‘ಮಂಗಳೂರು ಚಲೋ’ ಜಾಥಾ ಹೊರಟಿದ್ದ ಬಿಜೆಪಿ ಮುಖಂಡರು, ಯುವಮೋರ್ಚಾ ಸದಸ್ಯರನ್ನು ಮಂಗಳವಾರ ನಗರದ ಬಿಜೆಪಿ ಕಚೇರಿಯ ಬಳಿ ಪೊಲೀಸರು ವಶಕ್ಕೆ ಪಡೆದರು.
ರಾಜ್ಯದ ವಿವಿದೆಡೆಗಳಿಂದ ಬೈಕ್ ಜಾಥಾ ಇಂದು ಹೊರಟು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಬೇಕು. ಅಂದು ಅಲ್ಲಿ ಬೃಹತ್ ಸಮಾವೇಶ ನಡೆಸಲು ಯುವಮೋರ್ಚಾ ಯೋಜನೆ ರೂಪಿಸಿತ್ತು. ಆದರೆ, ಪೊಲೀಸರು ಅನುಮತಿ ನೀಡದ ಕಾರಣ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಬಳಿ ಬೈಕ್ ಜಾಥಾಗೆ ಚಾಲನೆ ನೀಡಲು ಬಂದಿದ್ದ ಮುಖಂಡರೂ ಸೇರಿದಂತೆ ಯುವಮೋರ್ಚಾ ಸದಸ್ಯರನ್ನು ಪೊಲೀಸರು ಬಂಧಿಸಿದರು.
ಬಿಜೆಪಿ ಕಾರ್ಯಕರ್ತರನ್ನು ತಲಕಾಯಲಬೆಟ್ಟದ ಕಲ್ಯಾಣಮಟಪದಲ್ಲಿ ಇರಿಸಲಾಗಿದ್ದು ಸಂಜೆಯ ವೇಳೆಗೆ ಬಿಡುಗಡೆ ಮಾಡಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ತಡೆದು ಬಂಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಬೈರಾರೆಡ್ಡಿ, ಪ್ರತಾಪ್, ನರೇಶ್, ಶ್ರೀರಾಮ, ಕೊತ್ತನೂರು ರವಿ, ದಿಬ್ಬೂರಹಳ್ಳಿ ನರಸಿಂಹಪ್ಪ, ತಲಕಾಯಲಬೆಟ್ಟ ಸೀತಬೈರರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -