ಸಿ.ಎಂ.ಸಿ.ಎ ಸಂಘಟನೆಯ ವತಿಯಿಂದ ಮೇಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಹಿತ್ತಲಹಳ್ಳಿಯ ಕೃಷಿಸಾಧಕರೂ, ರಾಜ್ಯಕೃಷಿಪಂಡಿತ ಪುರಸ್ಕೃತರೂ ಆದ ಎಚ್. ಜಿ ಗೋಪಾಲಗೌಡರ ರೇಷ್ಮೆ ಹಾಗೂ ಸಮಗ್ರ ಕೃಷಿ ಬೆಳೆಯ ತೋಟಕ್ಕೆ ಶನಿವಾರ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಕಲಿಸಲಾಯಿತು.
ಪ್ರಗತಿಪರ ರೈತ ಎಚ್. ಜಿ ಗೋಪಾಲಗೌಡ ಮಕ್ಕಳೊಂದಿಗೆ ಮಾತನಾಡಿ, ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ, ಸೆಣಬು ಮತ್ತಿತರ ಗೊಬ್ಬರದ ಹುಲ್ಲನ್ನು ಬೆಳೆಸಿ, ಭೂಮಿಯಲ್ಲಿಯೇ ಕೊಳೆಸಿ ಮಿತವ್ಯಯದಲ್ಲಿ ಭರ್ಜರಿ ಇಳುವರಿ ಪಡೆಯುತ್ತಿರುವ ಗುಟ್ಟನ್ನೂ, ಪರಿಶ್ರಮವನ್ನೂ ಹಂಚಿಕೊಂಡರು. ವಿದ್ಯಾಭ್ಯಾಸದ ನಂತರ ಎಲ್ಲರೂ ಬೇರೆಡೆ ಕೆಲಸಕ್ಕಾಗಿ ಅಲೆಯದೆ ಜಮೀನಿರುವವರೆಲ್ಲ ಕೃಷಿಕರಾಗುವಂತೆ ಕಿವಿಮಾತು ಹೇಳಿದರು.
ತೋಟದೊಳಗೆ ಮಾವು, ಹಲಸು, ಲಿಂಬೆ, ದಾಳಿಂಬೆ, ಮೂಸಂಬಿ, ಪರಂಗಿ, ನೇರಳೆ, ಸೀಬೆ, ಸೀತಾಫಲ, ವಿಧ ವಿಧ ಕಾಯಿ ಪಲ್ಲೆ, ಶ್ರೀಲಂಕಾದಿಂದ ತರಿಸಿದ ಸಾಂಬಾರ ಚಕ್ಕೆ, ಮೂವ್ವತ್ತಕ್ಕೂ ಹೆಚ್ಚಿನ ಬೆಳೆಗಳನ್ನು ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು.
ವಿದ್ಯಾರ್ಥಿಗಳು ಈ ದಿನದ ವಿಶಿಷ್ಟ ಅನುಭವವನ್ನು ಪೋಷಕರೊಂದಿಗೆ ಹಂಚಿಕೊಂಡು ಅಳವಡಿಸಿಕೊಳ್ಳುವುದಾಗಿ ತಿಳಿಸಿದರಲ್ಲದೆ, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಸಂರಕ್ಷಿಸಿ, ಪೋಷಿಸಿಕೊಂಡು ಬರುವುದಾಗಿ ಪ್ರತಿಜ್ಞೆ ಮಾಡಿದರು.
ಸಿ ಎಂ ಸಿ ಎ ಎಜುಕೇಟರ್ ಎಚ್. ವಿ ಅನಂತಲಕ್ಷ್ಮಿ. ಶಾಲಾ ಶಿಕ್ಷಕರಾದ ಪೊನ್ನಮ್ಮ, ವೆಂಕಟಶಿವಾರೆಡ್ಡಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







