ತಾಲ್ಲೂಕಿನ ಅತಿ ದೊಡ್ಡ ಕೆರೆಯೆಂದೇ ಖ್ಯಾತವಾದ ಅಮಾನಿ ಭದ್ರನ ಕೆರೆಯ ಒತ್ತುವರಿಯನ್ನು ಬುಧವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರವುಗೊಳಿಸಿದ್ದಾರೆ.
ಸುಮಾರು 840 ಎಕರೆ ವಿಸ್ತೀರ್ಣವಿರುವ ಈ ಬೃಹತ್ ಕೆರೆಯ ಅಚ್ಚುಕಟ್ಟಿನಲ್ಲಿ ಹದಿಮೂರು ಹಳ್ಳಿಗಳಿವೆ. ಸುಮಾರು 435 ಎಕರೆಯಷ್ಟು ಒತ್ತುವರಿಯಾಗಿದ್ದು, ರಾಗಿ, ಜೋಳ, ಹಿಪ್ಪುನೇರಳೆ, ಮೆಣಸಿನಕಾಯಿ, ದನಿಯಾ ಮುಂತಾದ ಬೆಳೆಗಳನ್ನಿಡಲಾಗಿದೆ. ಸುಮಾರು 18 ಖಾಸಗಿ ಕೊಳವೆ ಬಾವಿಗಳನ್ನು ಕೊರೆಸಿರುವುದಲ್ಲದೆ ಹನಿನೀರಾವರಿಯನ್ನೂ ಅಳವಡಿಸಲಾಗಿದೆ. ವಿಜಯಪುರ ಪುರಸಭೆಯ ವತಿಯಿಂದ 35 ಕೊಳವೆಬಾವಿಗಳು, ಹೊಸಪೇಟೆ ಪಂಚಾಯತಿಯಿಂದ 2 ಕೊಳವೆ ಬಾವಿಗಳನ್ನಿಲ್ಲಿ ಕೊರೆಸಲಾಗಿದೆ.
‘ಒಂದು ವಾರದಿಂದ ಪೂರ್ವಭಾವಿ ಸಭೆಗಳನ್ನು ನಡೆಸಿದ್ದು, ಪೊಲೀಸ್ ಬಂದೋಬಸ್ತ್ ಪಡೆದು 350 ಎಕರೆ 15 ಗುಂಟೆ ಒತ್ತುವರಿಯನ್ನು ಈ ದಿನ ತೆರವುಗೊಳಿಸುತ್ತಿದ್ದೇವೆ. ಗಡಿಯನ್ನು ಗುರುತಿಸಿ ಜೆಸಿಬಿ ಬಳಸಿ ಕಾಲುವೆಯನ್ನು ತೋಡಿಸಲಾಗಿದೆ. ಗಡಿಯಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಹೆಚ್ಚು ಬಹುಕಾಲ ಬಾಳಿಕೆ ಬರುವ ಗಿಡಗಳನ್ನು ನೆಡುತ್ತಿದ್ದೇವೆ. ಒತ್ತುವರಿ ಜಾಗದಲ್ಲಿರುವ ಬೆಳೆಯನ್ನು ಈ ಬಾರಿ ಬೆಳೆದವರಿಗೆ ಕಟಾವು ಮಾಡಿಕೊಳ್ಳಲು ಅವಕಾಶ ನೀಡುತ್ತೇವೆ. ಖಾಸಗಿ ಕೊಳವೆ ಬಾವಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ವಶಕ್ಕೆ ತೆಗೆದುಕೊಳ್ಳುತ್ತದೆ. ಜಿಲ್ಲಾದ್ಯಂತ ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸುತ್ತಿದ್ದು, ಮುಂದಿನ ಮುಂಗಾರು ಪ್ರಾರಂಭವಾಗುವಷ್ಟರಲ್ಲಿ ಈ ಕೆಲಸ ಮುಗಿಸುತ್ತೇವೆ. ಕೆರೆಯಲ್ಲಿ ನೀರು ನಿಲ್ಲುವಂತಾದರೆ, ಅಂತರ್ಜಲ ವೃದ್ಧಿಸಿ, ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
‘ಕೆರೆಗಳು ಸಾರ್ವಜನಿಕ ಆಸ್ತಿಗಳು. ದೇವಾಲಯಕ್ಕಿಂತ ಹೆಚ್ಚು ಮಹತ್ವವನ್ನು ನೀಡಿ ಅವನ್ನು ಉಳಿಸಿಕೊಳ್ಳಬೇಕು. ಹಿಂದೆ ನಮ್ಮನ್ನಾಳಿದ ಅರಸರು ಕೆರೆಗಳನ್ನು ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಎಲ್ಲರ ಅನುಕೂಲಕ್ಕೆಂದು ಕಟ್ಟಿಸಿದ್ದಾರೆ. ಒತ್ತುವರಿ ಮಾಡುವವರಿಗೆ ತಿಳಿಹೇಳಿ. ಸರ್ಕಾರದಲ್ಲಿ ಕೆರೆ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕಾನೂನುಗಳಿವೆ. ಆದರೂ ನಮ್ಮ ಕೆರೆ, ನಮ್ಮ ನೆಲ, ನಮ್ಮ ನೀರು, ನಮ್ಮ ನಾಡು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಯಾರೂ ಒತ್ತುವರಿ ಮಾಡುವುದಿಲ್ಲ. ಗ್ರಾಮ ಪಂಚಾಯತಿಯಲ್ಲಿ ಕೆರೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಕೆರೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಬೇಕು’ ಎಂದು ಅವರು ಹೇಳಿದರು.
ಡಿ.ಡಿ.ಎಲ್.ಆರ್. ಅಧಿಕಾರಿ ಅಜ್ಜಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ನಾಗರಾಜ್, ನವಾಬ್ ಪಾಷ, ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -