ನಗರದ ಸಾರಿಗೆ ಬಸ್ ನಿಲ್ದಾಣದ ಬಳಿಯಿರುವ ನಗರಸಭೆ ನಿಧಿಯಿಂದ ನಿರ್ಮಿಸಲಾಗಿರುವ ಹಳೆಯ ನೆಲ ಅಂತಸ್ತಿನ 5 ಅಂಗಡಿ, ಸಂತೆ ಬೀದಿಯ 13 ಅಂಗಡಿ ಹಾಗೂ ಅಶೋಕ ರಸ್ತೆಯ 4 ಅಂಗಡಿ, ಅಂಚೆ ಕಚೇರಿಯ ರಸ್ತೆಯಲ್ಲಿರುವ ಒಂದು ಅಂಗಡಿ ಸೇರಿದಂತೆ 23 ಅಂಗಡಿಗಳ ಹರಾಜು ಪ್ರಕ್ರಿಯೆ ಇದೇ ಮೇ 28 ಕ್ಕೆ ಮುಂದೂಡಲಾಯಿತು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆಗೆ ಸೇರಿದ ಸುಮಾರು 23 ಅಂಗಡಿ ಮಳಿಗೆಗಗಳ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿತ್ತಾದರೂ ಕೊರೋನಾ ಹಿನ್ನಲೆಯಲ್ಲಿ ನಗರದ ವ್ಯಾಪಾರಿಗಳು ಹಾಗೂ ಜನತೆ ಸಂಕಷ್ಟದಲ್ಲಿರುವಾಗ ಹರಾಜು ಪ್ರಕ್ರಿಯೆ ನಡೆಸುವುದು ಸೂಕ್ತವಲ್ಲ, ಹಾಗಾಗಿ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಈ ಹಿಂದಿನಿಂದ ನಗರಸಭೆಗೆ ಸೇರಿದ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿರುವವರ ಮನವಿಯ ಮೇರೆಗೆ ಒಂದು ವಾರದ ಕಾಲಾವಕಾಶ ನೀಡಿ ಮುಂದೂಡಲಾಯಿತು.
ನಗರದ ಸಂತೆ ಮೈದಾನದಲ್ಲಿರುವ 13 ಅಂಗಡಿಗಳು ಸೇರಿದಂತೆ ಬಸ್ ನಿಲ್ದಾಣದ ಬಳಿಯಿರುವ 5 ಅಂಗಡಿಗಳಲ್ಲಿ ಕೆಲ ಅಂಗಡಿಗಳನ್ನು ಹರಾಜಿನಲ್ಲಿ ಪಡೆಯಲು ಕೆಲವರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿಡಿ ತೆಗೆಯುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಾದರೂ ಅಶೋಕ ರಸ್ತೆಯ ನಾಲ್ಕು ಅಂಗಡಿಗಳ ಪೈಕಿ ಯಾವೊಂದು ಅಂಗಡಿ ಪಡೆಯಲು ಯಾರೊಬ್ಬರೂ ಮುಂದಾಗಿರಲಿಲ್ಲ.
ಹರಾಜು ಪ್ರಕ್ರಿಯೆ ಮುಂದೂಡಬೇಕು ಎಂದು ಕೆಲವರು ಒತ್ತಾಯಿಸಿದರೆ ಮತ್ತೆ ಕೆಲವರು ಹರಾಜು ಪ್ರಕ್ರಿಯೆ ನಡೆಯಲೇಬೇಕು ಎಂದು ಹಠ ಹಿಡಿದು ಪರಸ್ಪರ ಮಾತಿನ ಚಕಮಕಿಗೆ ಇಳಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿದರು.
ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ಕಳೆದ ಹಲವು ತಿಂಗಳುಗಳಿಂದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ. ಈ ಬಗ್ಗೆ ಈಗಾಗಲೇ ಹಲವಾರು ಭಾರಿ ಪೌರ ಕಾರ್ಮಿಕರು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಗರಸಭೆಯಲ್ಲಿ ಹಣವಿಲ್ಲ. ಹಾಗಾಗಿ ಇರುವ ಅಂಗಡಿಗಳನ್ನು ಹರಾಜು ಮೂಲಕ ವಿಲೇ ಮಾಡಿ ಬರುವ ಹಣದಲ್ಲಿ ಪೌರ ಕಾರ್ಮಿಕರಿಗೆ ವೇತನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.
ಕಳೆದ ಕಲವು ವರ್ಷಗಳಿಂದ ಅದೇ ಅಂಗಡಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾ ಏಕಿ ಹರಾಜು ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ನಮಗೆ ಸ್ವಲ್ಪ ಕಾಲಾವಕಾಶ ನೀಡಿದಲ್ಲಿ ನಾವೇ ಠೇವಣಿ ಹಣವನ್ನು ಕಟ್ಟಿ ಹರಾಜಿನಲ್ಲಿ ಬಾಗವಹಿಸುತ್ತೇವೆ ಎಂದು ಬಾಡಿಗೆದಾರರು ಪಟ್ಟುಹಿಡಿದರು.
ದೂರವಾಣಿಯ ಮೂಲಕ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಪೌರಾಯುಕ್ತರ ಅವರ ಸೂಚನೆಯಂತೆ ಒಂದು ವಾರದ ಕಲಾವಕಾಶ ನೀಡಲಾಗುತ್ತದೆ ಮುಂದಿನ ಮೇ 28 ಕ್ಕೆ ನಡೆಯಲಿರುವ ಹರಾಜಿಗೆ ಎಲ್ಲರೂ ಸಹಕರಿಸುವಂತೆ ಪೌರಾಯುಕ್ತ ತ್ಯಾಗರಾಜ್ ಕೋರಿ ಹರಾಜು ಪ್ರಕ್ರಿಯೆಯನ್ನು ಮುಂದೂಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮಯ್ಯ, ಟಿ.ಮಂಜುನಾಥ್, ಎ.ಎಸ್.ನಾರಾಯಣಸ್ವಾಮಿ, ಮೌಲಾ, ಕೃಷ್ಣಮೂರ್ತಿ ಮುಖಂಡರಾದ ಬೆಳ್ಳೂಟಿ ಶ್ರೀರಾಮಣ್ಣ, ಲಕ್ಷ್ಮಿನಾರಾಯಣ(ಲಚ್ಚಿ), ನಗರಸಭೆ ಸಿಬ್ಬಂದಿ ವೆಂಕಟೇಶ್, ಮಧು ಹಾಜರಿದ್ದರು.
- Advertisement -
- Advertisement -
- Advertisement -







