ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಅಫ್ಸರ್ ಪಾಷ ಮಾತನಾಡಿದರು.
ಅಂಗವಿಕಲರಿಗೆ ನಗರಸಭೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಅಂಗವಿಕಲರ ಅನುಕೂಲಕ್ಕಾಗಿಯೇ ಶೇ ೫ ಅನುದಾನವನ್ನು ಒದಗಿಸಿದ್ದು, ಈ ಅನುದಾನದಡಿ ಹಲವು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಅಂಗವಿಕಲ ಮಕ್ಕಳಿಗೆ ಅನುಕಂಪದ ಜತೆಗೆ ಪ್ರೀತಿ ತೋರಿಸಿದಾಗ ಅವರಿಗೂ ಬದುಕಿನಲ್ಲಿ ಭರವಸೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಅವರ ಪ್ರತಿಭೆಗಳನ್ನು ಗಮನಿಸಿ ಅದನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ನೈತಿಕ ಸ್ಥೈರ್ಯ ತುಂಬುವ ಕಾರ್ಯಾವಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಮಾತನಾಡಿ, ಅಂಗವಿಕಲ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು. ಅವರ ಆರೋಗ್ಯದ ಬಗ್ಗೆ ಕಾಲಕಾಲಕ್ಕೆ ಶಿಕ್ಷಕರು ಪೋಷಕರಿಂದ ಮಾಹಿತಿ ಪಡೆಯಬೇಕು. ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಶಾಲೆಗೆ ಬರಲು ತೊಂದರೆಯಿದ್ದಲ್ಲಿ ಅವರಿರುವ ಕಡೆಗೇ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಅವಕಾಶವಿದೆ. ಈ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಮಾಜ ಮಾಡಬೇಕಾಗಿದೆ. ಅಂಗವಿಕಲತೆಯನ್ನು ಶಾಪವೆಂದು ಭಾವಿಸದೇ ಸಾಧನೆ ಮಾಡುವ ಛಲವಿರಬೇಕು. ಪ್ರತಿಯೊಬ್ಬರು ಹುಮ್ಮಸ್ಸಿನಿಂದ ಜೀವನವನ್ನು ಸಾಗಿಸಬೇಕು ಗುರಿ ಸಾಧಿಸುವ ಮನೋಭಾವನೆ ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಕಪ್ಪೆ ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಗಾಯನ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆಯನ್ನು ನಡೆಸಿ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಸಮನ್ವಯಾಧಿಕಾರಿ ಭಾಸ್ಕರ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಶಿಕ್ಷಕರಾದ ರಂಗನಾಥ್, ತ್ಯಾಗರಾಜ್, ಸುದರ್ಶನ್, ನೇತ್ರ, ವೀಣಾ, ಪ್ರಕಾಶ್, ಪ್ರಭಾಕರ್, ಚಂದ್ರಕಲಾ, ಜಯಂತಿ, ಜಗದೀಶ್, ರಮೇಶ್, ಲಲಿತಮ್ಮ, ಶಾಂತಮ್ಮ ಹಾಜರಿದ್ದರು.
- Advertisement -
- Advertisement -
- Advertisement -