ಮಕ್ಕಳ ಅಭಿವ್ಯಕ್ತಿಗೆ ಸ್ವಾತಂತ್ರ್ಯವನ್ನು ಕಲ್ಪಿಸಿ ಅವರ ಸೃಜನಶೀಲತೆಯನ್ನು ಅರಳಿಸುವ ಕೆಲಸ ಎಲ್ಲಾ ಶಾಲೆಗಳಲ್ಲೂ ನಡೆಯಬೇಕು ಎಂದು ಸಾಹಿತಿ ಬೇಲೂರು ರಘುನಂದನ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್ ಸಹಭಾಗಿತ್ವದಲ್ಲಿ ನಡೆಸಿದ 12ನೇ ವರ್ಷದ ಶಾಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಬರಹಗಳ ಸಂಕಲನ ‘ಶಾಮಂತಿ–5’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಗುವು ತನ್ನ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ತೆರದುಕೊಳ್ಳಲು ಅವಕಾಶ ಸಿಕ್ಕಲ್ಲಿ, ಅದು ಬೆಳವಣಿಗೆಗೆ ಪೂರಕವಾಗುತ್ತದೆ. ಮುಂದೆ ಉತ್ತಮ ಮನುಷ್ಯನಾಗಲು ಸಹಕಾರಿಯಾಗುತ್ತದೆ. ಶಿಕ್ಷಣವೆಂಬುದು ಕೇವಲ ಅಂಕಗಳಿಕೆಯಲ್ಲ, ಅಕ್ಷರ ಕಲಿಕೆಯೂ ಅಲ್ಲ. ಕಲಿಕೆಯೆಂಬುದು ಎಲ್ಲ ರೀತಿಯ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ. ಮಕ್ಕಳ ಸಾಹಿತ್ಯ ಎಂದರೆ ಕೇವಲ ದೊಡ್ಡವರು ಮಕ್ಕಳಿಗೆ ಬರೆಯುವುದು ಎಂಬ ಕಲ್ಪನೆಯಿದೆ. ಆದರೆ ಮಕ್ಕಳೇ ಬರೆದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ. ಅದರಿಂದ ದೊಡ್ಡವರು ಕಲಿಯಬೇಕಾದ್ದು ಸಾಕಷ್ಟಿದೆ. ಕುವೆಂಪು ಅವರು ಹೇಳಿರುವ ವಿಶ್ವಮಾನವತೆಯ ಪರಿಕಲ್ಪನೆಯನ್ನು ಮಕ್ಕಳ ಮನೋಲೋಕದ ಮೂಲಕ ನಡೆಸಿರುವ ಕಾರ್ಯವನ್ನು ಶಾಮಂತಿ ಪುಸ್ತಕದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಐ.ಎಫ್.ಎ. ಸಂಸ್ಥೆಯ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಮಗುವಿನ ಕುತೂಹಲಗಳಿಗೆ, ಪ್ರಶ್ನೆಗಳಿಗೆ ಪೋಷಕರು ಮತ್ತು ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಬೇಕು. ತಾಲ್ಲೂಕಿನ ಶಾಲಾ ಮಕ್ಕಳಿಗಾಗಿ ಪ್ರತಿವರ್ಷ ನಡೆಸುವ ನಾಟಕೋತ್ಸವ ನಿಜಕ್ಕೂ ಮಾದರಿಯಾಗಿದೆ. ಶಾಮಂತಿ ಪುಸ್ತಕದಲ್ಲಿ ಮಕ್ಕಳ ಬರಹಗಳು ಮತ್ತು ಚಿತ್ರಗಳ ಸುಂದರ ಭಾವನಾಪ್ರಪಂಚವಿದೆ. ಮಕ್ಕಳ ಲೋಕದಲ್ಲಿ ವಿಹರಿಸುವ ಮೂಲಕ ದೊಡ್ಡವರೂ ಮಗುವಾಗುವ ಅವಕಾಶವನ್ನಿಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನೇಹ ಯುವಕರ ಸಂಘದಿಂದ ಶಿಕ್ಷಕರನ್ನು ಅಭಿನಂದಿಸಲಾಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್, ಸುಬ್ರಮಣಿ, ಡಿ.ಕೆ.ಶ್ರೀರಾಮ್, ಗ್ರಾಮ ಪಂಚಾಯತಿ ಸದಸ್ಯೆ ಸರೋಜಮ್ಮ ನಾಗರಾಜ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಕೆ.ಮುನಿರಾಜಗೌಡ, ಅರಿಕೆರೆ ಮುನಿರಾಜು, ಕೆ.ಕೃಷ್ಣಾರೆಡ್ಡಿ, ಟಿ.ಎಂ.ಮುನಿರಾಜು, ಸ್ನೇಹ ಯುವಕರ ಸಂಘದ ಅಧ್ಯಕ್ಷ ವಸಂತಕುಮಾರ್, ರೈಲ್ವೆ ಇಲಾಖೆಯ ಮಂಜುಳಾ, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಮುನಿಯಪ್ಪ, ಶಾಮಂತಿ ಪುಸ್ತಕದ ಸಂಪಾದಕ ಎಸ್.ಕಲಾಧರ, ಶಿಕ್ಷಕ ದೇವರಾಜ್, ಗ್ರಾಮದ ಹಿರಿಯರಾದ ಸುಬ್ಬಣ್ಣ, ಕೆ.ಸಿ.ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -