24.1 C
Sidlaghatta
Saturday, September 23, 2023

ಪಾದಯಾತ್ರೆ ಹೊರಟವರಿಗೆ ಸಿಗುತ್ತಿರುವ ಮಾನವೀಯ ದರ್ಶನ

- Advertisement -
- Advertisement -

ವಾಹನಗಳ ಭರಾಟೆಯಲ್ಲಿ ನಡೆಯುವ ಅಭ್ಯಾಸವನ್ನು ಕಳೆದುಕೊಂಡಿರುವ ಬಹುತೇಕರಲ್ಲಿ ನಡಿಗೆಯು ಬೆಳಗಿನ ವಾಯುವಿಹಾರಕ್ಕೆ ಸೀಮಿತಗೊಂಡಿರುವ ಸಂದರ್ಭದಲ್ಲಿ ನಗರಕ್ಕೆ ಆಂಧ್ರದ ಕಡೆಯಿಂದ ಆಗಮಿಸಿದ್ದ ಇಬ್ಬರು ಪಾದಯಾತ್ರಿಗರು ಅಚ್ಚರಿಯನ್ನುಂಟು ಮಾಡಿದ್ದಾರೆ.
ಸೋಮವಾರ ತಾಲ್ಲೂಕಿನ ದಿಬ್ಬೂರಹಳ್ಳಿ ಕಡೆಯಿಂದ ನಡೆದು ಬಂದ ಇಬ್ಬರು ಪಾದಯಾತ್ರಿಗಳು ಭಾರತದ ದಕ್ಷಿಣ ತುದಿಯಲ್ಲಿರುವ ರಾಮೇಶ್ವರಮ್ಗೆ ನಡೆದು ಹೋಗುತ್ತಿರುವುದನ್ನು ತಿಳಿದು ಕೆಲವರು ಬೆರಗುಗೊಂಡರು.
ಆಂದ್ರದ ಅನಂತಪುರ ಜಿಲ್ಲೆಯ ಗುಂತಕಲ್ನ ಅರ್ಚಕ ಶಿಲಾಮಠ ರಾಜಶೇಖರ ಸ್ವಾಮಿ ಮತ್ತು ವಾಹನ ಚಾಲಕ ವೃತ್ತಿಯ ವೆಂಕಟೇಶ್ ಆರು ದಿನಗಳ ಹಿಂದೆ ಗುಂತಕಲ್ನಿಂದ ಹೊರಟಿದ್ದು, ಸೋಮವಾರ ಶಿಡ್ಲಘಟ್ಟವನ್ನು ಹಾದು ಹೋದರು. ಪ್ರತಿದಿನ ಗರಿಷ್ಠ 45 ಕಿ.ಮೀ ದೂರ ನಡೆದುಕೊಂದು ಹೋಗುವ ಇವರು ಇಪ್ಪತ್ತು ದಿನಗಳಲ್ಲಿ ರಾಮೇಶ್ವರಮ್ ತಲುಪುವ ಗುರಿಯನ್ನು ಹೊಂದಿದ್ದಾರೆ. ಭಾನುವಾರ ರಾತ್ರಿ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ತಂಗಿದ್ದ ಇವರಿಬ್ಬರು ಶಿಡ್ಲಘಟ್ಟದ ಮೂಲಕ ಹಾದು ಜಂಗಮಕೋಟೆಯಲ್ಲಿ ರಾತ್ರಿ ತಂಗಿದ್ದು ನಂತರ ಮಾಲೂರಿನ ಮೂಲಕ ತಮಿಳುನಾಡನ್ನು ಸೇರಿ ನಂತರ ಕಟ್ಟಕಡೆಯದಾಗಿ ರಾಮೇಶ್ವರಮ್ ತಲುಪಲಿದ್ದಾರೆ.
ತಮ್ಮ ಹಾದಿಯಲ್ಲಿ ವಿವಿಧ ರೀತಿಯ ಜನರ ಮಾನವೀಯ ಮುಖಗಳನ್ನು ಅರಿಯುತ್ತಾ ದಕ್ಷಿಣ ಭಾರತಯಾತ್ರೆ ಕೈಗೊಂಡಿರುವ ಇವರು ಈಗಾಗಲೇ ನಡೆಯುತ್ತಾ ಕಾಶಿ ತಲುಪಿ ಬಂದಿದ್ದಾರೆ. 2014 ರ ಜೂನ್ ತಿಂಗಳಿನಲ್ಲಿ ಪಾದಯಾತ್ರೆ ಹೊರಟು ಸುಮಾರು 43 ದಿನಗಳಲ್ಲಿ ಕಾಶಿ ತಲುಪಿದ್ದ ಇವರು, ಅಲ್ಲಿ ತಂದ ಗಂಗಾಜಲವನ್ನು ಈಗ ರಾಮೇಶ್ವರದಲ್ಲಿ ಅಭಿಷೇಕ ಮಾಡುವ ಮೂಲಕ ಯಾತ್ರೆಯ ಸಂಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿರುವರು.
ತಮ್ಮ ಮಕ್ಕಳ ಸಹಾಯದಿಂದ ಗೂಗಲ್ ಮ್ಯಾಪ್ ಬಳಸಿ ತಾವು ಹೋಗುವ ಮಾರ್ಗದ ಪ್ರತಿಯೊಂದು ಊರು, ಗ್ರಾಮದ ಹೆಸರುಗಳನ್ನು ಬರೆದಿಟ್ಟುಕೊಂಡಿದ್ದಾರೆ. ತಮ್ಮ ಆಧಾರ್ ಗುರುತು ಚೀಟಿ ತೋರಿಸಿ ತಮ್ಮ ಯಾತ್ರೆಯ ಬಗ್ಗೆ ತಿಳಿಸುತ್ತಾ ತಂಗಲು ಅವಕಾಶವನ್ನು ಕೋರಿ, ಏನೂ ಇಲ್ಲದಿದ್ದರೆ ದೇವಸ್ಥಾನಗಳಲ್ಲಿ ತಂಗುತ್ತಾ ಮುಂದುವರೆದಿದ್ದಾರೆ.
‘ನಮ್ಮ ಪಾದಯಾತ್ರೆಯಲ್ಲಿ ಬಗೆಬಗೆಯ ಜನರು ನಮಗೆ ಸಹಾಯ ಹಸ್ತ ನೀಡಿದ್ದಾರೆ. ನಮ್ಮ ಗುರುತು ಪರಿಚಯವಿರದಿದ್ದರೂ ನಮ್ಮ ಉದ್ದೇಶವನ್ನು ತಿಳಿದೊಡನೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ದಿಬ್ಬೂರಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಾಲಯದ ಮುಂದೆ ತಂಗಿದ್ದಾಗ, ಅಲ್ಲೇ ಮುಂದಿನ ಮನೆಯವರು ನಮ್ಮ ಬಗ್ಗೆ ಕೇಳಿ ತಿಳಿದು ಚಳಿಯಲ್ಲಿ ಹೊರಗೆ ಮಲಗಬೇಡಿ ಎಂದು ತಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಬಿಟ್ಟುಕೊಟ್ಟು ಸಹಾಯ ಮಾಡಿದರು. ಒಳ್ಳೆಯ ಉದ್ದೇಶದಿಂದ ಏನೇ ಮಾಡಿದರೂ ಒಳ್ಳೆಯವರೇ ಸಿಗುತ್ತಾರೆ. ಈ ಯಾತ್ರೆಯ ಉದ್ದೇಶ ರಾಮೇಶ್ವರಮ್ ತಲುಪುವುದಾದರೂ ವಿವಿಧ ಭಾಷೆ, ಧರ್ಮ, ಬಣ್ಣ ಹೊಂದಿರುವ ನಮ್ಮ ದೇಶದ ಜನರ ಮಾನವತ್ವವನ್ನು ಕಂಡು ಅನುಭವಿಸುತ್ತಿದ್ದೇವೆ’ ಎಂದು ಶಿಲಾಮಠ ರಾಜಶೇಖರ ಸ್ವಾಮಿ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!