ಶಿಡ್ಲಘಟ್ಟ ತಾಲ್ಲೂಕು ಹಿಂದೆ ಪೈಲ್ವಾನರಿಗೆ ಹೆಸರಾಗಿತ್ತು. ಹಲವಾರು ಹೆಸರುವಾಸಿ ಗರಡಿ ಮನೆಗಳಿದ್ದವು. ಹಲವಾರು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಯುವಕರು ತರಬೇತಿ ಪಡೆದು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಚಾರಿಟೆಬಲ್ ಟ್ರಸ್ಟ್ ಮತ್ತು ಕುರುಬರ ಪೇಟೆಯ ಶ್ರೀರಾಮ ಗರಡಿ ಮನೆ ಸಹಯೋಗದಲ್ಲಿ ಹೆಲ್ತ್ ಕಾಲೋನಿ ರಸ್ತೆಯಲ್ಲಿ ನಗರಸಭೆಯ ನಿವೇಶನದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಿಮ್ ತಲೆ ಎತ್ತಿ ನಿಂತಿವೆ. ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಆದರೆ ಗರಡಿ ಗುರುಗಳು ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಾರೆ. ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳನ್ನು ಉಳಿಸಿಕೊಳ್ಳಬೇಕು. ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಶ್ರೀರಾಮ ಭಕ್ತ ಆಂಜನೇಯನ ದೇಹಧಾಡ್ಯ, ಶ್ರದ್ಧಾ ಭಕ್ತಿ ಶಿಸ್ತು ನಮಗೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಕುಸ್ತಿ ಪಂದ್ಯಾವಳಿಗಾಗಿಯೇ ತುಮಕೂರು, ಮೈಸೂರು, ಹುಬ್ಬಳ್ಳಿ, ಕನಕಪುರ, ಚನ್ನಪಟ್ಟಣ, ಬೆಂಗಳೂರು ಮತ್ತಿತರೆಡೆಯಿಂದ ಪೈಲ್ವಾನರು ಬಂದಿದ್ದರು ಕುಸ್ತಿ ಪಂದ್ಯಾವಳಿ ರೋಚಕ ಕ್ಷಣಗಳಿಗೆ ನೂರಾರು ಮಂದಿ ಪ್ರೇಕ್ಷಕರು ಸಾಕ್ಷಿಯಾದರು.
ಮರಿ ಪೈಲ್ವಾನರು ಸೆಣೆಸಿ ಜನರಿಂದ ಮೆಚ್ಚುಗೆ ಪಡೆದದ್ದು ಒಂದೆಡೆಯಾದರೆ, ಮದಗಜಗಳಂತಿದ್ದ ಹಿರಿಯ ಪೈಲ್ವಾನರು ಮಾರ್ ಪೀಟ್ ನಡೆಸಿ ಜನರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಸುತ್ತಮುತ್ತಲ ಎತ್ತರದ ಕಟ್ಟಡಗಳು ಹಾಗೂ ಮರದ ಮೇಲೆ ಹತ್ತಿ ಕುಸ್ತಿ ಪಂದ್ಯಾವಳಿಗಳನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹಣಿಯಲು ನಡೆಸಿದ ತಂತ್ರ ಹಾಗೂ ಪ್ರತಿತಂತ್ರ ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿಬಂದಿತು. ವಿಜೇತರ ಅಭಿಮಾನಿಗಳಾದವರು ಕೇಕೆ ಹಾಕಿ, ಕೂಗಿ ಕುಣಿದ ದೃಶ್ಯ ಸಹ ಕಂಡುಬಂತು.
ಕೆಮ್ಮಣ್ಣಿನಿಂದ ನಿರ್ಮಿಸಿದ್ದ ಎತ್ತರದ ಕುಸ್ತಿ ಅಖಾಡದ ಸುತ್ತಲೂ ನೆರೆದಿದ್ದ ನೂರಾರು ಜನರು ಕುಸ್ತಿ ಪಟುಗಳ ಪ್ರತಿಯೊಂದು ಪಟ್ಟನ್ನೂ ಕಣ್ಣು ಮಿಟುಕಿಸದೆ ಕಣ್ತುಂಬಿಕೊಂಡು, ರೋಮಾಂಚನಗೊಂಡರು. ಆಹ್ವಾನಿತರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಸ್ಥಳೀಯ ಪೈಲ್ವಾನರು ಕೂಡ ಸೆಣಸಿ ಸೈ ಎನಿಸಿಕೊಂಡರು.
ಎಲ್ಲ ಪೈಲ್ವಾನರಿಗೂ ಟ್ರೋಫಿ, ಪ್ರಮಾಣ ಪತ್ರ ಹಾಗೂ ಹೂವಿನ ಹಾರವನ್ನು ಹಾಕಿ ಅಭಿನಂದಿಸಲಾಯಿತು. ವಿಶೇಷ ಮಾರ್ ಪೀಟ್ನಲ್ಲಿ ಗೆದ್ದವರಿಗೆ ನಗದು ಮತ್ತು ಟ್ರೋಫಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ನಗರಸಭಾ ಸದಸ್ಯರಾದ ಲಕ್ಷ್ಮಣ, ವೆಂಕಟಸ್ವಾಮಿ, ತಾದೂರು ರಘು, ಚೀಮನಹಳ್ಳಿ ಗೋಪಾಲ್ ಹಾಜರಿದ್ದರು.
- Advertisement -
- Advertisement -
- Advertisement -