ಮದುವೆ ಮನೆಯಲ್ಲಿ ಊಟ ಕಲುಷಿತಗೊಂಡಿದ್ದರಿಂದ ಪಾಯ್ಲಹಳ್ಳಿ ನಾರಾಯಣಪ್ಪ (55) ನಿಧನರಾಗಿದ್ದು, ಅಲ್ಲಿ ಊಟ ಮಾಡಿ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ, ಪಾಯ್ಲಹಳ್ಳಿ, ಕುರುಬಚ್ಚನಪಡೆಯ ಗ್ರಾಮಸ್ಥರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಹೊರವಲಯದ ಕಂದವಾರದಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಎಲ್.ಮುತ್ತುಗದಹಳ್ಳಿಯ ವಧುವಿನೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ ಪುರದ ವರನೊಂದಿಗೆ ಮದುವೆ ನಡೆದಿತ್ತು. ಗುರುವಾರ ರಾತ್ರಿ ಆರತಕ್ಷತೆಯ ಊಟ ಮಾಡಿದ್ದ ಗ್ರಾಮಸ್ಥರಿಗೆ ಮಾರನೆ ದಿನದಿಂದ ಬೇಧಿ ಪ್ರಾರಂಭವಾಗಿದೆ.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಈ ಬಗ್ಗೆ ವಿವರಣೆ ನೀಡಿ, “ವಿಷಯ ತಿಳಿದೊಡನೆ ಶನಿವಾರ ಮುಂಜಾನೆಯೇ ನಾವು ಎಲ್.ಮುತ್ತುಗದಹಳ್ಳಿಗೆ ಹೋದೆವು. ಸುಮಾರು ಇಪ್ಪತ್ತಾರು ಮಂದಿಗೆ ಚಿಕಿತ್ಸೆ ನೀಡಿ ಬಂದೆವು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದೆವು. ಇನ್ನಿಬ್ಬರು ಅವರೇ ಬೆಂಗಳೂರಿಗೆ ಹೋಗಿದ್ದರು. ಅವರಲ್ಲಿ ಪೈಲಹಳ್ಳಿಯವರೊಬ್ಬರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಮೇಲೂರು ವೈದ್ಯ ಡಾ.ರಮೇಶ್ ಅವರನ್ನು ನಿಯೋಜಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.
ಮನೆಮನೆಗೂ ಹೋಗಿ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದೆವು. ಬಿಸಿ ಅಡುಗೆಯನ್ನೇ ತಿನ್ನಬೇಕು. ಶೌಚಕ್ಕೆ ಹೋಗಿ ಬಂದ ನಂತರ ಸೋಪು ಬಳಸಿ ಕೈತೊಳೆದುಕೊಳ್ಳಬೇಕು. ಬೇಧಿ ಆಗುತ್ತಿರುವವರನ್ನು ಮುಟ್ಟಿದಾಗಲೂ ಸೋಪು ಬಳಸಿ ಕೈ ತೊಳೆದುಕೊಳ್ಳಿ. ಪಿಡಿಒ ಅವರ ನೆರವು ಪಡೆದು ಚರಂಡಿಗಳನ್ನು ಶುಚಿಗೊಳಿಸಲಾಯಿತು. ಒಟ್ಟಾರೆ ಶುಚಿತ್ವದ ಬಗ್ಗೆ ತಿಳಿಸಿಕೊಟ್ಟೆವು.
ಮೇಲ್ನೋಟಕ್ಕೆ ಕಲುಷಿತ ಆಹಾರದಿಂದಲೇ ಈ ಘಟನೆ ನಡೆದಿರುವುದು ಎಂದು ತಿಳಿದುಬರುತ್ತದೆ. ಬೇಧಿ ಸ್ಯಾಂಪಲ್ ಕೂಡ ಪರೀಕ್ಷೆಗೆಂದು ಕಳುಹಿಸಿಕೊಟ್ಟಿದ್ದೇವೆ. ಇವತ್ತು ಐವತ್ತು ಮಂದಿಗೆ ಚಿಕಿತ್ಸೆ ನೀಡಿ ಔಷಧಿಗಳನ್ನು ಕೊಟ್ಟಿದ್ದು, ಐವರಿಗೆ ಡ್ರಿಪ್ ಹಾಕಿದ್ದೇವೆ. ಸಧ್ಯಕ್ಕೆ ಎಲ್ಲಾ ಪರಿಸ್ಥಿತಿ ಹತೋಟಿಯಲ್ಲಿದೆ. ಮದುವೆ ಊಟ ಗುರುವಾರ ರಾತ್ರಿಯದ್ದಾದ್ದರಿಂದ ಆಹಾರ ಅಥವಾ ಅದಕ್ಕೆ ಬಳಸಿದ ವಸ್ತುಗಳ್ಯಾವೂ ಸಿಗಲಿಲ್ಲ. ಅಲ್ಲಿ ಊಟ ಮಾಡಿದವರಿಗೆ ಮಾತ್ರ ಈ ತೊಂದರೆ ಕಾಣಿಸಿಕೊಂಡಿದೆ. ವರನ ಕಡೆಯವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ ಪುರದವರಿಗೂ ಈ ತೊಂದರೆ ಕಾಣಿಸಿಕೊಂಡಿರುವುದರಿಂದ ಅಲ್ಲಿನ ವೈದ್ಯರಿಗೂ ವಿಷಯ ತಿಳಿಸಿದ್ದು, ಕ್ರಮ ಕೈಗೊಂಡಿದ್ದಾರೆ” ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಾಬುರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ ಭೇಟಿ ನೀಡಿದ್ದರು. ಡಾ.ರಮೇಶ್, ಪಿಡಿಒ ಅಂಜನ್ ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -







