ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಕೆರೆಯ ಏರಿಯ ಮೇಲೆ ಅತ್ಯಂತ ಹಳೆಯ ಬೇವಿನ ಮರಗಳಿವೆ. ಈ ಮರಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಗುರುತಿಸಿರುವ ರಾಜ್ಯದ ಹತ್ತು ಪರಂಪರಾಗತ ಮರಗಳಲ್ಲಿ (ಹೆರಿಟೇಜ್ ಟ್ರೀಸ್) ಈ ಮರವೂ ಒಂದು.
ಸುಮಾರು ಇಪ್ಪತ್ತು ಅಡಿ ಸುತ್ತಳತೆಯ ಈ ಮರ ಎಸ್.ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇ ಮರದಹಳ್ಳಿ ಮತ್ತು ಎಸ್.ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಏರಿ (ಕಟ್ಟೆ) ಮತ್ತು ಬೆಟ್ಟಗಳ ನಡುವೆ ಈ ಮರವಿದೆ.
ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ಪಾರಂಪರಿಕ ವೃಕ್ಷದ ಬಗ್ಗೆ ಮಾಹಿತಿಯನ್ನು ತಪ್ಪಾಗಿ ನೀಡಲಾಗಿದೆ. ಎಸ್.ವೆಂಕಟಾಪುರ ಎಂದು ಇರಬೇಕಾದೆಡೆ ಟಿ.ವೆಂಕಟಾಪುರ ಎಂದು ಮುದ್ರಿತವಾಗಿದೆ. ಪಠ್ಯಪುಸ್ತಕದ 3ನೇ ಅಧ್ಯಾಯ ‘ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತು’ ಎಂಬ ಪಾಠವಿದೆ. ಅದರಲ್ಲಿ ಈ ತಪ್ಪು ಉಂಟಾಗಿದೆ.
‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೂರು ವೆಂಕಟಾಪುರ ಗ್ರಾಮಗಳಿವೆ. ಎಸ್.ವೆಂಕಟಾಪುರ(ಸಾದಲಿ), ಟಿ.ವೆಂಕಟಾಪುರ(ತಲಕಾಯಲಬೆಟ್ಟ) ಮತ್ತು ಜೆ.ವೆಂಕಟಾಪುರ(ಜಂಗಮಕೋಟೆ). ಸಾದಲಿ ಪಂಚಾಯತಿಗೆ ಸೇರಿರುವ ನಮ್ಮ ಗ್ರಾಮ ಎಸ್.ವೆಂಕಟಾಪುರದ ಬಳಿ ಪರಂಪರಾಗತ ಮರಗಳಲ್ಲಿ (ಹೆರಿಟೇಜ್ ಟ್ರೀಸ್) ಒಂದಾದ ಪುರಾತನ ಬೇವಿನ ಮರವಿದೆ. ಅದು ನಮಗೆ ಹೆಮ್ಮೆ. ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಮ್ಮ ಗ್ರಾಮದ ಬಗ್ಗೆ ತಪ್ಪಾಗಿ ಮಾಹಿತಿ ಮುದ್ರಿತವಾಗಿದೆ. ನಮ್ಮ ತಾಲ್ಲೂಕಿನ ಶಿಕ್ಷಕರಿಗಾದರೆ ಎಸ್.ವೆಂಕಟಾಪುರ ಹಾಗೂ ಟಿ.ವೆಂಕಟಾಪುರದ ನಡುವೆ ವ್ಯತ್ಯಾಸ ತಿಳಿದಿದೆ. ಸರಿಪಡಿಸಿ ಮಕ್ಕಳಿಗೆ ಪಾಠ ಹೇಳುತ್ತಾರೆ. ಆದರೆ ರಾಜ್ಯಾದ್ಯಂತ ತಪ್ಪು ಮಾಹಿತಿ ರವಾನೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ತಪ್ಪನ್ನು ಸರಿಪಡಿಸಬೇಕು. ಜನಪ್ರತಿನಿಧಿಗಳೂ ಸಹ ನಮ್ಮ ತಾಲ್ಲೂಕಿನ ಹೆಮ್ಮೆಯ ಸಂಗತಿಯ ಬಗ್ಗೆ ಸರಿಯಾದ ಮಾಹಿತಿ ರವಾನೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಎಸ್.ವೆಂಕಟಾಪುರ ಗ್ರಾಮದ ಮುನಿಕೃಷ್ಣಪ್ಪ ತಿಳಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







