21.1 C
Sidlaghatta
Saturday, July 27, 2024

ಕೋಚಿಮುಲ್‌ನಿಂದ ಹೊಸ ತಂತ್ರಾಂಶ ಅಭಿವೃದ್ಧಿ

- Advertisement -
- Advertisement -

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಶೇಖರಣೆಯಾಗುತ್ತಿದ್ದಂತೆ ಹಾಲು ಶೇಖರಣೆಯ ಪ್ರಮಾಣ, ಗುಣಮಟ್ಟ ಇನ್ನಿತರೆ ಎಲ್ಲ ಅಂಶಗಳು ಕೋಚಿಮುಲ್‌ನ ಕೇಂದ್ರ ಕಚೇರಿಗೆ ಲಭ್ಯವಾಗುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೋಚಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಕಾಂತರಾಜು ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿಯ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಸೋಮವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಅಧ್ಯಕ್ಷರುಗಳ ಪ್ರಾದೇಶಿಕ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಶೇಖರಣೆಯಾಗುವ ಹಾಲಿಗೂ ಶಿಥಲೀಕರಣ ಕೇಂದ್ರಗಳಿಗೆ ಸರಬರಾಜು ಆಗುವ ಹಾಲಿನ ಪ್ರಮಾಣಕ್ಕೂ ವ್ಯತ್ಯಾಸ ಬರುತ್ತಿದೆ. ಹಾಗಾಗಿ ಪ್ರತಿ ಹಾಲಿನ ಡೇರಿಯಲ್ಲೂ ಹಾಲು ಶೇಖರವಾಗುತ್ತಿದ್ದಂತೆ ಕ್ಷಣಾರ್ಧದಲ್ಲಿಯೆ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಕೋಚಿಮುಲ್‌ನ ಕೇಂದ್ರ ಕಚೇರಿಯಲ್ಲಿ ಲಭ್ಯವಾಗುವಂತಹ ತಂತ್ರಾಂಶವನ್ನು ರೂಪಿಸಲಾಗುವುದು ಎಂದರು.
ಇದೀಗ ಕಡಿಮೆ ಗುಣಮಟ್ಟದ ಹಾಲು ಉತ್ಪಾದಕರಿಗೂ ಒಂದೇ ಬೆಲೆ ಹಾಗೂ ಉತ್ತಮ ಗುಣಮಟ್ಟದ ಹಾಲು ಪೂರೈಸುವ ರೈತನಿಗೂ ಒಂದೆ ಬೆಲೆ ನೀಡಲಾಗುತ್ತಿದೆ. ಈ ವ್ಯತ್ಯಾಸ ಹೋಗಬೇಕಿದೆ. ಹಾಗಾಗಿ ಗುಣಮಟ್ಟದ ಆಧಾರದ ಮೇಲೆ ಹಾಲಿಗೆ ಬೆಲೆ ನಿಗದಿಪಡಿಸಬೇಕಾಗಿದೆ ಎಂದು ಹೇಳಿದರು.
ಈಗ ಪ್ರತಿ ಲೀಟರ್ ಹಾಲಿಗೆ ೪ ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದ್ದು ಅದನ್ನು ೮ ರೂಪಾಯಿಗಳಿಗೆ ಹೆಚ್ಚಿಸುವಂತೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಲಾಗುವುದು. ಈಗಾಗಲೇ ಈ ಬಗ್ಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಎಲ್ಲ ಶಾಸಕರುಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಎಲ್ಲ ಶಾಸಕರನ್ನು ಸೇರಿಸಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಮುಂದಿಟ್ಟು ಈಡೇರಿಸುವಂತೆ ಮನವಿ ಮಾಡಿ ಹಾಲು ಉತ್ಪಾದಕರ ಕಷ್ಟಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಕೋಚಿಮುಲ್ ವ್ಯಾಪ್ತಿಯಲ್ಲಿ ಹಾಲಿನ ಗುಣಮಟ್ಟದಲ್ಲಿ ಪ್ರಥಮ ಸ್ಥಾನಕ್ಕಾಗಿ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟದ ನಡುವೆ ಪೈಪೋಟಿ ನಡೆಯುತ್ತಿದೆ. ಕಳೆದ ವರ್ಷ ಶೇಕಡಾ ೬೨ರಷ್ಟು ಇದ್ದ ಹಾಲಿನ ಗುಣಮಟ್ಟ ಇದೀಗ ೮೨ಕ್ಕೆ ಹೆಚ್ಚಿದೆ. ಇದಕ್ಕೆ ಕಾರಣರಾದ ಶಿಡ್ಲಘಟ್ಟ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಎಲ್ಲ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರುಗಳನ್ನು ಅಭಿನಂದಿಸುತ್ತೇನೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಮಾತನಾಡಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಾಲಿನ ಪೌಡರ್ ತಯಾರಿಕಾ ಘಟಕ ಅಥವಾ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕವನ್ನು ಆರಂಭಿಸುವಂತೆ ಕೋಚಿಮುಲ್‌ನ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಅದಕ್ಕೆ ಅಗತ್ಯವಾದ ೧೫ ಎಕರೆ ಜಮೀನು, ನೀರು ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ಸಹ ನೀಡಿದ್ದು ಅವರು ಯಾವುದಾದರೂ ಘಟಕವನ್ನು ಆರಂಭಿಸಲು ಎಲ್ಲ ರೀತಿಯ ನೆರವು, ಸಹಕಾರ ನೀಡುವುದಾಗಿ ಹೇಳಿದರು.
ತಾಲ್ಲೂಕಿನಲ್ಲಿಯೆ ಅತಿ ಹೆಚ್ಚು ಹಾಲು ಸಂಗ್ರಹಿಸುವ ಮಳಮಾಚನಹಳ್ಳಿ ಹಾಗೂ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳನ್ನು, ಹಾಲು ಗುಣಮಟ್ಟ ಪರೀಕ್ಷಾ ಯಂತ್ರವನ್ನು ಅಳವಡಿಸಿಕೊಂಡ ಮೊದಲ ಸಂಘವಾದ ಮಳ್ಳೂರು ಸಂಘದ ಅಧ್ಯಕ್ಷ, ಕಾರ್ಯದರ್ಶಿಯವರನ್ನು ಹಾಗೂ ನಿವೃತ್ತರಾದ ಚೌಡಸಂದ್ರದ ಕಾರ್ಯದರ್ಶಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೋಚಿಮುಲ್‌ನ ಪ್ರಧಾನ ವ್ಯವಸ್ಥಾಪಕ ಡಾ.ಹೆಗ್ಗಡೆ, ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್, ಸ್ಥಳೀಯ ಶಿಬಿರ ಕಚೇರಿಯ ವ್ಯವಸ್ಥಾಪಕ ಡಾ.ಈಶ್ವರಯ್ಯ, ಕೆಬಿಎನ್ ರೆಡ್ಡಿ ಮತ್ತಿತರರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!