂಬ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿರುತ್ತದೆ. ಸಾಮಾನ್ಯವಾಗಿ ಈ ಕುಟುಂಬ ವರ್ಗಕ್ಕೆ ಸೇರಿದ ಸಸ್ಯಗಳು ಬಳ್ಳಿಗಳ ರೂಪದಲ್ಲಿ ಇರುತ್ತವೆ. ಯಾವುದೇ ವೃಕ್ಷಗಳಿಗೆ ಹಮ್ಮಿಕೊಂಡು ಬೆಳೆಯುತ್ತವೆ. ಈ ಬಳ್ಳಿಯ ಕಾಂಡವನ್ನು ಕತ್ತರಿಸಿ ನೋಡಿದಾಗ ಚಕ್ರಾಕಾರವಾಗಿ ಕಾಣುತ್ತದೆ. ಎಲೆಗಳು ಏಕಾಂತರವಾಗಿದ್ದು, ಹೃದಯದ ಆಕಾರದಲ್ಲಿ ಇದ್ದು, ಉಪಪತ್ರಗಳಿರುವುದಿಲ್ಲ. ಹೂವುಗಳು ಆಕಾರದಲ್ಲಿ ಸಣ್ಣದಾಗಿದ್ದು, ಹಳದಿ ಬಣ್ಣದ ಗುಚ್ಛಗಳ ರೂಪದಲ್ಲಿ ಇರುತ್ತವೆ. ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ. ಕಾಂಡವನ್ನು ಕತ್ತರಿಸಿ ನೆಟ್ಟಾಗ ಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಕಹಿ ಬೇವಿನ ವೃಕ್ಷಕ್ಕೆ ಹಮ್ಮಿಕೊಂಡ ಅಮೃತ ಬಳ್ಳಿಯು ಔಷಧಾರ್ಥವಾಗಿ ಉಪಯೋಗಿಸುವುದಕ್ಕೆ ಪ್ರಶಸ್ತವಾದುದಾಗಿದೆ.
ಅಮೃತ ಬಳ್ಳಿಯ ಸಮಾನಾರ್ಥಕ ಸಂಸ್ಕøತ ಹೆಸರುಗಳು
ವತ್ಸಾದನಿ: ಗೋವುಗಳು ಇವುಗಳನ್ನು ತಿನ್ನುವ ಕಾರಣಕ್ಕೆ ಈ ಹೆಸರು.
ಛಿನ್ನರೂಹಾ: ಈ ಬಳ್ಳಿಯ ಕಾಂಡಗಳನ್ನು ಕತ್ತರಿಸಿ ನೆಡುವುದರಿಂದ ಬಳ್ಳಿಗಳು ಹುಟ್ಟುತ್ತವೆ. ಆದ್ದರಿಂದ ಈ ಹೆಸರು.
ಗುಡೂಚಿ: ರೋಗಗಳಿಂದ ಜನರನ್ನು ರಕ್ಷಿಸುವುದರಿಂದ ಈ ಹೆಸರು.
ತಂತ್ರಿಕಾ: ಕುಟುಂಬದ ಸದಸ್ಯರನ್ನು ರಕ್ಷಣೆ ಮಾಡಿ, ರೋಗಗಳಿಂದ ದೂರವಿಡುವುದಕ್ಕೋಸ್ಕರ ಈ ಹೆಸರು.
ಅಮೃತಾ: ಇದರ ಸೇವನೆಯಿಂದ ಮರಣವನ್ನು ದೂರವಿಡಬಹುದು.
ಮಧುಪರ್ಣಿ: ಇವುಗಳ ಎಲೆಗಳು ಸಿಹಿಯಾಗಿರುವುದರಿಂದ ಈ ಹೆಸರು.
ಉಪಯುಕ್ತ ಅಂಗ: ಕಾಂಡ ಮತ್ತು ಎಲೆಗಳು.
ಗುಣ ಲಕ್ಷಣಗಳು
ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿದೆ. ವಾತ ಹಾಗು ಕಫ ದೋಷಗಳನ್ನು ಶಮನ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ.
ಮಧುಮೇಹ, ಚರ್ಮರೋಗ, ಕೆಲವು ಸಂಧಿಗಳ ರೋಗಗಳು, ಕ್ರಿಮಿ, ಜ್ವರ, ಕೆಮ್ಮು ಇತ್ಯಾದಿ ರೋಗಗಳನ್ನು ಶಮನ ಮಾಡುತ್ತದೆ.
ಉಪಯೋಗ
1. ಎಲ್ಲ ರೀತಿಯ ಪ್ರಮೇಹದಲ್ಲಿ ಅಮೃತ ಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
2. ಅಮೃತ ಬಳ್ಳಿಯ ರಸವನ್ನು ದಿನನಿತ್ಯವೂ ಸೇವಿಸುವುದರಿಂದ ಶರೀರದ ಧಾತುಗಳ ವೃದ್ಧಿಯಾಗಿ ಶರೀರಕ್ಕೆ ಪೋಷಣೆ ಸಿಗುವುದು.
3. ವಾತ ದೋಷ ಪ್ರಧಾನವಾಗಿರುವ ಜ್ವರದಲ್ಲಿ ಅಮೃತ ಬಳ್ಳಿಯ ಕಾಂಡಗಳನ್ನು ಜಜ್ಜಿ ನೀರನ್ನು ಸೇರಿಸಿ ಕುದಿಸಿ ಅರ್ಧದಷ್ಟು ಇಳಿಸಿ ಕಷಾಯ ತಯಾರಿಸಿ ಸೋಸಿ ಕುಡಿಯುವುದು ಉತ್ತಮ.
4. ಸಂಧಿಗತ ರೋಗಗಳಲ್ಲಿ (gouty arthritis) ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ತುಪ್ಪವು ಉತ್ತಮ.
5. ತುಂಬಾ ದಿನಗಳಿಂದ ಜ್ವರದಿಂದ ಬಳಲುತ್ತಿರುವವರು ಅಮೃತ ಬಳ್ಳಿ ಹಾಗೂ ಪಿಪ್ಪಲಿಯನ್ನು (ಹಿಪ್ಪಲಿ) ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
6. ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ (ಎದೆಹಾಲು) ಶುದ್ಧಿಯಾಗುವುದು.
7. ಕಾಮಾಲೆಯಲ್ಲಿ ನಿತ್ಯವೂ ಬೆಳಿಗ್ಗೆ ಅಮೃತ ಬಳ್ಳಿ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಹಿತಕರ.
ಅಮೃತಾರಿಷ್ಠ, ಸಂಶಮನಿ ವಟಿ, ಅಮೃತಾ ಘೃತ, ಅಮೃತಾಷ್ಟಕ ಕ್ವಾಥ, ಅಮೃತಾ ಸತ್ವ ಇತ್ಯಾದಿಗಳು ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ಕೆಲವು ಔಷಧಗಳ ಹೆಸರುಗಳು.
ಡಾ. ನಾಗಶ್ರೀ ಕೆ.ಎಸ್.
ಅಮೃತ ಬಳ್ಳಿ
ವರದನಾಯಕನಹಳ್ಳಿ ಗ್ರಾಮದ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ರಥೋತ್ಸವ
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 19ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭ
ತಾಲ್ಲೂಕಿನ ೧೪ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ನಡೆಯಿತು.
ನಗರದ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ತಾಲ್ಲೂಕಿನ ೧೩ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೯.೩೦.ಕ್ಕೆ ಪರೀಕ್ಷೆಗಳು ಪ್ರಾರಂಭವಾದವು, ಪ್ರತಿಯೊಂದು ಕೇಂದ್ರಕ್ಕೆ ಇಬ್ಬರು ಸ್ಥಾನಿಕ ಜಾಗೃತದಳಗಳನ್ನು ನೇಮಕ ಮಾಡಲಾಗಿತ್ತು, ೧೪ ಕೇಂದ್ರಗಳಿಗೆ ೦೪ ರೂಟ್ಗಳನ್ನು ಮಾಡಿ, ೦೮ ಮಂದಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು,
ತಾಲ್ಲೂಕಿನ ಹಂತದಲ್ಲಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಮೊಬೈಲ್ ಸ್ಕ್ವಾಡ್ ರಚನೆ ಮಾಡಲಾಗಿತ್ತು. ನಕಲು ಮಾಡಲು ಅವಕಾಶವಿಲ್ಲದಂತೆ ಸೂಕ್ತ ಭದ್ರತೆಯನ್ನೂ ಒದಗಿಸಲಾಗಿತ್ತು. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತದಳಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ೨೮ ಮಂದಿ ಸ್ಥಾನಿಕ ಜಾಗೃತದಳಗಳನ್ನು ರಚನೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೂ ಅಗತ್ಯವಾಗಿರುವ ಕೊಠಡಿಯ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಹಾಗೂ ಆರೋಗ್ಯ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಎ.ಎನ್.ಎಂ.ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದ್ದಾರೆ.
ರೈತರಿಂದ ರೈತರಿಗಾಗಿ ತರಬೇತಿ ಕಾರ್ಯಾಗಾರ
ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ದ್ವಿತಳಿ ಗೂಡುಗಳನ್ನು ಬೆಳೆದು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್ ಹೇಳಿದರು.
ನಗರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಮೂಹ ಸಂವರ್ಧನಾ ಕಾರ್ಯಕ್ರಮದಡಿಯಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಗತಿಪರ ಯಶಸ್ವಿ ದ್ವಿತಳಿ ರೈತರಿಂದ ರೈತರಿಗಾಗಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರವಾದ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿರುವ ರೈತರು ಹನಿನೀರಾವರಿಯ ಪದ್ಧತಿಯಲ್ಲೆ ಉತ್ತಮಗುಣಮಟ್ಟದ ಹಿಪ್ಪುನೇರಳೆಯನ್ನು ಬೆಳೆಯುವ ಮುಖಾಂತರ, ದ್ವಿತಳಿ ಗೂಡನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು, ಇಲಾಖೆಯ ಮೇಲಾಧಿಕಾರಿಗಳಿಂದ ಬರುವಂತಹ ಸಲಹೆಗಳನ್ನು ಪಡೆದುಕೊಂಡು ಉತ್ತಮವಾದ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
ವಿಜ್ಞಾನಿ ಡಾ. ಕೆ.ವಿ.ಪ್ರಸಾದ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯಬೇಕು. ಹಿಪ್ಪುನೇರಳೆ ತೋಟಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವುದರೊಂದಿಗೆ ದ್ವಿತಳಿ ರೇಷ್ಮೆ ಗೂಡಿಗೆ ಪಕ್ವವಾಗಿರುವ ಹಿಪ್ಪುನೇರಳೆ ಸೊಪ್ಪನ್ನು ಕೊಡುವುದರಿಂದ ಗುಣಮಟ್ಟದ ಬೆಳೆ ಹಾಗು ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿ ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಖಡ್ಡಾಯವಾಗಿದ್ದು, ರೇಷ್ಮೆ ಹುಳುಸಾಕಾಣಿಕೆ ಮನೆಗಳಿಂದ ತೆಗೆದ ತ್ಯಾಜ್ಯವನ್ನು ಚೆನ್ನಾಗಿ ಕೊಳೆಸಿ ತೋಟಗಳಿಗೆ ನೀಡಬೇಕು. ಹಿಪ್ಪುನೇರಳೆ ಸೊಪ್ಪನ್ನು ಕಟಾವು ಮಾಡುವಂತಹ ಪದ್ಧತಿಗಳನ್ನು ಬದಲಾವಣೆ ಮಾಡಬೇಕು. ಕಾಂಪ್ಲೆಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಾರದು, ಬದಲಿಗೆ ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ,
ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಣೆ ಮಾಡಬಾರದು ಎಂದು ವಿವರಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ರೈತರು ಬೆಳೆದ ದ್ವಿತಳಿ ರೇಷ್ಮೆ ಗೂಡನ್ನು ದೂರದ ರಾಮನಗರಕ್ಕೆ ಕೊಂಡೊಯ್ಯಬೇಕು. ಹೀಗೆ ಕೊಂಡೊಯ್ಯಲು ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ. ಇದಕ್ಕೆ ರೈತರು ಏನು ಮಾಡಬೇಕು? ಎಂದು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕಿನಾಧ್ಯಂತ ಹೆಚ್ಚು ಹೆಚ್ಚು ದ್ವಿತಳಿ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡಿದಾಗ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಆದರೆ ಬಹುತೇಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರಾದರೂ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ಹಿಂದೇಟು ಹಾಕುವುದು ಸರಿಯಲ್ಲವೆಂದರು.
ವಿಜ್ಞಾನಿಗಳಾದ ಡಾ.ವೆಂಕಟೇಶ್, ಮೌರಿಸಾಬ್, ಫಣಿರಾಜ್, ರೈತರಾದ ಮಳ್ಳೂರು ಶಿವಣ್ಣ, ಹಿತ್ತಲಹಳ್ಳಿ ಸುರೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿರಾಜು, ನಿರಂಜನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದು:ಖವನ್ನು ಮರೆಯಬೇಡಿ!
ಈ ತಲೆಬರಹವನ್ನು ನೋಡಿ ಆಶ್ಚರ್ಯಪಡಬೇಡಿ. ಇದರ ಪೂರ್ಣರೂಪ ಹೀಗಿದೆ-ದು:ಖವನ್ನು ಕೇವಲ ಮರೆಯಲು ಪ್ರಯತ್ನಿಸಬೇಡಿ, ಅದನ್ನು ಪೂರ್ಣವಾಗಿ ಹೊರಹಾಕಿ.
ಸುರೇಶ್ (52) ಮತ್ತು ಸುನೀತ (47) ದಂಪತಿಗಳು. ಅವರಿಗೆ ರಾಹುಲ್ (20) ಮತ್ತು ರಾಜೀವಿ (14) ಮಕ್ಕಳು. ಸರ್ಕಾರಿ ನೌಕರಿಯಲಿದ್ದ ಸುರೇಶ್ ನ ಸುಖೀ ಸಂಸಾರಕ್ಕೆ ಬರಸಿಡಿಲು ಬಡಿದಿತ್ತು. ಮನೆಯೊಡತಿ ಸುನೀತ ಖಾಯಿಲೆಯಿಂದ ಚೇತರಿಸಿಕೊಳ್ಳಲಾರದೆ ಮರಣ ಹೊಂದಿದಳು. ದು:ಖದಲ್ಲಿ ಮುಳುಗಿದ ಕುಟುಂಬಕ್ಕೆ ಎಲ್ಲರೂ ತಮತಮಗೆ ತಿಳಿದಂತೆ ಸಾಂತ್ವನ ಹೇಳಿದರು.
“ಮನೆಯ ಯಜಮಾನನಾಗಿ ನೀನೇ ಹೀಗೆ ಮಂಕಾಗಿ ಕುಳಿತರೆ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮಕ್ಕಳನ್ನು ನೋಡಿ, ಅವರ ಭವಿಷ್ಯದ ದೃಷ್ಟಿಯಿಂದ ನಿನ್ನ ದು:ಖವನ್ನು ಮರೆತು ಕೆಲಸಮಾಡು” ಎಂದು ಹಿರಿಯರು ಸುರೇಶನಿಗೆ ಧೈರ್ಯ ತುಂಬಿದರು.
“ಮಕ್ಕಳೇ ನೀವು ಅಳುತ್ತಾ ಕುಳಿತರೆ ಅಪ್ಪನಿಗೂ ಬೇಜಾರಾಗುತ್ತದೆ. ಆಗಿದ್ದಾಯಿತು ಏಳಿ, ದು:ಖವನ್ನು ಮರೆತು ನಿಮ್ಮ ನಿಮ್ಮ ಕೆಲಸ ಮಾಡಿ” ಎಂದು ಮಕ್ಕಳನ್ನು ಹುರಿದುಂಬಿಸಲು ಪ್ರಯತ್ನಿಸಿದರು.
ನಿಧಾನವಾಗಿ ಎಲ್ಲಾ ಮಾಮೂಲಿನ ಸ್ಥಿತಿಗೆ ಬರುತ್ತಿದೆ ಎನ್ನಿಸುತ್ತಿತ್ತು. ಸುರೇಶ ಹೇಗೋ ಸಂಸಾರವನ್ನು ನಿಭಾಯಿಸುತ್ತಿದ್ದ. ರಾಹುಲ್ ಎಂದಿನಂತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದ್ದ. ಆದರೆ ಆರೆಂಟು ತಿಂಗಳ ನಂತರ ಮಗಳು ರಾಜೀವಿ ಮಂಕಾಗತೊಡಗಿದ್ದಳು. ವಿದ್ಯಾಭ್ಯಾಸ ಸುಮಾರಾಗಿ ನಡೆಯುತ್ತಿದ್ದರೂ ಅವಳು ಹಿಂದಿನಂತೆ ಲವಲವಿಕೆಯಿಂದ ಇರುತ್ತಿರಲಿಲ್ಲ. ಪ್ರಾರಂಭದಲ್ಲಿ ತಾಯಿಯನ್ನು ಕಳೆದುಕೊಂಡ ದು:ಖವೇ ಇದಕ್ಕೆ ಕಾರಣ ಎಂದುಕೊಂಡ ಸುರೇಶ್ ಪರಿಸ್ಥಿತಿ ಹಾಗೆಯೇ ಮುಂದುವರೆದಾಗ ಕಳವಳಗೊಂಡು ನನ್ನ ಬಳಿ ಆಪ್ತಸಲಹೆಗೆ ಕರೆತಂದರು.
ಕುಟುಂಬದ ಒಬ್ಬೊಬ್ಬ ವ್ಯಕ್ತಿಯನ್ನೂ ಬೇರೆಬೇರೆಯಾಗಿ ಮಾತನಾಡಿಸುತ್ತಾ ಹೋದೆ. ಮಾತುಗಳಿಗಿಂತ ಹೆಚ್ಚಾಗಿ ಎಲ್ಲರಿಂದಲೂ ದು:ಖದ ಮಹಾಪೂರವೇ ಹರಿಯುತ್ತಿತ್ತು. ದು:ಖವನ್ನು ಹೊರಹಾಕಲು ಆಪ್ತಸಲಹೆಗಾರರ ಕೊಠಡಿಯಲ್ಲಿ ಮುಕ್ತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಸಾಕಷ್ಟು ಕಣ್ಣೀರು ಹರಿದ ಮೇಲೆ ಎಲ್ಲರೂ ಹಗುರಾಗುತ್ತಿರುವಂತೆ ಕಂಡಿತು. ಹೆಂಡತಿ/ತಾಯಿಯನ್ನು ಅಕಾಲಿಕವಾಗಿ ಕಳೆದುಕೊಂಡ ದು:ಖ ಒಮ್ಮೆಗೆ ಕಡಿಮೆಯಾಗುವುದು ಸುಲುಭವಲ್ಲ. ಸಮಯ ಹೆಚ್ಚಿನ ದು:ಖಗಳನ್ನು ಕಡಿಮೆ ಮಾಡುತ್ತದೆ. ಆದರೆ ಹತ್ತಿಕಲ್ಪಟ್ಟ ದು:ಖವನ್ನು ಹೊರಹಾಕದಿದ್ದರೆ ಅದಕ್ಕೆ ದೂರಗಾಮಿ ಮಾನಸಿಕ ಮತ್ತು ದೈಹಿಕ ಪರಿಣಾಮಗಳಿರಬಹುದು.
ಆ ಕುಟುಂಬದಲ್ಲಿ ವಾಸ್ತವವಾಗಿ ನಡೆದದ್ದು ಏನು? ಸುನೀತಳ ಶವಸಂಸ್ಕಾರವಾಗಿ ಕೆಲವು ದಿನಗಳ ನಂತರ ನೆಂಟರು ಮತ್ತು ಸ್ನೇಹಿತರೆಲ್ಲಾ ಹೊರಟು ಹೋದರು. ಉಳಿದ ಮೂರು ಜನರು ಸಾವಿನ ದು:ಖವನ್ನು ಇನ್ನೂ ಜೀರ್ಣಿಸಿಕೊಂಡಿರಲಿಲ್ಲ. ಆದರೂ ಯಾರೂ ತಮ್ಮ ದು:ಖದ ಬಗೆಗೆ ಮಾತನಾಡುತ್ತಿರಲಿಲ್ಲ. ಎಲ್ಲರಿಗೂ ಒಳಗೊಳಗೇ ಸುನೀತಾಳ ಬಗೆಗೆ ಮಾತನಾಡುವ ಆಸೆ ಇದ್ದರೂ ಅದರಿಂದ ಬೇರೆಯವರಿಗೆ ಬೇಸರವಾಗಬಹುದೆಂದು ಸುಮ್ಮನಾಗುತ್ತಿದ್ದರು. ಹೊರಗಿನಿಂದ ಆ ಮೂವರೂ ಸಾಮಾನ್ಯವಾಗಿ ವರ್ತಿಸುವಂತೆ ಕಾಣುತ್ತಿದ್ದರೂ ಅವರೆ
ಲ್ಲರ ಮನಸ್ಸಿನಾಳದಲ್ಲಿ ದು:ಖ ಮಡುವುಗಟ್ಟಿತ್ತು. ಸುರೇಶ್ ಕಛೇರಿ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಂಡಿದ್ದರೆ ರಾಹುಲ್ ಕಾಲೇಜಿನಲ್ಲಿ ಮತ್ತು ಸ್ನೇಹಿತರೊಡನೆ ವ್ಯಸ್ತನಾಗಿರುತ್ತಿದ್ದ. ಶಾಲೆಯಿಂದ ಬಂದ ತಕ್ಷಣ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಿದ್ದ ರಾಜೀವಿಗೆ ಅಮ್ಮನ ಸಾವಿನ ದು:ಖವನ್ನು ಮರೆಯುವುದು ಸುಲಭವಾಗಿರಲಿಲ್ಲ. ತನ್ನೊಳಗಿನ ತುಮುಲಗಳ ಬಗೆಗೆ ಮಾತನಾಡಿದರೆ ಬೇರೆಯವರಿಗೆ ಬೇಸರವಾಗಬಹುದೆಂದು ಅವಳು ಎಲ್ಲವನ್ನು ನುಂಗಿಕೊಳ್ಳುತ್ತಾ ಮಂಕಾಗತೊಡಗಿದ್ದಳು. ಇಡೀ ಕುಟುಂಬ ದು:ಖದ ಜ್ವಾಲಾಮುಖಿಯನ್ನು ತುಂಬಿಕೊಂಡಿದ್ದರೂ ಹೊರ ನೋಟಕ್ಕೆ ಪ್ರಶಾಂತವಾದ ಪರ್ವತದಂತಿದ್ದು ಯಾವುದೇ ಕ್ಷಣದಲ್ಲಿ ಸ್ಫೋಟಿಸಬಹುದಾಗಿತ್ತು.
ದು:ಖವನ್ನು ವ್ಯಕ್ತಪಡಿಸುವ ಬಗೆಗೆ ನಮ್ಮೆಲ್ಲರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ರಕ್ತ ಸಂಬಂಧಿಗಳು ಸತ್ತಾಗ ಕೆಲವರು ನಿಜವಾಗಿ ದು:ಖವಾಗದಿದ್ದರೂ ಬೂಟಾಟಿಕೆಯ ಕಣ್ಣೀರಿಡುತ್ತಾರೆ. ಇನ್ನೂ ಕೆಲವರು ಕಣ್ಣೀರಿನ ಮೂಲಕ ದು:ಖವನ್ನು ಹೊರಹಾಕುವುದು ಮಾನಸಿಕ ದೌರ್ಬಲ್ಯದ ಲಕ್ಷಣ ಎಂದುಕೊಂಡಿರುತ್ತಾರೆ. ಗಂಡುಮಕ್ಕಳು ಸಾರ್ವಜನಿಕವಾಗಿ ಅಳಬಾರದು ಎಂದು ಬಾಲ್ಯದಿಂದಲೇ ಕಲಿಸಲಾಗುತ್ತದೆ. ದು:ಖದ ಸಮಯದಲ್ಲಿ ಸಹಜವಾಗಿರುವವರು ಮಾನಸಿಕ ಧೃಡತೆ ಉಳ್ಳವರು ಎಂದು ಬಿಂಬಿಸಲಾಗುತ್ತದೆ. ಆಶ್ಚರ್ಯವೆಂದರೆ ನನ್ನ ಆಪ್ತಸಲಹಾ ಕೊಠಡಿಯ ಏಕಾಂತದಲ್ಲಿ ದು:ಖವನ್ನು ಹೊರಹಾಕಲು ಮುಕ್ತವಾಗಿ ಅವಕಾಶ ನೀಡಿದಾಗ ಸುಮಾರಾಗಿ ಪ್ರತಿಯೊಬ್ಬರೂ ಅತ್ತು ಹಗುರಾಗುತ್ತಾರೆ. ಗಂಡು ಹೆಣ್ಣು, ಮೇಲು ಕೀಳು, ಓದು ವಿದ್ಯೆ, ವೃತ್ತಿ ವಯಸ್ಸು-ಇವೆಲ್ಲವುಗಳಲ್ಲಿ ಏನೇ ವ್ಯತ್ಯಾಸವಿದ್ದರೂ ಎಲ್ಲರೂ ಕಣ್ಣೀರಿನಿಂದ ಮಾತ್ರ ದು:ಖವನ್ನು ಕಡಿಮೆಮಾಡಿಕೊಳ್ಳುತ್ತಾರೆ.
ನಾವೆಲ್ಲರೂ ನೆನಪಿಡಬೇಕಾಗಿದ್ದು ನಮ್ಮೆಲ್ಲಾ ಹೊರ ಮುಖವಾಡಗಳ ಹಿಂದೆ ಎಲ್ಲರೂ ಮನುಷ್ಯ ಸಹಜವಾದ ಭಾವನೆಗಳನ್ನು ಹೊಂದಿರುವವರು. ದು:ಖವಾದಾಗ ಕಣ್ಣೀರು ಬರುವುದು ಅತ್ಯಂತ ಸಹಜವಾದದ್ದು. ಕಣ್ಣೀರನ್ನು ಹತ್ತಿಕ್ಕುವುದು ಗಟ್ಟಿತನವಲ್ಲ, ನಮ್ಮ ದು:ಖವನ್ನು ಸಹಜವಾಗಿ ವ್ಯಕ್ತಪಡಿಸದೆ ಗಟ್ಟಿತನದ ಸೋಗುಹಾಕುವುದು ನಿಜವಾದ ದೌರ್ಬಲ್ಯ.
ಸಾವಿನ ದು:ಖಕ್ಕೆ ಕಣ್ಣೀರು ಸಹಜವಾದ ಹೊರದಾರಿ. ಸತ್ತವರ ನೆನಪಾದೊಡನೆ ನಮ್ಮಲ್ಲಿ ದು:ಖ ಉಮ್ಮಳಿಸುತ್ತಿದ್ದರೆ ಅದು ನಮ್ಮೊಳಗೆ ದು:ಖದ ಖಜಾನೆ ಇನ್ನೂ ಖಾಲಿಯಾಗಿಲ್ಲ ಎನ್ನುವುದರ ಸೂಚನೆ. ದು:ಖ ಸಹಜವಾಗಿ ಹೊರಬಂದಾಗ ಸಮಯ ಕಳೆದಂತೆ ನಮ್ಮೊಡನೆ ಇಲ್ಲದವರೂ ನಮ್ಮೊಳಗೆ ಸಿಹಿಯಾದ ನೆನಪಾಗಿ ಉಳಿಯುತ್ತಾರೆ. ಅವರ ಚಿತ್ರ ಕಣ್ಮುಂದೆ ಬಂದೊಡನೆ ವಿಷಾದದ ಛಾಯೆಯ ನಡುವೆಯೂ ಮನಸ್ಸು ಸ್ಥಿಮಿತದಲ್ಲಿರುತ್ತದೆ.
ನಿಮಗೆ ಕಣ್ಣೀರು ಬರುತ್ತಿಲ್ಲ ಮತ್ತು ದು:ಖವೂ ಮಾಸುತ್ತಿಲ್ಲ ಎಂದಾದರೆ ಅಥವಾ ಕಣ್ಣಿರು ಹರಿಸಿದ ಮೇಲೂ ದು:ಖವನ್ನು ಮರೆಯುವುದು ಸಾಧ್ಯವೇ ಇಲ್ಲ ಎಂದಾದರೆ ತಜ್ಞ ಆಪ್ತಸಲಹೆಗಾರರ ಸಹಾಯ ಕೋರಬಹುದು.
ವಸಂತ್ ನಡಹಳ್ಳಿ
ದಿ.ಡಿ.ಕೆ.ರವಿ ಅವರ ಪುಣ್ಯತಿಥಿ ಅಂಗವಾಗಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ
ಉತ್ತಮ ಶಿಕ್ಷಣ ನೀಡಿದರಷ್ಟೆ ಸಾಲದು ಒಳ್ಳೆಯ ಸಂಸ್ಕಾರವನ್ನೂ ಸಹ ನಮ್ಮ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸಂತೆ ಮೈದಾನದಲ್ಲಿ ಈಚೆಗೆ ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘ ಹಾಗೂ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರ ಆಶ್ರಯದಲ್ಲಿ ದಿ.ಡಿ.ಕೆ.ರವಿ ಅವರ ಪುಣ್ಯತಿಥಿ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ, ಪರೀಕ್ಷಾ ಸಾಮಗ್ರಿ, ಬಡವರಿಗೆ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ೮೦ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ತಾಲೂಕು ಪಂಚಾಯತಿ ಮಾಜಿ ಸದಸ್ಯ ಜಿ.ಮುನಿರಾಜು ಕೊಡುಗೆಯಾಗಿ ನೀಡಿದರೆ, ೨೦೧೩–-೧೪ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪಂಚಾಯತಿ ವ್ಯಾಪ್ತಿಯ ಮೂವರಿಗೆ ತಲಾ ೧೦೦೦ ರೂ.ನಗದು ಬಹುಮಾನವನ್ನು ಬೆಂಗಳೂರಿನ ನರಸಿಂಹಯ್ಯನವರು ನೀಡಿದರು.
೬ ಮಂದಿ ಬಡವರಿಗೆ ವಸ್ತ್ರಗಳನ್ನು ಹಾಗೂ ಇಬ್ಬರು ಅಂಗವಿಕಲರಿಗೆ ಗಾಲಿಖುರ್ಚಿಗಳನ್ನು ಬೆಂಗಳೂರಿನ ವಿಜಯಕುಮಾರಿರವರು ನೀಡಿದರೆ, ೧೦೦೦ ಮಂದಿಗೆ ಚೀಮಂಗಲ ಗ್ರಾಮಸ್ಥರಿಂದ ಸಮೂಹಿಕ ಅನ್ನಸಂತರ್ಪಣೆಯನ್ನು ನಡೆಸಿಕೊಟ್ಟರು. ಬಸವೇಗೌಡರ ಕುಟುಂಬದವರು ನೆರೆದಿದ್ದ ಎಲ್ಲರಿಗೂ ಪಾನಕ, ಮಜ್ಜಿಗೆ ಹೆಸರು ಬೇಳೆಯ ಸೇವೆಯನ್ನು ಒದಗಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅರಿಕೆರೆ ಮುನಿರಾಜು, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಎಸ್.ವಿ.ನಾಗರಾಜ್ರಾವ್, ವಾಣಿಜ್ಯ ಇಲಾಖೆಯ ನರಸಿಂಹಯ್ಯ, ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿವಶಂಕರ್, ಸಮಾಜ ಸೇವಕಿ ಬೆಂಗಳೂರಿನ ವಿಜಯಕುಮಾರಿ, ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಲಕ್ಷ್ಮೀನಾರಾಯಣ, ಡಿ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯೆ ಶೋಭ, ಸಿ.ಕೆ.ಮಂಜುನಾಥ, ಬಿ.ಮುನಿವೆಂಕಟಪ್ಪ, ಮೋಹನ್, ಆದರ್ಶ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಸುಲ ಚಿನ್ನಮ್ಮ ನಾಟಕ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದ ಬಳಿ ಶ್ರೀರಾಮನವಮಿ ಪ್ರಯುಕ್ತ ಶನಿವಾರ ರಾತ್ರಿ ಚೌಡಸಂದ್ರ ಗ್ರಾಮಸ್ಥರು ಸಾಸುಲ ಚಿನ್ನಮ್ಮ ತೆಲುಗು ನಾಟಕವನ್ನು ಆಯೋಜಿಸಿದ್ದರು.
ಪೌರಾಣಿಕ ನಾಟಕ ಸಾಸುಲ ಚಿನ್ನಮ್ಮ ಆಂದ್ರ ಕರ್ನಾಟಕ ಗಡಿ ಭಾಗದಲ್ಲಿ ಪ್ರಸಿದ್ಧವಾದುದು. ದೇವರ ವರದಿಂದ ಜನಿಸುವ ಸಾಸುಲ ಚಿನ್ನಮ್ಮ ತವರು ಮನೆಯಲ್ಲಿ ಸುಖವಾಗಿ ಬೆಳೆದು ಅತ್ತೆಯ ಮನೆಯಲ್ಲಿ ಪಡಬಾರದ ಕಷ್ಟ ಅನುಭವಿಸಿ ನಂತರ ತವರಿನ ಸಹಾಯ ಪಡೆದು ಸುಖಾಂತ್ಯವಾಗುವ ಕಥೆ ಜನಜನಿತ. ನಡುನಡುವೆ ಬರುವ ಹಾಸ್ಯ ಪ್ರಸಂಗಗಳೂ ಜನಪ್ರಿಯ. ಈ ರೀತಿಯ ನಾಟಕಗಳನ್ನಾಡಿಸುವುದರಿಂದ ಮಳೆ ಬೆಳೆ ಆಗುತ್ತದೆಂಬ ನಂಬಿಕೆ ಜನಪದರದ್ದು. ಕಲಾ ಪೋಷಣೆಯೊಂದಿಗೆ ಮನರಂಜನೆ ಒದಗಿಸಿದ ಈ ನಾಟಕಕ್ಕೆ ಅಪಾರ ಜನರು ಆಗಮಿಸಿದ್ದರು.
ಚೇಳೂರಿನ ಕೋನಪ್ಪ, ನರಸಿಂಹ, ನರಸಿಂಹಮೂರ್ತಿ, ಗಿರೀಶ್, ತಿರುಮಳೇಶ್, ಬಾಬು, ಸರಸ್ವತಮ್ಮ, ಲಕ್ಷ್ಮಮ್ಮ ಪಾತ್ರಧಾರಿಗಳಾಗಿ ನಾಟಕದಲ್ಲಿ ಅಭಿನಯಿಸಿದ್ದರು.
ಮಂಗಳನ ಅಂಗಳದಲ್ಲಿ ಕುತೂಹಲಿ ಸಂಚಾರಿ – ಭಾಗ 2
ಒಂದು ಟನ್ ತೂಕದ ಈ ಸಂಚಾರಿ ಹಿಂದಿನ ರೋವರುಗಳಿಗಿಂತ ಗಾತ್ರದಲ್ಲಿ ಐದು ಪಟ್ಟು ದೊಡ್ಡದು, ಹಾಗಾಗಿ ಕಡಿಮೆ ಗುರುತ್ವದ ಕುಜನೆಲದಲ್ಲಿ ಅದನ್ನು ಸರಾಗವಾಗಿ ಇಳಿಸಿದ್ದು ಬಲು ದೊಡ್ಡ ಸಾಹಸವೇ. ಅದಕ್ಕಾಗಿ ಬಳಸಿದ ಬಾನ ಕ್ರೇನ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿ ಅನ್ಯಗ್ರಹದಲ್ಲಿ ಅಳವಡಿಸಲಾಗಿದೆ. ಹಿಂದೆ ರೋವರುಗಳನ್ನು ಕೆಳಕ್ಕಿಳಿಸುವಾಗ 70-100 ಕಿಮೀ ವಿಸ್ತಾರವನ್ನು ಗುರಿಯಾಗಿ ಪರಿಗಣಿಸಿದ್ದರೆ ಈ ಸಲ ಬರೀ 10 ಕಿಮೀ ವಿಸ್ತಾರದೊಳಗೆ ಇಳಿಸಲು ಸಾಧ್ಯವಾಗಿದ್ದೂ ಒಂದು ಸಾಧನೆಯೇ.
ಇನ್ನೂ ಒಂದು ವಿಶೇಷತೆಯೆಂದರೆ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಒಂದೇನಾದರೂ ವಿಫಲಗೊಂಡರೆ ಇನ್ನೊಂದು ಕಾರ್ಯನಿರ್ವಹಿಸಲು ಸದಾಸಿದ್ಧವಾಗಿದೆ. ಸೌರವಿದ್ಯುತ್ ಬದಲಾಗಿ ಪ್ಲುಟೋನಿಯಂ-238ನ ಅಣುಕ್ಷಯದಿಂದ ತಯಾರಾಗುವ ವಿದ್ಯುತ್ತನ್ನು ಕ್ಯೂರಿಯಾಸಿಟಿಯಲ್ಲಿ ಬಳಸಲಾಗುತ್ತಿದೆ. ಮಂಗಳನಲ್ಲಿ ಆಗೀಗ ಬೀಸುವ ಬಿರುಗಾಳಿಯಿಂದಾಗಿ ಸೌರಫಲಕಗಳು ದೂಳು ಮುಚ್ಚಿ ಮಸುಕಾಗಿ ಅವುಗಳ ಕಾರ್ಯಕ್ಷಮತೆ ತಗ್ಗುವದರಿಂದ ಈ ತಂತ್ರ. 687 ಭೂದಿನಗಳು ಅಥವಾ ಮಂಗಳ ಗ್ರಹದಲ್ಲಿ ಒಂದು ವರ್ಷ ಕಾಲ ಈ ಸಂಚಾರಿ ವಾಹನ ಓಡಾಡುವುದಕ್ಕೆ ಹಾಗೂ ಕ್ಯಾಮೆರಾ, ರೊಬಾಟ್ ಕೈ ಮತ್ತಿತರ ಉಪಕರಣಗಳ ಚಲನೆಗೆ ಅವಶ್ಯವಿರುವಷ್ಟು 110 ವ್ಯಾಟ್ ವಿದ್ಯುತ್ತನ್ನು ಇದು ಸದಾಕಾಲ ಒದಗಿಸುತ್ತದೆ. ಅಣುಜನರೇಟರಿನಿಂದ ಹದವಾಗಿ ಬಿಸಿಗೊಂಡ ದ್ರವವೊಂದು ಉಪಕರಣಗಳನ್ನು ಬೆಚ್ಚಗಿಡುವುದಕ್ಕೆ ಸಹಾಯ ಮಾಡುತ್ತದೆ. ಅಲ್ಪ ಸೌರವಿದ್ಯುತ್ತನ್ನು ಒದಗಿಸುವ ಲಿಥಿಯಂ ಬ್ಯಾಟರಿಗಳೂ ಅಲ್ಲಿವೆ. ತುರ್ತು ಪರಿಸ್ಥಿತಿ ಎದುರಾಗಿ ಹೆಚ್ಚುವರಿ ವಿದ್ಯುತ್ತೇನಾದರೂ ಅಗತ್ಯ ಬಿದ್ದಲ್ಲಿ ಈ ಬ್ಯಾಟರಿಗಳು ಪೂರೈಸುತ್ತವೆ.
ಮಂಗಳಪಯಣಕ್ಕೆ ಭರದಿಂದ ಸಿದ್ಧತೆ
ಭೂಮಿಯ ಆಚೆಯೂ ಜೀವಿಗಳಿರಬಹುದೇ, ಅನ್ಯಗ್ರಹಗಳಲ್ಲಿ ವಾಸಯೋಗ್ಯ ವಾತಾವರಣದ ಸಾಧ್ಯತೆಗಳೆಷ್ಟು ಎಂಬುದರ ಬಗ್ಗೆ ಮಾನವನ ಅನ್ವೇಷಣಾ ಬುದ್ಧಿ ಮುಂಚಿನಿಂದಲೂ ಸಂಶೋಧನೆ ನಡೆಸಿದೆ.
1969 ರಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿರಿಸಿದ ಎರಡೇ ವಾರಗಳಲ್ಲಿ ಬ್ರೌನ್ ಎಂಬ ರಾಕೆಟ್ ವಿಜ್ಞಾನಿ ಮಂಗಳನಲ್ಲಿಗೆ ಮಾನವನನ್ನು ಕಳಿಸುವ ನೀಲನಕ್ಷೆಯನ್ನು ಸಿದ್ಧಪಡಿಸಿ ನಾಸಾದ ಅಧಿಕಾರಿಗಳ ಕೈಗಿರಿಸಿದ್ದ. ಆತನ ಪ್ರಕಾರ ಭೂಮಿಯ ಹೊರ ಕಕ್ಷೆಗೆ ಗಗನನೌಕೆಯನ್ನು ಹೊತ್ತ ರಾಕೆಟ್ ಹಾರಬೇಕು, ಅಲ್ಲಿಂದ ನೌಕೆಯನ್ನು ಮಂಗಳಗ್ರಹಕ್ಕೆ ಕಳಿಸಬೇಕು. ಗಗನನೌಕೆಗಳೇನೋ ಮಂಗಳಗ್ರಹಕ್ಕೆ ಹಾರಿವೆ, ಆದರೆ ಮಾನವನನ್ನು ಅಲ್ಲಿಗೆ ಕಳಿಸಬೇಕೆಂಬ ಬ್ರೌನ್ ಕನಸು ಇನ್ನೂ ನನಸಾಗಿಲ್ಲ.
ಬಾಹ್ಯಾಕಾಶ ಹಾಗೂ ಅದಕ್ಕೆ ಸಂಬಂಧಿತ ಗಣಿತ, ಭೌತ, ರಸಾಯನ, ಜೀವ ಇತ್ಯಾದಿ ವಿಜ್ಞಾನ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹೆಚ್ಚು ಸುಧಾರಣೆಗೊಂಡಂತೆ ಕೆಲವು ವರ್ಷಗಳಿಂದ ನಮ್ಮ ಸಮೀಪದಲ್ಲಿರುವ ಮಂಗಳಗ್ರಹ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಂಗಳ ಗ್ರಹಕ್ಕೆ ಪ್ರವಾಸ ನಡೆಸುವ, ಮುಂದೆ ಅಲ್ಲಿಯೇ ಮಾನವರಿಗೆ ವಸತಿ ಕಲ್ಪಿಸುವ ಹಾಗೂ ಆ ಇಡೀ ಗ್ರಹವನ್ನೇ ಮಾನವನ ವಸಾಹತು ಮಾಡುವ ದಿನಗಳು ದೂರವಿಲ್ಲ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.
2001 ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ 2030ರಲ್ಲಿ ಕೆಂಪು ಗ್ರಹಕ್ಕೆ ಮಾನವನ್ನು ಕಳಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ಅರೋರಾ ಎಂಬ ಯೋಜನೆಯನ್ನು ಹುಟ್ಟು ಹಾಕಿತು. ಅಮೆರಿಕದ ಮಾಜಿ ಅಧ್ಯಕ್ಷ ಬುಶ್ 2020 ಕ್ಕೆ ಚಂದ್ರನಲ್ಲಿಗೆ, ಆನಂತರ ಮಂಗಳ ಗ್ರಹಕ್ಕೆ ಮಾನವನ ಉಡ್ಡಯನ ಎಂದು 2004 ರಲ್ಲಿ ಘೋಷಿಸಿದರು.
ಆದರೆ ಮಂಗಳನಲ್ಲಿಗೆ ಮಾನವ ಪ್ರಯಾಣ ಹೊರಟರೆ ಮುಂದಿರುವ ಸವಾಲುಗಳು ಒಂದೆರಡಲ್ಲ. ಭೂಮಿಯ ವಾಯುಮಂಡಲ ಮತ್ತು ಕಾಂತ ಕ್ಷೇತ್ರದ ಸುರಕ್ಷೆಯಿಂದ ಹೊರಬಿದ್ದೊಡನೆ ಎದುರಾಗುವ ಗಾಮಾ ಕಿರಣಗಳು, ಪ್ರೋಟಾನ್ ಪ್ರವಾಹಗಳು, ಸೂರ್ಯನಿಂದ ಸೂಸುವ ಉರಿಜ್ವಾಲೆಗಳು ಕಾಸ್ಮಿಕ್ ಕಿರಣಗಳ ಅಪಾಯ ಹೀಗೆ ಪಟ್ಟಿ ಸಾಗುತ್ತದೆ. ಮುಂದೆ ಅಪರಿಚಿತ, ವಾಸಯೋಗ್ಯವಲ್ಲದ ಗ್ರಹದಲ್ಲಿ ಬದುಕುಳಿಯುವುದು ಸುಲಭವಲ್ಲ. ಚಂದ್ರನವರೆಗೆ ಹಾರಿದ್ದನ್ನು ಬಿಟ್ಟರೆ, ಇದುವರೆಗೆ ಅಂತರಿಕ್ಷ ಅಟ್ಟಣಿಗೆಯವರೆಗೆ (ಅಟ್ಟಣಿಗೆ ಅಥವಾ ಆಯ್.ಎಸ್.ಎಸ್. ಹಾರಾಡುತ್ತಿರುವುದು ಬರೀ 320 ಕಿಮೀ ಎತ್ತರದಲ್ಲಿ) ಮಾತ್ರವೇ ಉಪಗ್ರಹದಲ್ಲಿ ಕುಳಿತು ಮಾನವ ಹಾರಿಹೋಗಿ, ಅಲ್ಲಿ ಆರು ತಿಂಗಳ ಕಾಲ ಉಳಿದು ಮರಳಿ ತಾಯಿನೆಲ ಸೇರಿಕೊಳ್ಳಲು ಸಾಧ್ಯವೆಂದು ಸಾಧಿಸಿಯಾಗಿದೆ. ಆದರೆ ಚಂದ್ರ ಅಥವಾ ಮಂಗಳನವರೆಗೆ ಹಾರಿ, ಅಲ್ಲಿ ಕೆಲ ಕಾಲ ಉಳಿಯಬೇಕೆಂದರೆ ಅಂತರಿಕ್ಷದ ಅಪಾಯಗಳನ್ನು ಸಮರ್ಥವಾಗಿ ಎದುರಿಸಿ ಆ ಗ್ರಹದಲ್ಲಿ ದೊರಕುವ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕುವ ಚಾಕಚಕ್ಯತೆಯನ್ನು ಅಳವಡಿಸಿಕೊಳ್ಳಬೇಕು. ಮಾನವ ಸಮಾಜವಿರದೆಡೆ, ಇರುವ ಕೆಲವೇ ಜನರೊಡನೆ ಹೊಂದಿ ಬೆರೆಯುವ ಒಗ್ಗಟ್ಟು, ಸಾಮರಸ್ಯದ ಸ್ವಭಾವಗಳನ್ನು ಮೈಗೂಡಿಸಿಕೊಳ್ಳಬೇಕು. ಹಗಲು ರಾತ್ರಿಗಳ ಜೈವಿಕ ಗಡಿಯಾರದ ಅಸಮತೋಲನವನ್ನು, ಅದರಿಂದಾಗುವ ದೇಹದ ವೈಪರೀತ್ಯಗಳನ್ನು ಸಹಿಸಿಕೊಳ್ಳುವಂತಿರಬೇಕು.
ಆದರೂ ಮಾನವನ ಸಾಹಸ ಪೃವೃತ್ತಿ ಚಂದ್ರ, ಮಂಗಳರನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಮೊದಲು ಉಪಗ್ರಹ, ದೂರದರ್ಶಕಗಳ ಮೂಲಕ ದೂರದಿಂದಲೇ ಆ ಕಾಯಗಳ ಬಗ್ಗೆ ಶೋಧ ನಡೆಸಿ, ಆನಂತರ ಯಂತ್ರೋಪಕರಣಗಳನ್ನು ಅಲ್ಲಿಗೇ ಕಳುಹಿಸಿ ಮತ್ತಿಷ್ಟು ಮಾಹಿತಿ ಪಡೆಯಲಾಗುತ್ತಿದೆ. ಮಂಗಳಯಾನಕ್ಕೆ ಮುಂದಾದ ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ, ಜಪಾನ್ ಮತ್ತು ಚೀನಾ ದೇಶಗಳ ಪಟ್ಟಿಗೆ ಭಾರತವೂ ಸೇರಲಿದೆ. ನಮ್ಮ ಇಸ್ರೋ ಸಂಸ್ಥೆ 2013ರಲ್ಲಿ ಮಂಗಳನ ಅಧಯಯನಕ್ಕೆಂದು ಮಾನವರಹಿತ ಉಪಗ್ರಹ ನೌಕೆಯನ್ನು ಹಾರಿಬಿಡಲಿದೆ.
ಇತ್ತ ಭೂಮಿಯ ಮೇಲೂ ಮಂಗಳಕ್ಕೆ ಹಾರಿ ಹೋಗಲು ಉತ್ಸಾಹ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ‘ಮಾರ್ಸ್ 500’ ಆ ನಿಟ್ಟಿನಲ್ಲಿ ರಷ್ಯಾ ಮತ್ತು ಐರೋಪ್ಯ ದೇಶಗಳು ನಡೆಸಿದ ಒಂದು ಪ್ರಯೋಗ. ಮಾಸ್ಕೋದ ‘ರಷ್ಯನ್ ಜೀವವೈದ್ಯಕೀಯ ಸಂಸ್ಥೆ’ ಯ ಆವರಣದಲ್ಲಿ ನಿರ್ಮಿಸಲಾದ ವಿಶೇಷ ಗೂಡೊಂದರಲ್ಲಿ ಆರು ತಂತ್ರಜ್ಞರು ಬಾನಪ್ರವಾಸದ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಮೊದಲೊಮ್ಮೆ 105 ದಿನಗಳು ಮಗದೊಮ್ಮೆ 520 ದಿನಗಳ ಕಾಲ ಏಕಾಂತವಾಸದಲ್ಲಿ ಕಳೆದರು.
ಎರಡನೆಯ 520 ದಿನಗಳ ಪ್ರಯೋಗದಲ್ಲಿ, 250 ದಿನಗಳ ‘ಮಂಗಳ ಗ್ರಹಕ್ಕೆ ಪಯಣ’, ಮುಂದೆ ಒಂದು ತಿಂಗಳು ‘ಮಂಗಳನ ನೆಲದಲ್ಲಿ ಇಳಿಯುವುದು ಹಾಗೂ ಅಲ್ಲಿ ಅನ್ವೇಷಣೆ ನಡೆಸುವುದು’ ಹಾಗೂ ಮುಂದಿನ 230 ದಿನಗಳು ‘ಮರಳಿ ಭೂಮಿಗೆ’ ಇವುಗಳ ಅಣಕುಕಾರ್ಯ ನಡೆಯಿತು.
ದೂರದ ಬಾನಪ್ರವಾಸದಲ್ಲಿ ಎದುರಿಸಬೇಕಾದ ಮಾನಸಿಕ ಮತ್ತು ವೈದ್ಯಕೀಯ ಮಗ್ಗಲುಗಳ ಅಧ್ಯಯನ ಅಲ್ಲಿ ಪ್ರಮುಖ ಉದ್ದೇಶವಾಗಿತ್ತು. ಹೊರಗಿನ ಜಗತ್ತಿಗೆ ಸಂಪರ್ಕ ಫೋನು ಮತ್ತು ಇಮೇಲ್ ಮೂಲಕ, ಬಾಹ್ಯಾಕಾಶದಲ್ಲಿದ್ದಂತೆ 20 ನಿಮಿಷಗಳ ಕಾಲದ ಸಂಪರ್ಕ ತಡೆ, ಮಂಗಳಯಾನದ ಚಟುವಟಿಕೆಗಳನ್ನು (ಉಡ್ಡಯನ, ಬಾಹ್ಯ ಆಕಾಶದಲ್ಲಿ ಹಾರಾಟ, ಮಂಗಳನ ವಾತಾವರಣಕ್ಕೆ ಪ್ರವೇಶ, ಅಲ್ಲಿಂದ ಮತ್ತೆ ಮರಳುವಾಗಿನ ಪ್ರಕ್ರಿಯೆಗಳು ಇತ್ಯಾದಿ) ಅನುಭವಿಸುವಂತೆ ಕೃತಕ ಏರ್ಪಾಡು ಮಾಡಲಾಗಿತ್ತು. ತುರ್ತುಸಂದರ್ಭದಲ್ಲಿ ಮಾತ್ರವ್ರೇ ಅವರಿಗೆ ಬಾಹ್ಯ ನೆರವು ದೊರೆಯುವಂತೆ ಕಲ್ಪಿಸಲಾಗಿತ್ತು.
ತಂತ್ರಜ್ಞಾನ, ವೈದ್ಯಕೀಯ, ಜೀವಶಾಸ್ತ್ರ ಮತ್ತು ಬಾಹ್ಯ ಆಕಾಶ ಕುರಿತಾದ ತಜ್ಞರಾದ ಆ ಮಾರ್ಸೊನಾಟ್ಗಳು (ಅವರಲ್ಲಿ ಮೂವರು ರಷ್ಯನ್ನರು, ಇಬ್ಬರು ಯುರೋಪಿನವರು ಹಾಗೂ ಒಬ್ಬ ಚೀನಾದ ತಂತ್ರಜ್ಞ) ಕಳೆದ ನವೆಂಬರ್ 18ರಂದು 17 ತಿಂಗಳ ಏಕಾಂತ ವಾಸದ ನಂತರ ಹೊರಬಂದರು. ಮತ್ತೂ ಒಂದು ತಿಂಗಳು ಅವರನ್ನು ಜೀವವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಸಂಘಜೀವಿ ಮಾನವ ದೀರ್ಘಕಾಲ ಏಕಾಂತವಾಸದಲ್ಲಿದ್ದಾಗ ಆತನ ದೇಹ ಮತ್ತು ಮನಸ್ಸುಗಳ ಅವಸ್ಥೆ, ಮಾನಸಿಕ ಒತ್ತಡದಲ್ಲಿದ್ದಾಗ ದೇಹದ ಹಾರ್ಮೋನುಗಳು, ರೋಗನಿರೋಧಕ ಶಕ್ತಿ ಇತ್ಯಾದಿಗಳಲ್ಲಾಗುವ ಬದಲಾವಣೆಗಳು ಒಟ್ಟಾರೆ ತಂತ್ರಜ್ಞರ ಮಾತು, ಊಟ, ಆಟ, ಕೆಲಸ, ವ್ಯಾಯಾಮ, ನಿದ್ದೆ ಪ್ರತಿಯೊಂದೂ ಚಟುವಟಿಕೆಯ ಅಧ್ಯಯನಕ್ಕೆಂದು ಮಾರ್ಸ್500 ಅಣಕು ನೌಕೆಯಲ್ಲಿ ಸುಮಾರು ನೂರು ಪ್ರಯೋಗಗಳು ನಡೆದಿವೆ. ಇಂದು ಅವರ ಅನುಭವ ದಾಖಲೆಗಳಿಗೆ ಜಗತ್ತಿನ ಮೂಲೆಮೂಲೆಗಳ ವಿಜ್ಞಾನಿಗಳಿಂದ ಎಲ್ಲಿಲ್ಲದ ಬೇಡಿಕೆಯಿದೆ.
ಆದರೆ ಅಲ್ಲಿ ಬಾಹ್ಯ ಆಕಾಶದ ವಿಕಿರಣಗಳ ಪ್ರಭಾವದ ಅಧ್ಯಯನ ಇರಲಿಲ್ಲ. ಇದುವರೆಗಿನ ಸಂಶೋಧನೆ ಮತ್ತು ಅನುಭವಗಳ ಪ್ರಕಾರ ವಿಕಿರಣ ಸೇವನೆ ಮಾನವ ದೇಹಕ್ಕೆ ಬಹಳಷ್ಟು ಹಾನಿಯುಂಟುಮಾಡುತ್ತದೆ. ಶೂನ್ಯ ಗುರುತ್ವದ ಅನುಭವವೂ ಅಲ್ಲಿರಲಿಲ್ಲ. ದೇಹವನ್ನು ಕೆಳಕ್ಕೆ ಜಗ್ಗುವ ಗುರುತ್ವದ ಬಲ ಇರದಿದ್ದಾಗ ಮಾಂಸಖಂಡಗಳು ಬಲಹೀನವಾಗುತ್ತವೆ, ಅದರಲ್ಲೂ ದೇಹಭಾರವನ್ನು ಹೊರುವ ಸೊಂಟ, ಮೊಣಕಾಲು ಮತ್ತು ಹಿಮ್ಮಡಿಗಳು ಹೆಚ್ಚು ಹಾನಿಗೊಳಗಾಗುತ್ತವೆ. ದೇಹದ ಅನೈಚ್ಛಿಕ ಪ್ರತಿಕ್ರಿಯೆಗಳು (ಉದಾ: ಬೆಂಕಿ ತಾಗಿದಾಗ ಕೈ ಹಿಂದಕ್ಕೆಳೆದುಕೊಳ್ಳುವುದು). ಮಂಗಳನಲ್ಲಿ ಗುರುತ್ವ ಇಲ್ಲಿಗಿಂತ ಮೂರು ಪಟ್ಟು ಕಡಿಮೆ ಇದೆ. ವಿರಳ ವಾತಾವರಣವಿದೆ.
ನೈಸರ್ಗಿಕ ಆಮ್ಲಜನಕ ಅಲ್ಲಿಲ್ಲ, ವಾತಾವರಣದಲ್ಲಿ ಮಾನವ ದೇಹಕ್ಕೆ ಒಗ್ಗದ ಇಂಗಾಲದ ಡೈಆಕ್ಸೈಡ್ ಅಧಿಕವಾಗಿದೆ. ಕೃತಕವಾಗಿ ವಾಯುಪೂರೈಕೆ ಆಗಬೇಕು, ಆ ವ್ಯವಸ್ಥೆಯೂ ಅಲ್ಲಿರಲಿಲ್ಲ. ಆದರೂ ಕೂಡ ಮಾರ್ಸ್500 ಪ್ರಯೋಗ ಮಂಗಳಪಯಣದ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಒದಗಿಸಿದೆ.
ಮಂಗಳ ಗ್ರಹದಲ್ಲಿ ಇಳಿಯುವುದೆಲ್ಲಿ?
ಸುಮಾರು ಮೂರು-ಮೂರುವರೆ ನೂರು ಕೋಟಿ ವರ್ಷಗಳ ಹಿಂದಿನಿಂದಿದ್ದ ಮಂಗಳನ ಆಳ ಕುಳಿಗಳೆಂದರೆ ವಿಜ್ಞಾನಿಗಳಿಗೆ ಎಲ್ಲಿಲ್ಲದ ಆಕರ್ಷಣೆ. ಏಕೆಂದರೆ ಒಂದು ಕಾಲದಲ್ಲಿ ಅಪಾರ ಪ್ರಮಾಣದ ನೀರನ್ನು ಹೊಂದಿದ್ದ ಅವೀಗ ಹಳೆಯ ಹೂಳುಗಳ, ಶಿಲಾಪಾಕಗಳ ಅವಶೇಷಗಳನ್ನು ಅವಿತಿಟ್ಟುಕೊಂಡ ಭಂಡಾರಗಳು.
ಈ ಹೊಂಡಗಳಲ್ಲಿ ಹಿಂದೆಂದಾದರೂ ಸೂಕ್ಷ್ಮಜೀವಿಗಳು ವಾಸವಾಗಿದ್ದ ಲಕ್ಷಣಗಳೇನಾದರೂ ಈಗ ದೊರೆತಾವೇ? ಮುಂದೆ ಮಾನವ ವಸತಿಗೆ ಅನುಕೂಲವಾಗಬಹುದಾದ ಅಂಶಗಳೇನಾದರೂ ಕಂಡುಬಂದಾವೇ? ಯಶಸ್ವೀ ಅಧ್ಯಯನಕ್ಕೆಂದು ಪ್ರಯೋಗಾಲಯವನ್ನು ಇಂಥದ್ದೊಂದು ಕುಳಿಯಲ್ಲಿಯೇ ಇಳಿಸಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಯಿತು. ಆದರೆ ಮಂಗಳನಲ್ಲಿರುವ ನೂರಾರು ಕುಳಿಗಳಲ್ಲಿ ಯಾವುದು ಉತ್ತಮ? ಸೂಕ್ತ ಸ್ಥಳ ಆಯ್ಕೆಗಾಗಿ ಆರು ವರ್ಷಗಳ ಹಿಂದೆಯೇ ನೂರು ಬಾಹ್ಯಾಕಾಶ ವಿಜ್ಞಾನಿಗಳನ್ನು ಒಟ್ಟಾಗಿಸಿ ಸರಣಿ ಕಾರ್ಯಾಗಾರಗಳಲ್ಲಿ ಚರ್ಚೆ ನಡೆಯಿತು. ಉಪಗ್ರಹ ಚಿತ್ರಗಳನ್ನು ಆಧರಿಸಿ, ಸಂಚಾರಿ ವಾಹನದ ಸುರಕ್ಷೆಯ ದೃಷ್ಟಿಯಿಂದ ಆರಿಸಿದ ಮೂವತ್ತು ಸ್ಥಳಗಳಲ್ಲಿ ಅಂತಿಮವಾಗಿ ನಾಲ್ಕನ್ನು ವಿಜ್ಞಾನಿಗಳು ಹೆಸರಿಸಿದರು. ನೌಕೆಯ ಉಡಾವಣೆಯ ಕೆಲವೇ ತಿಂಗಳ ಮೊದಲು ಅತ್ಯಧಿಕ ವೈಜ್ಞಾನಿಕ ಮಾಹಿತಿಗಳನ್ನು ಹೊಂದಿರಬಹುದಾದ ಗೇಲ್ ಕುಳಿಯೇ ಕ್ಯೂರಿಯಾಸಿಟಿ ಲ್ಯಾಂಡಿಗಿಗೆ ಪ್ರಶಸ್ತ ಸ್ಥಳ ಎಂದು ನಿರ್ಧರಿಸಲಾಯಿತು.
ಸುಮಾರು 154 ಕಿಮೀ ವ್ಯಾಸದ ಬೋಗುಣಿಯಾಕಾರದ ಕುಳಿ ಗೇಲ್ ಮಂಗಳ ಗ್ರಹದ ಸಮಭಾಜಕ ವೃತ್ತದ ಬಳಿಯಲ್ಲಿ ಒಡಮೂಡಿದೆ. ಆಸ್ಟ್ರೇಲಿಯಾದ ವಾಲ್ಟರ್ ಗೇಲ್ ಎಂಬ ಹವ್ಯಾಸೀ ಖಗೋಳಶಾಸ್ತ್ರಜ್ಞನ ನೆನಪಿಗೆ ಈ ಬೃಹತ್ ಹೊಂಡ ತನ್ನ ಹೆಸರು ಪಡೆದಿದೆ. ಹೊಂಡದ ಮಧ್ಯದಲ್ಲಿ ಐದು ಕಿಮೀ ಎತ್ತರದ ಆವೆಮಣ್ಣಿನಿಂದ ರಚಿತಗೊಂಡಂತೆ ಕಾಣುವ ಪದರಪದರದ ಬೆಟ್ಟ. ಇದೇ ಶಾರ್ಪ್ಬೆಟ್ಟ. ಚೂಪಾದ ಬೆಟ್ಟದ ತುದಿ ಗೇಲ್ ಕುಳಿಯಿಂದ ಎತ್ತರಕ್ಕೆ ಏರಿ ಆಕಾಶಕ್ಕೆ ಮುಖ ಚಾಚಿದೆ. ಶಾರ್ಪ್ ಬೆಟ್ಟದ ಪ್ರತಿ ಪದರವೂ ಖನಿಜಾಂಶಗಳ ಖನಿ ಎಂಬ ಊಹೆಯಿದೆ. ಸತತ ನೀರಿನ ಸಂಪರ್ಕದಿಂದಾಗಿ ರೂಪುಗೊಂಡ ಗಂಧಕಾಂಶಭರಿತ ಆವೆಮಣ್ಣು ಅದರ ಮೇಲೆ ಆಮ್ಲಜನಕದ ಅಂಶಗಳುಳ್ಳ ಖನಿಜಪದರ, ಹೀಗೆ ಊಹೆ ಸಾಗಿದೆ.
ಕ್ಯೂರಿಯಾಸಿಟಿ ಶಾರ್ಪ್ಬೆಟ್ಟದ ವಿವಿಧ ಸ್ತರಗಳನ್ನು ಚಪ್ಪಟೆಯಾಗಿರುವ ಸ್ಥಳದಲ್ಲಿ ಹತ್ತಿ, ಅಲ್ಲಿನ ಮಣ್ಣು, ಕಲ್ಲುಗಳ ವಿಶ್ಲೇಷಣೆ ನಡೆಸಲಿದೆ. ದಿನವೊಂದಕ್ಕೆ ಸುಮಾರು 650 ಮೀಟರ್ ದೂರವನ್ನು ಕ್ರಮಿಸುವ ಈ ಸಂಚಾರಿ 25 ಇಂಚು ಎತ್ತರದ ದಿಬ್ಬವನ್ನು ಹತ್ತಬಲ್ಲದು.
ಸರೋಜ ಪ್ರಕಾಶ್
ಶ್ರೀರಾಮನವಮಿಯ ಪ್ರಯುಕ್ತ ಹೆಸರುಬೇಳೆ ಹಾಗೂ ಪಾನಕ ವಿತರಣೆ
ಶಿಡ್ಲಘಟ್ಟದ ಕಾಂಗ್ರೆಸ್ ಭವನ ರಸ್ತೆಯಲ್ಲಿ ಶನಿವಾರ ಶ್ರೀರಾಮನವಮಿಯ ಪ್ರಯುಕ್ತ ಮೂಟೆ ಹೊರುವ ಕೂಲಿ ಕಾರ್ಮಿಕರು ಐಎಎಸ್ ಅಧಿಕಾರಿ ರವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಮನ ಚಿತ್ರ ಪಟಕ್ಕೆ ಪೂಜೆ ಸಲ್ಲಿಸಿ, ಹೆಸರುಬೇಳೆ ಹಾಗೂ ಪಾನಕವನ್ನು ವಿತರಿಸಿದರು.
ಶ್ರೀರಾಮನವಮಿಯಂದು ಮನರಂಜನಾ ಉಟ್ಲು
ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್, ಸಾದಲಿ, ದಿಬ್ಬೂರಹಳ್ಳಿ, ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಪಟ್ಟಣದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂ ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತ ಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣ ಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ದ್ರಾಕ್ಷಿ ಗೋಡಂಬಿ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು.
ಶ್ರೀರಾಮನವಮಿಯ ಪ್ರಯುಕ್ತ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ ೮8ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.

