ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಪ್ರವಾಸೋಧ್ಯಮವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಯೋಜನೆ ರೂಪಿಸಬೇಕಿದೆ ಎಂದು ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಸುಭಾಷ್ ವಿ ನಾಯಕ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೇಷ್ಮೆ ವಸ್ತುಸಂಗ್ರಹಾಲಯ ಸ್ಥಾಪಿಸುವ ಸಲುವಾಗಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಪ್ರವಾಸೋಧ್ಯಮಕ್ಕೆ ಸಾಕಷ್ಟು ಅವಕಾಶವಿದೆ ಎಂದು ಆಸಕ್ತಿಯಿಂದ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಒಂದು ಭಾಗವಾಗಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು. ವಿವಿಧ ತಳಿಯ ರೇಷ್ಮೆ ಗೂಡುಗಳು, ರೇಷ್ಮೆ ನೂಲು ಬಿಚ್ಚಾಣಿಕೆ ಯಂತ್ರೋಪಕರಣಗಳು, ರೇಷ್ಮೆ ಮಗ್ಗಗಳ ಯಂತ್ರಗಳು, ವಿವಿಧ ರೇಷ್ಮೆ ಬಟ್ಟೆಗಳು, ನೂಲು, ಒಟ್ಟಾರೆ ಚಿಟ್ಟೆಯಿಂದ ಬಟ್ಟೆಯವರೆಗೆ ಪ್ರದರ್ಶನ, ರೇಷ್ಮೆಯು ಬಳಕೆಯಾಗುವ ವಿವಿಧ ಉತ್ಪನ್ನಗಳಾದ ಪ್ಯೂಪಾ ಎಣ್ಣೆ, ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ ದಾರ ಮುಂತಾದವುಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಪ್ರದರ್ಶಿಸಲಾಗುವುದು. ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ರೇಷ್ಮೆಯ ಸಂಪೂರ್ಣ ಚಿತ್ರಣ ಮತ್ತು ಮಾಹಿತಿ ಒಂದೇ ಕಡೆ ಸಿಗುವಂತೆ ಮಾಡಬೇಕಿದೆ ಎಂದು ಹೇಳಿದರು.
ವಿಜ್ಞಾನಿಗಳಾದ ಕೆ.ಎನ್.ಮಹೇಶ್, ರವಿಕುಮಾರ್, ತಿಮ್ಮಾರೆಡ್ಡಿ, ಕೈಮಗ್ಗ ಪ್ರವಾಸೋಧ್ಯಮದ ಅಧಿಕಾರಿ ಶಿವಕುಮಾರ್, ಸಹಾಯಕ ಪ್ರಾಧ್ಯಾಪಕಿ ಪಲ್ಲವಿ, ರೇಷ್ಮೆ ಉಪನಿರ್ದೇಶಕರಾದ ಬೈರಾರೆಡ್ಡಿ, ಸುಭಾಷ್ ಸಾತೇನಹಳ್ಳಿ, ರೇಷ್ಮೆ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಜನಾರ್ಧನಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -