ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಬೌದ್ಧಧರ್ಮಿಯರನ್ನು ನಿಂದಿಸಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಡಾ.ಕೆ.ಸುಧಾಕರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ಪ್ರತಿಭಟಿಸಿ, ರಾಜ್ಯಪಾಲರಿಗೆ ತಹಶೀಲ್ದಾರ್ ಅವರ ಮೂಲಕ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, “ಬ್ರಾಹ್ಮಣರ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು, ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ ಎಂದು ಮಾತನಾಡಿದ್ದಾರೆ. ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮುತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದಿದ್ದಾರೆ. ಬ್ರಾಹ್ಮಣರನ್ನು ಹೊಗಳುತ್ತಾ ಬೌದ್ಧಧರ್ಮವನ್ನು ಅವಮಾನಿಸುವ ಧಾಟಿಯಲ್ಲಿ ಅವರು ಮಾತನಾಡಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತಿದೆ” ಎಂದರು.
ಸಚಿವರಾದಂತ ಡಾ.ಕೆ.ಸುಧಾಕರ್ ಅವರ ಮಾತನಾಡಿರುವುದು ಸಂವಿಧಾನದ ಉಲ್ಲಂಘನೆ ಆಗಿದೆ. ನಮ್ಮ ಸಂವಿಧಾನವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತದೆ. ಬ್ರಾಹ್ಮಣರ ವೇದಿಕೆಯಲ್ಲಿ ಬೌದ್ಧಧರ್ಮವನ್ನು ನಿಂದಿಸಿ ಬ್ರಾಹ್ಮಣರನ್ನು ಹೊಗಳುವುದು, ದಮನಿತ ಸಮುದಾಯದ ವೇದಿಕೆಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ರನ್ನು ಹೊಗಳುವುದು ಓಟಿನ ರಾಜಕಾರಣ ಮತ್ತು ಒಬ್ಬ ಶೂದ್ರನಲ್ಲಿರುವ ಬ್ರಾಹ್ಮಣ್ಯವೇ ಆಗಿದೆ. ಇವರಲ್ಲಿ ಇರುವುದು ಸ್ವಹಿತಾಸಕ್ತಿ ಮತ್ತು ಬ್ರಾಹ್ಮಣ್ಯದ ಪೋಷಣೆಯೇ ಆಗಿದೆ. ಹೊರಗಡೆ ಬುದ್ಧನನ್ನು ಪೂಜಿಸುತ್ತಾ, ಒಳಗಡೆ ಮನುವಿನ ಚಾತುವರ್ಣವನ್ನು ಇಟ್ಟುಕೊಂಡಿದ್ದಾರೆ.
ಸಾವಿರಾರು ವರ್ಷಗಳಿಂದ ದಲಿತರನ್ನು ಮನುಷ್ಯರೆಂದು ಕಾಣದೆ, ಕುಡಿಯಲು ನೀರು ಕೊಡದೆ, ಮುಟ್ಟಿಸಿಕೊಳ್ಳದೇ ಆಸ್ಪೃಶ್ಯತೆಗೆ ತಳ್ಳಿ ನಮ್ಮನ್ನೆಲ್ಲಾ ಶೋಷಣೆ, ಅವಮಾನ, ದೌರ್ಜನ್ಯ ಮಾಡುತ್ತಿದ್ದದ್ದು ಹಿಂದೂ ಧರ್ಮ. ಇಂಥ ಸಂದರ್ಭದಲ್ಲಿ ನಮಗೆ ಬೆಳಕಾಗಿ ತೋರಿದ್ದು, ನಮಗೆ ವಿಮೋಚನೆ ನೀಡಿದ್ದು ಬುದ್ಧನ ಧರ್ಮ.
ಸಂವಿಧಾನದ ಆರ್ಟಿಕಲ್ 16ನೇ ಪ್ರಕಾರ ಧರ್ಮ, ಜಾತಿ, ವ್ಯಕ್ತಿಯನ್ನು ನಿಂದಿಸುವುದು ಅಪರಾಧವಾಗಿದೆ. ಸಚಿವರು ಈ ನಡೆ ಆರ್ಟಿಕಲ್ 15 ರ ಉಲ್ಲಂಘನೆ ಆಗಿದೆ. ಸಚಿವರು ತಮ್ಮ ಓಟಿನ ರಾಜಕಾರಣ, ಜಾತಿಗಳನ್ನು ಓಲೈಸುವುದು ಬಿಡಬೇಕು. ಬೌದ್ಧಧರ್ಮಕ್ಕೆ ಮಾಡಿದ ಅಪಚಾರಕ್ಕೆ ರಾಜ್ಯದ ಶೋಷಿತ ಸಮುದಾಯದಲ್ಲಿ ಕ್ಷಮೆ ಕೇಳಬೇಕು. ತಮ್ಮ ಒಳಗಿರುವ ಬ್ರಾಹ್ಮಣ್ಯವನ್ನು ತೊರೆದು ಅವರು ಕೂಡ ಆನ್ಯ ವೇದಿಕೆಗಳಲ್ಲಿ ಭಿನ್ನ ಹೇಳಿಕೆಗಳನ್ನು ಕೊಡಬಾರದೆಂದು ಒತ್ತಾಯಿಸಿದರು.
ಕರ್ನಾಟಕ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ನಾಗನರಸಿಂಹ, ತಾತಹಳ್ಳಿ ಛಲಪತಿ, ವೆಂಕಟೇಶ್, ದ್ಯಾವಕೃಷ್ಣ ಹಾಜರಿದ್ದರು.