ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಾಣಂತಿ ಮತ್ತು ಗಂಜಿಗುಂಟೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೊಳಪಟ್ಟ ತಲಕಾಯಲ ಬೆಟ್ಟ ಪಂಚಾಯಿತಿಯ ಮಾದೇನಹಳ್ಳಿಯ ಯುವಕನೋರ್ವ ಕೊರೊನಾ ಪಾಸಿಟೀವ್ ಎಂದು ತಿಳಿದುಬಂದಿದ್ದು, ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿದೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಯ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 19 ರಂದು ಮಗುವಿಗೆ ಜನ್ಮವಿತ್ತ ಆಕೆ ಜೂನ್ 20 ರಂದು ವಾಪಸ್ ಸ್ವಗ್ರಾಮಕ್ಕೆ ತೆರಳಿದ್ದರು. ಪರೀಕ್ಷೆಯ ವರದಿಯಲ್ಲಿ ಪಾಸಿಟೀವ್ ಎಂದು ತಿಳಿದು ಬಂದೊಡನೆ ಆಕೆ ಮತ್ತು ಎಳೆಮಗುವನ್ನು ಚಿಕ್ಕಬಳ್ಳಾಪುರದ ಕೋವಿಡ್ ವಾರ್ಡ್ ಗೆ ಕಳುಹಿಸಿಕೊಟ್ಟಿದ್ದಾರೆ. ನಗರಸಭೆಯವರು ಸರ್ಕಾರಿ ಆಸ್ಪತ್ರೆ ಹಾಗೂ ಸುತ್ತಲಿನ ಆವರಣವನ್ನು ಕ್ರಿಮಿನಾಶಕಗಳಿಂದ ಸಿಂಪಡಿಸಿ ಶುಚಿಗೊಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಹೆರಿಗೆ ವಾರ್ಡ್ ನ ಸಿಬ್ಬಂದಿಯ ಸ್ವಾಬ್ ಪರಿಕ್ಷೆಗೆ ಕಳುಹಿಸಿದ್ದು, ನೆಗೆಟೀವ್ ಎಂದು ಬಂದಿರುವುದರಿಂದ ವೈದ್ಯರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲ್ಲೂಕು ಆಡಳಿತ, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಕೊತ್ತನೂರು ಹಾಗೂ ಮಾದೇನಹಳ್ಳಿ ಗ್ರಾಮಗಳಲ್ಲಿ ಸೀಲ್ ಡೌನ್ ಮಾಡಿ, ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸೀಲ್ ಡೌನ್ ಪ್ರದೇಶದಲ್ಲಿ ವಾಸಿಸುವವರ ಬೇಕುಬೇಡಗಳನ್ನು ಪರಿವೀಕ್ಷಿಸುವಂತೆ ಆಯಾ ಗ್ರಾಮ ಪಂಚಾಯಿತಿ ಪಿ.ಡಿ.ಒ ಗಳಿಗೆ ಜವಾಬ್ದಾರಿ ವಹಿಸಲಾಗಿದೆ.
- Advertisement -
- Advertisement -
- Advertisement -
- Advertisement -