ಒಂದಾಗಿ ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಒಗ್ಗೂಡುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಮತ್ತು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ ಎಂದು ಚಿಂತಾಮಣಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ‘ಕರ್ನಾಟಕ ಏಕೀಕರಣದ 60ರ ಸಂಭ್ರಮ’ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿ ವಹಿಸಿದಾಗ ಈ ನಿಟ್ಟಿನಲ್ಲಿ ಯಾಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. ೧೯೦೫ ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. ೧೯೫೬ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ ೧೯೭೩ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು ಎಂದು ವಿವರಿಸಿದರು.
ಪ್ರತಿಯೊಬ್ಬರಿಗೂ ತಮ್ಮ ಹುಟ್ಟಿದ ನೆಲದ ಬಗ್ಗೆ ಗೌರವಾಧರ ಇರಬೇಕು. ಕೋಲಾರದ ಚಿನ್ನವಷ್ಟೇ ಅಲ್ಲದೆ ಶಿಡ್ಲಘಟ್ಟದಲ್ಲಿ ತಯಾರಾಗುತ್ತಿದ್ದ ಕಂಬಳಿಗಳು ಸಿಂಧೂ ನಾಗರಿಕತೆಯ ಜನರ ಮೂಲಕ ಗ್ರೀಕ್ ರೋಮನ್ ಸಾಮ್ರಾಜ್ಯದ ಕಡೆಗೆ ಹೋಗುತ್ತಿತ್ತು ಎಂಬ ವಿಷಯವು ನಮ್ಮ ಹಿರಿಯರ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ನಮ್ಮ ಕನ್ನಡ ಭಾಷೆ, ಬದುಕು, ಆಚಾರ, ಸಂಸ್ಕೃತಿ, ಮಣ್ಣು, ನೀರು ಎಲ್ಲದರ ಬಗ್ಗೆಯೂ ಆಸ್ತೆಯನ್ನು ಬೆಳೆಸಿಕೊಳ್ಳಬೇಕೆಂದು ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯ್ಕ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ವಿ.ಲಕ್ಷ್ಮಣರಾಜು ಮಾತನಾಡಿದರು. ಜಾನಪದ ಗಾಯಕರಾದ ಮಹೇಶ್ ಮತ್ತು ನಟರಾಜ್ ಕನ್ನಡ ಗೀತೆಗಳನ್ನು ಹಾಡಿದರು.
ಕರ್ನಾಟಕ ಏಕೀಕರಣದ 60ರ ಸಂಭ್ರಮದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಶಾಲಿನಿ(ಪ್ರಥಮ), ಬಿ.ಎನ್.ವರಲಕ್ಷ್ಮಿ(ದ್ವಿತೀಯ), ಎಸ್.ದಿವ್ಯಾ(ತೃತೀಯ) ಅವರಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಕನ್ನಡಪರ ಹಿರಿಯ ಹೋರಾಟಗಾರ ಹಾಗೂ ಮಾಜಿ ಕಸಾಪ ಅಧ್ಯಕ್ಷ ರೂಪಸಿ ರಮೇಶ್ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಸಿಹಿಯನ್ನು ನೀಡಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಕಸಬಾ ಹೋಬಳಿ ಉಪಾಧ್ಯಕ್ಷ ಬೆಳ್ಳೂಟಿ ರಮೇಶ್, ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಎನ್.ಆರ್.ಕೃಷ್ಣಮೂರ್ತಿ, ಪ್ರಾಧ್ಯಾಪಕರಾದ ರಾಮಚಂದ್ರಪ್ಪ, ಶ್ರೀಹರಿ, ವೆಂಕಟರೋಣಪ್ಪ, ಸಾದತ್ತುಲ್ಲ, ಕಮಲ ಹಾಜರಿದ್ದರು.
- Advertisement -
- Advertisement -
- Advertisement -
- Advertisement -