ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಕಾಯಲಬೆಟ್ಟ ಗ್ರಾಮದಲ್ಲಿ ಈಚೆಗೆ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿಗಳಾದ ನಿಖತ್, ಶಿಲ್ಪಾ ಹಾಗೂ ಪ್ರತಿನಿಧಿಗಳಾದ ಕೃಷ್ಣಪ್ಪ, ಗೋಪಿ,ಲೀಲಾವತಿ, ಸೌಭಾಗ್ಯ, ಬೆಂಕಿಯ ಅನಾಹುತ ಮತ್ತು ಮುಂಜಾಗೃತಾ ಕ್ರಮಗಳ ಕುರಿತಾಗಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ, ಗ್ರಾಮದ ಜನರು ಇಂತಹ ಬೆಂಕಿಯ ಗಂಡಾಂತರಗಳನ್ನು ತಡೆಯಲು ಅಗತ್ಯ ಮಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು. ಇದರ ಜೊತೆಗೆ ಪರಿಸರವನ್ನೇ ಅವಲಂಬಿತವಾದ ಪ್ರಾಣಿ, ಪಕ್ಷಿ, ಸಸ್ಯವರ್ಗ ಹಾಗೂ ಜೀವ ಸಂಕುಲಗಳ ಅವಲಂಬನೆ ಕುರಿತು ವಿವರಿಸಲಾಯಿತು. ಈ ಕಾರ್ಯಕ್ರಮವನ್ನು ಜನರಿಗೆ ಹಾಡುಗಳ ಮೂಲಕ ಮನವರಿಕೆ ಮಾಡಿಕೊಡಲಾಯಿತು.
ಆರಿಸಿ ಬೆಂಕಿಯನ್ನು, ಉಳಿಸಿ ಗೋಮಾಳದಲ್ಲಿನ ಜೀವ ಸಂಕುಲವನ್ನು
ಇರುವುದೆಲ್ಲವ ಬಿಟ್ಟು..
ಹೀಗೊಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದೆ. ಪಕ್ಕದಲ್ಲೇ ನಿಂತಿದ್ದ ಬಸ್ಸಿನ ಕಡೆಗೆ ನೋಡಿದೆ. ಅದೊಂದು ಶಾಲೆಯ ವಾಹನವಾಗಿತ್ತು. ಒಳಗಿದ್ದ ಪುಟಾಣಿಗಳು, ಪೋಲೀಸರ ಜೀಪಿನ ಒಳಗೆ ಕೂತ ಕಳ್ಳರಂತೆ ಕಂಡರು. ನನ್ನ ಗಾಡಿಯನ್ನು ಬಸ್ಸಿನ ಹತ್ತಿರ ನುಗ್ಗಿಸಿದೆ. ಒಳಗಿದ್ದ ಗುಂಪಿನಲ್ಲೊಬ್ಬ ಪುಟ್ಟ ಹುಡುಗಿ..”ಅಕ್ಕ ಬಾಯ್” ಎಂದಳು. ಅದನ್ನೇ ಕಾಯುತ್ತಿದ್ದ ನಾನು, ಎಲ್ಲರನ್ನು ನೋಡಿ “ಎಷ್ಟನೇ ಕ್ಲಾಸು?” ಎಂದೆ. ಎಲ್ಲರೂ “ಪ್ರೀ ಕೆ.ಜಿ.” ಎಂದು ಒಟ್ಟಾಗಿ ಕೂಗಿದರು. ಅಷ್ಟೊತ್ತಿಗೆ ಸಿಗ್ನಲ್ ಬಣ್ಣ ಹಸಿರಾಯಿತು. ನಮ್ಮ ನಮ್ಮ ದಾರಿ ನಮಗೆ ತೆರೆದುಕೊಂಡಿತು. ನಾನು ಕಾಲೇಜು ತಲುಪಿದ ಮೇಲೂ ಆ ಮಕ್ಕಳ ಕೂಗಾಟ, ಕೆಲವರ ಅಳು, ಚೇಷ್ಟೇ ಎಲ್ಲವು ನನ್ನ ಮನದಲ್ಲಿತ್ತು. ಇದಾಗಿ ಎಷ್ಟೋ ದಿನಗಳ ನಂತರ ನಮ್ಮ ಒಂದು ಪ್ರಾಜೆಕ್ಟಿನ ಸಲುವಾಗಿ ಹಲವು ಪ್ಲೇ ಹೊಮ್ಗಳಿಗೆ ಹೋಗುವ ಅವಕಾಶ ದೊರೆಯಿತು. “ಆ ಪುಟಾಣಿ ಮಕ್ಕಳೊಂದಿಗೆ ಆಟವಾಡಬಹುದು, ಅವರ ನಗುವಲ್ಲಿ, ಚೇಷ್ಟೆಗಳಲ್ಲಿ ನಾವು ನಮ್ಮಲ್ಲೇ ಕಳೆದು ಹೋಗಿರುವ ಮುಗ್ಧತೆಯನ್ನು, ನೆನಪುಗಳನ್ನು ನೆನೆಯಬಹುದು”, ಎಂಬ ಆಸೆಯಿಂದ ಹೋದೆವು. ಆದರೆ ಅಲ್ಲಿ ನಾವು ಕಂಡ ದೃಶ್ಯವೇ ಬೇರೆಯಾಗಿತ್ತು. ಎಷ್ಟೋ ಶಾಲೆಗಳಲ್ಲಿ ಆಟಿಕೆ ಸಾಮಾನುಗಳೆಲ್ಲವೂ ಹರಡಿತ್ತು. ಒಂದೊಂದು ಮೇಡಮ್ಗಳ ಕೈಯಲ್ಲಿ ಒಂದೊಂದು ಮಗುವಿತ್ತು. ಕೆಲವು ಮಕ್ಕಳು ಅಲ್ಲಿದ್ದ ಚಾಪೆಯ ಮೇಲೆ ಮಲಗಿದ್ದರೆ, ಇನ್ನು ಕೆಲವರು ಅಳುತ್ತಿದ್ದರು. ಶಾಲೆಯ ಸಿಬ್ಬಂದಿ ಕೆಲವು ಮಕ್ಕಳಿಗೆ ಊಟ ಮಾಡಿಸುತ್ತಿದ್ದರೆ, ಇನ್ನು ಕೆಲವರಿಗೆ ನಿದ್ದೆ ಮಾಡಿಸುವ ಪ್ರಯತ್ನದಲ್ಲಿದ್ದರು. ಕಾಲೇಜಿನ ಪರವಾಗಿ ಹೋಗಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಅಲ್ಲಿಯ ಸಿಬ್ಬಂದಿಗೆ ಹಲವು ಪ್ರಶ್ನೆ ಕೇಳಬೇಕಾದ್ದರಿಂದ ಅವರು ಬಿಡುವಾಗುವವರೆಗೂ ಅಲ್ಲಿಯೇ ಕೂತು ಕಾದೆವು.
ಮನೆಯಲ್ಲಿ ಅಮ್ಮನ ಜೊತೆ ಆಟವಾಡಿ ಸಮಯ ಕಳೆಯಬೇಕಿದ್ದ ಪುಟ್ಟ ಮಕ್ಕಳು, ಹೀಗೆ ಶಾಲೆಯ ಒಂದು ಮೂಲೆಯಲ್ಲಿ ಕೂತು ಊಟ ಮಾಡುವುದನ್ನೋ, ಅಳುತ್ತಾ ಅಲ್ಲೇ ಮಲಗುವುದನ್ನೋ ನೋಡಿ ಬೇಸರವಾಯಿತು. “ಮೇಡಮ್ ಈ ಮಕ್ಕಳ ತಂದೆ-ತಾಯಂದಿರು ಏನು ಕೆಲಸ ಮಾಡುತ್ತಾರೆ? ಇಷ್ಟು ಚಿಕ್ಕ ವಯಸ್ಸಿಗೆ ಏಕೆ ಇವರನ್ನು ಶಾಲೆಗೆ ಸೇರಿಸಿದ್ದಾರೆ?” ಎಂದು, ಶಾಲೆಯ ಮೇಡಮ್ ನಮ್ಮೊಂದಿಗೆ ಮಾತನಾಡಲು ಬಂದಾಗ ಕೇಳಿದೆ. ಅವರ ಉತ್ತರ ನನ್ನನ್ನು ಇನ್ನೂ ಕಾಡುತ್ತಿದೆ. “ಏನು ಮಾಡೋದು ಹೇಳಿ, ಇಲ್ಲಿ ಬರುವ ಬಹುತೇಕ ಮಕ್ಕಳು ನಗರದ ಜನಪ್ರಿಯ ಆಸ್ಪತ್ರೆಯ ಡಾಕ್ಟರುಗಳ ಮಕ್ಕಳು.! ಅವರು ಬೆಳಿಗ್ಗೆ ಬೇಗನೆ ಹೋಗುವುದರಿಂದ, ಹಲವರು ತಮ್ಮ ಮಕ್ಕಳನ್ನು 7 ಘಂಟೆಗೆ ನಮ್ಮಲ್ಲಿ ಬಿಟ್ಟು ಹೋಗುತ್ತಾರೆ. ಅವರು ವಾಪಸ್ಸಾಗುವಾಗ ಸಂಜೆಯಾಗುತ್ತದೆ” ಎಂದರು.
ಶಾಲೆಯ ಮೊದಲ ದಿನದಿಂದಲೂ ಬೆಳಿಗ್ಗೆ ಎದ್ದು ಹೋಗುವುದನ್ನು ನೆನೆದರೆ ದುಃಖವಾಗುತ್ತಿತ್ತು. ಈಗಲೂ ನಾನು ಅದಕ್ಕೆ ಹೊರತಲ್ಲ!. ಕಾಲೇಜಿಗೆ ಹೋಗುವಾಗ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಬಲವಂತವಾಗಿ ಎಳೆದು ಹೋಗುತ್ತಿರುವ ದೃಶ್ಯ ಕಂಡರೆ ಮನಸ್ಸಿಗೆ ಹಿಂಸೆಯಾಗುತ್ತದೆ. ಹೈಟೆಕ್ ಶಾಲೆಗಳಿಗೆ ಹೋದರೆ ನಮ್ಮ ಮಕ್ಕಳು ಜಗತ್ತಿನಲ್ಲಿರುವುದನ್ನೆಲ್ಲಾ ಕಲಿತುಬಿಡುತ್ತಾರೆ ಎಂಬ ಭ್ರಮೆಯಲ್ಲಿ, ಮಗುವಿಗೆ ವರ್ಷವಾಗುತ್ತಿದ್ದಂತೆ ಶಾಲೆಯಲ್ಲಿ ಡೊನೇಷನ್ ಕೊಟ್ಟಾದರೂ ತಮ್ಮ ಸೀಟ್ಗಳನ್ನು ಕಾದಿರಿಸುತ್ತಿದ್ದಾರೆ. ಪಾಪ! ತನ್ನನ್ನು ಅರ್ಧ ನಿದ್ರೆಯಲ್ಲಿ ಎಬ್ಬಿಸಿ, ಎಲ್ಲಿಗೆ ಕರೆದು ಹೋಗುತ್ತಿದ್ದಾರೆ ಎಂದು ಅರಿಯದಾಗಿರುತ್ತಾರೆ ಆ ಪುಟಾಣಿಗಳು. ಹೀಗೆ ಬೆಳಿಗ್ಗೆ ಅವರನ್ನು ತಯಾರು ಮಾಡಿ ಶಾಲೆಯ ಆವರಣದಲ್ಲಿ ಬಿಟ್ಟು ಹೋಗುವಾಗ, ಕೊಡುವ ಮುತ್ತನ್ನು ನೋಡಿದರೆ…ಎಲ್ಲವು ನಾಟಕವೇನೋ ಎನಿಸುತ್ತದೆ.
ಮನೆಯಲ್ಲಿ ತನ್ನ ಮಗುವನ್ನು ಬಿಟ್ಟು, ಬೆಳ್ಳಂಬೆಳಿಗ್ಗೆ ಶಾಲೆಗೆ ಓಡಿ ಬರುವ ಟೀಚರ್, ಶಾಲೆಯಲ್ಲಿ ಆಕೆ ಬೇರೊಂದು ಮಗುವಿಗೆ ಊಟ ಮಾಡಿಸುವಾಗ..ತನ್ನ ಮಗು ಊಟ ಮಾಡಿದೆಯೋ ಇಲ್ಲವೋ ಎಂಬುದನ್ನು ನೆನೆಯುತ್ತಾಳೆ. ನಗರದ ಬಹುದೊಡ್ಡ ಆಸ್ಪತ್ರೆಯ ಡಾಕ್ಟರ್, ತಾನು ಬಾಳಂತಿಯಾಗಿದ್ದರೂ, ಇನ್ನೊಬ್ಬರಿಗೆ ಹೆರಿಗೆ ಮಾಡಿಸಲು ತನ್ನ ನೋವನ್ನು ಬಿಟ್ಟು ಬರುತ್ತಾಳೆ. ತಮ್ಮ ಮಗುವಿಗೆ ಒಂದು ವರ್ಷವಾಗುತ್ತಿದ್ದಂತೆ, ಹತ್ತಿರದ ಡೇ-ಕೇರ್ಗೆ ಹಾಕುತ್ತಾರೆ. ಅಲ್ಲಿಯ ‘ತಾಯಂದಿರಿಗೆ’ ತನ್ನ ಮಗುವನ್ನು ಮನಸ್ಸಿಲ್ಲದ ಮನಸ್ಸಲ್ಲಿ ಒಪ್ಪಿಸಿ ಹೋಗುತ್ತಾಳೆ. ಇವೆಲ್ಲದರ ಮಧ್ಯೆ ಮಗು ತನ್ನ ತಂದೆ ತಾಯಿಯ ಪ್ರೀತಿ ಎಂದರೆ, “ಅಪ್ಪ ಅಮ್ಮ ಮನೆಯಿಂದ ಹೊರಡುವಾಗ ಕೊಡುವ ಒಂದು ಮುತ್ತು” ಎಂದಷ್ಟೆ ಭಾವಿಸುತ್ತದೆ. ಆ ಮುತ್ತಿಗೂ ಮಿಗಿಲಾಗಿ ಅಪ್ಪ ಅಮ್ಮ ನಮ್ಮನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಆ ಮಕ್ಕಳಲ್ಲಿ ಬಾಲ್ಯದ ಯಾವ ನೆನಪು ಇರುವುದಿಲ್ಲ. “ನನ್ನ ಅಮ್ಮ ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಗೊತ್ತಾ! ಮನೆಯಿಂದ ಹೊರಡುವಾಗ ನನ್ನ ತಬ್ಬಿ ಮುತ್ತಿಡದಿದ್ದರೆ ಅವರಿಗೆ ಸಮಾಧಾನವೇ ಇರುವುದಿಲ್ಲ.” ಹೀಗೆಂದು 3 ತರಗತಿಯ ಹುಡುಗಿಯೊಬ್ಬಳು ತನ್ನ ತಾಯಿಯ ಪ್ರೀತಿಯ ಬಗ್ಗೆ ವಿವರಿಸುವಾಗ ತಿಳಿಯಿತು, ಆಕೆಗೆ ಆ ಮುತ್ತೊಂದೇ ಬಾಲ್ಯದ ನೆನಪು ಎಂದು. ಈ ಜೀವನದ ಓಟದಲ್ಲಿ ನಾವು ಕಳೆದುಕೊಂಡಿರುವುದೇನೆಂದು ಗೊತ್ತಿಲ್ಲದೆ ಹುಡುಕುತಿರುತ್ತೇವೆ. ಅದರೊಟ್ಟಿಗೆ ನಮ್ಮ ಬಳಿ ಇರುವ ಸ್ನೇಹ ಸಂಬಂಧವನ್ನು, ಪರಸ್ಪರ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ.
ಹೊರಗಿನಿಂದ ನೋಡುವವರಿಗೆ ಅವರಿವರ ಕೆಲಸ ಸುಲಭ. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ತಾನು ಎಂಥ ಕಷ್ಟ ಅನುಭವಿಸುತ್ತಿದ್ದೇನೆ ಎಂದು.
ಜೀವನದ ವೈರುಧ್ಯ ಎಂದರೆ ಇದೇ ತಾನೇ?
ಸ್ಫೂರ್ತಿ ವಾನಳ್ಳಿ
ರೈತ ವಿರೋಧ ನೀತಿಯ ವಿರುದ್ಧ ಧರಣಿ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಸಾರ್ವಜನಿಕ ಮತ್ತು ರೈತರ ಹಿತರಕ್ಷಣೆಯ ಕಾಳಜಿಯಿಲ್ಲದೆ ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿ ಎಂದು ಮಾತ್ರ ಕರೆಯಲಾಗದು. ಇದು 2013 ರ ಭೂ ಸ್ವಾಧೀನ ಕಾಯ್ದೆಯ ಮೂಲ ಆಶಯ ಮತ್ತು ಉದ್ದೇಶವನ್ನೇ ನಿರರ್ಥಕಗೊಳಿಸುತ್ತದೆ. 1894ರ ಕಾಯ್ದೆಯಲ್ಲಿ ಸಂತ್ರಸ್ತ ಭೂ ಮಾಲೀಕರಿಗೆ ಆಕ್ಷೇಪ ಎತ್ತಲು ಹಾಗೂ ತಮ್ಮ ಕಷ್ಟ ಕೇಳಿಕೊಳ್ಳಲು ಅವಕಾಶವಾದರೂ ಇತ್ತು. ಆದರೆ ಈಗ ಸುಗ್ರೀವಾಜ್ಞೆಯಲ್ಲಿ ಇಡೀ ವಿದಿವಿಧಾನದ ಅಗತ್ಯಗಳನ್ನೇ ಬೈಪಾಸ್ ಮಾಡಿರುವುದರಿಂದ ಜಮೀನಿನ ಮಾಲೀಕರಿಗೆ ಕನಿಷ್ಟ ರಕ್ಷಣೆಯೂ ಇಲ್ಲದಂತಾಗಿದೆ. ಒಟ್ಟಾರೆ ಇದು ರಿಯಲ್ ಎಸ್ಟೇಟಿಗರ ಮತ್ತು ಕಾರ್ಪೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಸಂಚಾಗಿದೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ಮಂಜುನಾಥ್, ಕೃಷ್ಣಪ್ಪ, ಬೈಯಣ್ಣ, ನರಸಿಂಹರೆಡ್ಡಿ, ವೇಣುಗೋಪಾಲ್, ಮುನಿರಾಜು, ವೆಂಕಟನಾರಾಯಣಸ್ವಾಮಿ, ಅಬ್ಲೂಡು ದೇವರಾಜ್, ಮುನಿಕೃಷ್ಣ, ನಾಗರಾಜು, ರಾಮಚಂದ್ರ, ರವಿಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆ
ಬಯಲು ಸೀಮೆ ಪ್ರದೇಶದಲ್ಲಿ ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆಯಿಂದಾಗಿ ಬರಡು ರಾಸುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಬರಡು ರಾಸು ಚಿಕಿತ್ಸಾ ತಜ್ಞ ಡಾ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಚಿಮುಲ್ ಒಕ್ಕೂಟದ ವತಿಯಿಂದ ನಡೆದ ಬರಡು ರಾಸು ತಪಾಸಣೆ ಮತ್ತು ಮೇವು ಉತ್ಪಾದನಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರು ಹಸುಗಳಿಗೆ ಪೌಷ್ಠಿಕಾಂಶವುಳ್ಳ ಹಸಿ ಮೇವು, ಒಣ ಹುಲ್ಲು, ನೇಪಿಯರ್ ಹುಲ್ಲು, ಹಲಸಂದಿ, ಹುರುಳಿ, ಹಿಪ್ಪುನೇರಳೆ ಕಡ್ಡಿ ಮತ್ತು ಕೆ.ಎಂ.ಎಫ್ನ ಮಿಶ್ರಣ ಪಶು ಆಹಾರ ನೀಡುವುದರ ಮುಖಾಂತರ ಗರ್ಭಧಾರಣೆ ಸಮಸ್ಯೆಯನ್ನು ನಿವಾರಿಸಬಹುದು. ಶುಚಿತ್ವವಿಲ್ಲದೆ ಗರ್ಭಕೋಶದ ಸೋಂಕು ಉಂಟಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಹಸುಗಳಿಗೆ ಪೌಷ್ಠಿಕಾಂಶದ ಕೊರತೆಯಿಂದಾಗಿ ಶೇಕಡಾ 65–70 ರಷ್ಟು ಗರ್ಭಧಾರಣಾ ಸಮಸ್ಯೆ ಉಂಟಾಗುತ್ತದೆ. ನೀರಿನ ಕೊರತೆಯಿಂದ ಮೇವು ಉತ್ಪಾದನೆ ಕುಂಠಿತಗೊಂಡು, ರಾಸಾಯನಿಕ ಸಿಂಪಡಿಸಿರುವ ಮೇವು ಬಳಸುವುದರಿಂದ ರಾಸುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹಸುಗಳ ಜೀರ್ಣಕ್ರಿಯೆ ಮತ್ತು ರೋಗ ತಡೆದುಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ ಎಂದರು.
ಕೋಚಿಮುಲ್ ಅಧಿಕಾರಿ ಸುಷ್ಮಾ ಹೈಡ್ರೋಫೋನಿಕ್ ತಂತ್ರಜ್ಞಾನ ಬಳಸಿ ಮೇವು ಉತ್ಪಾದಿಸುವ ಬಗ್ಗೆ ವಿವರಿಸಿದರು.
ಮಳ್ಳೂರು ಪಶು ಆಸ್ಪತ್ರೆಯ ವೈದ್ಯ ಡಾ.ಗಂಗಾಧರ್, ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಡಾ.ಈಶ್ವರಯ್ಯ, ಡಾ.ಅರುಣ್ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಧರ್, ಮಂಜುನಾಥಬಾಬು, ಮುನಿಕೃಷ್ಣಪ್ಪ, ದೇವರಾಜ್, ಅಮರ್, ಪ್ರಕಾಶ್, ಕೇಶವಮೂರ್ತಿ, ಕೆಂಪೇಗೌಡ, ಬೈರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವರ ದಾಸಿಮಯ್ಯ ಜಯಂತ್ಯುತ್ಸವ
ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದು ತಾಲ್ಲೂಕು ಆಡಳಿತದಿಂದ ನಡೆಸಲು ಹೆಮ್ಮೆಯಾಗಿದೆ ಎಂದರು.
ನೇಕಾರ ವೃತ್ತಿ ಹೊಂದಿರುವ ದೇವಾಂಗ ಸಮಾಜ ಬಾಂಧವರಲ್ಲಿ ದಾಸಿಮಯ್ಯನವರ ಕುರಿತಂತೆ ಜಾಗೃತಿ ಮೂಡಿಸಬೇಕು. ಬಸವಣ್ಣನವರಿಗಿಂತಲೂ ಹಿಂದೆಯೇ ನೇಕಾರ ವೃತ್ತಿಯ ಜೊತೆಯಲ್ಲಿ ವಚನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಭಕ್ತಿಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಚೈತನ್ಯವನ್ನು ರಾಜ್ಯಾದ್ಯಂತ ನೆನಪು ಮಾಡಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಅವರ ವಚನಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಜೆ.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಾಗರಾಜ್, ಸಿ.ಡಿ.ಪಿ.ಒ ಅಧಿಕಾರಿ ಲಕ್ಷ್ಮೀದೇವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್ ಈಗ ಓದುಗರಿಗೆ ಲಭ್ಯ
ಹವ್ಯಾಸಿ ಛಾಯಾಚಿತ್ರಕಾರ ಹಾಗೂ ಲೇಖಕರಾದ ಶಿಡ್ಲಘಟ್ಟದ ಡಿ ಜಿ ಮಲ್ಲಿಕಾರ್ಜುನ ರವರು ರಚಿಸಿ ಸೌಮ್ಯ ರವರು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಭೂತಾನ್ ದೇಶದ ಪ್ರವಾಸಿ ಕಥನ “ಭೂತಾನ್ – ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್” ಈಗ ಓದುಗರಿಗೆ ಲಭ್ಯವಿದ್ದು, ನಿಮ್ಮ ವಿವರವನ್ನು Hi@sidlaghatta.comಗೆ ಈಮೈಲ್ ಅಥವಾ +919986904424 ಕರೆ ಮಾಡಿ ನಿಮ್ಮ ಪ್ರತಿಯನ್ನು ಕಾಯ್ದಿರಿಸಬಹುದು. ಬೆಲೆ ರೂ. 250.
About the Book:
On the Wings of the Peaceful Dragon is a collection of photographs, capturing the spirit of Bhutan through the eyes of a traveler. With running narration by the author, recounting anecdotes and his experience, the book effortlessly takes the reader along the journey.
http://www.indianembassythimphu.bt/gallery.php?album=43
ಸಹಾಯಧನದ ಚೆಕ್ ವಿತರಣೆ
ಕುರಿ, ವಾಹನ, ರೇಷ್ಮೆ ಉದ್ದಿಮೆ ಮುಂತಾದವುಗಳಿಗೆ ಬಳಸಿಕೊಳ್ಳಲು ಸಹಾಯಧನದ ಚೆಕ್ಕನ್ನು ಶಾಸಕ ಎಂ.ರಾಜಣ್ಣ ಬುಧವಾರ ಫಲಾನುಭವಿಗಳಿಗೆ ವಿತರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ ಮತ್ತು ಐಎಸ್ಬಿ ಯೋಜನೆಯಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಒಂಬತ್ತು ಮಂದಿ ಫಲಾನುಭವಿಗಳಿಗೆ ಒಟ್ಟು ನಾಲ್ಕು ಲಕ್ಷ ಎಂಬತ್ತು ಸಾವಿರ ರೂಪಾಯಿಗಳ ಚೆಕ್ಕನ್ನು ವಿತರಿಸಿದರು.
ಎಂಟು ಮಂದಿ ಫಲಾನುಭವಿಗಳಿಗೆ ಕುರಿ ಸಾಕಾಣಿಕೆ ಮತ್ತು ರೇಷ್ಮೆ ತಯಾರಿಕೆಗಾಗಿ ತಲಾ 35 ಸಾವಿರ ರೂಪಾಯಿಗಳ ಚೆಕ್ಕನ್ನು ನೀಡಿದರೆ, ಟಾಟಾ ಏಸ್ ವಾಹನ ಖರೀದಿಗೆ ಒಬ್ಬ ಫಲಾನುಭವಿಗೆ 2 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.
‘ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ, ಮತ್ತಷ್ಟು ಹೆಚ್ಚಿನ ಸಾಲವನ್ನು ಪಡೆಯಬಹುದು. ಯಾವುದೇ ಯೋಜನೆಯು ಯಶಸ್ವಿಯಾಗಲು ಸಾಲದ ಮರುಪಾವತಿ ಅತ್ಯಗತ್ಯ. ಸ್ತ್ರೀ ಶಕ್ತಿ ಸಂಘಗಳಿಗೂ ಈ ಸಾಲದ ಸೌಲಭ್ಯವಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪ್ರಭಾಕರ್, ದ್ಯಾವಪ್ಪ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಸುರೇಶ್, ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಡಿತರ ಆಹಾರಧಾನ್ಯಗಳನ್ನು ಪಡೆದುಕೊಳ್ಳಲು ಆಧಾರ ಕಾರ್ಡ್ ಖಡ್ಡಾಯವಿಲ್ಲ
ಪಡಿತರ ಆಹಾರಧಾನ್ಯಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ಕಾರ್ಡ್ ಖಡ್ಡಾಯವಿಲ್ಲ, ಎಫಿಕ್ ಕಾರ್ಡ್ ಖಡ್ಡಾಯವೆಂದು ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಆಯುಕ್ತ ಪುಟ್ಟಣ್ಣಶೆಟ್ಟಿ ಹೇಳಿದ್ದಾರೆ.
ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಮಂಗಳವಾರ ಉಪಗ್ರಹಾಧಾರಿತ ಸಂವಾದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮತ್ತು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳಿಗೆ ಆಯೋಜನೆ ಮಾಡಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇ ತಿಂಗಳಿನಿಂದ ಬಿ.ಪಿ.ಎಲ್.ಕುಟುಂಬಗಳಿಗೆ ಒಂದು ಯೂನಿಟ್ಗೆ ೫ ಕೆ.ಜಿ.ಅಕ್ಕಿಯಂತೆ ಉಚಿತವಾಗಿ ನೀಡಲಾಗುತ್ತದೆ, ಸಕ್ಕರೆ ಹಾಗೂ ತಾಳೇ ಎಣ್ಣೆಯನ್ನು, ಶುದ್ದ ಉಪ್ಪನ್ನು ನೀಡಲಾಗುತ್ತದೆ. ಗ್ರಾಹಕರು ಎಣ್ಣೆ, ಉಪ್ಪು ಮತ್ತು ಸಕ್ಕರೆಗೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಎ.ಪಿ.ಎಲ್.ಕಾರ್ಡುದಾರರಿಗೂ ಕೂಡಾ ಅಕ್ಕಿಯನ್ನು ನೀಡಲಿದ್ದು, ಒಂದು ಯೂನಿಟ್ಗೆ ೫ ಕೆ.ಜಿ. ಅಕ್ಕಿ, ಪ್ರತಿ ಕೆ.ಜಿ.ಗೆ ೧೫ ರೂಪಾಯಿಗಳು. ಎರಡು ಯೂನಿಟ್ಗಿಂತ ಹೆಚ್ಚಾಗಿದ್ದರೆ ೧೦ ರೂಪಾಯಿಗಳ ದರದಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇಲಾಖೆಯ ಅಧಿಕಾರಿಗಳು ಖಡ್ಡಾಯವಾಗಿ ಗ್ರಾಹಕರಿಂದ ಎಫಿಕ್ ಕಾರ್ಡುಗಳನ್ನು ಪಡೆದುಕೊಳ್ಳಬೇಕು, ಆಧಾರ್ಕಾರ್ಡ್ ಖಡ್ಡಾಯವಿಲ್ಲ. ಮುಂದಿನ ತಿಂಗಳಿನಿಂದ ಪಡಿತರ ಆಹಾರಧಾನ್ಯಗಳನ್ನು ಪಡೆಯಬೇಕಾದರೆ ಮತದಾರರ ಗುರುತಿನ ಚೀಟಿಯನ್ನು ನೀಡುವುದು ಖಡ್ಡಾಯವಾಗಿದ್ದು, ಆಧಾರ್ಕಾರ್ಡ್ ಕೊಡುವವರಿಂದ ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯತಿಗಳಲ್ಲಿ ಆಧಾರ್ಕಾರ್ಡ್ ಇಲ್ಲದಿದ್ದರೂ ಕೂಡಾ ಖಡ್ಡಾಯವಾಗಿ ಎಫಿಕ್ ಕಾರ್ಡ್ನ್ನು ಎಸ್.ಎಂ.ಎಸ್. ಮಾಡಬೇಕು ಎಂದು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳಿಗೆ ಸೂಚಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉನಿರ್ದೇಶಕ ಶ್ರೀನಿವಾಸಯ್ಯ, ತಾಲ್ಲೂಕಿನ ಶಿರಸ್ತೆದಾರ್ ಸಿ.ಪರಶಿವಮೂರ್ತಿ, ಆಹಾರ ನಿರೀಕ್ಷಕ ಮೂಗಣ್ಣ, ದ್ವೀತಿಯ ದರ್ಜೆ ಸಹಾಯಕ ಪ್ರಕಾಶ್ ಮುಂತಾದವರು ಹಾಜರಿದ್ದರು.
ನಿದ್ದೆ ಇರಲಿ ನೆಮ್ಮದಿಗೆ
1. ನಿಮಗೆಲ್ಲಾ ಪ್ರತಿದಿನ 8/9 ಗಂಟೆಗಳ ನಿದ್ರೆಯು ಅಗತ್ಯವಿದೆ.
2. ಒಳ್ಳೆಯ ನಿದ್ರೆಯಿಂದ ಆರೋಗ್ಯ ರಕ್ಷಣೆಯಾಗುತ್ತದೆ. ಶರೀರ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಗ್ರಹಿಸುವ ಶಕ್ತಿ ಹೆಚ್ಚುತ್ತದೆ. ನಾವು ಓದಿದ ವಿಷಯಗಳು ಚೆನ್ನಾಗಿ ನೆನಪಿರುತ್ತದೆ.
3. ಮಲಗುವ ಸ್ಥಳ ಶುದ್ಧವಾಗಿರಬೇಕು. ಗಾಳಿ ಚೆನ್ನಾಗಿ ಬೀಸಬೇಕು.
4. ಮಲಗುವ ಹಾಸಿಗೆ ಸಮತಟ್ಟಾಗಿರಬೇಕು. ಹಾಸಿಗೆಯ ವಸ್ತ್ರಗಳು ಸ್ವಚ್ಚವಾಗಿರಬೇಕು.
5. ರಾತ್ರಿ ಮಲಗುವಾಗ ಎಡಮಗ್ಗುಲಲ್ಲಿ ಮಲಗಿ ಬಲಮಗ್ಗುಲಿನಿಂದ ಏಳುವ ಅಭ್ಯಾಸ ಒಳ್ಳೆಯದು.
6. ಅತಿ ಎತ್ತರದ ದಿಂಬು ಬಳಸುವುದು ಒಳ್ಳೆಯದಲ್ಲ. ತಿಳಿವರ್ಣದ ಹಾಸಿಗೆಯ ವಸ್ತ್ರಗಳನ್ನು ಬಳಸಬೇಕು.
7. ಮೇಲ್ಮುಖವಾಗಿ ಅಥವಾ ಮಗ್ಗುಲಲ್ಲಿ ಮಲಗುವ ಅಭ್ಯಾಸ ಒಳ್ಳೆಯದು. ಕೆಳಮುಖವಾಗಿ/ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ಒಳ್ಳೆಯದಲ್ಲ.
8. ರಾತ್ರಿ ಊಟವಾದ ತಕ್ಷಣ ಮಲಗುವುದು ಒಳ್ಳೆಯದಲ್ಲ. ಊಟ ಹಾಗೂ ಮಲಗುವ ಮಧ್ಯದಲ್ಲಿ 1 ಗಂಟೆಯ ಅಂತರವಿರಬೇಕು.
9. ಮಲಗುವ ಮೊದಲು ಮನಸ್ಸು ಶಾಂತವಾಗಿರಬೇಕು. ಮನಸ್ಸು ಗೊಂದಲ ಅಥವಾ ಒತ್ತಡದಲ್ಲಿದ್ದರೆ ಸುಖ ನಿದ್ದೆ ಬರುವುದಿಲ್ಲ.
10. ರಾತ್ರಿ ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಒಳ್ಳೆಯದಲ್ಲ. ಕಡಿಮೆ ಪ್ರಮಾಣದ ಆಹಾರ ಸೇವನೆ ನಿದ್ದೆಗೆ ಅನುಕೂಲಕಾರಿ.
11. ಹಗಲು 15/20 ನಿಮಿಷಗಳ ವಿಶ್ರಾಂತಿ ತುಂಬಾ ಒಳ್ಳೆಯದು.
12. ಮಂದ ಬೆಳಕು, ತಿಳಿನೀಲಿ/ತಿಳಿ ಹಸಿರು ಬಣ್ಣ, ಸ್ವಲ್ಪ ಪ್ರಮಾಣದ ಸುಗಂಧ-ಇವೆಲ್ಲಾ ನಿದ್ದೆ ಚೆನ್ನಾಗಿ ಬರುವಂತೆ ಮಾಡುತ್ತವೆ.
13. ದೇವರ ಧ್ಯಾನ ಮಾಡಿಕೊಂಡು ಮಲಗುವುದು ಒಳ್ಳೆಯದು.
14. ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದು, ಹಾಲನ್ನು ಕುಡಿಯುವುದು, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಇವೆಲ್ಲಾ ನಿದ್ದೆಗೆ ಹಿತಕರವಾದ ವಿಷಯಗಳು
15. ಶಾಂತ ಮನಸ್ಸಿನಿಂದ, ದೇವರಧ್ಯಾನ ಮಾಡಿ ನಿಧಾನಗತಿಯ, ಸಾವಧಾನದ ಉಸಿರಾಟ ಮಾಡುತ್ತಾ ಮಲಗುವುದರಿಂದ ಯಾವುದೇ ರೀತಿಯ ಕೆಟ್ಟ ಕನಸುಗಳೂ ಬೀಳುವುದಿಲ್ಲ.
ಡಾ. ಶ್ರೀವತ್ಸ
ರೇಣುಕಾ ಎಲ್ಲಮ್ಮ ಹೂವಿನ ಕರಗ
ಪುರಾಣ ಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ನಡೆಸಲಾದ ಕರಗ ಮಹೋತ್ಸವದಲ್ಲಿ ಮುನಿಕೃಷ್ಣಪ್ಪ ಅವರು ಕರಗವನ್ನು ಹೊತ್ತಿದ್ದು, ಕರಗದ ಅಂಗವಾಗಿ ನಗರದ ಶ್ರೀರಾಮ ದೇವಸ್ಥಾನದ ಮುಂಭಾಗದಲಿ ಆರ್ಕೆಸ್ಟ್ರಾ ಮತ್ತು ವಿವಿಧ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕೋಟೆ ವೃತ್ತದಲ್ಲಿ ಭಕ್ತರಿಗೆಲ್ಲ ಅನ್ನಸಂತರ್ಪಣೆಯನ್ನು ನಡೆಸಿದರು.
ಕರಗದ ಸ್ವಾಗತಕ್ಕಾಗಿ ಪ್ರತಿ ಮನೆಯವರೂ ಮನೆ ಮುಂದೆ ಸಾರಿಸಿ ರಂಗೋಲಿಯನ್ನು ಹಾಕಿದ್ದರು. ಕರಗ ಬಂದಾಗ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿದರು. ಕರಗ ಮಹೋತ್ಸವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕರಗದ ನರ್ತನಕ್ಕೆ ಚಪ್ಪಾಳೆ, ಶಿಳ್ಳೆಗಳ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ರೇಣುಕಾ ಎಲ್ಲಮ್ಮ ದೇವಾಲಯದಿಂದ ಹೊರಟ ಕರಗ ನಗರದ ಓ.ಟಿ.ವೃತ್ತ, ಕೋಟೆ ವೃತ್ತಗಳು ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೂಜೆಗಳನ್ನು ಸ್ವೀಕರಿಸಿತು.

