ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ಮುಖಾಂತರ ಗುರುತಿಸಲ್ಪಡುವ ಪ್ರತಿಭೆಗಳನ್ನು ನಿರಂತರವಾಗಿ ಪ್ರೋತ್ಸಾಹ ಮಾಡಬೇಕಾದಂತಹ ಹೊಣೆಗಾರಿಕೆ ಶಿಕ್ಷಕರದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹೇಳಿದರು.
ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವಂತಹ ವಿವಿಧ ಬಗೆಯ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವಂತಹ ಮಹತ್ತರವಾದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಾನಪದ, ಕಲೆ,ಸಾಹಿತ್ಯ, ಸಂಸ್ಕೃತಿ, ಮತ್ತು ನಾಟಕಗಳಂತಹ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪ್ರಾಥಮಿಕ ಹಂತದಿಂದಲೇ ಪ್ರತಿಭಾಕಾರಂಜಿಯ ಮುಖಾಂತರ ನಾಟಕ, ಹರಿಕಥೆ, ಜಾನಪದ ನೃತ್ಯಗಳು, ಕೋಲಾಟ, ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಮಕ್ಕಳು ಮರೆತುಹೋಗುತ್ತಿರುವ ದೇಶೀಯ ಸಂಸ್ಕೃತಿಯನ್ನು ಕಾಪಾಡಿಕೊಂಡಂತಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸುಮಾ ಮಾತನಾಡಿ, ಶಾಲೆಗಳಲ್ಲಿ ನಡೆಯುವಂತಹ ಇಂತಹ ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಪೋಷಕರೂ ಕೂಡಾ ಉತ್ತಮವಾದ ಸಹಕಾರ ನೀಡಬೇಕು, ಮಕ್ಕಳಲ್ಲಿರುವ ಅವಕಾಶಗಳು ಸಿಗದೆ ಮರೆಯಾಗುತ್ತಿರುವ ಅಪಾರವಾದ ಪ್ರತಿಭಾ ಸಂಪತ್ತನ್ನು ಹೊರಗೆಳೆದು ಸಮಾಜದಲ್ಲಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದರು.
ಇದೇ ಸಮಯದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟೇಶಮೂರ್ತಿ ಮತ್ತು ಸರೋಜಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಶಿಕ್ಷಣ ಸಂಯೋಜಕರಾದ ಮನ್ನಾರಸ್ವಾಮಿ, ಸುಂದರಾಚಾರಿ, ಶಿಕ್ಷಕ ಮುನಿಯಪ್ಪ, ಬಿ.ವಿ.ಶ್ರೀರಾಮಯ್ಯ, ಬಿ.ಎನ್.ವಿಜಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -