ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡರ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ತೋಟಕ್ಕೆ ಶುಕ್ರವಾರ ಬೆಂಗಳೂರಿನ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ಸುಮಾರು ೧೦೦ ಮಂದಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ತರಬೇತುದಾರ ಶ್ರೀಕೃಷ್ಣ ಹೆಗಡೆ ಮಾತನಾಡಿದರು.
ರೈತರು ಕೃಷಿ ಮಾಡಲು ಅನುಸರಿಸುವ ವಿಶಿಷ್ಟ ಪದ್ದತಿಗಳೂ ಹಾಗೂ ಕೃಷಿ ಮಾಡಲು ಅವರು ಪಡುವ ಕಷ್ಟ ಸುಖಗಳನ್ನು ಖುದ್ದು ವೀಕ್ಷಿಸಿ ಅವರಿಗೆ ನಾವುಗಳು ಯಾವ ರೀತಿ ಸಹಕರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅರಿಯಲು ರೈತರ ತೋಟಗಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಬ್ಯಾಂಕ್ಗಳಲ್ಲಿ ಅಧಿಕಾರಿಗಳಾಗಲಿರುವ ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಇದೀಗ ತರಬೇತಿಯಲ್ಲಿರುವ ಸುಮಾರು ೧೦೦ ಮಂದಿ ಬ್ಯಾಂಕ್ ಅಧಿಕಾರಿಗಳು ಮುಂದಿನ ದಿನಗಳಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಕೃಷಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬರೀ ಶಾಲೆ ಕಾಲೇಜಿನಲ್ಲಿ ಕುಳಿತು ಓದಿದರಷ್ಟೇ ಸಾಲದು, ಕೃಷಿ ಮಾಡಲು ರೈತ ಎಷ್ಟು ಕಷ್ಟ ಪಡುತ್ತಾರೆ, ರೈತರು ಯಾವ ರೀತಿಯ ಕೃಷಿ ಪದ್ದತಿ ಅನುಸರಿಸುತ್ತಿದ್ದಾರೆ. ಕೃಷಿಯಲ್ಲಿ ಆದಾಯ ಗಳಿಸುವುದು ಹೇಗೆ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತರಲಾಗಿದೆ ಎಂದರು.
ಕೃಷಿಯೊಂದೇ ಅಲ್ಲ ಈ ಭಾಗದ ಹೈನುಗಾರಿಕೆ, ಕುರಿ ಸಾಕಾಣಿಕೆ ಬಗ್ಗೆಯೂ ರೈತರಿಂದ ಮಾಹಿತಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಇವರೆಲ್ಲಾ ಅಧಿಕಾರಿಗಳಾಗಿ ಹೋದಾಗ ಕೃಷಿಕರಿಗೆ ಯಾವ ರೀತಿ ಸಹಕಾರ ನೀಡಬಹುದು ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶ ನಮ್ಮದು..
ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ, ರೈತರು ಭೂಮಿ, ನೀರು, ಸಮಯ, ಕೂಲಿ ಕಾರ್ಮಿಕರ ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಆದಾಯ ಹೆಚ್ಚಳ ಸಾಧ್ಯವಿದೆ. ಪ್ರತಿ ಹನಿ ನೀರು ಕೂಡ ಅಮೂಲ್ಯವಾದದ್ದು. ಸಮಗ್ರ ಕೃಷಿ ಪದ್ದತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ತಮ್ಮ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪು ಸೇರಿದಂತೆ ಟೊಮೆಟೊ, ಬದನೆ, ಬೆಂಡೆ, ಮೆಣಸಿನಕಾಯಿ, ಗೋರಿಕಾಯಿ, ಕಡಲೆಕಾಯಿ, ಸೊಪ್ಪುಗಳು, ವಿವಿಧ ಹಣ್ಣುಗಳು ಬೆಳೆದಿರುವುದನ್ನು ತೋರಿಸಿ ವಿವರಿಸಿದರು. ಕುರಿಗಳನ್ನು ಸಾಕಿದಲ್ಲಿ ಎಟಿಎಂ ಇದ್ದಂತೆ. ಕೋಳಿಸಾಕಾಣಿಕೆ, ಜೇನು ಸಾಕಾಣಿಕೆ, ಹಸುಗಳನ್ನು ಸಾಕುವುದು, ನಮ್ಮ ತರಕಾರಿ ನಾವೇ ಬೆಳೆದುಕೊಳ್ಳುವುದು ಎಲ್ಲವೂ ಇದ್ದಲ್ಲಿ ಮಾತ್ರ ರೈತ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ತರಬೇತುದಾರರಾದ ಶ್ರೀಧರ್, ಮಹೇಶ್ವರಪ್ಪ, ಅರುಣ್, ರೈತ ಎಚ್.ಕೆ.ಸುರೇಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -