31.9 C
Sidlaghatta
Thursday, March 28, 2024

ನಾವೂ ಮಗುವನ್ನು ದತ್ತು ತೆಗೆದುಕೊಳ್ಳಬಾರದೇಕೆ – ಭಾಗ 3

- Advertisement -
- Advertisement -

ಪರಿಸರ ಅಥವಾ ಅನುವಂಶೀಯತೆ?
ಹೆಣ್ಣು ಮಗುವನ್ನು ದತ್ತು ಪಡೆದ ಮಧ್ಯವಯಸ್ಸಿನ ದಂಪತಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಆತಂಕವೆಂದರೆ ಈಗ ಬೆಳೆದು ದೊಡ್ಡವಳಾಗಿರುವ ಮಗಳು ಕೆಳವರ್ಗದ ಜನರ ಜೊತೆ ಹೆಚ್ಚು ಬೆರೆಯುತ್ತಾಳೆ, ಇದಕ್ಕೆ ಅನುವಂಶೀಯತೆ ಕಾರಣವಿರಬಹುದೇ?- ಎನ್ನುವುದು.
ಅನುವಂಶೀಯತೆ ಮತ್ತು ಪರಿಸರಗಳು ವ್ಯಕ್ತಿಯೊಬ್ಬನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದು ನಿರಂತರ ಚರ್ಚೆಯ ಮತ್ತು ಸಂಶೋಧನೆಯ ವಿಷಯ. ಎಲ್ಲರೂ ಒಪ್ಪುವ ವಿಚಾರವೆಂದರೆ ದೇಹದ ಬಣ್ಣ, ಆಕಾರ, ರೂಪ ಮುಂತಾದ ದೈಹಿಕ ಅಂಶಗಳನ್ನು ಅನುವಂಶೀಯತೆ ನಿರ್ಧರಿಸುತ್ತದೆ. ಇನ್ನು ಬುದ್ಧಿವಂತಿಕೆಯ ಮಟ್ಟದ ಮೇಲೆ ಅನುವಂಶೀಯತೆಯ ಪ್ರಭಾವ ಇರಬಹುದಾಗಿದ್ದರೂ, ಸಂಪೂರ್ಣವಾಗಿಯಂತೂ ಇಲ್ಲ. ಮಗುವಿಗೆ ಸೂಕ್ತ ಮಾರ್ಗದರ್ಶನ, ಉತ್ತೇಜನ ಮತ್ತು ಅವಕಾಶಗಳನ್ನು ನೀಡುವುದರ ಮೂಲಕ ಅದರಲ್ಲಿ ಇರುಬಹುದಾದ ಶಕ್ತಿಯ ಪೂರ್ಣ ಪ್ರಯೋಜನ ಪಡೆಯುವ ತರಬೇತಿ ನೀಡಲು ಪೋಷಕರಿಗೆ ಸಾಧ್ಯವಿದೆ.
ಆದರೆ ಗುಣ, ಸ್ವಭಾವ, ವರ್ತನೆ ಮುಂತಾದ ವ್ಯಕ್ತಿತ್ವದ ಅಂಶಗಳಲ್ಲಿ ಪರಿಸರವೇ ಪ್ರಮುಖವಾಗಿ ಪ್ರಭಾವ ಬೀರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳ ವ್ಯಕ್ತಿತ್ವವನ್ನು ತಮಗೆ ಬೇಕಾದಂತೆ ರೂಪಿಸಲು ಮತ್ತು ಅವರಿಗೆ ಉತ್ತಮ ಮಾದರಿಗಳನ್ನು ಒದಗಿಸಲು ಸಂಪೂರ್ಣ ಅವಕಾಶವಿರುತ್ತದೆ. ಇದನ್ನು ಉಪಯೋಗಿಸಿಕೊಳ್ಳದೆ ಅನುವಂಶೀಯತೆಯನ್ನು ದೂಷಿಸುವುದು ನಿಷ್ಪ್ರಯೋಜಕ. ಇದರ ಬಗೆಗೆ ಅಗತ್ಯವಿದ್ದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ನಮ್ಮ ಬಳಿ ಆಪ್ತಸಲಹೆಗೆ ಬಂದಿದ್ದ ಮೇಲಿನ ಘಟನೆಯಲ್ಲಿ ಪೋಷಕರಿಂದ ಹಂತಹಂತವಾಗಿ ಹೆಚ್ಚಿನ ವಿವರಗಳನ್ನು ಪಡೆಯುತ್ತಾ ಹೋದಂತೆ ತಿಳಿದ ವಿಚಾರ ಇದು-ಮಗುವಿನ ಮೇಲಿನ ಅತಿಯಾದ ಮಮಕಾರದಿಂದ ಸ್ನೇಹಿತರು ಅಥವಾ ಇತರ ವ್ಯಕ್ತಿಗಳೊಡನೆ ಸಹಜವಾಗಿ ಬೆರೆಯಲು ಪೋಷಕರು ಮಗುವಿಗೆ ಅವಕಾಶ ನೀಡಿರಲಿಲ್ಲ. ಬೆಳೆದು ನಿಂತ ಮಗಳ ಮೇಲೂ ಇಂತಹ ನಿರ್ಬಂಧ ಮುಂದುವರೆಸಿದ್ದರು. ಮನುಷ್ಯ ಸಂಪರ್ಕದ ತನ್ನ ಮಾನಸಿಕ ಹಸಿವನ್ನು ತೀರಿಸಿಕೊಳ್ಳಲು ಆ ಮುಗ್ಧ ಮಗು ಮನೆಯ ಅಥವಾ ತೋಟದ ಕೆಲಸದವರೊಡನೆ ನಗುತ್ತಾ ಬೆರೆಯುತ್ತಿತ್ತು. ಇದನ್ನೇ ಅನುವಂಶೀಯವಾಗಿ ಬಂದ ಕೀಳುಗುಣ ಎಂದು ಪೋಷಕರು ಹಣೆಪಟ್ಟಿ ಹಚ್ಚಿದ್ದರು.
ತಂದೆ ತಾಯಿಗಳಿಗೆ ಒಂದು ನಮ್ರ ಸಲಹೆಯೆಂದರೆ ಒಮ್ಮೆ ದತ್ತು ಪಡೆದು ಮಗುವನ್ನು ತಮ್ಮದಾಗಿಸಿಕೊಂಡ ಮೇಲೆ ಅದರ ಹಿನ್ನಲೆಗೆ ಮಗುವಿನ ಭವಿಷ್ಯದ ಯಾವುದೇ ಅಂಶಗಳನ್ನು ದಯವಿಟ್ಟು ಜೋಡಿಸಬೇಡಿ. ಮಗುವನ್ನು ತಮಗೆ ಬೇಕಾದಂತೆ ಬೆಳೆಸಲು ಸಾಧ್ಯತೆ ಇದೆ ಎನ್ನುವ ಮನೋಭಾವದಿಂದ ಮುಂದುವರೆದರೆ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಬಹುದು.
ಗುಟ್ಟು ಗುಟ್ಟಾಗಿರಬೇಕೆ?
ದತ್ತು ಪಡೆದ ಎಲ್ಲಾ ತಂದೆತಾಯಿಗಳು ಎದುರಿಸುವ ಸಾಮಾನ್ಯ ದ್ವಂದ್ವಗಳೆದರೆ- ಮಗುವಿಗೆ ದತ್ತಕದ ವಿಷಯವನ್ನು ತಿಳಿಸಬೇಕೇ?, ಹಾಗೆ ತಿಳಿಸುವುದಾದರೆ ಹೇಗೆ ಮತ್ತು ಯಾವಾಗ ತಿಳಿಸುವುದು ಮತ್ತು ಇದರ ಬಗೆಗೆ ಮುನ್ನೆಚ್ಚರಿಕೆ ಏನಾದರೂ ವಹಿಸಬೇಕೆ?- ಎನ್ನುವುದು.
ದತ್ತಕ ವಿಷಯವನ್ನು ಮಗುವಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಮತವಾದರೂ ಅದನ್ನು ಎಷ್ಟು ವಯಸ್ಸಿಗೆ ತಿಳಿಸಬೇಕು ಎನ್ನುವುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿನ ಗ್ರಹಿಕೆಯ ಮಟ್ಟವನ್ನು ಅನುಸರಿಸಿ ಆದಷ್ಟು ಬೇಗ ತಿಳಿಸುವುದು ಪೋಷಕರ ಮತ್ತು ಮಕ್ಕಳ ಸಂಬಂಧಕ್ಕೆ ಹಿತಕರ.
ಆದರೆ ಹೆಚ್ಚಿನ ಪೋಷಕರು ನಂಬಿರುವುದು ಮತ್ತು ಪಾಲಿಸುವುದು ದತ್ತಕದ ವಿಚಾರವನ್ನು ಗುಟ್ಟಾಗಿಡುವುದೇ ಒಳ್ಳೆಯದು ಎನ್ನುವುದು. ವಿಷಯವನ್ನು ಬಹಿರಂಗವಾಗಿಸಲು ಅವರಿಗಿರುವ ದೊಡ್ಡ ಆತಂಕವೆಂದರೆ, ಎಲ್ಲಾ ತಿಳಿದ ಮಗುವಿಗೆ ತಮ್ಮ ಮೇಲಿನ ಪ್ರೀತಿ ಆದರಗಳು ಕಡಿಮೆಯಾಗಬಹುದು ಮತ್ತು ತನ್ನ ಹೆತ್ತವರನ್ನು ಮಗು ಹುಡುಕಿಕೊಂಡು ಹೋಗಬಹುದು-ಎನ್ನುವುದು. ಅನಧಿಕೃತವಾಗಿ ದತ್ತು ಪಡೆದ ಪೋಷಕರಿಗೆ ಇನ್ನೂ ಇತರ ತೊಂದರೆಗೆ ಸಿಲುಕಿಕೊಳ್ಳುವ ಹೆಚ್ಚಿನ ಆತಂಕ ಸೇರಿರುತ್ತದೆ. ಹೀಗಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದಿದ್ದರೂ ದತ್ತಕವನ್ನು ಗುಟ್ಟಾಗಿಡುವುದು ಇದಕ್ಕೆ ಪರಿಹಾರವಲ್ಲ.
ಹಾಗೊಮ್ಮೆ ದತ್ತಕದ ವಿಷಯವನ್ನು ಪೋಷಕರು ಗುಟ್ಟಾಗಿ ಇಟ್ಟರೂ ಮಗು ದೊಡ್ಡದಾದ ಮೇಲೆ ಸುತ್ತಲಿನ ಯಾರಾದರೂ ಇದರ ಬಗೆಗೆ ಮಗುವಿಗೆ ಹೇಳಬಹುದು. ಯಾರೂ ಹೇಳದಂತೆ ತಡೆಯುವುದು ಪೋಷಕರ ಹಿಡಿತದಲ್ಲಿರುವುದಿಲ್ಲ. ಒಮ್ಮೆ ಮೂರನೆಯವರಿಂದ ಇದು ಮಗುವಿಗೆ ತಿಳಿದಾಗ ಅದರಲ್ಲಿ ಒಮ್ಮೆಲೆ ಪರಕೀಯ ಭಾವನೆ ಮೂಡುವುದಲ್ಲದೆ, ತಾನು ಇಷ್ಟು ದಿನ ಅಪ್ಪ ಅಮ್ಮ ಎಂದು ನಂಬಿದ್ದವರು ತನಗೆ ವಿಷಯ ತಿಳಿಸದೆ ಮೋಸ ಮಾಡಿದರು ಎಂದುಕೊಳ್ಳುತ್ತದೆ. ಇದರಿಂದ ಅವರ ಸಂಬಂಧದಲ್ಲಿ ಸರಿಪಡಿಸಲಾರದ ಕಂದಕ ಉಂಟಾಗುತ್ತದೆ. ಇದನ್ನು ತಪ್ಪಿಸಲು ಪೋಷಕರಿಗೆ ಇರುವ ಒಂದೇ ದಾರಿಯೆಂದರೆ ತಾವಾಗಿಯೇ ವಿಷಯವನ್ನು ಹೇಳುವುದು.
ಹಾಗಾದರೆ ಯಾವಾಗ ಮತ್ತು ಹೇಗೆ ಹೇಳುವುದು? ಇದರ ಬಗೆಗೆ ಯೋಚಿಸುವ ಮೊದಲು ಪೋಷಕರು ತಮ್ಮ ಮತ್ತು ಮಕ್ಕಳ ಬಾಂಧವ್ಯ ಗಟ್ಟಿಯಾಗಿದೆ ಎನ್ನವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ವಂತ ಮಕ್ಕಳಾದ ತನ್ನ ಸ್ನೇಹಿತರ ಪೋಷಕರಷ್ಟೇ ತಮ್ಮ ಅಪ್ಪ ಅಮ್ಮಂದಿರೂ ತನ್ನನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ ಎಂದು ಮಗುವಿಗೆ ಅನ್ನಿಸಿರಬೇಕು.
ಸಾಮಾನ್ಯವಾಗಿ ಮಗುವಿಗೆ ಸುಮಾರು ಹತ್ತು ವರ್ಷಗಳಾಗುವಷ್ಟರಲ್ಲಿ ದತ್ತಕದ ವಿಷಯವನ್ನು ತಿಳಿಸಬಹುದು. ಮಗುವಿನೊಡನೆ ಪೋಷಕರು ಇದರ ಬಗೆಗೆ ಖುದ್ದಾಗಿ ಮಾತನಾಡಬೇಕು. ಅಗತ್ಯವೆನ್ನಿಸಿದರೆ ಆಪ್ತಸಲಹೆಗಾರರ ಸಹಾಯ ಪಡೆದರೂ ದತ್ತಕದ ವಿಷಯವನ್ನು ಅವರ, ವೈದ್ಯರು, ಕುಟುಂಬದ ಆತ್ಮೀಯರ, ಅಜ್ಜ ಅಜ್ಜಿ ಮುಂತಾದವರ ಮೂಲಕ ಹೇಳಿಸಬಾರದು. ಪೋಷಕರಿಬ್ಬರೂ ಒಟ್ಟಾಗಿ ಕುಳಿತು ಮಾತನಾಡಬೇಕು. ಮಗು ಕೇಳುವವರೆಗೂ ಕಾಯದೇ ಪೋಷಕರೇ ಮೊದಲ ಹೆಜ್ಜೆ ಇಡಬೇಕು. ಹೇಳುವ ಮಾತುಗಳು ಸುಮಾರಾಗಿ ಈ ಧಾಟಿಯಲ್ಲಿರಬಹುದು.
“ಪುಟ್ಟಾ, ನೀನು ಸಿಗುವ ಮೊದಲು ಬಹಳ ವರ್ಷಗಳಿಂದ ನಮಗೆ ನಿನ್ನಂತದೇ ಒಂದು ಪುಟಾಣಿ ಇದ್ದರೆ ಎಷ್ಟು ಚನ್ನಾಗಿರುತ್ತದೆ ಅನ್ನಿಸುತ್ತಿತ್ತು. ಮನೆಯಲ್ಲಿ ಮಕ್ಕಳಿಲ್ಲದೆ ನಮಗೆ ಬಹಳ ಬೇಜಾರಾಗಿತ್ತು. ನಿನ್ನನ್ನು ನೋಡಿದ ಕೂಡಲೇ ನಮಗೆ ಬಹಳ ಆಸೆಯಾಯಿತು. ನೀನು ಯಾವ ಅಪ್ಪ ಅಮ್ಮನಿಂದ ಬಂದೆ ಅಂತ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರೋ ಒಬ್ಬ ಸ್ನೇಹಿತರು ನೀನಿರುವ ಸ್ಥಳವನ್ನು ತೋರಿಸಿ ಈ ಪುಟಾಣಿಗೆ ಅಪ್ಪ ಅಮ್ಮ ಬೇಕಾಗಿದೆ, ಅಂತ ಹೇಳಿದರು. ಹಾಗಾಗಿ ನಾವು ನಿನಗೆ ಅಪ್ಪ ಅಮ್ಮ ಆದೆವು. ಅವತ್ತಿನಿಂದ ನಾವೆಲ್ಲಾ ಒಟ್ಟಾಗಿ ನಗುನಗುತ್ತಾ ಬದುಕಿದೀವಿ. ನೀನು ಬಹಳ ಮುದ್ದಾಗಿ ಮತ್ತು ನಮಗೆ ಇಷ್ಟ ಆಗೋ ಹಾಗೆ ಇದ್ದೀಯಾ. ನೀನು ಯಾವಾಗಲೂ ನಮಗೆ ಬೇಕು”
ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡಬೇಕು. ಪೊಷಕರಲ್ಲಿರಬಹುದಾದ ಮುಜುಗರ, ಆತಂಕ, ಹಿಂಜರಿಕೆಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಅವುಗಳನ್ನು ನಿವಾರಿಸಿಕೊಂಡು ಸಹಜ ಮನಸ್ಥಿತಿಯಲ್ಲಿ ಮಾತನಾಡಲು ಪೋಷಕರಿಗೆ ಸಾಧ್ಯವಾಗಬೇಕು.
ಪ್ರಾರಂಭದ ಹಂತದಲ್ಲಿ ಮಗು ಅಳಬಹುದು, ಸಿಟ್ಟಾಗಬಹುದು, ಬೇಸರಮಾಡಿಕೊಳ್ಳಬಹುದು. ಆದರೆ ಪೋಷಕರು ತಮ್ಮ ಪ್ರೀತಿಯ ಅಭಿವ್ಯಕ್ತಿಯನ್ನು ಮುಂದುವರೆಸಿದರೆ ನಿಧಾನವಾಗಿ ಮಗು ವಾಸ್ತವವನ್ನು ಒಪ್ಪಿಕೊಳ್ಳುತ್ತದೆ.
ತಂದೆತಾಯಿಗಳ ಮಾತನ್ನು ಕೇಳಿದ ಮಗು ಬೇರೆ ಬೇರೆ ರೀತಿಯ ಪ್ರಶ್ನೆ ಕೇಳಬಹುದು. ಇಲ್ಲಿ ಎಚ್ಚರ ವಹಿಸಬೇಕಾದದ್ದು ಮಗುವಿಗೆ ಸುಳ್ಳು ಹೇಳಬಾರದು ಅಥವಾ ಮಗುವಿನ ಕುತೂಹಲವನ್ನು ಹತ್ತಿಕ್ಕಬಾರದು. ದತ್ತು ನೀಡಿದ ಸಂಸ್ಥೆ ಅಥವಾ ಇತರ ಆಪ್ತಸಲಹೆಗಾರರ ಸಹಾಯವನ್ನು ಪದೇಪದೇ ಉಪಯೋಗಿಸಬಹುದು.
ಈ ಎಲ್ಲಾ ಪ್ರಕ್ರಿಯೆ ಒಂದು ದಿನದಲ್ಲಿ ಮುಗಿಯುತ್ತದೆ ಎಂದು ಪೋಷಕರು ಅಪೇಕ್ಷಿಸಬಾರದು. ಕೆಲವೊಮ್ಮೆ ಹಂತಹಂತವಾಗಿ ಅಥವಾ ಹಲವಾರು ಬಾರಿ ಮಗುವಿಗೆ ಹೇಳಬೇಕಾಗಬಹುದು. ಇದರಿಂದ ದೊರೆಯಬಹುದಾದ ದೂರಾಗಮೀ ಉತ್ತಮ ಪರಿಣಾಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರು ಹತಾಶರಾಗದೆ ವ್ಯವಸ್ಥಿತವಾಗಿ ಕೆಲಸ ಮಾಡಬೇಕು.
ದತ್ತಕದ ವಿಷಯವನ್ನು ಭಾವೀ ಪತಿ ಅಥವಾ ಪತ್ನಿಗೆ ತಿಳಿಸುವುದು ಇಡೀ ಕುಟುಂಬದ ನಿರ್ಧಾರವಾಗಬೇಕು. ಎಲ್ಲಾ ವಿಚಾರವನ್ನು ತೆರೆದಿಡುವುದು ಮುಂದಿನ ಜೀವನದ ದೃಷ್ಟಿಯಿಂದ ಉತ್ತಮ. ಯಾವುದೇ ದೀರ್ಘಕಾಲದ ಆತ್ಮೀಯ ಸಂಬಂಧವನ್ನು ಸುಳ್ಳು ಹೇಳುವುದರ ಅಥವಾ ವಿಷಯಗಳನ್ನು ಗುಟ್ಟಾಗಿಡುವುದರ ಮೂಲಕ ಕಟ್ಟಲಾಗುವುದಿಲ್ಲ. ಪರಸ್ಪರ ನಂಬಿಕೆ ಗಟ್ಟಿ ಸಂಬಂಧಗಳ ಒಂದು ಅಡಿಗಲ್ಲು.
ಕೊನೆಯಲ್ಲಿ
ಜೀವನದಲ್ಲಿ ಮಕ್ಕಳು ನೀಡಬಹುದಾದ ಸಂತೋಷ ಮತ್ತು ಪೂರ್ಣತೆಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೋಷಕರು ದತ್ತಕದ ಬಗೆಗೆ ಯೋಚಿಸಬೇಕು. ಯಾವುದೇ ಹಂತದಲ್ಲಿಯೂ ಆತುರ ಪಡದೆ, ಎಲ್ಲಾ ಮಾಹಿತಿ ಪಡೆದು, ತಮ್ಮ ಅನುಮಾನ ಆತಂಕಗಳನ್ನು ಪರಿಹರಿಸಿಕೊಂಡು ಮುಂದುವರೆಯಬೇಕು. ಮಗುವನ್ನು ಆರಿಸುವಾಗ, ಬೆಳೆಸುವಾಗ ಗಾಳಿಗೋಪುರವನ್ನು ಕಟ್ಟದೆ ವಾಸ್ತವದ ಕಲ್ಪನೆ ಇಟ್ಟುಕೊಳ್ಳಬೇಕು. ಮಗು ಒಮ್ಮೆ ಮನೆಗೆ ಬಂದ ಮೇಲೆ ಹಿಂತಿರುಗಿ ನೋಡಬಾರದು.
ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಡಬೇಕಾದದ್ದು ಯಾವುದೂ ಸಮಸ್ಯೆಗಳೇ ಬಾರದಿದ್ದಾಗ ಮಾತ್ರ ದತ್ತು ಪಡೆದಿದ್ದು ಸಾರ್ಥಕವಾಯಿತು ಎಂದುಕೊಳ್ಳಬಾರದು. ಸ್ವಂತ ಮಕ್ಕಳಿರುವಾಗ ಕೂಡ ಸಮಸ್ಯೆಗಳಿದ್ದೇ ಇರುತ್ತವೆ. ಕಷ್ಟದ ಪರಿಸ್ಥಿತಿಗಳನ್ನು ಒಪ್ಪಿಕೊಂಡು ನಿಭಾಯಿಸುವುದನ್ನು ಕಲಿಯುವುದು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ. ಎಲ್ಲಾ ಹಂತದಲ್ಲಿಯೂ ಪೋಷಕರ ಮತ್ತು ಮಕ್ಕಳ ಸಹಾಯಕ್ಕೆ ದತ್ತು ಪಡೆದು ಸುಖಿಯಾಗಿ ಬದುಕುತ್ತಿರುವ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತಸಲಹೆಗಾರರು ಇದ್ದೇ ಇರುತ್ತಾರೆ.
ಮುಗಿಯಿತು.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!