ಗೋಕಷ್ಟ ನಿವಾರಕ ಎಂದೇ ಪ್ರಸಿದ್ಧಿ ಪಡೆದಿರುವ ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಕಾರ್ಯಕ್ರಮ ಮತ್ತು ಭಾರಿ ದನಗಳ ಜಾತ್ರೆಯು ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಭಾನುವಾರದಿಂದ ಪ್ರಾರಂಭವಾದ ಆರಾಧನಾ ಮಹೋತ್ಸವವು ಏಳುದಿನಗಳ ಕಾಲ ನಡೆದು ಬರುವ ಶನಿವಾರ ಕೊನೆಗೊಳ್ಳಲಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ದ್ಯಾವಪ್ಪನ ತಾತನ ಸಮಾಧಿಗೆ ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ, ತುಪ್ಪದ ದೀಪ ಬೆಳಗಿ, ಉಪ್ಪು ಹಾಗೂ ಕರಿ ಕಂಬಳ ದಾರವನ್ನು ಮಂತ್ರಿಸಿಕೊಂಡು ಮನೆಗೆ ಕೊಂಡೊಯ್ಯುವುದು ರೂಢಿ . ತಾತನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ಕುಂಕುಮವನ್ನು ಖಾಯಿಲೆ ಬಿದ್ದ ದನಕರುಗಳ ಹಣೆಗೆ ಇಟ್ಟು ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ದನದ ಹೊಟ್ಟೆಗೆ ಸೇರಿಸಿದರೆ ಸಾಕು ಅದೆಂತಹ ಕಾಯಿಲೆಯಾದರೂ ಸರಿಯೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.
ದೇವಸ್ಥಾನದ ಆಸುಪಾಸಿನಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್, ತೆಂಗಿನ ಕಾಯಿ, ಕರಿ ಕಂಬಳ ದಾರ, ದೃಷ್ಟಿ ಬೊಟ್ಟು ದಾರದ ಭರ್ಜರಿ ವ್ಯಾಪಾರವಹಿವಾಟು ನಡೆಯುತ್ತಿದೆ. ತಮ್ಮ ದನಕರು, ರಾಸುಗಳಿಗೆ ಏನಾದರೂ ತೊಂದರೆ ಕಾಣಿಸಿಕೊಂಡಾಗ ದ್ಯಾವಪ್ಪ ತಾತನಿಗೆ ಹರಕೆ ಮಾಡಿಕೊಂಡಿದ್ದ ರೈತರು ತಾವು ಬೆಳೆದ ರಾಗಿ, ಅಕ್ಕಿ, ಬೇಳೆ, ತರಕಾರಿಗಳನ್ನು ಇಂದು ದ್ಯಾವಪ್ಪತಾತನ ಸನ್ನಿಧಿಗೆ ಅರ್ಪಿಸಿದರು. ಹೀಗೆ ಭಕ್ತರು ಸಮರ್ಪಿಸಿದ ದವಸ ಧಾನ್ಯಗಳಿಂದಲೆ ರಾಗಿ ಮುದ್ದೆ, ಹುಳಿ ಸಾರು ತಯಾರಿಸಿ ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿಗೆ ಬಡಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಹಾಲು ಉಟ್ಲು ಹಾಗೂ ಕಾಯಿ ಉಟ್ಲು, ಕೋಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕ ಬಂಡಿ ಸೇವೆ ನಡೆಯಿತು. ದನಗಳ ಜಾತ್ರೆಯೂ ನೆರೆದಿದ್ದು ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ನೂರಾರು ಎತ್ತುಗಳು ಬಂದಿದ್ದು, ದ್ಯಾವಪ್ಪ ತಾತನ ದೇವಾಲಯ ಸಮಿತಿಯಿಂದ ಕುಡಿಯುವ ನೀರು, ಒಣ ಮೇವು ಇನ್ನಿತರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ರೈತರ ನಿತ್ಯ ಬಳಕೆಯ ವಸ್ತುಗಳಾದ ಕುಡುಗೋಲು, ಕೊಡಲಿ, ಮಚ್ಚು, ವರಾರಿ, ಜರಡಿ ಮುಂತಾದ ಹತ್ತು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಅವನ್ನು ರೈತರು ಕೊಳ್ಳುತ್ತಿದ್ದರು.
‘ಈ ಬಾರಿ ನೂರಾರು ಜೊತೆ ರಾಸಿಗಳ ಆಗಮನವಾಗಿದೆ. ಈಗಾಗಲೇ 168 ಜೊತೆ ದನಗಳ ಮಾರಾಟ ನಡೆದಿದೆ. ಅಮೃತಮಹಲ್, ಹಳ್ಳಿಕೆರೆ. ಮಲೆನಾಡು ಗಿಡ್ಡ, ಒಂಗೋಲ್ ಗಿತ್ತ ಮೊದಲಾದ ದೇಶಿ ತಳಿಗಳು ಆಗಮಿಸಿದ್ದು ಭರ್ಜರಿ ವ್ಯಾಪಾರ ನಡೆದಿದೆ. ನಾವಿಲ್ಲಿ ಅವುಗಳಿಗೆ ನೀರು ಮೇವು ವ್ಯವಸ್ಥೆ ಮಾಡಿದ್ದೇವೆ’ ಎಂದು ಕೆ.ಎನ್.ಮುನಿಕೃಷ್ಣಪ್ಪ ತಿಳಿಸಿದರು.
ಕೆ.ಬಿ.ಕೃಷ್ಣಪ್ಪ, ರಾಜಪ್ಪ, ಆಂಜಿನಪ್ಪ, ಅಣ್ಣಪ್ಪ, ಹನುಮಂತರಾಯಪ್ಪ, ಮಾದಪ್ಪ, ಮುನಿಶಾಮಪ್ಪ, ಆಂಜಿನಪ್ಪ, ಮುನಿಯಪ್ಪ ಹಾಜರಿದ್ದರು.
- Advertisement -
- Advertisement -
- Advertisement -