ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಣ ಉಳಿತಾಯ ಮಾಡಿ ಸಂಸಾರವನ್ನು ಪ್ರಗತಿಪಥದತ್ತ ಕೊಂಡೊಯ್ಯಿರಿ ಎಂದು ಹಂಡಿಗನಾಳ ಗ್ರಾಮ ಪಂಚಾಯತಿ ಸದಸ್ಯ ಜಯರಾಮ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಪಟಾಲಮ್ಮ ದೇವಸ್ಥಾನದ ಬಳಿ ಸಮುದಾಯ ಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳ ನೂತನ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ದುಂದು ವೆಚ್ಚಗಾರರಲ್ಲ. ಕೂಡಿಟ್ಟ ಹಣದಲ್ಲಿ ಸಂಸಾರ ನಡೆಸುವುದರ ಜತೆ ಮಕ್ಕಳಿಗೆ ಶಿಕ್ಷಣ ನೀಡಿರಿ. ಮನೆಯಲ್ಲೊಂದು ಕಡ್ಡಾಯವಾಗಿ ಶೌಚಾಲಯವಿರಲಿ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಮಹಿಳೆಯರು ಮನಗಾಣ ಬೇಕು. ಬ್ಯಾಂಕುಗಳು ನಿಡಿದಂತಹ ಸಾಲದ ಹಣವನ್ನು ಉತ್ತಮ ಕೆಲಸಗಳಿಗೆ ಉಪಯೋಗಿಸಿರಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಮಹಿಳೆಯರು ಕೇವಲ ಹಣ ಕೂಡಿಡುವುದನ್ನೇ ಧ್ಯೇಯವನ್ನಾಗಿ ಮಾಡಿಕೊಳ್ಳದೇ ಸಾಮಾಜಿಕ ನಾಯಕತ್ವ ಗುಣ ಬೆಳೆಸಿಕೊಳ್ಳಿರಿ. ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಬೆಳೆಸುವ ಮೂಲಕ ಮುಂದಿನ ಜನಾಂಗಕ್ಕೆ ಹಸಿರನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತಪುರ ಹಾಲು ಉತ್ಪಾದಕರ ಸಂಘಕ್ಕೆ 50 ಸಾವಿರ ರೂಗಳ ಪ್ರೋತ್ಸಾಹ ಧನವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನೀಡಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ದ್ಯಾವಪ್ಪ, ನಾಗರಾಜು, ಮುಖ್ಯಶಿಕ್ಷಕ ನಾಗಭೂಷಣ್, ಆಶಾರಾಣಿ, ನರಸಿಂಹಮೂರ್ತಿ, ನಿಖಿಲ್ಕುಮಾರ್, ಶಾಂತಾಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -