23.6 C
Sidlaghatta
Monday, March 2, 2026

ಉತ್ತರ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ

- Advertisement -
- Advertisement -

ಯಾವುದೇ ಕಾರಣಕ್ಕೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಮಾಡಲು ಬಿಡುವುದಿಲ್ಲ, ಒಂದು ವೇಳೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾದರೆ ರೈತರ ಹೆಣಗಳ ಮೇಲೆ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಬೆದರಿಕೆ ಹಾಕಿ ಅಧಿಕಾರಿಗಳನ್ನು ಹಿಮ್ಮೆಟ್ಟಿಸಿರುವ ಘಟನೆ ತಾಲೂಕಿನ ಅಮರಾವತಿಯಲ್ಲಿ ನಡೆದಿದೆ.
ತಾಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಗ್ರಾಮದ ಸರ್ವೇ ನಂ 47 ರಲ್ಲಿ ಸುಮಾರು 496.36 ಗುಂಟೆ ಜಮೀನಿದ್ದು ಈ ಪೈಕಿ ಸುಮಾರು 356.31 ಗುಂಟೆಯಷ್ಟು ಜಮೀನು ರೈತರಿಗೆ ಮಂಜೂರಾಗಿದ್ದು ಇದರಲ್ಲಿ 218.38 ಗುಂಟೆಯಷ್ಟು ಜಮೀನು ದುರಸ್ತಿಯೂ ಆಗಿದ್ದು ಉಳಿದ 136 ಎಕರೆ ದುರಸ್ತಿಯಾಗಬೇಕಿದೆ. ಉಳಿಕೆ 141.05 ಗುಂಟೆ ಸರ್ಕಾರಿ ಜಮೀನನ್ನು ಗುರುತಿಸಿ ಅಳತೆ ಮಾಡಲು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೂಮಾಪಕರೊಂದಿಗೆ ಸ್ಥಳಕ್ಕೆ ಹೋದಾಗ ಗ್ರಾಮಸ್ಥರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ವಿಶ್ವವಿದ್ಯಾಲಯ ಕಟ್ಟಡ ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಒಂದು ವೇಳೆ ಸರಕಾರ ಇದನ್ನು ಕೈಬಿಡದಿದ್ದರೆ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡವನ್ನು ನಿರ್ಮಿಸಬಾರದೆಂದು ಆಗ್ರಹಿಸಿ ಗ್ರಾಮದ ಕೃಷ್ಣಮೂರ್ತಿ ಎಂಬ ರೈತ ವಿಷದ ಬಾಟಲು ಹಿಡಿದು ಅಧಿಕಾರಿಗಳನ್ನು ಬೆದರಿಸುತ್ತಿರುವುದು.

ಬೆಂಗಳೂರು ವಿಶ್ವ ವಿದ್ಯಾಲಯ ಕಟ್ಟಡ ನಿರ್ಮಿಸಲು ಮೊದಲಿಗೆ ತಾಲೂಕಿನ ಸುಂಡ್ರಹಳ್ಳಿ ಬಳಿ ಸ್ಥಳ ಗುರುತಿಸಿ ಇದೀಗ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಣಿದಿರುವ ಕಂದಾಯ ಇಲಾಖೆ ಅಧಿಕಾರಿಗಳು ಅಮರಾವತಿ ಗ್ರಾಮದ ಜಮೀನುಗಳ ಮೇಲೆ ಕಣ್ಣು ಹಾಕಿದ್ದಾರೆ. ನಮ್ಮ ಪೂರ್ವಜರ ಕಾಲದಿಂದಲೂ ಈ ಜಮೀನಿನಲ್ಲಿ ಬೆಲೆಯಿಟ್ಟು ಜೀವನ ನಡೆಸುತ್ತಿದ್ದೇವೆ. ಇದೀಗ ಏಕಾಏಕಿ ಅಧಿಕಾರಿಗಳು ಬಂದು ಜಮೀನನ್ನು ವಶಪಡಿಸಿಕೊಂಡರೆ ನಾವು ಬೀದಿ ಪಾಲಾಗುತ್ತೇವೆ. ಯಾವುದೇ ನೋಟೀಸ್ ನೀಡದೇ ಕಂದಾಯ ಅಧಿಕಾರಿಗಳು ಜಮೀನಿನ ಸರ್ವೇ ಕಾರ್ಯ ನಡೆಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಗ್ರಾಮದ ರೈತರು ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿ ಹಾಗು ಭೂಮಾಪಕರನ್ನು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಸಿ.ಮುನಿಯಪ್ಪ, ರಾಜಕಾಂತ್, ಚಂದ್ರಪ್ಪ, ಕೃಷ್ಣಮೂರ್ತಿ, ಜಯರಾಮಪ್ಪ, ಮುದ್ದಣ್ಣ, ಮಂಜುನಾಥ್, ಸುಬ್ರಮಣಿ, ಮುನಿವೆಂಕಟಪ್ಪ, ಮುನೀಂದ್ರಪ್ಪ, ಯಲ್ಲಪ್ಪ, ನಾರಾಯಣಸ್ವಾಮಿ, ಮಂಜು, ರಾಮಣ್ಣ ಮತ್ತಿತರರು ಹಾಜರಿದ್ದರು.
ಮೋಹನ್‍ಕುಮಾರ್, ರಾಜಸ್ವ ನಿರೀಕ್ಷಕ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ 172 ಎಕರೆ ಜಾಗ ಬೇಕು ಎಂದು ಸರ್ಕಾರ ಈಗಾಗಲೇ ಬೇಡಿಕೆ ಸಲ್ಲಿಸಿದ್ದು ಈಗಾಗಲೇ ಖುಲ್ಲಾ ಇರುವ 57 ಜಮೀನನ್ನು ವಶಪಡಿಸಿಕೊಂಡಿದ್ದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಸರ್ಕಾರಿ ಜಮೀನು ಸರ್ವೇ ಮಾಡಲು ಹೋದಾಗ ಗ್ರಾಮದ ಕೆಲವರು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಹಲ್ಲೆ ಮಾಡಲು ಯತ್ನಿಸಿರುವ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!