ಪಠ್ಯ ಚಟುವಟಿಕೆಗಳೊಂದಿಗೆ ಸ್ವಯಂ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಆ ಮೂಲಕ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಅದು ಸಹಾಯಕವಾಗುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕ ಎಂ.ಪುಟ್ಟಮಾದಯ್ಯ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳನ್ನು ನಮ್ಮ ಮತ್ತು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಕ್ರಿಯೆಯೇ ಸೇವೆ. ಅಂದರೆ ಶ್ರಮ, ಜ್ಞಾನ, ಕೌಶಲ್ಯ ಇತ್ಯಾದಿ ಸಂಪನ್ಮೂಲಗಳನ್ನು ತಮ್ಮೆಲ್ಲರ ಮತ್ತು ಸಮಾಜದ ಒಳಿತಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ನಾವು ಕೇವಲ ಬಹಿರಂಗವಾಗಿ ಸ್ವಚ್ಛವಾಗಬಾರದು, ಅಂತರಂಗವೂ ಅಷ್ಟೇ ಶುಚಿತ್ವವಾಗಬೇಕು. ಈ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತದೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆ ಸೃಷ್ಟಿಸುತ್ತದೆ ಮತ್ತು ಶಿಸ್ತು, ಸಂಯಮ, ಸಮಯ ಪಾಲನೆಯ ಬಗ್ಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಎನ್.ಆನಂದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹಾಗೂ ವ್ಯಕ್ತಿತ್ವ ಮತ್ತು ಬಾಂಧವ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸುವಂತಹ ಮಾಧ್ಯಮ ರಾಷ್ಟ್ರೀಯ ಸೇವಾ ಯೋಜನಾ ಘಟಕವಾಗಿದೆ. ವಿದ್ಯಾರ್ಥಿಗಳು ಶ್ರಮದಾನದ ಜೊತೆಗೆ ಸಹಬಾಳ್ವೆ, ನಾಯಕತ್ವ ಹಾಗೂ ವರ್ತಮಾನದ ಪರಿಸ್ಥಿತಿ ಅರಿತು ನಡೆಯುವ ಗುಣ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಯಾವುದೇ ಕೆಲಸ ಕೈಗೊಂಡಾಗ ಅರ್ಪಣಾ ಮನೋಭಾವನೆ ಬೆಳೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು ಹಾಜರಿದ್ದರು.
ಪಠ್ಯ ಚಟುವಟಿಕೆಗಳೊಂದಿಗೆ ಸ್ವಯಂ ಸೇವಾ ಮನೋಭಾವ ಬೆಳೆಸಿಕೊಳ್ಳಿ – ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕ ಎಂ.ಪುಟ್ಟಮಾದಯ್ಯ
- Advertisement -
- Advertisement -
- Advertisement -
- Advertisement -