ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಗ್ರಂಥಾಲಯಗಳು ಅವಶ್ಯಕ. ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯ ಜೀವಂತ ದೇವಾಲಯಗಳು ಎಂದು ಕವಿ ಚಂದ್ರಶೇಖರ ಹಡಪದ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ತಾಲ್ಲೂಕು ಕಸಾಪ ವತಿಯಿಂದ ‘ಶಾಲೆಗಳ ಗಂಥಾಲಯಕ್ಕೆ ಪುಸ್ತಕ ಕೊಡುಗೆ’ ಕಾರ್ಯಕ್ರಮದಡಿ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಶಾಲೆಯಲ್ಲಿನ ‘ಗ್ರಂಥಾಲಯ’ ಮಾಹಿತಿ ಒದಗಿಸುವುದರೊಂದಿಗೆ ಮಗುವಿನ ಸ್ವತಂತ್ರ ಕಲಿಕೆಗೆ ಸಹಾಯಕವಾಗಬೇಕು. ‘ಶಾಲೆಯ ಗ್ರಂಥಾಲಯ’ ಮಗುವಿನ ಕಲಿಕೆಗೆ ಪೂರಕ ಶಕ್ತಿಯಾಗಬೇಕು. ಶಾಲೆಯ ಗ್ರಂಥಾಲಯವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಮಗುವಿನ ಕೂತೂಹಲವನ್ನು ತಣಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಗ್ರಂಥಾಲಯ ಸಹಾಯಕವಾಗಬಲ್ಲದು ಮತ್ತು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ನಿರಂತರ ಅಧ್ಯಯನದ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ. ಗ್ರಂಥಾಲಯವು ಮಗುವಿನ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ ಮತ್ತು ವೈಯಕ್ತಿಕ ಗುಣಮಟ್ಟದ ವೃದ್ಧಿಗೆ ಸಹಾಯವಾಗುತ್ತದೆ ಎಂದು ವಿವರಿಸಿದರು.
ತಾಲ್ಲೂಕು ಕಸಾಪ ವತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸಿಕೊಟ್ಟು, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಅವರು ವಿವರವನ್ನು ನೀಡಿದರು.
ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಳುವನಹಳ್ಳಿಯ ಸೀತಾ ರಾಮಚಂದ್ರ ವಿದ್ಯಾಸಂಸ್ಥೆ, ಗಂಭೀರನಹಳ್ಳಿ, ಜಂಗಮಕೋಟೆಯ ಜ್ಞಾನಜ್ಯೋತಿ, ಜ್ಯೋತಿ, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಿದರು.
ಕಸಾಪ ಸದಸ್ಯ ಗುರುನಂಜಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -