ನಗರದ ಹೊರವಲಯದಲ್ಲಿದ್ದ ಏಕೈಕ ಉದ್ಯಾನವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ಉದ್ಯಾನವನವನ್ನು ಇದೀಗ ನಗರಸಭೆಯ ಅಧಿಕಾರಿ, ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿ ಜೀವಕಳೆ ತುಂಬುತ್ತಿದ್ದು ಇದೀಗ ಸಾರ್ವಜನಿಕರನ್ನು ಉದ್ಯಾನವನ ಕೈ ಬೀಸಿ ಕರೆಯುತ್ತಿದೆ.
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ೨೦೦೨ರಲ್ಲಿ ಆಗಿನ ಪುರಸಭೆಯ ಆಡಳಿತಾಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ಜಿ.ಎಸ್.ನಾಯಕ್ ಅವರ ಅವಧಿಯಲ್ಲಿ ಉದ್ಯಾನವನ್ನು ನಿರ್ಮಿಸಲಾಗಿತ್ತು.
ನಗರದ ವಾಸಿಗಳಷ್ಟೆ ಅಲ್ಲ ಸುತ್ತ ಮುತ್ತಲ ಗ್ರಾಮಸ್ಥರು, ವಾಯು ವಿಹಾರಿಗಳು ದಿನ ನಿತ್ಯವೂ ಉದ್ಯಾನವನಕ್ಕೆ ಭೇಟಿ ಕೊಡುತ್ತಿದ್ದರು. ಶನಿವಾರ ಭಾನುವಾರ ಸೇರಿದಂತೆ ರಜೆ ದಿನಗಳಂದು ಶಾಲಾ ಕಾಲೇಜು ಮಕ್ಕಳು ಈ ಉದ್ಯಾನವನದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು.
ಆದರೆ ನಂತರದ ದಿನಗಳಲ್ಲಿ ನಗರಸಭೆ ಆಡಳಿತದ ನಿರ್ಲಕ್ಷ್ಯ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಉದ್ಯಾನವನ ನಿರ್ವಹಣೆ ಇಲ್ಲದೆ ಬೀಗ ಜಡಿಯಲಾಗಿತ್ತು.
ಆದರೆ ಇತ್ತೀಚೆಗಷ್ಟೆ ನಗರಸಭೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಜಿ.ಎನ್.ಚಲಪತಿ ಹಾಗೂ ಕೆಲ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಪೌರನೌಕರರ ಸಹಾಯದಿಂದ ಇಡೀ ಉದ್ಯಾನವನ್ನು ಸ್ವಚ್ಚಗೊಳಿಸಿದ್ದಾರೆ. ಮಕ್ಕಳು ಆಡುವ ಆಟಿಕೆಗಳನ್ನು ಅಳವಡಿಸಿದ್ದಾರೆ.
ಹನಿ ನೀರಾವರಿ ವ್ಯವಸ್ಥೆ, ವಿದ್ಯುತ್ ಸಂಪರ್ಕವನ್ನು ನೀಡಿದ್ದು ಬೆಂಚುಗಳಿಗೆ ಸುಣ್ಣ ಬಣ್ಣ ಬಳಿದು ಕೆಟ್ಟು ನಿಂತಿದ್ದ ನೀರಿನ ಕಾರಂಜಿಯನ್ನು ದುರಸ್ತಿಪಡಿಸಿದ್ದಾರೆ.
ಇದೆಲ್ಲವನ್ನೂ ಅಧಿಕಾರಿಗಳೆ ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ, ಇನ್ನು ಶೌಚಾಲಯವನ್ನು ನಿರ್ಮಿಸಿ ಸಿಸಿ ಟಿವಿಗಳನ್ನು ಅಳವಡಿಸುವ ಕಾರ್ಯವನ್ನು ನಗರಸಭೆಯ ನಿಧಿ ಬಳಸಿಕೊಂಡು ಮಾಡಲು ನಿರ್ಧರಿಸಿದ್ದಾರೆ.
ಉದ್ಯಾನವನದ ನಿರ್ವಹಣೆ, ಕಾವಲುಗಾಗಿ ಪಾಳಿ ಲೆಕ್ಕದಲ್ಲಿ ಇಬ್ಬರು ಪೌರ ನೌಕರರನ್ನು ನೇಮಿಸಿ ಪ್ರತಿ ದಿನ ಬೆಳಗ್ಗೆ ೭.೩೦ ರಿಂದ ಸಂಜೆ ೬ ಗಂಟೆಯವರೆಗೂ ಸಾರ್ವಜನಿಕರಿಗೆ ಪ್ರವೇಶ ನೀಡಲು ಎಲ್ಲವೂ ಸಿದ್ದಗೊಂಡಿದೆ.
ಹತ್ತಾರು ವರ್ಷಗಳಿಂದಲೂ ಪಾಳು ಬಿದ್ದು ಬೀಗ ಜಡಿದಿದ್ದ ಉದ್ಯಾನವನವೀಗ ಸಾರ್ವಜನಿಕರು, ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯಲು ನವ ವಧುವಿನಂತೆ ಸಿಂಗಾರಗೊಂಡಿದೆ.
ನಗರಸಭೆ ಅಧಿಕಾರಿಗಳ, ಸಿಬ್ಬಂದಿಯ ಈ ಶ್ರಮ, ಪ್ರಯತ್ನದ ಬಗ್ಗೆ ಸಾರ್ವಜನಿಕರಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
- Advertisement -
- Advertisement -
- Advertisement -
- Advertisement -
Only waste process, this is only imaging purpose