ಜನರು ಮತ ನೀಡಬೇಕಾದರೆ, ಅಭ್ಯರ್ಥಿಯ ವ್ಯಕ್ತಿತ್ವ, ವರ್ಚಸ್ಸು, ಅವರ ಹಿನ್ನೆಲೆಯನ್ನು ಕಂಡು ಮತ ನೀಡಬೇಕು. ಬಿಜೆಪಿ ಅಭ್ಯರ್ಥಿಯ ಮುಖಪರಿಚಯ ಕ್ಷೇತ್ರದ ಜನತೆಗೆ ಇಲ್ಲ. ಅವರು ಕೇವಲ ಮೋದಿಯ ಹೆಸರೇಳಿಕೊಂಡು ಮತ ಕೇಳುತ್ತಿದ್ದಾರೆ. ಅವರಿಗೆ ರಾಜಕೀಯ ಅನುಭವ ಕಡಿಮೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಜಾತಂತ್ರ ಉಳಿಯುತ್ತೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮಾತಿನಲ್ಲಿ, ನಡವಳಿಕೆಯಲ್ಲಿ ಪ್ರಬುಧ್ದತೆ ಕಾಣುತ್ತಿಲ್ಲ. ಕೆ.ಜಿ.ಎಫ್ನ ಬೆಮೆಲ್ ಮುಂದೆ ಚುನಾವಣಾ ಅಧಿಕಾರಿಗಳ ಮುಂದೆ ತೋರಿಸಿರುವ ದರ್ಪದಿಂದ ಅವರ ನಿಜವಾದ ವ್ಯಕ್ತಿತ್ವ ತೋರಿಸಿದ್ದಾರೆ. ಆದ್ದರಿಂದ ಇಂತಹ ಅಭ್ಯರ್ಥಿಗಳನ್ನು ದೂರವಿಡುವುದು ಸೂಕ್ತ ಎಂದು ಹೇಳಿದರು.
ಕೋಲಾರ ಲೋಕಸಬಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರು ಜನರಿಗೆ ಹತ್ತಿರವಾಗಿ, ಸಾರ್ವಜನಿಕರೊಂದಿಗೆ ಬೆರೆಯುವ ರೀತಿ ಅವರ ಗೆಲುವಿಗೆ ಸಹಕಾರಿಯಾಗುತ್ತದೆ. ಅವರ ದೂರದೃಷ್ಟಿ, ಅನುಭವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಗತ್ಯವಿದೆ. ಭವಿಷ್ಯದಲ್ಲಿ ಶಿಡ್ಲಘಟ್ಟ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಪ್ರಣಾಳಿಕೆಯಲ್ಲಿ ಬಡವರು, ಹಿಂದುಳಿದವರು, ಮಹಿಳೆಯರ ಕುರಿತಾದ ಚಿಂತನೆಗಳಿವೆ. ತಿಂಗಳಿಗೆ ೬ ಸಾವಿರ, ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆಯ ಬದ್ಧತೆ ಇಟ್ಟುಕೊಂಡಿದ್ದಾರೆ ಎಂದರು.
ದೇಶದಲ್ಲಿ ಭ್ರಮನಿರಸನ ಆಡಳಿತವನ್ನು ಮೋದಿಯವರು ನೀಡಿದ್ದಾರೆ. ದೇಶದ ಜನರ ಕನಸುಗಳನ್ನು ಈಡೇರಿಸಲಿಲ್ಲ. ಉದ್ಯೋಗಗಳು ನೀಡಿಲ್ಲ. ಪಕೋಡ ಮಾರಿ ಜೀವನ ಮಾಡಿ ಎಂದು ಹೇಳುವ ಮೂಲಕ ಯುವಜನತೆಯನ್ನು ಅಪಮಾನಗೊಳಿಸಿದ್ದಾರೆ. ತಾಂತ್ರಿಕ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡಲಿಲ್ಲ. ದೇಶಕ್ಕೆ ಕಪ್ಪು ಹಣ ತರಲಿಲ್ಲ. ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡಲಿಲ್ಲ. ಪ್ರಚೋದನಕಾರಿ ಭಾಷಣಗಳ ಮೂಲಕ ಯುವಜನರನ್ನು ಪ್ರಚೋದಿಸುತ್ತಾ, ಹಿಂದುತ್ವವನ್ನೆ ಮೂಲ ಅಜೆಂಡಾವನ್ನಾಗಿ ಇಟ್ಟುಕೊಂಡು ದ್ವೇಷ, ವೈಷಮ್ಯವನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಮೋದಿ ಚೌಕಿದಾರ್ ಅಂತಾ ಹೇಳ್ತಾರೆ. ರಫೆಲ್ ಕಡತಗಳು ಕಳುವಾಗಿವೆ ಎನ್ನುತ್ತಾರೆ. ಕಡತಗಳನ್ನು ರಕ್ಷಣೆ ಮಾಡಲಿಕ್ಕೆ ಸಾಧ್ಯವಾಗದಿರುವ ಇವರು ದೇಶವನ್ನು ಹೇಗೆ ಕಾಪಾಡ್ತಾರೆ?
ಪುಲ್ವಾಮಾದಲ್ಲಿ ಯೋಧರ ಸಾವಾಯಿತು. ಗುಪ್ತಚರ ಇಲಾಖೆ ವಿಫಲವಾಗಿದೆಯಾ? ಬಿಜೆಪಿಗೆ ಮತ ನೀಡಿದರೆ ದೇಶಾಭಿಮಾನಿಗಳು ಎಂದು ಬಿಂಬಿಸಲಾಗುತ್ತಿದೆ. ನೀಡದಿದ್ದರೆ ದೇಶದ್ರೋಹಿಗಳು ಎನ್ನುತ್ತಾರೆ. ವಾಸ್ತವತೆಯನ್ನು ಜನರು ಅರಿಯಬೇಕು. ಲೇಸರ್ ಬೇಲಿ ಹಾಕಲಿಲ್ಲ. ಬುಲೇಟ್ ಟ್ರೈನ್ ಬರಲಿಲ್ಲ, ರೈತರಿಗೆ ಪಿಂಚಣಿಯ ನಾಟಕವಾಡ್ತಿದ್ದಾರೆ. ಪುನಃ ದೇಶದಲ್ಲಿ ಬಿಜೆಪಿ ಬಂದರೆ ಕೋಮುಗಲಭೆಗಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಂವಿಧಾನದ ತಿದ್ದುವ ಬಗ್ಗೆ ಮಾತನಾಡುವರು, ಅಲ್ಪಸಂಖ್ಯಾತರ ಬಗ್ಗೆ ತುಚ್ಚವಾಗಿ ಮಾತನಾಡ್ತಾರೆ. ಜ್ಯಾತ್ಯಾತೀತ ಶಕ್ತಿಗಳು ಒಂದಾಗಬೇಕು ಈ ನಿಟ್ಟಿನಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಮುಖಂಡರಾದ ಹಿತ್ತಲಹಳ್ಳಿ ಕೃಷ್ಣಪ್ಪ, ಆನೂರು ದೇವರಾಜ್, ಅಶ್ವಥ್ಥರೆಡ್ಡಿ, ಅಪ್ಸರ್ ಪಾಷ ಹಾಜರಿದ್ದರು.
- Advertisement -
- Advertisement -
- Advertisement -