ಬಾಲ್ಯದಲ್ಲಿ ಮಕ್ಕಳು ಓದು ಬರಹ ಕಲಿಯುವುದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನೂ ಪಡೆಯುವುದು ಅತ್ಯಗತ್ಯ. ಜೀವನ ಮೌಲ್ಯಗಳು ಬಾಲ್ಯದಲ್ಲಿ ರೂಢಿಗತವಾದರೆ ಬದುಕಲ್ಲಿ ಎಂದೂ ಸೋಲುವುದಿಲ್ಲ ಎಂದು ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯ ಜ್ಞಾನಾಂಕುರ ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಸಕಾರಾತ್ಮಕವಾಗಿ ಚಿಂತಿಸಬೇಕು. ಆ ರೀತಿ ಚಿಂತಿಸುವಂತೆ, ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳನ್ನು ಕಾಣುವಂತೆ ಶಿಕ್ಷಕರು ಪ್ರೇರೇಪಿಸಬೇಕು. ಜೀವನ ಪ್ರೀತಿ ಹೆಚ್ಚಾದಲ್ಲಿ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಮೂಡುತ್ತದೆ. ಎಷ್ಟೇ ಕಷ್ಟಗಳು ಎದುರಾದರೂ ಎದೆಗುಂದಬಾರದು, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ನೈತಿಕತೆಯನ್ನು ಬಿಡಬಾರದು.
ಸತ್ಯಕ್ಕೆ ಹೆಸರಾದ ಹರಿಶ್ಚಂದ್ರ ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಯಿತು. ಆದರೂ ಸತ್ಯವನ್ನು ಬಿಡಲಿಲ್ಲ. ಆತ ಕಷ್ಟ ಎದುರಿಸಿದ್ದು ಕೇವಲ ಎರಡು ವರ್ಷಗಳು ಮಾತ್ರ. ಅದೇ ರೀತಿ ಶ್ರೀರಾಮ ಕಷ್ಟಕಾರ್ಪಣ್ಯವನ್ನು ಎದುರಿಸಿದ್ದು ಹತ್ತು ತಿಂಗಳು ಮಾತ್ರ. ಆದರೆ ನಂತರ ಬಹು ಕಾಲ ರಾಜರಾಗಿ ಆಳಿದರು. ಚಿರಕಾಲ ಅವರ ಹೆಸರು ಉಳಿಯಿತು. ಕಷ್ಟದ ಕಾಲ ಅತ್ಯಲ್ಪ. ಆದರೆ ಆಗ ನಾವು ತಾಳ್ಮೆ, ಮೌಲ್ಯಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ನುಡಿದರು.
ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳು ಶ್ರೀಕೃಷ್ಣ ರಾಧೆಯ ವೇಷ ಧರಿಸಿ ನೃತ್ಯ ಪ್ರದರ್ಶನ, ಮಡಿಕೆ ಹೊಡೆಯುವುದು ಹಾಗೂ ಶ್ಲೋಕ ಪಠನವನ್ನು ನಡೆಸಿಕೊಟ್ಟರು. ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಸ್ಥಳ ದಾನಿ ಚಂದ್ರಶೇಖರ್ ಹಾಜರಿದ್ದರು
- Advertisement -
- Advertisement -
- Advertisement -
- Advertisement -