ಕ್ಷೇತ್ರದಲ್ಲಿ ೨೦೧೮ ರ ವಿಧಾನಸಭೆ ಚುನಾವಣೆಯು ವಿವಿಧ ಪಕ್ಷಗಳ ನಡುವೆ ನಡೆಯುವುದಿಲ್ಲ, ಬದಲಿಗೆ ಜನಸೇವಕರು ಹಾಗೂ ಭ್ರಷ್ಟರ ನಡುವೆ ನಡೆಯುವ ಸಮರವಾಗಿದೆ ಎಂದು ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳನ್ನು ತೊರೆದು ಬಂದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾವು ಕಳೆದ ೧೨ ವರ್ಷಗಳಿಂದ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಭಿಮಾನದಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡುವ ಆಸೆಯಿಂದ ಕ್ಷೇತ್ರದಾದ್ಯಂತ ಕೈಲಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಇದೀಗ ಕ್ಷೇತ್ರದ ಯುವಜನತೆ ಹಾಗೂ ಪಕ್ಷದ ಕಾರ್ಯಕರ್ತರು ಬಿ.ಎನ್.ರವಿಕುಮಾರ್ ಅಭಿಮಾನಿಗಳ ಬಣ ಎಂದು ಕರೆಯುವುದನ್ನು ಬಿಟ್ಟು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಬಣ ಎಂದು ಗುರುತಿಸಿಕೊಳ್ಳಬೇಕು ಎಂದರು.
ಜೆಡಿಎಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಬಹುತೇಕ ಮುಖಂಡರೂ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಕುಟುಂಬದ ಏಳಿಗೆಗಾಗಿ ಕಳೆದ ಐದು ವರ್ಷಗಳನ್ನು ಬಳಸಿಕೊಂಡ ಹಾಲಿ ಶಾಸಕರ ವರ್ತನೆಯನ್ನು ಪ್ರಶ್ನಿಸಿದ ತಪ್ಪಿಗೆ ಜೆಡಿಎಸ್ನ ಬಹುತೇಕ ಮುಖಂಡರು ಮೂಲೆಗುಂಪಾದರು. ಇಂತಹ ಮೂಲೆಗುಂಪಾದ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನೆಲ್ಲಾ ಒಂದೆಡೆ ಸೇರಿಸಿ ಅವರೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬುವ ಜೊತೆಗೆ ಪಕ್ಷ ಉಳಿಸುವ ಜೊತೆಗೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದಲ್ಲಿ ಏನಾದರೂ ಅಲ್ಪ ಸ್ವಲ್ಪ ಅಭಿವೃದ್ಧಿ ಕೆಲಸಗಳಾಗಿದೆ ಎಂದರೆ ಅದು ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪನವರ ಕಾಲದಲ್ಲಿ ಮಾತ್ರ. ಕ್ಷೇತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯ, ೧೧ ನೇ ಮೈಲಿಯಲ್ಲಿರುವ ಮೊರಾರ್ಜಿ ವಸತಿನಿಲಯ, ಸಾದಲಿ ಬಳಿ ಹಾಲು ಶೀಥಲೀಕರಣ ಕೇಂದ್ರ, ರೇಷ್ಮೆ ಗೂಡು ಮಾರುಕಟ್ಟೆ ಯಂತಹ ಶಾಶ್ವತ ಕಾರ್ಯಗಳನ್ನು ಮಾಡಿರುವ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಹೆಸರು ಕ್ಷೇತ್ರದಲ್ಲಿ ರಾರಾಜಿಸುತ್ತಿದೆ ಎಂದರು.
ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದಿಂದ ಸ್ಪರ್ಧಿಸಿ ಐದು ಭಾರಿ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ ವಿ.ಮುನಿಯಪ್ಪ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂಬುದನ್ನು ಜನತೆ ಪ್ರಶ್ನಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಯೋಜನೆಗಳನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಮತಯಾಚಿಸುವ ವಿ.ಮುನಿಯಪ್ಪ ಕ್ಷೇತ್ರಕ್ಕೆ ಕಳೆದ ಮೂವತ್ತು ವರ್ಷಗಳಲ್ಲಿ ತಾನು ಏನು ಮಾಡಿದ್ದೇನೆ ಎಂಬುದನ್ನು ಮುಂದಿಟ್ಟುಕೊಂಡು ಜನತೆಯ ಬಳಿಗೆ ಬರಲಿ ಎಂದರು.
ಜೆಡಿಎಸ್ ಹಿರಿಯ ಮುಖಂಡ ದೊಣ್ಣಹಳ್ಳಿ ರಾಮಣ್ಣ ಮಾತನಾಡಿ, ೧೯೮೩ ರಲ್ಲಿ ಮಾಜಿ ಶಾಸಕ ಎಸ್. ಮುನಿಶಾಮಪ್ಪನವರಿಗೆ ಬಿ ಫಾರಂ ತಪ್ಪಿದಾಗ ಯಾವ ಸ್ಥಿತಿಯಿತ್ತೋ ಇದೀಗ ಅಂತಹುದ್ದೇ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಾದ್ಯಂತ ಬಹುತೇಕ ಮತದಾರರು ಬಿ.ಎನ್.ರವಿಕುಮಾರ್ರನ್ನು ಶಾಸಕರನ್ನಾಗಿ ನೋಡಲು ಬಯಸುತ್ತಿದ್ದಾರೆ. ಜನತೆಯ ಬೆಂಬಲವೇ ಬಿ ಫಾರಂ ಆಗಿದೆ. ಬಿ.ಎನ್.ರವಿಕುಮಾರ್ ಪರ ಜನ ಬೆಂಬಲ ಸಾಕಷ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಶಕ್ತಿ ಕೇವಲ ರವಿಕುಮಾರ್ಗೆ ಮಾತ್ರ ಇದೆ. ದಯವಿಟ್ಟು ಕ್ಷೇತ್ರದ ಜನತೆ ಈ ಭಾರಿಯ ಚುನಾವಣೆಯಲ್ಲಿ ಜನರಿಗಾಗಿ ದುಡಿಯುವಂತಹವರನ್ನು ಆಯ್ಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಎಸ್.ಗೊಲ್ಲಹಳ್ಳಿ ಸೇರಿದಂತೆ ಪೂಸಗಾನದೊಡ್ಡಿ, ನೇರಳೆಮರದಹಳ್ಳಿ, ಎಸ್.ವೆಂಕಟಾಪುರ ಗ್ರಾಮದ ನೂರಾರು ಮಂದಿ ಯುವಕರು ಕಾಂಗ್ರೆಸ್ ತೊರೆದು ಬಿ.ಎನ್.ರವಿಕುಮಾರ್ ನೇತೃತ್ವದ ಜೆಡಿಎಸ್ ಬಣಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯ ರಾಜಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಂ.ಗೋಪಾಲ್, ಮುಖಂಡರಾದ ಬಚ್ಚನಹಳ್ಳಿ ನಾರಾಯಣಸ್ವಾಮಿ, ಯರ್ರಬಚ್ಚಪ್ಪ, ನರಸಿಂಹರೆಡ್ಡಿ, ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -