ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್.ಮೀರಾ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು. ಶಾಲೆಯ ಆವರಣದಲ್ಲಿ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್.ಮೀರಾ ಸಂಪಿಗೆ ಸಸಿಯನ್ನು ನೆಟ್ಟರು.ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸಂಪಿಗೆ ಸಸಿಯೊಂದನ್ನು ನೆಟ್ಟು, ಶಾಲೆಯ ಚಟುವಟಿಕೆಗಳನ್ನು ವೀಕ್ಷಿಸಿ, ‘ಮಕ್ಕಳು ಪ್ರಪಂಚವನ್ನು ಪುಸ್ತಕದ ಮೂಲಕ ನೋಡಬೇಕು. ಅಮೆರಿಕೆಯ ಇತಿಹಾಸವನ್ನು ಸಾರುವ ಲಾರಾ ಇಂಗಲ್ಸ್ ವೈಲ್ಡರ್ ಎಂಬ ಬಾಲಕಿಯ ಅನುಭವಗಾಥೆಯಿಂದ ನಾವು ಸಾಕಷ್ಟು ಕಲಿಯಬಹುದಾಗಿದೆ. ಮಕ್ಕಳು ಈ ಪುಸ್ತಕಗಳನ್ನು ಓದಿ ತಮ್ಮ ಅನುಭವಗಳನ್ನು ಬರೆಯಬೇಕು. ಮೂರು ವರ್ಷದ ಹಿಂದೆ ಈ ಶಾಲೆಗೆ ಭೇಟಿ ನೀಡಿದ್ದಾಗ ನೆಟ್ಟ ನೆಲ್ಲಿಕಾಯಿ ಸಸಿ ಇಂದು ಎತ್ತರವಾಗಿ ಬೆಳೆದಿದೆ. ಅದರಂತೆಯೇ ಮಕ್ಕಳೂ ಜ್ಞಾನಾರ್ಜನೆ ಹೊಂದಿ ಎತ್ತರವಾಗಿ ಬೆಳೆಯಬೇಕು. ಚೆನ್ನಾಗಿ ಓದಿ ನಿಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳು ತಯಾರಿಸಿರುವ ಪ್ಲಾಸ್ಟಿಕ್ ಹೂ ಹಾರಗಳು, ದ್ರವ ಸಾಬೂನು, ಚಿತ್ರಗಳು, ಕರಕುಶಲ ವಸ್ತುಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು. ಶಿಕ್ಷಕರಾದ ಎಚ್.ವಿ.ವೆಂಕಟರೆಡ್ಡಿ, ನಾಗಭೂಷಣ್, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.