19.9 C
Sidlaghatta
Sunday, July 20, 2025

ಬರಗಾಲವಾದ್ದರಿಂದ ನಗರಸಭೆಯಿಂದ ಸುಂಕ ವಸೂಲಿ ಕೈ ಬಿಡುವಂತೆ ಹಸಿರು ಸೇನೆ ರೈತರ ಆಗ್ರಹ

- Advertisement -
- Advertisement -

ವಾರದ ಸಂತೆಯಲ್ಲಿ ರೈತರಿಂದ ಯಾವುದೆ ರೀತಿಯ ಸುಂಕವನ್ನು ವಸೂಲಿ ಮಾಡಬಾರದು ಎಂದು ಆಗ್ರಹಿಸಿ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ನಗರಸಭೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು, ಇದೀಗ ಬರಗಾಲ ಎದುರಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವಾರದ ಸಂತೆಯಲ್ಲಿ ರೈತರಿಂದ ಸುಂಕವನ್ನು ವಸೂಲು ಮಾಡುವುದುನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ಕಳೆದ ಐದಾರು ವರ್ಷಗಳಿಂದಲೂ ಬರಗಾಲ ಬೀಡು ಬಿಟ್ಟಿದೆ. ಅಂತರ್ಜಲ ಮಟ್ಟ ತೀವ್ರ ಕುಸಿದ ಇಲ್ಲಿ ರೈತರು ಬಿತ್ತಿದ ಬೆಳೆ ಕೈಗೆ ಸಿಗುತ್ತಿಲ್ಲ. ಅಪ್ಪಿ ತಪ್ಪಿ ಬೆಳೆ ಬೆಳೆದರೂ ಸೂಕ್ತ ಬೆಲೆ ಇಲ್ಲದೆ ಬೆಳೆದ ಫಸಲನ್ನು ಜಮೀನಿನಲ್ಲೆ ಬಿಡುವಂತ ಪರಿಸ್ಥಿತಿ ಎದುರಾಗಿದ್ದು ಬದುಕನ್ನು ನಡೆಸಲು ಹೆಣಗಾಡುವಂತಾಗಿದೆ. ಒಪ್ಪೊತ್ತಿನ ಊಟಕ್ಕು ಪರದಾಡುವ ಪರಿಸ್ಥಿತಿ ರೈತನದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಎಪಿಎಂಸಿ ಕಾಯಿದೆಯಂತೆ ರೈತರ ಯಾವುದೆ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಯಾವುದೆ ರೀತಿಯ ಶುಲ್ಕವನ್ನು ವಿಧಿಸಬಾರದು. ಆದರೂ ನೀವು ವಾರದ ಸಂತೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಇಲ್ಲಿ ನಡೆಯುವ ವಾರದ ಸಂತೆಗೆ ನೂರಾರು ರೈತರು ಬರಲಿದ್ದು ಸೊಪ್ಪು ತರಕಾರಿ ಹಣ್ಣು ಹಂಪಲು ಎಲೆ ಅಡಿಕೆ ಕುರಿ ಕೋಳಿ ಮೇಕೆ ದವಸ ದಾನ್ಯ ಇನ್ನಿತರೆ ಎಲ್ಲ ವ್ಯಾಪಾರ ವಹಿವಾಟಿಗೂ ನಿಗಪಡಿಸಿದ ಶುಲ್ಕವನ್ನು ನೀವು ವಸೂಲಿ ಮಾಡುತ್ತಿದ್ದೀರಿ. ಸ್ವಂತ ಬೆಳೆಯುವ ರೈತರು ಹಲವರಾದರೆ ಖರೀದಿಸಿ ತಂದು ಮಾರಾಟ ಮಾಡುವ ರೈತರೂ ಸಾಕಷ್ಟು ಮಂದಿ ಇದ್ದಾರೆ. ಹಾಕಿದ ಬಂಡವಾಳವು ಕೈಗೆ ಬರದಂತ ಪರಿಸ್ಥಿತಿಯಲ್ಲಿ ಶುಲ್ಕ ಕಟ್ಟುವುದು ಸಹ ಕಷ್ಟಕರವಾಗಿದೆ ಎಂದು ರೈತರ ಸಂಕಷ್ಟವನ್ನು ಬಿಡಿಸಿಟ್ಟರು.
ಕೂಡಲೆ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಆಯುಕ್ತ ಎಚ್.ವಿ.ಹರೀಶ್‌ಗೆ ಮನವಿಯನ್ನು ಸಲ್ಲಿಸಿ ಈ ಬಗ್ಗೆ ನಿಮ್ಮ ನಿರ್ಧಾರವನ್ನು ಇಲ್ಲೇ ಪ್ರಕಟಿಸಬೇಕೆಂದು ತಾಕೀತು ಮಾಡಿದರು.
ಮನವಿ ಸ್ವೀಕರಿಸಿದ ಆಯುಕ್ತರು, ಸುಂಕ ವಸೂಲಿಯನ್ನು ನಿಲ್ಲಿಸುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ವಿಷಯವನ್ನು ಮಂಡಿಸಿ ಚರ್ಚಿಸಿ ಕೌನ್ಸಿಲ್ ಸಭೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಅವರ ಸಲಹೆ ಸೂಚನೆಯಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಆದರೆ ಆಯುಕ್ತರ ಭರವಸೆಯನ್ನು ಒಪ್ಪದ ಪ್ರತಿಭಟನಾಕಾರರು, ನಾವು ನಿಮ್ಮ ಕೌನ್ಸಿಲ್‌ನ ಸಭೆಯಲ್ಲಿ ಇಟ್ಟು ಮಂಡನೆ ಮಾಡಿ ಸಭೆಯ ತೀರ್ಮಾನದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರೆ ಅದನ್ನು ಒಪ್ಪುವುದಿಲ್ಲ.
ನಾವು ಮನವಿ ನೀಡುತ್ತಿರುವುದು ಸುಂಕ ವಸೂಲಿಯನ್ನು ನಿಲ್ಲಿಸುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೇಳುತ್ತಿಲ್ಲ. ಬರಗಾಲದ ಪರಿಸ್ಥಿತಿಯಲ್ಲಿ ಸಾಲ ಆಗಲಿ ಸುಂಕ ಆಗಲಿ ಕಟ್ಟುವ ಪರಿಸ್ಥಿತಿಯಲ್ಲಿ ರೈತ ಇಲ್ಲ. ಹಾಗಾಗಿ ಸುಂಕ ವಸೂಲಿಯನ್ನು ನಿಲ್ಲಿಸಬೇಕಷ್ಟೆ ಎಂದು ತಾಕೀತು ಮಾಡಿದರು.
ಅದು ಬಿಟ್ಟು ಸಭೆಯಲ್ಲಿ ಚರ್ಚೆ ನಡೆಸುತ್ತೇವೆ, ಅಲ್ಲಿ ಒಪ್ಪಿದರೆ ಮಾತ್ರ ಸುಂಕ ವಸೂಲಿಯನ್ನು ಕೈ ಬಿಡುತ್ತೇವೆ ಎಲ್ಲವಾದರೆ ಅದು ನನ್ನ ಕೈಯ್ಯಲ್ಲಿ ಇಲ್ಲ ಎಂದು ನೀವು ಹೇಳುವುದನ್ನು ನಾವು ಕೇಳಲು ಬಂದಿಲ್ಲ. ನಾವು ಸುಂಕವನ್ನು ಕಟ್ಟುವುದಿಲ್ಲ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಮುಖಂಡರಾದ ಕೊಂಡಪ್ಪನವರ ವೇಣುಗೋಪಾಲ್, ಪಾಪರೆಡ್ಡಿ, ಏಜಾಜ್‌, ಕೆಂಪರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!